Jan 14, 2010

ಅಚ್ಚರಿ-ವಿಸ್ಮಯ!


ಬೆಂಗಳೂರಿನ (ವಿಸ್ಮಯ ನಗರಿಯ!?) ಗವಿ ಗಂಗಾಧರೇಶ್ವರ ದೇವಾಲಯದಲ್ಲಿಂದು (ದಿನಾಂಕ ೧೪) ಶಿವಲಿಂಗದ ಮೇಲೆ ಸೂರ್ಯ ರಶ್ಮಿಯು ಚುಂಬಿಸಿದ ವಿಸ್ಮಯ ಮತ್ತು ಅಚ್ಚರಿ ನಡೆದೇಹೋಯಿತು! ಭಕ್ತರೆಲ್ಲರೂ ಪುನೀತರಾದರು. (ಆ ಪಾವಿತ್ರ್ಯತೆಯ ಬಗ್ಗೆ ನನ್ನ ಯಾವ ಆಕ್ಷೇಪಣೆಯೂ ಇಲ್ಲ!!). ದೂರದರ್ಶನದ ಖಾಸಗಿ ವಾಹಿನಿಗಳಂತೂ ನೇರ ಪ್ರಸಾರ ಮಾಡಿ ಇದನ್ನು ವಿಸ್ಮಯ ಮತ್ತು ಅಚ್ಚರಿ ಎಂದು ಸಾರಿದವು. ಈ ವಿಸ್ಮಯ ಹೇಗೆ ಸಾಧ್ಯವಾಯಿತು ? ....., ನಿಮಗೊಂದು ಉದಾಹರಣೆ ಕೊಡುತ್ತೇನೆ. ನಿಮ್ಮದೊಂದು ಚಂದದ ಮನೆಯುಂಟಲ್ಲಾ..... ಆ ಮನೆಯ ಪೂರ್ವ ಅಥವಾ ಪಶ್ಚಿಮದ ಗೋಡೆಯ ಮೇಲೆ ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲೊಂದು ಕಿಟಕಿ ಮಾಡಿಸಿಡಿ. ಕಿಟಕಿಯಿಂದ ಸೂರ್ಯರಶ್ಮಿ ಒಳಗೆ ಬರಲೇ ಬೇಕಲ್ಲವೇ?! ಮನೆಯೊಳಗೆ ಬಂದ ಕಿರಣಗಳು ಎಲ್ಲಿ ಬೀಳುವುದೋ ಆ ಸ್ಥಳದಲ್ಲಿ ಅಭಿಮುಖವಾಗಿ ಒಂದು ದೇವರ ವಿಗ್ರಹವನ್ನಿಡಿ... ಅರೆ! ವಿಗ್ರಹದ ಮೇಲೆ ಬಿತ್ತಲ್ಲಾ ಸೂರ್ಯರಶ್ಮಿ...! ಸರಿಯಾಗಿ ಸಮಯ ನೋಡಿಕೊಳ್ಳಿ ಮತ್ತೆ ಮುಂದಿನ ವರ್ಷ ಅರ್ಧ-ಮುಕ್ಕಾಲು ಗಂಟೆ ಹೆಚ್ಚು-ಕಮ್ಮಿ ಸೂರ್ಯರಶ್ಮಿ ನೀವಿಟ್ಟ ದೇವರ ವಿಗ್ರಹದ ಮೇಲೆ ಬಿದ್ದೇ ಬೀಳುತ್ತದೆ.... ಕಾರಣ ಸೂರ್ಯನ ಬೆಳಕು ಮತ್ತು ಕಿಟಕಿ. ಕಿಟಕಿಯೇ ಇಲ್ಲದ್ದಿದ್ದರೆ ಸೂರ್ಯರಶ್ಮಿ ಒಳಗೆ ಬರಲು ಸಾಧ್ಯವೇ? ಹಾಗೆಯೇ ಗಂಗಾಧರೇಶ್ವರ ದೇವಾಲಯದಲ್ಲೂ ಸರಿಯಾದ ಸಮಯಕ್ಕೆ ಕಿಟಕಿ ಮೂಲಕ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬೀಳುತ್ತದೆ. ಸೂರ್ಯ ತನ್ನ ನಿರ್ಧಿಷ್ಟ ಕೋನಕ್ಕೆ ಬಂದಾಗ ವಕ್ರೀಭವನದ ಮೂಲಕ ಬೆಳಕು ಎಲ್ಲೆಡೆಯಲ್ಲಿಯೂ ಪಸರಿಸಲೇಬೇಕು... ಕಿಟಕಿಯ ಮೂಲಕವೂ ಸಹ. ಕಿಟಕಿ ಎಲ್ಲಿಡಬೇಕು ಅಥವಾ ಎಲ್ಲಿರಬೇಕು ಎಂಬ ಜಾಣ್ಮೆಯಷ್ಟೇ ಇಲ್ಲಿ ಮುಖ್ಯ. ಹೀಗೆ ಮಕರ ಸಂಕ್ರಮಣದಂದು ಕಿಟಕಿಯ ಮೂಲಕ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬೀಳುವುದು ಒಂದು ಸಹಜ ಪ್ರಕ್ರಿಯೆ. ಇದರಲ್ಲಿ ವಿಸ್ಮಯವಾಗಲೀ ಅಚ್ಚರಿಯಾಗಲೀ ಇಲ್ಲವೆಂದೇ ನನ್ನ ಅಭಿಮತ. ’ಶೃಂಗೇರಿ’ಯ ವಿದ್ಯಾಶಂಕರ ದೇವಾಲಯದಲ್ಲೂ ೧೨ರಾಶಿಗಳ ಕಂಬಗಳಿವೆ. ಈ ದೇವಾಲಯ ನಿರ್ಮಾಣ ಮಾಡುವಾಗಲೇ ಸೂರ್ಯರಶ್ಮಿಯು ಯಾವ-ಯಾವ ಕೋನದಿಂದ ಎಲ್ಲೆಲ್ಲಿ ನಿಖರವಾಗಿ ಬೀಳಬಹುದು ಎಂದು ವೈಜ್ಞಾನಿಕವಾಗಿ ಅಂದಾಜಿಸಿ ಸೌರಮಾನ ಪದ್ದತಿಯ ರೀತಿ ಸೂರ್ಯನ ಮೇಷಾದಿ ರಾಶಿ ಪ್ರವೇಶವಾದಾಗ ಆ ನಿರ್ದಿಷ್ಟ ರಾಶಿಯ ಕಂಬದ ಮೇಲೆ ಬೆಳಕು ಬೀಳುವಂತೆ ನಿರ್ಮಿಸಿದ್ದಾರೆ. ಇದು ನಿರ್ಮಾಣದ ಮತ್ತು ನಿರ್ಮಾತೃವಿನ ಪಾಂಡಿತ್ಯ, ಕೌಶಲ್ಯದ ವಿಸ್ಮಯವೇ ಹೊರತು ಸೂರ್ಯರಶ್ಮಿಯದ್ದಲ್ಲ.( ಅಂತಹ ಮಹಾನುಭಾವರನ್ನು ಮರೆತುಬಿಡುತ್ತಾರೆ.... ಇಂತಹ (ಅ)ವಿಸ್ಮಯಗಳು ಪ್ರಚಾರವಾಗುತ್ತದೆ .!) ಇದು ಎಲ್ಲಾ ದೇವಾಲಯಗಳಲ್ಲೂ ಮತ್ತು ನಮ್ಮ ನಿಮ್ಮ ಮನೆಗಳಲ್ಲೂ ನೆಡೆಯುವ ಸಾಮಾನ್ಯ ಕ್ರಿಯೆ.
( ಮುಖ್ಯವಾಗಿ ಸೂರ್ಯನ ಕಿರಣಗಳ ಪ್ರವೇಶಕ್ಕೆ ಯಾವುದೇ ಅಡೆ-ತಡೆಗಳಿರಬಾರದಷ್ಟೆ. ಕಾಂಕ್ರೀಟ್ ಕಾಡಿನಲ್ಲಿ ಇದು ಕಷ್ಟವೇ ಸರಿ !) ಈ ಸಹಜ ಪ್ರಕ್ರಿಯೆಯನ್ನು ಅಚ್ಚರಿ-ವಿಸ್ಮಯ ಎಂದೆಲ್ಲಾ ಸಾರಿ.. ನಂಬುವ ಜನರನ್ನು ಇನ್ನಷ್ಟು ಮೌಢ್ಯಕ್ಕೆ ತಳ್ಳುವ ಅವಶ್ಯಕತೆಯಿದೆಯೇ ?? ಜಗತ್ತನ್ನೇ ಬೆಳಗುತ್ತಿರುವ ಸೂರ್ಯನ ಕಿರಣಗಳು ಎಲ್ಲೆಡೆಯೂ ಪಸರಿಸಲೇಬೇಕಲ್ಲವೇ ? ಆದರೂ ಇದಕ್ಕೆಲ್ಲಾ ಇನ್ನೊಂದು ಮಹತ್ತರವಾದ ಮತ್ತು ಅತ್ಯಂತ ಪ್ರಮುಖವಾದ ಕಾರಣವೊಂದಿದೆ....ಅದೇನು ಗೊತ್ತೆ.........???
???
???

???

" ಭೂಮಿ ತಿರುಗುತ್ತಿದೆ........ಅದೂsss ತನ್ನ ಕ್ಷಿತಿಜದಲ್ಲಿ....ಅತ್ಯಂತ ನಿಖರವಾಗಿ....!!! " ( ಭೂಮಿಯ ನಿಖರ ಚಲನೆಯಿಂದಲೇ ಅಲ್ಲವೇ ಹಗಲು, ರಾತ್ರಿ, ಸಂಕ್ರಮಣ, ಗ್ರಹಣ....ಎಲ್ಲವೂ..!!ಸೂರ್ಯ ಚಲಿಸುವುದಿಲ್ಲ...ಚಲಿಸುವುದು ಭೂಮಿ ಮಾತ್ರ...: ಇದನ್ನೇ ಆಧಾರವಾಗಿಟ್ಟುಕೊಂಡು ಮತ್ತೊಮ್ಮೆ ಲೇಖನವನ್ನು ಓದಿ ನೋಡಿ..... :)
.................................................................................................................................................................................................................

ಖೊನೆ ಖಿಡಿ :

ಸಂಬು : ಯಾಕ್ಲಾ ಲಿಂಗ ಬರೀ ಪುಟುಗೋಸಿಲಿ ಕುಂತೀಯಾ ?
ಲಿಂಗ : ಆ ದೊಡ್ ಮನ್ಸ್ರೆಲ್ಲಾ ಶೆಖೆ ಕಮ್ಮಿ ಮಾಡವಾ ಅಂತ ಸೂಟು-ಬೂಟು ಆಕ್ಯಂಡು ಅದೆಲ್ಲೊ ಸೇರಿದ್ದ್ರಂತಲ್ಲಾ......ಅದ್ಕೆಯಾ ..ನಾನ್ ಇಷ್ಟಾದ್ರೂ ಮಾಡನಾ ಅಂತ !!
( ಜಾಗತಿಕ ತಾಪಮಾನದ ಬಿಸಿ ಶಂಭುಲಿಂಗರಿಗೆ ತಟ್ಟಿದ್ದ ಪರಿ ಇದು !!)

19 comments:

ಸೀತಾರಾಮ. ಕೆ. / SITARAM.K said...

ನಮ್ಮ ಟಿವಿಯವರ ಪ್ರಚಾರ ಬಿಡಿ. ಅವರಿಗೆಲ್ಲ ಮಹತ್ತರ ಸುದ್ಧಿನೇ.
ಒಳ್ಳೆ ವಿಚಾರ ತಿಳಿಸಿದ್ದಿರಿ. ಇಲ್ಲಿ ಅ೦ಥಾ ವಿಶೇಷವಿಲ್ಲ ಅದು ಪ್ರಕೃತಿ.
ಸೂರ್ಯ ಸುತ್ತೋದು ಹೇಳಿ ಚೌಕಾಯಿಸಿದ್ದಿರಾ !
ಶಂಬುಲಿಂಗನ ಕಿಡಿ ಚೆನ್ನಾಗಿದೆ. ಧನ್ಯವಾದಗಳು

ಜಲನಯನ said...

ಸುಭ ರೇ scientific ಆಧಾರದಮೇಲೆ ಹೆಚ್ಚು ಹೇಳಲು ನಮಗೆ ಈಗ ಸಾಧ್ಯವಾಗುತ್ತಿದೆ...ಆದರೆ ಎಷ್ಟೋ ಸಾವಿರ ವರ್ಷಗಳ ಹಿಂದೆ ಎಲ್ಲವನ್ನೂ ನಿಖರವಾಗಿ ಅರ್ಥೈಸಿ ವಿವೇಚಿಸಿ ದೇವಾಲಯಗಳ ನಿರ್ಮಾಣ ಆಗಿದೆಯೆಂದರೆ ಯಾವುದೇ ಆಧುನಿಕ ಉಪಕರಣಗಳಿಲ್ಲದೇ ಇದನ್ನು ಯೋಚಿಸಿ, ಯೋಜಿಸಿ ಕಾರ್ಯರೂಪಕ್ಕೆ ತಂದ ಆ ಹಿರಿಯರಿಗೆ ನಿಜ ಪ್ರಶಂಸೆ ಸಲ್ಲಬೇಕು...ನಿಜ ನಿಮ್ಮ ಮಾತು.

AntharangadaMaathugalu said...

ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೆ, ಅಷ್ಟರಮಟ್ಟಿಗೆ ನಮ್ಮ ಹಿಂದಿನವರ ವಿಚಾರ ಧಾರೆ ಮುಂದುವರೆದಿತ್ತು ಮತ್ತು ಇದು ಆಗ ಖಂಡಿತವಾಗಿ ಅಚ್ಚರಿಯ ಸಂಗತಿಯಾಗಿತ್ತು. ಈಗ ಇದು ವಿಸ್ಮಯವೇನೂ ಅಲ್ಲ, ಆದರೆ ನಾವು ನಮ್ಮ ಪೂರ್ವಿಕರ ಬುದ್ಧಿಶಕ್ತಿಯನ್ನು ಗೌರವಿಸಲೇಬೇಕು. ಡಿಸೆಂಬರ್, ೨೦೦೯ ರ ಯಾವುದೊ ಒಂದು ಕರ್ಮವೀರ ಸಂಚಿಕೆಯಲ್ಲಿ, ಇದರ ಬಗ್ಗೆ ಲೇಖನ ಬಂದಿತ್ತು. ಲೇಖಕರ ಹೆಸರು ನೆನಪಿಲ್ಲ ಆದರೆ ಅವರು ಈ ವಿಸ್ಮಯ ಬರೀ ಸಂಕ್ರಮಣದ ದಿನ ಮಾತ್ರವಲ್ಲ, ಇಡೀ ವರ್ಷದಲ್ಲಿ ಇನ್ನೂ ಕೆಲವು ದಿನಗಳು ಆಗುತ್ತದೆಯೆಂದಿದ್ದರು. ಡಿಸೆಂಬರ್ ೨೪ ಮತ್ತು ೩೦/೩೧ ನೇ ತಾರೀಖು ಕೂಡ ಇತ್ತು, ಆದರೆ ಆ ದಿನಗಳಲ್ಲಿ ಮೋಡ ಕವಿದಿದ್ದರಿಂದ ಪ್ರತ್ಯಕ್ಷ ದರ್ಶನ ಸಾಧ್ಯವಾಗಲಿಲ್ಲ ಅಷ್ಟೆ. ಚಿಕ್ಕ ಚಿಕ್ಕ ವಿಚಾರಗಳನ್ನೂ ಹೇಗೆ ನಮ್ಮ ಟಿವಿ ಮಾಧ್ಯಮದವರು ತಮ್ಮ TRP ಹೆಚ್ಚಿಸಿಕೊಳ್ಳಲು ಭವ್ಯವಾಗಿಸುತ್ತಾರೆನ್ನುವುದು ನಮಗೆಲ್ಲಾ ತಿಳಿದೇಯಿದೆ!! ನಿಜವಾದ ವಿಸ್ಮಯ ನಿನ್ನೆ ನೇರ ಪ್ರಸಾರ ಮಾಡಿದ tv9ನ ಸುದ್ದಿಗಾರನ ಕನ್ನಡ ಭಾಷಾ ಪ್ರವೀಣತೆ ಆಗಿತ್ತು.... :-)
ನಿಮ್ಮ ಬರಹ ಚೆನ್ನಾಗಿದೆ......

ಶ್ಯಾಮಲ

Anonymous said...

ನನಗು ಈ ವಿಷಯ ಕೇಳಿ ಶೃಂಗೇರಿಯ ನೆನಪು ಬಂದಿತ್ತು! ಒಳ್ಳೇ ವೈಜ್ಞಾನಿಕ ವಾಗಿ ಮಂಡಿಸಿದ್ದೀರಿ! ' ಕಿಡಿ ತುಂಬಾ'ಹಿಡಿಸಿತು!!

ಮನಮುಕ್ತಾ said...

ವಿಷಯವನ್ನು ವೈಜ್ನಾನಿಕ ದೃಷ್ಟಿಕೋನದಿ೦ದ ತಿಳಿದು ಮಾಹಿತಿ ನೀಡುತ್ತಿದ್ದೀರಿ.
ಧನ್ಯವಾದಗಳು. ಖಿಡಿ ತು೦ಬಾ ಚೆನ್ನಾಗಿದೆ.

ಚುಕ್ಕಿಚಿತ್ತಾರ said...

ವೈಜ್ಞಾನಿಕವಾಗಿ ವಿಚಾರ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು

ಸವಿಗನಸು said...

olle mahiti.....

Subrahmanya said...

ಸಾವಿರಾರು ವರ್ಷಗಳ ಹಿಂದೆ ಯಾವುದೇ ಯಂತ್ರಗಳ ಸಹಾಯವಿಲ್ಲದೇ ವಿಜ್ಞಾನದ ಹೊಸ-ಹೊಸ ಆವಿಷ್ಕಾರಗಳಿಲ್ಲದೆಯೂ ಅಂದಿನ ಮೇಧಾವಿಗಳು ನಮಗಾಗಿ ಸಾಕಷ್ಟು ತೋರಿಸಿಕೊಟ್ಟು ಹೋಗಿದ್ದಾರೆ..ಅಂತಹ ಮಹನೀಯರ ಸಾಧನೆ ವಿಸ್ಮಯವೇ ಸರಿ....ಹಾಗೇ ಈ ವಿಚಾರಗಳನ್ನು ವಿಜ್ಞಾನದ ಜೊತೆಗೆ ವಾಸ್ತವದ ನೆಲೆಗಟ್ಟಿನಲ್ಲಿ ನೋಡಿ ನಿಮ್ಮ ಮುಂದಿಡುವ ಪುಟ್ಟ ಪ್ರಯತ್ನವಷ್ಟೆ ಇದು...
ಪ್ರ‍ೋತ್ಸಾಹಿಸಿದ ...ಸೀತಾರಮ್ ಗುರುಗಳು, ಬ್ಲಾಗ್ ಗೆ ಬಂದ ’ಜಲನಯನ’ ದವರು , ವಿಚಾರಕ್ಕೆ ಇನ್ನಷ್ಟು ವಿಷಯಗಳನ್ನು ತಿಳಿಸಿಕೊಟ್ಟ ಶ್ಯಾಮಲಾ ಮೇಡಂ, ಕಿಡಿ ಮೆಚ್ಚಿಕೊಂಡ ಸುಮನಾರವರು, ಮುಕ್ತವಾಗಿ ಪ್ರತಿಕ್ರಿಯಿಸಿದ ’ಮನಮುಕ್ತಾ’ ರವರು , ಚುಕ್ಕಿ ಚಿತ್ತಾರದ ವಿಜಯಶ್ರೀ ರವರೂ , ಮೆಚ್ಚಿ ಬರೆದ ’ಸವಿಗನಸಿ’ನವರಿಗೂ ನನ್ನ ಧನ್ಯವಾದಗಳು

Narayan Bhat said...

ಈ ರೀತಿಯ ಪ್ರಸಂಗಗಳು ಬಿತ್ತರಿಸುವ ಮಾಧ್ಯಮ, ಮತ್ತೆ ನೋಡುವ ನಾವು ಇರುವ ವರೆಗೆ ಪುನರಾವರ್ತೆನೆಯಾಗುತ್ತಲೇ ಹೋಗುತ್ತವೆ.

Raghu said...

ಸುಬ್ರಹ್ಮಣ್ಯ ಅವರೇ,
ನಿಮ್ಮ ವಾದ ವೈಜ್ಞಾನಿಕವಾಗಿದೆ... ಹೆಚ್ಚಿನ ಸಲ ನಮ್ಮ ಮಾದ್ಯಮದವರು ಜನರ ದಾರಿ ತಪ್ಪಿಸುದರಲ್ಲಿ ನಿಸ್ಸಿಮರು... ಯಾವ ವಿಷಯಕ್ಕೆ ಆದ್ಯತೆ ಕೊಡಬೇಕು ಯಾವುದಕ್ಕೆ ಬೇಡ ಎನ್ನುವುದು ಎಲ್ಳಸ್ತು ತಿಳಿದಿಲ್ಲ ಅಂತ ಕಾಣ್ಸುತ್ತೆ..
ನಿಮ್ಮವ,
ರಾಘು.

ಶಿವಪ್ರಕಾಶ್ said...

Point to be noted... :)

Subrahmanya said...

ನಿಜ ರಾಘು ಅವರೆ....ಅನಗತ್ಯ ಪ್ರಚಾರ ಕೊಟ್ಟು ಕೊನೆಗ ಸುದ್ದಿಯ ಸಾರವನ್ನೇ ಇಲ್ಲವಾಗಿಸುತ್ತಾರೆ.....ಶಂಭುಲಿಂಗನ ಗುಡಿಗೆ ಸ್ವಾಗತ.

Subrahmanya said...

ಶಿವು ಮಹರಾಜ್.....Ok your honour !! :)

ದಿನಕರ ಮೊಗೇರ said...

ಸುಬ್ರಮಣ್ಯ ಸರ್,
ಟಿವಿಯವರ ಬಗ್ಗೆ ಬಿಡಿ...... ಅವರಿಗೆ ಆ ದಿನ ಸೂರ್ಯ ಕಿರಣ ಸೋಕಿದರೂ ಸುದ್ದಿ, ಸೋಕದಿದ್ದರೂ ಸುದ್ದಿ..... ಅಷ್ಟೆಲ್ಲ ವರುಷಗಳ ಹಿಂದೆ ಕರಾರುವಕ್ಕಾಗಿ ಲೆಕ್ಕ ಹಾಕಿ, ದೇವಾಲಯ ಕಟ್ಟಿಸಿದ್ದಕ್ಕೆ ಹಾಟ್ಸ್ ಆಫ ಹೇಳಲೇ ಬೇಕು.....

Ittigecement said...

ಹಿಂದಿನವರ ಜ್ಞಾನವನ್ನು...
ವಿವರವಾಗಿ ಬಿಡಿಸಿಟ್ಟಿದ್ದಕ್ಕೆ ಧನ್ಯವಾದಗಳು...

ಗ್ರಹಗಳ ಚಲನೆಯನ್ನು..
ಯಾವ ಉಪಕರಣವಿಲ್ಲದೆ..
ಕರಾರುವಾಕ್ಕಾಗಿ "ಗ್ರಹಣಗಳ ಬಗೆಗೆ...
ಸೂರ್ಯೋದಯ
ಚಂದ್ರೋದಯದ ಬಗ್ಗೆ ಹೇಳುತ್ತಿದ್ದ ಹಿರಿಯರ ಬಗೆಗೆ ಹೆಮ್ಮೆ ಪಟ್ಟುಕೊಳ್ಳೋಣ ಅಲ್ಲವೆ..?

ನಿಮ್ಮ ಬ್ಲಾಗ್ ಇಷ್ಟವಾಯಿತು...

ಧನ್ಯವಾದಗಳು...

Subrahmanya said...

ದಿನಕರ್ ಅವರೆ,
ಆ ರೀತಿ ನಿರ್ಮಿಸಿರುವುದೇ ವಿಸ್ಮಯವಲ್ಲವೇ ....ಧನ್ಯವಾದಗಳು

ಪ್ರಕಾಶಣ್ಣ...
( ನಿಮ್ಮನ್ನು ಎಲ್ರೂ ಹೀಗೇ ಕರೆಯುತ್ತಿದ್ದಾರೆ...ನಿಮ್ಮನ್ನು ನಾನು ನೋಡಿಲ್ಲ...ಆದ್ರೂ ನಿಮ್ಮನ್ನು ಹೀಗೇ ಕರೆಯುತ್ತೇನೆ !)

ನನ್ನ ಬ್ಲಾಗ್ ಇಷ್ಟವಾಯ್ತು ಅಂದ್ರಿ....ವಿಚಾರಗಳನ್ನೂ ಮೆಚ್ಚಿದ್ದೀರಿ...ಅದಕ್ಕೆ ಧನ್ಯವಾದಗಳು...ಆದ್ರೆ ಹೀಗೇ ಬರ್ತಾ ಇರೋದನ್ನ ಮಾತ್ರ ಮರೀಬೇಡಿ.

Nisha said...

ವೈಜ್ಞಾನಿಕವಾಗಿ ವಿಚಾರ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು, ಶಂಬುಲಿಂಗನ ಕಿಡಿ ಚೆನ್ನಾಗಿದೆ.

Subrahmanya said...

’ನಿಶಾ ’ ಅವರಿಗೆ ಧನ್ಯವಾದಗಳು....

ದೀಪಸ್ಮಿತಾ said...

ನನ್ನ ಮನಸ್ಸಿನಲ್ಲಿದುದನ್ನು ಬರೆದಿದ್ದೀರಿ. ಇಲ್ಲಿ ನಿಜವಾದ ವಿಸ್ಮಯ ಎಂದರೆ ಆಗಿನ ಜನ ಆಧುನಿಕ ಉಪಕರಣಗಳಿಲ್ಲದೆ ಹೇಗೆ ಇಂಥಾ ದೇವಾಲಯಗಳಲ್ಲು ಕಟ್ಟಿದರು ಎನ್ನುವುದು. ನಮ್ಮ ಹಿಂದಿನವರು ಬುದ್ಧಿವಂತರು ನಿಜ. ಆದರೆ ಅವರು ಮಾಡಿದ್ದು ಎಲ್ಲವೂ ಸರಿ, ಆಗಿನ ಎಲ್ಲ ಶಾಸ್ತ್ರ ಸಂಪ್ರದಾಯಗಳು ವೈಜ್ಞಾನಿಕ ಎಂದು ಬಿಂಬಿಸುವ pseudo-scientific ಪತ್ರಿಕಾ ಲೇಖನಗಳು, ಟಿವಿ ಕಾರ್ಯಕ್ರಮಗಳು ಈಗೀಗ ಜಾಸ್ತಿಯಾಗುತ್ತಿವೆ. ನಿಮ್ಮ ಲೇಖನ ಸಂದರ್ಭೋಚಿತವಾಗಿದೆ