Mar 31, 2010

ಋಗ್ವೇದದ ಜ್ಞಾನ ಮತ್ತು ವಿಜ್ಞಾನ.

ಕಾಲ:

ಚತುರ್ವೇದಗಳಲ್ಲಿ ಅತ್ಯಂತ ಪುರಾತನವಾದ ಮತ್ತು ಮೊದಲನೆಯ ವೇದವೇ ಋಗ್ವೇದ. ದೇವನಾಗರಿ ಲಿಪಿಯಲ್ಲಿ ಮತ್ತು ಸಂಸ್ಕೃತ ಭಾಷೆಯಲ್ಲಿ ತಾಳೆಗರಿ (ತಾಡಪತ್ರ) ಗಳ ಮೇಲೆ ವೈದಿಕರು ಮತ್ತು ಋಷಿಗಳಿಂದ ಸಲಕ್ಷಣವಾಗಿ ಬರೆದಿಡಲ್ಪಟ್ಟ ಋಗ್ವೇದದ ಮೂಲಪ್ರತಿಗಳು ಲಭ್ಯವಿದ್ದರೂ, ಇವುಗಳು ಋಗ್ವೇದದ ಕಾಲದಲ್ಲೇ ಬರೆಯಲ್ಪಟ್ಟಿವೆಯೆಂದು ಹೇಳಲು ಸೂಕ್ತ ಆಧಾರಗಳು ದೊರೆಯುವುದಿಲ್ಲ. ಗುರುಕುಲ ಪದ್ದತಿಯನ್ನು ಅನುಸರಿಸಿ ಕಾಲಾನುಕ್ರಮದಲ್ಲಿ ಬಾಯಿಂದ ಬಾಯಿಗೆ ಹರಿದುಬಂದ ವೇದವಾಕ್ಯಗಳು ಯಾವುದೋ ಒಂದು ಸಮಯದಲ್ಲಿ ಋತ್ವಿಜರಿಂದ ಬರೆದಿಡಲ್ಪಟ್ಟಿದೆಯೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಋಗ್ವೇದದ ಕಾಲವನ್ನು ಹೇಳಲು ಇತಿಹಾಸತಜ್ಞ ಮತ್ತು ಸಂಶೊಧಕನಾದ "ಮ್ಯಾಕ್ಸ್ ಮುಲ್ಲರ್ " ಕೆಲವೊಂದು ಆಕರಗ್ರಂಥಗಳನ್ನು ಪರಿಶೀಲಿಸುತ್ತಾನೆ. ಅವನ ಪ್ರಕಾರ ಕ್ರಿ.ಪೂ. ೧೫೦೦ ರಿಂದ ಕ್ರಿ.ಪೂ. ೫೦೦ ಎಂದು ನಿರ್ಧರಿಸಲಾಗುತ್ತದೆ. ಆದರೆ ತನ್ನ ಅಂತ್ಯಕಾಲದಲ್ಲಿ ಮುಲ್ಲರನೇ ಈ ಕಾಲವನ್ನು ತಪ್ಪೆಂದು ತಿಳಿಸಿಬಿಡುತ್ತಾನೆ. ನಂತರ ಸಿಂಧೂ ಕಣಿವೆ, ಹರಪ್ಪ- ಮೊಹೆಂಜೊದಾರೋ  ಮುಂತಾದ ನಾಗರೀಕತೆಗಳ ಆಧಾರದಲ್ಲಿ ಕ್ರಿ.ಪೂ. ೩೦೦೦ ನೆ ಇಸವಿ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ನಂತರ ಇದೇ ನಾಗರೀಕತೆಗಳ ’ಸೆಟೆಲೈಟ್’ ಭಾವಚಿತ್ರಗಳ ಅಧ್ಯಯನದ ಮೂಲಕ ಋಗ್ವೇದದ ಕಾಲವನ್ನು ೩೧೦೦ ಅಥವ ಇನ್ನೂ ಪುರಾತನವಾದುದೆಂದು ನಿರ್ಧರಿಸಲಾಗುತ್ತದೆ.  ಆಧ್ಯಾತ್ಮ ಹಾಗೂ ಪೌರಾಣಿಕ ಹಿನ್ನಲೆಯಲ್ಲಿ ಗಮನಿಸಿದರೆ ಋಗ್ವೇದದ ಕಾಲವನ್ನು ಕೃತಯುಗದಿಂದಾಚೆಯೂ ಊಹಿಸಬಹುದು !. ಋಗ್ವೇದದ  ಕಾಲದ ಬಗೆಗಿನ ಜಿಜ್ಞಾಸೆ ಏನೇ ಇರಲಿ...ಅದರೊಳಗಿನ ವಿಚಾರಗಳಂತೂ ಸಾರ್ವಕಾಲಿಕ ಉಪಯುಕ್ತತೆಯನ್ನು ಹೊಂದಿದೆ.

ವಿಶಿಷ್ಟತೆ :

ಋಕ್ಕುಗಳಿಂದ ( ಸೂಕ್ತ ಅಥವ ವಾಕ್ಯಗಳು ) ಕೂಡಿರುವ , ಸಂಸ್ಕೃತ ಭಾಷೆಯಲ್ಲಿ ಹೇಳಲ್ಪಟ್ಟಿರುವ ಪ್ರಕೃತಿದತ್ತ ವಿಚಾರಗಳೇ ಋಗ್ವೇದ. ಹಲವಾರು ಜಾಗತಿಕ ಕ್ರಾಂತಿಗಳ ನಂತರ ಹುಟ್ಟಿದ ಸಹೋದರತೆ, ಸ್ತ್ರೀಸ್ವಾತಂತ್ರ್ಯ, ವೈಜ್ಞಾನಿಕ ಸಂಶೊಧನೆ, ಶಾಂತಿ, ಸಹಬಾಳ್ವೆ ಮುಂತಾದ ವಿಚಾರಗಳು ಅತ್ಯಂತ ಪುರಾತನವಾದ ಋಗ್ವೇದ ಕಾಲದಲ್ಲೇ ಹೇಳಲ್ಪಟ್ಟಿದೆ. ಮೂಲ ಸಂಹಿತೆ (ಗ್ರಂಥ) ಯಲ್ಲಿ ಸ್ವರಪ್ರಸ್ತಾರಗಳ ಸಹಿತ ’ಮಂತ್ರ’ ಗಳಂತೆ ವಿಷಯಗಳನ್ನು ಹೇಳಿರುವುದರಿಂದ ಈ ಸೂಕ್ತಗಳನ್ನು ಮಂತ್ರಗಳಾಗಿಯೂ ಪರಿಗಣಿಸಬಹುದು. ಆಧ್ಯಾತ್ಮಿಕವಾಗಿ ಋಗ್ವೇದದ ವಿಚಾರ ಸಾಗರಕಿಂತ ಅಗಾಧ.
"ಅಗ್ನಿಮೀಳೆ ಪುರೋಹಿತಂ ...." ಎಂದು ಪ್ರಾರಂಭವಾಗುವ ಋಗ್ವೇದದ ಮೊದಲನೆಯ ವಾಕ್ಯದಲ್ಲಿ ಯಾವ ಪುರೋಹಿತನ ಪ್ರಸ್ತಾಪವೂ ಇಲ್ಲ. ಸರಳವಾಗಿ ಹೇಳುವುದಾದರೆ, ಅಗ್ನಿಯು ತನಗರ್ಪಿತವಾದುದನ್ನು ತಲುಪಿಸುವಲ್ಲಿಗೆ ತಲುಪಿಸುತ್ತಾನೆ, ಅಥವ ತಲುಪಿಸು ಎಂದು ಪ್ರಾರ್ಥಿಸುವ ವಿವರಣೆಯಿದೆ. ಹೀಗೆ ಸುಮಾರು ೧೦೫೫೨ ಋಕ್ಕುಗಳು ( ಮಂತ್ರ), ೧೦೨೮ ಸೂಕ್ತಗಳನ್ನು ಒಳಗೊಂಡಿರುವ ಋಗ್ವೇದ ಸಂಹಿತೆಯನ್ನು (ಗ್ರಂಥ) ೧೦ ಮಂಡಲಗಳಾಗಿ (ವಿಭಾಗ) ವರ್ಗೀಕರಿಸಲಾಗಿದೆ. ಒಂದೊಂದು ಸೂಕ್ತದಲ್ಲಿಯೂ ಪ್ರಕೃತಿಯ ವರ್ಣನೆ, ಉಪಯೋಗ ಮತ್ತು ಅನುಷ್ಠಾನಗಳನ್ನು ದೃಷ್ಟಾರರು ( ಬರೆದವರು) ವಿವರಿಸಿದ್ದಾರೆ    .

ರಚನಕಾರರು :

ಋಗ್ವೇದದ ರಚನಕಾರರನ್ನು ದೃಷ್ಟಾರರು ಎಂದು ಕರೆಯಲಾಗುತ್ತದೆ. ಮೊದಲನೆಯ ಸೂಕ್ತದ ರಚನಕಾರರಾದ ಮಾಧುಚ್ಛಂದಾ-ವೈಶ್ವಾಮಿತ್ರರಿಂದ ಪ್ರಾರಂಭವಾಗಿ ಆಂಗೀರಸ, ಭಾರಧ್ವಾಜ, ಬಾರ್ಹಸ್ಪತ್ಯ, ವಸಿಷ್ಠ,  ಅಗಸ್ತ್ಯ, ಮೈತ್ರಾವರುಣಿ ಇತ್ಯಾದಿ ಅನೇಕ ’ಋಷಿ’ ಗಳು ಸಂಹಿತೆಯ ರಚನೆಯಲ್ಲಿ  ಕಂಡುಬರುತ್ತಾರೆ.

ದೇವತೆಗಳು :

ಋಗ್ವೇದದಲ್ಲಿ ಹೆಚ್ಚಿನಪಾಲು ’ಅಗ್ನಿ’ ಗೆ ಸಲ್ಲುತ್ತದೆ. ಪ್ರಕೃತಿಯ ಶಕ್ತಿಗಳಾದ ಅಗ್ನಿ, ವಾಯು, ಜಲ, ಬೆಳಕು (ಸೂರ್ಯ-ಸವಿತೃ ), ಸಂಪತ್ತು, ಮಳೆ, ಭೂಮಿ ಹೀಗೆ ಎಲ್ಲಾ ಪ್ರಾಕೃತಿಕ ಶಕ್ತಿಗಳನ್ನೂ , ಆಯಾ ಶಕ್ತಿಗಳ ಮಹತ್ವವನ್ನೂ ವಿವರಿಸುತ್ತಾ ಈ ಶಕ್ತಿಗಳಿಗೆ ದೈವತ್ವವನ್ನು ಕೊಟ್ಟು ಮೌಲ್ಯವರ್ಧಿತವಾಗುವಂತೆ ವಿವರಿಸಿದ್ದಾರೆ. ಪ್ರಕೃತಿಯನ್ನು ಅದರ ಶಕ್ತಿಯನ್ನು ಗೌರವಿಸಿ , ಉಳಿಸಿ-ಬೆಳಸಿಕೊಳ್ಳುವ ಮನೋಭಾವ ಉಂಟುಮಾಡುವ ಉದಾತ್ತ ಧ್ಯೇಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಹಾಗೆಯೇ ಈ ಶಕ್ತಿಗಳನ್ನು  ಇಂದ್ರ , ಅಗ್ನಿ, ಪ್ರಾಣ,  ವಾಯು, ಸೋಮ , ವರುಣ, ಪೃಥಿವೀ ಮುಂತಾದ ಹೆಸರುಗಳಿಂದ ದೇವತೆಗಳನ್ನಾಗಿ ವರ್ಣಿಸಲಾಗಿದೆ.
ಪರಿಪೂರ‍್ಣ ಜ್ಞಾನವನ್ನು ಇಂದ್ರನೆಂದು ಹೇಳಿದರೆ , ಪ್ರಾಣೋತ್ಪಾದಕನ್ನು ವಾಯು ಎನ್ನುತ್ತಾರೆ. ಅಗ್ನಿಗೆ ಸಂವಹನ ಶಕ್ತಿಯನ್ನು ನೀಡಿ ಸೋಮನಿಗೆ ಅತೀಂದ್ರಿಯ ಶಕ್ತಿಗಳ ಒಡೆಯನ ಸ್ಥಾನವನ್ನು ನೀಡಲಾಗಿದೆ. ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಇದೊಂದು ರೀತಿಯಲ್ಲಿ  Parliment Cabinet ಇದ್ದಂತೆ !.

ಮಹಿಳೆಯರ ಪ್ರಾಧಾನ್ಯತೆ

ವೇದಗಳ ಕಾಲದಲ್ಲಿ ಮಹಿಳೆಯರನ್ನು ಕಡೆಗಣಿಲಾಗಿತ್ತು ಎನ್ನುವ ವಾದವನ್ನು ಋಗ್ವೇದ ಸುಳ್ಳುಮಾಡುತ್ತದೆ. ಇಲ್ಲಿ ಮಹಿಳೆಯರಿಗೆ ಋಷಿಕೆಯರ (ಋಷಿ ಪತ್ನಿಯರು) ಸ್ಥಾನವನ್ನು ನೀಡಲಾಗಿದೆ. ಇವರು ಹವನಗಳನ್ನೂ ನೇರವೇರಿಸುತ್ತಿದ್ದರು ಎಂಬುದಕ್ಕೆ ವೇದಗಳಲ್ಲೇ ಆಧಾರಗಳಿವೆ.  ಋಷಿಕೆಯರಿಂದ ರಚಿತವಾಗಿರುವ ಸೂಕ್ತಗಳಲ್ಲಿ ಅತ್ಯಂತ ಅರ್ಥಪೂರ್ಣ ವಿವರಣೆಗಳಿವೆ. ’ವಾಗಾಂಭೃಣಿ’ ಎನ್ನುವ ಋಷಿಕೆಯಿಂದ ರಚಿತವಾಗಿರುವ "ದೇವಿ ಸೂಕ್ತ"  ಒಂದು ಚಿಕ್ಕ ಉದಾಹರಣೆಯಷ್ಟೆ.  ಮನೆಗೆ ಆಗತಾನೆ ಮದುವೆಯಾಗಿ ಬಂದ ಸೊಸೆಯನ್ನು ಮಹಾರಾಣಿ ( ಸಾಮ್ರಾಜ್ಞಿ) ಯಂತೆ ಕಾಣು ಎನ್ನುವ ಸೂಕ್ತವೂ ಇಲ್ಲಿ ದೊರೆಯುತ್ತದೆ. ಮಹಿಳೆಯರಿಗೆ ಸಿಗಲೇಬೇಕಾದ ಎಲ್ಲಾ ಗೌರವಾದರಗಳೂ ಋಗ್ವೇದಕಾಲದಲ್ಲೇ ಅನುಷ್ಠಾನದಲ್ಲಿತ್ತೆಂದು ಅಧ್ಯಯನದಿಂದ ತಿಳಿಯಬಹುದು.

ತಾಂತ್ರಿಕತೆ.

ತಾಂತ್ರಿಕತೆ ಕುರಿತಂತೆ ಹಲವಾರು ವಿಷಯಗಳು ಋಗ್ವೇದದಲ್ಲಿ ಪ್ರಸ್ತಾಪವಾಗಿದೆ. ಒಂದೆರಡು ವಿಷಯಗಳನ್ನಷ್ಟೇ ಇಲ್ಲಿ ಹೇಳುತ್ತೇನೆ.

೧) ಪ್ರತಿಯೊಂದು ಋತುವಿಗೂ (ಕಾಲಕ್ಕೂ)  ಸಂಬಂಧಿಸಿದಂತೆ ಯೋಗ್ಯ ಹವಾಮಾನದ ಸ್ಥಿತಿಯ ವಿವರವನ್ನು ಕೊಡುವುದು, ಅಯಾ ಋತುವಿನಲ್ಲಿ (ಕಾಲದಲ್ಲಿ) ಗಾಳಿ ಬೀಸುವ ದಿಕ್ಕು, ವೇಗ, ಮಳೆಯ ಲಕ್ಷಣ, ಇವುಗಳಿಂದ ಮುಂದೆ ಉಂಟಾಗಬಹುದಾದ ಪರಿಣಾಮ ..ಇವುಗಳನ್ನು ಹೇಗೆ ಅಧ್ಯಯನ ಮಾಡಬಹುದೆಂಬುದನ್ನು ಸೂಕ್ತಗಳ ಮೂಲಕ ವಿವರಿಸಲಾಗಿದೆ.

೨) ಅಗ್ನಿಯನ್ನು ಬಳಸಿ ವಸ್ತುಗಳನ್ನು ನಭಕ್ಕೆ ಚಿಮ್ಮಿಸುವ ( Rocket launching ??) ತಾಂತ್ರಿಕತೆಯ ಕೆಲವು ವಿವರಣೆಯನ್ನೂ ಪಡೆಯಬಹುದು.

೩) ಅಗ್ನಿಯನ್ನು ಸ್ತುತಿಸಿ ಮತ್ತು ಶಕ್ತಿಯನ್ನು ಬಳಸಿ ಮಾಡುವ ಹವನದಿಂದ ಹೇಗೆ ಮಳೆಯನ್ನು ತರಿಸಬಹುದು ಎಂಬುದನ್ನೂ ಸಹ ವರ್ಣಿಸಲಾಗಿದೆ. ವೈಜ್ಞಾನಿಕ ವಿಧಾನಗಳನ್ನೇ ಇಲ್ಲಿ ಸೂಕ್ತಗಳ ರೂಪದಲ್ಲಿ ದೃಷ್ಟಾರರು ಕಂಡುಕೊಂಡು ವಿವರಿಸಿದ್ದಾರೆ.
ಇಂದಿನ ಆಧುನಿಕ ಮೋಡಬಿತ್ತನೆ ( Cloud seeding) ಕಾರ್ಯಕ್ಕೆ ಬಳಸುವ ರಾಸಾಯನಿಕಗಳು , ಋಗ್ವೇದಕಾಲದಲ್ಲಿ ಗಿಡಮೂಲಿಕೆಗಳಿಂದ, ಸಮಿತ್ತುಗಳಿಂದ ( ಕೆಲವು ವಿಶೇಷ ಮರಗಳ ಕಡ್ಡಿಗಳು) ಪಡೆಯಲಾಗುತ್ತಿತ್ತು ಎನ್ನುವುದನ್ನೂ ಗಮನಿಸಬಹುದು.  ಇಲ್ಲಿ ಗಮನಿಸಬೇಕಾಗಿರುವ ಮತ್ತೊಂದು ಅಂಶವೆಂದರೆ , ಇಂತಹ ಸೂಕ್ತಗಳಲ್ಲಿರುವ ವಿಷಯಗಳ "ಸಮರ್ಪಕ ಮತ್ತು ಸಕರ್ಮಕ ಅನುಷ್ಠಾನ " .

೪) ಮಂತ್ರದಿಂದ ಮಳೆ ಬರಿಸಲು ಸಾಧ್ಯವೇ ? ಇದು ಎಲ್ಲಾ ವಿಜ್ಞಾನಿಗಳ ಮೂಲಭೂತ ಪ್ರಶ್ನೆ .  ಇದಕ್ಕೆ ಋಗ್ವೇದದಲ್ಲಿಯೇ ಉತ್ತರವಿದೆ. ವೇದದಲ್ಲಿಯ ಸೂಕ್ತಗಳನ್ನು ಕೇವಲ ಔಪಚಾರಿಕ ಮಂತ್ರಗಳೆಂದು ಸ್ವೀಕರಿಸದೆ ವಿಚಾರಗಳೆಂದು ಗಣಿಸಿ , ಆಳವಾದ ಸಂಶೋಧನೆಗಳಿಂದ ಧೃಡಪಡಿಸಿಕೊಂಡರೆ "ಪ್ರಯೋಗ" ಎನ್ನುವ ತಾಂತ್ರಿಕತೆಯು ದೊರಕುತ್ತದೆ. ಇಂತಹ "ಪ್ರಯೋಗ"ಗಳ ಜ್ಞಾನವು ಇಂದು ಲುಪ್ತವಾಗಿ ಹೋಗಿದೆ. ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳಿಂದಷ್ಟೇ ಮರಳಿ ಪಡೆಯಬಹುದಾಗಿದೆ.

೫) ವಿಶ್ವ ಸೃಷ್ಟಿಯ ವಾದ (ಬಿಗ್ ಬ್ಯಾಂಗ್) ಮತ್ತು ವಿಷಯಗಳಿಗೆ ವೇದದಲ್ಲಿ ವಿವರಣೆಯಿದೆ. Nuclear fusion ಮತ್ತು Fission ನಿಂದ ಹೇಗೆ ಹಂತ-ಹಂತ ವಾಗಿ ಜಗತ್ತು ಸೃಷ್ಟಿಯಾಯಿತು ಎಂದು ಹೇಳಲಾಗಿದೆಯೋ, ಅದನ್ನೇ ಇಲ್ಲಿ..ಮೊದಲು ಜ್ಯೋತಿಯ ಉಗಮ, ನಂತರ ರಾತ್ರಿ, ಆಕಾಶ, ಸಮಯ, ಸೂರ್ಯ , ಚಂದ್ರ, ಆಕಾಶಕಾಯಗಳು ಮತ್ತು ಭೂಮಿಯ ಸೃಷ್ಟಿಯಾಯಿತೆಂದು ಹೇಳಲಾಗಿದೆ. ಸಮಯದ ಸೃಷ್ಟಿ ಮತ್ತು ಚಲನೆಯ ಸೂಕ್ಷ್ಮ ವಿಚಾರಗಳನ್ನೂ ಪ್ರಸ್ತಾಪಿಸಲಾಗಿದೆ.
 (  ಬಹು ಪ್ರಖ್ಯಾತ , ಸ್ಟೀಫನ್ ಹಾಕಿಂಗ್ ಬರೆದಿರುವ ಪುಸ್ತಕ A Breif History Of Time ನಲ್ಲಿರುವ ಅನೇಕ ವಿಷಯಗಳು ಋಗ್ವೇದದಲ್ಲಿಯೇ ಪ್ರಸ್ತಾಪವಾಗಿದೆ ಎಂದರೇ..ನೀವು ನಂಬಲೇ ಬೇಕು..!)

ಮನಃಶಾಸ್ತ್ರ:

ಋಗ್ವೇದದ ದೃಷ್ಟಾರರು ಮನುಷ್ಯಜೀವಿಯನ್ನು ದೈವತ್ವದ ಪ್ರತೀಕವೆಂದು ಪರಿಗಣಿಸುತ್ತಾರೆ. ಮನುಷ್ಯನ ಅಂಗಗಳಿಗೂ, ಭಾವನೆಗಳಿಗೂ ಅತ್ಯಂತ ನಿಕಟ ಸಂಪರ್ಕವನ್ನು ಕಲ್ಪಿಸುತ್ತಾರೆ. ಇಚ್ಚೆಗಳು, ಭಾವೋದ್ರೇಕಗಳು, ಅಧಿಕಾರ ದಾಹ, ಕೋಪ, ಮುನ್ನುಗ್ಗುವ ಪ್ರವೃತ್ತಿ, ಶಾಂತಿ, ಮನಃಕೇಂದ್ರೀಕರಣ ಇತ್ಯಾದಿಗಳು ದೇಹದ ಆವರಣಗಳಿಂದ ಹೇಗೆ ಬಿಡುಗಡೆಗೊಳ್ಳುತ್ತವೆ ಮತ್ತು ಅದಕ್ಕೆ ಸಂಬಂಧಪಡುವ ಅಂಗಗಳ ( Organs and Harmones) ಕಾರ್ಯವಿಧಾನವನ್ನು ವಿವರಿಸುತ್ತಾರೆ.
ವ್ಯಕ್ತಿಯು ವಿವೇಚನೆ ಮಾಡುವಾಗ ಮನಸ್ಸಿನ ಲೋಕದಲ್ಲಿ ಸಂವಹಿಸುತ್ತಾನೆ, ಪ್ರೀತಿಯಂತಹ ಭಾವನೆಗಳಿರುವಾಗ ಅಂತರಿಕ್ಷದೊಡನೆ ಸಂಸರ್ಗಿಸುತ್ತಾನೆ, ಬುದ್ದಿಜೀವಿಗಳೆಂದು ಕರೆಯಲ್ಪಡುವವರು ಜೀವಶಕ್ತಿ ಮತ್ತು ಮನಸ್ಸಿನ ಲೋಕದೊಂದಿಗೆ ಮಂಥಿಸುತ್ತಾರೆ...ಹೀಗೆ ಮನಸ್ಸಿನ ಹಲವು ತಾಕಲಾಟಗಳಿಗೆ ಋಗ್ವೇದದಲ್ಲಿ ಉತ್ತರ ದೊರೆಯುತ್ತದೆ.

ಖಗೋಳಶಾಸ್ತ್ರ

ಋಗ್ವೇದದಲ್ಲಿ ಖಗೋಳಶಾಸ್ತ್ರಾಧಾರಿತ ವಿಚಾರಗಳು ವಿಸ್ತೃತವಾಗಿದೆ. ಭಾರತೀಯ ಖಗೋಳಶಾಸ್ತ್ರವು ನಕ್ಷತ್ರಮಾನವನ್ನು ಅವಲಂಬಿಸಿದೆ. ಸೂರ್ಯನ ಉತ್ತರ-ದಕ್ಷಿಣ ಚಲನೆಯ ( ಭೂಮಿ ತಿರುಗುವಿಕೆಯಿಂದ ಉಂಟಾಗುವ) ಕಾಲಘಟ್ಟಗಳನ್ನು ವೇದದಲ್ಲಿ ಸಂಕ್ರಮಣಗಳೆಂದು ಹೇಳುತ್ತಾ , ನಿರ್ಧಿಷ್ಟ "ಡಿಗ್ರಿ" ಗಳನ್ನು ಹೇಗೆ ಗುರುತಿಸಬಹುದು ಎಂದು ವಿವರಿಸುತ್ತಾರೆ. ರಾಶಿ ಚಕ್ರವನ್ನು ೨೭ ಸಮಭಾಗಗಳನ್ನಾಗಿಸಿ  ಈ ಡಿಗ್ರಿ ಗಳನ್ನು ಗುರುತಿಸಬಹುದಾದ ಅಂಶಗಳನ್ನು ವಿವರಿಸುತ್ತಾರೆ. ಇನ್ನು ಅಗ್ನಿ, ವಾಯು, ಮೇಘ, ಆಕಾಶಕಾಯಗಳು, ನಕ್ಷತ್ರಗಳು, ಮುಂತಾದವುಗಳ ಉಗಮ ಮತ್ತು ಶಕ್ತಿಯನ್ನು ಸಾಂಕೇತಿಕವಾಗಿ  ವಿವರಿಸಲಾಗಿದೆ. ಗಣಿತ ಶಾಸ್ತ್ರದ ವೃತ್ತಗಳು, ಪರಿಧಿ, ವ್ಯಾಸ, ಚೌಕಗಳು ಮುಂತಾದವುಗಳನ್ನು ಯಾವ ಪ್ರಮಾನದಲ್ಲಿ ರಚಿಸಬೇಕು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

    ಹೀಗೆ , ಇಂದಿನ ವೈಜ್ಞಾನಿಕ ಸಂಶೋಧನೆಯಿಂದ ದೊರಕುತ್ತಿರುವ  ವಿಚಾರಗಳು ಪ್ರಾಚೀನ ಋಗ್ವೇದದಲ್ಲಿಯೇ ಹೇಳಲ್ಪಟ್ಟಿರುವುದು, ಅಂದಿನೆ ಸಾಧಕರಲ್ಲಿದ್ದ ಪರಿಪೂರ್ಣ ಜ್ಞಾನವನ್ನು ತೋರಿಸಿಕೊಡುತ್ತದೆ. ಅಂದು ಸಂಸ್ಕೃತ ಭಾಷೆಯಲ್ಲಿ ಹೇಳಿದುದು ಇಂದು ನಂಬಿಕೆಯ ಕೊರತೆಯಿಂದಾಗಿಯೋ ಅಥವ ಅಜ್ಞಾನದಿಂದಾಗಿಯೋ ವೇದಗಳು ಕೇವಲ ಪುರೋಹಿತರಿಗೆ , ಬ್ರಾಹ್ಮಣರಿಗೆ ಮತ್ತು ಆ ಕಸುಬು ನೆಡೆಸುವವರಿಗೆ ಮಾತ್ರ ಎಂಬ ಪರಿಸ್ಥಿತಿಯು ಉಂಟಾಗುತ್ತಿದೆ. ವೇದಾರ್ಥವನ್ನೇ       ತಿಳಿಯದ ಸ್ವಯಂಘೋಷಿತ ಬುದ್ಧಿಜೀವಿಗಳು ಮತ್ತು ಕೆಲವು ಪುರೋಹಿತಶಾಹಿಗಳು, ವೇದಗಳನ್ನು ಅಸ್ಪೃಶ್ಯತೆಯೆಡೆಗೆ ತಳ್ಳುತ್ತಿದ್ದಾರೆ. ವೇದಾರ್ಥಗಳು ಸಂಕೀರ್ಣವಾಗಿದ್ದರೂ, ಯಾವುದೇ ತಾಂತ್ರಿಕ ಕೋರ್ಸ್ ಮಾಡುವಾಗಿನ ಅಧ್ಯಯನವನ್ನು ಇದಕ್ಕೆ ಮೀಸಲಿಟ್ಟರೆ, ವೇದದ ನಿಜವಾದ ಅರ್ಥ ಗೋಚರಿಸುತ್ತದೆ. ವಿದೇಶಿ ಸಂಶೋಧನೆಗಳಿಗೇ ಮಣೆ ಹಾಕುವ ಮಂದಿ, ಅಂತಹ ಎಲ್ಲಾ ವೈಜ್ಞಾನಿಕ ವಿಷಯಗಳೂ ನಮ್ಮ ವೇದಗಳಲ್ಲೇ ಪ್ರಸ್ತಾಪವಾಗಿದೆ ಎನ್ನುವುದನ್ನು ಮನಗಾಣಬೇಕಿದೆ. ವೇದಗಳನ್ನು ಕೇವಲ ಆಧ್ಯಾತ್ಮಕ್ಕೆ ಮಾತ್ರ ಮೀಸಲಿಡದೆ , ಹೊರ ಜಗತ್ತಿಗೆ ವಿಶಿಷ್ಟ ರೀತಿಯಲ್ಲಿ ತೆರೆದಿಡುವ  ಪ್ರಯತ್ನ ಮಾಡಿದರೆ ವೇದ ರಚನೆಯಾದುದಕ್ಕೆ ಸಾರ್ಥಕಭಾವ ಬರುತ್ತದೆ. ವೇದಾಧ್ಯಯನ ಕೇವಲ ಮಠ-ಮಂದಿರಗಳಿಗೆ ಸೀಮಿತವಾಗಿ ಅಲ್ಲಿಯೇ ಹುಟ್ಟಿ,  ಅಲ್ಲೇ ಮಣ್ಣಾಗುವ ಬದಲು ಪ್ರಂಪಚಕ್ಕೆ ತೆರೆದುಕೊಂಡರೆ ಭಾರತೀಯ ಸನಾತನ ಸಂಸ್ಕೃತಿಯ ಅರಿವು ಉಜ್ವಲವಾಗುತ್ತದೆ. ವೇದಗಳು ಯಾರ ಸ್ವತ್ತೂ ಅಲ್ಲ ಎನ್ನುವುದರ ಅರಿವು ಮೊದಲು  ಮೂಡಬೇಕಾಗಿದೆ , ಮತ್ತು ನಾಲ್ಕಾರು ವೇದಸೂಕ್ತಗಳನ್ನು ಬಾಯಲ್ಲಿ ಹರಟಿಕೊಂಡು Psueodo Scientific theory  ಗಳನ್ನು ಹೇಳಿಕೊಂಡು ಸಾಮಾನ್ಯರಿಂದ ವೇದಗಳನ್ನು ದೂರವಿಡುವ ಪದ್ಧತಿ ಹಿಂದಿಗಿಂತಲೂ ಇಂದೇ ಹೆಚ್ಚಾಗಿ ತೋರುತ್ತಿದೆ. ಇದಕ್ಕೆ  ದೂರದರ್ಶನ ಮಾಧ್ಯಮಗಳು ಸಂಪೂರ್ಣ ಕೊಡುಗೆ ನೀಡುತ್ತಿದೆ ಎನ್ನುವುದು ಅನುಮಾನಕ್ಕಾಸ್ಪದವಿಲ್ಲದ ವಿಚಾರ......... "  ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ? "...

ಋಗ್ವೇದದ ವಿಚಾರಗಳನ್ನು ಆಧ್ಯಾತ್ಮದಿಂದ ಹೊರಗಿಟ್ಟು ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ವೇದಗಳನ್ನು ಅರ್ಥಮಾಡಿಕೊಳ್ಳುವ ಬಗೆ ಮತ್ತು ಅದರ ಮಹತ್ವಗಳನ್ನು ತಿಳಿಸಲೋಸುಗ ಬ್ಲಾಗ್ ಲೋಕದ ಕೆಲವು ಮಿತ್ರರು ವೇದಸುಧೆ  ಎಂಬ ತಾಣವನ್ನು ಹುಟ್ಟುಹಾಕಿದ್ದಾರೆ. ಅಲ್ಲಿಗೂ ಭೇಟಿ ಕೊಡಿ ಎಂದು ವಿನಂತಿಸುತ್ತೇನೆ. ವೇದಗಳ ಆಧ್ಯಾತ್ಮಿಕ ವಿವರಣೆಗಳು ಅಲ್ಲಿ ಲಭ್ಯವಾಗುತ್ತಿದೆ.
ಇಲ್ಲಿ ಋಗ್ವೇದದ ಯಾವ ಸೂಕ್ತಗಳನ್ನೂ ಉದಾಹರಣೆಯಾಗಿ ನಾನು ಕೊಡಮಾಡಿಲ್ಲ, ಕಾರಣ ಮೇಲ್ಕಂಡ ವಿಚಾರಗಳು ಸಂಹಿತೆಯ ಎಲ್ಲಾ ಮಂಡಲಗಳಲ್ಲೂ ಹಂಚಿಹೋಗಿವೆ. ಒಮ್ಮೆ ಋಗ್ವೇದ ಸಂಹಿತೆಯನ್ನು ಮನನ ಮಾಡಿದರೆ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಮಸ್ಯೆಗಳಿಗೆ ತಕ್ಕಮಟ್ಟಿಗಿನ ಉತ್ತರ ದೊರೆಯುದರಲ್ಲಿ ಸಂದೇಹವಿಲ್ಲ.   ಋಗ್ವೇದದಲ್ಲಿನ ಅನೇಕ ವಿಷಯಗಳು ಇಲ್ಲಿ ಬಿಟ್ಟುಹೋಗಿವೆ. ಸಮಯದ ಹಾಗು ಬ್ಲಾಗ್ ನ ಮಿತಿಗಳಿಂದಾಗಿ ಎಲ್ಲವನ್ನೂ ಇಲ್ಲಿ ವಿವರಿಸುವುದು ಕಷ್ಟಸಾಧ್ಯ.
ಮೂಲ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಮೇಲ್ಕಂಡ ಎಲ್ಲಾ ವಿಚಾರಗಳಿಗೂ ಸಮರ್ಪಕ ವಿವರಣೆಗಳು ದೊರೆಯುತ್ತದೆ.    

ಕೊನೆ ಮರ್ಮ :  ವೇದಸೂಕ್ತಗಳ ಅರ್ಥವನ್ನೇ ಅರಿಯದೆ, ವಿಚಾರ ಮಂಥನವನ್ನೇ ಮಾಡದೆ , ಕೇವಲ ಎತ್ತರದ ಸ್ವರದಲ್ಲಿ , ರಾಗವಾಗಿ ಸೂಕ್ತಗಳನ್ನು ಹೇಳಿಕೊಂಡು ಪಂಡಿತರೆನಿಸಿಕೊಳ್ಳುವುದರಿಂದ ಯಾವ ಸ್ವರ್ಗವೂ ಸಿಗಲಾರದೆಂದು ಭಾವಿಸುತ್ತೇನೆ. ಇಷ್ಟಕ್ಕೂ ಋಗ್ವೇದದಲ್ಲಿ ಸ್ವರ್ಗ-ನರಕಗಳ ಪ್ರಸ್ತಾಪವೇ ಬರುವುದಿಲ್ಲ !. ಕೇವಲ ಪುರೋಹಿತಶಾಹಿಗಳ, ಒಂದು ವರ್ಗದ ಅಥವ ಸ್ವಯಂಘೋಷಿತ ಬುದ್ಧಿಜೀವಿಗಳ ಅಧ್ಯಯನಕ್ಕಷ್ಟೇ ವೇದಗಳು ಮೀಸಲಲ್ಲ ಎನ್ನುವುದು ಜಗತ್ತಿಗೆ ತಿಳಿಯಬೇಕಿದೆ. ವೇದಗಳು ಪ್ರಪಂಚಕ್ಕೆ ತೆರೆದುಕೊಂಡಾಗ ಸನಾತನ ಭಾರತೀಯ ಸಂಸ್ಕೃತಿಗೆ ಮತ್ತೊಂದು ಗರಿ ಮೂಡುತ್ತದೆ. ಜೀವಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ದಾರಿದೀವಿಗೆಯಾಗಬಲ್ಲಂತಹ ಉತ್ತಮ ವಿಚಾರಗಳೇ ಋಗ್ವೇದದ ಮೆರುಗೆಂದರೆ ತಪ್ಪಾಗಲಾರದು. ವೇದಗಳು ಬಂಧನದಿಂದ ಹೊರಬರಬೇಕಿದೆ, ಜಗತ್ತಿಗೆ ಪಸರಿಸಬೇಕಿದೆ.

ಲೇಖನದ ಆಧಾರ : ಋಗ್ವೇದ ಸಂಹಿತಾ ಮತ್ತು
                      " Why We Read Rig Veda " by Sri. L.R. Kashyap. U.S.        


----------------*--------------------





ವಂದನೆಗಳೊಂದಿಗೆ...