Apr 19, 2010

ಶಾಪ.. ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
...............................................................*.................................................


.....ಸುಮುಹೂರ್ತ ಸಾವಧಾನ |
     ಸುಲಗ್ನ ಸಾವಧಾನ ||......

ವೇದಘೋಷಗಳ ನಡುವೆ ಮಂಗಳಕರವಾದ  ’ನಿರೀಕ್ಷಣ’ ಮುಹೂರ್ತವು ಯಾವುದೇ ಆತಂಕಗಳಿಲ್ಲದೆ ನೆರವೇರಿತ್ತು. ಚಂದ್ರಗಿರಿಯ ಸಮಸ್ತ ಪ್ರಜೆಗಳೂ ಅಲ್ಲಿ ನೆರೆದಿದ್ದರು. ತಮ್ಮ ಪ್ರಭುವಿನ ವಿವಾಹ ಮುಹೂರ್ತದ ಸುಸಂದರ್ಭವನ್ನು ಕಣ್ಣಾರೆ ಕಂಡು ಆನಂದಿಸಲು ಪುಟ್ಟ ಮಕ್ಕಳಾದಿಯಾಗಿ , ಸೈನಿಕರು, ದಳಪತಿಗಳು, ಮಂತ್ರಿ-ಮಹೋದಯರು, ರಾಜ ಪರಿವಾರದ ದೇವಾಲಯವಾದ ’ನಖರೇಶ್ವರನ’ ಸನ್ನಿಧಿಯಲ್ಲಿನ ಸಾಲಂಕೃತ ವಿವಾಹ ಮಂಟಪದಲ್ಲಿ ತುಂಬಿಕೊಂಡಿದ್ದರು. ಚಂದ್ರಗಿರಿಯ ಸಕಲ ಮಹೋದಯರ ಸಂತಸಕ್ಕೆ , ಮಹತ್ತರವಾದ ಕಾರಣವೊಂದಿತ್ತು...!. ’ಹೊಯ್ಸಳ’ ಸಾಮ್ರಾಜ್ಯದ ಗಂಡೆದೆಯ ವೀರನೆಂದೇ ಪ್ರಖ್ಯಾತನಾಗಿದ್ದ , ಮಹರಾಜ ’ವಿರೂಪಾಕ್ಷ ಬಲ್ಲಾಳ’ ನ ಸಹೋದರಿಯನ್ನು , ಚಂದ್ರಗಿರಿಯ ರಾಜನಿಗೆ ವಿವಾಹ ಸಂಪನ್ನಗೊಳಿಸುವ ವೈಭವದ ಮುಹೂರ್ತವಾಗಿತ್ತದು.  ಬಲ್ಲಾಳರಾಯನ ಇಚ್ಚೆಯಂತೆ, ಅವನ ಸಹೋದರಿ ರಾಣಿ ’ಹರಿಯಾಳ ದೇವಿ’ಯ ವಿವಾಹವು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾದ ’ದ್ವಾರಾವತಿ’ಯಲ್ಲಿ ಸಾಂಗವಾಗಿ ಸಾಗುತ್ತಲಿತ್ತು. ಕನ್ಯಾವರಣ, ಕನ್ಯಾದಾನ, ಅಕ್ಷತಾರೋಪಣ ವಿಧಿಗಳು ಅತ್ಯಂತ ವಿಜೃಂಭಣೆಯಿಂದ , ಕಂಡು-ಕೇಳರಿಯದ ರೀತಿಯಲ್ಲಿ ನೆರವೇರಿತು. ವೈದಿಕರ ವೇದಘೋಷಗಳು, ಸಂಗೀತಗಾರರ ಹಾಡುಗಳೂ, ವಾದ್ಯಗಳೂ, ನೃತ್ಯಗಾರ್ತಿಯರ ಮನಮೋಹಕ ನೃತ್ಯಗಳೂ, ವಿವಿಧ ಕಲಾವಿದರುಗಳ ಕಲಾ ಪ್ರದರ್ಶನವು ನೆರೆದಿದ್ದವರ ಮನಸೂರೆಗೊಂಡಿತು. ಹೊಯ್ಸಳ ಸಾಮ್ರಾಜ್ಯದಲ್ಲಿ  ಕಲೆಗೆ-ಕಲಾವಿದರಿಗೆ ದೊರೆಯುತ್ತಿದ್ದ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿತ್ತು ಈ ಎಲ್ಲಾ ಸಂಭ್ರಮಗಳು.
............ಮಹಾರಾಜ ವಿರೂಪಾಕ್ಷ ಬಲ್ಲಾಳ ಪತ್ನಿ ತಿರುಮಾಲಾಂಬೆಯೊಡನೆ ಸುಖಾಸೀನನಾಗಿ ತನ್ನ ಸಹೋದರಿಯ ವಿವಾಹದ ಅಪೂರ್ವ ಕ್ಷಣಗಳ ಆನಂದವನ್ನು ಸವಿಯುತ್ತಲಿದ್ದ.
ತನ್ನೆದುರಿಗೆ ಅನಿರೀಕ್ಷಿತವಾಗಿ ಆಗಮಿಸಿದ ಮಹಾಮಂತ್ರಿಗಳನ್ನು ನೋಡಿ , ಅವರನ್ನು ಕರೆದು ಪಕ್ಕದಲ್ಲೇ ಕುಳ್ಳಿರಿಸಿಕೊಂಡ. ಮಂತ್ರಿಗಳು ರಾಜನ ಕಿವಿಯಲ್ಲಿ ಅದೇನೋ ವಿಷಯವನ್ನು ಹೇಳಿದರು...ವಿಷಯವನ್ನು ಕೇಳಿದ ರಾಜ , ಅರೆಕ್ಷಣ ದಿಗ್ಭ್ರಾಂತನಾದ..!. ತಿರುಮಲಾಂಬೆಗೂ ಮಂತ್ರಿಗಳು ಹೇಳಿದ ವಿಷಯವನ್ನು ತಿಳಿಸಿದ. ಈರ್ವರ ಮುಖಗಳೂ ಬಾಡಿ ಹೋದವು. ಎಚ್ಚೆತ್ತುಕೊಂಡ ಬಲ್ಲಾಳರಾಯ , ಸಮಯವನ್ನು ಅಪವ್ಯಯ ಮಾಡುವುದು ಸರಿಯಲ್ಲವೆಂದು ಚಿಂತಿಸಿ, ನೇರವಾಗಿ ಚಂದ್ರಗಿರಿಯ ರಾಜನ ಮಾತಾ-ಪಿತೃಗಳನ್ನೇ ವಿಚಾರಣೆಗೆ ಆಹ್ವಾನಿಸಿದ. ಬಲ್ಲಾಳರಾಯನ ಮಾತುಗಳಲ್ಲಿ ಕ್ರೋಧವಿತ್ತು ...


" ಅಷ್ಟೈಶ್ವರ್ಯ ಸಂಪತ್ತುಗಳುಳ್ಳ ಹೊಯ್ಸಳ ಸಾಮ್ರಾಜ್ಯದ ಅರಸನಿಗೆ ಮೋಸವೇ ?? ನಿಮ್ಮ ಪುತ್ರನಿಗೆ ಒದಗಿಬಂದಿರುವ ಕ್ಷಯರೋಗದ ವಿಷಯವನ್ನೇಕೆ ನಮಗೆ ತಿಳಿಸಲಿಲ್ಲ ನೀವು ? ಸಾಮಂತರಾಗಿರುವ ನಿಮಗೇ ಇಷ್ಟು ದಾಷ್ಟ್ಯವಿರಬೇಕಾದರೆ..ಅಖಂಡ ಹೊಯ್ಸಳ ಸಾಮ್ರಾಜ್ಯದ ಅಧಿಪತಿ ನಾನು..ನನ್ನಿಂದ ನೀವು ಸತ್ಯವನ್ನು ಮುಚ್ಚಿಟ್ಟುಬಿಟ್ಟಿರಲ್ಲ. ಆಗಲಿ, ...ಇನ್ನೂ ವೇಳೆಯಾಗಿಲ್ಲ..ಮಾಂಗಲ್ಯಧಾರಣ ಮುಹೂರ್ತವೂ ನೆಡೆದಿಲ್ಲ...ಈ ವಿವಾಹವನ್ನು ಇಲ್ಲಿಗೇ ನಿಲ್ಲಿಸಿಬಿಡಿ. ನನ್ನ ಸಹೋದರಿಯ ಜೀವನವನ್ನು ನಾನೇ ಹಾಳುಗೆಡವಲೇ ?  ಒಬ್ಬ ರೋಗಿಗೆ ನನ್ನ ತಂಗಿಯನ್ನು ವಿವಾಹ ಮಾಡಿಕೊಡಲು ನಾನೇನು ರಣಹೇಡಿಯಲ್ಲ..!. ಸಾಕು ಮಾಡಿ ಈ ನಾಟಕ......" 

ಬಲ್ಲಾಳರಾಯನ ಮಾತುಗಳು ಗುಡುಗಿನಂತೆ ವಿವಾಹ ಮಂಟಪದಲ್ಲೆಲ್ಲಾ ಮಾರ್ದನಿಸಿತು. ಚಂದ್ರಗಿರಿಯ ಪ್ರಜೆಗಳು ಶಿಲೆಗಳಂತೆ ಸ್ತಬ್ಧರಾದರು. ಚಂದ್ರಗಿರಿಯ ರಾಜನ ಮಾತಾ-ಪಿತೃಗಳು  ದುಃಖದಿಂದ ಬಲ್ಲಾಳರಾಯನ ಪಾದಕ್ಕೆರಗಿದರು...


"ಮಹಾರಾಜ...ನಮ್ಮಿಂದ ಮಹಾಪರಾಧವಾಗಿದೆ. ನಮ್ಮನ್ನು ಕ್ಷಮಿಸಿ. ನಮ್ಮ ಪುತ್ರನ ರೋಗಕ್ಕೆ ಔಷಧೋಪಚಾರಗಳನ್ನು ನೆಡೆಸುತ್ತಿದ್ದೇವೆ. ಈಗ ಸಾಕಷ್ಟು ಗುಣಮುಖನಾಗಿದ್ದಾನೆ. ಮುಂದಿನ ದಿವಸಗಳಲ್ಲಿ , ಸೌಭಾಗ್ಯವತಿ ರಾಣಿ ’ಹರಿಯಾಳ ದೇವಿ’ಯ ಪಾತಿವ್ರತ್ಯದಿಂದ ನಮ್ಮ ಪುತ್ರನ ರೋಗವು ಸಂಪೂರ್ಣ ಗುಣಮುಖವಾಗುವುದರಲ್ಲಿ , ನಿಮಗೆ ಸಂಶಯವೇ ಬೇಡ. ದಯವಿಟ್ಟು ಅನುಗ್ರಹಿಸಿ...."

ಮಾತಾ-ಪಿತೃಗಳ ಅಶ್ರುಧಾರೆ, ಕಳಕಳಿ, ಆಕ್ರಂದನ ..ಇದ್ಯಾವುದೂ ಬಲ್ಲಾಳರಾಯನ ಮನಸನ್ನು ಗೆಲ್ಲಲಿಲ್ಲ. ಮಹಾರಾಜನ ದೃಷ್ಟಿ..  ಕ್ಷೇತ್ರ ಪುರೋಹಿತರ, ಋತ್ವಿಜರ ಕಡೆಗೆ ತಿರುಗಿತು.


 " ನಾರಯಣ ದೀಕ್ಷಿತರೆ, ತಮಗೆ ಸತ್ಯ ತಿಳಿದಿರಲಿಲ್ಲವೇ? ರಾಜ ಪರಿವಾರದ ದೈವವಾದ ’ ನಖರೇಶ್ವರ’ನನ್ನು ನಿತ್ಯ ಪೂಜಿಸುವವರು ನೀವು,  ವರನ ಜಾತಕಾದಿಗಳನ್ನು ವಿಮರ್ಶಿಸಿದವರು ನೀವು...ನಿಮ್ಮಿಂದ ಅಸತ್ಯ ಹೊರಟಿತೆ..? ನನ್ನಿಂದ ನಂಬಲಾಗುತ್ತಿಲ್ಲ, ಹೇಳಿ...ಸತ್ಯವೇನೆಂದು ಹೇಳಿ..."

ಬಲ್ಲಾಳರಾಯನ ಗುಡುಗಿಗೆ ದೀಕ್ಷಿತರು ಸ್ತಂಭೀಭೂತರಾದರು. ಅವರಿಂದ ಮಾತು ಹೊರಡದಾಯಿತು. ತುಸು ಹೊತ್ತು ಸಾವರಿಸಿಕೊಂಡು, ರಾಯನಿಗೆ ಮನವರಿಕೆ ಮಾಡಿಕೊಡಲನುವಾದರು..

" ಪ್ರಭು, ವರನ ಬಂಧುಗಳು ತಂದು ತೋರಿಸಿದ ಜಾತಕದಲ್ಲಿ ನನಗಾವ ದೊಷಗಳೂ ಕಂಡು ಬಂದಿರಲಿಲ್ಲ..ಆ ಜಾತಕ ಉತ್ತಮವಾದುದೇ ಆಗಿತ್ತು. ರೋಗದ ವಿಚಾರವಾಗಲೀ, ಅಪಮೃತ್ಯುವಿನ ವಿಷಯವಾಗಲಿ ಜಾತಕದಲ್ಲಿ ಇಲ್ಲವೇ ಇಲ್ಲ..!. ಜಾತಕವನ್ನೇ ತಿದ್ದಿರಬಹುದೇ ? ಇದರಲ್ಲಿ ಏನೋ ಮೋಸವಿದೆ ಎನಿಸುತ್ತಿದೆ ರಾಜ .."

ದೀಕ್ಷಿತರ ಮಾತಿನಿಂದ ರಾಯನ ಕೋಪ ತಾರಕಕ್ಕೇರಿತು.   ವಿವಾಹ ಕಾರ್ಯ ನೆರವೇರಿಸಲು ಕುಳಿತಿದ್ದ  ’ಶೇಷಭಟ್ಟ’ರೆಡೆಗೆ ಬಲ್ಲಾಳರಾಯ ಹರಿಹಾಯ್ದ..


" ಋತ್ವಿಜರೇ...ಹೊಯ್ಸಳರ ಪರಮ ದೈವ ’ಹೊಯ್ಸಳೇಶ್ವರನ’ ಉಪಾಸಕರು ನೀವು...ನಿಮ್ಮಿಂದಲಾದರೂ ಸತ್ಯ ಹೊರಬರಲಿ..ಅಥವ ತಾವೂ ಲೋಭಿಗಳಾಗಿಬಿಟ್ಟಿರೋ ಹೇಗೆ ?!. ಸತ್ಯವನ್ನು ಮರೆಮಾಚುವುದು ನಿಮ್ಮಂತಹವರಿಗೆ ತಕ್ಕುದಲ್ಲ..."

ಶೇಷಭಟ್ಟರಿಗೆ ಬಲ್ಲಾಳರಾಯನ ಮಾತುಗಳು ಅನುಚಿತವೆನಿಸಿದರೂ , ರಾಯನಿಗೆ ತಕ್ಕ ಸಮಾಧಾನವನ್ನು ಹೇಳಲನುವಾದರು..


" ಮಹಾರಾಜ, ನನ್ನ ತಿಳುವಳಿಕೆಯಂತೆ..ವರನ ಜಾತಕದಲ್ಲೇ ದೋಷವಿದೆ. ಆತನ ಜನ್ಮದಿನ ಮತ್ತು ಜನ್ಮಸಮಯಕ್ಕನುಸಾರವಾಗಿ ವಿವೇಚಿಸಿದರೆ ...ನಮ್ಮಲ್ಲಿರುವ ವರನ ಜಾತಕವು ತಿದ್ದಿರಬಹುದಾದ ಅಥವ ಬದಲಾಯಿಸಿರಬಹುದಾದ ಜಾತಕವೆನಿಸುತ್ತದೆ...ತಾವೇ ಪರಾಂಬರಿಸಬೇಕು..."

ಭಟ್ಟರ ಮಾತುಗಳನ್ನು  ಕೇಳಿದ ರಾಜನ ಮುಖ ಕೆಂಪಡರಿತು. ತನ್ನ ಸೊಂಟದಲ್ಲಿದ್ದ ವೀರಕತ್ತಿಯನ್ನು ಹಿರಿದು ನಿಂತು ಘರ್ಜಿಸಿದ..


" ಸಹೋದರಿ, ಇಂತಹ ಮೋಸಗಾರರ ಸಂಬಂಧವೇ ನಮಗೆ ಬೇಡ. ಈ ಕ್ಷಣವೇ ಚಂದ್ರಗಿರಿಯನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳತ್ತೇನೆ....ಈ ವಂಚಕರನ್ನು ಗಡಿಪಾರು ಮಾಡುತ್ತೇನೆ....ಸಹೋದರಿ, ಹಸೆಮಣೆ ಬಿಟ್ಟು ಎದ್ದು ಬಂದುಬಿಡು...ಇವರ ಸಹವಾಸವೇ ನಮಗೆ ಬೇಡ..ಮುಂದೊಂದು ದಿನ ಉತ್ತಮರೊಂದಿಗೆ ನಿನ್ನ ವಿವಾಹವನ್ನು ಇದಕ್ಕಿಂತಲೂ ವಿಜೃಂಭಣೆಯಿಂದ ನೆರವೇರಿಸುತ್ತೇನೆ....ಬಾ ತಂಗಿ..." 

..ಬಲ್ಲಾಳರಾಯನ ನುಡಿಗಳು ಹರಿಯಾಳದೇವಿಯ ಮನಸಿನಲ್ಲಿ ಹೊಯ್ದಾಟವೆಬ್ಬಿಸಿತು. ಅದಾಗಲೇ, ಚಂದ್ರಗಿರಿಯ ರಾಜನೇ ತನ್ನ ಪತಿಯೆಂದು ಆಕೆ ಮಾನಸಿಕವಾಗಿ ಒಪ್ಪಿಯಾಗಿತ್ತು. ಹೃದಯಗಳು ಒಂದಾಗಿಬಿಟ್ಟಿದ್ದವು. ಹರಿಯಾಳದೇವಿಗೆ ಉಭಯಸಂಕಟವಾಯಿತು. ತಾನು ಮೆಚ್ಚಿರುವ, ಪ್ರೀತಿಸುವ ’ಪತಿ’ಯನ್ನು , ಯಕಶ್ಚಿತ್ ರೋಗದ ಕಾರಣಕ್ಕಾಗಿ ಬಿಟ್ಟುಬಿಡಲೆ ? ...ಅಥವ ತನ್ನ ಪಿತೃ ಸಮಾನನಾದ ಅಣ್ಣನ ಮಾತಿಗೆ ಬೆಲೆ ಕೊಡಲೆ ?? ...ಆಕೆ ಅನಿಶ್ಚಿತತೆಯಿಂದ ತೊಳಲಾಡಿದಳು. ಕೊನೆಗೆ , ತನ್ನ ಮನಸಿಗೊಪ್ಪಿರುವ ಪತಿಯನ್ನು ತಿರಸ್ಕರಿಸುವುದು ಅಸಂಬದ್ದವೆನಿತು. ಸಾವರಿಸಿಕೊಂಡು, ಬಲ್ಲಾಳರಾಯನ ಮುಂದೆ ತನ್ನ ಮನೋನಿವೇದನೆ ಮಾಡಿಕೊಂಡಳು ..


" ಅಣ್ಣಾ...ನಾನಿವರನ್ನು ಮನಸಾರೆ ಒಪ್ಪಿಯಾಗಿದೆ. ರೋಗದ ನೆಪವೊಡ್ಡಿ, ಶಿವನ ಸನ್ನಿಧಿಯಲ್ಲಿ ನಾನಿವರನ್ನು ತಿರಸ್ಕರಿಸಲಾರೆ. ಪರಮೇಶ್ವರನ ಅನುಗ್ರಹವಿದ್ದಲ್ಲಿ, ನನ್ನ ಪತಿ ಶೀಘ್ರ ಗುಣಮುಖರಾಗುತ್ತಾರೆ.  ಇನ್ನೊಂದು ಸತ್ಯ ಹೇಳುತ್ತೇನೆ...ಈಗಾಗಲೇ ನಮ್ಮ ನಿರೀಕ್ಷಣ ಮುಹೂರ್ತವು ಮುಗಿದಿದೆ. ಶಾಸ್ತ್ರಗಳು ನಿನಗೆ ತಿಳಿಯದೇ? ನಿರೀಕ್ಷಣೆಯಾದರೆ..ವಿವಾಹವಾದಂತಯೇ ಸರಿ..!. ನೀನಾವ ಕಾರಣಗಳನ್ನು ಮುಂದಿಟ್ಟರೂ ..ನಾನು ಈ ವಿವಾಹವನ್ನು ತಿರಸ್ಕರಿಸಲಾರೆ. ದಯವಿಟ್ಟು ಸಹಕರಿಸು....ಭಟ್ಟರೇ...ತಾವು ಮುಂದುವರಿಸಿ...." 

 ಸಹೋದರಿಯ ಬಾಯಿಂದ ಹೊರಬಂದ ಮಾತುಗಳು ಬಲ್ಲಾಳರಾಯನನ್ನು ದಿಗ್ಬ್ರಮೆಗೊಳಿಸಿತು. ಅವನ ಅಸ್ತಿತ್ವವನ್ನೇ ಕೆಣಕುವ ಮಾತುಗಳು ಸಹೋದರಿಯ ಬಾಯಿಂದ ಬಂದಿದ್ದವು. ..ತನ್ನ ಪ್ರೀತಿಯ ಸಹೋದರಿಯೇ ..ತನ್ನ ವಿರುದ್ಧ ಮಾತನಾಡಿದ್ದು ? ತಾನು ತುತ್ತಿಟ್ಟು ಬೆಳೆಸಿದ ಪುಟ್ಟ ಬಾಲೆಯೇ..ಹೀಗೆ ಹೇಳಿದ್ದು.....?? ಬಲ್ಲಾಳರಾಯನಿಗೆ ದಿಕ್ಕು ತೋಚದಂತಾಯಿತು.......

 (ಮುಂದುವರಿಯುತ್ತದೆ...)


ವಂದನೆಗಳೊಂದಿಗೆ....