Dec 20, 2009

ಧರ್ಮಾಧಿಕಾರಿ (ನ್ಯಾಯಾಧಿಕಾರಿ)


ಮುಖ್ಯ ನ್ಯಾಯಮೂರ್ತಿಗಳೊಬ್ಬರಿಗೆ ಮಹಾಭಿಯೋಗದ ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವಾಗಲೇ, ಸುಮಾರು ೯೦೦ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಮತ್ತು ಚಿತ್ರದಲ್ಲಿ ಕಾಣುತ್ತಿರುವ ಶಿಲ್ಪದ ಬಗ್ಗೆ ಒಂದಷ್ಟು ನೇರ ಮಾತು. ಚಿತ್ರದಲ್ಲಿ ಕಾಣುತ್ತಿರುವ ವಿಗ್ರಹ ವಿಶ್ವವಿಖ್ಯಾತ ಹಳೇಬೀಡು ದೇವಾಲಯದಲ್ಲಿ ಹೊಯ್ಸಳರ ಕಾಲದಲ್ಲಿ ಕೆತ್ತಲ್ಪಟ್ಟಿದ್ದು. ಈ ವಿಗ್ರಹದ ಹೆಸರು ಧರ್ಮಾಧಿಕಾರಿ ಅಥವಾ ನ್ಯಾಯಾಧಿಕಾರಿ. ಅಂದಿನ ನ್ಯಾಯಧೀಶರ (ಜಡ್ಜ್ ಅಥವಾ ನ್ಯಾಯಮೂರ್ತಿಗಳು) ಉಡುಗೆ- ವಸ್ತ್ರವಿನ್ಯಾಸ- ಇತ್ಯಾದಿಗಳನ್ನು ಚಿತ್ರದಲ್ಲಿ ಕಾಣಬಹುದು. ಅಂದಿನ ನ್ಯಾಯದಾನದ ವಿಧಿ-ವಿಧಾನವನ್ನು ಈ ವಿಗ್ರಹದ ಮೂಲಕವೇ ತಿಳಿಯುವುದಾದರೆ... ಮೊದಲಿಗೆ ನ್ಯಾಯಾಧಿಕಾರಿಯ ವಸ್ತ್ರವನ್ನು ಗಮನಿಸಿ,.... ಉದ್ದನೆಯ ನಿಲುವಂಗಿ(ಗೌನ್), ಒಳಗೊಂದು ಕೌಪೀನ(ಲಂಗೋಟಿ, ಪುಟಗೋಸಿ!), ಬಲಗೈಯಲ್ಲಿ ಧರ್ಮದಂಡ(ನ್ಯಾಯದಂಡ), ಎಡಗೈಯಲ್ಲಿ ಧರ್ಮಚಕ್ರ(ನ್ಯಾಯಚಕ್ರ) ವನ್ನು ಕಾಣಬಹುದು. ಇಂದಿನ ನ್ಯಾಯಾಧೀಶರು ಕೌಪೀನ ಧರಿಸುತ್ತಾರೋ ಇಲ್ಲವೋ ಆದರೆ ಆದ್ಯತೆಯಂತೆ ತಮ್ಮ ಉಡುಗೆಯನ್ನಂತೂ ಲಕ್ಷಣವಾಗಿರಿಸಿಕೊಂಡಿರುತ್ತಾರೆ. ಅಂದಿನ ಸರಳ-ಸಹಜ ನ್ಯಾಯಾಧೀಶರನ್ನು ಗಮನಿಸಿದಾಗ ನ್ಯಾಯದಾನದ ವ್ಯವಸ್ಠೆ ಎಷ್ಟು ಸುಭದ್ರ, ಸತ್ಯಪೂರ್ಣ ಹಾಗು ಅರ್ಥಪೂರ್ಣವಾಗಿರುತ್ತಿತ್ತು ಎಂದು ತಿಳಿದುಕೊಳ್ಳಬಹುದು. ಇತಿಹಾಸ ಸಂಶೋಧಕರ ಪ್ರಕಾರ ಇದೇ ದೇವಾಲಯದಲ್ಲಿರುವ ದೊಡ್ಡಗಣಪತಿಯೆದುರೇ ನ್ಯಾಯಪಂಚಾಯ್ತಿಗಳು ನೆಡೆಯುತ್ತಿದ್ದುದಂತೆ. ಈ ಗಣಪತಿಯನ್ನು ಸಂಧಿಗಣಪತಿ ಅಥವಾ ಸಂಧಾನ ಗಣಪತಿ ಎಂದು ಕರೆಯುತ್ತಿದ್ದರಂತೆ. ನ್ಯಾಯದಾನ ಹೇಗಿರುತ್ತಿತ್ತು ಎಂಬುದಕ್ಕೆ ಉದಾಹರಣೆಯಂತೆ .. ಯಾವುದೋ ಒಂದು ಮಹತ್ತರ ಅಪರಾಧ ಮಾಡಿದ ನಾಯಕನ ಮಗನಿಗೆ ನ್ಯಾಯಾಧೀಶರು ಚಿನ್ನದ ಕಡ್ಡಿಗಳನ್ನು ಕಾಯಿಸಿ ಬರೆಹಾಕಲು ಆದೇಶಿಸಿರುವ ಶಿಲಾಶಾಸನವೂ ಇಲ್ಲಿ ಲಭ್ಯವಿದೆ. ಆದೇಶದ ಪಾಲನೆಯಾಗಿರುವ ಬಗ್ಗೆಯೂ ಲಿಖಿತ ಶಾಸನವಿದೆ. ಹೀಗೆ ಅಂದಿನ ನ್ಯಾಯಾಧೀಶರು -ನ್ಯಾಯದಾನಗಳು ಎಷ್ಟು ಸರಳ ಮತ್ತು ಪಾರದರ್ಶಕ ಎಂಬುದನ್ನು ಇವುಗಳಿಂದಲೇ ಅರಿಯಬಹುದು. ಇಂದು ಸುಪ್ರೀಂ ಕೋರ್ಟಿಗೇ ಜಗ್ಗದ ಮಹಾನುಭಾವರು ಸಂಧಾನ ಗಣಪತಿಗೆ ಬಗ್ಗುವರೆ ??!!

6 comments:

ಸುಪ್ತವರ್ಣ said...

ಇದೆಲ್ಲಿ ಸಿಕ್ಕಿತು ಮಾರಾಯ್ರೆ ನಿಮಗೆ? ಚೆನ್ನಾಗಿದೆ. ಅಂದಹಾಗೆ, ನಾಯಕನ ಮಗನಾದ್ದರಿಂದ ಚಿನ್ನದ ಕಡ್ಡಿಯಿಂದ ಬರೆಯೇ? ಉಳಿದವರಾದರೆ ಕಬ್ಬಿಣದ ಕಡ್ಡಿಯಿಂದ ಬರೆಯೇ? (ಸುಮ್ಮನೆ ತಮಾಷೆಗೆ!)

Subrahmanya said...

ಆಗೆಲ್ಲಾ ಸುವರ್ಣಯುಗವಲ್ಲವೇ ’ವರ್ಣ’ ದವರೇ !! ಹಾಗಾಗಿ ಚಿನ್ನದ ಕಡ್ಡಿಯನ್ನು ಬಳಸಿರಬಹುದು. ಮುಂದೆ ಇದೇ ದೇವಾಲಯದ ಇನ್ನಷ್ಟು ಮಾಹಿತಿಯನ್ನು ವಿವರಿಸಲಿದ್ದೇನೆ. ಹೀಗೇ ಬರುತ್ತಿರಿ....ಧನ್ಯವಾದಗಳು.

sunaath said...

‘ಭಾರತೀಯ ನ್ಯಾಯದಾನ’ದ ಬಗೆಗೆ ನಾವೆಲ್ಲರೂ ಹೆಮ್ಮೆ ಪಡುವಂತಹ ಮಾಹಿತಿ ನಿಮ್ಮಿಂದ ಬಂದಿದೆ. ಈ ಮಾಹಿತಿಗೆ supporing ಶಿಲಾದಾಖಲೆಯೂ ಇರುವದು
ಮಹತ್ವದ ಸಂಗತಿ. ಅಭಿನಂದನೆಗಳು ಹಾಗು ಧನ್ಯವಾದಗಳು.

Subrahmanya said...

ಸುನಾಥ್ ಗುರುಗಳೇ...
ಹೆಣ್ಣು ಭ್ರೂಣ ಹತ್ಯೆ ಹಾಗೂ ನ್ಯಾಯಾಧಿಕಾರಿಯ ವಿಚಾರಗಳನ್ನು ತುಂಬಾ ಅಕರಾಸ್ತೆಯಿಂದ ನಾನು ಬರೆದಿದ್ದೆ. ಒಂದಷ್ಟು ವಿಚಾರ ಮಂಥನವಾಗಲೀ ಎಂಬುದೇ ನನ್ನ ಉದ್ದೇಶವಾಗಿತ್ತು......ಆದರೂ ನನ್ನ ವಿಚಾರಗಳನ್ನು ಹೊರಹಾಕಿದ ತೃಪ್ತಿ ನನಗಿದೆ....ನಿಮ್ಮ ಮೆಚ್ಚಿಗೆಗೆ...ಪ್ರೋತ್ಸಾಹಕ್ಕೆ ನಾನು ಆಭಾರಿ....ನಿಮ್ಮ ಅಕ್ಕರೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ...ಮುಂದೆ ಅದಕ್ಕೆ ತಕ್ಕ ಮೌಲ್ಯ ದೊರಕಿಸಿಕೊಡುವ ವಿಶ್ವಾಸವು ನನಗಿದೆ....ಮತ್ತೊಮ್ಮೆ ನಿಮಗೆ ಧನ್ಯವಾದಗಳು...

ಸೀತಾರಾಮ. ಕೆ. / SITARAM.K said...

nice info

Subrahmanya said...

* ಸೀತಾರಾಮ ಗುರುಗಳೇ...
ಪುರಾಣವನ್ನು ಒಳಹೊಕ್ಕಿ ನೋಡಿದ್ದಕ್ಕೆ ಧನ್ಯವಾದ ನಿಮಗೆ.