Apr 27, 2010

ಶಾಪ.. ೨ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)   

---------------------------------*------------------

................ಇಡೀ ವಿವಾಹ ಮಂಟಪವೇ ಬಿರಿದು ಹೋಗುವಂತೆ ಅಬ್ಬರಿಸಿದ ಬಲ್ಲಾಳರಾಯ. ಅವನ ಮಾತುಗಳಲ್ಲಿ ನೋವಿನ ಛಾಯೆಯಿತ್ತು.


" ತಿರುಮಲಾಂಬಾ, ನಡೆ ಹೊರಡೋಣ. ಇಂತಹ ಕಪಟಿಗಳೊಂದಿಗೆ ನಮ್ಮ ಸಂಬಂಧವೇನಾದರೂ ಏರ್ಪಟ್ಟರೆ, ಅದು ಈ ದ್ವಾರಾವತಿಗೆ ಬಹು ದೊಡ್ಡ ಕಳಂಕ !. ತುತ್ತನ್ನ ತಿಂದು ಬೆಳೆದ ಸಹೋದರಿಗೇ ಬೇಡವಾದ ಪ್ರೀತ್ಯಾದರಗಳು ನಮಗೇಕೆ ? . ಇನ್ನೊಂದು ಕ್ಷಣವೂ ನಾವಿಲ್ಲಿರಕೂಡದು...ವಿವಾಹವಾದರೂ ಜರುಗಲಿ..ಅಂತ್ಯೇಷ್ಟಿ ಕರ್ಮಾಂತರವಾದರೂ ನಡೆಯಲಿ .., ನಮಗಾವ ಗೊಡವೆಯೂ ಬೇಡ..ಎಲ್ಲವೂ ಪರಮೇಶ್ವರನ ಇಚ್ಚಯಂತೇ ನೆರವೇರಲಿ...ನಾನಿನ್ನೆಂದೂ ಇವರ ಮುಖ ನೋಡಲು ಬಯಸುವುದಿಲ್ಲ ...! "

ಖಚಿತ ನಿರ್ಧಾರದೊಂದಿಗೆ ಹೊರಡಲನುವಾದ ರಾಯ, ತಿರುಮಲಾಂಬೆಯ ಕೈ ಹಿಡಿದು ದರ-ದರನೆ ಎಳೆದುಕೊಂಡು ವಿವಾಹಮಂಟಪದಿಂದ ಹೊರನೆಡೆದ. ಮಹಾರಾಜನ ಅನಿರೀಕ್ಷಿತ ವರ್ತನೆ , ನೆರೆದಿದ್ದವರಲ್ಲಿ ದುಗುಡ ಹುಟ್ಟಿಸಿತು. ಮುಂದೆ ಒದಗಿ ಬರಬಹುದಾದ ಅಪಾಯದ ಸೂಚನೆಯೂ ಅಲ್ಲಿ ನೆರೆದಿದ್ದ ಕೆಲವರಿಗೆ ಅರಿವಾಗಿತ್ತು !.

ಇತ್ತ , ರಾಣಿ ’ಹರಿಯಾಳ’ ದೇವಿಯ ಅಣತಿಯಂತೆ ವಿವಾಹ ಕಾರ್ಯ ಮುಂದುವರಿಯಿತು. ಹೊಯ್ಸಳ ಸಾಮ್ರಾಜ್ಯದ ಅಧಿಪತಿಯ ಅನುಪಸ್ಥಿತಿಯಲ್ಲಿ  ಶಾಸ್ರ್ತೋಕ್ತ ವಿಧಿಗಳೆಲ್ಲಾ ಸಾಂಗವಾಗಿ ನೆರವೇರಿತು ! .  ಸರ್ವರೂ ದ್ವಾರಾವತಿಯನ್ನು ತೊರೆದು ಚಂದ್ರಗಿರಿಯತ್ತ ಪ್ರಯಾಣ ಬೆಳೆಸಿದರು.  ಪ್ರಯಾಣದುದ್ದಕ್ಕೂ ಹರಿಯಾಳ ದೇವಿಯ ಮನದಲ್ಲಿ ಸಹೋದರ ’ವಿರೂಪಾಕ್ಷ ಬಲ್ಲಾಳ’ರಾಯನ ಮಾತುಗಳೇ ಮಾರ್ದನಿಸುತ್ತಿತ್ತು. ಆಕೆ ಮತ್ತಷ್ಟು ಕಠಿಣ ಹೃದಯಿಯಾದಳು...!.

...................................*..........................

ವಿವಾಹದ ತರುವಾಯ, ಚಂದ್ರಗಿರಿಯಲ್ಲಿ ರಾಣಿ ಹರಿಯಾಳ ದೇವಿಯ ಸುಖ-ಸಂಭ್ರಮಕ್ಕೇನೂ ಕೊರತೆಯಿರಲಿಲ್ಲ.  ತಿಂಗಳುಗಳು ಕಳೆದಂತೆ ರಾಣಿಯು ಗರ್ಭವತಿಯಾದಳು. ಮೊಗ್ಗು ಮುಡಿಸುವ ಶಾಸ್ತ್ರವೂ ಸಾಂಗವಾಗಿ ನೆರವೇರಿತು. ಚಂದ್ರಗಿರಿಯ ಸಮಸ್ತ ಪ್ರಜೆಗಳು ವಿಜಯೋತ್ಸವವನ್ನೂ ಆಚರಿಸಿದರು. ವಿಪರ‍್ಯಾಸವೆಂದರೆ, ದ್ವಾರಾವತಿಯ ಯಾರೊಬ್ಬರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಚಂದ್ರಗಿರಿಯ ಸಂಭ್ರಮ , ಬಲ್ಲಾಳರಾಯನ ಕೋಪಾಗ್ನಿಗೆ ತುಪ್ಪ ಸುರಿದಂತಾಗಿತ್ತು.

ನವಮಾಸಗಳು ಪೂರೈಸಿ, ಹತ್ತನೆಯ ತಿಂಗಳಿನಲ್ಲಿ ರಾಣಿಯು ಅವಳಿ ಗಂಡುಮಕ್ಕಳಿಗೆ ಜನ್ಮವಿತ್ತಳು. ಚಂದ್ರಗಿರಿಯ  ಉತ್ತರಾಧಿಕಾರಿಗಳು ಜನಿಸಿದ ಸಂಭ್ರಮಕ್ಕೆ, ಅರಸನಾದಿಯಾಗಿ ಸಮಸ್ತರೂ ಗ್ರಾಮದೈವದ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದರು. ಜನನವಾದ ಹನ್ನೊಂದನೆಯ ದಿವಸ  ದಂಪತಿಗಳು, ಕ್ಷೇತ್ರ ದೈವವಾದ ’ಚಂದ್ರಶೇಖರ’ ನ ಸನ್ನಿಧಿಯಲ್ಲಿ ..ಶುಭ ಮುಹೂರ್ತದಲ್ಲಿ ಮಕ್ಕಳಿಗೆ ನಾಮಕರಣವನ್ನು ನೆರವೇರಿಸಿದರು.  "ಲಕ್ಷ್ಮಣ" ಮತ್ತು "ವೀರೇಶ್ವರ" ನೆಂದು ನಾಮಾಂಕಿತರಾದ ಮಕ್ಕಳು , ಚಂದ್ರಗಿರಿಯ ಅನರ್ಘ್ಯ ರತ್ನಗಳಂತೆ ಹರಿಯಾಳ ದೇವಿಯ ಆರೈಕೆಯಲ್ಲಿ ಬೆಳೆಯತೊಡಗಿದರು .

ಮಕ್ಕಳಿಗೆ ಎರಡು ವರ್ಷವಾಗುವಾಗ , ಪತಿಯ ಆರೋಗ್ಯ ಕ್ಷೀಣಿಸುತ್ತಿರುವುದು ರಾಣಿಯ ಗಮನಕ್ಕೆ ಬಂದಿತು. ಸತತ ಎರಡು ವರ್ಷಗಳ ಕಾಲ ವೈದ್ಯೋಪಚಾರ ನಡೆಸಿದರೂ, ದಿನೇ-ದಿನೇ ರಾಜನ ಆರೋಗ್ಯ ಹದಗೆಟ್ಟಿತೇ ವಿನಃ ಚೇತರಿಕೆಯೇನೂ ಕಂಡುಬರಲಿಲ್ಲ.  ಜಾತಕದ ದೊಷವೋ-ದುರ್ದೈವವೋ...ಹರಿಯಾಳ ರಾಣಿಯ ಪತಿ, ಚಂದ್ರಗಿರಿಯ ಅರಸು..ಅದೊಂದು ದಿವಸ ಸೂರ್ಯೋದಯದ ಕಾಲದಲ್ಲಿ ವಿಧಿವಶನಾದನು. ನಾಲ್ಕು ವರ್ಷದ ಮಕ್ಕಳನ್ನೂ -ರಾಣಿಯನ್ನೂ ಬಿಟ್ಟು ಇಹಲೋಕವನ್ನು ತ್ಯಜಿಸಿದನು. ಕಷ್ಟಕಾಲವು ಇನ್ನಿಲ್ಲದಂತೆ ರಾಣಿಯನ್ನು ಆವರಿಸಿತು. ಪತಿಯ ಮರಣದ ದುಃಖದಲ್ಲಿ ಮುಳುಗಿದ ರಾಣಿಗೆ ರಾಜ್ಯ-ಕೋಶಗಳಾವುದೂ ಬೇಡವೆನಿಸಿತು. ....ಆದರೂ , ತನ್ನೆರೆಡು ಮಕ್ಕಳನ್ನು ಚಂದ್ರಗಿರಿಯ ಅಧಿಪತಿಗಳನ್ನಾಗಿ ಮೆರೆಸುವವರೆಗೂ ತಾನು ವಿರಮಿಸಬಾರದೆಂಬ ಧೃಡನಿಶ್ಚಯ ಮಾಡಿದಳು.  ಸಹೋದರ ಬಲ್ಲಾಳರಾಯನ ನೆರಳೂ ಸಹ ಚಂದ್ರಗಿರಿಯ ಮೇಲೆ ಬೀಳದಾದಾಗ , ರಾಣಿಯೇ ಸರ್ವ ಅಧಿಕಾರಗಳನ್ನೂ ವಹಿಸಿಕೊಂಡು ದಕ್ಷ ಮಂತ್ರಿ ಹಾಗೂ ಸೇನಾಧಿಕಾರಿಗಳ ನೆರವಿನೊಂದಿಗೆ ರಾಜ್ಯಭಾರ ನೆಡೆಸಲನುವಾದಳು.  ತನ್ನಿಬ್ಬರು ಮಕ್ಕಳು ಪ್ರವರ್ಧಮಾನಕ್ಕೆ ಬರಲು, ಅವರಿಗೆ ಸೂಕ್ತ ವಿಧ್ಯಾಭ್ಯಾಸ, ಶಸ್ತ್ರಾಭ್ಯಾಸ, ವೇದಾಭ್ಯಾಸ ಹಾಗು ರಾಜನೀತಿಗಳ ಸಮಗ್ರ ಅಧ್ಯಯನವನ್ನು ರಾಜ ಗುರುಗಳಿಂದ ಕಲಿಸಿದಳು.

ಅದೊಂದು ದಿವಸ, ವಿದ್ಯೆ ಕಲಿಸಕೊಟ್ಟ ರಾಜ ಗುರುಗಳು ದ್ವಾರಾವತಿಯ ವೈಭವವನ್ನು ಹರಿಯಾಳ ರಾಣಿಯ ಮಕ್ಕಳೆದುರಿಗೆ ವರ್ಣಿಸಿದರು..

" ಮಕ್ಕಳೇ, ನಿಮ್ಮ ಸೋದರಮಾವ ಮಹಾರಾಜ ವಿರೂಪಾಕ್ಷ ಬಲ್ಲಾಳ’ನು ದ್ವಾರಾವತಿಯಲ್ಲಿ ಅತ್ಯಂತ ವೈಭವದಿಂದ ರಾಜ್ಯಭಾರವನ್ನು ಮಾಡುತ್ತಲಿದ್ದಾನೆ. ತನ್ನ ರಾಜಧಾನಿಯ ಸುತ್ತ ಕೋಟೆಯನ್ನು ನಿರ್ಮಿಸಿ ಮನೋಹರವಾದ ಅರಮನೆಯನ್ನು ಕಟ್ಟಿಸಿದ್ದಾನೆ.  ಜಗತ್ಪ್ರಸಿದ್ದವಾಗಬಲ್ಲಂತಹ ಅಪೂರ್ವ ಶಿಲ್ಪಕಲಾ ವೈಭವವನ್ನು ಹೊಂದಿರುವ ಆಲಯಗಳನ್ನು ನಿರ್ಮಿಸಿದ್ದಾರೆ. ನವರತ್ನಗಳ ರಾಶಿಯನ್ನೇ ಆಲಯಗಳಿಗೆ ದಾನ ಕೊಟ್ಟಿದ್ದಾರೆ.  ರಾಜ ಪರಿವಾರದ ’ನಖರೇಶ್ವರ’ ನ ಆಲಯದ ಸೊಬಗನ್ನು ಕಣ್ಣಾರೆ ನೋಡಿಯೇ ಸವಿಯಬೇಕು. ಸನಿಹದಲ್ಲೇ ಅರಮನೆಯೂ ಇದೆ.  ಮಹಾಮಂತ್ರಿ ಕಟ್ಟಿಸಿಕೊಟ್ಟಿರುವ ಅತ್ಯಪೂರ್ವ ’ಹೊಯ್ಸಳೇಶ್ವರ’ನ ಆಲಯದ ವೈಭವವನ್ನು ನೀವೊಮ್ಮೆ ಅಲ್ಲಿಗೆ ಹೋಗಿ ಸವಿದುಬರಬೇಕು, ದ್ವಾರಾವತಿಯು ನಿಜವಾಗಿ ಇನ್ನೊಂದು ಅಮರಾವತಿಯೇ ಸರಿ..."  

ಪ್ರಬುದ್ಧ ಯುವಕರಿಗೆ , ಇಂತಹ ಸಿರಿಯನ್ನು ಕಣ್ಣಾರೆ ನೋಡಲೇಬೇಕೆಂಬ ಆಕಾಂಕ್ಷೆ ಒಡಮೂಡಿತು. ತಮ್ಮ ಸೋದರಮಾವನ ಅರಮನೆಯ ವೈಭವವನ್ನು ಕಣ್ಣಾರೆ ನೋಡುವುದು ಸೌಭಾಗ್ಯವೇ ಸರಿಯೆಂಬ ನಿರ್ಧಾರ ಯುವಕರಲ್ಲಿ ಮೂಡಿತು. ರಾಜಗುರುಗಳ ಪಾದಾರವಿಂದಗಳಿಗೆರಗೆ, ದ್ವಾರಾವತಿಯ ಯಾತ್ರೆಗೆ ಅನುಮತಿ ಪಡೆಯಲು ತಾಯಿಯ ಬಳಿಗೆ ತೆರಳಿದರು.

ರಾಣಿ ಹರಿಯಾಳ ದೇವಿಯು ವಿಶ್ರಾಂತಿಯಲ್ಲಿದ್ದಳು. ಯುವಕರು ಮುಚ್ಚುಮರೆಯಿಲ್ಲದೆ , ತಮ್ಮ ಆಕಾಂಕ್ಷೆಯನ್ನು  ತಿಳಿಸಲನುವಾದರು.

" ಅಮ್ಮಾ, ಗುರುಗಳಿಂದ ನಮಗಿಂದು ದ್ವಾರಾವತಿಯ ವೈಭವವು ತಿಳಿಯಲ್ಪಟ್ಟಿತು. ಬಲ್ಲಾಳರಾಯರು ನಮ್ಮ ಮಾವನೇ ಅಲ್ಲವೇ ? ನಾವೇಕೆ ಅವರಿಂದ ದೂರವಿರಬೇಕು ? ನೀನೆಂದೂ ದ್ವಾರವತಿಯ ಸಂಬಂಧದ ವಿಷಯವನ್ನು ನಮಗೆ ತಿಳಿಸಿ ಹೇಳಲೇ ಇಲ್ಲ..ಏಕೆಂದು ತಿಳಿಸುವೆಯಾ ? " 
 ..ಪ್ರಥಮ ಬಾರಿಗೆ ತನ್ನ ಮಕ್ಕಳ ಬಾಯಿಂದ ದ್ವಾರಾವತಿಯ ವಿಚಾರವು ಬಂದುದು, ರಾಣಿಗೆ ಆಶ್ಚರ್ಯವನ್ನುಂಟುಮಾಡಿತು. ತನ್ನ ಕಠಿಣ ನಿರ್ಧಾರಕ್ಕೆ ಅವಳು ಬದ್ದಳಾಗಿದ್ದಳು..

" ಮಕ್ಕಳೇ, ದ್ವಾರಾವತಿಯ ಅರಸು ನಮಗೆ ಸಂಬಂಧಿಕನೇ ಇರಬಹುದು, ರಾಜತಾಂತ್ರಿಕವಾಗಿ ನಾವವರ ಅಧೀನದಲ್ಲೇ ಇದ್ದೇವೆ. ಕಾಲಕಾಲಕ್ಕೆ ಕಪ್ಪವನ್ನೂ ಸಲ್ಲಿಸುತ್ತಿದ್ದೇವೆ, ಅಂದ ಮಾತ್ರಕ್ಕೆ ನಾವು ಅವರ ಅಡಿಯಾಳುಗಳಲ್ಲ ..! . ಹಿಂದೆಂದೋ ಕಡಿದು ಹೋದ ಸಂಬಂಧವನ್ನು ಹೇಳಿಕೊಂಡು ಮತ್ತೆ ಅವರ ಮನೆ ಬಾಗಿಲಿಗೆ ಹೋಗುವುದು ಉಚಿತವಲ್ಲ...ಅಂತಹ ಆಸೆಯನ್ನು ಬಿಟ್ಟುಬಿಡಿ.."

...ಯುವಕರಿಗೆ ತಾಯಿಯ ಮಾತುಗಳು ರುಚಿಸಲಿಲ್ಲ.  ಮಾತೆಯನ್ನು ಓಲೈಸಲು ಅನುವಾದರು.

" ಮಾತೆ, ಬಾಹ್ಯಸಂಬಂಧ ಕಡಿದುಹೋದ ಮಾತ್ರಕ್ಕೆ ರಕ್ತಸಂಬಂಧ ಕಡಿದುಹೋಗುವುದೇ ? ಬಲ್ಲಾಳರಾಯರ ಆಶಿರ್ವಾದ ನಮಗೆ ದೊರತಲ್ಲಿ ನಮ್ಮ ಸೇನಾಬಲವು ಮತ್ತಷ್ಟು ಹೆಚ್ಚುತ್ತದೆ. ನಮ್ಮ ರಾಜತಾಂತ್ರಿಕ ಶಕ್ತಿಯೂ ಬಲಗೊಳ್ಳುತ್ತದೆ. ದ್ವಾರಾವತಿಯನ್ನೊಮ್ಮೆ ದರ್ಶಿಸಿ, ಅವರೊಂದಿಗೆ ಸಂತೋಷದಿಂದಿರುವ ಬಯಕೆ ನಮ್ಮದು, ನಿಮ್ಮ ಅನುಮತಿಗಾಗಿ ಇಲ್ಲಿಗೆ ಬಂದಿದ್ದೇವೆ, ಹರಸಿ ತಾಯಿ.."  

ಮಕ್ಕಳ ಮಾತುಗಳು ರಣಹೇಡಿಗಳ ಮಾತಿನಂತೆ ಕೇಳಿಸಿದವು ಹರಿಯಾಳ ದೇವಿಗೆ. ಆಕೆ ಮತ್ತಷ್ಟು ಕ್ರೋಧಗೊಂಡಳು..

" ಪುತ್ರರೇ, ನೀವು ದ್ವಾರಾವತಿಯನ್ನು ಸಂದರ್ಶಿಸುವ ಆಸೆಯನ್ನು ಬಿಟ್ಟುಬಿಡಿ, ನಿಮ್ಮ ಮಾತುಗಳು ಕ್ಷಾತ್ರ ಧರ್ಮಕ್ಕೆ ಉಚಿತವಾದುದಲ್ಲ. ದೈನ್ಯತೆಯಿಂದ ಪಾದಕ್ಕೆರಗಿ ಶರಣಾಗುವುದು ಕ್ಷತ್ರಿಯರ ಲಕ್ಷಣವಲ್ಲ. ಇಷ್ಟು ವರ್ಷಗಳ ಕಾಲ ನಿಮಗೆ ಕ್ಷಾತ್ರ ಧರ್ಮವನ್ನು ಭೋದಿಸಿದ್ದು ವ್ಯರ್ಥವಾಯಿತೆನ್ನಿಸುತ್ತಿದೆ. ದ್ವಾರಾವತಿಗೂ ನಮಗೂ ಯಾವುದೇ ರೀತಿಯ ಬಾಂಧವ್ಯವಿಲ್ಲ....ನೀವೆಂದಿಗೂ ಅಲ್ಲಿಗೆ ಹೋಗಕೂಡದು...ಇದು ರಾಣಿ ಹರಿಯಾಳ ದೇವಿಯ ಕಟ್ಟಾಜ್ಞೆ..!!. "

ಸ್ಪಷ್ಟಮಾತುಗಳಲ್ಲಿ ಹರಿಯಾಳ ದೇವಿಯು ಮಕ್ಕಳ ದ್ವಾರಾವತೀ ಯಾತ್ರೆಯ ಅಕಾಂಕ್ಷೆಯನ್ನು ಖಂಡಿಸಿದಳು.  ಯುವಕರಿಗೆ ತಾಯಿಯ ಮಾತುಗಳು ನುಂಗಲಾರದ ತುತ್ತಾಯಿತು. ಮನಸಿನ ಮೂಲೆಯಲ್ಲಿ ದ್ವಾರಾವತಿಯನ್ನು ದರ್ಶಿಸುವ ಆಸೆ ಹಾಗೇ ಉಳಿದಿತ್ತು. ತಮ್ಮ ಆಸೆಯನ್ನು ನೆರೆವೇರಿಸಿಕೊಳ್ಳುವ ರೀತಿಯನ್ನು ಚಿಂತಿಸತೊಡಗಿದರು. ........ಕೊನೆಗೆ, ಇಬ್ಬರು ಯುವಕರು ನಿರ್ಧಾರವೊಂದನ್ನು ಗುಟ್ಟಾಗಿ ಹಂಚಿಕೊಂಡರು..!.

ಅದೊಂದು ದಿನ, ಲಕ್ಷ್ಮಣ-ವೀರೇಶ್ವರರಿಬ್ಬರೂ ಅಮಾವಾಸ್ಯೆಯ ಕಗ್ಗತ್ತಿಲಿನಲ್ಲಿ ಚಂದ್ರಗಿರಿಯ ಅರಮನೆಯ ಸುರಂಗ ಮಾರ್ಗದ ದ್ವಾರದಿಂದ ನುಸುಳಿ, ತಮಗಾಗಿ ಮೊದಲೇ ಕಾದಿರಿಸಿದ್ದ ಅಶ್ವಗಳನ್ನೇರಿ ದ್ವಾರಾವತಿಯೆಡೆಗೆ ಹೊರಟೇಬಿಟ್ಟರು....ರಾಣಿ ಹರಿಯಾಳ ದೇವಿಯು ಮಧ್ಯರಾತ್ರಿಯ ಗಾಢ ನಿದ್ರೆಯಲ್ಲಿದ್ದಳು....!.

  (ಮುಂದುವರಿಯುತ್ತದೆ..)

  ವಂದನೆಗಳೊಂದಿಗೆ....