Aug 17, 2010

ಪಂಚಾಗ್ನಿ

ಭಾರತೀಯ ಅಥವ ಹಿಂದೂಗಳ ತತ್ವಸೌಧಕ್ಕೆ  ವೇದೋಪನಿಷತ್ತುಗಳೆ  ಆಧಾರಸ್ತಂಭಗಳು.  ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳನ್ನು ಪ್ರಸ್ಥಾನತ್ರಯಗಳೆಂದು ಗೌರವಿಸಲಾಗಿದೆ.  ತತ್ವ, ತರ್ಕ ಮತ್ತು ಮೀಮಾಂಸೆಗಳ ವಿಷಯ ಹೇಳುವವರು ಈ ಪ್ರಸ್ಥಾನತ್ರಯದ ಮೂಲಕ ಹೇಳಿದರೆ ಪ್ರಮಾಣ ದೊರಕುತ್ತದೆ. ಇಲ್ಲವಾದರೆ ಅಂತಹ ವಿಚಾರಗಳು ಪುರಸ್ಕೃತವಾಗುವ ಸಂಭವನೀಯತೆ ಅತ್ಯಲ್ಪ. ಆದಕಾರಣವೇ, ಪ್ರಸ್ಥಾನತ್ರಯದ ಮೇಲೆ ಬಹಳಷ್ಟು ಭಾಷ್ಯಗಳು, ಟೀಕೆಗಳು, ತಾತ್ಪರ್ಯಗಳು ಹುಟ್ಟಿಕೊಂಡಿರುವುದು. ಉಪನಿಷತ್ತುಗಳು ಅತ್ಯಂತ ಪ್ರಾಚೀನವಾದವುಗಳು. ಇವುಗಳು ವೇದಗಳಲ್ಲಿ ಬರುವಂತಹವು (ಜ್ಞಾನಕಾಂಡ). ಇದನ್ನು ವೇದಾಂತ ಎನ್ನಲಾಗಿದೆ.   ಪ್ರಮುಖವಾಗಿ ಹತ್ತು ಉಪನಿಷತ್ತುಗಳನ್ನು ಹೆಸರಿಸಬಹುದು. ಅವುಗಳೆಂದರೆ.... ಮಾಂಡೂಕ್ಯೋಪನಿಷತ್ತು, ಕೇನೋಪನಿಷತ್ತು, ಕಠೋಪನಿಷತ್ತು, ತೈತ್ತರೀಯೋಪನಿಷತ್ತು, ಐತರೇಯ ಉಪನಿಷತ್ತು, ಮುಂಡಕೋಪನಿಷತ್ತು, ಈಶಾವಾಸ್ಯೋಪನಿಷತ್ತು, ಪ್ರಶ್ನೋಪನಿಷತ್ತು, ಛಾಂದೋಗ್ಯ ಉಪನಿಷತ್ತು ಮತ್ತು  ಬೃಹ ದಾರಣ್ಯಕ ಉಪನಿಷತ್ತು.  ಉಪನಿಷತ್ತುಗಳಲ್ಲಿ ಆತ್ಮಸಾಕ್ಷಾತ್ಕಾರ, ಅದ್ವೈತ ದರ್ಶನ, ಹುಟ್ಟು-ಸಾವಿನ ಪ್ರಶ್ನೆಗಳು,  ಅತ್ಮದ ಸ್ವರೂಪ ಮತ್ತು ಸೃಷ್ಟಿಯ ವಿಚಾರಗಳು ವಿಸ್ತೃತವಾಗಿ ಹೇಳಲ್ಪಟ್ಟಿದೆ.  ಆತ್ಮಕ್ಕೆ ಅಳಿವಿಲ್ಲ ದೇಹಕ್ಕಷ್ಟೆ ಅಳಿವು ಎಂಬುದನ್ನು ಹಲವು ತೆರನಾಗಿ ವಿವರಿಸಲಾಗಿದೆ.  ಇಲ್ಲಿ ಆತ್ಮದ ಚಿರಂತನವನ್ನು ಪ್ರಾಯೋಗಿಕವಾಗಿ ಸಿದ್ದೀಕರಿಸುವ ವಿಚಾರ ಬಂದಾಗ ಗೊಂದಲಗಳು ಏಳುವುದು ಸಹಜ. ಶತಮಾನಗಳಷ್ಟು ಹಿಂದೆ ಜ್ಞಾನಿಗಳು ಕಂಡುಕೊಂಡಿದ್ದ ಈ ವಿಚಾರಗಳು ಪ್ರಾಯೋಗಿಕವಾಗಿ ಮತ್ತು ಸ್ವಾನುಭವದಿಂದಲೇ ಬಂದದ್ದಿರಬಹುದಲ್ಲವೆ ? ಏಕೆಂದರೆ , ರಸಾಯನಶಾಸ್ತ್ರದ ’ಬ್ರೌನ್ ರಿಂಗ್’ ಟೆಸ್ಟ್ ಅನ್ನು ಪ್ರಾಯೋಗಿಕವಾಗಿ ಸಿದ್ದಿಸಿ ತೋರಿಸಲು ವಿಧ್ಯಾರ್ಥಿಯೋರ್ವನಿಗೆ ಹೇಳಿದರೆ ಆತ ಈ ಹಿಂದೆ ವಿಜ್ಞಾನಿಗಳು ಕಂಡುಕೊಂಡಿರುವ ವಿಧಾನವನ್ನೇ ಅನುಸರಿಸಿ ಪ್ರಯೋಗ ಮಾಡಬೇಕಾಗುತ್ತದೆ. ಹಾಗೆ ಮಾಡಿಯೂ ಆತನಿಗೆ ಪ್ರಥಮ ಪ್ರಯತ್ನದಲ್ಲಿ ಸರಿಯಾದ ಫಲಿತಾಂಶ ದೊರೆಯದೆ ’ಬ್ರೌನ್ ರಿಂಗ್’ ಬರದೇ ಹೋದರೆ ಅದು ಈ ಹಿಂದೆ ಪ್ರಯೋಗದ ಮೂಲಕ ಪ್ರತಿಪಾದಿಸಿರುವ ವಿಜ್ಞಾನಿಯ ತಪ್ಪೇ ? ಅಂತಹ ಪ್ರಯೋಗವನ್ನು ಕೇವಲ ಬೊಗಳೆ ಎಂದು ತಳ್ಳಿಹಾಕಬಹುದೆ ? ನಿಜವಾಗಿಯೂ ಅದು ಆ ವಿಧ್ಯಾರ್ಥಿಯ ಕಲಿಕೆಯ ಮತ್ತು ತಾಳ್ಮೆಯ ಪ್ರಶ್ನೆಯಾಗಿರುತ್ತದೆ. ಎಂಟು-ಹತ್ತು ಬಾರಿ ಏಕಾಗ್ರತೆಯ ಮೂಲಕ ಪ್ರಯೋಗ ಮಾಡಿದಾಗ ಆ ವಿದ್ಯಾರ್ಥಿಯು ಸಮರ್ಪಕ ಫಲಿತಾಂಶವನ್ನು ಪಡೆಯಬಹುದಾಗಿರುತ್ತದೆ. ಹಾಗೆಯೇ ವೇದ ಮತ್ತು ಉಪನಿಷತ್ತುಗಳ ವಿಚಾರಗಳನ್ನೂ  ಸಹ ಶತಮಾನಗಳ ಹಿಂದೆಯೇ ಪ್ರಾಜ್ಞರು ಪ್ರಾಯೋಗಿಕವಾಗಿ ಸಿದ್ದೀಕರಿಸಿಕೊಂಡು ಮುಂದಿನ ಪೀಳಿಗೆಗಾಗಿ ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿ ಬಿಟ್ಟು ಹೋಗಿದ್ದಾರೆನ್ನಬಹುದು. ಇವುಗಳಿಂದ ಸಮರ್ಪಕ ಫಲಿತಾಂಶ ಪಡೆಯುವಷ್ಟು ತಾಳ್ಮೆ , ಆಸಕ್ತಿ ಮತ್ತು ಶಕ್ತಿ ನಮ್ಮಲ್ಲಿರಬೇಕಷ್ಟೆ. ಅಂತಹ ಉತ್ತಮ ಪಲಿತಾಂಶವನ್ನು ಪಡೆಯಲು ಎರಡು ಪ್ರಮುಖ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಒಂದು ಧ್ಯಾನ ಮತ್ತು ಎರಡನೆಯದು ಯೋಗ.

ಪ್ರಸ್ತುತ ಇಲ್ಲಿ ಛಾಂದೋಗ್ಯ ಉಪನಿಷತ್ತಿನಲ್ಲಿ  ಬರುವ ಮೂವತ್ತೆರಡು ವಿದ್ಯೆಗಳ (ವಿದ್ಯೆ = ಜ್ಞಾನ=ಧ್ಯಾನ ) ಪೈಕಿ ಪಂಚಾಗ್ನಿ ವಿದ್ಯೆಯ ಬಗೆಗೆ ಸಂಕ್ಷಿಪ್ತವಾಗಿ ವಿಚಾರ ಮಾಡೋಣ.
ಛಾಂದೋಗ್ಯ ಉಪನಿಷತ್ತಿನಲ್ಲಿ ವೈಶ್ವಾನರ ವಿದ್ಯೆ, ಸತ್ಯಕಾಮ ವಿದ್ಯೆ, ಪುರುಷ ವಿದ್ಯೆ, ಗಾಯತ್ರಿ ವಿದ್ಯೆ, ಪಂಚಾಗ್ನಿ ವಿದ್ಯೆ..ಇತ್ಯಾದಿ ಧ್ಯಾನಸಂಬಂಧೀ ವಿದ್ಯೆಗಳು ವಿವರಿಸಲ್ಪಟ್ಟಿದೆ. ಪಂಚಾಗ್ನಿ ವಿದ್ಯೆಯೆಂಬುದು ಐದು ರೀತಿಯ ಅಗ್ನಿಗಳ  ಬಗೆಗೆ ತಿಳಿಯುವ ಜ್ಞಾನವಾಗಿದೆ.  ಜಗತ್ತಿನಲ್ಲಿ ಜೀವಿಗಳು ಬರುವುದು ಮತ್ತು ಹೋಗುವುದು ನಡದೇ ಇರುತ್ತದೆ. ಇದನ್ನು ಸಂಸಾರಚಕ್ರವೆನ್ನಬಹುದು. ಇಂತಹ ಚಕ್ರವು ಹೇಗೆ ನಡೆಯುತ್ತದೆ ? ಜೀವಿಗಳು ಬರುವುದು ಮತ್ತು ಹೋಗುವುದು ಎಂದರೇನು ?  ಪಂಚಾಗ್ನಿ ವಿದ್ಯೆಯು ಈ ಪ್ರಶ್ನೆಗಳ ಅಂತರಾಳವನ್ನು ಹೊಕ್ಕಿ ಉತ್ತರವನ್ನು ಹೇಳುತ್ತದೆ.  ಉಪನಿಷತ್ತಿನ ಈ ಧ್ಯಾನದ ವಿದ್ಯೆಯು ಹುಟ್ಟು ಮತ್ತು ಸಾವು ಎಂಬ ಸ್ವಾಭಾವಿಕ ನಡಾವಳಿಯ ಬಗೆಗೆ ವಿಚಾರಮಾಡುತ್ತದೆ ಮತ್ತು ಇದು ಒಂದು ಕತೆಯ ಮೂಲಕ ಪ್ರಾರಂಭವಾಗುತ್ತದೆ.

ಮಹಾ ಜ್ಞಾನಿಯಾದ ಉದ್ಧಾಲಕ ಆರುಣಿಯ ಮಗನಾದ ಶ್ವೇತಕೇತುವೆಂಬ ವಿದ್ಯಾರ್ಥಿಯು ಅತ್ಯಂತ ಸಮರ್ಪಕವಾಗಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುತ್ತಾನೆ. ಆತನಿಗೆ ತಾನಿನ್ನೇನೂ ಕಲಿಯಲು ಉಳಿದಿಲ್ಲವೆಂಬ ವಿಚಾರವೂ ತನ್ನಷ್ಟಕ್ಕೆ ಮನದಟ್ಟಾಗಿರುತ್ತದೆ. ಆತನ ತಂದೆಯೂ ಮಗನಿಗೆ ಸರ್ವವಿದ್ಯಾಪಾರಂಗತನೆಂದು ಹರಸಿರುತ್ತಾನೆ.  ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಕ್ಷತ್ರಿಯ ರಾಜನಾದ ಪ್ರವಾಹಣ ಜೈವಲಿಯ ಮುಂದೆ ಪ್ರದರ್ಶಿಸಬೇಕೆಂಬ ಆಕಾಂಕ್ಷೆಯಿಂದ ರಾಜನಲ್ಲಿಗೆ ತೆರಳುತ್ತಾನೆ. ಶ್ವೇತಕೇತುವನ್ನು ರಾಜನು ಆದರದಿಂದ ಬರಮಾಡಿಕೊಂಡು ಕುಶಲೋಪರಿಯನ್ನು ವಿಚಾರಿಸಿ,  ತನ್ನಲ್ಲಿಗೆ ಆಗಮಿಸಿದ ವಿಚಾರವನ್ನು ತಿಳಿಯಬಯಸುತ್ತಾನೆ. ಶ್ವೇತಕೇತುವು ತನ್ನ ವಿದ್ಯಾಪಾಂಡಿತ್ಯವನ್ನು ಪ್ರದರ್ಶಿಸಲು ಬಂದಿರುವುದಾಗಿ ಹೇಳಿದಾಗ, ರಾಜನು ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆ ಸಂಭಾಷಣೆ ಹೀಗಿದೆ..

ರಾಜ :  ತಾವು ಸಂಪೂರ್ಣ ಜ್ಞಾನಿಗಳಾಗಿರುವಿರೋ ? ನಿಮ್ಮ ವಿದ್ಯಾಭ್ಯಾಸ ಮುಗಿದಿರುವುದೇ ? ಗುರುಗಳು ನಿಮ್ಮ ವಿದ್ಯೆ ಪೂರ್ಣಗೊಂಡಿರುವುದಕ್ಕೆ ಅಂಕಿತನ್ನು ಹಾಕಿದ್ದಾರೆಯೇ ?

ಶ್ವೇತ  :  ಹೌದು. ನನ್ನ ವಿದ್ಯಾಭ್ಯಾಸ ಸಂಪೂರ್ಣವಾಗಿದೆ. ಗುರುಗಳು ನನ್ನನ್ನು ಹರಸಿದ್ದಾರೆ.

ಹೀಗೆಂದ ಶ್ವೇತಕೇತುವಿಗೆ ರಾಜನು ೫ ಮರುಪ್ರಶ್ನೆಗಳನ್ನು ಕೇಳುತ್ತಾನೆ. ಅವುಗಳೆಂದರೆ,

೧)  ಈ ಪ್ರಪಂಚವನ್ನು ತೊರೆದ ನಂತರ ಜೀವಿಗಳು ಎಲ್ಲಿಗೆ ಹೋಗುತ್ತವೆಂದು ನಿಮಗೆ  ತಿಳಿದಿದೆಯೆ ?
೨) ಈ ಜಗತ್ತಿಗೆ ಜೀವಿಗಳು ಬರುವ ಮುನ್ನ ಅವು ಎಲ್ಲಿರುತ್ತವೆ ಮತ್ತು ಹೇಗೆ ಹುಟ್ಟುತ್ತವೆಯೆಂದು ನಿಮಗೆ ತಿಳಿದಿದೆಯೆ ?
೩) ಜೀವಿಯು ಹುಟ್ಟುವ ಮುನ್ನ ಅವು ನಡೆದು ಬರುವ ದಾರಿಯು ನಿಮಗೆ ತಿಳಿದಿದಿಯೆ ?
೪) ಇಡೀ ಜಗತ್ತು  ಜೀವಿಗಳಿಂದ ಸಂಪೂರ್ಣ ತುಂಬಿಕೊಳ್ಳದೆ ಮರಣಗಳ ಮೂಲಕ ಸಮತೋಲವಾಗುತ್ತಿರುವುದು ಏಕೆಂದು ನಿಮಗೆ ತಿಳಿದಿದೆಯೆ ?
೫) ಜೀವಿಯು ಮಾನವರೂಪ ತಾಳಿ ಬರುವ ಕ್ರಿಯೆಯು ನಿಮಗೆ ತಿಳಿದಿದೆಯೆ ?

ರಾಜನು ಕೇಳಿದ ಮೇಲಿನ ಐದೂ ಪ್ರಶ್ನೆಗಳಿಗೂ ಶ್ವೇತಕೇತುವು ಉತ್ತರಿಸಲಾಗದೆ ಹೋಗುತ್ತಾನೆ. ನಂತರ ತನ್ನ ವಿದ್ಯೆಯು ಅಪೂರ್ಣವೆಂದು ರಾಜನಲ್ಲಿ ಒಪ್ಪಿಕೊಂಡು ಐದು ಪ್ರಶ್ನೆಗಳಿಗೂ ತನಗೆ ಉತ್ತರ ತಿಳಿಸಬೇಕೆಂದು ವಿನಂತಿಸುತ್ತಾನೆ.  ರಾಜನು ಆತನಿಗೆ ತನ್ನ ಶಿಷ್ಯನಾಗಿ ಬರಲು ತಿಳಿಸುತ್ತಾನೆ ಮತ್ತು ಕೆಲವು ಧ್ಯಾನ ಮತ್ತು ಯೋಗಗಳನ್ನು ತಿಳಿಸಿಕೊಡುತ್ತಾನೆ. ಒಂದು ದಿನ ರಾಜನು ಶ್ವೇತಕೇತುವಿನ ಸಂದೇಹಕ್ಕೆ ಪರಿಹಾರವನ್ನು ಹೇಳುತ್ತಾ ಪಂಚಾಗ್ನಿಯ ವಿಚಾರವನ್ನು ಹೀಗೆ ಹೇಳುತ್ತಾನೆ.

"ಶರೀರದಲ್ಲಿ ಜನಿಸಲು ಸುಖಸ್ಥಾನದಿಂದ ಹಿಂತಿರುಗಿ ಬರುವ ಆತ್ಮವು ಹೊಸಶರೀರವನ್ನು ಪಡೆಯಲು ಐದು ಅಗ್ನಿಗಳ ಮೂಲಕ ಹಾದುಹೋಗಬೇಕಾಗುತ್ತದೆ. ಸಹಜವಾಗಿ ಅಗ್ನಿಯು ಶರೀರ ಮತ್ತು ವಸ್ತುಗಳನ್ನು ದಹಿಸುತ್ತದೆ. ಹಾಗಿರುವಾಗ ಅದನ್ನು ರೂಪಗಳ ಜನಕವೆಂದು ಹೇಗೆ ಕರೆಯಬಹುದು ? ಆತ್ಮವು ಐದು ಅಗ್ನಿಗಳ ಮೂಲಕ ಹಾದು ಬರುವುದು ಹೇಗೆ ? .

 ಅಗ್ನಿಗೆ ಎರಡು ಪ್ರಮುಖ ಕ್ರಿಯೆಗಳಿವೆ.
೧) ಸೃಷ್ಟಿ ಮತ್ತು ನಾಶ
೨) ಆತ್ಮಗಳಿಗೆ ಸೂಕ್ಷ್ಮ ಶರೀರಗಳನ್ನು ರಕ್ಷಿಸಿಡುವುದು.

ಆತ್ಮವು ಐದು ಹಂತಗಳನ್ನು ದಾಟಿ ಬರುವಾಗ , ಒಂದೊಂದು ಹಂತದಲ್ಲೂ ಒಂದೊಂದು ಸೂಕ್ಷ್ಮ ಶರೀರವನ್ನು ಅಗ್ನಿಯು ಒದಗಿಸಬೇಕಾಗುತ್ತದೆ.
ಸುಖಸ್ಥಾನ(ಸ್ವರ್ಗವೇ?) ದಲ್ಲಿ ಆತ್ಮಕ್ಕೆ ಅಗ್ನಿಯು ಸೂಕ್ಷ್ಮವಾದ ಮಾನಸಿಕ ರೂಪನೆಲೆ ಕೊಟ್ಟಿರುತ್ತದೆ. ಮೊದಲನೆಯ ಅಗ್ನಿಹೋತ್ರ ಅಥವ ಹೋಮವು ಅಲ್ಲೇ ನಡೆಯುತ್ತದೆ.
ಎರಡನೆಯದು ಜ್ಯೋತಿರ್ಲೋಕದಲ್ಲಿ ಅಂದರೆ ಆತ್ಮವು ಸುಖಸ್ಥಾವನ್ನು ಬಿಟ್ಟು ನಂತರದ ಹಂತಕ್ಕೆ ಬಂದಾಗ  ನಡೆಯುತ್ತದೆ. ಜ್ಯೋತಿರ್ಲೋಕವೆಂದರೆ ಆತ್ಮಕ್ಕೆ  ಸಂಪೂರ್ಣ ಭೌತಿಕ ಶಕ್ತಿಯನ್ನು ಒದಗಿಸುವ ಹಂತ. ಅಲ್ಲಿ ಎರಡನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ಮೂರನೆಯದು ಜಗತ್ತಿನ ಭೌತಿಕ ನೆಲೆಯಲ್ಲಿ ಮನುಷ್ಯ ಶರೀರದಲ್ಲಿ ಸೂಕ್ಷ್ಮರೂಪದಲ್ಲಿ ನಡೆಯುತ್ತದೆ. ಮನುಷ್ಯರು ಸೇವಿಸುವ ಅನ್ನಾಹಾರಗಳಲ್ಲಿ ಬೆರೆತುಹೋಗುತ್ತದೆ. ಇಲ್ಲಿ ಮೂರನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ನಾಲ್ಕನೆಯದು, ಮನುಷ್ಯರು ತಿಂದ ಆಹಾರದಲ್ಲಿ ಪ್ರಾಣಾಗ್ನಿಹೋತ್ರವಾಗಿ ಸಂಭವಿಸುತ್ತದೆ. ಜೀರ್ಣವಾದ ಆಹಾರದಲ್ಲಿ ಬೆರೆತು ಪುರುಷನಲ್ಲಿ ವೀರ್ಯವನ್ನೂ, ಸ್ತ್ರೀಯಲ್ಲಿ ಅಂಡಾಣುಗಳನ್ನು ಉತ್ಪತ್ತಿಮಾಡುವುದರ ಮೂಲಕ ಸೂಕ್ಷ್ಮರೂಪದಲ್ಲಿ ಶರೀರವನ್ನು ಪಡೆದುಕೊಳ್ಳುತ್ತದೆ ಮತ್ತು ನಾಲ್ಕನೆಯ ಹೋಮವಾಗಿ ಪರಿಗಣಿತವಾಗುತ್ತದೆ.
ಪುರುಷನ ವೀರ್ಯವು ಸ್ತ್ರೀಯ ಗರ್ಭವನ್ನು ಪ್ರವೇಶಿಸಿದಾಗ ಐದನೆಯ ಹೋಮವು ನಡೆಯುತ್ತದೆ. ಐದನೆಯ ಅಗ್ನಿಹೋತ್ರವು ನಡೆಯುವುದರ ಮೂಲಕ ಆತ್ಮಕ್ಕೆ ಭೌತಿಕ ದೇಹವು ಲಭಿಸಿ ಶರೀರವು ರಚನೆಯಾಗುತ್ತದೆ " .

ರಾಜನ ಮಾತನ್ನು ಕೇಳಿದ ಶ್ವೇತಕೇತುವು ಸಂತೃಪಿಯಿಂದ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಉತ್ಸುಕನಾಗುತ್ತಾನೆ. .......ಮುಂದಿನ ವಿಷಯಗಳು ಇಲ್ಲಿ ಅಪ್ರಸ್ತುತ.

ಪಂಚಾಗ್ನಿಹೋಮ ಅಥವ ವಿದ್ಯೆ ಎಂಬುದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ಹೀಗೆ ವಿವರಣೆಯನ್ನು ಕೊಡಲಾಗಿದೆ. ಉಪನಿಷತ್ತುಗಳು ಧ್ಯಾನ ಮತ್ತು ಯೋಗಗಳ ಮೂಲಕ ಸೃಷ್ಟಿಯನ್ನು ಅರಿಯುವ ಪ್ರಾಯೋಗಿಕ ಸಿದ್ಧಾಂತವೇ ಆಗಿದೆ.  
............................................................................................

ಉಪ"ಸಂಹಾರ" :
...................
ನನಗೆ ಯಾರನ್ನೂ ವೈಯಕ್ತಿಕವಾಗಿ ತೆಗಳುವುದಕ್ಕೆ ಇಷ್ಟವಾಗುವುದಿಲ್ಲ. ಹಾಗಂತ ನಾನೇನೂ ಪುಣ್ಯಕೋಟಿಯಲ್ಲ. ಪಂಚಾಗ್ನಿಹೋಮ ಮಾಡುತ್ತೇನೆಂದು ನಿತ್ಯಾನಂದ ಮಹಾರಾಜರು ತಮ್ಮ ಸುತ್ತಲೂ ತಾವೇ ಒಂದು ವರ್ತುಲವನ್ನು ನಿರ್ಮಿಸಿ, ಅಲ್ಲೆಲ್ಲಾ ಸೀಮೆ ಎಣ್ಣೆ ಸುರಿದು ಒಂದಷ್ಟು ಕರಟ, ಸೌದೆಗಳನ್ನು ಹಾಕಿ ಬೆಂಕಿ ಹೊತ್ತಿಸಿ ಅದರ ನಡುವೆ ತಾವು ಕೂತು ಧ್ಯಾನ ಮಾಡಿ ಪಂಚಾಗ್ನಿ ಹವನ ಮಾಡಿದೆ ಎಂದು ...ಹೇಳಿದ್ದರಲ್ಲಿ ತಪ್ಪಿಲ್ಲದಿರಬಹುದು. ಕಾರಣ ಅವರಿಗೆ ಮೇಲಿನ ಪಂಚಾಗ್ನಿ ವಿದ್ಯೆಯ ಬಗ್ಗೆ ತಿಳಿದಿಲ್ಲದಿರಬಹುದು. ಎಲ್ಲರಿಗೂ ಎಲ್ಲವೂ ತಿಳಿದಿರಬೇಕೆಂದೇನಿಲ್ಲವಲ್ಲ !. ಅಥವ ಪಂಚಾಗ್ನಿ ಧ್ಯಾನವನ್ನು ಅರಿತಿರಲೂ ಬಹುದು. ಸಿನಿಮಾ ನಟಿ ರಂಜಿತಾರೊಡಗೂಡಿ ’ಐದನೆಯ’ ಅಗ್ನಿಹೋತ್ರವನ್ನು ಪ್ರಾಯೊಗಿಕ ಸಿದ್ದೀಕರಿಸಲು ಪಣತೊಟ್ಟಿದ್ದಿರಲೂಬಹುದು ! . ಯಾವುದೇ ಅಪವಾದವನ್ನು ವೈಯಕ್ತಿಕವಾಗಿ ಹೇಳುವುದಕ್ಕೆ ಮುನ್ನ ವೇದಾಂತಗಳಲ್ಲಿ ಅಂತಹ ಅಪವಾದಗಳಿಗೆ ಏನು ಹೇಳಿದೆ ಎಂಬುದನ್ನು ಅರಿಯುವುದು ಸೂಕ್ತ. ನಿತ್ಯಾನಂದ ಮಹರಾಜರನ್ನು ಹಳಿಯುವುದರ ಮೂಲಕ ಸಮಸ್ತ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ನಾನು ಸುತರಾಂ ಒಪ್ಪುವುದಿಲ್ಲ. ನಾನು ಹುಟ್ಟಿದ ನಂತರ ಹಿಂದುವಾದೆನೋ ಅಥವ ಅದಕ್ಕೆ ಮೊದಲೇ ಆಗಿದ್ದೆನೋ ಗೊತ್ತಿಲ್ಲ. ಈಗಂತೂ ನಾನು ಪಕ್ಕಾ ಹಿಂದೂ ಆಗಿರುವುದು ಸತ್ಯ. ಇದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಪೊಳ್ಳು ಜಾತ್ಯಾತೀತದ ಮುಖವಾಡ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ.  ನಿತ್ಯಾನಂದರು ಬಹಳ ಶ್ರಮಪಟ್ಟು ಛಾಂದೋಗ್ಯದ ಧ್ಯಾನವನ್ನು ಅರಿಯಲು ಬೆಂಕಿಯ ಜೊತೆ ಸರಸವಾಡಿದ್ದು ಅನೇಕರಿಗೆ ತಮಾಷೆಯೆನ್ನಿಸಿರಬಹುದು. ಆದರೆ ಅದೂ ಅರಿಯುವ ಪ್ರಕ್ರಿಯೆಯಲ್ಲಿ ಒಂದು ಹೆಜ್ಜೆಯಲ್ಲವೆ ?!.  ’ ಶ್ರೇಯಾಂಸಿ ಬಹು ವಿಘ್ನಾನಿ’ ಎನ್ನುವಂತೆ ಪರಮಹಂಸರಾಗುವವರಿಗೆ ಅಡೆತಡೆಗಳು ಸಹಜ. ಅದನ್ನೆಲ್ಲಾ ದಾಟಿ ಅವರು ಪಂಚಾಗ್ನಿಯನ್ನು ಅರಿಯುತ್ತಾರೆಂದು ಭರವಸೆಯಿಟ್ಟುಕೊಳ್ಳಬಾರದೇಕೆ ?. ಈಗಂತೂ ಅವರು ತಾವು ಸನ್ಯಾಸಿಯೇ ಅಲ್ಲ ತಾನೊಬ್ಬ ಧ್ಯಾನಿ ಎಂದು ಬಹು ಘಂಟಾಘೋಷವಾಗಿ ಹೇಳಿದ್ದಾರೆ. ಹಾಗಾಗಿ ಅವರೀಗ ಉಪನಿಷತ್ತುಗಳಲ್ಲಿಯ ಧ್ಯಾನದ ರಹಸ್ಯವನ್ನು ಅರಿಯಲು ಮೌನಧ್ಯಾನಿಯಾಗಿದ್ದಾರೆಂದು ತಿಳಿಯಬಹುದು . ನನಗೆ ಅವರ ಬಗೆಗೆ ಸಂಪೂರ್ಣ ವಿಶ್ವಾಸವಿದೆ. ಯಾವುದಾಗದಿದ್ದರೂ ಪಂಚಾಗ್ನಿಯ ಐದನೆಯ ಹೋಮವನ್ನಂತೂ ಅವರು ಸಾಧಿಸಿಯೇ ತೀರುತ್ತಾರೆ...

ಬೋಲೋ ಶ್ರೀ ನಿತ್ಯಾನಂದ ಭೂಪಾಲ್ ಮಹರಾಜ್ ಕೀ ........

( ಇಷ್ಟೆಲ್ಲಾ ಓದಿದ ಮೇಲೆ ನಾನೂ ನಿತ್ಯಾನಂದರ ಶಿಷ್ಯನೋ ಅಥವ ಸನ್ಯಾಸಿಯಾಗುವೆನೆಂದು ಮಾತ್ರ ಊಹಿಸಬೇಡಿ. ನನಗೆ ಪ್ರಾಪಂಚಿಕ ಸುಖಗಳು  ಬೇಕು. (Worldly pleasures !)  ಕಾರಣ ನಾನೊಬ್ಬ ಸಾಮಾನ್ಯ ಮನುಷ್ಯ !)      

===========================================================


ಕೊನೆಕಿಡಿ :

ಜನನಾಯಕರೊಬ್ಬರು ಭೀಕರ ಭಾಷಣವನ್ನು ಕೊರೆಯುತ್ತಿದ್ದರು. ಸಾಕಷ್ಟು ಮಂದಿಯೂ ಸೇರಿದ್ದರು. ಅಲ್ಲಿ ಶಂಭುಲಿಂಗನೂ ಇದ್ದ !. ಅದೂ ನಾಯಕರ ಪಕ್ಕದಲ್ಲೆ ಕುಳಿತಿದ್ದ.
ಹರಿಯಿತು ಓತಪ್ರೋತವಾಗಿ ನಾಯಕರ ಭಾಷಣ. ಸಮಯ ಸರಿದಂತೆ ಮಂದಿಯೂ ಕಾಣೆಯಾದರು. ಅಲ್ಲುಳಿದಿದ್ದು ಶಂಭುಲಿಂಗ ಮಾತ್ರ !.
ನಾಯಕರು ಶಂಭುವನ್ನು ಹೊಗಳಿದರು, ತನ್ನ ಮಾತನ್ನು ಕೇಳಲು ಇವನೊಬ್ಬನಾದರೂ ಇರುವನಲ್ಲ ಎಂದು. ಶಂಭು ದೇಶಾವರಿ ನಗೆಯೊಂದನ್ನು ಬಿಸಾಡಿ ಹೇಳಿದ...
" ನಿಮ್ದಾದ ಮ್ಯಾಕೆ ನಂದೇ ಭಾಸ್ನ್ ಸೋಮಿ..ಅದ್ಕೆ ಕುಂತಿವ್ನಿ !! " .

Aug 2, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... ೩

ನಾಗಪ್ಪನವರ ಮುಖ ವಿಷಣ್ಣವಾಯಿತು, ಅದು ಗೋಪಾಲಯ್ಯನಿಗೂ ಕಂಡಿತು. ಚಿರಂತನಿಗೆ ತಾನೇ ಮಾತನಾಡಬೇಕೆನ್ನಿಸಿದರೂ, ಸಂದರ್ಭ ಸರಿಯಾಗಲಿಕ್ಕಿಲ್ಲ ಎಂದು ಸುಮ್ಮನಾದ. ಕ್ಷಣಕಾಲ ಮೌನ ಆವರಿಸಿತು.  ಅಡುಗೆಮನೆಯಿಂದ ಸೀತಮ್ಮ ಹೊರಬಂದರು. ಗಂಡಸರು ಮಾತನಾಡುವಾಗ ಹೆಂಗಸರು ಮಧ್ಯೆ ಬಾಯಿ ಹಾಕಬಾರದೆನ್ನುವ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು ಸೀತಮ್ಮ. ಯಾರಿಂದಲೂ ಮಾತು ಹೊರಡದಾದಾಗ ತಾವೇ ಮಾತನಾಡುವುದು ಸೂಕ್ತವೆಂದು ಭಾವಿಸಿದರು. ಹಾಗೆ ಮಾತನಾಡಿದರು ಕೂಡ .

" ನಮಗೆ ಇಂಜಿನಿಯರ್ರೇ ಆಗಬೇಕು ಅಂತೇನು ಇರಲಿಲ್ಲ, ನಮ್ಮ ಕುಟುಂಬದವರೆಲ್ಲಾ ಕಂಪ್ಯೂಟರ್ ಇಂಜಿನಿಯರ್ರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅವೆಲ್ಲಾ ಈಗ ಫಾ಼ರಿನ್ನು, ಹಾಳು-ಮೂಳು ಅಂತ ತಿರುಗಾಡಿಕೊಂಡಿವೆ. ನಮಗೆ ಇರೋಳು ಒಬ್ಬಳೇ ಮಗಳು. ಮಗಳು ಒಳ್ಳೆ ಕಡೆ ಸೇರಲಿ, ಎಲ್ಲರಂತೆ ಕಾರು-ವಿಮಾನ ಅಂತ ಓಡಾಡ್ಕೊಂಡು ಇರಲಿ ಅನ್ನೋ ಆಸೆ ಅಷ್ಟೆ. ಒಟ್ಟಿನಲ್ಲಿ ಒಳ್ಳೆ ಕೆಲಸ ಆದರೆ ನಮ್ಮ ಅಭ್ಯಂತರವೇನು ಇಲ್ಲ "
ನಾಗಪ್ಪ ಹೆಂಡತಿಯ ಮುಖವನ್ನೊಮ್ಮೆ ನೋಡಿದರು. ಮತ್ತೆ ತಲೆ ಕೆಳಗೆ ಹಾಕಿ ನೆಲವನ್ನೇ ದಿಟ್ಟಿಸತೊಡಗಿದರು.  ಈ ವಿಷಯವನ್ನು ಬೇಗ ಇತ್ಯರ್ಥಗೊಳಿಸಬೇಕು ಎಂದುಕೊಂಡ ಚಿರಂತ. ಮತ್ತೆ-ಮತ್ತೆ  ವೃತ್ತಿ ಸಂಬಂಧ ವಿಚಾರಗಳನ್ನು ಯಾರೂ ಕೆದಕುವುದು ಅವನಿಗೆ ಸರಿಕಂಡುಬರಲಿಲ್ಲ. ತಲೆ ತಗ್ಗಿಸಿ ಕುಳಿತಿದ್ದ ನಾಗಪ್ಪನವರನ್ನೊಮ್ಮೆ ದಿಟ್ಟಿಸಿದ. ತುಸು ಹತಾಶರಾದಂತೆ ಕಂಡುಬಂದಿತು. ಸೀತಮ್ಮನವರೊಟ್ಟಿಗೆ ಮಾತನಾಡುವುದೇ ಸರಿಯೆಂದುಕೊಂಡ.

" ಅಮ್ಮಾ, ಇಂಜಿನಿಯರ್ರೇ ಆಗಲಿ, ನಾನೇ ಆಗಲಿ ಅಥವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡ್ತಾ ಇರೋ ನನ್ನಂತಹ ಸಾವಿರಾರು ಜನಗಳ ಬದುಕು , ಹೊರಗಡೆಯಿಂದ ನೋಡೋರಿಗಷ್ಟೆ ಚೆಂದ. ಎಲ್ಲದಕ್ಕೂ ನಾವು ಶನಿವಾರ-ಭಾನುವಾರಗಳನ್ನೇ  ಕಾಯ್ಬೇಕು. ನಾವು ದುಡಿದದ್ದನ್ನು ನೆಮ್ಮದಿಯಾಗಿ ಉಣ್ಣುತ್ತೇವೆಂಬ ನಂಬಿಕೆ ನಮ್ಮಲ್ಲಿ ತುಂಬ ಕಡಿಮೆ. ಒಂದು ರೀತಿಯ ಯಾಂತ್ರಿಕ ಜೀವನ ನಮ್ಮದು. ಅದರಲ್ಲೂ ಬೆಂಗಳೂರು ಅನ್ನೋದು ವಿಲಾಸೀ ಮಾಯಾ ಲೋಕ. ಅಲ್ಲಿ ಬದುಕೋದು ನಮ್ಮ ಸದ್ಯದ ಅನಿವಾರ್ಯತೆ ಮತ್ತು ಅಗತ್ಯ. ಅಂತಹ ಮಾಯಾಮೃಗದ ಬೆನ್ನುಹತ್ತಿ ಹೋಗೋ ಅವಶ್ಯಕತೆ ನಿಮಗಿಲ್ಲ ಅಂದುಕೊಳ್ಳುತ್ತೇನೆ. ಇಷ್ಟಕ್ಕೂ ಯಾರೂ ನಿಮ್ಮ ಮಗಳ ಅಭಿಪ್ರಾಯವನ್ನೇ ಕೇಳಲಿಲ್ಲವಲ್ಲ, ಆಕೆಯನ್ನೇನು ಬಂಧಿಸಿಟ್ಟಿದ್ದೀರೇನು ? ".

 ನಾಗಪ್ಪ ತುಸು ಸಾವರಿಸಿಕೊಂಡವರಂತೆ ಮೇಲೆದ್ದರು. ಮುಖದಲ್ಲಿ ಬಲವಂತದ ನಗುವೊಂದನ್ನು ತಂದುಕೊಂಡರು. ಅದನ್ನು ತೋರಿಕೊಂಡರು ಕೂಡ. ಏನೋ ಹೇಳಲು ಹೊರಟ ಗೋಪಾಲಯ್ಯನವರನ್ನು ಅರ್ಧಕ್ಖೇ ತಡೆದರು ನಾಗಪ್ಪ.

" ಗೋಪಾಲಯ್ಯ, ಹುಡುಗ ಹೇಳೋದು ಸರಿಯಿದೆ. ಹಾಳಾದ್ದು ಈ ಕಂಪ್ಯೂಟರ್ ವಿಷಯ ನಮಗೆ ಗೋತ್ತಾಗೋದಿಲ್ಲ ನೋಡಿ. ಅವರಿಬ್ಬರೇ ಮಾತನಾಡಿಕೊಂಡು ಬಿಡಲಿ ಅಲ್ಲವೆ. ಅವರ ಜೀವನವನ್ನು ಅವರೇ ತೀರ್ಮಾನ ಮಾಡಿಕೊಳ್ಳೋದು ಒಳ್ಳೇದು . ಏನಂತೀರಿ ? "

ಗೋಪಾಲಯ್ಯ ಮನಸಿನಲ್ಲೇ ಹೌದೆಂದುಕೊಂಡರು. ಹೊರಗೆ ತೋರ್ಪಡಿಸದೆ, ಗೋಣು ಹಾಕಿ ಸುಮ್ಮನಾದರು. ಹಜಾರಕ್ಕೆ ಅಂಟಿಕೊಂಡಿದ್ದ ಕೋಣೆಯ ಬಾಗಿಲು ತೆರೆದರು ನಾಗಪ್ಪ. ಮಗಳನ್ನು ಹೊರಬರುವಂತೆ ಕರೆದರು. ಅಲ್ಲಿಯವರೆಗೂ ಒಳಗೆ ಒಂಟಿಯಾಗಿ ಕುಳಿತಿದ್ದರಿಂದಲೋ ಏನೋ ಆಕೆಯ ಮುಖ ಬಾಡಿದಂತಾಗಿತ್ತು. ಸಂಪ್ರದಾಯದಂತೆ ಸೀರೆ ಉಟ್ಟು ತಲೆಗೆ ಹೂ ಮುಡಿದು ನಿಂತಿದ್ದ ಹುಡುಗಿಯನ್ನೊಮ್ಮೆ ಚಿರಂತ ದಿಟ್ಟಿಸಿದ. ಕಿರುನಗೆಯೊಂದು ಅವನ ತುಟಿಯಂಚಿನಲ್ಲಿ ಮಿನುಗಿ ಮಾಯವಾಯಿತು. ಅವನೇ ಮಾತಿಗೆ ಮುಂದಾದ.

" ನಿಮ್ಮ ಅಭ್ಯಂತರವೇನೂ ಇಲ್ಲವೆಂದಾದರೆ ನಾನು, ನಿಮ್ಮ ಮಗಳು ಸ್ವಲ್ಪ ಕಾಲ ನಿಮ್ಮ ತೋಟದಲ್ಲೆ ತಿರುಗಾಡಿಕೊಂಡು ಬರಬಹುದೆ ? ಹಾಗೇ ಒಂದಷ್ಟು ವಿಚಾರ ವಿನಿಮಯವೂ ಆಗಬಹುದೇನೋ ಅಂತ ".

 ನಾಗಪ್ಪ ಮರುಮಾತಿಲ್ಲದೆ ಸಮ್ಮತಿಯಿತ್ತು ಅಡುಗೆಮನೆಯೆಡೆಗೆ ನಡೆದರು. ಹುಡುಗ-ಹುಡುಗಿ ಮನೆಯಿಂದ ಹೊರಬಿದ್ದರು. ಗೋಪಾಲಯ್ಯ ಕೈಯಿಗೆ ಸಿಕ್ಕಿದ ಪುಸ್ತಕವೊಂದನ್ನು ತಿರುವುತ್ತ ಕುಳಿತರು. ಸೀತಮ್ಮ ತುಸು ಗಾಬರಿಯಾಗಿದ್ದರು. ಅವರ ಆತಂಕಕ್ಕೆ ಕಾರಣವೂ ಇತ್ತು. ನಾಗಪ್ಪ ಒಳಬಂದಿದ್ದು ನೋಡಿ ದುಗುಡದಿಂದ ಹೇಳಿಕೊಂಡರು.

"ಇಬ್ಬರನ್ನೇ ಹಾಗೆ ಹೊರಗೆ ಕಳಿಸೋದು ಅದೇನು ಚೆನ್ನಾಗಿರುತ್ತೆ ಹೇಳಿ ? , ಅದೂ ಮದುವೆಗೆ ಮುಂಚೆಯೆ, ಕನಿಷ್ಠ ಲಗ್ನಪತ್ರಿಕೆಯಾದರೂ ಆಗಬಾರದೆ. ನೀವಂತೂ ಇತ್ತೀಚೆಗೆ ಇಂಗು ತಿಂದ ಮಂಗನ ಹಾಗೆ ಆಡ್ತಾ ಇದ್ದೀರಿ. ಅವರೇನೋ ಕೇಳುದ್ರಂತೆ, ಇವರು ಕಳುಹಿಸಿಬಿಟ್ರಂತೆ. ಹೆಚ್ಚು-ಕಮ್ಮಿಯಾದರೆ ಯಾರು ಜವಾಬುದಾರರು? ಅಕ್ಕ-ಪಕ್ಕದವರು ಏನಂದಾರು ".

"ಸೀತೂ, ನೀನಿನ್ನೂ ನಿಮ್ಮಜ್ಜನ ಕಾಲದಲ್ಲೇ ಇದ್ದೀಯ. ಬೆಂಗಳೂರಿನಲ್ಲಿ ಇದೆಲ್ಲಾ ಸರ್ವೇಸಾಮಾನ್ಯ. ಇಷ್ಟಕ್ಕೂ ಬೆಂಗಳೂರನ್ನು ನೀನು ಕಂಡಿದ್ರೆ ತಾನೆ ನಿನಗೆ ಗೊತ್ತಾಗೋದು"

" ಕಾಣೋದಕ್ಕೆ ಕರೆದುಕೊಂಡು ಹೋಗಿದ್ರೆ ತಾನೇ ನೀವು ? ಪಕ್ಕದ ’ಬಾಳೆಹೊನ್ನೂರು’ ತೋರಿಸೋದಕ್ಕೆ ಮದುವೆಯಾಗಿ ೧೦ ವರ್ಷ ತಗೊಂಡ್ರಿ ನೀವು. ಎಂದಾದ್ರೂ ಸ್ವತಂತ್ರವಾಗಿ ನಿರ್ಧಾರತಗೊಳೋಕೆ ಬಿಟ್ರೇನು ನೀವು ? "

"ಆಯ್ತು ಮಹರಾಯ್ತಿ, ಇಲ್ಲಿವರೆಗೂ ನಿನಗೆ ಸ್ವತಂತ್ರ ಸಿಕ್ಕಿರಲಿಲ್ಲ. ಇನ್ನು ಮುಂದೆ ನೀನು ಸರ್ವತಂತ್ರ ಸ್ವತಂತ್ರೆ. ನಿನ್ನ ಮಗಳ ಮದುವೆ ವಿಷಯದಲ್ಲಿ ನೀನೇ ನಿರ್ಧಾರ ತಗೋ , ಆಯ್ತಾ "

ನಾಗಪ್ಪ ಹೊರಬಂದರು. ಅಡುಗೆ ಮನೆಯಲ್ಲಿ ಆಗಾಗ್ಗೆ  ಪಾತ್ರೆಗಳ  ಸದ್ದು ಜೋರಾಗಿ ಕೇಳಿಬರುತ್ತಿತ್ತು.

ಇತ್ತ , ಪರಸ್ಪರ ಮಾತನಾಡಲೆಂದು ಹೊರಬಂದವರಿಬ್ಬರೂ ಬಹಳ ದೂರ ಮೌನವಾಗೇ ಸಾಗಿ ಬಂದಿದ್ದರು. ಹುಡುಗಿಯೇ ಮಾತನಾಡಿದಳು.

" ನಿಮ್ಮ ಹೆಸರು ಚಿರಂತ್ ಅಂತ ಗೊತ್ತಾಯ್ತು. ನಾನು ಪಲ್ಲವಿ ".

ಹುಡುಗಿಯ ಮಾತಿನಿಂದ ಉತ್ತೇಜಿನಾದಂತೆ ಕಂಡುಬಂದ ಚಿರಂತ.

" ಒಹ್ !. Good name. ಏನು ಒದಿದ್ದೀರಿ ? I mean education ? "

" M.A. ಆಗಿದೆ. ಪೊಲಿಟಿಕಲ್ ಸೈನ್ಸ್ "

"ನಾನು MBA ಮುಗಿಸಿದ್ದೀನಿ. ನನ್ನ ಮಟ್ಟಿಗೆ ಒಳ್ಳೆ ಕೆಲಸನೂ ಇದೆ. ನಿಮಗೆ ಕೆಲ್ಸ ಮಾಡಬೇಕು ಅಂತೇನೂ ಇಲ್ವ ?"

" ಇದೆ. political science ವಿಭಾಗದಲ್ಲಿ  ಅಧ್ಯಾಪಕಿಯಾಗಬೇಕು ಅನ್ನೋ ಆಸೆ ಇದೆ "

"ಒಹ್ !. Thats wonderful !. ಮತ್ತೆ ಸಮಸ್ಯೆ ಏನು ? "

"ನನ್ನ ಮದುವೆಯದು "

 ಚಿರಂತ ಕ್ಷಣಕಲ ಮೌನವಹಿಸಿದ. ಮುಂದೇನು ಕೇಳಬೇಕೆಂದು ಅವನಿಗೆ ತೋಚಲಿಲ್ಲ . ತೀರಾ ವೈಯಕ್ತಿಕವಾಗಬಹುದೆಂದು ಸುಮ್ಮನಾದ. ಪಲ್ಲವಿಯೇ ಮುಂದುವರಿಸಿದಳು.

" ನನಗೆ ನಮ್ಮ ಊರಲ್ಲೇ ಇದ್ದು ಕೆಲಸ ಮಾಡಬೇಕು ಅಂತ ಆಸೆಯಿದೆ. ಅದರೊಟ್ಟಿಗೆ ನನ್ನ ತಂದೆ-ತಾಯಿಗಳಿಗೂ ಆಸರೆಯಾಗಿರಬೇಕು ಅನ್ನೋದು ಇನ್ನೊಂದು ಆಸೆ "

ಚಿರಂತನಿಗೆ ಕೊಂಚ ಅರ್ಥವಾಗಲಿಲ್ಲ. ಸ್ವಲ್ಪ ತಡೆದು ಪುನಃ ಕೇಳಿದ

"ಅಂದರೆ ? ನಿಮಗೆ ಮದುವೆ ಬೇಡ ಅಂತಲೆ ? "

"ಹಾಗಲ್ಲ. ನಾನು ಒಬ್ಬಳೇ ಮಗಳು. ಇವರನ್ನು ಬಿಟ್ಟು ೩೫೦ ಕಿ.ಮೀ ದೂರದ ಊರಿಗೆ ಹೋಗಿ ಕುಳಿತರೆ, ಇವರಿಗೆ ಕಷ್ಟಕಾಲ ಬಂದಾಗ ನೋಡೋರು ಯಾರು ? ಅಲ್ಲಿಂದ ಇಲ್ಲಿಗೆ ಬರೋಕೆ ಕನಿಷ್ಠ ೭ ಗಂಟೆ ಪ್ರಯಾಣ. ಅಂತಹ ಪ್ರಯಾಣ ಮಾಡೋದಕ್ಕೂ ಒಂದು ತಿಂಗಳ ಮುಂಚೆಯೇ ತಯಾರಾಗಬೇಕು. ಕಷ್ಟ ಅನ್ನೋದು ಹೇಳಿ-ಕೇಳಿ ಬರೋಲ್ಲವಲ್ಲ."

"ಅದು ನಿಜ. ಮತ್ತೆ, ಏನು ಮಾಡಬೇಕು ಅನ್ನೋದು ನಿಮ್ಮ ಉದ್ದೇಶ ?"

" ನನ್ನ ತಂದೆ-ತಾಯಿಯವರೇನೋ ಮದುವೆ ಮಾಡಿ ಕಳುಹಿಸಲು ಸಿದ್ದವಾಗಿದ್ದಾರೆ. ಅದು ಅವರ ಮಗಳ ಬಗೆಗಿರೋ ಕಾಳಜಿ. ಅಂತಹುದೇ ಕಾಳಜಿ-ಅಕ್ಕರೆ ನನಗೂ ಇರುತ್ತೇ ಅಲ್ವಾ ? . ನನ್ನ ಮದುವೆ ಮಾಡಿಕೊಟ್ಟಾದ ಮೇಲೆ ಈ ತೋಟವನ್ನೆಲ್ಲಾ  ಮಾರಿ ಬೆಂಗಳೂರಿಗೆ ಬಂದು ಸೇರ್ಕೋತಾರಂತೆ "

ಚಿರಂತ ಹಾವು ತುಳಿದವನಂತೆ ಬೆದರಿದ.

"ಅಯ್ಯೋ!. ಅಂತಹ ತಪ್ಪು ಕೆಲ್ಸ ಮಾಡೋದುಬೇಡ. ಇನ್ನು ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತೆ. ಬೆಳೆದು ತಿನ್ನೋನೆ ಹೆಚ್ಚು ಸುಖವಾಗಿರ್ತಾನೆ ನೋಡಿ. "

"ಹೌದು.  ಆದರೆ ನನ್ನಿಂದ ಇವರಿಗೆ ಅರ್ಥಮಾಡಿಸಲು ಆಗ್ತಾ ಇಲ್ಲ. "

ವಿಷಯ ಹಳಿತಪ್ಪುತ್ತಿರಬಹುದೆನಿಸಿತು ಚಿರಂತನಿಗೆ. ವಿಷಯವನ್ನು ಅರ್ಧಕ್ಕೆ ತುಂಡರಿಸಿದ.

"ಮದುವೆಯ ಬಗ್ಗೆ ಏನು ಹೇಳಲೇ ಇಲ್ಲ ನೀವು ? "

ಪಲ್ಲವಿಯ ಮುಖ ಮತ್ತಷ್ಟು ಕಳೆಗುಂದಿದಂತಾಗಿದ್ದನ್ನು ಚಿರಂತ ಗಮನಿಸಿದ. ಆಕೆಯೇ ಮಾತನಾಡಲೆಂದು ಸುಮ್ಮನಾದ. ಸಮಯ ಜಾರುತ್ತಿತ್ತು. ಆದರೂ ಸುಮ್ಮನಾದ.

" ಆಗಲೇ ಹೇಳಿದೆನಲ್ಲಾ, ಅಷ್ಟು ದೂರ ಬರೋದಕ್ಕೆ ನನಗಿಷ್ಟವಿಲ್ಲ. ಈ ವಿಷ್ಯಾನ ನಮ್ಮ ಮನೆಯಲ್ಲಿ ಹೇಳೋಕೆ ನನ್ನಿಂದ ಆಗ್ತಿಲ್ಲ. ಹೇಳುದ್ರೂ ಅವರು ಅರ್ಥಮಾಡ್ಕೋತಾರೆ ಅಂತ ನನಗನ್ನಿಸ್ತಿಲ್ಲ "

"I am sorry. ಬೆಂಗಳೂರು ಬಿಟ್ಟು ಬರೋದು ನನಗೂ ಸಾಧ್ಯವಿಲ್ಲ. So , ನಮ್ಮಿಬ್ಬರ ದಾರಿ ಬೇರೆ-ಬೇರೆಯದೇ ಅಂತಾಯ್ತು. ಅದೆಲ್ಲಾ ಸರಿ, ನನ್ನೊಂದಿಗೆ ಹೇಳಿದ ಹಾಗೆ ನಿಮ್ಮ ಪೇರೆಂಟ್ಸ್ ಗೂ ಕನ್ವಿನ್ಸ್ ಮಾಡಬಹುದಲ್ಲ ನೀವು ?"

"ನನ್ನ ಮಾತನ್ನು ಅವರು ಕೇಳೋದಿಲ್ಲ. ಅದೇ ಸಮಸ್ಯೆ "

ಚಿರಂತನ ಮುಖದಲ್ಲಿ ಸಣ್ಣನಗುವೊಂದು ತೇಲಿಬಂತು

"ಇಲ್ಲಿ ಯಾರನ್ನಾದ್ರು ನೋಡಿದೆರೇನು? ನಿಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳೋಕೆ ?"

ಚಿರಂತನ ನೇರ ಪ್ರಶ್ನೆಗೆ ಪಲ್ಲವಿಯ ಉತ್ತರವೂ ಅಷ್ಟೇ ಸಹಜವಾಗಿ ಬಂದಿತು.

"ಹೌದು. ಅವರು ನನ್ನ ಸಹಪಾಠಿ. ಚಿಕ್ಕಮಗಳೂರಿನಲ್ಲಿ ಕೆಲಸ ಮಾಡ್ತಾರೆ. ನನಗೂ ಅಲ್ಲೇ ಕೆಲಸ ಆಗಬಹುದು. ಊರಿಗೆ ಹತ್ತಿರ. ನನ್ನ ಹೆತ್ತವರಿಗೂ ಆಸರೆಯಾಗಿರಬಹುದು ನಾನು"

"ಏನ್ರೀ ನೀವು ? ಒಳಗಡೆ ಬೆಂಕಿಯಿಟ್ಟುಕೊಂಡು ಇಷ್ಟು ದಿನ ಹೇಗ್ರೀ ತಡೆದುಕೊಂಡಿದ್ರೀ ?  any way ನಮ್ಮ ಸ್ನೇಹಕ್ಕಂತೂ ಯಾವ ಕಳಂಕವೂ ಬರೋದಿಲ್ಲ. ನಿಮ್ಮ ಸ್ನೇಹಿತನಾಗಿ ನಾನೀಗ ಏನು ಮಾಡಬೇಕು ಹೇಳಿ ? "

ಪಲ್ಲವಿಯ ಮುಖದಲ್ಲಿ ಮಂದಹಾಸ ಹಾದುಹೋಯಿತು.

" ನಿಮ್ಮಂತಹ ಸ್ನೇಹಿತರು ಸಿಕ್ಕಿದ್ದು ನನಗೂ ಸಂತೋಷವೆ. ಸದ್ಯಕ್ಕೆ ನಿಮ್ಮ ಕೆಲಸ ನನ್ನ ಹೆತ್ತವರನ್ನು ಕನ್ವಿನ್ಸ್ ಮಾಡೋದು ಅಷ್ಟೆ. "

" ನಿಮ್ಮೂರಿನ express ಬಸ್ಸಿನಲ್ಲಿ ಬಂದುದಕ್ಕೆ ಇಷ್ಟೂ ಮಾಡದೇ ಹೋದ್ರೆ ಸರಿಯಾಗುತ್ಯೆ ?  ಆ ಬಸ್ಸಿಗೆ ಅವಮಾನ "

ಮನಃಪೂರ್ವಕವಾಗಿ ನಗುತ್ತಾ ಇಬ್ಬರೂ ಮನೆಯತ್ತ ಹೆಜ್ಜೆ ಹಾಕಿದರು. ಮಾತಿನ ಲಹರಿಯಲ್ಲಿ ಮನೆ ಬಂದುದೇ ತಿಳಿಯಲಿಲ್ಲ ಇಬ್ಬರಿಗೂ. ಒಳಗೆ ಬಂದ ಪಲ್ಲವಿ ಕೋಣೆಯ ಬಾಗಿಲಿಗೆ ಒರಗಿ ನಿಂತಳು. ಚಿರಂತ ಚಾಪೆಯ ಮೇಲೆ ಕೂರದೆ ಟಿ.ವಿ. ಸ್ಟಾಂಡ್ ಪಕ್ಕದಲ್ಲಿದ್ದ ಕುರ್ಚಿಯ ಮೇಲೇ ಕುಳಿತ. ಮಗಳ ಮುಖ ನೋಡಿದ ಸೀತಮ್ಮ ತುಸು ಗೆಲುವಾದರು. ಗೋಪಾಲಯ್ಯ ಅದೇ ಪುಟಗಳನ್ನು ತಿರುವಿಹಾಕುತ್ತಿದ್ದರು. ನಾಗಪ್ಪ ಶುರುಮಾಡಿದರು.

" ಏನ್ ತೀರ್ಮಾನ ತಗೋಂಡ್ರಿ "

ಚಿರಂತ ಗೋಪಾಲಯ್ಯನವರನ್ನೊಮ್ಮೆ ನೋಡಿದ. ನಾಗಪ್ಪನವರೆಡೆಗೆ ತಿರುಗಿದ.

" ನನಗೆ ನಿಮ್ಮ ಮಗಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ "

ನಾಗಪ್ಪ ಕೊಂಚ ವಿಚಲಿತರಾದವರಂತೆ ಕಂಡರು. ಸಾವರಿಸಿಕೊಂಡು ಮತ್ತೆ ಮುಂದುವರಿಸಿದರು.

" ನಾವು ನಿಮ್ಮ ವೃತ್ತಿ ವಿಚಾರವಾಗಿ ಕೇಳಿದ್ದು ತಮಗೆ ಬೇಸರವಾಯ್ತೇನೋ ? ಗೋಪಾಲಯ್ಯ ಎಲ್ಲವನ್ನೂ ವಿವರಿಸಿ ಹೇಳಿದ್ದಾರೆ. ಆ ವಿಷಯದಲ್ಲಿ ನಮಗೆ ಅಭ್ಯಂತರವಿಲ್ಲ . "

"ಹಾಗೇನಿಲ್ಲ.  ನೋಡಿ ನಾಗಪ್ನೋರೆ, ಮದುವೆ ಅಂತ ಆದಮೇಲೆ ಹೋಗೋದು-ಬರೋದು ಮಾಡಬೇಕಾಗುತ್ತೆ. ನನಗೆ ರಜೆಗಳು ಸಿಗೋದಿಲ್ಲ. ಅದೂ ಅಲ್ಲದೆ ಪ್ರಯಾಣವೇ ಬಹಳ ಹೊತ್ತು ಹಿಡಿಯುತ್ತೆ. ಇದು ನಿಮ್ಮ ಮಗಳಿಗೂ ಕಷ್ಟವಾಗಬಹುದು. ಮುಂದೆ ಅದೇ ಒಡಗಿಕೆ ಕಾರಣವಾಗಬಹುದು "

ಚಿರಂತ ಹೇಳಿಮುಗಿಸುವಷ್ಟರಲ್ಲಿ  ನಾಗಪ್ಪ  ಅವಸರದಲ್ಲಿ ಮಾತನಾಡಿದರು.

"ಇಲ್ಲ, ಇಲ್ಲ. ಹಾಗೇನು ಇಲ್ಲ. ನಿಮಗೆ ಅನುಕೂಲವಾದಾಗ ಬಂದು ಹೋದ್ರೆ ಸಾಕು "

" ಇಲ್ಲಿ ನಿಮ್ಮ ಕ್ಷೇಮ ಯಾರು ನೋಡ್ಕೋತಾರೆ ನಾಗಪ್ನೋರೆ ? "

"ಅಯ್ಯೋ ನಮ್ಮದೇನು ಬಿಡಿ ಹೇಗೋ ಆಗುತ್ತೆ. ಗಾಳಿಗೆ ಬಿದ್ಧ್ಹೋಗೋ ಮರ, ಸತ್ತಮೇಲೆ ಸಮಾಧಿ, ಅಷ್ಟೆ "

ಚಿರಂತ ತುಸು ಗಂಭೀರವಾದ. ಅದೇ ಧಾಟಿಯಲ್ಲೇ ಮಾತನಾಡಿದ.

" ಬದುಕು ಅನ್ನೋದು ಒಂದೇ ಸಲ ಸ್ವಾಮಿ. ಸತ್ತಮೇಲೆ ನಾನು ಚಿರಂತನೂ ಅಲ್ಲ, ನೀವು ನಾಗಪ್ಪನೂ ಅಲ್ಲ.  ಏನಾಗ್ತಿವೀ ಅನ್ನೋದು ಯಾರಿಗೂ ಗೊತ್ತಿಲ್ಲ. ಸತ್ತಮೇಲಲ್ಲ ಸ್ವಾಮಿ ಸಮಾಧಿಯಾಗೋದು, ಬದುಕಿದ್ದಾಗಲೇ ಆಗಬೇಕು. ಇದನ್ನೇ ಕರ್ಮಯೋಗದಲ್ಲಿ ಹೇಳಿರೋದು.  ಬದುಕನ್ನು ಪರಿಪೂರ್ಣವಾಗಿ ಅನುಭವಿಸೋ ಅವಕಾಶ ಇರೋವಾಗ ಅದನ್ನ ನೀವೆ ದೂರ ಮಾಡಿ ಯಾವುದೋ ಮರಿಚಿಕೆಯ ಬೆನ್ನು ಹತ್ತಿ ಹೋಗ್ತಾ ಇದ್ದೀರಿ. ನಿಮ್ಮ ನಿರ್ಧಾರ ನಿಮ್ಮ ಮಗಳಿಗೂ ಒಪ್ಪಿಗೆ ಇದೆಯೇ ಅಂತಾ ಕೇಳಿದ್ದೀರಾ ? "

ನಾಗಪ್ಪ ಅವಾಕ್ಕಾಗಿ ನಿಂತಿದ್ದರು. ಮಗಳ ಮುಖವನ್ನೊಮ್ಮೆ ನೋಡಿದರು. ಹೆಂಡತಿಯ ಮುಖವನ್ನೂ ನೋಡಿದರು. ಏನೂ ತೋಚಲಿಲ್ಲ.  ಚಿರಂತನನ್ನೇ ಕೇಳಿದರು.

" ಏನಂತಾಳೆ ನಮ್ಮ ಮಗಳು ? ಮತ್ತೆ ನಿಮ್ಮ ಮದುವೆ ವಿಷಯ ? "

ಚಿರಂತ ಪಲ್ಲವಿಯೆಡೆಗೆ ತಿರುಗಿದ. ಇಬ್ಬರ ಮಖದಲ್ಲೂ ನಗು ತೇಲುತ್ತಿತ್ತು

"ಪಲ್ಲವಿಯವರೆ, ನಮ್ಮಲ್ಲಿ ಮದುವೆಗೆ ಹೆಣ್ಣು ಸಿಗೋದು  ಕಷ್ಟವಾಗಿದೆ. ನನಗೆ ಹೆಣ್ಣು ಹುಡುಕಿಕೊಡೊ ಹೊಣೆ ನಿಮ್ಮದೆ . ಏನಂತೀರಿ ? "

ಪಲ್ಲವಿ ನಗುತ್ತಲೆ ಹೇಳಿದಳು.

" ಸ್ನೇಹಿತರಿಗೆ ಅಷ್ಟೂ ಮಾಡದಿದ್ರೆ ಹೇಗೆ ಹೇಳಿ ? ಆ ಹೊಣೆ ನನ್ನದೆ "

ಅಲ್ಲಿದ್ದ ಉಳಿದ ಮೂವರಿಗೂ ಏನೊಂದೂ ಅರ್ಥವಾಗಲಿಲ್ಲ. ಚಿರಂತನೇ ಮುಂದುವರಿಸಿದ

" ಪಲ್ಲವಿಯಂತಹ ಮಗಳನ್ನು ಪಡೆಯೋಕೆ ಪುಣ್ಯ ಮಾಡಿದ್ದೀರಿ ನೀವು. ನಿಮ್ಮ  ಬಾಳಿನ ಮುಸ್ಸಂಜೆಯಲ್ಲಿ ಆಕೆ ನಿಮ್ಮ ಸೇವೆಗೆ ನಿಲ್ಲಬೇಕಂತೆ. ನಿಮಗಿರೋಳು ಆಕೆಯೊಬ್ಬಳೆ.  ಗಂಡು...ಹೆಣ್ಣು. ಎಲ್ಲಾ ಅವಳೆ ನಿಮಗೆ. ಆಕೆಯನ್ನು ಇಲ್ಲಿಯವರಗೆ ಬೆಳೆಸಿ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಕಲಿಸಿಕೊಟ್ಟ ನಿಮ್ಮನ್ನು ಒಂಟಿಯಾಗಿ ಬಿಟ್ಟು , ಆಕೆ ಬೇರೆಲ್ಲೋ ಸಂತೋಷವಾಗಿ ಇರೋದು ಹೇಗೆ ಸಾಧ್ಯ ಹೇಳಿ ?  ಅದಕ್ಕೇ ಅಂತಲೇ ಆಕೆ ಈ ಊರು ಬಿಟ್ಟು ಬರೋಕೆ ತಯಾರಿಲ್ಲ. ಆಕೆ ತನ್ನ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಯಂತೆ. ಚಿಕ್ಕಮಗಳೂರು ಕಾಲೇಜಿನಲ್ಲಿ ಉಪನ್ಯಾಸಕರು. ನಿಮ್ಮ ಮಗಳಿಗೂ ಅದೇ ಕೆಲಸ ಮಾಡಬೇಕು ಅನ್ನೋ ಆಸೆ ಇದೆ. ನೀವು ಸ್ವಲ್ಪ ಉದಾರ ಮನಸು ಮಾಡಿದರೆ, ಎಲ್ಲವೂ ಒಳ್ಳೆಯದೇ ಆಗುತ್ತೆ . ಏನಂತೀರಿ ನಾಗಪ್ನೋರೆ ? "

ನಾಗಪ್ಪ ಸೀತಮ್ಮನ ಮುಖವನ್ನೊಮ್ಮೆ ನೋಡಿದರು. ಆ ಕ್ಷಣಕ್ಕೆ ಸೀತಮ್ಮನ ಮುಖ ಏನೋ ಹೊಸತನ್ನು ಕಂಡಂತೆ ಅರಳಿತ್ತು.  ನಾಗಪ್ಪ ಪಲ್ಲವಿಯ ಬಳಿಗೆ ತೆರಳಿದರು. ಮಗಳ ಮುಖವನ್ನೊಮ್ಮೆ ಸಾದ್ಯಂತ ದಿಟ್ಟಿಸಿದರು. ಅಮೂರ್ತಭಾವವೊಂದು ಅವರನ್ನು ಆವರಿಸಿತು. ಗಟ್ಟಿಯಾಗಿ ಮಗಳನ್ನೊಮ್ಮೆ ಬಾಚಿ ತಬ್ಬಿಕೊಂಡರು. ಅವರ ಕಣ್ಣಿಂದ ಉದುರುತ್ತಿದ್ದ ಹನಿಗಳು , ಪಲ್ಲವಿಯ ಸೀರೆಯ ಸೆರಗಿನ ಮೇಲೆ ಹನಿ-ಹನಿಯಾಗಿ ಬೀಳುತ್ತಿತ್ತು.

......................................................................................................

( ಮುಗಿಯಿತು ..ಅಂದುಕೊಳ್ಳುತ್ತೇನೆ :-) )

ವಂದನೆಗಳೊಂದಿಗೆ...