Jul 26, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... 2

ಹಾಗೆ ಹುಡುಕುತ್ತಿದ್ದ ಕಣ್ಣಿಗೆ ಮೊದಲು ಕಂಡವರು.... ಬಿಳಿ ಪಂಚೆ, ಮೈಮೇಲೊಂದು ಶಲ್ಯ ಹೊದೆದಿದ್ದ ಮಧ್ಯವಯಸ್ಸಿನ ವ್ಯಕ್ತಿ. ಗೋಪಾಲಯ್ಯ ವ್ಯಕ್ತಿಯ ಮುಖ ನೋಡಿ ನಕ್ಕರು.
"ಚಿರಂತ, ಇವರ ಹೆಸರು ನಾಗಪ್ಪ ಅಂತ. ಹುಡುಗಿಯ ತಂದೆ. ಹುಟ್ಟಿದಾರಭ್ಯ ಇದೇ ಊರಲ್ಲಿದ್ದುಕೊಂಡು ತೋಟದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದಾರೆ ". ಗೋಪಾಲಯ್ಯ ಪರಿಚಯ ಮಾಡಿಕೊಟ್ಟರು. ಚಿರಂತ ಕುಳಿತಲ್ಲಿಂದಲೇ ನಗೆ ಬೀರಿದ. ನಾಗಪ್ಪನವರೂ ನಕ್ಕರು.
" ಬಹಳ ದಣಿದು ಬಂದಿದೀರಿ ಅಲ್ಲವೇ ಗೋಪಾಲಯ್ಯ ? ನಮ್ಮೂರಿನ ಬಸ್ಸಿನ ಕತೆ ಈಗಾಗಲೇ ನಿಮಗೆ ಗೊತ್ತಾಗಿರಬೇಕು. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿಧಾನವಾಗಿ ಎಲ್ಲಾ ಮಾತನಾಡೋಣವಂತೆ. ಕುಡಿಯೋದಕ್ಕೆ ಏನಾದ್ರೂ ತರಲೇನು ? "
"ನೀರು ಕೊಡಿ ನಾಗಪ್ಪ ಸಾಕು. ಈಗ ವಿಶೇಷವಾಗಿ ಏನೂ ಮಾಡೊದಕ್ಕೆ ಹೊಗಬೇಡಿ. ತೊಂದರೆ ತೊಗೋಬೇಡಿ. ಈ ಹುಡುಗನ ಕಚೇರಿಗೂ ರಜೆ ಇಲ್ಲ. ಸ್ವಲ್ಪ ಬೇಗನೆ ಹೊರಡ್ತೀವಿ.."
"ಅಯ್ಯೋ !, ಹಾಗಂದ್ರೆ ಹೇಗೆ ? ಬಂದಿರೋದೆ ಅಪರೂಪ. ಇರಿ, ಒಂದು ನಿಮಿಷ ಬಂದು ಬಿಡ್ತೀನಿ " ನಾಗಪ್ಪ ಅಡುಗೆಮನೆಯೊಳಗೆ ಹೋದವರು ನಿಮಿಷಗಳ ತರುವಾಯ ಎರಡು ಲೋಟ ಮತ್ತು ಒಂದು ತಟ್ಟೆಯಲ್ಲಿ ಅವಲಕ್ಕಿ ಬೆಲ್ಲದೊಡನೆ ಪ್ರತ್ಯಕ್ಷರಾದರು. ಅತಿಥಿಗಳ ಮುಂದೆ ಅವಲಕ್ಕಿಯ ತಟ್ಟೆಯನ್ನಿರಿಸಿ, ಲೋಟಗಳಿಗೆ ತಂಬಿಗೆಯಲ್ಲಿದ್ದ ಪಾನಕವನ್ನು ಬಗ್ಗಿಸಿದರು. ಅದು ಬೆಲ್ಲದ ಪಾನಕವೆಂದು ಚಿರಂತನಿಗೆ ತಿಳಿಯಿತು.  ಸ್ವಲ್ಪ ದಾಹವಾದರೂ ತೀರುತ್ತದೆಯಲ್ಲಾ ಎಂದೆನಿಸಿ ಲೋಟವನ್ನೆತ್ತಿ ಪಾನಕವನ್ನು ಕುಡಿಯಲನುವಾದ ಚಿರಂತ. ಇನ್ನೇನು ಬಾಯಿಗೆ ಸುರುಹಬೇಕೆನ್ನುವಷ್ಟರಲ್ಲಿ ಹೆಂಗಸಿನ ಧ್ವನಿಯೊಂದು ತೇಲಿಬಂತು.
"ಅಯ್ಯೊ ! ನಿಲ್ಲಿ " ಅಡುಗೆಮನೆಯಿಂದ ನಾಗಪ್ಪನವರ ಹೆಂಡತಿ ಓಡಿಬಂದರು. " ಬೇಸರ ಪಟ್ಕೋಬೇಡಿ. ಆ ಪಾನಕ ಮತ್ತು ಅವಲಕ್ಕಿಯನ್ನು ನಮ್ಮನೆ ತೋಟದ ಆಳಿಗೆ ಮಾಡಿಟ್ಟದ್ದು. ’ಇವರಿಗೆ’ ಗೊತ್ತಾಗದೆ ನಿಮಗೆ ತಂದು ಕೊಟ್ಟಿದ್ದಾರೆ. ಇಲ್ಲಿ ಕೊಡಿ, ನಿಮಗೆ ಬೇರೆಯದೇ ತಿಂಡಿ ಮಾಡಿಟ್ಟಿದ್ದೇನೆ. ಉಪ್ಪಿಟ್ಟು-ಕೇಸರಿಬಾತು, ಜೊತೆಗೆ ಒಳ್ಳೆಯ ಚಿಕ್ಕಮಗಳೂರು ಕಾಫಿ಼. " ಎಂದು ಒಂದೇ ಸಮನೆ ಉಸುರಿದರು.
ಗೋಪಾಲಯ್ಯ ಚಿರಂತನಿಗೆ ’ಸೀತಮ್ಮ’ ನ ಪರಿಚಯ ಮಾಡಿಕೊಟ್ಟರು. ಚಿರಂತನಿಗೆ ಪಾನಕ ಕುಡಿಯುವ ಆಸೆಯಿತ್ತು. " ಅಮ್ಮಾ, ಈ ಅವಲಕ್ಕಿಯನ್ನು ತೆಗೆದುಕೊಳ್ಳಿ, ಆದರೆ ಪಾನಕ ಇರಲಿ ಬಿಡಿ. ಬೆಲ್ಲದ ಪಾನಕ ಕುಡಿದು ಅದೆಷ್ಟೋ ವರ್ಷಗಳೇ ಆಗಿದೆ. ಎಂದೋ ನನ್ನಜ್ಜಿ ಮಾಡಿಕೊಟ್ಟದ್ದು".
ಚಿರಂತನ ಮಾತನ್ನು ಅರ್ಧಕ್ಕೇ ತುಂಡರಿಸಿದರು ಸೀತಮ್ಮ " ಅಯ್ಯೋ, ಬೇಡ. ಆಳಿಗೆ ಮಾಡಿಟ್ಟದ್ದು. ನೀವು ಕುಡಿಯೋದು ಸರಿಹೋಗಲ್ಲ" ಎಂದು ತಳಮಳಿಸಿದರು.
ಚಿರಂತನಿಗೆ ಪಾನಕ ಬಿಡುವ ಮನಸಾಗಲಿಲ್ಲ. " ಆ ಉಪ್ಪಿಟ್ಟು-ಬಾತು ಬೇಸರವಾಗಿದೆ. ದಿನಾ ಅದೆಲ್ಲಾ ಇದ್ದೇ ಇರುತ್ತೆ. ಈ ಬೆಲ್ಲದ ಪಾನಕ ಯಾರು ಕೊಡ್ತಾರೆ ಹೇಳಿ ? ಕೊಡಿ ಪರವಾಗಿಲ್ಲ ".  ಚಿರಂತನ ಒತ್ತಾಯಕ್ಕೆ ಮಣಿದ ಸೀತಮ್ಮ ಪಾನಕ ತುಂಬಿದ ಲೋಟವನ್ನು ಚಿರಂತನ ಮುಂದಿಟ್ಟು ಅಡುಗೆಮನೆಯತ್ತ ನಡೆದರು. ಅಲ್ಲೇ ನಿಂತಿದ್ದರು ನಾಗಪ್ಪ !. ಮೆತ್ತಗೆ ಗದರಿಕೊಂಡರು ಪತ್ನಿಯೊಂದಿಗೆ " ಅಲ್ವೇ ಸೀತೂ, ನನಗೆ ಹೇಳ್ಬಾರ‍್ದಾ ನೀನು, ಉಪ್ಪಿಟ್ಟು-ಕೇಸರಿಬಾತು ಮಾಡಿರೋದನ್ನ ? ". ಸೀತಮ್ಮನೂ ಗದರಿದರು " ನಿಮಗೆ ಮೊದಲೆ ಹೇಳಿದ್ರೆ ಬಂದೋರಿಗೆ  ಕೊಡೋದಕ್ಕೆ ಏನು ಉಳಿಸ್ತಿದ್ರಿ ನೀವು ? ತಳ ಕೆರೆದು ಹಾಕಬೇಕಾಕ್ತಿತ್ತು ಅಷ್ಟೆ ! ". ನಾಗಪ್ಪ ಮರುಮಾತನಾಡದೆ ಗೋಪಾಲಯ್ಯನ ಬಳಿಗೆ ತೆರಳಿದರು. ಪಾನಕ ಕುಡಿದ ಚಿರಂತನಿಗೆ ದಾಹ ತಣಿದಂತಾಯಿತು.
ನಾಗಪ್ಪ, ಗೋಪಾಲಯ್ಯನ ಮುಂದಿದ್ದ ಚಿಕ್ಕ ಚಾಪೆಯ ಮೇಲೆ ಕುಳಿತರು. " ಗೋಪಾಲಯ್ಯ, ನೀವು ಬಹಳ ಸಮಯ ಇಲ್ಲ ಅಂದ್ರಿ, ಹಾಗಾಗಿ ನೇರವಾಗಿ ವಿಷಯಕ್ಕೆ ಬರ್ತೇನೆ. ನಿಮ್ಮ ಹುಡುಗ ಸಾಫ಼್ಟವೇರ್ ಇಂಜಿನಿಯರ್ರು ಅಂತಾ ಕೇಳ್ಪಟ್ಟೆ. ನಮಗೂ ಸಂತೋಷವಾಯ್ತು. ನಾವು ಇಂತಹ ಹುಡುಗನನ್ನೇ ಹುಡುಕ್ತಾ ಇದ್ವಿ, ಇಲ್ಲೇನೋ ತುಂಬ ಸಂಬಂಧಗಳು ಬಂದಿದ್ವು, ಆದರೆ ನಮಗೆ ಒಪ್ಪಿಗೆ ಆಗಬೇಕಲ್ವೇ..." ನಾಗಪ್ಪ ಹೇಳುತ್ತಲೇ ಇದ್ದರು. ಚಿರಂತ ಅವರ ಮಾತನ್ನು ತುಂಡರಿಸಿದ
" ಕ್ಷಮಿಸಿ, ನಾಗಪ್ನೋರೆ. ನಾನು software ಇಂಜಿನಿಯರ್ ಅಲ್ಲ. "
ಚಿರಂತನ ಮಾತಿನಿಂದ ಚಕಿತರಾದ ನಾಗಪ್ಪ ಅವನತ್ತಲೇ ತಿರುಗಿದರು. " ಮತ್ತೆ , ತಾವು ದೊಡ್ಡ MNC ಯಲ್ಲಿ ಕೆಲ್ಸ ಮಾಡ್ತೀರಿ, ದಿನದಲ್ಲಿ ೧೮ ಗಂಟೆ ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೀರಿ ,  ಅಂತೆಲ್ಲಾ ಹೇಳಿದ್ರಲ್ಲಾ ನಿಮ್ಮ ತಂದೆಯವರು " .

"ಅದು ನಿಜ. ನಾನು ದೊಡ್ಡ ಕಂಪೆನಿಯೊಂದರಲ್ಲೇ ಕೆಲ್ಸ ಮಾಡ್ತಿರೋದು, ದಿನದಲ್ಲಿ ಹೆಚ್ಚು-ಕಡಿಮೆ ೧೮ ಗಂಟೆಗಳು ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೇನೆ. ಆದ್ರೆ, ನಾನು software  ಇಂಜಿನಿಯರ್ ಅಲ್ಲ. ಒಬ್ಬ ಅಕೌಂಟ್ ಮ್ಯಾನೇಜರ್ ಅಷ್ಟೆ ". ಚಿರಂತನ ಮಾತನ್ನು ಕೇಳಿದ ನಾಗಪ್ಪ ಗೋಪಾಲಯ್ಯನ ಮುಖ ನೊಡಿದರು. ಮತ್ತೆ ಚಿರಂತನನ್ನೇ ಕೇಳುವ ಮನಸಾಯಿತು ಅವರಿಗೆ

 " ಅದು ಎಂತಹ ಕೆಲಸ ? ".

ಚಿರಂತನಿಗೆ ನಾಗಪ್ಪನವರ ಪ್ರಶ್ನೆ ಸಹಜವಾಗಿ ತೋರಿತು. " ನಮ್ಮ ಕಂಪೆನಿಗೆ, ಒಂದೆರೆಡು ದೊಡ್ಡ ಬ್ಯಾಂಕುಗಳ ಅಕೌಂಟುಗಳು ಬರುತ್ವೆ. ಅದನ್ನೆಲ್ಲಾ ನಾವು ಮ್ಯಾನೇಜ್ ಮಾಡ್ತೀವಿ. Online ಬ್ಯಾಂಕಿಂಗ್ ಅನ್ತಾರೆ ನೋಡಿ, ಅದು. ಬ್ಯಾಂಕುಗಳು ನಮ್ಮ ಕಂಪೆನಿಗೆ contract ಪ್ರೋಜೆಕ್ಟ್ ಗಳನ್ನು ಕೊಟ್ಟಿರ್ತಾರೆ. ಅದನ್ನೆಲ್ಲಾ ನೋಡ್ಕೋತಿವಿ ನಾವು "
ನಾಗಪ್ಪರಿಗೆ ಚಿರಂತ ಹೇಳಿದ್ದರಲ್ಲಿ ಕೆಲವು ಅರ್ಥವಾಗಲಿಲ್ಲ.
" ಅಂದ್ರೆ , ತಮ್ಮದು contract  ಕೆಲಸವೋ ? ಪರ್ಮನೆಂಟ್ ಅಲ್ಲ ಅನ್ನಿ ! "
 ಚಿರಂತನಿಗೆ ನಾಗಪ್ಪನವರಿಗೆ ಅರ್ಥಮಾಡಿಸುವುದು ಕಷ್ಟವೆಂದು ತೋರಿತು. ಅಷ್ಟರಲ್ಲಿ ಸೀತಮ್ಮ ಉಪ್ಪಿಟ್ಟು-ಕೇಸರಿಬಾತಿನೊಡನೆ ಬಂದರು. ಅತಿಥಿಗಳಿಬ್ಬರಿಗೂ ತಿಂಡಿಗಳು ಸರಬರಾಜಾಯಿತು.  ನಾಗಪ್ಪ ಮೇಲೆದ್ದರು.
" ಗೋಪಾಲಯ್ಯ ನೀವು ನಿಧಾನವಾಗಿ ತಿಂಡಿ ತಿನ್ನಿ, ಆಮೇಲೆ ಮಾತನಾಡೋಣವಂತೆ. ಒಂದು ನಿಮಿಷ ನಾನು ಆಳು ಬಂದಿದಾನೋ ಇಲ್ಲವೋ ನೋಡಿ ಬರ್ತೀನಿ ". ನಗುವಿನಲ್ಲೇ ಸಮ್ಮತಿಯಿತ್ತರು ಗೋಪಾಲಯ್ಯ.
ಚಿರಂತನಿಗೆ ತಿಂಡಿಯ ರುಚಿ ಹತ್ತದಾಯಿತು. ಅದೇಕೋ ಅವನ ಕಿವಿ ಅಡುಗೆ ಮನೆಯೊಳಗೆ ನೆಟ್ಟಿತು. ಅಲ್ಲಿಂದ ತೂರಿಬರುತ್ತಿದ್ದ ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳತೊಡಗಿತು.
" ಗೋಪಾಲಯ್ಯ ಮುಂಚೆ ಹೇಳಿದ್ದು, ಕಂಪ್ಯೂಟರ್ ಇಂಜಿನಿಯರ್ರು ಅಂತ, ಈಗ ಇವರೇನೊ ಬೇರೆ ಹೇಳ್ತಾ ಇದಾರಲ್ಲೇ "
"ಈ ಹಾಳು ಕಂಪ್ಯೂಟರ್ ವಿಷಯ ನಮಗೆ ಹೇಗ್ರೀ ಗೊತ್ತಾಗಬೇಕು. ಅದೇನೊ ಒಂದೂ ಅರ್ಥವಾಗೋಲ್ಲಪ್ಪ ನನಗೆ "
"ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರುಗಳಿಗೆ ಹೆಣ್ಣು ಕೊಟ್ಟಿರೋದು, ಇನ್ನು ನಾವು ಅಕೌಂಟ್ ಮ್ಯಾನೇಜರ್ರಿಗೆ ಕೊಟ್ರೆ ಆಡಿಕೊಳ್ಳೋಲ್ವೆ ಜನ "
"ಅಷ್ಟು ಸಂಬಳವೂ ಬರೋಲ್ಲ ಅನ್ನೋಹಾಗೆ ಕಾಣುತ್ತೆ. ಈ ವರನಿಗಾಗಿ ಇಷ್ಟು ವರ್ಷ ಕಾಯ್ಬೇಕಿತ್ತೇ ? ಸ್ವಲ್ಪ ಸರಿಯಾಗಿ ವಿಚಾರಿಸಿ ಎಲ್ಲಾದನ್ನೂ "
"ಅದೇನೋ ಕಂಟ್ರಾಕ್ಟು ಕೆಲಸ ಅಂತೆ, ಎಷ್ಟು ದಿವಸ ನಡೆದೀತು ಮಹಾ?  ನಮ್ಮ ಮಗಳಿಗೂ ಒಂದು ಭದ್ರನೆಲೆಯಾಗೋದು ಬೇಡ್ವೆ ? "
"ಅದಕ್ಕೆ ಹೇಳಿದ್ದು ಸರಿಯಾಗಿ ವಿಚಾರಿಸಿ ಅಂತ, ಆಮೇಲೆ ಪರಿತಾಪ ಪಡೋದು ಬೇಡ "
" ಸರಿ, ನನಗೂ ಒಂಚೂರು ಉಪ್ಪಿಟ್ಟು ಕೊಡು, ಮಾತಾಡ್ತೀನಿ"
"ಇದಕ್ಕೆನೂ ಕಮ್ಮಿ ಇಲ್ಲ. ಅಲ್ಲೇ ಹೋಗಿ ತಂದುಕೊಡ್ತೀನಿ "
ನಾಗಪ್ಪ ನಗುತ್ತಲೇ ಅಡುಗೆಮನೆ ಕಡೆಯಿಂದ ಬಂದರು. ಗೋಪಾಲಯ್ಯ ಆಗಲೇ ತಿಂಡಿ ಖಾಲಿ ಮಾಡಿದ್ದರು. ಸೀತಮ್ಮನಿಗೆ ಮತ್ತೊಮ್ಮೆ ತಿಂಡಿ ಕೇಳುವ ವಿಷಯ ಮರೆತುಹೋಯಿತು. ಚಿರಂತನ ತಟ್ಟೆಯಲ್ಲಿ ತಿಂಡಿ ಹಾಗೇ ಉಳಿದಿತ್ತು. ಅದೇಕೋ ತಿನ್ನುವ ಮನಸಾಗಲಿಲ್ಲ ಅವನಿಗೆ. ಹೊಟ್ಟೆ ಹಸಿಯುತ್ತಿದ್ದರೂ , ತಿಂಡಿ ಒಳಗೆ ಇಳಿಯದಾಯಿತು. ತಟ್ಟೆ ಕೆಳಗಿಟ್ಟು ಸಾಕೆಂಬಂತೆ ಸನ್ನೆ ಮಾಡಿದ ನಾಗಪ್ಪನವರಿಗೆ. ನಾಗಪ್ಪ ಮತ್ತೆ ಚಾಪೆಯ ಮೇಲೆ ಕುಳಿತರು.
" ನೋಡಿ ಗೋಪಾಲಯ್ಯ. ನಮಗೆ ಹುಡುಗನ ಆಚಾರ-ವಿಚಾರಗಳ ಬಗ್ಗೆ ಗೊತ್ತಿಲ್ಲ. ಆ ವಿಷಯದಲ್ಲಿ ನಾವು ಹೆಚ್ಚು ಒತ್ತಾಯ ಮಾಡೋದು ಇಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಜೀವನ ನೆಡಸಬೇಕಾದ್ರೆ ಕೆಲವು ಸಂಪ್ರದಾಯಬದ್ದ ಆಚರಣೆಗಳನ್ನ ಗಂಟುಕಟ್ಟಿ ಇಡಬೇಕಾಗುತ್ತೆ ಅನ್ನೋದು ನಮಗೂ ಗೊತ್ತಿದೆ. ಆದರೆ,  ಹುಡುಗನ ಕೆಲಸದ ವಿಷಯದಲ್ಲಿ ನಾವು ರಾಜಿಯಾಗೋಕೆ ತಯಾರಿಲ್ಲ. ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರಿಗೆ ಹೆಣ್ಣು ಕೊಟ್ಟಿರೋದು. ನಾವು ಹಾಗೇ ಮಾಡೋಣ ಅನ್ಕೊಂಡೇ ಇಷ್ಟು ವರ್ಷ ತಡೆದದ್ದು. ಈಗ ನೀವೇನು ಹೇಳ್ತೀರೋ ಯೋಚನೆ ಮಾಡಿ "
 ಗೋಪಾಲಯ್ಯ ಚಿರಂತನ ಮುಖ ನೋಡಿದರು. ಚಿರಂತನ ಮುಖದಲ್ಲಿ ನಸುನಗೆಯಿತ್ತು. ನಗುತ್ತಲೇ ಹೇಳಿದ
" ಅಗತ್ಯವಾಗಿ ನೀವು ಇಂಜಿನಿಯರ್ರಿಗೆ ನಿಮ್ಮ ಹುಡುಗಿಯನ್ನ ಕೊಡಿ, ಅದ್ರಲ್ಲಿ ತಪ್ಪೇನೂ ಇಲ್ಲ. ನಾನು ಕಂಪ್ಯೂಟರ್ ಮುಂದೆ ಕಲಸ ಮಾಡೋದ್ರಿಂದ ನಿಮಗೆಲ್ಲಾ ತಪ್ಪು ಮಾಹಿತಿ ಸಿಕ್ಕಿರಬಹುದು. ನೇರವಾಗಿ ಮಾತನಾಡಿದ್ದು ಒಳ್ಳೆಯದೇ ಆಯ್ತಲ್ಲ. ಏನ್ರೀ ಗೋಪಾಲಯ್ಯ, ನಾವಿನ್ನು ಹೊರೊಡೋಣ್ವಾ, ಮತ್ತೆ ಅದೇ ರಸ್ತೇಲಿ ನಡೆದು, ಅದೇ ತರಹದ ಬಸ್ಸು ಹತ್ತಿ ಹೋಗಬೇಕಲ್ವೇನ್ರಿ, ಹೊರಡಿ ಬೇಗ ಮತ್ತೆ " .
ಗೋಪಾಲಯ್ಯ, ಚಿರಂತನಿಗೆ ಕುಳಿತೇ ಇರುವಂತೆ ಸನ್ನೆ ಮಾಡಿದರು. ನಾಗಪ್ಪನ ಕಡೆ ತಿರುಗಿ ಒಮ್ಮೆ ಅವರ ಮುಖವನ್ನೇ ದಿಟ್ಟಿಸಿದರು.  ಮುಖದಲ್ಲಿ ಅವರ ಮನಸಿನೊಳಗಿದ್ದ ಗೊಂದಲಗಳು ಸ್ಪಷ್ಟವಾಗಿ ತೋರುತ್ತಿತ್ತು.
" ನಾಗಪ್ನೋರೆ, ನಿಮಗೆ ಯಾರನ್ನು ಬೇಕಾದ್ರೂ ಆಯ್ಕೆ ಮಾಡಿಕೊಳ್ಳೋ ಸ್ವಾತಂತ್ರ್ಯ ಇದೆ. ಈ ಹುಡುಗನಿಗೂ ತಿಂಗಳಿಗೆ ಒಂದೈವತ್ತು ಸಾವಿರ ಸಂಬಳ ಬರುತ್ತೆ. ಆದರೆ ಇವನೋ , ಯಾವತ್ತೂ ಅದಕ್ಕೆ ಗಮನ ಕೊಟ್ಟೋನಲ್ಲ. ಸಮಯ ಸಿಕ್ರೆ ಸಾಕು, ಆ ಊರು-ಈ ಊರು ಅಂತ ತಿರುಗ್ತಾನೇ ಇರ್ತಾನೆ.  ಇವನ ಕಚೇರಿಯಲ್ಲಿ ಸೀನಿಯರ್ ಹುದ್ದೆ ಇವನದೆ.  ಅದು software ಇಂಜಿನಿಯರ್ರಿಗಿಂತಲೂ ಒಳ್ಳೆಯ ಹುದ್ದೇನೆ. ಇದೆಲ್ಲಾ ನಮಗೆ-ನಿಮಗೆ ಬೇಗ ಅರ್ಥವಾಗೋ ಅಂತಹುದ್ದಲ್ಲ. ಆದ್ರೆ , ನನಗೆ ಆಶ್ಚರ್ಯ ಆಗ್ತಾ ಇರೋ ವಿಷಯ ಅಂದ್ರೆ, ಅಷ್ಟೊಂದು ವಿಶಾಲ ಮನೋಭಾವ, ಉದಾರದಾಯಿತ್ವ ಹೊಂದಿದ್ದ ನಿಮ್ಮ ಮನಸ್ಸು-ವ್ಯಕ್ತಿತ್ವ ಹೀಗೇಕಾಯ್ತು ಅಂತ ? ! ".

(ಮುಂದುವರಿಸುತ್ತೇನೆ..)