Jun 24, 2011

ವಿವೇಕ ಚೂಡಾಮಣಿ./Viveka Chudamani/The Crest-Jewel of Wisdom




ಈ ಜಗತ್ತಿಗೆ ಯಾರು ಅತ್ಯುತ್ತಮವಾದವುಗಳನ್ನು ಕೊಟ್ಟಿರುವರೋ ಅವರು ಎಲೆ ಮರೆಯ ಕಾಯಿಯಂತೆಯೇ ಇದ್ದು ಹೆಸರಿನ ,ಕೀರ್ತಿಯ ಆಸೆಯಾಗನ್ನಾಗಲೀ ಇಟ್ಟುಕೊಳ್ಳದೆ ಮಾನವಕೋಟಿಗೆ ಉತ್ತಮವಾದುದು ಉಳಿದರೆ ಸಾಕೆಂದು ಆಕಾರವಿಲ್ಲದ ಗಾಳಿ, ಬೆಳಕಿನಂತೆ ಆಗಿ ಹೋಗಿದ್ದಾರೆ. ಭಾರತೀಯ ಪುರಾತನ  ತತ್ತ್ವಶಾಸ್ತ್ರದ  ರಚನಕಾರರು, ಪುರಾತನ ಗುಡಿ-ಕೋಟೆಗಳನ್ನು ಕಟ್ಟಿದವರು, ನಾಗರೀಕ ಜೀವನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ಅನೇಕ ಮಹಾಮಹಿಮರುಗಳ ಹೆಸರುಗಳು ನಮಗೆ ನಿಶ್ಚಿತವಾಗಿ ದೊರಕುವುದಿಲ್ಲ. ಭಾರತೀಯ ತತ್ತ್ವಶಾಸ್ತ್ರದ ಆಧಾರಸ್ತಂಭಗಳಾದ ವೇದೋಪನಿಷತ್ತುಗಳೂ ಸಹ ಇಂತಹ ಅನೇಕ ಅನಾಮಧೇಯ ದೃಷ್ಟಾರರಿಂದಲೇ ಬೆಳಕಿಗೆ ತೆರೆದುಕೊಂಡಿವೆ. ವೇದ-ವೇದಾಂಗಗಳು ಮಾನವನಿಂದ ರಚಿತವಾದವುಗಳಲ್ಲ (ಅಪೌರುಷೇಯ) ಎಂಬ ವಿಚಾರವಿದ್ದರೂ ಮಾನವಕೋಟಿಗೆ ವೇದೋಪನಿಷತ್ತುಗಳ ಸಾರವನ್ನು ತಿಳಿಸಿಕೊಟ್ಟ ಅನೇಕ ಜ್ಞಾನಿಗಳ-ಗುರುಗಳ ವಿವರಗಳು ತಿಳಿದುಬಂದಿಲ್ಲ.  ಸೃಷ್ಟಿಯ ಅನೇಕ ವಿಚಿತ್ರಗಳನ್ನು ವೈವಿಧ್ಯಗಳನ್ನು ಸಾವಿರಾರು ವರುಷಗಳಷ್ಟು ಹಿಂದೆಯೇ ಕಂಡುಕೊಂಡು ಆ ಸತ್ಯಗಳನ್ನು ಉಪನಿಷತ್ತುಗಳ ಮೂಲಕ ತೆರೆದಿಟ್ಟ ಋಷಿಗಳನ್ನು,  ಯಂತ್ರಗಳ ಸಹಾಯದಿಂದಲೇ ಬದುಕನ್ನು ಕಟ್ಟಿಕೊಂಡು ಜೀವಿಸುತ್ತಿರುವ ಮಾನವನೊಂದಿಗೆ ಹೋಲಿಸಬಹುದೇ ? . ಜಗತ್ತಿನ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮಾನವನು ಅನೇಕ ತಾಂತ್ರಿಕ-ವೈಜ್ಞಾನಿಕ ವಸ್ತು-ವಿಧಾನಗಳನ್ನು ಅನ್ವೇಶಿಸಿಕೊಂಡು ತನ್ನ ಬದುಕನ್ನು ನಾಜೂಕಿನ ಗರಡಿಯೊಳಗೆ ದೂಡಿ ಪಳಗಿ ಹೊರಬಂದು ಸ್ವಾರ್ಥದ ಬದುಕನ್ನು ನೆಡೆಸುತ್ತಿರುವ ಇಂದಿನ ಕಾಲಮಾನದ  ಜನಕ್ಕೆ ಉಪನಿಷತ್ತುಗಳ ಸಾರವಾಗಲೀ ಅದರ ಆವಶ್ಯಕತೆಯಾಗಲೀ ಪ್ರಸ್ತುತವಾಗಬಲ್ಲುದೆ ?.  ಭಗವದ್ಗೀತೆಯು ಭಾರತೀಯ ತತ್ತ್ವಶಾಸ್ತ್ರದ ಪ್ರಮುಖವಾದ ಮತ್ತು ಪವಿತ್ರವಾದ ಗ್ರಂಥವೆಂದು ಗಣಿಸಲ್ಪಟ್ಟಿದೆ. ಅಲ್ಲಿ ಬರುವ ಧ್ಯಾನ ಶ್ಲೋಕದ ಅರಿತವೊಂದು ಹೀಗಿದೆ, " ಉಪನಿಷತ್ತುಗಳು ಹಸುಗಳು, ಗೋಪಾಲಕನು ಹಾಲನ್ನು ಕರೆಯುವವನು, ಅರ್ಜುನನು ಕರು, ಗೀತೆಯೇ ಅಮೃತಸಮಾನವಾದ ಹಾಲು, ಜ್ಞಾನಿಗಳು ಅದನ್ನು ಕುಡಿಯುವರು ". ಹೀಗಾಗಿ ಉಪನಿಷತ್ತೇ ಗೀತೆಗೂ ಆಶ್ರಯವಾದುದು ಎನ್ನಬೇಕಾಗುವುದು. ಇಂದಿನ ಕಾಲಮಾನಕ್ಕೆ ಬಹುತೇಕ ಯುವಜನಾಂಗಕ್ಕೆ  ವೇದೋಪನಿಷತ್ತುಗಳ ಸಾರವು ಅಪ್ರಸ್ತುತವೆನಿಸಿದರೂ, ಮಾನವನ ಜೀವನದ ಹುಟ್ಟು-ಸಾವಿನ ಬಗೆಗೆ ವಿಚಾರ ಮಾಡುವ ಸಮಯ ಬಂದಾಗ , ಸೃಷ್ಟಿಯ ಮೂಲವನ್ನು ಹುಡುಕುವ ಆಸೆ ಹುಟ್ಟಿದಾಗ, ಜೀವವಿಕಾಸಕ್ಕೆ ಕಾರಣಗಳನ್ನು ತಿಳಿಯ ಬಯಸುವಾಗ , ವಿಜ್ಞಾನವು  ಪ್ರಯೋಗಗಳಿಂದ ಸಿದ್ಧಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎಂದಾಗ ಮತ್ತು ರಕ್ತವು ತಣ್ಣಗಾಗಿ ಬಾಳಿನ ಮುಸ್ಸಂಜೆಯು ಅಪ್ಪಿಕೊಂಡು ಮುಂದೇನು? ಎಂಬ ಗೊಂದಲ ಹುಟ್ಟಿದಾಗ ನೆರವಿಗೆ ಬರುವುದೇ ಉಪನಿಷತ್ತುಗಳು !.  ’ತನ್ನ ಅರಿವು ತನಗೆ ಗುರು’ ಎಂಬ ಮಾತು ಎಲ್ಲಾ ಕಾಲಕ್ಕೂ ಹೊಂದುವಂತೆಯೇ , " ಆತ್ಮವನ್ನರಿಯಲು ಆಧ್ಯಾತ್ಮಿಕ ಗ್ರಂಥವಾಗಲೀ, ಗುರುವಿನ ನುಡಿಗಳಾಗಲೀ ಸಹಾಯಕವಾಗುವುದಿಲ್ಲ. ಅದು ತನಗೆ ತಾನೇ ಒಬ್ಬನ ಅರಿವಿಗೆ ಅನುಗುಣವಾಗಿ ತಿಳಿದುಬರುವಂತಹುದು. ಆದರೂ ಇಂತಹ ಅರಿವನ್ನು ಪಡೆಯಲು ಗ್ರಂಥವೂ , ಗುರುವೂ ಅವಶ್ಯಕ " ಎಂದು ಯೋಗ ವಾಸಿಷ್ಠ ಸಂಗ್ರಹ ಎಂಬ ಗ್ರಂಥದಲ್ಲಿ ಹೇಳಿದೆ. ಅಂದರೆ, ಗ್ರಂಥಗಳು ಮತ್ತು ಗುರುಗಳು ಆತ್ಮಜ್ಞಾನಕ್ಕೆ ದಾರಿ ತೋರಬಲ್ಲರು ಆದರೆ ಒಬ್ಬನು ತನ್ನ ಅರಿವಿನಿಂದ ಮತ್ತು ಧ್ಯಾನಗಳಿಂದ ಆತ್ಮಜ್ಞಾನವನ್ನು ಹೊಂದಬಹುದು ಎಂಬುದು ಮೇಲಿನ ಸೂಕ್ತದ ಉದ್ದೇಶ.  ಉಪನಿಷತ್ತುಗಳಿಂದ ತಿಳಿದುಬರುವ ಸಂಗತಿಗಳು ಎಣಿಕೆಗೆ ನಿಲುಕದ್ದು ಮತ್ತು ಒಂದೊಂದು ಸೂಕ್ತಿಗಳ ಮೇಲೂ ನೂರು ಪುಟಗಳ ಹೊತ್ತಗೆಯನ್ನೇ ಬರೆಯಬಹುದಾದಷ್ಟು ವಿಚಾರಗಳು.  ಉಪನಿಷತ್ತುಗಳನ್ನೇ ಆಧಾರವಾಗಿರಿಸಿಕೊಂಡು ಅನೇಕ ಆಚಾರ್ಯರು ಹತ್ತು-ಹಲವು ಗ್ರಂಥಗಳನ್ನು ಮಾನವನ ಅರಿವಿಗಾಗಿ , ತಿಳಿವಿಗಾಗಿ ಬರೆದಿಟ್ಟಿದ್ದಾರೆ.  ಅಂತಹ ಅತ್ಯುತ್ತಮ ಗ್ರಂಥಗಳಲ್ಲಿ "ವಿವೇಕ ಚೂಡಾಮಣಿ" ಎಂಬ ಗ್ರಂಥವೂ ಒಂದು.  ವಿವೇಕ ಚೂಡಾಮಣಿ ಎಂಬ ಗ್ರಂಥವು ಹಿಂದೂ ಧರ್ಮದ ಪುನರುದ್ಧಾರಕ, ಭಾರತೀಯ ಸಂಸ್ಕೃತಿಗೆ ಮರುಜನ್ಮ ನೀಡಿದ ಮಹಾನ್ ಚೇತನವೆಂದೇ ತಿಳಿಯಲ್ಪಟ್ಟಿರುವ ಶ್ರೀ ಶಂಕರಾಚಾರ್ಯರಿಂದ ರಚನೆಯಾಗಿರುವುದಾಗಿದೆ. ಮಾನವನು ಹೇಗೆ ಹಾರೆ ಗುದ್ದಲಿಗಳಿಂದ (ಯಂತ್ರಗಳಿಂದ)  ನೆಲವನ್ನು ಅಗೆದು ನೀರನ್ನು ಪಡೆಯುತ್ತಾನೋ ಹಾಗೆಯೇ ಗುರುಗಳು ಹೇಳಿರುವ ವಿಚಾರಗಳನ್ನು ಅಧ್ಯಯನ ಮಾಡುವುದರಿಂದ ಉತ್ತಮ ಜ್ಞಾನ-ವಿದ್ಯೆಯನ್ನು ಪಡೆಯಬಹುದು (ಪಡೆಯಬೇಕು).

ಯಥಾ ಖನನ್  ಖನಿತ್ರೇಣ ನರೋ ವಾರ್ಯಧಿಗಚ್ಛತಿ |
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ ||

ಶಂಕರಾಚಾರ್ಯರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯು ಆ ಹೆಸರಿಗೆ ಅನ್ವರ್ಥವಾಗಿಯೇ ಇದೆ ಎಂಬುದು ವಿದ್ವಾಸಂರ ಅಭಿಮತ.  ಜ್ಞಾನ ಸಂಪಾದನೆಗೆ ಉತ್ತಮ ಮಾರ್ಗಗಳನ್ನು ಹುಡುಕುತ್ತಾ ಹೋಗುವುದು ವಿವೇಕಿಗಳ ಲಕ್ಷಣವೇ ಆಗಿದೆ.  ಅವಿವೇಕತನದಿಂದ ಬೇಡದ ಕೆಲಸಗಳನ್ನು ಮಾಡಿ ನಂತರ  ವ್ಯಥೆಪಡುವ ಬದಲು ಒಳ್ಳೆಯ ಅರಿವಿನ ದಾರಿಯಲ್ಲಿ ನೆಡೆಯಲು ಉತ್ತಮ ಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವುದು ಒಳಿತೇ ಆಗಿದೆ.
"ಪ್ರಕ್ಷಾಲನಾದ್ದಿ ಪಂಕಸ್ಯ ದೂರಾದಸ್ಪರ್ಶನಂ ವರಮ್ " ಅಂದರೆ, "ಕೆಸರನ್ನು ತುಳಿಯುವುದೇಕೆ ? ಆಮೇಲೆ ತೊಳೆಯುವುದೇಕೆ ? " . ತೊಳೆದರೆ ದೇಹಕ್ಕಂಟಿದ ಕೆಸರು ಹೋಗಬಹುದು ಮನಕ್ಕಂಟಿದ ಕೆಸರು ಹೋಗುವುದೇ ? .
ಇದನ್ನೇ "ದುಷ್ಟರನ್ನು ಕಂಡರೆ ದೂರವಿರು" ಎಂಬ ಮಾತಿನಲ್ಲೂ ಹೇಳಲಾಗಿದೆ.

ಆಚಾರ್ಯ ಶಂಕರರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯ ಅಷ್ಟೂ ಸೂಕ್ತಿಗಳನ್ನೂ ಇದೇ ಬ್ಲಾಗಿನಲ್ಲಿ ಕನ್ನಡ ಭಾವಾರ್ಥದೊಂದಿಗೆ ಬರೆಯಬೇಕೆಂಬ ಅಭಿಲಾಷೆಯಿಂದ ಇಷ್ಟೆಲ್ಲಾ ಪೀಠಿಕೆ ಹಾಕಿದ್ದೇನೆ.  ನಾನು ಹುಡುಕಿದಂತೆ ಅಂತರಜಾಲದಲ್ಲಿ ವಿವೇಕ ಚೂಡಾಮಣಿಯ ಸಂಪೂರ್ಣ ಭಾವಾರ್ಥವು ಲಭ್ಯವಿದ್ದಂತೆ ಕಂಡುಬರಲಿಲ್ಲ. ಲಭ್ಯವಿದ್ದರೂ ಸಹ ನನಗೆ ಅರಿವಿದ್ದಷ್ಟನ್ನೂ ಇಲ್ಲಿ ಬರೆಯಬೇಕೆಂದುಕೊಂಡಿದ್ದೇನೆ. ಓದಲು ಹೇಗೂ ನೀವೆಲ್ಲಾ ಇದ್ದೇ ಇದ್ದೀರಲ್ಲಾ :-).
ಮುಂದಿನ ಪೋಸ್ಟುಗಳಲ್ಲಿ ಒಂದು ಅಥವಾ ಎರಡು ಸೂಕ್ತಿಗಳನ್ನು ತೆಗೆದುಕೊಂಡು ಅರ್ಥದೊಂದಿಗೆ ಬರೆಯಲಿದ್ದೇನೆ.  ಈಗಿನ ಕಾಲಮಾನಕ್ಕೆ ಇದು ಎಷ್ಟು ಪ್ರಸ್ತುತ-ಅಪ್ರಸ್ತುತ ಎಂಬ ವಿಚಾರಕ್ಕಿಂತಲೂ ಯವಾಗ ನಮ್ಮ ತತ್ತ್ವಶಾಸ್ತ್ರದ ಅಗತ್ಯ  ಯಾರಿಗೆ ಬೇಕಾಗುತ್ತದೋ ಆಗ ಅಂತರಜಾಲದಲ್ಲಿ ಈ ವಿವೇಕ ಚೂಡಾಮಣಿಯ ಅರ್ಥವು ಸಿಕ್ಕುವಂತಾದರೆ ನನ್ನ ಪ್ರಯತ್ನ ಸಾರ್ಥಕ.

ಕನ್ನಡದಲ್ಲಿ ಭಾವಾರ್ಥವನ್ನು ಬರೆಯುವೆನೆಂದು ಹೇಳಿ ಬರವಣಿಗೆಯಲ್ಲಿ ಇಷ್ಟೊಂದು ಸಂಸ್ಕೃತವನ್ನು ಬಳಸುವುದು ತರವೇ ? ಎಂದು ಇಲ್ಲಿ ಯಾರಾದರೂ ದೊಡ್ಡೋರಿಗೆ ಅನಿಸಿದರೆ , ಅನಿಸಿದ್ದನ್ನು ಹೊಟ್ಟಗೆ ಹಾಕ್ಕೊಂಡು ಮುಂದಕ್ಕೆ ಓದಿ.
ಅರಿವಿಗೆ ನೂರೆಂಟು ದಾರಿಯಿದೆ , ನೂರಾರು ಕವಲುಗಳಿವೆ ಗುರಿ ಮಾತ್ರ ಒಂದೇ !.


ಆತ್ಮಾನಂ ರಥಿನಂ ವಿದ್ದಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿಧ್ಧಿ ಮನಃ ಪ್ರಗ್ರಹಮೇವ ಚ ||
(ಕಠೋಪನಿಷತ್ತು)

ಆತ್ಮನೇ ಬಿಲ್ಲಾಳು,
ದೇಹವೇ ತೇರು,
ಬುದ್ಧಿಯೇ ತೇರಾಳು,
ಮನಸೇ ಲಗಾಮು !
****************************************************************

ವಂದನೆಗಳೊಂದಿಗೆ,

25 comments:

hamsanandi said...

ಮುಂದುವರೆಸಿ. ಓದಲು ಕಾದಿದ್ದೇನೆ!

ಚುಕ್ಕಿಚಿತ್ತಾರ said...

ಉತ್ತಮ ಪ್ರಯತ್ನ..
ಸ೦ಪೂರ್ಣ ಕನ್ನಡದಲ್ಲೇ ಬರೆದರೆ ಅರ್ಥವಾಗುವುದು ಬಹುಷ: ಕನ್ನಡ ಪ೦ಡಿತರಿಗೆ ಮಾತ್ರ ಇರಬಹುದು! ಸ೦ಸ್ಕ್ರುತಮಿಶ್ರಿತ ಆಡು ಕನ್ನಡದಲ್ಲೇ ಬರೆದರೆ ಓದಿ ಏನೊ ಒ೦ದಷ್ಟು ನಾವೂ ಅರ್ಥ ಮಾಡಿಕೊಳ್ಳಬಹುದು..!..:))
ವ೦ದನೆಗಳು.

Manjunatha Kollegala said...

ನಿಮ್ಮ ಪ್ರಯತ್ನದ ಬಗ್ಗೆ ಓದಿಯೇ ಬಹಳ ಖುಶಿಯಾಯಿತು. ಮುಂದುವರೆಸಿ, ಉತ್ತಮ ಪ್ರಯತ್ನ.

ಸವಿಗನಸು said...

ಪ್ರಯತ್ನ ಚೆನ್ನಾಗಿದೆ...ಮುಂದುವರಿಸಿ ಗುರುಗಳೆ....

PARAANJAPE K.N. said...

ತು೦ಬಾ ಚೆನ್ನಾಗಿದೆ. ವಿವೇಕ ಚೂಡಾಮಣಿಯ ಸೂಕ್ತಿಗಳ ಕನ್ನಡ ಭಾವಾರ್ಥ ನಿಮ್ಮಿ೦ದ ಬರಲಿ, ಮು೦ದುವರಿಸಿ, ಓದಿಗೆ ಕಾದಿದ್ದೇನೆ.

ಶಿವಪ್ರಕಾಶ್ said...

ಸಾರ್,
ದಯವಿಟ್ಟು ಬರೆಯಿರಿ. ನನಗೆ ಈ ವಿಷಯಗಳಲ್ಲಿ ತುಂಬ ಆಸಕ್ತಿ.
ನಿಮ್ಮ ಬರಹಗಳಿಗಾಗಿ ಕಾಯ್ತುತ್ತಿರುತ್ತೇನೆ..
ಧನ್ಯವಾದಗಳು.

Unknown said...

ಚೆನ್ನಾಗಿದೆ..

ಮನಸ್ಸು = ಬಗೆ
ಲಗಾಮು = ಕಡಿವಾಣ

ಇವುಗಳನ್ನು ಕೂಡ ಬಳಸಬಹುದು

V.R.BHAT said...

ನಮ್ಮೂರಲ್ಲಿ ಗಣಪತಿ ಎಂಬವರೊಬ್ಬರಿದ್ದರು. ಬಡತನ. ಅಪರೂಪಕ್ಕೆ ವರ್ಷಕ್ಕೊಮ್ಮೆಯೋ ಹೀಗೆ ಅನ್ನದ ಕೇಸರೀಬಾತು ಮಾಡಿಸುತ್ತಿದ್ದರು. ಮಾಡಿದ ಕೇಸರೀಬಾತನ್ನು ಒಂದು ಚಮಚೆಯಷ್ಟಾದರೂ ಆಗಲಿ ಹಲವರಿಗೆ ಹಂಚಿತಿನ್ನುವ ಮನೋಭಾವ ಅವರದ್ದು! ಅವರೀಗ ದಿವಂಗತರು-ಸ್ಮರಣೀಯರು. ಸಂಸಾರದಲ್ಲಿದ್ದೂ ಕೇವಲ ಸ್ವಾರ್ಥಿಗಳಾಗದ ಜನರಿದ್ದಾರೆಂದಮೇಲೆ ಆಚಾರ್ಯರು ಇನ್ನು ಹೇಗಿರಬೇಡ, ಅಲ್ಲವೇ? ಭಗವತ್ಪಾದರ ಕೃತಿಗಳಿಗೆ ಸಮಾನ ತೂಕದ ಕೃತಿಗಳು ಯಾವುದೂ ಇಲ್ಲ. ಅವರ ಸ್ಪಟಿಕ ಸದೃಶ ನಿಶ್ಕಲ್ಮಶ ನಿರಾಡಂಬರ ಪದಪುಂಜಗಳು ನಮ್ಮ ಮನಸೂರೈಗೈಯ್ಯುತ್ತವೆ. ನೀವು ’ವಿವೇಕ ಚೂಡಾಮಣಿ’ಯನ್ನು ವ್ಯಾಖ್ಯಾನಿಸ ಹೊರಟಿದ್ದು ಉತ್ತಮ ಕೆಲಸ, ಸರಾಗ ಸಾಗಲಿ ಎಂದು ಶುಭಕೋರುತ್ತಾ ಅಭಿನಂದನೆಗಳನ್ನೂ ಸಲ್ಲಿಸುತ್ತಿದ್ದೇನೆ.

sunaath said...

ತುಂಬ ಸ್ತುತ್ಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ. ನಿಮಗೆ ಸಂಪೂರ್ಣ ಯಶಸ್ಸು ಸಿದ್ಧಿಸಲಿ!

Anonymous said...

ಉತ್ತಮ ಆಶಯ.
ನನಗೆ ಅನಿಸಿದಂತೆ ಇದು ಕೇವಲ ಯಾವುದೇ ದರ್ಮ, ಪಂಥ ಗಳನ್ನು ಗಮನದಲಿ ಇಟ್ಟುಕೊಂಡು ಬರೆದಿದ್ದಲ್ಲ. ಜೀವನಕ್ಕೆ ಬೇಕಾದ ವಿವೇಕಗಳ ಸಂಪತ್ತು ಇದಾಗಿದೆ.
ಅಂತರ್ಜಾಲದಲ್ಲಿ ಅರ ಗಣೇಶ್ ಅವರ ಸಂಪೂರ್ಣ ದ್ವನಿ ಸುರಳಿ ಲಬ್ಯ ವಿದೆ. ನಿಮ್ಮ ಅದ್ಯಯನಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಪ್ರಯತ್ನ ಕೇವಲ ೫೮೦ ಶ್ಲೋಕಗಳ ಕನ್ನಡ/ಇಂಗ್ಲಿಷ್ ಅರ್ಥವಾಗದೆ .. ಇನ್ನೊಬ್ಬರಿಗೆ ಉಪಯೋಗವಾಗುವಂತೆ ಮೂಡಿಬರುತ್ತದೆ ಎಂದು ಭಾವಿಸುತ್ತೇನೆ. (ಹೊಗಳು ಭಟ್ಟರಿಂದ !! ದೂರವಿರಿ , ನಮ್ಮಲ್ಲಿ ಇನ್ನು ಗಾಯತ್ರಿ ಅಂದರೆ ನಾಲ್ಕು ಕೈ , ಮೂರು ತಲೆ ಎಂದು ಕಲ್ಪನಾ ಲೋಕಕ್ಕೆ ಇಳಿದು ಬಣ್ಣಿಸುವರು ಇದ್ದಾರೆ.. ಅವರಿಗೆಲ್ಲ ನಿಮ್ಮಿಂದ ವಿವೇಕ ದೊರೆತೀತು.. :))
Regards,
Pradeep

ಹರಿಕಥಾಮೃತಸಾರ said...

thumbaa olleya kelasa maadutthiddiri. All the best.

vedasudhe said...

ನಿಮ್ಮ ಆರಂಭದ ಮಾತುಗಳೇ ನಮಗೆ ಭರವಸೆಯನ್ನು ನೀಡುತ್ತಿವೆ. ಮುಂದಿನ ಬರಹಕ್ಕಾಗಿ ಕಾಯುತ್ತಿರುವೆ.

ಮನಮುಕ್ತಾ said...

ಅತ್ಯುತ್ತಮ ಕೆಲಸ...ಮು೦ದುವರೆಯಲಿ..

ಮನಸು said...

ವಾಹ್ ... ಸೂಪರ್ ಲೇಖನ ನಾನು ಇಂತಹವನ್ನೇ ಬಹಳಷ್ಟು ದಿನಗಳಿಂದ ಹುಡುಕುತ್ತಲಿದ್ದೆ..... ತುಂಬಾ ತುಂಬಾ......... ಧನ್ಯವಾದಗಳು. ಮತ್ತಷ್ಟು ಬರಲಿ.... ನಮಗೆ ಇಂತಹವುಗಳನ್ನು ತಿಳಿಸಲು ಗುರುಬೇಕಿದೆ.... ನೀವೆ ನಮಗೆ ಗುರು..

ಗಿರೀಶ್.ಎಸ್ said...

ಸರ್ ತುಂಬ ಒಳ್ಳೆಯ ಕೆಲಸ..ಓದಲು ನಾವಂತೂ ಇದ್ದೇವೆ...ಮುಂದುವರೆಸಿ!!!

Subrahmanya said...

ಹಂಸಾನಂದಿಗಳೇ,

ನಿಮ್ಮ ಮೊದಲ ಪ್ರತಿಕ್ರಿಯೆಯಿಂದ ಉತ್ಸಾಹ ಇಮ್ಮಡಿಯಾಗಿದೆ.

Subrahmanya said...

ಚಿತ್ತಾರದವರೇ,

:) ಹಹ, ನಿಜ. ನಿಮ್ಮ ಜೊತೆ ನಾನೂ ಕೊಂಚ ತಿಳ್ಕೋತಿನಿ.

Subrahmanya said...

ಕೊಳ್ಳೇಗಾಲದವರೇ,

ಧನ್ಯವಾದಗಲು ನಿಮಗೆ.

Subrahmanya said...

@ ಸವಿಗನಸು
ಪರಾಂಜಪೆಯವರೇ,
ಶಿವಪ್ರಕಾಶ,
ಭರತರೇ,
ವ್ವಿಽಅರ್. ಭಟ್ಟರೆ,
ನಿಮ್ಮೆಲ್ಲರಿಗೂ ಧನ್ಯವಾದಗಳು.

Subrahmanya said...

@ ಸುನಾಥ ಕಾಕಾ,
ಪ್ರದೀಪ ಅವರೇ,
ಸತ್ಯವತಿಯವರೇ,

ನಿಮಗೂ ಧನ್ಯವಾದಗಳು.

Subrahmanya said...

ಹರಿಹರಪುರದ ಶ್ರೀಧರರೇ,
ಮನಮುಕ್ತಾ,
ಮನಸು,
ಗಿರೀಶ

ನಿಮ್ಮ ಒಳ್ಳೆಯ ಮಾತುಗಳಿಗೆ ನನ್ನಿ.

ಸೀತಾರಾಮ. ಕೆ. / SITARAM.K said...

ಒಳ್ಳೆಯ ಕಾರ್ಯ. ಸಾಗಲಿ. ಎದುರು ನೋಡುತ್ತಿರುವೆ...

makara said...

ಸ್ವಾಮಿ ಶಂಭುಲಿಂಗರವರೇ!
ಇಂಥಹ ಆಧುನಿಕ ಯುಗದಲ್ಲೂ ಈ ರೀತಿ ಅರ್ಥಗರ್ಬಿತವಾಗಿ ಬರೆಯಬಲ್ಲವರಿದ್ದಾರೆಂದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಅದರೊಟ್ಟಿಗೆ ಸಂತೋಷವೂ ಆಗುತ್ತದೆ, ಅದಕ್ಕಾಗಿ ನಿಮಗೆ ನನ್ನ ನಮನಗಳು. ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತವನ್ನು ಬಳಸಿದ್ದೇನೆ ಎನ್ನುತ್ತೀರಿ ಹಾಗೆ ಬಳಸದಿದ್ದರೆ ಖಂಡಿತಾ ಆಧ್ಯಾತ್ಮಿಕ ವಿಷಯಗಳನ್ನು ತಿಳಿಯಲಾಗುವುದಿಲ್ಲ. ಇಂಗಿನೀರಿಂಗ್/ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬೇಕೆಂದರೆ ಗ್ರೀಕ್ ಮತ್ತು ಲ್ಯಾಟಿನ್ ಮೂಲದ ಪದಗಳನ್ನು ಬಿಟ್ಟು ಕೇವಲ ಇಂಗ್ಲೀಷಿನ ಮೂಲಕವೇ ಎಲ್ಲಾ ತಿಳಿಯಲಾದೀತೇ? ಕಡೆಯಲ್ಲಿ ಒಂದು ಸಣ್ಣ ಮಾರ್ಪಾಟನ್ನು ನಿಮ್ಮ ಕಡೆಯ ಶ್ಲೋಕದ ಅರ್ಥದಲ್ಲಿ ಸೂಚಿಸ ಬಯಸುತ್ತೇನೆ.ರಥಿನಂ ಎನ್ನುವುದಕ್ಕೆ ಬಿಲ್ಲಾಳು ಎಂಬ ಅರ್ಥವಿದ್ದರೂ ಕೂಡ ಈ ಸಂದರ್ಭದಲ್ಲಿ ಸಾರಥಿ ಎಂಬ ಅರ್ಥ ಹೆಚ್ಚು ಸೂಕ್ತವೆನಿಸುತ್ತದೆ ಎಂದು ನನ್ನ ಅಲ್ಪ ಮತಿಗೆ ಹೊಳೆದದ್ದನ್ನು ತಿಳಿಸ ಬಯಸುತ್ತೇನೆ. ಸಮಾಜಕ್ಕೆ ಒಳಿತಾಗಲೆಂದು ಸದುದ್ದೇಶದಿಂದ ಬರೆಯುತ್ತಿರುವ ಈ ಲೇಖನ ಮಾಲೆಗೆ ನನ್ನ ಹಾರೈಕೆಗಳು.

Subrahmanya said...

ಮಕರ ಅವರೇ,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಸೂಚಿಸಿದ ಬದಲಾವಣೆ ರಥಿನಮ್ ಎನ್ನುವುದಕ್ಕೆ ಸಾರಥಿ ಎನ್ನುವುದಾದರೇ ಅಲ್ಲಿ ಸಾರಥಿಮ್ ಎನ್ನುವುದಕ್ಕೆ ಏನು ಬಳಸುವುದು ?. ರಥಿನಂ ಎಂದರೆ ರಥಾರೂಢಾನಾಗಿರುವವನು ( ಸಾಮನ್ಯವಾಗಿ ಬಿಲ್ಲನ್ನು ಹಿಡೀದಿರುತ್ತಾರೆ ) ಎಂದಾಗುವುದರಿಂದ ಹಾಗೆ ಬರೆದೆ. ನಿಮ್ಮ ಯಥೋಚಿತ ಸಲಹೆಗೆ ಧನ್ಯವಾದಗಳು.

makara said...

ಸುಬ್ರಹ್ಮಣ್ಯ ನಿಮ್ಮ ವಿವರಣೆ ಸರಿಯಾಗಿದೆ; ಅನುಮಾನವನ್ನು ಪರಿಹರಿಸಿದ್ದಕ್ಕೆ ಧನ್ಯವಾದಗಳು. ಈ ಬ್ಲಾಗಿನ ಲಿಂಕ್ ತಪ್ಪಿ ಹೋಗಿದ್ದರಿಂದ ನಿಮ್ಮ ಪ್ರತಿಕ್ರಿಯೆಯನ್ನು ಓದಲಾಗಿರಲಿಲ್ಲ. ಈಗ ಈ ಬ್ಲಾಗನ್ನು ಬುಕ್-ಮಾರ್ಕ್ ಮಾಡಿಕೊಂಡು ನಿಮ್ಮ ಮುಂದಿನ ಸರಣಿಯನ್ನು ತಪ್ಪದೇ ಓದುತ್ತೇನೆ; ಗುರು ಶಂಕರರು ನಿಮಗೆ ಒಳಿತುಂಟು ಮಾಡಲಿ.