Jul 27, 2011

ವಿವೇಕ ಚೂಡಾಮಣಿ -೩-ಮುಕ್ತಿಯ ಮಹತ್ವ/The Crest-Jewel of Wisdom



ಗ್ರಂಥದ ಮುಂದುವರಿದ ಭಾಗ.

॥दुर्लभं त्रयमेवैतद् दैवानुग्रहहेतुकम्।
मनुष्यत्वं मुमुक्षुत्वम् महापुरुषसंश्र्यः ॥३||

 ||ದುರ್ಲಭಂ ತ್ರಯಮೇವೈತದ್ ದೈವಾನುಗ್ರಹ ಹೇತುಕಮ್ |
  ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ || ೩||
  

ಈ ಲೋಕದಲ್ಲಿ ಸುಲಭವಾಗಿ ದೊರಕದ (ದುರ್ಲಭವಾದ) ವಿಷಯಗಳನ್ನು ತಿಳಿಸುತ್ತಾ ಶ್ರೀ ಶಂಕರರು ಇನ್ನೂ ಮಹತ್ತರವಾದ ವಿಚಾರವನ್ನು ಪ್ರಸ್ತಾವಿಸುತ್ತಾರೆ.
ಮೇಲಿನ ಶ್ಲೋಕದ ಮೊದಲನೆಯ ಸಾಲನ್ನು ಗಮನಿಸೋಣ

ದುರ್ಲಭಂ ತ್ರಯಮೈವತದ್ ದೈವಾನುಗ್ರಹ ಹೇತುಕಮ್ 
(ದುರ್ಲಭಂ =ಸುಲಭವಾಗಿ ದೊರಕದ, ತ್ರಯಮ್ =ಮೂರು, ದೈವಾನುಗ್ರಹ ಹೇತುಕಮ್ = ದೈವಾನುಗ್ರಹವೇ ಕಾರಣವಾಗಿರುವ )

ದೈವಾನುಗ್ರಹವೇ ಕಾರಣವಾಗಿರುವ ಮೂರು ಮುಖ್ಯ ದುರ್ಲಭವಾದ ಸಂಗತಿಗಳಿವೆ .  ಆ ಸಂಗತಿಗಳನ್ನು ಶ್ಲೋಕದ ಎರಡನೆಯ ಸಾಲಿನಲ್ಲಿ ಹೇಳಲಾಗಿದೆ. ಆ ಎರಡನೆಯ ಸಾಲಿನ ಮೊದಲನೆಯ ಸಂಗತಿಯನ್ನು ಗಮನಿಸೋಣ.

೧) ಮನುಷ್ಯತ್ವಮ್ (= ಮನುಜನಾಗಿರುವುದು)

ಮಾನವ ಜೀವಿಯು 'ಮನುಷ್ಯ' ಎನಿಸಿಕೊಳ್ಳಲು ಆತನಿಗಿರಬೇಕಾದ ಕನಿಷ್ಠ ಅರ್ಹತೆಯೆಂದರೆ ಅದು ಮನುಷ್ಯತ್ವ !. ಕಾಡು ಪ್ರಾಣಿಗಳ ಗುಣವು ನಾಗರೀಕ ಮಾನವನ ಗುಣವಲ್ಲ. ಈ ಮೊದಲು ಹೇಳಿದಂತೆ ಮಾನವನಿಗೆ ಹೆಚ್ಚಿನ ಗುಣಗಳು ಸಂದಾಯವಾಗಿ ಬಂದಿದ್ದರೆ ಕೆಲವೊಂದನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಗುಣ ಸಂಪಾದನೆಗೆ ಸ್ವಾನುಭವವೂ ದಾರಿಯಾಗಬಲ್ಲುದು ವೇದಾಂತಗಳ ಅರಿವೂ ಬೆಳಕಾಗಬಲ್ಲುದು.  ಸಂವೇದನಾಶೀಲತೆಯೇ ಮನುಷ್ಯತ್ವದ ಮುಖ್ಯ ಲಕ್ಷಣ ಎನ್ನಬಹುದು. ಸಂವೇದನೆ (ನೋವು-ನಲಿವು ಮುಂತಾದವು )ಗಳಿಗೆ ಮನಸ್ಸು-ಬುದ್ಧಿಯನ್ನು ಬಲಿಗೊಡದೆ ಸ್ಥಿತಪ್ರಜ್ಞರಂತೆ ಇರಬೇಕೆಂದು ’ಗೀತೆ’ಯಲ್ಲಿ ಹೇಳಿದ್ದರೂ ಹಾಗೆ ಹೇಳಿರುವ ಸಂದರ್ಭ ಮತ್ತು ಉದ್ದೇಶವನ್ನು ನಾವು ಗಮನದಲ್ಲಿಡಬೇಕಾಗುತ್ತದೆ. ಸೂಕ್ಷ್ಮ ಸಂವೇದನೆಗಳಿಲ್ಲದ ಮಾನವನಲ್ಲಿ ಮನುಷ್ಯತ್ವವನ್ನು ಕಾಣಲು ಸಾಧ್ಯವೆ ?. ನಮ್ಮ ಸುತ್ತಲಿನ ಪರಿಸರದ ಮತ್ತು ನಮ್ಮೊಡನೆ ಜೀವಿಸುವ ಜೀವಿಗಳ ಆಗು-ಹೋಗುಗಳ ವಿಷಯದಲ್ಲಿ ಆಸಕ್ತರಾಗಿರುವುದು, ನೋವು-ನಲಿವುಗಳಲ್ಲಿ ಭಾಗಿಯಾಗುವುದು ಮನುಷ್ಯತ್ವದ ಪ್ರತೀಕ. ಮನುಷ್ಯರಾದ ನಾವು ಮನುಷ್ಯತ್ವವನ್ನು ಸ್ವಾನುಭವದಿಂದಲ್ಲದೆ ಕೇವಲ ಉಪದೇಶಗಳನ್ನು ಕೇಳುವುದರಿಂದಲೇ ಕಂಡುಕೊಳ್ಳಲೆತ್ನಿಸುವುದು ಕಡ್ಡತನವೇ ಸರಿ !. ಗ್ರಂಥದ ಆರಂಭದ ಶ್ಲೋಕದಲ್ಲೇ "ಸ್ವನುಭವೋ" ( ಸು = ಚೆನ್ನಾದ, ಒಳ್ಳೆಯ, ಅನುಭವಃ = ಸಾಕ್ಷಾತ್ಕಾರ, ತಿಳುವಳಿಕೆ) ಎಂದು ಹೇಳಿ ಅದಕ್ಕೆ  ಮಹತ್ವವನ್ನು ನೀಡಲಾಗಿದೆ. ಧ್ಯಾನ (ವಿದ್ಯೆ) ಮತ್ತು ಯೋಗಗಳ ಸಹಾಯದಿಂದ (ಆಚರಣೆಯಿಂದ) ಮನುಷ್ಯತ್ವದ ತಿಳುವಳಿಕೆಯನ್ನು ಪಡೆಯುವ ಮಾರ್ಗವೇ ಉತ್ತಮವೆಂದು ಹೇಳಲಾಗಿದೆ.

೨) ಮುಮುಕ್ಷುತ್ವಮ್ ( = ಮೋಕ್ಷದ ಅಪೇಕ್ಷೆ, ಬಿಡುಗಡೆಯ ಬಯಕೆ )

ಪ್ರಾಪಂಚಿಕ ಸುಖಗಳನ್ನೆಲ್ಲಾ ತೊರೆದು ವೈರಾಗ್ಯವನ್ನು ತಾಳಿದರೆ ಮಾತ್ರ ಮೋಕ್ಷ ದೊರಕುವುದೆಂದಾದರೆ ವಿಶಿಷ್ಟತೆ-ವಿಚಿತ್ರಗಳಿಂದ ಕೂಡಿರುವ ಈ ಲೋಕದಲ್ಲಿ ಹುಟ್ಟುವುದಾದರೂ ಏಕೆ ?! . ಹುಟ್ಟು-ಸಾವುಗಳೆರಡೂ ಸಾಮಾನ್ಯ ಮನುಜನ ಅಂಕೆಯಲ್ಲಿ ಇಲ್ಲದಿರುವುದರಿಂದ ಮೇಲಿನ ಪ್ರಶ್ನೆಗೆ ಸಾಮಾನ್ಯ ಸ್ತರದಲ್ಲಿ  ಉತ್ತರ ದೊರಕುವುದಿಲ್ಲ !.
ಈ ಲೋಕದ ವ್ಯವಹಾರಗಳಲ್ಲಿ ನಾವು ತೊಡಗಿಕೊಂಡಾಗ ಪರಸ್ಪರ ಸಹಕಾರ ಸಂವೇದನೆಗಳು ಏರ್ಪಡುವುದು ಸಹಜ. ಉದಾಹರಣೆಗೆ ;
ನಮ್ಮ ಮನೆಯ ಮುದ್ದಿನ ನಾಯಿಗೆ ಕಾಯಿಲೆಯಾದರೆ ಅದರ ಮೇಲಿನ ವಾತ್ಸಲ್ಯದಿಂದ ಔಷಧಿಗಳನ್ನು ಕೊಟ್ಟು ಉಪಚರಿಸಿ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ( ಇದು ಮನುಷ್ಯತ್ವ).  ನಾಯಿಗೆ ಕಾಯಿಲೆ ಬಂದಾಗ ಬಾಡುವ ಮನಸ್ಸು, ನಾಯಿಯು ಚೇತರಿಸಿಕೊಂಡು ಪ್ರೀತಿಯಿಂದ ಬಾಲವನ್ನು ಆಡಿಸಿದಾಗ ಅರಳುತ್ತದೆ. ನಮ್ಮ ಔಷಧೋಪಚಾರಕ್ಕೆ ಬೆಲೆ ಬರುತ್ತದೆ. ಮನಸ್ಸಿಗೆ ನೆಮ್ಮದಿ ದೊರೆತು ಆತಂಕದಿಂದ ’ಮುಕ್ತಿ’ ಸಿಗುತ್ತದೆ. ಇಂತಹ ಸಣ್ಣ ಸಣ್ಣ ’ಮುಕ್ತಿ’ಗಳೇ ಸಮಷ್ಟಿಯಲ್ಲಿ (ಒಟ್ಟಾರೆ) ಮೋಕ್ಷದ ದಾರಿಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ನಮ್ಮ ಕರ್ತವ್ಯ, ಕರ್ಮಗಳನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ ನಂತರ ದೊರೆಯುವ ನೆಮ್ಮದಿ ಮತ್ತು ಬಿಡುಗಡೆಯ ಆನಂದವನ್ನು ನಾವು ಅನುಭವಿಸಿಯೇ ಅರಿತಿರುತ್ತೇವೆ.  ಕರ್ಮದ ದಾರಿಯಲ್ಲಿ ಇಂತಹ ಬಿಡುಗಡೆಯನ್ನು ಪಡೆಯುತ್ತಾ ಹೋದಂತೆ ಜ್ಞಾನವೂ ವರ್ಧಿಸುತ್ತಾ ಹೋಗುತ್ತದೆ. ಜ್ಞಾನ ಮಾರ್ಗದಿಂದ ಪಡೆಯುವ ನೆಮ್ಮದಿ ಅಥವಾ ಮೋಕ್ಷವು (ಬ್ರಹ್ಮ ಜ್ಞಾನವು) ಕರ್ಮಮಾರ್ಗದಿಂದ ಪಡೆದಿದುಕ್ಕಿಂತಲೂ ಮಿಗಿಲಾದುದಾಗಿರುತ್ತದೆ.  ಪ್ರಾಪಂಚಿಕ ಸುಖಗಳಲ್ಲಿ ತೊಡಗಿಕೊಂಡ ನಂತರ ಆಯಾ ಕರ್ಮಗಳನ್ನು ಪ್ರಾಮಾಣಿಕವಾಗಿ ಮುಗಿಸಿ ನಿರಾಳತೆಯನ್ನು ಹೊಂದಿದರೆ ಕರ್ಮದಿಂದ ಮುಕ್ತರಾಗಬಹುದು ಆದರೆ ಕರ್ಮಮುಕ್ತಿಯು ಯೋಗ್ಯವಲ್ಲದ್ದು ( ಹಲವು ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೊನೆಗೊಮ್ಮೆ ಪೂರಕ ಪರೀಕ್ಷೆಯಲ್ಲಿ ಸಾರಾ ಸಗಟು ೩೫ ಅಂಕಗಳನ್ನು ನೀಡಿ ಪಾಸು ಮಾಡಿದಂತೆ !) ಎನ್ನುವ ಅಭಿಪ್ರಾಯವಿರುವುದರಿಂದ ಜ್ಞಾನದಿಂದಲೇ ಮುಮುಕ್ಷುತ್ವವನ್ನು ಪಡೆಯುವುದು ಉತ್ತಮ ಎಂದು ಹೇಳಲಾಗಿದೆ.  ಹಾಗಾದರೆ ಕರ್ಮ(ಕರ್ತವ್ಯ)ವನ್ನು ಮಾಡದೆ ನೇರವಾಗಿ ಜ್ಞಾನ ಸಂಪಾದನೆಯನ್ನೇ ಮಾಡಬಹುದಲ್ಲಾ ಎಂದುಕೊಂಡರೆ ಅದೂ ತಪ್ಪಾಗುತ್ತದೆ !. ಕರ್ಮವನ್ನು ಮಾಡುವುದರಿಂದ ಮಾತ್ರ ಅದರ ಬಂಧನದಿಂದ ಬಿಡುಗಡೆ ಹೊಂದಬಹುದೇ ಹೊರತು ಮಾಡದೇ ಇರುವುದರಿಂದಲ್ಲ ( ಬ್ಲಾಗ್ ಪೋಸ್ಟನ್ನು ಬರೆಯುವುದರಿಂದ ಮಾತ್ರವೇ ಆ ಚಟದಿಂದ ಮುಕ್ತರಾಗಬಹುದೇ ಹೊರತು ಬರೆಯದೆ ಸುಮ್ಮನಿರುವುದರಿಂದಲ್ಲ ! ).  ಉಪದೇಶಗಳನ್ನು ಕೇಳುವುದರಿಂದ, ಕೇಳಿದ್ದನ್ನು ಮನನ ಮಾಡುವುದರಿಂದ ಬರುವ ಅನುಭವವು ಉನ್ನತ ಮಟ್ಟದ್ದಾಗಿರುವುದಿಲ್ಲ, *ಜ್ಞಾನಭೂಮಿಕೆ*ಗಳಿಂದ ಪಡೆಯುವ ಅನುಭವವು ಮುಮುಕ್ಷುತ್ವಕ್ಕೆ ದಾರಿ ಮಾಡಿಕೊಡುತ್ತದೆ.
ಒಬ್ಬಾತನು ರಾಮಕೃಷ್ಣ ಪರಮಹಂಸರ ಬಳಿಗೆ ತೆರಳಿ "ಮುಮುಕ್ಷುತ್ವ" ಎಂದರೇನು ಎಂದು ಕೇಳಿದನಂತೆ. ಅವರು ವಿವರಣೆ ಕೊಡುವ ಬದಲು ಆತನನ್ನು ಗಂಗಾನದಿಯ ಬಳಿಗೆ ಕರೆದೊಯ್ದು ನದಿಯೊಳಗೆ ನಿಲ್ಲಿಸಿ ಆತನ ಕತ್ತನ್ನು ನೀರಿನೊಳಗೆ ಅದುಮಿ ಹಿಡಿದರಂತೆ. ಆ ಮನುಷ್ಯನು ತನ್ನೆಲ್ಲಾ ಶಕ್ತಿಯನ್ನು ಬಳಸಿ ತಲೆಯನ್ನು ನೀರಿನಿಂದ ಮೇಲೆತ್ತಿದನಂತೆ. "ಯಾಕಯ್ಯ" ಎಂದು ಪರಮಹಂಸರು ಕೇಳಿದರೆ " ಉಸಿರೇ ನಿಂತು ಹೊಗುತ್ತಿತ್ತು" ಎಂದನಂತೆ ಆ ಮನುಷ್ಯ.
"ಇಂತಹ ತೀವ್ರತೆಯೇ ಮುಮುಕ್ಷುತ್ವಕ್ಕೆ ದಾರಿ" ಎಂದರಂತೆ ಪರಮಹಂಸರು !.

೩) ಮಹಾಪುರುಷ ಸಂಶ್ರಯಃ (= ಮಹಾಪುರುಷರ, ಸಜ್ಜನರ ಸಹವಾಸ ಪಡೆಯುವುದು)

’ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬ ಮಾತನ್ನು ಕೇಳಿರುತ್ತೇವೆ. ವೇದಾಂತಿಗಳಾದ ಮಂಡನಮಿಶ್ರರ ಮನೆಯಲ್ಲಿ ಗಿಳಿಗಳೂ ಸಹ ವೇದಾಂತಗಳ ಬಗ್ಗೆ ತರ್ಕವನ್ನು ಮಾಡುತ್ತಿದ್ದುವಂತೆ !.  "ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ" ಎಂಬ ಸರ್ವಜ್ಞನ ವಚನವನ್ನು ಓದಿರುತ್ತೇವೆ. ವಿಚಾರಗಳ ತಿಳಿವು ಪಡೆಯಲು ಅರಿತವರೊಂದಿಗೆ, ಮಹಾಪುರುಷರೊಂದಿಗೆ ತರ್ಕಮಾಡಬೇಕೆಂದೇನೂ ಇಲ್ಲ, ಅಂತಹ ಮಹನೀಯರ ನಡುವಿನ ಸಂಭಾಷಣೆಯನ್ನು ಮೌನವಾಗಿ ಕೇಳಿಸಿಕೊಳ್ಳುವುದರಿಂದಲೇ ಹೆಚ್ಚಿನ ತಿಳಿವನ್ನು ಪಡೆಯಬಹುದು. ಜ್ಞಾನಿಗಳ ಹರಟೆಯ ವಿಷಯಗಳೇ ಆಸಕ್ತರಿಗೆ ಮಹತ್ವವಾಗಿ ಪರಿಣಮಿಸಬಲ್ಲುದು. ಚಾಣಕ್ಯನೆಂಬ ಮಹಾಪುರುಷನ ಸಹವಾಸಕ್ಕೆ ಸಿಲುಕಿದ ಚಂದ್ರಗುಪ್ತನೆಂಬ ಬಾಲಕ ಮುಂದೆ ಮೌರ್ಯ ವಂಶದ ದೊರೆಯಾದದ್ದು ಇತಿಹಾಸ. ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಮನೋವಿಜ್ಞಾನಿಗಳ ಬಳಿಗೆ ತೆರಳಿ ಸಲಹೆ ಪಡೆಯುವುದು ಇಂದಿನ ದಿನಗಳಲ್ಲಿ ವಾಡಿಕೆಯೇ ಆಗಿದೆ. ಅಲ್ಲಿ ಪಡೆಯಬಹುದಾದ ಸಲಹೆಯ ಬಹುಪಾಲು ಅಂಶಗಳು ನಮ್ಮ ಸಂಸ್ಕೃತಿಯ ವೇದೋಪನಿಷತ್ತುಗಳಲ್ಲಿಯೇ ಅಡಗಿದೆ ಎನ್ನುವುದನ್ನು ನಮ್ಮವರೇ (ಜಾಣ) ಮರೆತಿರುವುದು ವಿಪರ‍್ಯಾಸ !.  ಇಂತಹ ಜ್ಞಾನ ದೀವಿಗೆಯನ್ನು ನಮಗಿತ್ತು ಆ ಬೆಳಕಿನಲ್ಲಿ ಅನವರತ ಸಾಗಿರಿ ಎಂದಂತಹ ಮಹಾಪುರುಷರ ಸಹವಾಸ ಇಂದು ಅಗತ್ಯವಾದುದಾಗಿದೆ. ಇಂತಹ ದುರ್ಲಭವಾದ ಸಹವಾಸವನ್ನು ಪಡೆಯುವುದು ಜ್ಞಾನ ಮಾರ್ಗದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
 
|| ದೊರಕದು ಇವು ಮೂರು ದೇವನಂತಃಕರಣವಿಲ್ಲದೆ
 ಮನುಜನಾಗಿರುವುದು, ಮುಕ್ತಿಯು, ಸಜ್ಜನರ ಸಂಗವು ||

***********************************************
ಗ್ರಂಥದ ಮುಂದಿನ ಶ್ಲೋಕವನ್ನು ಗಮನಿಸೋಣ

लब्ध्वा कथन्चित नरजन्म दुर्लभं
तत्रापि पुंस्त्वं श्रुतिपारदर्शनम् ।
यस्त्वात्ममुक्त्यै न यतेत मूढधीः
स आत्महा स्वं विनिहन्त्यसद्ग्रहात ॥४॥

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ |
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಢಧೀಃ ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ ||೪||

ಈ ಸೂಕ್ತಿಯು ಮೇಲಿನ ಮೂರನೆಯ ಸೂಕ್ತಿಗೆ ಪೂರಕವಾದ  ಶ್ಲೋಕವಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ (= ಕದಾಚಿತ್ (ಆಕಸ್ಮಿಕವಾಗಿ) ದೊರಕಿರುವ ದುರ್ಲಭವಾದ ನರಜನ್ಮ)
ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ (= ವೇದಾಂತದರಿವಿಗೆ ಬೇಕಾದ  ಪುರುಷತ್ವ)
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಡಧೀಃ (= ತನ್ನ ಮುಕ್ತಿಗಾಗಿ ಯತ್ನಿಸದ ಮೂಳ (ದಡ್ಡ))
ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ (= ಆತ್ಮಘಾತುಕತನ)

ಹೀಗೆ ಆಕಸ್ಮಿಕವಾಗಿ ದೊರೆತಿರುವ ದುರ್ಲಭವಾದ ಮಾನವ ಜನ್ಮವಿದ್ದು ವೇದಾಂತದ, ಆತ್ಮ ಜ್ಞಾನದ ಅರಿವಿಗೆ ಬೇಕಾದ ಪುರುಷತ್ವವೂ ಇದ್ದು ತನ್ನ ಮುಕ್ತಿಗಾಗಿ ಯತ್ನಿಸದವನು ಮೂರ್ಖನು ಮತ್ತು ಹಾಗೆ ಮಾಡುವುದು ತನ್ನನ್ನೇ ತಾನು ಹತ್ಯೆ ಮಾಡಿಕೊಂಡತಾಗುತ್ತದೆ , ಹೇಗೆಂದರೆ ಮಿಥ್ಯೆ ಎನ್ನುವ ಈ ಜಗತ್ತನ್ನೇ ನಂಬುವುದರ ಮೂಲಕ ಎಂದು ಹೇಳಲಾಗಿದೆ. (’ಜಗನ್ಮಿಥ್ಯಾ’ ಎನ್ನುವುದಕ್ಕೆ ಮುಂದಿನ ಸೂಕ್ತಿಗಳಲ್ಲಿ ಸಾಕಷ್ಟು ವಿವರಣೆಗಳು ಬರಲಿದೆ)

************************

ಗ್ರಂಥದ ಐದನೆಯ ಸೂಕ್ತಿಯನ್ನು ನೋಡೋಣ

इतः कोन्वस्ति मूढात्मा यस्तु स्वार्थे प्रमाद्यति ।
दुर्लभं मानुषं देहं प्राप्यतत्रापि पौरुषम् ॥५॥

ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ |
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ ||೫||

ಈ ಸೂಕ್ತಿಯೂ ಸಹ ಮೇಲಿನ ಎರಡು ಮತ್ತು ಮೂರನೆಯ ಶ್ಲೋಕಗಳಿಗೆ ಪೂರಕವಾಗಿ ಹೇಳಿದುದಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಇತಃ ಕೋನ್ವಸ್ತಿ  ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ (=  ತನ್ನ ಹಿತವನ್ನೇ ಕಾಯ್ದುಕೊಳ್ಳದ ಮೂಢ )
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ (= ದುರ್ಲಭವಾದ ಮನುಷ್ಯಜನ್ಮ ಮತ್ತು ಪೌರುಷವನ್ನು ಪಡೆದು)

ಪ್ರಾಣಿಗಳಲ್ಲೇ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದು, ಪುರುಷತ್ವವನ್ನೂ ಪಡೆದು ಧರ್ಮಮಾರ್ಗದಲ್ಲಿ ನಡೆಯುವ ಅಧಿಕಾರವನ್ನು ಪಡೆದು ಆತ್ಮಾನಾತ್ಮ ವಿವೇಚನೆಯನ್ನೂ ಪಡೆದು ಮನುಷ್ಯತ್ವ ಮುಮುಕ್ಷುತ್ವಗಳನ್ನೂ ತಿಳಿದು ಮಹಾಪುರುಷರ ಸಹವಾಸವನ್ನು ಹೊಂದಿದರೂ ಸಹ ತನ್ನ ಹಿತವನ್ನು ಕಾಪಾಡಿಕೊಳ್ಳಲಾಗದವನನ್ನು(ಕಾರ್ಯವನ್ನು ಜಯಿಸುವ ಸಾಮರ್ಥ್ಯವನ್ನು ತೋರದವನು)  ಮೂಢನೆನ್ನದೆ ಏನನ್ನಬೇಕು?. ಅಂತಹವನು ಮಹಾ ಮೂರ್ಖನೇ ಸರಿ ಎಂದು ಹೇಳಲಾಗಿದೆ. ಹೀಗೆ ಐದು ಸೂಕ್ತಿಗಳಲ್ಲಿ ಮುಕ್ತಿಯ ಮಹತ್ವವನ್ನು ಶ್ರೀ ಶಂಕರರು ತಿಳಿಸಿದ್ದಾರೆ.

ಮುಂದಿನ ಕಂತಿನಲ್ಲಿ ಮತ್ತಷ್ಟು ತಿಳಿಯೋಣ.
----------------------------------------------------------------------------------------------------------

ಟಿಪ್ಪಣಿ :

*ಜ್ಞಾನ ಭೂಮಿಕೆಗಳು * (ಸ್ವಾನುಭವಕ್ಕೆ ಪೂರಕವಾದ ಸಂಗತಿಗಳು) ಒಟ್ಟು ಏಳು. ಅವು ಹೀಗಿವೆ.

೧) ಶುಭೇಚ್ಛೆ = ತಾನಿನ್ನೂ ಮೂಳನಾಗಿಯೇ ಇದ್ದೇನೆ, ಧರ್ಮಶಾಸ್ತ್ರಗಳಿಂದ ಮತ್ತು ಸಜ್ಜನರ ಸಹವಾಸದಿಂದ ಆತ್ಮಜ್ಞಾನವನ್ನು ಪಡೆಯಬೇಕು ಎಂಬ ಆಸಕ್ತಿ ಬರುವುದೇ ಶುಭೇಚ್ಛೆ.
೨) ವಿಚಾರಣಾ = ಶಾಸ್ತ್ರಗಳನ್ನು ತಿಳಿದು ಜ್ಞಾನಿಗಳ ಸಹವಾಸವನ್ನು ಪಡೆದು ಸನ್ಮಾರ್ಗದಲ್ಲಿ, ಸದಾಚಾರದಲ್ಲಿ ನಡೆಯುವುದು ವಿಚಾರಣಾ.
೩) ತನುಮಾನಸೀ = ಮೇಲಿನ ಎರಡು ಭೂಮಿಕೆಗಳ ಅಭ್ಯಾಸದಿಂದ ಇಂದ್ರಿಯ ವಿಷಯಗಳಲ್ಲಿ ಉಂಟಾಗುವ ಅತಿಯಾದ ದೌರ್ಬಲ್ಯವನ್ನು ಕಳೆದುಕೊಂಡು ಸಾಮರ್ಥ್ಯವನ್ನು ಪಡೆಯುವುದು ತನುಮಾನಸೀ.
೪) ಸತ್ವಾಪತ್ತಿ = ಮೇಲಿನ ಮೂರು ಅನುಭವ ಮೂಲವಾದ ವಿಷಯಗಳ ಅನುಸರಣೆಯಿಂದ ಹುಟ್ಟುವ ಸತ್ವಗುಣ ಅಥವಾ ನೆಮ್ಮದಿಯ, ಶಾಂತಿಯ ಭಾವವೇ ಸತ್ವಾಪತ್ತಿ.
೫) ಅಸಂಸಕ್ತಿ = ಮೇಲೆ ಹೇಳಿದ ನಾಲ್ಕು ಭೂಮಿಕೆಗಳ ಅಭ್ಯಾಸದಿಂದ ಹೊರಗಿನ ವಿಷಯಗಳಲ್ಲಿ ( ಪ್ರಾಪಂಪಚಿಕ ಸುಖಗಳು) ಅತಿಯಾದ ಆಸಕ್ತಿಯು ನಿವಾರಣೆಯಾಗಿ ನೆಮ್ಮದಿಯ ಭಾವವೇ ವಾಡಿಕೆಯಾಗುವ ಅವಸ್ಥೆಯೇ ಅಸಂಸಕ್ತಿ.
೬) ಪದಾರ್ಥಭಾವನೀ = ಮೇಲೆ ಹೇಳಿದ ಐದು ಭೂಮಿಕೆಗಳ ಅನುಸರಣೆಯಿಂದ ಅಂತರ್ಬಾಹ್ಯ ವಿಷಯಗಳ ಬಗ್ಗೆ ನಿರ್ಲಿಪ್ತತೆಯುಂಟಾಗಿ ಕೇವಲ ಜ್ಞಾನದಿಂದಲೇ ಅವೆಲ್ಲವನ್ನೂ ತಿಳಿಯುವುದು ಪದಾರ್ಥಭಾವನೀ .
೭) ತುರ್ಯಗಾ = ಮೇಲಿನ ಆರೂ ಭೂಮಿಕೆಗಳ ಸತತ ಅಭ್ಯಾಸ ಮತ್ತು ಅನುಸರಣೆಯಿಂದ ಮನಸ್ಸು ಮತ್ತು ಬುದ್ಧಿಯು ಚಂಚಲಗೊಳ್ಳದೆ ಒಂದೇ ಸ್ವಭಾವವು ಜೀವಿಯಲ್ಲಿ ನೆಲೆಗೊಳ್ಳುವುದು ತುರ್ಯಗಾ.

-----------------------------------------------------------------

ವಂದನೆಗಳೊಂದಿಗೆ.

Jul 19, 2011

ವಿವೇಕ ಚೂಡಾಮಣಿ -೨-ಯಾವುದು ಮಿಗಿಲು ?/The Crest-Jewel of Wisdom

ಪ್ರಕರಣ ಗ್ರಂಥದ ಆರಂಭ
---------------------


जंतूनां नरजन्म दुर्लभमतः पुंस्त्वं ततो विप्रता
तस्माद्   वैदिकधर्ममार्गपरता विद्वत्वमस्मात् परम् ।
आत्मानात्मविवेचनं स्वनुभवो ब्रह्मात्मना संस्थितिः
मुक्तिर्नो शतकोटिजन्मसु कृतैः पुण्यैर्विना लभ्यते ॥२॥


ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ
ತಸ್ಮಾದ್ವೈದಿಕ ಧರ್ಮಮಾರ್ಗಪರತಾ ವಿದ್ವತ್ವಮಸ್ಮಾತ್ ಪರಮ್ |
ಆತ್ಮಾನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ
ಮುಕ್ತಿರ್ನೋ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ ||೨||

ಗ್ರಂಥದ ಆರಂಭ ಶ್ಲೋಕವೇ ಚರ್ಚೆಗೀಡುಮಾಡುವಂತಹುದಾಗಿದೆ. ಸರಳವಾಗಿ ಈ ಸೂಕ್ತದ ಭಾವಾರ್ಥವನ್ನು ತಿಳಿಯುವುದಾದರೆ "ಪ್ರಾಣಿಗಳಿಗೆ ಮಾನವ ಜನ್ಮವು ದುರ್ಲಭ. ಅದರಲ್ಲಿ ಪುರುಷತ್ವ, ವಿಪ್ರತ್ವ, ಧರ್ಮಮಾರ್ಗ ಪರತ್ವ ಮತ್ತು ಶಾಸ್ತ್ರಾರ್ಥ ಜ್ಞಾನವು ಒಂದಕ್ಕಿಂತ ಒಂದು ಮಿಗಿಲಾದವುಗಳು ಮತ್ತು ಬೇಕೆಂದಾಗ ಸಿಗದಿರುವಂತಹವು. ಅದರಲ್ಲೂ ಅಳಿವು-ಉಳಿವುಗಳ ಅರಿವನ್ನು ತಿಳಿದು ಆತ್ಮಜ್ಞಾನವನ್ನು ಪಡೆಯುವುದು ಇನ್ನೂ ಮಿಗಿಲಾದುದು. ಇವೆಲ್ಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಲ್ಲದೆ ದೊರೆಯಲಾರದು " .

ದೊರಕದು ಮಾನವಜನ್ಮವದರೊಳು ದೊರಕದು ಪುರುಷತ್ವವು
ಸಿಗದು ವಿಪ್ರತ್ವವದಕಿಂತ ಮಿಗಿಲು ಧರ್ಮದಾಯಿತ್ವವವು
ದೊರಕದು ದಿಟದ ಮೇಲರಿಮೆ ತನ್ನ ತಾನರಿಯದೆ
ಮುಕ್ತನಾಗನು ಕೋಟಿ ಜನುಮಗಳ ಪುಣ್ಯಾಂಶವಿರದೆ 

ಹುಟ್ಟುವ ಗುಣವುಳ್ಳ ಪ್ರಾಣಿಗಳಲ್ಲೆಲ್ಲಾ ಮಾನವ ಜನ್ಮವು ದೊಡ್ಡದು ಮತ್ತು  ಬೇಕೆಂದಾಗಲೆಲ್ಲಾ ಸಿಗುವಂತಹುದಲ್ಲ. ಮಾನವ ಪ್ರಾಣಿಗೆ ದೊರಕುವಷ್ಟು ಸೌಕರ್ಯಗಳು ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ.  ’ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ " ಎಂದು ದಾಸರು ಹಾಡಿದ್ದಾರೆ, ಹಾಗಾಗಿ ಬೇರೆ ಜನ್ಮಗಳೂ ಇದೆಯೆಂದಾಗುತ್ತದೆ. ಒಬ್ಬನಿಗೇ ಬೇರೆ ಜನ್ಮಗಳು ಇದೆ ಎಂದಾದಲ್ಲಿ ಜೀವಸ್ವರೂಪನಾದ ಆತ್ಮನು ಶರೀರಕ್ಕಿಂತಲೂ ಬೇರೆ ಎಂದಾಗುತ್ತದೆ. ಹಳೆಯದಾದ ಬಟ್ಟೆಯನ್ನು ತಗೆದುಹಾಕಿ ಹೊಸತನ್ನು ಉಡುವಂತೆ ಆತ್ಮವು ಒಂದೇ ಆದರೂ ಶರೀರವು ಹಲವು ರೂಪಗಳನ್ನು ಪಡೆಯುತ್ತದೆ ಎಂದು ತಿಳಿಯಬೇಕಾಗುತ್ತದೆ. ’ಪಡೆದುಕೊಂಡು ಬಂದದ್ದು’ ಎಂದು
ಹೇಳುವಾಗ ಎಲ್ಲಿಂದ ಪಡೆದುಕೊಂಡು ಬಂದದ್ದು ಎಂಬದೂ ಮುಖ್ಯವಾಗುತ್ತದೆ. ಮಾನವನಿಗೆ ಸಂಪಾದನೆಯಿಂದ ಬರುವುದಕ್ಕಿಂತಲೂ ಸಂದಾಯವಾಗಿ ಬಂದಿರುವುದೇ ಹೆಚ್ಚು. ಆಡುವ ಮಾತು, ಆಹಾರ ಪದ್ಧತಿ, ಉಡುಗೆ-ತೊಡುಗೆ ಮತ್ತು ತನ್ನ ಸುತ್ತಲಿನ ಪರಿಸರದಿಂದ ತಾನು ಪಡೆದುಕೊಂಡು ಬೆಳೆದು ಬಂದದ್ದು , ಇವೆಲ್ಲವೂ ಸಂದಾಯವಾಗಿಯೇ ಬರುವಂತಹವು. "ಅಪ್ಪನಂತೆ ಮಗನಿಗೂ ಮುಂಗೋಪ" ಎಂದು ಹೇಳುವುದನ್ನು ಕೇಳಿರುತ್ತೇವೆ. ಮಗನಿಗೆ ಅಪ್ಪನಿಂದ ಅಂತಹ ವಂಶವಾಹಿನಿಗಳು (Genes) ಹರಿದುಬಂದಿರುತ್ತವೆ. ತಾಯಿಯಿಂದಲೂ, ತಾತನಿಂದಲೂ ಬರಬಹುದು. ’ನಾನು ನಾನೇ’ ಎಂದು ಎಷ್ಟು ಹೇಳಿಕೊಂಡರೂ ಹಿಂತಿರುಗಿ ನೋಡಿದಾಗ ಪಡೆದುಕೊಂಡು ಬಂದಿರುವುದೆಷ್ಟು ಎಂಬುದು ಅರಿವಾಗುತ್ತದೆ.  ಶತಾವಧಾನಿ ಗಣೇಶರು ಹೇಳುವಂತೆ "ಜನ್ಮಾಂತರಗಳನ್ನು ನಂಬದವರು ವಂಶವಾಹಿನಿಗಳನ್ನಾದರೂ ನಂಬಲೇಬೆಕು !" . ಮಾನವ ಜನ್ಮದ ಉಪಯೋಗಗಳು ನಮಗೆಲ್ಲಾ ಅನುಭದಿಂದಲೇ ತಿಳಿಯುತ್ತಿರುವುದರಿಂದ
’ಜಂತೂನಾಂ ನರಜನ್ಮ ದುರ್ಲಭಂ" ಎನ್ನುವುದನ್ನು ಮಾನವ ಪ್ರಾಣಿಗಳೆಲ್ಲರೂ ಒಪ್ಪಲೇಬೇಕಾಗುತ್ತದೆ.

ಮನುಷ್ಯ ಜನ್ಮವೇನೋ ದೊಡ್ಡದು ಆದರೆ ಪುರುಷನಾಗಿ ಹುಟ್ಟುವುದು ಅದಕ್ಕಿಂತಲೂ ಮಿಗಿಲಾದುದೆ ? !.  ಹಲವು ಋಷಿಕೆಯರಿಂದ ರಚಿಸಲ್ಪಟ್ಟಿರುವ ಸೂಕ್ತಗಳನ್ನು ನಾವು ಋಗ್ವೇದದಲ್ಲಿಯೇ ಕಾಣಬಹುದು. ಮಹಿಳೆಯರಿಗೆ ವೇದಾಧ್ಯಯನದ ಜೊತೆಗೆ ಸಂಸ್ಕಾರಗಳಲ್ಲೂ ಸ್ವಾತಂತ್ರ್ಯವಿತ್ತು ಎನ್ನುವುದನ್ನು ಋಗ್ವೇದದ ಅಧ್ಯಯನದಿಂದಲೇ ತಿಳಿಯಬಹುದು.  ಮನಗೆ ಬಂದ ಸೊಸೆಯನ್ನು ಸಾಮ್ರಾಜ್ಞಿಯಂತೆ (ರಾಣಿ) ಕಾಣು ಎಂದು ಋಗ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ಪುರುಷನಾಗಿ ಹುಟ್ಟುವುದು ಮಿಗಿಲೇಕೆ ? . ಪುರುಷನಾಗಿ ಹುಟ್ಟಿದರೂ ಪುರುಷತ್ವವನ್ನು ಮೈಗೂಡಿಸಿಕೊಳ್ಳದಿದ್ದರೆ ಆತನನ್ನೂ ಸ್ತ್ರೀ ಸ್ವಭಾವದಿಂದಲೇ ಗುರುತಿಸಬೇಕಾಗುತ್ತದೆ.  ’ಕಿರಣ್  ಬೇಡಿ’ ಹೆಣ್ಣಾದರೂ ಅವರಲ್ಲಿದ್ದ ಪುರುಷತ್ವದಿಂದ ಅವರೊಬ್ಬ ಧೈರ್ಯಶಾಲಿ ಆರಕ್ಷಕ ಅಧಿಕಾರಿಯಾದರು. ಪುರುಷತ್ವ ಎನ್ನುವುದು ಗಂಡಸುತನ ಎನ್ನುವುದಕ್ಕೆ ಸಮನಾರ್ಥಕವಾಗಿ ಕಂಡರೂ ಅದು ಗಂಡಸರನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಹೆಣ್ಣಿಗೂ ಅನ್ವಯಿಸುತ್ತದೆ.
ಹೆಣ್ಣಿನ ’ಹೈ ಪಿಚ್’ ಗಾಯನಕ್ಕೆ ಗಂಡು ಸರಿಸಾಟಿಯಾಗಲಾರ !. ಪುರುಷತ್ವ ಎಂದರೆ, ಧೈರ್ಯ, ಆತ್ಮಸ್ಥೈರ್ಯ,  ಮನೋಬಲ ಮುಂತಾದ ಧನಾತ್ಮಕ ಅಂಶಗಳ ಸಂಕೇತ. ಇಂತಹ ಅಂಶಗಳನ್ನು ಮೈಗೂಡಿಸಿಕೊಂಡು ಬೆಳೆಯುವ ಮಾನವ ಜೀವಿಯು ಪುರುಷತ್ವ( masculine dimesion) ವನ್ನು ಪಡೆಯುತ್ತಾನೆ.

’ವಿಪ್ರ’ನಾಗಿರುವುದು ಇನ್ನೂ ಮಿಗಿಲಾದುದು ಎಂದು ಹೇಳಲಾಗಿದೆ. ವಿಪ್ರನೆಂದರೆ ಬ್ರಾಹ್ಮಣ ಎಂದು ಅರ್ಥವಿದೆ.  ಹಾಗಾದರೆ ಜಾತೀಯ ಬ್ರಾಹ್ಮಣರು ಮಾತ್ರ ಶ್ರೇಷ್ಠರೆ ? ಉಳಿದವರು ಅಧಮರೆ ?. ಜಾತಿಯಿಂದ ಯಾರೂ ಬ್ರಾಹ್ಮಣ ರಾಗಲಾರರು ಎಂದು ವೇದಾಂತವೇ ಹೇಳುತ್ತದೆ. ಬ್ರಹ್ಮಜ್ಞಾನವನ್ನು ಅರಿತವನೇ ಬ್ರಾಹ್ಮಣ ಎಂದು ಶ್ರುತಿಗಳು ಸಾರಿವೆ. ವ್ಯಾಪಾರಿಗಳಿಗೆ, ರಾಜರುಗಳಿಗೆ ಬ್ರಹ್ಮಜ್ಞಾನದ ಜಿಜ್ಞಾಸೆಗೆ ಚಿಂತನೆಗೆ ಕಾಲಾವಕಾಶಗಳು ಕಡಿಮೆ ಇರುತ್ತಿದ್ದರಿಂದ ಮತ್ತು ಅವರ ಮನಸು ಹೊಯ್ದಾಟಗಳಿದ ಕೂಡಿರುವುದರಿಂದ ಅವರನ್ನು ವಿಪ್ರ ಅಥವಾ ಬ್ರಾಹ್ಮಣ ಎಂದು ಕರೆಯಲಾಗದು ಎಂಬ ಅಭಿಪ್ರಾಯವು ವ್ಯಕ್ತವಾಗುತ್ತದೆ. ಯಾರ್ಯಾರು ಬ್ರಹ್ಮನನ್ನು ಅರಿಯುವರೋ ಅವರೆಲ್ಲರೂ ವಿಪ್ರರೆ. ಜ್ಞಾನಮಾರ್ಗದಲ್ಲಿ ಎಲ್ಲರೂ ನಡೆಯಬಹುದು ಆದರೆ ಕರ್ಮಮಾರ್ಗದಲ್ಲಿ ನಡೆಯಲು ಕೆಲವರಿಗೆ ಮಾತ್ರ ಸಾಧ್ಯ. ವೈದ್ಯಶಾಸ್ತ್ರವನ್ನು ಎಲ್ಲರೂ ಓದಿ ತಿಳಿದುಕೊಳ್ಳಬಹುದು ಆದರೆ ಶಾಸ್ತ್ರದ ಪ್ರಯೋಗ ಮಾಡಲು ವೈದ್ಯಶಾಸ್ತ್ರದ ವಿದ್ಯಾರ್ಥಿಗಳು ಅಥವಾ ನುರಿತ ವೈದ್ಯರು ಮಾತ್ರ ಅರ್ಹರಾಗುತ್ತಾರೆ.

ಬ್ರಹ್ಮಜ್ಞಾನವನ್ನು ಪಡೆದವನು ಒಳ್ಳೆಯ ದಾರಿಯಲ್ಲಿ ನಡೆಯಬೇಕಾಗುತ್ತದೆ. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಂಡು ಸಮಾಜಕ್ಕೆ ಧರ್ಮಾಧರ್ಮಗಳ ವಿಚಾರಗಳನ್ನು ವಿವರಿಸಬೇಕಾಗುತ್ತದೆ. ವೈದಿಕ ಧರ್ಮಮಾರ್ಗವೆಂದರೆ ಶಾಸ್ತ್ರಗಳನ್ನು ಗೌರವಿಸಿ ಅದರಂತೆ ನಡೆಯುವುದು ಎಂದು ಅರ್ಥ. ಧರ್ಮಶಾಸ್ತ್ರಗಳು ಸಾಮಾನ್ಯರಿಗೆ (ordinary ) ವಿಷಯಾಸಕ್ತರಿಗೆ ಇರುವಂತಹುದಾಗಿದ್ದು ಅಸಾಮಾನ್ಯರಿಗೆ(extrordinary) ,ಅಸಾಧಾರಣರಿಗೆ ಯಾವ ಶಾಸ್ತ್ರಗಳೂ ಇಲ್ಲ !.
ಸಮಾಜಕ್ಕೆ ಒಳಿತಾಗುವಂತಹ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿಟ್ಟುಕೊಂಡು ಧರ್ಮಾಧರ್ಮಗಳ ವಿವೇಚನೆಯಿಟ್ಟುಕೊಂಡು ಜ್ಞಾನಮಾರ್ಗದಲ್ಲಿ ನಡೆಯುವುದು ಬ್ರಹ್ಮಜ್ಞಾನಿಯಾದವನ ಕರ್ತವ್ಯವಾಗಿರುತ್ತದೆ. ಕೇವಲ ಹುಟ್ಟಿನಿಂದ ಬ್ರಾಹ್ಮಣ, ಕ್ಷತ್ರಿಯ ಎಂದು ಮುಂತಾಗಿ ಕರೆಯಿಸಿಕೊಳ್ಳುವುದು ಶಾಸ್ತ್ರಸಮ್ಮತವಲ್ಲ, ಧರ್ಮಶಾಸ್ತ್ರಗಳ ಅನುಷ್ಠಾನದಿಂದ ಮಾತ್ರವೇ ವಿಪ್ರತ್ವವನ್ನು ಪಡೆಯಲು ಸಾಧ್ಯ ಎಂದು ಹೇಳಲಾಗಿದೆ. ಅಂತಹ ಜ್ಞಾನವನ್ನು ಪಡೆಯಲು ಮಾನವನು ವೈದಿಕ ಧರ್ಮಮಾರ್ಗದಲ್ಲಿ ನಡೆಯಬೇಕಾಗುತ್ತದೆ ಮತ್ತು ಅಂತಹ ಜ್ಞಾನಿಯು ಎಲ್ಲರಿಗೂ ಮಿಗಿಲಾದವನು ಎಂದು ಹೇಳಲಾಗಿದೆ. ಶಾಸ್ತ್ರಗಳನ್ನು ಯಾರೋ ಒಬ್ಬನನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿಲ್ಲ, ಎಲ್ಲರಿಗೂ ಅನ್ವಯವಾಗುವಂತೆ ಸಾಮಾನ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳಲಾಗಿದೆ. ಜ್ಞಾನಿಗಳು ಅದನ್ನು ತಮಗೆ ಬೇಕಾದಂತೆ ಸರಿಯಾಗಿ ಬಳಸಿಕೊಳ್ಳತ್ತಾರೆ.  ಅನಾಸಕ್ತರಿಗೆ ಯಾವ ಶಾಸ್ತ್ರಗಳೂ ಇಲ್ಲ .

ಆತ್ಮ ಮತ್ತು ಅನಾತ್ಮಗಳ ವಿವೇಚನೆಯುಳ್ಳವನು ಇನ್ನೂ ದೊಡ್ದವನೆಂದು ಹೇಳಲಾಗಿದೆ.  ಅಳಿವು ಮತ್ತು ಉಳಿವಿನ ಸೂಕ್ಷ್ಮ ಜ್ಞಾನವನ್ನಿಟ್ಟುಕೊಂಡು ಶಾಶ್ವತವಾದ ಆತ್ಮನನ್ನು ಯಾರು ಅರಿಯುತ್ತಾರೋ ಅವರು ಬ್ರಹ್ಮಜ್ಞಾನಿಗಳೆಂದು ತಿಳಿಯಲಾಗಿದೆ. ಅಳಿದುಹೋಗುವ ದೇಹದ ಚಿಂತೆಯನ್ನು ಬಿಟ್ಟು ಸದಾಕಾಲ ಉಳಿಯುವ ಆತ್ಮನನ್ನು ಯಾರು ತನ್ನ ಸ್ವಂತ ಅನುಭವದಿಂದ , ಧ್ಯಾನದಿಂದ ಯೋಗಗಳಿಂದ  ತಿಳಿಯುವರೋ ಮತ್ತು ಅಂತಹ ಸ್ವಾನುಭೂತಿಯಿಂದ ಸೃಷ್ಟಿಯಲ್ಲಿ ತಮ್ಮನ್ನು ತಾವು ಸ್ಥಿರವಾಗಿ ನೆಲೆಗೊಳ್ಳುವಂತೆ ಮಾಡಿಕೊಳ್ಳವರೋ ಅವರು ಎಲ್ಲರಿಗಿಂತಲೂ, ಎಲ್ಲದಕ್ಕಿಂತಲೂ ಮಿಗಿಲಾದವರು ಎಂದು ಹೇಳಲಾಗಿದೆ. ಮಾನವನಿಗೆ ಒಳಿತು-ಕೆಡುಕುಗಳನ್ನು ವಿವೇಚಿಸುವ ವ್ಯವಧಾನವಿರಬೇಕು ಮತ್ತು ಸ್ವಂತ ಬುದ್ಧಿಯಿಂದ ಶಾಶ್ವತ-ಕ್ಷಣಿಕವಾದುವುಗಳ ಬಗ್ಗೆ ಅರಿಯುವ , ಅದರಂತೆ ಒಳ್ಳೆಯ ದಾರಿಯಲ್ಲಿ ನಡೆಯುವ ವಿವೇಕವಿರಬೇಕು.
ಇವೆಲ್ಲವೂ ಸುಮ್ಮನೆ ಸಿಗುವಂತಹುದಲ್ಲ ಮತ್ತು ಇವುಗಳೆಲ್ಲವೂ ದೊರಕಿ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ನೂರು ಕೋಟಿ ಜನ್ಮಗಳ ಪುಣ್ಯಫಲವಿರಬೇಕು ಎನ್ನಲಾಗಿದೆ. ಅಂತಹ ಪುಣ್ಯಾಂಶವಿಲ್ಲದೆ ಮೇಲಿನ ಯಾವ ಜ್ಞಾನವೂ ದೊರಕುವಿದಿಲ್ಲ ಮತ್ತು ಮುಕ್ತನಾಗಲೂ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

ವಂದನೆಗಳೊಂದಿಗೆ....

Jul 11, 2011

ಏಕಾಶೀ ಉಪಾಸ..

ಸುಮ್ನೆ ,  ಜನ ಚೇಂಜ್ ಕೇಳ್ತಾರೆ ನೋಡಿ ಅದಕ್ಕೆ. ಇಂದು ಪ್ರಥಮ ಏಕಾದಶಿ ಉಪವಾಸದ ದಿವಸ. ಯಾರ್ಯಾರು ಹೇಗೆ ವನವಾಸ ಪಟ್ರೋ ಗೊತ್ತಿಲ್ಲ :) ನಮ್ ಸುಬ್ಬಮ್ನೋರ ಉಪಾಸದ ಕತೆ ಇಲ್ಲಿ ಕೇಳಿ. ರಾಜು ಅನಂತಸ್ವಾಮಿ ಕಂಠದಲ್ಲಿ.

*******


ಆಚೆ ಮನೆ ಸುಬ್ಬಮ್ನೋರ್ದು ಏಕಾದಶಿ ಉಪಾಸ
ಏಲ್ಲೋ ಸೊಲ್ಪ ತಿಂತಾರಂತೆ
ಅವಲಕ್ಕಿ ಉಪ್ಪಿಟ್ತು ಪಾಯ್ಸ  ||ಪ||

ಮೂರೋ ನಾಲ್ಕೋ ಬಾಳೇಹಣ್ಣು ಸೊಲ್ಪ ಚಕ್ಲೀ ಕೊಡ್ಬಳೇ
ಗಂಟೇಗ್ ಎರಡು ಕಿತ್ಲೇ ಹಣ್ಣು ಆದಾಗೊಂದು ಸೀಬೇಹಣ್ಣು

ಆಚೆಮನೆ |ಪ|


ಮಧ್ಯಾಹ್ನ್ವೆಲ್ಲಾ ರವೇಉಂಡೆ ಹುರುಳಿಕಾಳಿನ್ ಉಸ್ಲಿ
ಒಂದೊಂದ್ಸಲ ಬಿಸ್ಬಿಸಿ ಸಂಡ್ಗೆ ಒಂದೋ ಎರಡೋ ಇಡ್ಲಿ

ಆಚೆಮನೆ |ಪ|

ರಾತ್ರೆ ಪಾಪ ಉಪ್ಪಿಟ್ಟೇನೆ ಲೋಟದ್ ತುಂಬಾ ಹಾಲು
ಅರೇ... ಚೊಂಬಿನ್ ತುಂಬಾ ಹಾಲು |೨|
ಪಕ್ಕದ್ ಮನೆ ರಾಮೇಗವುಡರ್ ಸೀಮೆ ಹಸುವಿನ್ ಹಾಲು

ಆಚೆಮನೆ |ಪ|

ರಚನೆ : ಜಿ.ಪಿ. ರಾಜರತ್ನಂ

ಈ ಹಾಡನ್ನು ಇಲ್ಲಿ ಕೇಳಿ  :)

">

Jul 3, 2011

ವಿವೇಕ ಚೂಡಾಮಣಿ -೧- ತಲೆಬಾಗುವೆ ತಂದೆಗೆ/Viveka chudamani/The Crest-Jewel of Wisdom


ಶ್ರೀ ಶಂಕರಾಚಾರ್ಯರ ಹಲವು ಪ್ರಕರಣ ಗ್ರಂಥಗಳಲ್ಲಿ ವಿವೇಕ ಚೂಡಮಣಿಯು ಅತ್ಯಂತ ವಿಶಿಷ್ಟವಾದುದಾಗಿದೆ. ಆರಂಭದಿಂದ ಅಂತ್ಯದವರೆವಿಗೂ ಎಲ್ಲಿಯೂ ದಿಕ್ಕು ತಪ್ಪದೆ ವೇದೋಪನಿಷತ್ತುಗಳ ಸಾರವನ್ನು ತುಂಬಾ ಸರಳವಾದ ಭಾಷೆಯಲ್ಲಿ ತಿಳಿಸುತ್ತಾ ನಿರ್ದಿಷ್ಟವಾದ ಗುರಿಯನ್ನು ಮುಟ್ಟುತ್ತದೆ. ರಾಜಕಾರಣಿಗಳ ಭಾಷಣದಂತೆ ಎಲ್ಲೋ ಆರಂಭವಾಗಿ ಮತ್ತೆಲ್ಲೋ ಮುಗಿಯುವಂತಾಗದೆ, ಆತ್ಮ ಸಂಸ್ಕಾರದ ಅರಿವಿನಿಂದ ಆರಂಭವಾಗಿ ಮುಕ್ತಿಯೆಡೆಗೆ ಸಾಗುವ ದಾರಿಯ ವಿಚಾರಗಳು ಆಸಕ್ತರನ್ನು ಸಲೀಸಾಗಿ ಓದುವಂತೆ ಹಿಡಿದಿಡುತ್ತದೆ. ಇಂತಹ ಗ್ರಂಥಗಳ ವಿಚಾರಗಳನ್ನು ತಿಳಿಯುವುದು ಮತ್ತು ಅದನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ವಿವರಿಸುವುದು ತುಸು ಕಷ್ಟವಾದರೂ, ವಿವೇಕ ಚೂಡಾಮಣಿಯಲ್ಲಿ ಬಳಸಿರುವ ಭಾಷೆಯ ಲಾಲಿತ್ಯ, ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಯೇ ಇದೆ.  ಈಗಾಗಲೇ ಚೂಡಾಮಣಿಯ ಕನ್ನಡದ ವಿವರಣೆಗಳಿರುವ ಹಲವು ಪುಸ್ತಕಗಳು ಹೊರಬಂದಿದ್ದು, ಅದರಲ್ಲಿ ಪ್ರಮುಖವಾಗಿ ಶ್ರೀ ಚಂದ್ರಶೇಖರ ಭಾರತಿಗಳ ವ್ಯಾಖ್ಯಾನವನ್ನು ನನ್ನ ಅಧ್ಯಯನಕ್ಕೆ ಇಟ್ಟುಕೊಂಡಿದ್ದೇನೆ.  ಇಲ್ಲಿ ಬರುವ ವಿಚಾರಗಳು ಮತ್ತೆಲ್ಲೋ ಬಂದಿರಲೂ ಬಹುದು ಅಥವಾ ಬಂದಿಲ್ಲದೇ ಇರಬಹುದು, ಸಾಧ್ಯವಾದಷ್ಟು ಅಧ್ಯಯನಪರವಾದ ಹೊಸ ವಿಚಾರಗಳನ್ನು ಬರೆಯಲು ಯತ್ನಿಸುತ್ತೇನೆ.  ಸರಳ ಸಂಸ್ಕೃತ ಭಾಷೆಯಲ್ಲಿ ಸುಮಾರು ೫೮೧ ಸೂಕ್ತಿಗಳೊಂದಿಗೆ ಹಲವು ಅಲಂಕಾರಗಳನ್ನು ಬಳಸಿ ರಚಿತವಾಗಿರುವ ಈ ಗ್ರಂಥವು ಕೇವಲ ಪಾವಿತ್ರ್ಯತೆಗಾಗಿಯಾಗಲೀ ಅಥವಾ ಜಗದ್ಗುರುಗಳಿಂದ ಹೇಳಲ್ಪಟ್ಟಿದೆ ಎಂದಾಗಲೀ ಮಹತ್ವವನ್ನು ಪಡೆಯದೆ , ಬದುಕಿನ ಅನೇಕ ಗೊಂದಲಗಳನ್ನು ನಿವಾರಿಸಿ ಮನಸಿಗೆ ನೆಮ್ಮದಿಯನ್ನೂ ವಿವೇಕವನ್ನೂ ತಂದುಕೊಡುವ ಗ್ರಂಥವಾಗಿದೆ. ಆಧುನಿಕ ಜಗತ್ತಿನ  ವಿಜ್ಞಾನ-ತಂತ್ರಜ್ಞಾನ ಶಾಸ್ತ್ರಗಳಲ್ಲಿ ಹೇಳಲ್ಪಡುತ್ತಿರುವ ವಿಚಾರಗಳು ನಮ್ಮ ಭಾರತೀಯ ಬೇರಿನದೇ ಆದ ಉಪನಿಷತ್ಸಾರಗಳಲ್ಲಿ ಹೇಗೆ ಸೂಕ್ಷ್ಮವಾಗಿ ಅಡಕವಾಗಿದೆ ಎಂಬುದನ್ನು ಈ ಗ್ರಂಥದ ಅಧ್ಯಯನದ ಮೂಲಕ ತಿಳಿಯಬಹುದಾಗಿದೆ.

ಗ್ರಂಥದ ಆರಂಭದ ಶ್ಲೋಕವು ಹೀಗಿದೆ


सर्व वेदांतसिद्धांत गोचरमं तमगोचरम् ।
गोविन्दं परमानन्दं सद्गुरुं प्रणतोस्म्हम् ॥१॥



ಸರ್ವವೇದಾಂತ ಸಿದ್ಧಾಂತ ಗೋಚರಂ ತಂ ಅಗೋಚರಮ್ |
ಗೋವಿದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್ ||೧||

ಗ್ರಂಥದ ಆರಂಭದಲ್ಲಿ ಶ್ರೀ ಶಂಕರರು ಗೋವಿಂದನಿಗೆ ತಮ್ಮ ನೆನೆಕೆಗಳನ್ನು ಸಲ್ಲಿಸಿದ್ದಾರೆ.  ಶಂಕರಾಚಾರ್ಯರ ದೀಕ್ಷಾ ಗುರುಗಳ ಹೆಸರು ಗೋವಿಂದ ಭಗವಾತ್ಪಾದರೆಂದು ತಿಳಿಯಲಾಗಿದೆ. ಹಾಗೆಯೇ ಶ್ರೀ ಕೃಷ್ಣನು ಶಂಕರರ ಕುಲದೇವತೆಯೆಂದೂ ಗ್ರಂಥಾಂತರದಲ್ಲಿ ತಿಳಿದುಬರುತ್ತದೆ. ಅವರ ಹುಟ್ಟೂರಾದ ಕೇರಳ ರಾಜ್ಯದ ಕಾಲಟಿಯಲ್ಲಿ ಪೂರ್ಣಾ(ಪೆರಿಯಾರ್) ನದಿಯ ದಡದಲ್ಲಿ ಇರುವ ಶ್ರೀ ಕೃಷ್ಣನ ದೇವಾಲಯವನ್ನು ಇಂದಿಗೂ ಕಾಣಬಹುದು. ಗೋವಿಂದನೆಂದರೆ ಗೋಪಾಲನೂ ಆಗುವನು, ಬೆಟ್ಟಗಳ ಒಡೆಯನೂ ಆಗುವನು ಹಾಗೆಯೇ ಗುರು ಗೋವಿಂದ ಭಗವತ್ಪಾದರೂ ಆಗುವರು.
ಗುರುವಿನ ವಿಚಾರಕ್ಕೆ ಬಂದರೆ , ಶಂಕರರು ಸಹಜವಾಗಿ ಗ್ರಂಥದ ಮೊದಲಲ್ಲಿ ತಮ್ಮ ಗುರುಗಳನ್ನು ನೆನೆಪಿಸಿಕೊಂಡಿದ್ದಾರೆ.
 ಆ ಗುರುಗಳಾದರೂ ಎಂತಹವರು ?  ಅವರು ಕಣ್ಣಿಗೆ ಕಾಣುವವರಲ್ಲ,  ಬುದ್ಧಿಗೆ ತಿಳಿಯುವವರಲ್ಲ, ಮಾತಿಗೆ ಸಿಲುಕುವವರಲ್ಲ,  ಅವರ ದೇಹಕ್ಕೆ ಯಾವ ಆದರಣೆಯೂ ಇಲ್ಲ, ಅದು ಅಗೋಚರವಾದುದು ಮತ್ತು ಅಲೌಕಿಕವಾದು. ಹಾಗಾದರೆ ಶಂಕರರು ತಮ್ಮ ಗುರುಗಳನ್ನು ಕಂಡಿದ್ದಾದರೂ ಹೇಗೆ ? ಯಾವ ರೂಪದಲ್ಲಿ ಕಂಡುಕೊಂಡರು ?.
ಶಂಕರರಿಗೆ ತಮ್ಮ ಗುರುಗಳು ಕಾಣಿಸಿದ್ದು ಅರಿವಿನ ರೂಪದಲ್ಲಿ ಮತ್ತು ಜ್ಞಾನದ ಬೆಳಕಿನಲ್ಲಿ. ಜಗತ್ತಿನ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಿದ್ಧಾಂತ-ವೇದಾಂತಗಳ ರೂಪದಲ್ಲಿ ಕಂಡರು .

ದೇಹಕೆ ಸಿಲುಕದ
ಮನಸಿಗೆ ನಿಲುಕದ
ಅರಿವಿಗೆ ತೋರುವ
ಗುರು ಗೋವಿಂದಗೆ
ತಲೆ ಬಾಗಿಸುವೆ          

     ಎಂದು ಹೇಳುತ್ತಾ ಗುರುವನ್ನು ಅರಿವಿನ ರೂಪದಲ್ಲಿ ಕಂಡೆ ಎಂದು ಸಾರುತ್ತಾರೆ.  ಯಾವ ವೇದಾಂತ-ಸಿಧ್ಧಾಂತಗಳು ನನ್ನ ಅರಿವಿಗೆ ಕಾರಣವಾದವೋ ಅದೇ ನನ್ನ ಗುರುವು ಮತ್ತು ಆ ತತ್ತ್ವಜ್ಞಾನವೇ ಗೋವಿಂದ ಗುರುಗಳೆಂದು
ಸೂಚ್ಯವಾಗಿ ಹೇಳುತ್ತಾರೆ. ಮಾತು-ಮನಸಿಗೆ ನಿಲುಕದೆ ವೇದಾಂತ-ಸಿದ್ಧಾಂತದ ಮೂಲಕ ಎಲ್ಲರಿಗೆ ಕಾಣುವಂತಹ ಅರಿವಿನ ಗುರುವಾದ ಗೋವಿಂದರಿಗೆ ನಮಿಸುತ್ತೇನೆ ಎಂದು ಶಂಕರರು ಆರಂಭಿಸುತ್ತಾರೆ.  ಗುರು ಅನ್ನುವ ಪದಕ್ಕಾಗಲೀ ಅಥವಾ ಗುರುವಿನ ಲೌಕಿಕ ದೇಹಕ್ಕಾಗಲೀ ಹೆಚ್ಚು ಮಹತ್ವವಿಲ್ಲವೆಂಬುದನ್ನು ಶಂಕರರು ಈ ಸೂಕ್ತದ ಮೂಲಕ ಸೂಕ್ಷ್ಮವಾಗಿ ಹೇಳುತ್ತಾರೆ. ’ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಪದವೊಂದಿದೆ.  ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ ಎಂದು  ಶಂಕರರು ಹೇಳುತ್ತಾರೆ.

ಕನ್ನಡದ ಮೇರು ಕಲಾವಿದ ರಾಜಕುಮಾರರು ಇಂದು ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರ ಚಿತ್ರಗಳು, ಅಭಿನಯ ಅವರ ಹಾಡುಗಾರಿಕೆಯಿಂದ ಎಲ್ಲಾ ಕಾಲದಲ್ಲೂ ಅವರು ಜೀವಂತವಾಗಿರುತ್ತಾರೆ ಅದರ ಮೂಲಕವೇ ಅವರು ಗೋಚರಿಸುತ್ತಾರೆ. ಹಾಗೆಯೇ ಸದ್ಗುರುವೂ ಸಹ, ಅರಿವಿನ ಬೆಳಕನ್ನು ಚೆಲ್ಲುವ ಮೂಲಕ ವಿಷಯಾಸಕ್ತರಿಗೆ  ಯಾವಾಗಲೂ ಕಾಣಿಸುತ್ತಾರೆ.  ಗುರುವು ಹೇಗಿರಬೇಕು ಎಂಬುದಕ್ಕೂ ಇದೇ ಸೂಕ್ತವು ಅನ್ವಯವಾಗಬಲ್ಲುದು. ಗುರುವೆನಿಸಿಕೊಂಡವನು ತನ್ನ ಹಾವ-ಭಾವಗಳಿಂದಾಗಲೀ, ಹಣದ ಪ್ರಭಾವದಿಂದಾಗಲೀ ಅಥವಾ  ರಾಜಕೀಯ ವಿಷಯಗಳಿಂದಾಗಲೀ ಅನೇಕ ಶಿಷ್ಯರನ್ನು ಸಂಪಾದಿಸಿಕೊಂಡರೆ ಕೊನೆಗೆ ಅಂತಹ ಶಿಷ್ಯರಿಂದಲೇ ಗುರುವೆಂಬ ಘನತೆಯನ್ನೂ ಕಳೆದುಕೊಳ್ಳುತ್ತಾನೆ. ಇಂದು ಇಂತಹ ಅನೇಕ ಗುರುಗಳನ್ನು ಕಾಣಬಹುದಾಗಿದೆ !. ಇಲ್ಲಿ ಸದ್ಗುರು ಶ್ರೀಧರರು ಹೇಳಿದ ವಾಕ್ಯವೊಂದನ್ನು ನೆನಪಿಸಿಕೊಳ್ಳಬಹುದು,

ಶತ್ರೋರಪಿ ಗುಣಾವಾಚ್ಯಾ ದೋಷಾವಾಚ್ಯಾ ಗುರೋರಪಿ |
ಯುಕ್ತಿಯುಕ್ತಂ ವಚೋಗ್ರಾಹ್ಯಂ ಬಾಲಾದಪಿ ಶುಕಾದಪಿ ||
ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|
ಅಪಾರ್ಥಪ್ರತಿಪನ್ನಸ್ಯ ನ್ಯಾಯ್ಯಂ ಭವತಿ ಶಾಸನಮ್ ||

"ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು"
ಎಂದು ಹೇಳುತ್ತಾರೆ.  ನಮ್ಮ ಜಾತಿಯವರೆಂದೋ, ಮತ-ಧರ್ಮದವರೆಂದೋ ಕುರುಡು ಬುದ್ದಿಯಿಂದ ಯಾರೋ ಒಬ್ಬರನ್ನು ಶ್ರೀ ಶ್ರೀ ಶ್ರೀ ಜಗದ್ಗುರುವೆಂದು ಒಪ್ಪುವ ಬದಲು ಅಂತಹ ಗುರುವಿನಲ್ಲಿರುವ ಅರಿವನ್ನು ಒರೆಗೆ ಹಚ್ಚಬೇಕು ಎಂಬುದು ಮೇಲಿನ ಸೂಕ್ತಗಳ ಸಾರವಾಗಿದೆ. ಶಿಷ್ಯನು ಹೇಗಿರಬೇಕು ಎಂಬುದಕ್ಕೂ ಮೇಲಿನ ಸೂಕ್ತಗಳೇ ಮಾದರಿಯಾಗಿವೆ.
ನಮಗೂ ಸಹ ವಿವೇಕ ಚೂಡಾಮಣಿಯನ್ನು ಶ್ರೀ ಶಂಕರರು ಬರೆದಿದ್ದಾರೆ ಹಾಗಾಗಿ ಅದೊಂದು ಪವಿತ್ರ ಗ್ರಂಥ ಎನ್ನುವ ಭಾವನೆಗಿಂತಲೂ , ಅದರೊಳಗಿನ ಸತ್ವವನ್ನು ತಿಳಿದು ಅದರಲ್ಲಿ ಶಂಕರರನ್ನು ಕಂಡರೆ ನಾವು ನಿಜವಾದ ಗುರುವನ್ನು ಪಡೆದುಕೊಂಡಂತಾಗುತ್ತದೆ ಎನ್ನಬಹುದು. ಇಂದು ಗೋವಿಂದರಂತಹ ಗುರುಗಳು ಮತ್ತು ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಸಿಗುವುದು ಬಲು ಕಷ್ಟ. ಮುಕ್ತಿ ಮಾರ್ಗಕ್ಕೆ ಅಥವಾ ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಅಂತಿಮವೆಂದೇನೂ ಇಲ್ಲ, ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಬಹುದಾಗಿದೆ ಅದರಿಂದಲೇ ನೆಮ್ಮದಿಯನ್ನೂ ಪಡೆಯಬಹುದಾಗಿದೆ. ಹಾಗೆ ಸಾಧಿಸಲು ಅನುಸರಿಸಬೇಕಾದ ಮಾರ್ಗಗಳು ನಮ್ಮ ವೇದೋಪನಿಷತ್ತುಗಳಲ್ಲಿದೆ. ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ.  ಅರಿವನ್ನು ಹಂಚುವ ಮತ್ತು ಪಡೆಯುವ ಕಾರ್ಯದಲ್ಲಿ ಗುರು-ಶಿಷ್ಯರಿಬ್ಬರಿಗೂ ಸ್ಥಿತಪ್ರಜ್ಞತೆಯ ಅಗತ್ಯವಂತೂ ಇದ್ದೇ ಇದೆ, ಅಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ.
ಇಲ್ಲಿ ನಮ್ಮ ಕನ್ನಡಕ್ಕೊಬ್ಬರೇ ಕೈಲಾಸಂ ಸಿಡಿಸಿರುವ ಜೋಕೊಂದನ್ನು ನೆನಪಿಸಿಕೊಳ್ಳಬಹುದು

ಆತ : ಗುರುವೇ ಕೇಳುದ್ರಾ, ಆ ಗಣ್ಯ ವ್ಯಕ್ತಿಗಳು ಇವತ್ತು ಹೋಗ್ಬಿಟ್ರಂತೆ !
ಕೈಲಾಸಂ : "ಹೌದೇ, ! ಹೋಗ್ಬಿಟ್ರೇ ?  ....ಛೇ, ಒಳ್ಳೇ ಅವರೇಕಾಯಿ ಸೀಸನ್ನೂsss ಪಾಪ, .... ಹೀಗಾಗ್ಬಾರ್ದಿತ್ತು "

ಅಂದ್ರಂತೆ !. ಇಲ್ಲಿ ಕೈಲಾಸಂರನ್ನು ಕೂಡಾ ಸ್ಥಿತಪ್ರಜ್ಞರೆಂದೇ ಭಾವಿಸಿಕೊಳ್ಳಬಹುದು! .

ಮುಂದಿನ ಬರಹದಲ್ಲಿ ವಿವೇಕ ಚೂಡಾಮಣಿಯ ಆರಂಭದ ಮೊದಲ ಸೂಕ್ತಿಯನ್ನು ತಿಳಿಯೋಣ.

ವಂದನೆಗಳೊಂದಿಗೆ,