Mar 12, 2010

ಕನ್ನಡದ ಪ್ರಥಮ ಶಿಲಾ ಶಾಸನ

 ಕನ್ನಡಕ್ಕೆ ಶಾಸ್ತ್ರೀಯ (Classical) ಗರಿಮೆ ದೊರಕಿಸಿಕೊಡುವಲ್ಲಿ ಕನ್ನಡದ ಹಲವು ಸಾಹಿತ್ಯ ಪ್ರಥಮಗಳು ಮುನ್ನುಡಿಯಾಗಿವೆ. ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ "ವಡ್ಡಾರಾಧನೆ" ಕನ್ನಡದ ಮೊದಲ ಗದ್ಯವಾದರೆ," ಕವಿರಾಜಮಾರ್ಗ" ಕನ್ನಡದ ಮೊದಲ ಕಾವ್ಯ ಅಥವಾ ಛಂದಸ್ಸು(ವ್ಯಾಕರಣ) ಎನ್ನುವ ಹಿರಿಮೆಗೆ ಪಾತ್ರವಾಗಿದೆ.  ಕನ್ನಡ, ಆಡು ನುಡಿಯಾಗಿ ಬಳಕೆಗೆ ಬಂದಿರುವ ಕಾಲವನ್ನು ಸಂಶೋಧಕರು ವಿವಿಧ ರೀತಿಯಲ್ಲಿ ವಿಮರ್ಶಿಸಿ, ಹಲವು ಸಾವಿರ ವರ್ಷಗಳ ಇತಿಹಾಸವನ್ನು ಹೇಳಿದರೆ, ಇನ್ನೂ ಕೆಲವರು ಕನ್ನಡವೇ ಸಂಸ್ಕೃತದ ತಾಯಿ ನುಡಿಯೆಂದೂ ಬಣ್ಣಿಸಿದ್ದಾರೆ. ಇದಕ್ಕೆ ಬಲವಾದ ಆಧಾರಗಳು ಇನ್ನೂ ದೊರೆತಿಲ್ಲ. ಸಂಶೋಧನೆಗಳು ಆ ನಿಟ್ಟಿನಲ್ಲಿ ಇನ್ನೂ ಏರುಗತಿಯಲ್ಲಿ ಸಾಗಬೇಕಿದೆ. ಇತಿಹಾಸ ಹೇಳುವಂತೆ ’ಶಾತವಾಹನ’ ರಾಜ ವಂಶದ ನಂತರ ಪಟ್ಟಕ್ಕೆ ಬಂದ ’ಕದಂಬರು’ ಕನ್ನಡವನ್ನು ನಾಡು ನುಡಿಯನ್ನಾಗಿಸಲು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈಗಿನ ಉತ್ತರಕನ್ನಡ ಜಿಲ್ಲೆಯ ’ಬನವಾಸಿ’ ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡನಂತರ , ತಮ್ಮ ಆಳ್ವಿಕೆಯನ್ನು ದಕ್ಷಿಣ ಒಳನಾಡಿನವರೆಗೂ ವಿಸ್ತರಿಸಿ ಅಲ್ಲಲ್ಲಿ ಸಾಮಂತರನ್ನೂ, ಅಧಿಕಾರಿಗಳನ್ನೂ ನೇಮಿಸಿ ತಮ್ಮ ರಾಜ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಕನ್ನಡ ನುಡಿಯ ತಾತ್ವಿಕ ಬೆಳವಣಿಗೆಗಾಗಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕದಂಬರ ಕಾಲದ ಕನ್ನಡವನ್ನು ಪೂರ್ವ ಹಳಗನ್ನಡವೆಂದು ತಿಳಿಯಲಾಗಿದೆ. ಕದಂಬರ ಕಾಲದ ಕನ್ನಡ ಲಿಪಿ ಹಳಗನ್ನಡದ ಲಿಪಿಗಿಂತಲೂ ವಿಭಿನ್ನವಾಗಿ ಕಂಡುಬರುತ್ತದೆ, . ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ, ಇಂತಹ ಲಿಪಿಯಲ್ಲಿ ದೊರೆತಿರುವ ಕನ್ನಡದ ಅಂತ್ಯಂತ ಹಳೆಯ ಶಿಲಾ ಶಾಸನ "ಹಲ್ಮಿಡಿ ಶಾಸನ" . ಈ ಶಾಸನದ ಕಾಲವನ್ನು ಕ್ರಿ.ಶ. ೪೫೦ ಎಂದು ಅಂದಾಜಿಸಲಾಗಿದೆ. ಶಾಸನದಲ್ಲಿ ದೊರೆತಿರುವ ಕೆಲವು ಮಾಹಿತಿಗಳ ಆಧಾರದಲ್ಲಿ ಈ ಕಾಲವನ್ನು ಹೇಳಲಾಗಿದ್ದು , ಇದು ಕನ್ನಡದ ಪ್ರಥಮ ಶಿಲಾ ಶಾಸನವೆಂಬ ಹಿರಿಮೆಗೂ ಪಾತ್ರವಾಗಿದೆ. ಕನ್ನಡದ ಹಲವು ಪ್ರಥಮಗಳಲ್ಲಿ ಈ ಶಾಸನ, ಮೊದಲ ಸ್ಥಾನವನ್ನು ಪಡೆಯುತ್ತದೆ. 




’ಹಲ್ಮಿಡಿ’ ಎಂಬುದು ಒಂದು ಊರಿನ ಹೆಸರಾಗಿದ್ದು , ಈ ಊರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದೆ. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ. ೪೫೦ ನೆಯ ಇಸವಿಯಲ್ಲಿ ಕೆತ್ತಲ್ಪಟ್ಟಿರುವ ಈ ಶಾಸನ, ಕದಂಬರ ರಾಜ ’ಕಾಕುಸ್ಥ(ತ್ಸ) ವರ್ಮನ ಅಧಿಪತ್ಯವನ್ನು ಹೇಳುತ್ತದೆ. ಈ ಶಾಸನ ’ವೀರಗಲ್ಲು’ (Hero Stone)  ಎಂದೂ ಪರಿಗಣಿಸಲ್ಪಟ್ಟಿದೆ. ಮೇಲಿನ ಚಿತ್ರದಲ್ಲಿ ಕಾಣುವಂತೆ , ಕನ್ನಡ ಲಿಪಿಯು ’ಪಲ್ಲವ ಗ್ರಾಂಥಿಕ’ (elongated sricpts) ರಚನೆಯನ್ನು ಹೋಲುವಂತಿದ್ದು , ಇದು ಕದಂಬರ ಕಾಲದ ಕನ್ನಡ ಲಿಪಿಯೆಂದು ಹೇಳಲಾಗಿದೆ. ಲಿಪಿಯು ವಿಭಿನ್ನವಾಗಿದ್ದರೂ ಸಹ , ಶಾಸನದಲ್ಲಿರುವ ವಿಷಯ ಮತ್ತು ನುಡಿ , ಕನ್ನಡದ ಕಂಪನ್ನು ಪ್ರಸ್ತುತ ಪಡಿಸುತ್ತದೆ.

ಮೇಲಿನ ಚಿತ್ರದಲ್ಲಿ ಕಾಣುವ  ಶಾಸನದ ತಿರುಳನ್ನು ಹೊಸಗನ್ನಡ ನುಡಿಯಲ್ಲಿ ಕೆತ್ತಿಸಿ ಇಲ್ಲಿ ಸಂರಕ್ಷಿಸಿಡಲಾಗಿದೆ. ಮೂಲ ಶಾಸನವನ್ನು ಬೆಂಗಳೂರಿನ , ರಾಜ್ಯ ಪುರಾತತ್ವ ಸರ್ವೇಕ್ಷಣದ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಿಡಲಾಗಿದೆ. ಪ್ರಸ್ತುತ ಇಲ್ಲಿ ಶಾಸನದ ಎರಕ ಹೊಯ್ದ (Moulded) ನಕಲು ಶಿಲೆಯನ್ನಿಡಲಾಗಿದ್ದು ,  ಒಂದು ಸ್ಮಾರಕದ ರೂಪ ಕೊಟ್ಟು ತಕ್ಕಮಟ್ಟಿಗಿನ ಭದ್ರತೆಯನ್ನು ಕಲ್ಪಿಸಲಾಗಿದೆ. 

 ಹಲ್ಮಿಡಿ ಶಾಸನದ ತಿರುಳು ಹೀಗಿದೆ,
 ಮೊದಲೆರಡು ಸಾಲುಗಳಲ್ಲಿ ಅಚ್ಯುತನ (ವಿಷ್ಣು ??) ಧ್ಯಾನವನ್ನು ಹೇಳಲಾಗಿದೆ,
  "ಲಕ್ಷ್ಮಿಯೊಡನಿರುವ ಅಚ್ಯುತನು ಶ್ಯಾಙ್ಗ ವೆಂಬ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದು ದಾನವರಿಗೆ ಪ್ರಳಯ ಕಾಲದ ಅಗ್ನಿಯಂತೆಯೂ ಸಜ್ಜನರಿಗೆ ಸುದರ್ಶನ ಚಕ್ರದಂತೆಯೂ ತೋರುತ್ತಾನೆ " .....ನಂತರದ ಸಾಲುಗಳು ರಾಜನಿಗೆ ನಮನಗಳನ್ನು ಸಲ್ಲಿಸಿ, ಅಲ್ಲಿ ನಡೆದ ಘಟನಾವಳಿಯನ್ನು ತೆರೆದಿಡುತ್ತದೆ. 
 " ಕದಂಬರಾಜ, ತ್ಯಾಗಸಂಪನ್ನ, ಕಲಭೋರನ ಶತ್ರು ಎಂದೆನಿಸಿರುವ ಕಕುಸ್ಥ(ತ್ಸ) ಭಟ್ಟೋರಕನು ಆಳುತ್ತಿದ್ದ ಕಾಲ. ಅವನ ಅಧೀನದಲ್ಲಿ  ’ನರಿದಾವಿಳೆ ನಾಡಿನಲ್ಲಿ’ ( ಇಲ್ಲಿಯ ಸುತ್ತಲಿನ ಒಟ್ಟು ಪ್ರದೇಶ) ಮೃಗೇಶ ಮತ್ತು ನಾಗ ಎಂಬ ಅಧಿಕಾರಿಗಳಿದ್ದರು. ಅವರು ಮೃಗರಾಜ ಮತ್ತು ಸರ್ಪರಾಜರಂತೆ ವೈರಿಗಳಿಗೆ ಭಯಂಕರರೆನಿಸಿದ್ದರು.  ಇವರ ಅಧೀನದಲ್ಲಿ  ’ಕೀರ್ತಿಗೊಂಡ ಭಟರಿ’ ವಂಶವೆಂಬ ನಿರ್ಮಲ ಆಕಾಶಕ್ಕೆ , ’ಚಂದ್ರ’ನಂತೆ ’ಪಶುಪತಿ’ ಎಂಬ ಹೆಸರಿನವನಿದ್ದ. ಅಳೂಪ ವಂಶ ಸಮೂಹಕ್ಕೆ ಇವನು ಶಿವ (ಪಶುಪತಿ) ನಂತಿದ್ದ. ಪ್ರಸಿದ್ದವಾದ ದಕ್ಷಿಣಾಪಥದಲ್ಲಿ ನೂರಾರು ಯುದ್ಧಗಳೆಂಬ ಯಙ್ಞ ಮಾಡಿ ಬಲಿದಾನ ಮಾಡಿ ಶೌರ್ಯ ತೋರಿದ್ದ. ದಾನ ಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ’ಸೇಂದ್ರಕರು’ ಮತ್ತು ’ಬಾಣರ’ ಸೈನ್ಯವನ್ನು ಸೇರಿಸಿಕೊಂಡು ಕೇಕಯ ಪಲ್ಲವರೆದುರು, ಕದಂಬರ ಪರವಾಗಿ ಯುದ್ದಮಾಡಿ ಜಯ ತಂದುಕೊಟ್ಟ. ಅದಕ್ಕಾಗಿ ’ಸೇಂದ್ರಕ’ ಮತ್ತು ’ಬಾಣ’ ದೇಶದ ಜನರ ಸಮ್ಮುಖದಲ್ಲಿ ಪಲ್ಮಡಿ(ಹಲ್ಮಿಡಿ) ಯನ್ನೂ ಮೂಳಿವಳ್ಳಿ ( ಇಂದಿನ ಮುಗುಳುವಳ್ಳಿ) ಯನ್ನೂ ಅವನ ಅಧೀನಕ್ಕೆ ಪ್ರೀತಿಪೂರ್ವಕವಾಗಿ ಕೊಡಲಾಯಿತು. ಇದು ವೀರನ ಕತ್ತಿ ತೊಳೆದು , ವೀರದಾನ ಕೊಡುವ ಸಮಾರಂಭವಾಗಲು , ನಾಡ ಅಧಿಕಾರಿಗಳಾದ ಶ್ರೀ  ಮೃಗೇಶ ಮತ್ತು ನಾಗ ಅವರುಗಳು ಹಾಜರಿದ್ದು ಆ ಗ್ರಾಮಗಳನ್ನು ವಿಜಯಿಗೆ ನೀಡಿದರು. ಈ ದಾನವನ್ನು ಕದ್ದವನಿಗೆ ಪಾಪ ಬರುತ್ತದೆ. ಸೈನ್ಯ ತೆರಿಗೆ ಅಧಿಕಾರಿಗಳಾಗಿದ್ದ ಮೃಗೇಶ ಮತ್ತು ನಾಗರು ಹಲ್ಮಿಡಿಯ ’ಕುರುಬ’ರಿಗೆ ಪ್ರೀತಿಯಿಂದ, ತೆರಿಗೆ ವಿನಾಯಿತಿಯಾದ ’ಕುರುಂಬಿಡಿ’ ಯನ್ನು ಬಿಟ್ಟರು. ಇದನ್ನು ಕೆಡಿಸಿದವನಿಗೆ ಮಹಾಪಾತಕವು ಉಂಟಾಗುತ್ತದೆ. "  ಮುಂದೆ ಎಡಪಕ್ಕದಲ್ಲಿ ಇನ್ನೊಂದು ಸಾಲನ್ನು ಬರೆದಿದ್ದಾರೆ, ಅದು ಹೀಗಿದೆ..
" ಇಲ್ಲಿನ ಗದ್ದೆಯ ಉತ್ಪನ್ನದಲ್ಲಿ ಭಟ್ಟರಿಗೆ (ಬ್ರಾಹ್ಮಣರಿಗೆ) ಹತ್ತನೆಯ ಒಂದು ಭಾಗದ ತೆರಿಗೆ ವಿನಾಯಿತಿಯನ್ನು ಕೊಟ್ಟರು " .

ಈ ಶಾಸನವನ್ನು ಗಮನಿಸಿದಾಗ , ಅಂದಿನ ಪದಪ್ರಯೋಗವು ಎಷ್ಟು ರಸವತ್ತಾಗಿತ್ತೆಂದು ತಿಳಿಯುತ್ತದೆ. ’ನಿರ್ಮಲ ಆಕಾಶಕ್ಕೆ ಚಂದ್ರನಂತೆ’, ಮತ್ತು ಯುದ್ದವೆಂಬ ಯಗ್ನ ಗಳನ್ನು ಮಾಡಿ’ ಎನ್ನುವ ಪದಗಳು ಆಕರ್ಷಣೀಯವೆನಿಸುತ್ತದೆ. ಈ ಶಾಸನ ದೊರೆತದ್ದು ಇದೇ ಊರಿನ ವೀರಭದ್ರೇಶ್ವರ ದೇವಾಲಯ ಆವರಣದಲ್ಲಾದ್ದರಿಂದ , ಈ ದೇವಾಲಯದ ಪಕ್ಕದಲ್ಲಿ , ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಸಂಘ-ಸಂಸ್ಥೆಗಳ ನೆರವಿನಿಂದ ಒಂದು ಸ್ಮಾರಕವನ್ನು ನಿರ್ಮಿಸಿ ’ಹಲ್ಮಿಡಿ ಶಾಸನ’ ದೊರೆತ ಸ್ಥಳಕ್ಕೆ ಕಾಯಕಲ್ಪ ನೀಡಲಾಗಿದೆ.  ಈ ಊರು , ಇನ್ನೂ ಸಾಕಷ್ಟು ಮೂಲ ಸೌಕರ್ಯಗಳನ್ನು ಕಾಣಬೇಕಿದೆ. ಹಲ್ಮಿಡಿ ಎಂಬ ಹೆಸರು ’ಪಲ್ಮಿಡಿ’ ಎಂಬುದರ ರೂಪಾಂತರವೆಂಬುದನ್ನು ಶಾಸನದಿಂದಲೇ ತಿಳಿಯಬಹುದು. ಸ್ಥಳೀಯರು ಈ ಹೆಸರಿನೆ ಬಗೆಗೆ ನಾನಾ ಕಥೆಗಳನ್ನು ಹೇಳುತ್ತಾರೆ. ಕೇಳಲು ರಸವತ್ತಾಗಿರುತ್ತದೆ !. 


ನೀವೂ ಇಲ್ಲಿಗೆ ಬರುವಿರಾದರೆ, ಹೀಗೆ ಬರಬಹುದು...ಬೆಂಗಳೂರಿಗರು, ಮೈಸೂರಿಗರು .. ನೇರವಾಗಿ ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ  ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು.  ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಮಂಗಳೂರು ಕಡೆಯಿಂದ ಬರುವವರು ಬೇಲೂರು ಅಥವಾ ಚಿಕ್ಕಮಗಳೂರಿನ ದಾರಿಯನ್ನು ಆರಿಸಿಕೊಳ್ಳಬಹುದು.  ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಜಾಗವನ್ನು ಒಮ್ಮೆ ಸಂದರ್ಶಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಬೇಕಿದೆ. ಮೂಲ ಸೌಕರ್ಯಗಳ ಕೊರತೆಯಿದ್ದರೂ , ಉತ್ತಮ ರಸ್ತೆಯಿರುವ (ಸದ್ಯಕ್ಕೆ !) ಕಾರಣ ಇಲ್ಲಿಗೆ ತಲುಪುವುದು ಪ್ರಯಾಸವಲ್ಲ. ಸಂದರ್ಶಕರ , ಪ್ರವಾಸಿಗರ ಭೇಟಿ ಹೆಚ್ಚಾದಲ್ಲಿ, ಸೌಕರ್ಯಗಳು ಈ ಊರನ್ನು ತಲುಪುವ ನಿರೀಕ್ಷೆಯಿಟ್ಟುಕೊಳ್ಳಬಹುದು.         


(ಚಿತ್ರ ತೆಗೆದದ್ದು : ಶಂಭುಲಿಂಗ)


   --------------------------------------*--------------




 ಖೊನೆಖಿಡಿ :

  ಭಿಕ್ಷುಕ ಶಂಭುಲಿಂಗ ತನ್ನೆದುರಿಗ ಸಿಕ್ಕಿದ ಸಿರಿವಂತನೊಬ್ಬನನ್ನು ಯಾಚಿಸಿದ. 

 ಸಿರಿವಂತ : ಲೇ, ಮೂದೇವಿ..ಬರೀ ಕೇಳೋದಲ್ಲ ..ಕೊಡೋ ಬುದ್ದೀನೂ ಇರ್ಬೇಕು ಗೊತ್ತಾಯ್ತಾ...ನಿನಗೆ ೧೦ ರೂ ಕೊಡ್ತೀನಿ..ಅದ್ರಲ್ಲಿ ೫ ರೂ ನಿನಗಿಟ್ಟುಕೊಂಡು ಇನ್ನೈದು ರೂ ನ ದಾನ ಮಾಡಿಬಿಡು..ಗೊತ್ತಾಯ್ತಾ..


 ಶಂಭುಲಿಂಗ : ಆಯ್ತು ಬುದ್ದಿ..ಅಂಗಾರೆ ನೀವೂ ದಾನ ಮಾಡಿ ಸೋಮಿ, ನಿಮ್ ಕಾರು ನನ್ ಮಗಂಗೆ ಕೊಡಿ. ನಿಮ್ಮನೆ ನಂಗೇ ಕೊಡಿ, ನಿಮ್ಮ ದುಡ್ಡು ನನ್ ಎಂಡ್ರುಗೇ ಕೊಡಿ, ಇಂಗೇ ಎಲ್ಲಾ ಕೊಟ್ಬಿಡಿ ಬುದ್ದಿ..!


 ಸಿರಿವಂತ : ಏನಯ್ಯಾ..... ತಮಾಷೆ ಮಾಡ್ತಾ ಇದಿಯಾ..?


 ಶಂಭುಲಿಂಗ : ಮತ್ತೆ...ನೀವೇ ಅಲ್ವರಾ ಬುದ್ದಿ.. ಸುರು ಮಾಡಿದ್ದು.. !!!   


(ಕೆಲ ವರ್ಷಗಳ ಹಿಂದೆ Readers digest ನಲ್ಲಿ ಬಂದಿದ್ದ ಜೋಕೊಂದರ ಸ್ಪೂರ್ತಿ)  



  ವಂದನೆಗಳೊಂದಿಗೆ...

36 comments:

ಮನಮುಕ್ತಾ said...

ನಿಮ್ಮ ಲೇಖನದಿ೦ದ ತಿಳಿಯದಿದ್ದ ಅನೇಕ ವಿಚಾರಗಳು ತಿಳಿದವು.ಚಿಕ್ಕವರಿದ್ದಾಗ ಓದಿ ಮರೆತದ್ದು ಕೆಲವಷ್ಟು ನೆನಪಿಗೆ ಬ೦ದವು.ನಾನಿನ್ನೂ ಬೇಲೂರು ನೋಡಿಲ್ಲ. ಪ್ರವಾಸ ಹೋಗಬೇಕೆ೦ಬ ಆಲೋಚನೆ ಬರುತ್ತಿದೆ.
ಮಾಹಿತಿಗಾಗಿ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ದಾಖಲೆಯೋಗ್ಯ ಅಪೂರ್ವ ಮಾಹಿತಿಯೊದಗಿಸಿದ್ದಿರಾ!! ಧನ್ಯವಾದಗಳು. ತೀರಾ ಇತ್ತೀಚಿಗೆ ಇದಕ್ಕಿ೦ತಾ ಪುರಾತನವಾದ ಕನ್ನಡ ಶಾಸನ ದೊರಕಿದೆಯೆ೦ದು ಯಾವದೋ ಪೇಪರನಲ್ಲಿ ಓದಿದ ನೆನಪು.
ಕೊನೆಖ್ಹಿಡಿ ಎ೦ದಿನ೦ತೆ ಮಿ೦ಚಿ೦ಗ್.

sunaath said...

ಪುತ್ತರ್,
ಹಲ್ಮಿಡಿ ಶಾಸನದ ವಿವರಗಳನ್ನು ಇಲ್ಲಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
-ಕಾಕಾ

ಮನಸಿನಮನೆಯವನು said...

'Shubrahmanya Bhat.' ಅವ್ರೆ..,

ಹಲ್ಮಿಡಿ ಶಾಸನದ ಬಗ್ಗೆ ಸ್ವಲ್ಪವೇ ತಿಳಿದಿದ್ದೆ.. ಇನ್ನೂ ಹೆಚ್ಚು ತಿಳಿಸಿದ್ದಕ್ಕೆ ಧನ್ಯವಾದಗಳು...

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಸೀತಾರಾಮ. ಕೆ. / SITARAM.K said...

A link to get more information on kannada ancient literature:
http://www.ourkarnataka.com/Articles/starofmysore/halmidi007.htm

Subrahmanya said...

ಮನಮುಕ್ತಾ..
ನೀವಿನ್ನೂ ಬೇಲೂರು-ಹಳೇಬೀಡು ನೋಡಿಲ್ಲ ಎಂದರೆ, ..ಆದಷ್ಟು ಜರೂರು ನೋಡಿಬನ್ನಿ. ನಾಗರೀಕತೆಯನ್ನೊಳಗೊಂಡತೆ ಸಕಲವೂ ಈ ಎರಡು ದೇವಾಲಯಗಳಲ್ಲಿ ಮಿಳಿತವಾಗಿವೆ. ಹಾಗೆಯೇ ಬೇಲೂರಿನಿಂದ ಮುಂದೆ ನಿಮಗೆ ಹಲ್ಮಿಡಿ ಸಿಗುತ್ತದೆ...Happy journey..:)
ಧನ್ಯವಾದ

Subrahmanya said...

ಸೀತಾರಾಮ್ ಗುರುಗಳೇ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನೀವೆಂದಂತೆ ಡಾ|| ಶೆಟ್ಟರ್ ರವರು ಗಂಗ ವಂಶಕ್ಕೆ ಸೇರಿದ ಶಾಸನವೊಂದು ಇದಕ್ಕಿಂತಲೂ ಹಳೆಯದು ಎಂದು ಹೇಳಿದ್ದಾರೆ.
ಆದರೆ ಅದಿನ್ನೂ ಸಂಶೋಧನೆಗಳಿಂದ ಧೃಡವಾಗಬೇಕಿದೆ. ಅಲ್ಲಿಯವರೆಗೆ ಇದೇ ಮೊದಲ ಶಾಸನ. :) ನೀವು ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದ. ಹಾಗೇ ಈ ಲಿಂಕ್ ನೋಡಿ,

http://www.classicalkannada.org/DataBase/KANNADA%20UNICODE%20HTML/Inscriptions%20Kannada%20HTML/HALMIDI%20INSCRPTION.htm

Subrahmanya said...

ಕಾಕಾ..
ಧನ್ಯವಾದ ನಿಮಗೂ.

Subrahmanya said...

ಗುರುದೆಸೆ,
ಹಲ್ಮಿಡಿಗೊಮ್ಮೆ ಭೇಟಿ ನೀಡಿ. ಇನ್ನಷ್ಟು ಮಾಹಿತಿ ದೊರೆಯುತ್ತದೆ ನಿಮಗೆ. ನಿಮ್ಮ ಮನಸಿಗೆ ಮನೆಗೆ ಭೇಟಿ ನೀಡುತ್ತಿದ್ದೇನೆ. ಧನ್ಯವಾದ

ಸೀತಾರಾಮ. ಕೆ. / SITARAM.K said...

naanU beluru-halebeedu innu nodilla :-(

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಸುಬ್ರಹ್ಮಣ್ಯ ಭಟ್ರೇ,ಒಳ್ಳೆಯ ಮಾಹಿತಿಯೊದಗಿಸಿದ್ದೀರಿ.ಅ ಕಡೆ ಬ೦ದಾಗ ನಿಮ್ಮನ್ನೂ ಭೇಟಿಯಾಗುವುದೆ೦ದು ಯೋಚಿಸಿದ್ದೇನೆ.

Subrahmanya said...

ಮುಳಿಯಾಲದವರೇ,

:)..ಧನ್ಯವಾದ ನಿಮಗೆ. ಈ ಕಡೆ ಬರುವುದು ನಿಮಗೆ ಸುಗಮವಾಗಲಿ. (ಪುತ್ತೂರಿನಿಂದ, ಗುಂಡ್ಯ-ಸಕಲೇಶಪುರ-ಬೇಲೂರು-ಹಲ್ಮಿಡಿ..) ಭೇಟಿಯಾದರೆ ಸಂತೋಷವೇ..subrahmanyahs@gmail.com..:)

V.R.BHAT said...

ಹಲ್ಮಿಡಿ ಶಾಸನಕ್ಕಿಂತ ಪುರಾತನ ಶಾಸನಗಳು ಇವೆ, ಆದ್ರೆ ಶೋಧಿಸುವವರು ಇಲ್ಲ, ನಿಮ್ಮ ಲೇಖನ ಉಪಯುಕ್ತ , ಕೊನೇ ಖಿಡಿ ಚೆನ್ನಾಗಿದೆ, ಧನ್ಯವಾದಗಳು

ಮನದಾಳದಿಂದ............ said...

ಶಾಲಾ ಕಾಲೇಜು ದಿನಗಳಲ್ಲಿ ಓದಿ ಮರೆತಿದ್ದ ಕರ್ನಾಟಕದ ಇತಿಹಾಸ ಇನ್ನೊಮ್ಮೆ ನೆನಪಾಗುವಂತೆ ಮಾಡಿದ್ದೀರಾ. ನಿಮ್ಮ ಮಾಹಿತಿಗೆ ದನ್ಯವಾದಗಳು, ಹಲ್ಮಿಡಿ ಶಾಸನವೇ ಕನ್ನಡದ ಅತೀ ಪುರಾತನ ಶಾಸನ ಎಂದು ತಿಳಿದು ತುಂಬಾ ಸಂತೋಷವಾಯಿತು.

Guruprasad said...

ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರ ... ಎಷ್ಟೋ ವಿಷಯಗಳನ್ನು ತಿಳಿದುಕೊಂಡ ಹಾಗೆ ಆಯಿತು... ತುಂಬಾ ಧನ್ಯವಾದಗಳು...
ಮುಂದೆ ಬೇಲೂರಿಗೆ ಬಂದಾಗ ಖಂಡಿತ ಹಲ್ಮಿಡಿಗೆ ಬೇಟಿ ಕೊಡುತ್ತೇನೆ....
ಗುರು

ಸವಿಗನಸು said...

ಪುರಾತನ ಶಾಸನಗಳ ಮಾಹಿತಿ ಚೆನ್ನಾಗಿದೆ....
ಕೊನೇ ಖಿಡಿ ಸೂಪರ್....ನಾನು ಮೊದಲು ನಿಮ್ಮ ಬ್ಲಾಗ್ ತೆಗೆದಾಗ ಮೊದಲು ಓದುವುದು ಕೊನೆ ಖಿಡಿ...
ಅಭಿನಂದನೆಗಳು....

ಶಿವಪ್ರಕಾಶ್ said...

ಇತಿಹಾಸದ ಕೆಲವು ಪುಟಗಳನ್ನು ನಮಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..
ಕೊನೆ ಕಿಡಿ ಚನ್ನಾಗಿದೆ...

ಮನಸು said...

oLLeya maahitige dhanyavaadagaLu

Subrahmanya said...

ವಿ.ಆರ್.ಭಟ್ಟರೇ,
ಖಿಡಿ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಅಂದಹಾಗೆ, ಹಲ್ಮಿಡಿಗಿಂತಲೂ ಪುರಾತನ ಶಾಸನಗಳು ನಿಮಗೆ ತಿಳಿದಿರುವಂತೆ ಇದ್ದಲ್ಲಿ ದಯಮಾಡಿ ತಿಳಿಸಿಕೊಡಿ. ಭಾರತೀಯ ಪುರಾತತ್ವ ಸರ್ವೇಕ್ಷಣಾದ ನನ್ನ ಕೆಲವು ಸ್ನೇಹಿತರು ಶೋಧಿಸುವ ಕೆಲಸವನ್ನೇ ಮಾಡುತ್ತಿದ್ದಾರೆ. ಇದಕ್ಕಿಂತ ಪುರಾತನವಾದ್ದು ಸಿಕ್ಕರೆ, ನಿಜಕ್ಕೂ ಅದು ಐತಿಹಾಸಿಕ ಸಂಗತಿಯಾಗುತ್ತದೆ. ದಯಮಾಡಿ ತಿಳಿಸಿಕೊಡಿ.
ಧನ್ಯವಾದಗಳು

Subrahmanya said...

ಪ್ರವೀಣ್ ರವರೇ,
ಇತಿಹಾಸ ಮರುಕಳಿಸುತ್ತದೆ..ಎನ್ನುವುದು ನಿಜವಲ್ಲವೇ..( ಲೆಕ್ಚರರ್ ಇತಿಹಾಸವನ್ನು ಮರುಕಳಿಸುತ್ತಾರೆ ಎನ್ನುವುದು ಚೋದ್ಯ ಬಿಡಿ !:)) ಧನ್ಯವಾದ ನಿಮಗೆ.

Subrahmanya said...

ಗುರು,
ಹಲ್ಮಿಡಿಗೊಮ್ಮೆ ಭೇಟಿ ಕೊಡಿ. ಮೂಲ ಶಾಸನ ಅಲ್ಲಿ ಇಲ್ಲವಾದರೂ ಆ ಸ್ಥಳಕ್ಕಾದರೂ ಇನ್ನಷ್ಟು ಮಹತ್ವ ಬರುವಂತಾಗಲಿ ಅಲ್ಲವೇ..ಧನ್ಯವಾದ.

Subrahmanya said...

ಸವಿಗನಸು,
ಮೊದಲೇ ಕೊನೆಕಿಡಿಯೇ..:). ಧನ್ಯವಾದ

Subrahmanya said...

* ಶಿವು ಮಹರಾಜ್,

* ಮೃದುಮನಸು...
ಧನ್ಯವಾದಗಳು ನಿಮಗೆ..

ಚುಕ್ಕಿಚಿತ್ತಾರ said...

very informative....

Subrahmanya said...

ಚುಕ್ಕಿ ಚಿತ್ತಾರ,

ಧನ್ಯವಾದ. ನೀವೂ ಒಮ್ಮೆ ಹಳೇಬೀಡು-ಬೇಲೂರು ಮೂಲಕ ಹಲ್ಮಿಡಿಗೆ ಭೇಟಿ ಕೊಡಿ. :).

ದೀಪಸ್ಮಿತಾ said...

ಹಲ್ಮಿಡಿ ಶಾಸನ ಕನ್ನಡದ ಪ್ರಥಮ ಶಾಸನ ಎಂದಷ್ಟೇ ಗೊತ್ತಿತ್ತು. ಇನ್ನೂ ಅನೇಕ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ವಂದನೆಗಳು

Subrahmanya said...

ದೀಪಸ್ಮಿತ ಸರ್,
ಸದ್ಯಕ್ಕೆ ಇದೇ ಪ್ರಥಮ ಶಾಸನ, ಇನ್ನೊಂದು ಶೋಧನೆಯಾಗುವವರೆಗೂ...ಧನ್ಯವಾದ ನಿಮಗೆ.

shivu.k said...

ಸರ್.

ಹಲ್ಮಿಡಿ ಶಾಸನದ ಬಗ್ಗೆ ಕಾಲೇಜಿನಲ್ಲಿ ಓದಿದ್ದೆ. ನೀವು ಇಲ್ಲಿ ಉತ್ತಮವಾಗಿ ಮಾಹಿತಿಯನ್ನು ಒದಗಿಸಿದ್ದೀರಿ...ಧನ್ಯವಾದಗಳು.

Subrahmanya said...

ಶಿವು ಸರ್,
ನನ್ನ ಬ್ಲಾಗಿಗೆ ಬಂದು ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದ.

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

hamsanandi said...

>> ನೀವೆಂದಂತೆ ಡಾ|| ಶೆಟ್ಟರ್ ರವರು ಗಂಗ ವಂಶಕ್ಕೆ
>> ಸೇರಿದ ಶಾಸನವೊಂದು ಇದಕ್ಕಿಂತಲೂ ಹಳೆಯದು
>>ಎಂದು ಹೇಳಿದ್ದಾರೆ.

ಹಲ್ಮಿಡಿಗಿಂತಾ ಹಳೆಯ ಶಾಸನ ಇದೆ ಎಂದು ತಿಳಿಸಿದ್ದೀರಲ್ಲ - ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕರೆ ಬರೆಯಿರಿ. ಇದು ಶಿಲಾಶಾಸನವೇ, ತಾಮ್ರ ಪಟವೇ ಇತ್ಯಾದಿ.

ಗಂಗರ ಕಾಲದ ನಂತರದ ಎಷ್ಟ್ಫೋ ತಾಮ್ರ ಪಟಗಳು, ತಮ್ಮ ಕಾಲವನ್ನು ಸ್ವಲ್ಪ ಇನ್ನೂ ಹಿಂದಿರುವಂತೆ ಹೇಳುತ್ತವೆ ಎಂದು ಓದಿದ್ದೇನೆ.

Subrahmanya said...

ಹಂಸಾನಂದಿಯವರೆ,

ಗಂಗ ವಂಶಕ್ಕೆ ಸೇರಿದ ಶಾಸನವೊಂದು ಇದೆಯೆಂದು ಹೇಳಿದ್ದಾರಷ್ಟೆ. ಸಂಶೋಧನೆಯಂತೂ ಆಗಬೇಕಿದೆ.

ಇನ್ನು , ಹಲ್ಮಿಡಿಯಲ್ಲಿ ದೊರೆತಿರುವುದು ಶಿಲಾಶಾಸನವೆ. ಹಾಗಾಗಿ ಸದ್ಯಕ್ಕೆ ಇದೇ ಕನ್ನಡದ ಮೊದಲ ಶಿಲಾಶಾಸನ. ಆದರೆ ಶಾಸನದ ಮೂಲಶಿಲೆಯನ್ನು ಬೆಂಗಳೂರಿನ ರಾಜ್ಯ ಪ್ರಾಚ್ಯವಸ್ತುಸಂಗ್ರಹಾಲದಲ್ಲಿ ಸಂರಕ್ಷಿಸಿಡಲಾಗಿದೆ. ಹಲ್ಮಿಡಿಯಲ್ಲಿ ಎರಕದ ನಕಲು ಶಿಲೆಯನ್ನು ಇಡಲಾಗಿದೆ.

ನಿಮ್ಮ ಸ್ಪಂದನೆಗೆ ಧನ್ಯವಾದಗಳು.

ವಿ.ರಾ.ಹೆ. said...

ಮೂಲ ಹಲ್ಮಿಡಿ ಶಾಸನವನ್ನು ಮೈಸೂರಲ್ಲಿ ಇಡಲಾಗಿದೆ ಎಂದು ಕೇಳ್ಪಟ್ಟಿದ್ದೆ! ನೀವು ಬೆಂಗಳೂರು ಎಂದು ಬರೆದಿದ್ದೀರಿ. ರಾಜ್ಯ ಪ್ರಾಚ್ಯವಸ್ತುಸಂಗ್ರಹಾಲಯ ಅಂದರೆ ಎಲ್ಲಿದೆ ಬೆಂಗಳೂರಲ್ಲಿ? ನಾನು ಒಮ್ಮೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಹಲ್ಮಿಡಿ ಶಾಸನ ನೋಡಿದ್ದ ನೆನಪು. ಅದು ಮೂಲವೋ ನಕಲೋ ಗೊತ್ತಿಲ್ಲ. ಅದು ಮೂಲದ್ದೇ ಆಗಿದ್ದರೆ ಅದನ್ನು ಇಟ್ಟಿರುವ ರೀತಿಯಂತೂ ಬೇಸರತರಿಸುವಂತಿದೆ!

Subrahmanya said...

ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಇರೋದನ್ನು ನಾನು ನೋಡಿಲ್ಲ. ಆದರೆ ಮೂಲ ಶಾಸನ ಬೆಂಗಳೂರಿನ ರಾಜ್ಯ ಪುರಾತತ್ವ ಸಂಗ್ರಹಾಲದಲ್ಲಿ ಇದೆ ಅಂತ ಹಲ್ಮಿಡಿಯ ಶಾಸನ ದೊರೆತಿರುವ ಸ್ಥಳದಲ್ಲಿ ಬರೆದಿದ್ದಾರೆ. ಒಂದಷ್ಟು ಕಾಲ ಮೈಸೂರಿನ ಎಪಿಗ್ರಫಿ ಸೆಂಟರ್ ನಲ್ಲೂ ಇತ್ತು. ಅಲ್ಲಿ ನೋಡಿದ್ದೆ. ಅಲ್ಲಿಂದ ಬೆಂಗಳುರಿಗೆ ಸಾಗಿಸಲಾಗಿದೆ ಅಂತ ಹೇಳ್ತಾರೆ. verify ಮಾಡಬೇಕು.

Subrahmanya said...

ವಿಕಾಸ್,

http://en.wikipedia.org/wiki/Government_Museum_(Bangalore)

ಸೊರಬ ಸಮಾಚಾರ said...

ಕರ್ನಾಟಕದ ಮೊದಲ ಶಾಸನ ಯಾವುದು....?