May 27, 2010

ಚಿ.ಮೂ. ಅವರ ಮನವಿ



ಈಗ ಮನವಿ ಮಾಡಿಕೊಂಡಿರುವವರು ಹಿರಿಯ ಸಾಹಿತಿ-ಚಿಂತಕ ಶ್ರೀಯುತ ಡಾ. ಎಂ. ಚಿದಾನಂದಮೂರ್ತಿಯವರು. ಶ್ರೀಯುತರು ಪುಸ್ತಕವೊಂದನ್ನು ಬರೆಯುವ ಉದ್ದೇಶದಿಂದ ಪತ್ರಿಕಾ ಮಾಧ್ಯಮಗಳಲ್ಲಿ ಪತ್ರಮುಖೇನ ಸಮಸ್ತ ಕನ್ನಡಿಗರೆಲ್ಲರಲ್ಲಿ ಸಂಬಂಧಪಟ್ಟ ವಿಚಾರದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಶ್ರೀ. ಚಿ.ಮೂ. ಅವರು ಬರೆಯುತ್ತಿರುವ ಪುಸ್ತಕ "ಗೋವು-ಗೋಮಾತೆ-ಗೋಹತ್ಯೆ ನಿಷೇಧ" ಬಗೆಗೆ. ಪುಸ್ತಕದ ವಿಚಾರವರ್ಧನೆಗಾಗಿ ಸಮಸ್ತರಿಂದಲೂ ಅವರು ಮಾಹಿತಿಯನ್ನು ಬಯಸಿದ್ದಾರೆ. ಅವರ ಕೋರಿಕೆಗೆ ಸ್ಪಂದಿಸುವ ಹೊಣೆ ನಮ್ಮೆಲರದು ಎಂಬುದು ನನ್ನ ಅಭಿಪ್ರಾಯ. ಆ ಮನವಿ ಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ.




                           
ಗೋವಿನಿಂದ ದೊರೆಯುವ "ಪಂಚಗವ್ಯ"ದ ವಿಚಾರವಾಗಿ ಇಲ್ಲಿ ಸ್ವಲ್ಪ ಹೇಳಬಯಸುತ್ತೇನೆ.
ಪಂಚಗವ್ಯವೆಂದರೆ ಗೋವಿನಿಂದ ದೊರೆಯುವ ಐದು ಪ್ರಮುಖ ಮೂಲಾಂಶಗಳು. ಅವು ಹೀಗಿವೆ.
೧) ಗೋಮೂತ್ರ (ಗಂಜಲ)
೨) ಸೆಗಣಿ  (ಗೋಮಯ)
೩) ಹಾಲು (ಕ್ಷೀರ)
೪) ಮೊಸರು (ದಧಿ)
೫) ಸರ್ಪಿ (ತುಪ್ಪ)


ವೇದಗಳಲ್ಲಿ ( ಪರಾಶರೋಕ್ತಾಗಮ ಸೂತ್ರ, ಆಶ್ವಲಾಯನ ಸೂತ್ರ, ಶೌನಕಾದ್ಯಾಚಾರ್ಯ ಗ್ರಂಥ ಪ್ರಕಾರೇಣ) ಗೋವಿನಿಂದ ದೊರೆಯುವ ಪಂಚಗವ್ಯಕ್ಕೆ ಪವಿತ್ರಸ್ಥಾನವನ್ನು ನೀಡಲಾಗಿದೆ. ಗರ್ಭಗೃಹದಲ್ಲಿ ಸ್ಥಾಪಿತವಾಗುವ ಶಿಲಾಮೂರ್ತಿಗೆ (ಲಿಂಗಕ್ಕೆ) ಪಂಚಗವ್ಯ ಸ್ನಪನ (ಸ್ನಾನ) ಅತ್ಯಂತ ಮುಖ್ಯವಾದುದು. ಪ್ರತ್ಯೇಕವಾಗಿ ಸಂಗ್ರಹಿಸಿದ ಪಂಚಗವ್ಯವನ್ನು ಮೇಳೈಸುವ( ಬೆರೆಸುವ, ಸೇರಿಸುವ) ಮೊದಲು ಮಂತ್ರೋಕ್ತವಾಗಿ ದೇವತೆಗಳನ್ನು ಆವಾಹನೆ ಮಾಡಲಾಗುತ್ತದೆ. ಮೊದಲಿಗೆ ಚತುರಶ್ರ ಮಂಡಲವನ್ನು ರಚಿಸಿ (ಚೌಕಾಕಾರ) ಅದರ ಮೇಲೆ ಧಾನ್ಯವನ್ನು ಹರಡಿ ಪಂಚಗವ್ಯ ತುಂಬಿದ ಪಾತ್ರೆಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ.
ಪೂರ್ವಕ್ಕೆ ಗೋಮೂತ್ರವನ್ನು (ಗಂಜಲ)
ದಕ್ಷಿಣಕ್ಕೆ ಗೋಮಯವನ್ನು (ಸೆಗಣಿ)
ಪಶ್ಚಿಮಕ್ಕೆ ಕ್ಷೀರವನ್ನು (ಹಾಲು)
ಉತ್ರರಕ್ಕೆ ದಧಿಯನ್ನು (ಮೊಸರು)
ಮಧ್ಯದಲ್ಲಿ ಸರ್ಪಿಯನ್ನು (ತುಪ್ಪ)  ಕ್ರಮವಾಗಿ ಇರಿಸಿ, ಈಶಾನ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು (ದರ್ಭೆ+ನೀರು) ಇರಿಸಿ ಮಂತ್ರೋಕ್ತವಾಗಿ ದೇವತೆಗಳನ್ನು ಅವಾಹಿಸಲಾಗುತ್ತದೆ.


ಗೋಮೂತ್ರಕ್ಕೆ --ಸವಿತೃವನ್ನು ( ಸೂರ್ಯ , ತತ್ಸವಿತುಃ ,ಇತಿ ಮಂತ್ರೇಣ)
ಗೋಮಯಕ್ಕೆ -- ಶ್ರಿಯಂ ( "ಶ್ರೀ"=ಸಿರಿ=ಲಕ್ಷ್ಮಿ, ಪಾರ್ವತಿ ಇತ್ಯಾದಿ.  ಗಂಧದ್ವಾರಾ, .........)
ಕ್ಷೀರಕ್ಕೆ -- ಸೋಮನನ್ನು ( ಆಪ್ವಾಯಸ್ವ...)
ದಧಿಗೆ  --ಇಂದ್ರನನ್ನು (ದಧಿಕ್ರಾವ್ಣ...)
ಸರ್ಪಿಗೆ -- ಪರಮೇಷ್ಥಿಯನ್ನು ( ಶುಕ್ರಮಸಿ...)
ಮಂತ್ರೋಕ್ತವಾಗಿ  ಆವಾಹಿಸಿ ಅಂತ್ಯದಲ್ಲಿ ಕುಶೋದಕಕ್ಕೆ "ಬ್ರಹ್ಮ"ನನ್ನು ಆವಾಹಿಸಲಾಗುತ್ತದೆ. ಮುಂದಿನದು ಶಾಸ್ತ್ರೋಕ್ತ ರೀತಿಯ ಪೂಜಾದಿಗಳು. ನಂತರ ಪ್ರತ್ಯೇಕವಾಗಿಟ್ಟಿರುವ ಪಂಚಗವ್ಯವನ್ನು ಒಂದೇ ಪಾತ್ರೆಯಲ್ಲಿ ಸೇರಿಸುವ ಕ್ರಮ. ಮೇಳನದ ನಿಯಮ ಮತ್ತು ಕ್ರಮ ಹೀಗಿದೆ.


|| ಪಲಮೇಕಂತು ಗೋಮೂತ್ರಂ ಅಂಗುಷ್ಠಾರ್ಧಂತು ಗೋಮಯಂ |
ಕ್ಷೀರಂ ಸಪ್ತಪಲಂ ಪ್ರೋಕ್ತಂ ದಧಿತ್ರಿಪಲ ಮೇವಚ |
ಸರ್ಪಿರೇಕಪಲಂ ಪ್ರೋಕ್ತಂ ತ್ರಿಪಲಂತು ಕುಶೋದಕಂ|


"ಒಂದು ಬಾರಿ ಹೆಚ್ಚೇ ಎನ್ನುವಂತೆ ಗೋಮೂತ್ರವನ್ನೂ, ಅಂಗುಷ್ಠ (ಹೆಬ್ಬೆರಳು)ದ ಅರ್ಧದಷ್ಟು ಸೆಗಣಿಯನ್ನೂ, ಏಳು ಬಾರಿ ಹಾಲನ್ನೂ, ಮೂರು ಬಾರಿ ಮೊಸರನ್ನೂ , ಒಂದು ಬಾರಿ ತುಪ್ಪವನ್ನೂ ಬೇರೊಂದು ಪಾತ್ರೆಯಲ್ಲಿ ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು ಸೇರಿಸುವುದು. ವೇದಾಗಮಶಾಸ್ತ್ರಗಳಲ್ಲಿ "ಗೋವಿನ" ಉತ್ಪನ್ನಗಳಿಗೆ ಅತ್ಯುಚ್ಚ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಇಂತಹ ಪಂಚಗವ್ಯ ಸ್ನಾನ ಮತ್ತು ಪಾನದಿಂದ ಆರೋಗ್ಯವೃಧ್ದಿಸುವುದು ಅತ್ಯಂತ ಖಚಿತ. 
ಶ್ರೀ ಚಿ.ಮೂ. ಅವರ ಮನವಿಗೆ ನಾನೂ ಕೂಡ ಸ್ಪಂದಿಸಲಿದ್ದೇನೆ. ನಿಮ್ಮ ಸಹಕಾರವೂ ಇರಲೆಂದು ಪ್ರಾರ್ಥಿಸುತ್ತೇನೆ.


ಚಿ.ಮೂ. ಅವರ ವಿಳಾಸ.


ಡಾ. ಎಂ . ಚಿದಾನಂದಮೂರ್ತಿ
1013B, 4ನೆಯ ಅಡ್ಡರಸ್ತೆ, 11ನೆಯ ಮುಖ್ಯರಸ್ತೆ, ಹಂಪಿನಗರ,
ಬೆಂಗಳೂರು- 560104.    


.................................................................................................


  
ಖೊನೆಖಿಡಿ :


ಕೈಲಾಸಂ ಹೇಳಿದ್ದು. ನಾನು ಕದ್ದಿದ್ದು !.

" ಸೆರ‍್ಮನೆಗೋದ್ರೂ ಸೆರ‍್ಮನೀಸ್ನ ಬಿಡ್ಬಾರ‍್ದೂ ನನ್ರಾಜಾ "


  




ವಂದನೆಗಳೊಂದಿಗೆ.... 

May 12, 2010

ಶಾಪ..೪ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
-----------------------------------------------------------------------------

...ಹರಿಯಾಳ ರಾಣಿಯ ಮನಸು ದ್ವಾರಾವತಿಯೆಡೆಗೆ ಸೆಳೆಯುತ್ತಿತ್ತು. ಮಕ್ಕಳೇನಾದರೂ ನನ್ನಾಜ್ಞೆಯನ್ನು ಮೀರಿ ದ್ವಾರಾವತಿಗೆ ಹೋಗಿಬಿಟ್ಟರೆ ? ಅಲ್ಲೇನಾದರೂ ಅವಘಡಗಳು ಸಂಭವಿಸಿರಬಹುದೆ ? ರಾಣಿಗೆ ಅಪಶಕುನಗಳೇ ಹೆಚ್ಚಾಯಿತು. ಮನದಲ್ಲಿ ಎನೋ ಕಸಿವಿಸಿ, ಆತಂಕ. ರಾಣಿಯ ಮನಸ್ಸು ತಡೆಯಲಿಲ್ಲ . ದ್ವಾರವತಿಗೊಮ್ಮೆ ಹೋಗಿ ಬರುವ ತವಕ ಹೆಚ್ಚಾಗತೊಡಗಿತು. ಮಕ್ಕಳೇನಾದರು ದ್ವಾರಾವತಿಗೆ ಹೋಗಿರಬಹುದಾದರೆ, ಅರಮನೆಯ ಕಾವಲುಗಾರರ ಸಹಾಯವಿರಲೇಬೇಕೆಂಬ ಯೋಚನೆ ರಾಣಿಯ ಸ್ಮೃತಿಪಟಲದಲ್ಲೊಮ್ಮೆ ಹಾದುಹೋಯಿತು. ಗುಪ್ತ ಸುರಂಗಮಾರ್ಗದ ಮೇಲ್ವಿಚಾರಕನನ್ನು ರಾಣಿಯು ಬರಹೇಳಿದಳು. ರಾಣಿಯ ಅಬ್ಬರಿಕೆಯ ಮುಂದೆ ಕಾವಲುಗಾರ ಕಂಪಿಸಿಹೋದ !. ಮಕ್ಕಳಿಬ್ಬರಿಗೂ ದ್ವಾರಾವತಿಯನ್ನು ದರ್ಶಿಸಲು ಕುದುರೆಗಳ ವ್ಯವಸ್ಥೆಯನ್ನು ಮಾಡಿಕೊಟ್ಟುದನ್ನು ಅನಿವಾರ್ಯವಾಗಿ ರಾಣಿಯ ಮುಂದೆ ಹೇಳಿದ. ರಾಣಿಯ ಆತಂಕ ಮತ್ತಷ್ಟು ಹೆಚ್ಚಾಯಿತು. ನನ್ನ ಮಾತು ಕೇಳದೆ ದ್ವಾರಾವತಿಗೆ ಹೋದ ಮಕ್ಕಳಿಗೆ ಅಲ್ಲಿ ಎಂತಹ ಪರಿಸ್ಥಿತಿ ಉಂಟಾಗಿದೆಯೋ ಎಂದು ಹಲುಬಿದಳು. ಇನ್ನು ತಡಮಾಡುವುದು ತರವಲ್ಲವೆಂದು ಹರಿಯಾಳ ದೇವಿಯು ಕುದುರೆಯೇರಿ ದ್ವಾರಾವತಿಯೆಡೆಗೆ ಹೊರಟೇಬಿಟ್ಟಳು. ಮನಸಿನ ವೇಗದಂತೆ ಕುದುರೆಯನ್ನೂ ರಭಸದಿಂದ ಮುನ್ನೆಡೆಸಿದಳು. ಯಾವಾಗ ತನ್ನ ಮಕ್ಕಳನ್ನು ನೋಡುತ್ಟೇನೋ, ದ್ವಾರಾವತಿಯಲ್ಲಿ ತನ್ನ ಮಕ್ಕಳಿಗೆ ಎಂತಹ ಪರಿಸ್ಥಿತಿಯುಂಟಾಗಿದೆಯೋ ಎಂಬ ದುಗುಡವೊಂದೆ ಅವಳ ಮನದಲ್ಲಿ ತುಂಬಿಕೊಂಡಿತ್ತು. ಹಲವು ತಾಸುಗಳ ಪ್ರಯಾಣದ ನಂತರ ರಾಣಿಯು ದ್ವಾರಾವತಿಯನ್ನು ಸಮೀಪಿಸಿದಳು. ನೇರವಾಗಿ ತನ್ನ ಅಣ್ಣ ಬಲ್ಲಾಳರಾಜನಲ್ಲೇ ತನ್ನ ಮಕ್ಕಳ ವಿಚಾರವನ್ನು ಕೇಳುವುದು ಸೂಕ್ತವೆಂದೆಣಿಸಿ ಅರಮನೆಯನ್ನು ತಲುಪಿದಳು. ರಾಣಿ ಹರಿಯಾಳ ದೇವಿಗೆ ಅರಮನೆಯ ಪ್ರವೇಶವು ಸುಲಭಸಾಧ್ಯವಾಗಲಿಲ್ಲ. ಅದಾಗಲೆ ಬಲಾಳರಾಯನು, ಹರಿಯಾಳ ದೇವಿಗೆ ದ್ವಾರಾವತಿಯಲ್ಲಿ ಹನಿ ನೀರನ್ನೂ ಸಹ ಕೊಡಬಾರದೆಂದು ಆಜ್ಞಾಪಿಸಿದ್ದನು. ತನ್ನ ಮಾತಿಗೆ ಎದುರಾಡಿ ಚಂದ್ರಗಿರಿಗೆ ಹೋದ ಹರಿಯಾಳ ರಾಣಿಗೆ ದ್ವಾರಾವತಿಯಲ್ಲಿ ಅನ್ನಾಹಾರಗಳನ್ನು ನಿಡಬಾರದೆಂಬ ಕಟ್ಟಾಜ್ಞೆಯನ್ನು ಬಲ್ಲಾಳರಾಜ ಜಾರಿಯಲ್ಲಿಟ್ಟಿದ್ದ.    ರಾಣಿಗೆ ಅರಮನೆಯ ಪ್ರವೇಶವು ದೊರೆಯಲಿಲ್ಲ. ದ್ವಾರಾವತಿಯ ಮಗಳೆಂಬ ಕಿಂಚಿತ್ತು ಗೌರವವೂ ಸಿಗಲಿಲ್ಲ. ಕಾವಲುಗಾರರು ರಾಣಿಯನ್ನು ದ್ವಾರದಲ್ಲಿಯೇ ತಡೆದರು.

" ತಾವು ಅರಮನೆಗೆ ಪ್ರವೆಶಿಸುವಂತಿಲ್ಲ, ಇದು ರಾಜಾಜ್ಞೆ !". 

 ಭಟರ ಮಾತಿಗೆ ಅಳುಕದ ರಾಣಿ ತಾನು ಬಂದಿರುವ ವಿಚಾರವನ್ನು ತಿಳಿಸಿದಳು.

" ನಾನಿಲ್ಲಿ ನಿಮ್ಮ ರಾಜನನ್ನಾಗಲಿ, ಈ ವೈಭೋಗಗಳನ್ನಾಗಲಿ ಸವಿಯಲು ಬಂದಿಲ್ಲ, ನನ್ನಿಬ್ಬರು ಮಕ್ಕಳು ನನ್ನಪ್ಪಣೆಯನ್ನು ಮೀರಿ ಇಲ್ಲಿಗೆ ಬಂದಿದ್ದಾರೆ. ಅವರೆಲ್ಲಿಹರೆಂದು ತಿಳಿಯಲೋಸುಗ ಇಲ್ಲಿಗೆ ಬಂದಿದ್ದೇನೆಷ್ಟೆ, ನಿಮಗೆ ನನ್ನ ಮಕ್ಕಳೆಲ್ಲಿಹರೆಂದು  ತಿಳಿದಿದ್ದರೆ ಹೇಳಿ, ಈ ಕ್ಷಣವೆ ಅವರೊಡಗೂಡಿ ಇಲ್ಲಿಂದ ಹೊರಟು ಬಿಡುವೆ .."

" ಒಹೋ..! ಅವರುಗಳೆ ? ಆ ಇಬ್ಬರು ಅವಳಿ ಯುವಕರು ನಿಮ್ಮ ಮಕ್ಕಳೊ ? ಎಂತಹ ಮಕ್ಕಳನ್ನು ಹೆತ್ತಿದ್ದೀಯಮ್ಮ ನೀನು..! "

" ಏಕೆ ? ನನ್ನ ಮಕ್ಕಳು ನೀತಿವಂತರಲ್ಲವೆ ? ಅವರು ಸಾತ್ವಿಕರು, ಅನ್ಯರಿಗೆ ಕೇಡು ಬಗೆಯುವ ಸ್ವಭಾವದವರಲ್ಲ, ಬಹಳ ಮುಗ್ಧರು ನನ್ನ ಮಕ್ಕಳು...ದಯವಿಟ್ಟು ಎಲ್ಲಿದ್ದಾರೆಂದು ತಿಳಿಸಿಕೊಡಿ.."

" ಮುಗ್ಧರೇ ನಿನ್ನ ಮಕ್ಕಳು !? ಅಬ್ಬಾ..! ಅವರು ನಡೆಸಿರುವ ಕೃತ್ಯಕ್ಕೆ ಕ್ಷಮಯೇ ಇಲ್ಲವಾಗಿದೆ. ಮಹಾರಾಜರು ಅವರಿಗೆ ಸರಿಯಾದ ಗತಿಯನ್ನೇ ಕಾಣಿಸಿದ್ದಾರೆ. ತಾವು ವಿನಾಕಾರಣ ವ್ಯಥೆಪಡುತ್ತಲಿದ್ದೀರಿ. ನಿಮ್ಮ ಮಕ್ಕಳ ನಿರೀಕ್ಷೆಯನ್ನು ಬಿಟ್ಟು ಸುಖವಾಗಿ ಸ್ವಸ್ಥಾನಕ್ಕೆ ತೆರಳಿರಿ.." 

 ಭಟರು ಅಪಹಾಸ್ಯದಿಂದ ನಕ್ಕರು. ರಾಣಿಗೆ ಮನದೊಳಗೆ ಕಸಿವಿಯಾಯಿತು. ಇದೆಂತಹ ಕೆಟ್ಟಗಳಿಗೆ ಒದಗಿಬಂದಿತೆಂದು ಚಿಂತಿಸಿದಳು. ಪ್ರವೇಶದ್ವಾರದಲ್ಲಿ ರಾಣಿಯ ಆಗಮನದ ವಾರ್ತೆಯನ್ನು ಕೇಳಿದ ಬಲ್ಲಾಳರಾಯ , ತಾನೇ ಅಲ್ಲಿಗೆ ಆಗಮಿಸಿದ. ಕಳೆಗುಮ್ದಿದ ಹರಿಯಾಳ ದೇವಿಯ ಮುಖವನ್ನು ನೋಡಿದ ರಾಯನಿಗೆ ವಿಚಿತ್ರವಾದ ಆನಂದವುಂಟಾಯಿತು. ಅಪಹಾಸ್ಯದಿಂದಲೇ ರಾಣಿಯನ್ನು ಮಾತನಾಡಿಸಿದ..

" ಮಹಾರಾಣಿ ಹರಿಯಾಳ ದೇವಿಯವರು ಇಲ್ಲಿಯವರೆಗೂ ಬಂದ ಮಹತ್ತರ ವಿಚಾರವನ್ನು ಈ ಪಾಮರನು ತಿಳಿದುಕೊಳ್ಳಬಹುದೆ ? " 

" ರಾಜ, ನಿನ್ನ ಹೀಯಾಳಿಕೆಯ ವಾಕ್ಯಗಳು ನನಗರ್ಥವಾಗುತ್ತಿದೆ. ಆದರೆ ನನಗೆ ಅದನ್ನು ಮುಂದುವರಿಸುವಷ್ಟು ಸಹನೆ , ಸಮಯಗಳು ಇಲ್ಲವಾಗಿದೆ. ದಯಮಾಡಿ ನನ್ನ ಮಕ್ಕಳಾದ ಲಕ್ಷ್ಮಣ-ವೀರೇಶರು ಎಲ್ಲಿಹರೆಂದು ತಿಳಿಸಿಕೊಡು, ನಾನೀಗ ಅವರನ್ನು ನೋಡಬೇಕಿದೆ .." 

ಹರಿಯಾಳ ರಾಣಿಯ ಆರ್ತನಾದ , ಬಲ್ಲಾಳರಾಯನಿಗೆ ಮಹದಾನಂದವನ್ನುಂಟುಮಾಡಿತು. ತನ್ನ ಪ್ರತಿಷ್ಠೆಗೆ ಕಳಂಕವಿತ್ತವಳನ್ನು ಇನ್ನಷ್ಟು ಹೀಯಾಳಿಸುವ ಮನಸಾಯಿತು ರಾಯನಿಗೆ..

" ನಿನ್ನ ಮಕ್ಕಳು ಮಹಾನ್ ರಸಿಕರಮ್ಮಾ ! ಅವರಿಗೆ  ಮೃಷ್ಟಾನ್ನ ಭೋಜನವೆ ಬೇಕಂತೆ .  ಆದರೇನು ಮಾಡುವುದು, ನನ್ನ ದ್ವಾರಾವತಿಯಲ್ಲಿ ಕೇವಲ ಹಣ್ಣು-ಗೆಡ್ಡೆಗಳಷ್ಟೆ ಲಭ್ಯವಿದೆ. ! ನಿನ್ನ ಮಕ್ಕಳು ನಿನ್ನಂತಯೇ ಹೀನ  ಕೃತ್ಯವೆಸಗಿದರು.
  ನನ್ನ ರಾಣಿಯ , ಮನದನ್ನೆಯ ಸೌಂದರ್ಯವೇ ಅವರ ಉಪಾಸನೆಗೆ ಅವಶ್ಯವಾಗಿತ್ತು. ದ್ವಾರಾವತಿಯ ಮಹಾರಾಣಿಯನ್ನೇ ಮಾನಭಂಗಗೊಳಿಸಲು ಯತ್ನಿಸಿದ ಧೂರ್ತರವರು. ಶೀಲಾಪಹರಣಕ್ಕೆ ಬಲ್ಲಾಳರಾಜನ ರಾಜ್ಯದಲ್ಲಿ ಯಾವ ಶಿಕ್ಷೆಯಿದೆಯೆಂದು ನಿನಗೆ ತಿಳಿದೇ ಇದೆ. ಅದರಂತೆ , ಕಲ್ಯಾಣಿಯಿರುವ ಉದ್ಯಾನವನದಲ್ಲಿ ನಿನ್ನ ಮಕ್ಕಳೀರ್ವರನ್ನೂ ಶೂಲಕ್ಕೇರಿಸಲಾಗಿದೆ. ನಿನಗೆ ಚೈತನ್ಯವಿದ್ದರೆ ಅಲ್ಲಿಗೆ ಹೋಗಿ ನೊಡು..." 

 ದರ್ಪದಿಂದ ಅಬ್ಬರಿಸಿದ  ಬಲ್ಲಾಳರಾಯ ತಿರುಗಿಯೂ ನೋಡದೆ ಅರಮನೆಯೊಳಗೆ ನಡೆದುಹೋರಟ. ತನ್ನ ಮಕ್ಕಳನ್ನು ಶೂಲಕ್ಕೇರಿಸಲಾಗಿದೆ  ಎಂಬ ಸುದ್ದಿ ಕಿವಿಗೆ ಬಿದ್ದಾಕ್ಷಣವೆ ಹರಿಯಾಳ ರಾಣಿಗೆ ಭೂಮಿ ಬಾಯ್ಬಿಟ್ಟಂತೆ ಭಾಸವವಾಯಿತು. ನಿಂತಿರುವ ನೆಲ ಕುಸಿಯುತ್ತಿರುವಂತೆನಿಸಿತು. ತನ್ನ ಕೇಳಿದ ಸುದ್ದಿಯನ್ನು ನಂಬಲಾಗಲಿಲ್ಲ ರಾಣಿಗೆ. ಕುದುರೆಯನ್ನೇರಿ ಶರವೇಗದಲ್ಲಿ ಉದ್ಯಾನವನ್ನು ತಲುಪಿದಳು. ಶೂಲಕ್ಕೇರಿಸಿ ಹಲವು ದಿನಗಳಾದರೂ ಹಾಗೆಯೇ ಬಿಟ್ಟಿದ್ದ ತನ್ನ ಮಕ್ಕಳ ಹುಳು ಬಿದ್ದ ದೇಹಗಳನ್ನು ಕಂಡು ಕಣ್ಣು ಕಪ್ಪಿಂಟಾಯಿತು. ಆಗಸವೇ ಬಿರಿಯುವಂತೆ ರೋಧಿಸಿದಳು. ಆಕೆಯ ಆಕ್ರಂದನಕ್ಕೆ ದನಿಗೂಡಿಸಲು, ಸಮಾಧಾನಗೊಳಿಸಲು ದ್ವಾರವತಿಯಲ್ಲಿ ಯಾರೊಬ್ಬರೂ ಧಾವಿಸಲಿಲ್ಲ. ಬಹಳ ತ್ರಾಸಪಟ್ಟು ಮಕ್ಕಳ ದೇಹಗಳನ್ನು ಕೆಳಗಿಳಿಸಿ, ಅದೇ ಉದ್ಯಾನದಲ್ಲಿ ತನ್ನ ಸ್ವಹಸ್ತದಿಮ್ದ ಕಳೇಬರಗಳಿಗೆ ಸಮಾಧಿ ಮಾಡಿದಳು. ಬಲ್ಲಾಳರಾಜನ ಅನ್ಯಾಯಕ್ಕೆ ಧಿಕ್ಕಾರವೆಂದಳು. ಅವಳ ನೋವಿಗೆ ಆಸರೆಯಾಗಲು ಬಲ್ಲಾಳರಾಯನ ಕಟ್ಟಪ್ಪಣೆಯು ಪುರಜನರಿಗೆ ಅಡ್ಡಿಯಾಗಿತ್ತು. ಮಕ್ಕಳನ್ನು ಕಳೇದುಕೊಂಡ ದುಃಖದಲ್ಲಿ ಮಾನಸಿಕವಾಗಿ ಜರ್ಝರಿತಗೊಂಡಳು ಹರಿಯಾಳ ರಾಣಿ. ಸಂಪೂರ್ಣ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಂತೆ ವರ್ತಿಸತೊಡಗಿದಳು. ನೀರು-ಅನ್ನಾಹಾರಗಳಿಲ್ಲದೆ ದೇಹವೂ ಸೊರಗಿಹೋಯಿತು. ಚಂದ್ರಗಿರಿಗೆ ಹಿಂತಿರುಗುವ ಚೈತನ್ಯವೂ, ಸ್ವಾಸ್ಥ್ಯವೂ ಅವಳಿಗಿಲ್ಲವಾಯಿತು. ಹಲವು ದಿನಗಳು ದ್ವಾರಾವತಿಯ ಬೀದಿಗಳನ್ನು ಸುತ್ತುತ್ತಾ ಗೋಗರೆದಳು. ಅದೊಂದು ದಿನ ಮಧ್ಯಾಹ್ನ ಭಾಸ್ಕರ ನಡುನೆತ್ತಿಯಲ್ಲಿದ್ದನು. ದ್ವಾರಾವತಿಯ ಕುಂಬಾರರ ಕೇರಿಯಲ್ಲಿ ದಾಹ ಪೀಡಿತಳಾಗಿ , ಪ್ರಜ್ಞಾಶೂನ್ಯಳಾಗಿ ಬಿದ್ದುಬಿಟ್ಟಳು.  ಹನಿ ನೀರನ್ನೂ ಕೊಡಬಾರದೆಮ್ಬ ಆದೇಶಕ್ಕೆ ಹೆದರಿ ಆಕೆಯನ್ನು ಸಮೀಪಿಸಲೂ ಜನರು ಬರಲಿಲ್ಲ. ಮುದುಕ ರಾಜಯ್ಯ ಕುಂಬಾರನ ಮನೆಯ ಮುಂದೆ ರಾಣಿಯು ನಿಸ್ತೇಜಳಾಗಿ ಬಿದ್ದಿದ್ದಳು. ಹರಿಯಾಳ ದೇವಿಯನ್ನು ಗುರುತಿಸಿದ ರಾಜಯ್ಯನು , ಆಕೆಯ ಸ್ಥಿತಿಯನ್ನು ಕಂಡು ಮರುಗಿದನು..

" ಇದೇನವ್ವ ತಾಯಿ, ನಿನಗೆ ಇಂತಹ ಗತಿ  ಬಂದುಬಿಡ್ತಲ್ಲಾ, ಆ ಶಿವನಿಗೂ ನಿನ್ ಮ್ಯಾಲೆ ಕರುಣೆ ಇಲ್ಲವಾಯ್ತಲ್ಲಾ, ಇರವ್ವ ನೀರು ತರ್ತೇನೆ.."  

ಮನೆಯೊಳಗೆ ಹೋದ ಕುಂಬಾರ ರಾಜಯ್ಯನು ತಂಬಿಗೆಯಲ್ಲಿ ನೀರು ತಂದು ರಾಣಿಯ ಮುಖದ ಮೇಲೆ ಚಿಮುಕಿಸಿದನು. ಚೇತರಿಸಿಕೊಂದ ರಾಣಿಯು ರಾಜಯ್ಯನ ಮುಖವನ್ನೊಮ್ಮೆ ನೋಡಿ, ಅತನನ್ನು ಗುರುತಿಸಿದಳು. 

"ತಾತ, ನಿಮ್ಮ ಮಹಾರಾಜ ನನಗೆ ನೀರನ್ನೂ ಕೊಡಬಾರದೆಂದು ಅಪ್ಪಣೆಮಾಡಿದ್ದಾನೆ , ಅಂತಹುದರಲ್ಲಿ ನೀನು ನೀರು ಕೊಟ್ಟೆಯಲ್ಲಾ..ನಿನಗೆ ಶಿಕ್ಷೆಯಾಗುವುದಿಲ್ಲವೇ.."  ರಾಣಿಯು ಆಶ್ಚರ್ಯದಿಂದ ಕೇಳಿದಳು.

" ಅಯ್ಯೋ , ಬಿಡವ್ವ,.. ನಾನು ಗಾಳಿಗೆ ಬಿದ್ದೋಗೊ ಮರ !. ನಾನಿದ್ದು ತಾನೆ ಏನು ಮಾಡಬೇಕು..?"  

ಎಂದು ಹೇಳಿದ ಕುಂಬಾರನ ಮಾತನ್ನು ಕೇಳಿ ರಾಣಿಗೆ ಅಮಿತಾನಂದವಾಯಿತು. ಕುಂಬಾರ ತಾತನ ತೊಡೆಯಮೇಲೆ ಮಲಗಿದಳು. ತನಗೆ , ತನ್ನ ಮಕ್ಕಳಿಗಾದ ನೋವು ಆಕೆಯನ್ನು ಕ್ರುದ್ದಗೊಳಿಸಿತು. ಕ್ರೋಧದಕಿಡಿ ಆಕೆಯ ಮನಸಿನಲ್ಲಿ ಹೊತ್ತಿ ಉರಿಯುತ್ತಿತ್ತು.  ಅದೇ ಆವೇಶದಲ್ಲಿ ಗುಡುಗಿನ ಆರ್ಭಟದಂತೆ ಹರಿಯಾಳ ರಾಣಿಯು ಶಾಪವಿತ್ತಳು.

" ಹೊಯ್ಸಳ ಸಾಮ್ರಾಜ್ಯ , ಈ ವೈಭೋಗದ ಬೀಡು ಹಾಳಾಗಿ ಹೋಗಲಿ, ನಶಿಸಿಹೋಗಲಿ. ದಾಹಕ್ಕೆ ನೀರಿತ್ತ ಈ ಕುಂಬಾರಕೇರಿ ಉದ್ದಾರವಾಗಲಿ.." . 

 ರಾಣಿಯ ಮನಸಿನಾಳದಿಂದ ಶಾಪದಂತೆ ಬಂದ ವಾಕ್ಯಗಳು, ಕುಂಬಾರಕೇರಿಯಲ್ಲಿ ಮಾರ್ದನಿಸಿತು. ಶಾಪವಿತ್ತ ರಾಣಿಯ ಜೀವ ಕುಂಬಾರ ರಾಜಯ್ಯನ ತೊಡೆಯ ಮೇಲೆ ನಿಸ್ತೇಜವಾಯಿತು. ಅವಳ ಅಂತರಾತ್ಮ ವಿಶ್ವಶಕ್ತಿಯಲ್ಲಿ ಲೀನವಾಯಿತು. 

ಕೆಲವೇ ವರುಷಗಳಲ್ಲಿ ರಾಣಿ ಹರಿಯಾಳ ದೇವಿಯ ಶಾಪ ಫಲಿಸಿತು. ವೈಭೋಗದ ಹೊಯ್ಸಳರ ರಾಜಧಾನಿ ದ್ವಾರಾವತಿ-ದ್ವಾರಸಮುದ್ರ ನಾಶವಾಯಿತು.  ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ ದಕ್ಷಿಣ ಭಾರತವೇ ಅರಾಜಕತೆಗೆ ತಳ್ಳಲ್ಪಟ್ಟಿತು. ಪರಕೀಯರ ಆಳ್ವಿಕೆಗೆ ಕನ್ನಡನಾಡೂ ಸೇರಿದಂತೆ ಇಡೀ ದಕ್ಷಿಣ ಭಾರತವೇ ತಲೆಬಾಗಬೇಕಾಯಿತು.         

(ಮುಗಿಯಿತು)
----------------------*-------------------------------

ಟಿಪ್ಪಣಿ :

ರಾಜ ವಿರೂಪಾಕ್ಷ ಬಲ್ಲಾಳ :  
ಈತ ಹೊಯ್ಸಳ ಸಾಮ್ರಾಜ್ಯದ ಪ್ರಮುಖ ಅರಸು. ಹೊಯ್ಸಳರು ತಮ್ಮ ೩೫೦ ವರ್ಷಗಳ ಆಡಳಿತದಲ್ಲಿ ಎಂದೂ ಸಾರ್ವಭೌಮರಾಗಲೇ ಇಲ್ಲ , ಸಾಮಂತರಾಗಿಯೇ ಉಳಿದುಬಂದರು. ಇದ್ದುದರಲ್ಲಿ ಮಹಾರಾಜ "ವಿಷ್ಣುವರ್ಧನ " ಮತ್ತು ನಂತರ ಬಂದ "ವಿರೂಪಾಕ್ಷ ಬಲ್ಲಾಳ" ರು ಮಾತ್ರ ಸ್ವಯಂಪ್ರಭೆಯಿಂದ ಆಡಳಿತ ನಡೆಸಿದರು. ಬಲ್ಲಾಳರಾಯನು ಮೊದಮೊದಲು ದಕ್ಷತೆಯಿಂದ ಆಡಳಿತ ನಡೆಸಿದರೂ, ಅಂತ್ಯಕಾಲದಲ್ಲಿ, ಆಂತರಿಕ ಕಲಹಗಳು, ಅವಿವೇಕತನ, ವೈಚಾರಿಕತೆಯ ಕೊರತೆಯಿಂದ ಅದಕ್ಷನಾಗಿಬಿಟ್ಟನು. ಇದು ಪರಕೀಯರಿಗೆ ಸುಲಭದ ತುತ್ತಾಯಿತು. ಇವನ ನಂತರ ಬಂದ "ರಾಮನಾಥ" ಹಾಗೂ "ವಿಶ್ವನಾಥ" ಬಲ್ಲಾಳರು ನಾಮಕೆವಾಸ್ತೇ ರಾಜ್ಯಭಾರವನ್ನಷ್ಟೇ ನಡೆಸಿದರು. 
ಹೊಯ್ಸಳರ ಕಾಲಮಾನ ಮತ್ತು ನವ ಬಲ್ಲಾಳರ ವಂಶಾವಳಿಯನ್ನು ಸಂಶೋಧಕರ ಅಭಿಪ್ರಾಯದಂತೆ ಇಲ್ಲಿ ಕೊಟ್ಟಿದ್ದೇನೆ.

ಕಾಲಮಾನ                                       ರಾಜರುಗಳು
೧೦ ರಿಂದ ೧೧ ನೆಯ ಶತಮಾನ                 ೧) ನೃಪಕಾಮ (ಸಳ) ಹೊಯ್ಸಳರ  ಮೂಲಪುರುಷ 
                                                               (ರಾಜ ಎರೆಯಂಗ ?)
                                                        ೨) ಚನ್ನಮ್ಮ ದಂಡಾಧೀಶ
                                                        ೩) ವೀರಬಲ್ಲಾಳ 
                                                             ೪) ಬಿಟ್ಟಿದೇವ 
                                                            ( ರಾಜ ವಿಷ್ಣುವರ್ಧನ-ರಾಣಿ ಶಾಂತಲಾದೇವಿ)

೧೧ ರಿಂದ ೧೨ ನೆಯ ಶತಮಾನ              ೫) ಲಕ್ಷ್ಮೀ ನರಸಿಂಹ ಬಲ್ಲಾಳ
                                                      ೬) ೨ನೆಯ ನರಸಿಂಹ ಬಲ್ಲಾಳ

೧೨ ರಿಂದ ೧೩ ನೆಯ ಶತಮಾನ              ೭) ವಿರೂಪಾಕ್ಷಬಲ್ಲಾಳ
                                                       ೮) ರಾಮನಾಥ ಬಲ್ಲಾಳ
                                                       ೯) ವಿಶ್ವನಾಥ ಬಲ್ಲಾಳ

( ೧೩ ನೆಯ ಶತಮಾನದ ಆದಿಯಲ್ಲಿಯೇ ಹೊಯ್ಸಳರ ಪತನ ಪ್ರಾರಂಭವಾಯಿತು)

ದ್ವಾರಾವತಿ-ದ್ವಾರಸಮುದ್ರ
ಇದು ಹೊಯ್ಸಳರ ರಾಜಧಾನಿಯಾಗಿ ಮೆರೆದ ಊರು. ಇದೇ ಇಂದಿನ "ಹಳೇಬೀಡು" .  ಹರಿಯಾಳ ರಾಣಿಯ ಶಾಪವೋ , ಹೊಯ್ಸಳರಲ್ಲಿ ಬುಗಿಲೆದ್ದ ಆಂತರಿಕ ಕಲಹಗಳೊ, ಅಥವ ದ್ವಾರಾವತಿಯ ವೈಭೋಗದ ಮೇಲಿದ್ದ ಚಾಪಲ್ಯವೋ...ಅಂತೂ ೧೩ ನೆಯ ಶತಮಾನದ ಆದಿಭಾಗದಲ್ಲಿ ( ೧೩೨೯) ಅಲ್ಲಾವುದ್ದೀನ್ ಖಿಲ್ಜಿ ಮತ್ತು ಅವನ ದಂಡನಾಯಕ ಮಾಲಿಕಾಫರ್ ದಂಡಯಾತ್ರೆ ಕೈಗೊಂಡು ಹೊಯ್ಸಳ ಸಾಮ್ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ( ೮ ಬಾರಿ ದಾಳಿಯಾಯಿತೆಂದು ಕೆಲವರು ಅಭಿಪ್ರಾಯ ಪಡುತ್ತಾರೆ) , ಅಪಾರ ಸಂಪತ್ತನ್ನು ಶೇಕರಿಸಿಟ್ಟಿದ್ದ ಹಲವು ದೇವಾಲಯಗಳ ಮೇಲೂ ದಾಳಿ ನಡೆಸಿ ನಾಶಗೊಳಿಸುತ್ತಾರೆ. ದ್ವಾರಾವತಿ ಹಾಳಾದ ಬೀಡಾಗುತ್ತದೆ. ರಾಷ್ಟ್ರಕೂಟರ ಕಾಲದಲ್ಲೇ ಅಸ್ತಿತ್ವದಲ್ಲಿದ್ದ ಊರಾದ್ದರಿಂದ ದ್ವಾರಾವತಿಗೆ ಹಳೇಬಿಡು (Old setttlement, Old city)  ಎಂಬ ನಾಮವೂ ಬಂದಿದೆ. ಹಾಳಾದ ಊರು ಹಳೇಬೀಡು ಎನ್ನುವುದನ್ನು ನಾನು ಒಪ್ಪುವುದಿಲ್ಲ.  ಹಳೆಯ ಊರು ಹಳೇಬಿಡಾಗಿದೆ. ಹೀಗೆ ಹರಿಯಾಳ ರಾಣಿಯ ಶಾಪವೂ ಪಲಿಸಿದೆ. ಸುಮಾರು ೯೦೦ ವರ್ಷಗಳ ಇತಿಹಾಸ ಸಾರುವ ದೇವಾಲಯಗಳು ಇಂದಿಗೂ ಇಲ್ಲಿ ರಾರಾಜಿಸುತ್ತಿದೆ.

ನಖ(ಗ)ರೇಶ್ವರ-ಹೊಯ್ಸಳೇಶ್ವರ :
 ಕತೆಯಲ್ಲಿ ಪ್ರಸ್ತಾಪವಾಗಿರುವ ಈ ಎರಡು ಆಲಯಗಳು ದ್ವಾರಾವತಿಯಲ್ಲೇ( ಹಳೇಬೀಡು) ಇದೆ.  ವಿಷ್ಣುವರ್ಧನನ ಕಾಲದಲ್ಲಿ ಪ್ರಾರಂಭವಾದ ಈ ದೇವಾಲಯಗಳ ನಿರ್ಮಾಣ ವಿರೂಪಾಕ್ಷ ಬಲ್ಲಾಳನ ಕಾಲದಲ್ಲಿ ಮುಕ್ತಾಯವಾಯಿತೆಂದು ಅಭಿಪ್ರಾಯವಿದೆ. ( ಸುಮಾರು ನಾಲ್ಕುತಲೆಮಾರುಗಳ ಕಾಲ) . ನಗರೇಶ್ವರ ದೇವಾಯಲವೇ ಅತಿ ಮುಖ್ಯ ದೇವಾಲಯವಾಗಿದ್ದು, ಇದು ರಾಜ ಪರಿವಾರದ ದೇವಾಲಯವೂ ಆಗಿತ್ತು. ಸಮಸ್ತ ಸಂಪತ್ತೂ ಇಲ್ಲೇ ಶೇಖರವಾಗಿತ್ತೆನ್ನಲಾಗಿದೆ. ಅರಮನೆಗೆ ಸನಿಹದಲ್ಲೇ ಇದೆ.
ಆದ್ದರಿಂದ ಪರಕೀಯರ ದಾಳಿಯಾದಾಗ ಮೊದಲು ಬಲಿಯಾಗಿದ್ದು ನಗರೇಶ್ವರ ದೇವಾಲಯ ಮತ್ತು ಅರಮನೆ. ಇಂದು ಅರಮನೆಯ ತಳಪಾಯ ಮತ್ತು ದೇವಾಲಯದ ಜಗತಿಯನ್ನು (Flatform) ಮಾತ್ರ ಕಾಣಬಹುದಾಗಿದೆ !. ಅಷ್ಟರಮಟ್ಟಿಗೆ ದಾಳಿಗೆ  ತುತ್ತಾಗಿದೆ. ಇದು ಇಂದು ಪ್ರವಾಸಿಗರು ದರ್ಶಿಸುತ್ತಿರುವ ಹೊಯ್ಸಳೇಶ್ವರ ದೇವಾಲಯಕ್ಕಿಂತಲೂ ಎರಡು ಪಟ್ಟು ದೊಡ್ಡ ವಿಸ್ತಾರವನ್ನು ಹೊಂದಿದೆ.   ಹೊಯ್ಸಳ ಸಾಮ್ರಾಜ್ಯಕ್ಕೆ ಇದೇ ಮುಖ್ಯ ದೇವಾಲಯವಾಗಿತ್ತು.

ಹೊಯ್ಸಳೇಶ್ವರ ದೇವಾಲಯ , ಬಲ್ಲಾಳರಾಯನ ಮಂತ್ರಿ ಕಟ್ಟಿಸಿದನೆಂಬ ಪ್ರತೀತಿಯೆದೆ. ರಾಜ ವಂಶದ ಹೆಸರಿನಲ್ಲಿ ಕಟ್ಟಿಸಿರುವ ಶಿವನ ದೇವಾಲಯವಿದು.  ಅಂದಿನ ಕಾಲಕ್ಕೆ ಇದೊಂದು ಸಾಮಾನ್ಯ ದೇವಾಲಯವಾಗಿತ್ತು. (Just like Out house !). ಇಂದು ನಮಗೆ ಇದೇ ವಿಸ್ಮಯಗಳ ಆಗರ !. ಇಲ್ಲಿ ರಾಜಧನ ಸಂಪತ್ತುಗಳನ್ನೇನೂ ಇಟ್ಟಿರಿಲಿಲ್ಲವೆಂದು ತಿಳಿದುಬರುತ್ತದೆ. ಆದ್ದರಿಂದ ಇಡೀ ದ್ವಾರಾವತಿಯಲ್ಲಿ ಸದ್ಯಕ್ಕೆ ಇದೊಂದೇ ದೇವಾಲಯ ಸುಸ್ಥಿತಿಯಲ್ಲಿದೆ (Active temple)  !.  ಇಂದು ಸಂದರ್ಶಕರು-ಪ್ರವಾಸಿಗರು  ಅದ್ಭುತವೆಂದು ಮಾರುಹೋಗುವ ದೇವಾಲಯವೂ ಇದೇ ಆಗಿದೆ. ನಗರೇಶ್ವರ ಆಲಯವೇನಾದರೂ ಸುಸ್ಥಿತಿಯಲ್ಲಿದ್ದಿದ್ದರೆ..???? ಹೇಗಿರಬಹುದಿತ್ತು ಅದರ ವೈಭವ ? ನೀವೇ ಊಹಿಸಿಕೊಳ್ಳಿ !. ದ್ವಾರಾವತಿಯಲ್ಲಿದ್ದ ನೂರಾರು ಜೈನ ಬಸದಿಗಳು ಹತ್ತಾರು ಶಿಲ್ಪಕಲಾ ವೈಭವದ ಆಲಯಗಳು ದಾಳಿಗೆ ತುತ್ತಾಗಿ ಹಾಳಾಗಿದ್ದರೆ, ಹೊಯ್ಸಳೇಶ್ವರ ದೇವಾಲಯವೊಂದೆ ನಮಗಾಗಿ ಉಳಿದುಕೊಂಡಿರುವುದು (Still active-worshipping) .  ಈ ಎಲ್ಲಾ ಅವಶೇಷಗಳು ಮತ್ತು ಆಲಯಗಳು ಇಂದು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲ್ಪಟ್ಟು ಕೇಂದ್ರಸರ್ಕಾರದ ಅಧೀನದಲ್ಲಿದೆ ( Archeological Survey of India). ಸದ್ಯದಲ್ಲೇ ವಿಶ್ವಪರಂಪರೆಯ ತಾಣವಾಗುವ ಭಾಗ್ಯವೂ ಇದಕ್ಕೆ ಒದಗಿಬರಲಿದೆ.

ಲಕ್ಷ್ಮಣ-ವೀರೇಶ :  
ಇವರಿಬ್ಬರನ್ನು ಶೂಲಕ್ಕೇರಿಸಿದ ಸ್ಥಳವನ್ನು ಇಂದು ಸ್ಮಾರಕವನ್ನಾಗಿ ಗುರ್ತಿಸಲಾಗಿದೆ. ಇದಕ್ಕೆ ಶೂಲವನವೆಂದೂ ಕರೆಯಲಾಗುತ್ತದೆ. ಸನಿಹದಲ್ಲೇ ಮನಸೆಳೆಯುವ ಕಲ್ಯಾಣಿಯೂ(ನೀರಿನ ಕೊಳ) ಇದೆ. ಗ್ರಾಮ್ಯ ಭಾಷೆಯಲ್ಲಿ ಇದು "ಲಕ್ಕಣ್ಣ -ವೀರಣ್ಣ" ಎಂದು ಕರೆಯಲಾಗಿ ಎರಡು ವೀರಗಲ್ಲುಗಳನ್ನೂ ಕೆತ್ತಿಸಲಾಗಿದೆ (೧೩ ನೆಯ ಶತಮಾನದಲ್ಲಿ) . ಈ ವೀರಗಲ್ಲುಗಳಿಗೆ ಇಂದು ಧಾರ್ಮಿಕ ವಿಧಿಗಳು ಸಲ್ಲುತ್ತಿದೆ !. ಇದು ಹಳೇಬಿಡಿನಿಂದ ೨ ಕಿ.ಮೀ. ದೂರದಲ್ಲಿದೆ. 

ರಾಣಿ ಹರಿಯಾಳ ದೇವಿಯ ಶಾಪವೋ, ಆಕ್ರಮಣಕ್ಕೆ ತುತ್ತಾಗಿಯೊ ಹೊಯ್ಸಳಸಾಮ್ರಾಜ್ಯನಾಶವಾಗುವುದರೋದಿಗೆ ಮುಂದೆ ದಕ್ಷಿಣಭಾರತದಲ್ಲಿ ಅರಾಜಕತೆಯುಂಟಾಗುತ್ತದೆ . ದ್ವಾರವತಿ ಹಳೇಬೀಡಾದರೂ, ಇಲ್ಲಿ ಇಂದಿಗೂ ಕುಂಬಾರಕೇರಿ ಉರ್ಜಿತವಾಗಿರುವುದು ಮತ್ತೊಂದು ವಿಶೇಷ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಂತರವೇ ಕನ್ನಡನಾಡು ಮತ್ತೆ ಉದಯಿಸಿದ್ದು. ವಿಜಯನಗರ ನಾಯಕರುಗಳ ಕಾಲದಲ್ಲಿ ದ್ವಾರಾವತಿಯ ಹಲವು ದೇವಾಲಯಗಳಿಗೆ ಕಾಯಕಲ್ಪವನ್ನು ನೀಡಲಾಗಿದೆ.  

ಇದು ಹೊಯ್ಸಳ ಇತಿಹಾಸದ-ಪ್ರಸ್ತುತ ಸ್ಥಿತಿಯ ಅತ್ಯಂತ ಸಂಕ್ಷಿಪ್ತ ವಿವರ. ಕತೆಯಲ್ಲಿ ಉದ್ಭವಿಸಿರಬಹುದಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಮಾಡಿದ್ದೇನೆ. ನಿಮ್ಮ ಸಲಹೆಗಳನ್ನು ಅಭಿಪ್ರಾಯಗಳನ್ನು ಸ್ವಾಗತಿಸುತ್ತೇನೆ. ...


ವಂದನೆಗಳೊಂದಿಗೆ...    
  




  

May 4, 2010

ಶಾಪ.. ೩ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
*******************************


ನಟ್ಟಿರುಳಿನಲ್ಲಿ ಅಶ್ವಗಳು ಬಹಳದೂರ ಪ್ರಯಾಣಿಸಲಾರದಾದವು.  ಕೈಯಲ್ಲಿ ಹಿಡಿದಿದ್ದ ದೀವಟಿಗೆಗಳು ನಂದಿಹೋದವು. ಯುವಕರಿಬ್ಬರೂ, ಸನಿಹದಲ್ಲಿ ಗೋಚರಿಸಿದ ಪುಟ್ಟ ಆಲಯದೊಳಗೆ ಹೊಕ್ಕರು. ರಾತ್ರಿಯನ್ನು ಅಲ್ಲೇ ಕಳೆಯುವುದೆಂದು ನಿರ್ಧರಿಸಿ,  ನಿದ್ರೆಗೆ ಶರಣಾದರು.
ನಸುಕಿನಲ್ಲಿ ಹಕ್ಕಿಗಳ ಕಲರವವು ಕಿವಿಗೆ ಬಿದ್ದಾಗಲೇ ಯುವಕರಿಬ್ಬರಿಗೂ ಎಚ್ಚರವಾದುದು. ಆಲಯದ ಮುಂದೆಯೇ ಹರಿಯುತ್ತಿದ್ದ ನದಿಯಲ್ಲಿ ತಮ್ಮ ಪ್ರಾತರ್ವಿಧಿಗಳನ್ನು ಪೂರೈಸಿಕೊಂಡು, ಪುನಃ ಅಶ್ವಗಳನ್ನೇರಿ ದ್ವಾರಾವತಿಯತ್ತ ಪ್ರಯಾಣ ಬೆಳಸಿದರು. ಹಾದಿಯುದ್ದಕ್ಕೂ ಕಂಡ ಊರುಗಳು, ನಗರಗಳನ್ನು ದರ್ಶಿಸುತ್ತಾ ಅಲ್ಲಲ್ಲಿ ವಿರಮಿಸಿಕೊಳ್ಳುತ್ತಾ , ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ದ್ವಾರವತಿಯನ್ನು ತಲುಪಿದರು. ದ್ವಾರವತಿಯ ಭವ್ಯ ಕೋಟೆಯನ್ನು ಕಂಡು ಯುವಕರು ಮೂಕವಿಸ್ಮಿತರಾದರು. ಎರಡು ಸುತ್ತಿನ ಕೋಟೆಯನ್ನು ದಾಟಿ , ನಗರದೊಳಗೆ ಪ್ರವೇಶಿಸಿದರು. ದ್ವಾರವತಿಯ ವೈಭವವನ್ನು ಕಣ್ಣಾರೆ ಕಾಣುವ ಅವರ ಕನಸು ನನಸಾಗಿತ್ತು. ಸಮುದ್ರದಂತೆ ಗೋಚರಿಸುತ್ತಿದ್ದ ಬೃಹತ್ ಕೆರೆಯನ್ನು , ಪ್ರವೇಶದ್ವಾರದಲ್ಲೇ ಕಂಡ ಯುವಕರು ಬಹು ಸಂತಸಗೊಂಡರು. ಅರಮನೆಯನ್ನು ದರ್ಶಿಸುವ ಮೊದಲು , ಕೆಲ ಹೊತ್ತು ವಿರಮಿಸಿಕೊಳ್ಳುವ ನಿರ್ಧಾರಕ್ಕೆ ಬಂದ ಯುವಕರು , ಸನಿಹದಲ್ಲೇ ಕಂಡ ಸುಂದರ ’ಕಲ್ಯಾಣಿ’ಯಲ್ಲಿ ಮುಖ ಮಾರ್ಜನೆ ಮಾಡಿಕೊಂಡು ಪಕ್ಕದಲ್ಲೇ ಇದ್ದ ಉದ್ಯಾನವನದಲ್ಲಿ ವಿರಮಿಸತೊಡಗಿದರು. ತಂಪಾದ ಗಾಳಿಗೆ ಮೈಯೊಡ್ಡಿ ಮಲಗಿದ ಯುವಕರಿಗೆ ನಿದ್ದೆಯ ಜೋಂಪು ಹತ್ತಿದ್ದು ತಿಳಿಯಲಿಲ್ಲ. ಸಾಯಂಕಾಲವಾದರೂ, ಅವರ ನಿದ್ರೆಗೆ ಯಾವ ಭಂಗವೂ ಆಗಲಿಲ್ಲ.

-------*-------

ಪ್ರತಿನಿತ್ಯದಂತೆ , ಮಹಾರಾಣಿ ತಿರುಮಲಾಂಬೆಯು ಸಂಜೆಯ ವಾಯುವಿಹಾರಕ್ಕೆ ’ಕಲ್ಯಾಣಿ’ಯಿದ್ದ ಉದ್ಯಾನವನಕ್ಕೆ ಬರುವುದು ವಾಡಿಕೆಯಾಗಿತ್ತು. ಅಂದೂ ಸಹ ವಿಹಾರಕ್ಕೆ ರಾಣಿಯು ಆಗಮಿಸಿದಳು. ಉದ್ಯಾನವನದಲ್ಲಿ ಸಂಚರಿಸುತ್ತಿದ್ದ ರಾಣಿಗೆ, ನಿದ್ರೆಯಲ್ಲಿದ್ದ ಇಬ್ಬರು ಸ್ಪುರದ್ರೂಪಿ ಯುವಕರು ಕಂಡರು. ಅಡಿಯಿಂದ ಮುಡಿಯವರೆಗೂ ತರುಣರನ್ನು ದೃಷ್ಟಿಸಿದ ರಾಣಿಯು, ತನ್ನ ಸೇವಕರಿಗೆ ಯುವಕರನ್ನು ಎಚ್ಚರಗೊಳಿಸಲು ಆಜ್ಞಾಪಿಸಿದಳು. ನವ ತರುಣರ ದೇಹದಾರ್ಢ್ಯ, ಸ್ಪುರದ್ರೂಪ ರಾಣಿಯನ್ನು ಬಹುವಾಗಿ ಆಕರ್ಷಿಸಿತು. ಯುವಕರ ತಾರುಣ್ಯ, ರಾಣಿಯನ್ನು ಮೋಹಗೊಳಿಸಿತು !.  ಸೇವಕರ ಕರೆಗೆ ಎಚ್ಚರಗೊಂಡ ಲಕ್ಷ್ಮಣ-ವೀರೇಶರು , ತಮ್ಮೆದುರಿಗೆ ನಿಂತಿದ್ದವರನ್ನು ಕಂಡು ಬೆರಗಾದರು. ಸೇವಕರು , ಯುವಕರಿಗೆ ರಾಣಿ ತಿರುಮಲಾಂಬೆಯ ಪರಿಚಯವನ್ನು ಹೇಳಿದರು. ಯುವಕರು ಬಹಳ ವಿನಯದಿಂದ ಎದ್ದುನಿಂತು ಗೌರವವನ್ನು ಸೂಚಿಸಿದರು. ಯುವಕರ ರೂಪ-ವಿನಯವರ್ತನೆಗೆ ತಿರುಮಲಾಂಬೆಯು ಮಾರುಹೋದಳು.

" ಯುವಕರೆ, ನೀವು ನೋಡುವುದಕ್ಕೆ ರಾಜಕುಮಾರರಂತೆ  ಕಾಣುವಿರಿ. ದ್ವಾರಾವತಿಯಲ್ಲಿ ನಿಮ್ಮನ್ನೆಂದೂ ನಾನು ಕಂಡಿಲ್ಲ. ಎಲ್ಲಿಂದ ಬಂದಿರುವಿರಿ ನೀವು ? "

ರಾಣಿಯ ಮಾತುಗಳಿಗೆ ಉತ್ತರಿಸಲು ತರುಣರಿಗೆ ಹಿಂಜರಿಕೆಯಾಯಿತು. ಈಗಲೇ ಸತ್ಯ ನುಡಿಯುವುದು ಬೇಡವೆಂದು ಮನದಲ್ಲೇ ನಿರ್ಧರಿಸಿದರು. ಲಕ್ಷ್ಮಣನೇ ಉತ್ತರವನ್ನು ಕೊಡಲನುವಾದ

" ಮಹಾರಾಣಿ, ನಾವು ವಿಜಯಪುರದವರು, ದ್ವಾರಾವತಿಯ ಸೊಬಗನ್ನು ಸವಿಯಲು, ಯಾತ್ರಾರ್ಥಿಗಳಾಗಿ ಬಂದಿರುವೆವು. ಇಂದು ಇಲ್ಲೇ   ಉಳಿದು ನಾಳೆ ಹೊರಟು ಬಿಡುವೆವು..ತಮ್ಮ  ಆದರ-ವಿಶ್ವಾಸಗಳು ನಮ್ಮನ್ನು ಸಂತಸಗೊಳಿಸಿತು.."

ಮಹಾರಾಣಿಗೆ , ಯುವಕರು ದ್ವಾರವತಿಯವರಲ್ಲವೆಂದು ತಿಳಿದಾಗ , ಆಕೆಯ ಬಯಕೆ ಹೆಚ್ಚಾಯಿತು..ಮನಸು ವಿಚಲಿತವಾಯಿತು. ಮೋಹದ ಮಾತುಗಳನ್ನಾಡುತ್ತಾ ಯುವಕರೆಡೆಗೆ , ಸನಿಹಕ್ಕೆ ತೆರಳಿದಳು.

"ಯುವಕರೆ, ತಾವು ವಿಜಯಪುರದವರೆನ್ನುತ್ತೀರಿ. ಅಷ್ಟು ದೂರದಿಂದ ಇಲ್ಲಿಯವರೆಗೂ ಬಂದು ಬರಿ ಕೈಯಲ್ಲಿ ತೆರಳುವಿರೇನು ? ..ನಿಮ್ಮ ಆಸೆಗಳೇನಿದ್ದರೂ  ಹೇಳಿ..ನಾನು ಪೂರೈಸುತ್ತೇನೆ..!..ಹಾಗೆಯೇ ಈ ರಾಣಿಯ ಆಸೆಯನ್ನೂ ನೀವು ಪೂರೈಸಬೇಕಿದೆ ..!! "    

ಯುವಕರಿಗೆ ರಾಣಿಯ ಮಾತುಗಳು ವಿಚಿತ್ರವೆನಿಸತೊಡಗಿತು. ದ್ವಾರಾವತಿಯ ಮಹಾರಾಣಿಯಿಂದ ಇಂತಹ ಅನುಚಿತ ವರ್ತನೆ ಸಾಧ್ಯವೇ ? ....ರಾಣಿಯ ಆಸೆಯನ್ನು ನಾವು ತಣಿಸುವುದೆಂದರೇನು ..?? ...ಯುವಕರು ಗೊಂದಲಕ್ಕೀಡಾದರು..

" ಮಹಾರಾಣಿ, ತಮ್ಮ ಮಾತುಗಳು ನಮಗೆ ಅರ್ಥವಾಗಲಿಲ್ಲ !. ಆದರೂ , ನಾವಿಲ್ಲಿ ಬಂದಿರುವುದು ಯಾತ್ರಿಕರಾಗಿಯೇ ವಿನಃ , ಯಾವುದೇ ಭೋಗದ ಆಸೆಯಿಂದಲ್ಲ..., ನಮಗಾವ ಆಕಾಂಕ್ಷೆಗಳು ಇಲ್ಲ..ಸಾಧ್ಯವಾದರೆ, ಆಲಯಗಳನ್ನೂ, ಅರಮನೆಯನ್ನೂ ಈಗಲೇ ದರ್ಶಿಸಿ..ಇಂದೇ ಹೊರಟುಬಿಡುವೆವು .."

ಯುವಕರ ಮಾತಿಗೆ ತಿರುಮಲಾಂಬೆಯು ಹೆಚ್ಚು ಅವಕಾಶ ನೀಡದೆ, ಅವರನ್ನು ಇನ್ನಷ್ಟು ಸಮೀಪಿಸಿದಳು. ಯುವಕರು ಹಿಂದೆ-ಹಿಂದೆ ಸರಿಯುತ್ತಿದ್ದರು. ರಾಣಿಯು ಮೋಹಿಸುತ್ತಾ ಮತ್ತಷ್ಟು ಹತ್ತಿರವಾದಳು.

" ನವತರುಣರೆ, ನಿಮ್ಮ ತಾರುಣ್ಯವನ್ನೇಕೆ ಸುಮ್ಮನೆ ಹಾಳುಗೆಡಹುವಿರಿ ..? ಮಹಾರಾಣಿಯ ದೇಹಾಕಾಂಕ್ಷೆಯನ್ನೊಮ್ಮೆ ತಣಿಸಿಬಿಡಿ..ನಿಮ್ಮ ತಾರುಣ್ಯದ ಸೌಂದರ್ಯ ನನ್ನ ಮನಸನ್ನು ಮೋಹಗೊಳಿಸಿದೆ. ರಾಣಿಯನ್ನು ಏಕಾಂತದಲ್ಲಿ ಕಾಣುವ ಭಾಗ್ಯ ಅನ್ಯರಾರಿಗೂ ದೊರೆಯುವುದಿಲ್ಲ . ನಿಮಗೆ ಆ ಭಾಗ್ಯ ಸಿಗುತ್ತಿದೆ. ಮೂಢರಂತೆ ಸಮಯ ಹಾಳುಮಾಡದೆ ನನ್ನೊಂದಿಗೆ ಹೊರಟುಬನ್ನಿ.."....

ರಾಣಿಯ ಮಾತುಗಳು ಲಕ್ಷ್ಮಣ-ವೀರೇಶರನ್ನು ದಿಗ್ಭ್ರಾಂತರನ್ನಾಗಿಸಿತು. ಅವರ ಬಾಯಿಂದ ಮಾತುಗಳು ಹೊರಡದಾದವು. ಇನ್ನು, ಸತ್ಯವನ್ನು ಮುಚ್ಚಿಟ್ಟರೆ, ಮಹಾಪರಾಧವಾಗುತ್ತದೆಂದು ಆಲೋಚಿಸಿ..ಮಹಾರಾಣಿಯೆದುರು ಸತ್ಯವನ್ನು ನಿವೇದಿಸಿಕೊಂಡರು..

" ಮಹಾರಾಣಿಯವರೆ, ..ನೀವು ತಿಳಿದಂತೆ ನಾವು ವಿಜಯಪುರದವರಲ್ಲ..ಚಂದ್ರಗಿರಿಯ ರಾಣಿ ’ಹರಿಯಾಳ ದೇವಿಯ’ ಅವಳಿಮಕ್ಕಳು.  ಮಹಾರಾಜ ಬಲ್ಲಾಳರಾಯರು ನಮ್ಮ ಸೋದರಮಾವನವರು, ತಾವು ನಮಗೆ ಮಾತೃಶ್ರೀ ಸಮಾನರಾದ ಅತ್ತೆಯವರಾಗಬೇಕು....ದ್ವಾರಾವತಿಯ ಸೊಬಗನ್ನು ನೋಡಲು , ತಾಯಿಗೂ ತಿಳಿಸದೆ ಬಂದಿರುವೆವು. ತಾವು ನಮ್ಮನ್ನು ಈ ರೀತಿ ಸಮೀಪಿಸುತ್ತಿರುವುದು ಸರಿಯಲ್ಲ..! "

ತಿರುಮಲಾಂಬೆಗೆ ಆಕಾಶವೇ ಕಳಚಿಬಿದ್ದಂತಾಯಿತು. ಆಕೆಯಲ್ಲಿದ್ದ ಮೋಹಾಕಾಂಕ್ಷೆಗಳೆಲ್ಲವೂ ಇಳಿದುಹೋಯಿತು. ಹರಿಯಾಳ ದೇವಿಯ ಹೆಸರನ್ನು ಕೇಳಿದ ನಂತರವಂತೂ, ರಾಣಿಯ ಕೋಪ ಇಮ್ಮಡಿಯಾಯಿತು. ಯುವಕರನ್ನು ಸುಮ್ಮನೆ ಹೀಗೆಯೇ ಬಿಟ್ಟುಬಿಟ್ಟರೆ, ತನ್ನ  ಮಹಾರಾಣಿಯೆಂಬ ಗೌರವಕ್ಕೆ ಚ್ಯುತಿ ಬರುವುದೆಂದು ಎಣಿಸಿದಳು.  ಹರಿಯಾಳ ದೇವಿಯ ಮಕ್ಕಳ ಮುಂದೆ ತಾನು ನಗೆಪಾಟಲಿಗೀಡಾಗುವೆನೆಲ್ಲಾ ಎಂದು ಹಲುಬಿದಳು. ಹೆಚ್ಚು ಚಿಂತಿಸುತ್ತಾ ಕೂರುವ ಸಮಯವಿದಲ್ಲವೆಂದು ಅರಿತ ರಾಣಿಯು, ಸೇವಕರಿಗೆ ಅವರೀರ್ವರನ್ನೂ ಬಂಧಿಸಲು ಆಜ್ಞೆಯಿತ್ತಳು . ಸೇವಕರು ಯುವಕರಿಬ್ಬರನ್ನೂ ಹಗ್ಗಗಳಿಂದ ಕಟ್ಟಿ ಬಂಧನಕ್ಕೊಳಪಡಿಸಿದರು. ರಾಣಿಯು ಪುನಃ ಯುವಕರ ಸಮೀಪಕ್ಕೆ  ತೆರಳಿದಳು..

" ಹೇಗೂ ನನ್ನ ಮಾತುಗಳು ನಿಮಗೆ ಅರ್ಥವಾಗಿಬಿಟ್ಟಿದೆ. ಮುಂದೆ, ನೀವು ನನ್ನ ತೇಜೋವಧೆ ಮಾಡುವುದಿಲ್ಲವೆಂಬ ನಂಬಿಕೆ ನನಗಿಲ್ಲ.  ನನ್ನ ಆಸೆಯನ್ನು ಈಡೇರಿಸಿ..ಇಲ್ಲವಾದರೆ ನಿಮ್ಮನ್ನು ಜೀವಸಹಿತ ಉಳಿಸುವುದು ಅಸಾಧ್ಯವಾದ ವಿಚಾರ, ಇದು ನಿಮಗೆ ನನ್ನ ಅಂತಿಮ ಯಾಚನೆ..,  ಹೇಳಿ.. ಏನು ಮಾಡುವಿರಿ ?.."

 ಯುವಕರು ತಮ್ಮ ಪಟ್ಟು ಸಡಿಲಿಸಲಿಲ್ಲ. ಧೈರ್ಯದಿಂದಲೇ ರಾಣಿಯೊಡನೆ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

" ತಾಯಿ, ನಾವು ಪಾಪ ಮಾಡುವ ಚಾಂಡಾಲ ವೃತ್ತಿಯವರಲ್ಲ,  ಗುರು-ಹಿರಿಯರಿಂದ ಸುಸಂಸ್ಕೃತ ವಿದ್ಯೆಕಲಿತು ಬದುಕನ್ನು ಹಸನಾಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯುಳ್ಳವರು. ನಿಮ್ಮ ಯಾವ ಆಮಿಷಗಳಿಗೂ ನಾವು ಬಗ್ಗಲಾರೆವು. ಬಲ್ಲಾಳರಾಯನಿಗೆ ನಿಜಾಂಶವನ್ನು ಹೇಳಲು ನಮಗಾವ ಅಳುಕೂ ಇಲ್ಲ. ತಾವು ನಮ್ಮನ್ನು ಸಮೀಪಿಸಿದರೆ  ಶಿವನಾಣೆ ..!! " ...

ರಾಣಿ ತಿರುಮಲಾಂಬೆಗೆ ದಿಕ್ಕುತೋಚದಂತಾಯಿತು. ಯುವಕರನ್ನು ಸುಮ್ಮನೆ ಬಿಡುವುದಕ್ಕೂ ಸಾಧ್ಯವಿರಲಿಲ್ಲ. ಸೇವಕರಿಗೆ ಉದ್ಯಾನದಲ್ಲಿ ನಡೆದ ವಿಷಯವನ್ನು ಎಲ್ಲೂ ಬಾಯಿಬಿಡದಂತೆ ತಾಕೀತು ಮಾಡಿದಳು.  ಬಂಧಿಸಿದ್ದ ಯುವಕರನ್ನು ಕಾರಾಗೃಹದಲ್ಲಿಡಲು ಸೂಚಿಸಿ, ತನ್ನ ಅಂತಃಪುರದೆಡೆಗೆ ತೆರಳಿದಳು.  ಆಗಷ್ಟೆ... ಭಾಸ್ಕರ ಅಸ್ತಮಿಸಿದ.

--------------+----------------

ಅಂತಃಪುರದಲ್ಲಿ ಚಿಂತಾಕ್ರಾಂತಳಾಗಿ ಕುಳಿತಿದ್ದ ರಾಣಿಯನ್ನು ಕಂಡ ಬಲ್ಲಾಳರಾಯನಿಗೆ ಆಶ್ಚರ್ಯವಾಯಿತು. ಏಕಾಂತದಲ್ಲಿ ಎಂದೂ ರಾಣಿಯು ಹೀಗೆ ವಿಚಲಿತಲಾದವಳಂತೆ ಬಲ್ಲಾಳರಾಯನಿಗೆ ಕಂಡುಬಂದಿರಲಿಲ್ಲ. ಕಾರಣವನ್ನು ತಿಳಿಯುವ ಕೂತೂಹಲವಾಯಿತು ರಾಯನಿಗೆ..

"ತಿರುಮಲಾಂಬಾ, ಏನಾಗಿದೆ ನಿನ್ನ ಸಂತೋಷಕ್ಕೆ ? ಇಂದೇಕೋ ಬಹಳ ವ್ಯಾಕುಲಳಾದಂತೆ ಕಾಣುತ್ತಿರುವೆ.."


 ಇಂತಹ ಆಪ್ತ ಮಾತುಗಳ ನಿರೀಕ್ಷೇಯಲ್ಲೇ ಇದ್ದ ರಾಣಿಗೆ , ಇಂತಹ ಸುಸಂದರ್ಭವನ್ನು ಉಪಯೋಗಿಸಿಕೊಳ್ಳದೇ ಬಿಡಬಾರದೆಂದೆನಿಸಿತು...

" ರಾಯ, ಇಂದು ಉದ್ಯಾನದಲ್ಲಿ ಮನಸಿಗೆ ಬೇಸರವಾಗುವ ಘಟನೆಯೊಂದು ನಡೆಯಿತು. ನಾನೆಂದೂ ಅಂತಹ ಅಚಾತುರ್ಯವನ್ನು ಕಂಡಿರಲಿಲ್ಲ.."

" ಅಂತಹುದ್ದೇನಾಯಿತು ? ದ್ವಾರಾವತಿಯ ಮಹಾರಾಣಿಗೆ ಯಾರಾದರೂ ಅಪಮಾನ ಮಾಡಿದರೆ.. ? ನಿನ್ನ ಬಾಡಿರುವ ವದನವನ್ನು ನೋಡಿದರೆ ನನಗೇಕೋ ಅದೇ ಅನುಮಾನ ಕಾಡುತ್ತಿದೆ.."

" ಅಪಮಾನವಿರಲಿ, ನನ್ನ ಮಾನವೇ ಹರಣವಾಗುವುದರಲ್ಲಿತ್ತು,....ಅಷ್ಟರಲ್ಲಿ ಸೇವಕರು ನನ್ನನ್ನು ಕಾಪಾಡಿದರು..! "

" ಏನು ..!!?? ನಿನ್ನ ಮಾನಾಪಹರಣವೇ..?  ಅದು ಹೇಗೆ ಸಾಧ್ಯ ? ಈ ವಿರೂಪಾಕ್ಷಬಲ್ಲಾಳನ ರಾಜ್ಯದಲ್ಲಿ ಅಂತಹ ಹೀನರಾರಿಹರು ...ಅವರ ಶಿರವನ್ನು ತುಂಡರಿಸಿಬಿಡುತ್ತೇನೆ..ಹೇಳು..ಯಾರದು..? "   

" ಇಂದು ಸಾಯಂಕಾಲ, ಉದ್ಯಾನವನದಲ್ಲಿ ವಿಹಾರಕ್ಕೆ ತೆರಳಿದ್ದಾಗ, ಇಬ್ಬರು ಯುವಕರು ನನ್ನ ಮಾನಾಪಹರಣ ಮಾಡಲೆತ್ನಿಸಿದರು. ನಾನೆಷ್ಟೇ ಪರಿಯಾಗಿ ಬೇಡಿಕೊಂಡರೂ ಅವರು ಕನಿಕರಿಸಲಿಲ್ಲ..ಅಷ್ಟರಲ್ಲಿ , ಭಟರು ಬಂದು ನನ್ನ ಜೀವವನ್ನು ಉಳಿಸಿದರು. ಬಲ್ಲಾಳರಾಯನ ರಾಜ್ಯದಲ್ಲಿ ಪತಿವ್ರತೆಯರಿಗೆ ಬೆಲೆಯೇ ಇಲ್ಲವಾಯಿತೇ !! ? .....ಹೇಳಿ.. ಏನು ಮಾಡುವಿರಿ ಈಗ  ? "

 ರಾಣಿಯ ಮಾತಿನಲ್ಲಿನ ನಾಜೂಕುತನವನ್ನು ಬಲ್ಲಾಳರಾಯ ಗಮನಿಸಲಾರದೆ ಹೋದ. ತನ್ನ ಪತ್ನಿಗಾದ ಅಪಮಾನವೊಂದೇ  ಆತನ ಮನಸನ್ನು ತುಂಬಿಕೊಂಡಿತ್ತು.

" ಯಾವ ದೇಶದವರಂತೆ ಆ ಧೂರ್ತರು ..."    ಬಲ್ಲಾಳರಾಯ ಗುಡುಗಿದ.

 ರಾಣಿ ಹೆದರಿವಳಂತೆ , ನಿಧಾನವಾಗಿ ಹೇಳಿದಳು

" ಚಂದ್ರಗಿರಿಯ ಪ್ರಜೆಗಳಂತೆ, ನನ್ನ ಮಾನಾಪಹರಣಕ್ಕಾಗಿಯೇ, ಹರಿಯಾಳ ದೇವಿಯೇ ಇವರನ್ನು ಕಳುಹಿಸಿದ್ದಾಳಂತೆ..!! " 

ತಿರುಮಲಾಂಬೆಯ ಆಂತರ್ಯದಲ್ಲಿ ಸಂತಸ ಮನೆಮಾಡುತ್ತಿತ್ತು. ತನ್ನ ಕಾರ್ಯ ಯಶಸ್ವಿಯಾಗುವ ಸೂಚನೆಗಳು ಬಲ್ಲಾಳರಾಯನ ಮಾತುಗಳಲ್ಲೆ ಅವಳಿಗೆ ದೊರೆಯುತ್ತಿತ್ತು . ಚಂದ್ರಗಿರಿಯ ಹೆಸರನ್ನು ಕೇಳಿದ ಬಲ್ಲಾಳರಾಯ ಮತ್ತಷ್ಟು ಕ್ರೋಧಗೊಂಡ.

" ಆ ಚಂದ್ರಗಿರಿಯ ರಕ್ತವೇ ಅಂತಹುದು, ಅಲ್ಲಿಯವರ‍್ಯಾರಿಗೂ ನೈತಿಕತೆಯ ಅರ್ಥವೇ ತಿಳಿದಿಲ್ಲ.  ನನ್ನ ರಾಣಿಯ ಮಾನಾಪಹರಣ ಮಾಡುವುದೆಂದರೇನು ? ಹರಿಯಾಳ ದೇವಿಗೆ ಅಷ್ಟೊಂದು ಮದವೇರಿತೆ ? ..ಆಕೆಗೆ ಸರಿಯಾದ ಪಾಠ ಕಲಿಸುತ್ತೇನೆ..ಇಗೋ ರಾಣಿ..ಈಗಲೇ ಬರುತ್ತೇನೆ...ಅದೂ ನಿನಗೊಂದು ಸಂತಸದ ಸುದ್ದಿಯೊಡನೆ..." 

.....ಬಲ್ಲಾಳರಾಯ ಮಿಂಚಿನಂತೆ ಅಂತಃಪುರದಿಂದ ತೆರಳಿದ. ರಾಣಿ ತಿರುಮಲಾಂಬೆಯ ಮನಸ್ಸು ಮುಂದಾಗಲಿರುವುದನ್ನು ಕಂಡು ಹಿರಿಹಿಗ್ಗುತ್ತಲಿತ್ತು.  ಭಟರನ್ನು ಕರೆದ ಬಲ್ಲಾಳರಾಯ, ಚಂದ್ರಗಿರಿಯ ಇಬ್ಬರು ಯುವಕರನ್ನು ತಕ್ಷಣವೇ ನ್ಯಾಯಸ್ಥಾನಕ್ಕೆ ಕರೆತರಲು ಆದೇಶಿಸಿದ.  ಕಾರಾಗೃಹಕ್ಕೆ ತೆರಳಿದ ಸೇವಕರು, ಲಕ್ಷ್ಮಣ ಮತ್ತು ವೀರೇಶ್ವರರಿಬ್ಬರನ್ನೂ ಹಗ್ಗಗಳಿಂದ ಕಟ್ಟಿ ಎಳೆದು ತಂದು ಬಲ್ಲಾಳರಾಯನ ಮುಂದೆ ನಿಲ್ಲಿಸಿದರು. ಮಹಾರಾಜ ಯುವಕರನ್ನೊಮ್ಮೆ ನಖಶಿಖಾಂತ ದೃಷ್ಟಿಸಿದ.....

" ನಿಮ್ಮದು ಚಂದ್ರಗಿರಿಯೇ ? ಅಲ್ಲಿಯ ರಾಣಿಯ ಮನಸ್ಥಿತಿಗೆ ತಕ್ಕಂತಹ ಘನಕಾರ್ಯವನ್ನೇ ಮಾಡಿರುವಿರಿ ನೀವು ....ಎಂತಹ ಅಪರಾಧ, ನನ್ನ ರಾಜ್ಯದಲ್ಲಿ ಸ್ತ್ರೀಯರ ಮಾನಾಪಹರಣವೇ ? ಅದೂ ಚಂದ್ರಗಿರಿಯ ಪ್ರಜೆಗಳಿಂದ..ನಿಮ್ಮನ್ನು ಇಲ್ಲಿಗೆ ಕಳುಹಿಸಿರುವವರಾರೆಂದು ನಮಗೆ ತಿಳಿದಿದೆ..ನಿಮ್ಮನ್ನು ಯಾವ ವಿಚಾರಣೆಗೂ ಒಳಪಡಿಸುವ ಅವಶ್ಯಕತೆಯೇ ಇಲ್ಲವೆಂದು ತೋರುತ್ತಿದೆ...ನಿಮಗಾವ ಕಠಿಣ ಶಿಕ್ಷೆಯನ್ನು ವಿಧಿಸಲಿ..ನೀವೇ ಹೇಳಿಬಿಡಿ.."

ಬಲ್ಲಾಳರಾಯ , ಯುವಕರಿಕೆ ಮಾತನಾಡಲು ಅವಕಾಶವನ್ನೇ ಕೊಡದೆ..ಅಪ್ಪಣೆ ಹೊರಡಿಸಿದ. ದಿಗ್ಭ್ರಮೆಗೊಂಡ ಯುವಕರು, ರಾಜನೆದುರಿಗೆ ಏನು ಮಾತನಾಡಬೇಕೆಂದು ತೋರದೆ, ತಮಗಾದ ಅಪಮಾನಕ್ಕೆ ರೋಧಿಸಿದರು..

" ನ್ಯಾಯಾನ್ಯಾಯಗಳ ವಿವೇಚನೆ ನೆಡಸದ ನೀನೂ ಒಬ್ಬ ರಾಜನೇ ? ಬಲ್ಲಾಳರಾಯನೆಂದರೆ ..ನ್ಯಾಯಪರ, ಧರ್ಮಸಹಿಷ್ಣು, ಕಲಾರಾಧಕ, ಗಂಡೆದೆಯ ಕರಿಭಂಟ..ಎಂದೆಲ್ಲಾ ಕೇಳಿದ್ದೆವು..! , ನಿನ್ನದೂ ಒಂದು ರಾಜ್ಯವೇ ? ಕ್ಷಣ ಹೊತ್ತಾದರು ನಾವು ಹೇಳುವುದನ್ನು ಕೇಳು, ನಿನಗೆ ಸತ್ಯ ತಿಳಿದರೆ..ನೀನು ಸನ್ಯಾಸಿಯಾಗಿಬಿಡುವೆ..!!! "

ಯುವಕರ ಹರಿತವಾದ ಮಾತುಗಳು ಬಲ್ಲಾಳರಾಯನನ್ನು ಬಡಿದೆಬ್ಬಿಸಿತು. ಅವನ ಕೋಪ ನೂರ್ಮಡಿಯಾಯಿತು.

" ಸೇವಕರೆ, ಎಳೆದುಕೊಂಡು ಹೋಗಿ ಈ ಮೂಢರನ್ನು...ಇವರು ತಂಗಿದ್ದ ಕಲ್ಯಾಣಿಯ ಉದ್ಯಾನವನದಲ್ಲೇ ಇವರನ್ನು ಶೂಲಕ್ಕೇರಿಸಿಬಿಡಿ...ಬಲ್ಲಾಳರಾಯನ ಮಾತಿಗೆ ಎದುರಾಡುವಷ್ಟು ಅಹಂಕಾರವಿರುವ ಇವರಿಗೆ ಮರಣವೇ ತಕ್ಕ ಶಾಸ್ತಿ. ಇದು, ಇವರಂತಹ ಕಾಮುಕ ಹೀನರಿಗೆಲ್ಲಾ ಒಂದು ಎಚ್ಚರಿಕೆಯಾಗಲಿ..ಎಳೆದೊಯ್ಯಿರಿ ಇವರನ್ನು...ಈ ಕ್ಷಣವೇ.. ಶೂಲಕ್ಕೇರಿಸಿ ಬಂದು , ನನಗೆ ಆ ಸಂತಸದ ಸುದ್ದಿಯನ್ನು ಹೇಳಿ, ನಾನು ನನ್ನ ರಾಣಿಗೆ ಆ ವಿಷಯವನ್ನು ಅತಿ ಶೀಘ್ರದಲ್ಲಿ ತಿಳಿಸಬೇಕಿದೆ.." 

ಬಲ್ಲಾಳರಾಯ ಆವೇಶಭರಿತನಾಗಿ ಆಜ್ಞಾಪಿಸಿದ. ರಾಜನ ಕೋಪವನ್ನು ಕಂಡರಿದಿದ್ದ ಸೇವಕರು, ತಡಮಾಡದೆ ಯುವಕರೀರ್ವರನ್ನೂ ಉದ್ಯಾನವನಕ್ಕೆ ಎಳೆದೊಯ್ದರು. ಲಕ್ಷ್ಮಣ-ವೀರೇಶರು ಮಾಡಿದ ವಿನಂತಿಗಳೆಲ್ಲವೂ ವ್ಯರ್ಥವಾಯಿತು. ಅವರ ಮಾತುಗಳನ್ನು ಆಲೈಸುವ ಸಹನೆ ಅಲ್ಲ್ಯಾರಿಗೂ ಇರಲಿಲ್ಲ. ಕಲ್ಯಾಣಿಯ ಉದ್ಯಾನವನಕ್ಕೆ ಯುವಕರನ್ನು ಎಳೆದು ತಂದ ಭಟರು..ಶೂಲಕ್ಕೇರಿಸಲು ಸನ್ನದ್ಧರಾದರು. ಅದಾಗಲೇ ಮಧ್ಯರಾತ್ರಿಯ ಕತ್ತಲು ಆವರಿಸಿಕೊಂಡಿತ್ತು.  ಯುವಕರಿಬ್ಬರೂ. ತಾಯಿಗೆ ತಿಳಿಸದೆ ಬಂದ ತಮ್ಮ ತಪ್ಪಿಗೆ ಪಶ್ಚಾತ್ತಾಪಪಡುತ್ತಿದ್ದರು. ಅವರ ಯಾವ ಕೋರಿಕೆಗಳೂ ಕಟುಕರ ಮನಸನ್ನು ಬದಲಾಯಿಸಲಿಲ್ಲ...ಮಧ್ಯರಾತ್ರಿಯ ಕತ್ತಲಿನಲ್ಲಿ , ಯುವಕರ ದೇಹಗಳು ಶೂಲದಲ್ಲಿ ನೇತಾಡಿದವು !.  ಲಕ್ಷ್ಮಣ-ವೀರೇಶರ ಪ್ರಾಣಪಕ್ಷಿ ಹಾರಿಹೋಗಿತ್ತು.  ಉದ್ಯಾನವನ ಶೂಲವನವಾಯಿತು.

_______________________+_______________________

ಬೆಳಗಿನ ಸಮಯದಿಂದ ಕಾಣೆಯಾಗಿದ್ದ ತನ್ನ ಮಕ್ಕಳನ್ನು  ಹುಡುಕಿಸಲು ಹರಿಯಾಳ ದೇವಿಯು ಕಳುಹಿಸಿದ್ದ ಭಟರೆಲ್ಲಾ ಬರಿಗೈಯಲ್ಲಿ ಹಿಂತಿರುಗಿದ್ದರು.  ಆ ರಾತ್ರಿಯು ಅವಳಿಗೆ ನಿದ್ರೆ ಹತ್ತಿರಲಿಲ್ಲ. ನಸುಕಿನವರೆಗೂ, ಆಕೆ ತನ್ನ ಮಕ್ಕಳಳೀರ್ವರ ಯೋಚನೆಯಲ್ಲೇ ಕಾಲಕಳೆದಿದ್ದಳು. ಆಯಾಸದಿಂದ ನಸುಕಿನಲ್ಲಿ ನಿದ್ರೆಯ ಜೊಂಪು ಹತ್ತಿದ್ದ ಹರಿಯಾಳ ರಾಣಿಯು ದುಃಸ್ವಪ್ನವೊಂದನ್ನು ಕಂಡಂತೆ ಚಿಟ್ಟನೆ ಚೀರಿಕೊಂಡು ಎದ್ದಳು...
______________+_________________________________


(ಮುಂದುವರಿಯುತ್ತದೆ..)


(ಮುಂದಿನ ಭಾಗ ಕೊನೆಯ ಕಂತಾಗಿ ಬರಲಿದೆ..! ಅಲ್ಲಿಯವರೆಗೆ ಬೀಳ್ಕೊಡಿ..)


ವಂದನೆಗಳೊಂದಿಗೆ...