Sep 22, 2010

ಭಾರತ ಬಲಿಪಶುವೇ ?

ಹತ್ತೊಂಬತ್ತು ನೂರು ಅರವತ್ತಾರನೆಯ ಇಸವಿಯಲ್ಲಿ ವಿನಾಯಕ ದಾಮೋದರ ಸಾವರಕರರು (ವೀರ ಸಾವರಕರ್) ನಿಧನರಾದಾಗ ಭಾರತದ ಸಂಸತ್ತಿನಲ್ಲಿ ಸಾವರಕರರಿಗೆ ಶ್ರಂದ್ಧಾಂಜಲಿ ಸಲ್ಲಿಸುವ ವಿಷಯವೊಂದು ಪ್ರಸ್ತಾಪವಾಯಿತು. ಅಂದಿನ ಸಭಾಧ್ಯಕ್ಷರು (ನೆಹರು ಕೃಪಾಪೋಷಿತ) ಆ ಪ್ರಸ್ತಾಪವನ್ನು ತಿರಸ್ಕರಿಸಿದರು, ಕಾರಣ ಸಾವರ್ಕರರು ಸಂಸತ್ತಿನ ಸದಸ್ಯರಲ್ಲ ಎನ್ನುವುದು. ಮುಂದಿನ ದಿನಗಳಲ್ಲಿ ಅದೇ ಸಂಸತ್ತು ನಮ್ಮ ದೇಶದವರೇ ಅಲ್ಲದ "ಸ್ಟಾಲಿನ್" ಗೆ ಗೌರವಾರ್ಪಣೆ ಸಲ್ಲಿಸುತ್ತದೆ. ಇದಕ್ಕೆ ಕಾರಣ ಅಂದು ನೆಹರು ಅಪ್ಪಿಕೊಂಡಿದ್ದ ಸೋವಿಯತ್ ಒಕ್ಕೂಟದ ಆಕರ್ಷಣೆಗಳು ಮತ್ತು ತಾನಲ್ಲದೆ ಮತ್ತಾರೂ ರಾಜಕೀಯವಾಗಿ ಬೆಳೆಯಬಾರದೆಂದು ನೆಡೆಸಿದ್ದ ಪಿತೂರಿ. ವಿದೇಶಿ ವ್ಯಾಮೋಹಗಳಲ್ಲೇ ತೇಲಾಡಿದ ವ್ಯಕ್ತಿಯೊಬ್ಬರನ್ನು ಭಾರತದ ಪ್ರಧಾನಿಯಾಗಿ ಪಡೆದದ್ದು ಭಾರತದ ಹಣೆಬರಹವೆ ? ಮುಂದೆ ನೆಹರೂ ಮಾಡಿದ ಎಡವಟ್ಟುಗಳ ಫಲವನ್ನು ನಾವಿಂದಿಗೂ ಉಣ್ಣುತ್ತಲೇ ಇದ್ದೇವೆ. ನಿಜ, ಏಕವ್ಯಕ್ತಿಯನ್ನು ದೂರುವುದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ, ಆದರೆ ಅಂದಿನ ವಿದೇಶಾಂಗ ನೀತಿಗಳು  ಸ್ವದೇಶಿ ಆಚರಣೆಗೆ ಎಂತಹ ದೊಡ್ಡ ಪೆಟ್ಟುಕೊಟ್ಟಿತು ಎನ್ನುವುದನ್ನು ಪ್ರಜ್ಞಾವಂತರಾರೂ ಮರೆಯಲು ಸಾಧ್ಯವಿಲ್ಲ. ಅಂತೂ ಯಾವುದೋ ಒಂದು ದಾರಿಯ ಮೂಲಕ ವಿದೇಶಿಯರು ಭಾರತೀಯರ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಿಯೇ ಇಲ್ಲಿಂದ ಹೊರಟರು. ಕಾಂಗ್ರೇಸು "ಕ್ವಿಟ್ ಇಂಡಿಯಾ" ಎಂದರೆ ಸಾವರ್ಕರರು "ಕ್ವಿಟ್ ಇಂಡಿಯಾ ವಿತ್ ಬ್ಯಾಗ್ ಅಂಡ್ ಬ್ಯಾಗೇಜ್" ಎಂದಿದ್ದರು !. ಆದರೆ ಆಂಗ್ಲರು ತಮ್ಮ ಕುರುಹುಗಳನ್ನು ಭಾರತದಲ್ಲಿ ಬಿಟ್ಟು ಹೋಗಲು ಸಹಾಯ ಮಾಡಿದ್ದು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾದವರೆ !. ಇಲ್ಲಿಂದ ಮುಂದೆ ಗ್ಲಾಮರ್ ಪಡೆದುಕೊಂಡ ವಿದೇಶಿ ವ್ಯಾಮೋಹಗಳು ಇಂದಿಗೆ comfortabale ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. " ನನಗೆ ಈ ಡ್ರೆಸ್ comfortable ಆಗಿದೆ, ಅದಕ್ಕೆ ನಾನು ಧರಿಸುತ್ತೇನೆ, ಯಾರು ತಯಾರಿಸಿದ್ದರೆ ನನಗೇನು ? " ಎಂದು ಸವಾಲು ಹಾಕುವ ಯುವಸಮುದಾಯಕ್ಕೆ ತಾವು ಪರೋಕ್ಷವಾಗಿ ವಿದೇಶಿ ಕಂಪನಿಗಳನ್ನು, ರಾಷ್ಟ್ರಗಳನ್ನು ಬೆಳೆಸುತ್ತಾ ಭಾರತವನ್ನು ಅಧೋಗತಿಗೆ ತಳ್ಳುತ್ತಿದ್ದೇವೆಂಬ ಕಲ್ಪನೆ ಇದ್ದೀತೆ?. ಮುಂದೊಂದು ದಿನ ಏನಕೇನ ಪ್ರಕಾರೇಣ ವಿದೇಶಿಯರ ಬೂಟು ನೆಕ್ಕುವ ಪರಿಸ್ಥಿತಿ ಬಂದಾಗಲೆ ಅಂತಹ ಸಮುದಾಯಕ್ಕೆ ಸ್ವತಂತ್ರದ ಮಹತ್ವ ಅರಿವಾಗಬಹುದು. ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಭಾರತವೂ ಅದಕ್ಕೆ ಸಮಾನಾಂತರವಾಗಿ ಬೆಳೆಯಬೇಕೆಂಬುದು ಸಮಂಜಸವೇ ಆದರೂ ಅಂತಹ ಪೂರಕ ಬೆಳವಣಿಗೆಯಲ್ಲಿ ಭಾರತೀಯತೆ ಇದ್ದಷ್ಟೂ ನಮ್ಮ ನೆಲ ಗಟ್ಟಿಯಾಗುತ್ತಾ ಹೋಗುತ್ತದೆ. ದೇಶಕ್ಕೆ contribute ಮಾಡುವ ಮನೋಭಾವ ವಿದೇಶಿಗಳಲ್ಲಿರುವುದೇ ಆಯಾ ದೇಶಗಳು ಹೆಚ್ಚಿನ ಪ್ರಗತಿ ಸಾಧಿಸಲು ಕಾರಣವಾಗಿದೆಯೆನ್ನಬಹುದು. ಹಾಗಾದರೆ ಭಾರತೀಯರು ದೇಶಕ್ಕೆ ಕೊಡುಗೆ ನೀಡುವುದಿಲ್ಲವೆ ? ,ಇಲ್ಲಿ ಕೊಡುಗೆ ನೀಡುವ ಪ್ರಶ್ನೆಗಿಂತಲೂ ಅಂತಹ ಕೊಡುಗೆ ಭಾರತದ ಪ್ರಭುತ್ವದಲ್ಲಿ ಸದ್ವಿನಿಯೋಗವಾಗುತ್ತದೆ ಎಂಬುದರ ಬಗ್ಗೆ ಯಾವ ಪ್ರಜ್ಞಾವಂತ ನಾಗರೀಕನಿಗೂ ನಂಬಿಕೆ ಉಳಿದಿಲ್ಲ. ಅಂತಹ ನಂಬಿಕೆಯನ್ನು ಭಾರತವನ್ನಾಳಿದ-ಆಳುತ್ತಿರುವ ಪ್ರಭುಗಳು ಉಳಿಸಿಕೊಂಡಿಲ್ಲವೆಂಬುದು ಸರ್ವವಿದಿತ. ಭಾರತೀಯರ ಇಂತಹ ದೌರ್ಬಲ್ಯಗಳು ವಿದೇಶಗಳಿಗೆ ಮಾರುಕಟ್ಟೆಯ ವಸ್ತುವಾಗಿ ಬಿಡುತ್ತದೆ. ನಮ್ಮಲ್ಲೇ ತಯಾರಾಗುತ್ತಿದ್ದ ಹತ್ತಿಯ ಬಟ್ಟೆಗಳು ತಿರಸ್ಕರಿಸಲ್ಪಡುತ್ತವೆ ಮತ್ತು ವಿದೇಶಿ ಕಂಪೆನಿಯ 100% cotton ಎನ್ನುವ ಹಣೆಪಟ್ಟಿ ಇರುವ ಬಟ್ಟೆಗಳೇ ನಮಗೆ ಹೆಚ್ಚು ಆಕರ್ಷಣಿಯವಾಗುತ್ತದೆ.

ನಾಟಿ ತರಕಾರಿಗಳು, ಬೇಳೆ-ಕಾಳುಗಳನ್ನು ಬೆಳೆದು ತಿನ್ನುತ್ತಿದ್ದ ಭಾರತೀಯರಿಗೆ ದಪ್ಪನೆಯ ಟೋಮ್ಯಾಟೋ ತೋರಿಸಿ ಹೈಬ್ರಿಡ್ ತಳಿಯ ರುಚಿ ಹತ್ತಿಸಲಾಗುತ್ತದೆ. ಅಂತಹ ತಳಿಯನ್ನು ಬೆಳೆಯಲು ಬೀಜಗಳನ್ನು, ಸಸಿಗಳನ್ನು ಪೂರೈಸಲಾಗುತ್ತದೆ. ಅವುಗಳ ಬೆಳವಣಿಗೆಗೆ ಗೊಬ್ಬರ-ರಾಸಾಯನಿಕಗಳು ಬೇಕಾಗುವುದರಿಂದ ಅವುಗಳನ್ನೂ ವ್ಯವಸ್ಥಿತವಾಗಿ ಪೂರೈಸಲಾಗುತ್ತದೆ. ಹೀಗೆ ಬೆಳೆಯಲ್ಪಟ್ಟ ತರಕಾರಿ, ಕಾಳುಗಳಲ್ಲಿ ನಾಟಿ ಆಹಾರದಲ್ಲಿರುತ್ತಿದ್ದ ಪೋಷಕಾಂಶಗಳು ಇಲ್ಲವಾಗಿ ಕೇವಲ ಆಕರ್ಷಣೆಯ ವಸ್ತುವಾಗಿ ಮಾತ್ರ ಉಳಿಯುತ್ತದೆ. ಇಂತಹ ಆಕರ್ಷಣೆಗೆ ಭಾರತೀಯರು ಬಲಿಪಶುಗಳಾಗುತ್ತಾರೆ. ಇವಿಷ್ಟನ್ನೂ ಒಂದು ವಿದೇಶಿ ಕಂಪೆನಿ ವ್ಯವಸ್ಥಿತವಾಗಿ ಮಾಡುತ್ತದೆ. ಏಕೆಂದರೆ ವಿದೇಶಿಯರಿಗೆ ಮೇಯಲು ಭಾರತದಂತಹ ಹುಲ್ಲುಗಾವಲು ಇನ್ನೆಲ್ಲಿ ಸಿಕ್ಕೀತು ?

ಇಂತಹ ಅಪೌಷ್ಟಿಕ ಮತ್ತು chemically treated ಆಹಾರವನ್ನು ತಿನ್ನುವ ಭಾರತೀಯರಿಗೆ ಸಹಜವಾಗಿಯೇ ರೋಗಗಳು ಅಟಕಾಯಿಸಿಕೊಳ್ಳುತ್ತವೆ. (ಥಿಂಕಿಸಿ : ’ಅಸಿಡಿಟಿ’ ಎನ್ನುವ ಮಾರಿ ಈಗ್ಗೆ ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಎಷ್ಟೋ ಮಂದಿಗೆ ಗೊತ್ತೇ ಇರಲಿಲ್ಲ, ಈಗ ಅಸಿಡಿಟಿ ಇಲ್ಲದವರೇ ಇಲ್ಲ !) ಇಂತಹ ರೋಗಗಳಿಗೆಂದೇ ಮಾತ್ರೆಗಳು ಔಷಧಿಗಳು ತಯಾರಾಗುತ್ತವೆ. ಇದರ ಹಿಂದೆ ವಿದೇಶಿ 'pharma company' ಗಳ ದೊಡ್ಡ ಮಾಫಿಯಾವೆ ಇರುತ್ತದೆ. ಇದೊಂದು ರೀತಿ ಸರಪಳಿಯಂತೆ, ಒಂದರ ನಂತರ ಇನ್ನೊಂದು ಅನಿವಾರ್ಯವಾಗಿ ಬಿಡುತ್ತದೆ. ಭಾರತೀಯ ಸಾಯುತ್ತಾನೆ, ವಿದೇಶಗಳು ಉದ್ಧಾರವಾಗುತ್ತವೆ.

ಹೀಗೆ ಸಣ್ಣ-ಪುಟ್ಟ ವಿಷಯಗಳಲ್ಲೆಲ್ಲಾ ತಲೆ ಹಾಕುತ್ತಿರುವ ವಿದೇಶಿಗಳು ಭಾರತವನ್ನು ಮತ್ತೆ ತಮ್ಮ ವಸಾಹತನ್ನಾಗಿ ಮಾಡಿಕೊಳ್ಳುತ್ತಿರುವರೆ ? ನಾವು ಮತ್ತೆ ಅವರಿಗೆ ಅಡಿಯಾಳಾಗುವೆವೆ ? ಯೋಚಿಸಲೇಬೇಕಾಗುತ್ತದೆ. ಇನ್ನೊಂದು ಗಹನವಾದ ವಿಚಾರವನ್ನು ಗಮನಿಸೋಣ...
HIV ಯಿಂದ AIDS ಎಂಬ ಕಾಯಿಲೆ ಬರುತ್ತದೆ ಅನ್ನುವುದನ್ನು ಎಲ್ಲಾ ಮುಂದುವರಿಯುತ್ತಿರುವ ರಾಷ್ಟ್ರಗಳು ಒಪ್ಪಿಕೊಂಡು ಅದರ ವಿರುದ್ದದ ಹೋರಾಟಕ್ಕೆ ಯಾವ ಶಸ್ತ್ರಗಳು ಬೇಕೋ ಅದನ್ನೆಲ್ಲಾ ಸಿದ್ದವಾಗಿಟ್ಟುಕೊಂಡಿವೆ. AIDS ಎನ್ನುವುದು ಹೆಚ್ಚಾಗಿ ಕಂಡುಬರುತ್ತಿರುವುದು ಆಫ್ರಿಕಾದ ಹಿಂದುಳಿದ ರಾಷ್ಟ್ರಗಳಲ್ಲಿ ಮತ್ತು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ . ಅಮೇರಿಕ ಮತ್ತು ಯುರೋಪುಗಳಲ್ಲಿ AIDS ನ ಕಾಟ ಅಷ್ಟಾಗಿ ಇಲ್ಲವೆನ್ನಬಹುದು. ಹಾಗಾದರೆ HIV ಎನ್ನುವ ವೈರಾಣು AIDS ಎನ್ನುವುದನ್ನು ಉಂಟುಮಾಡುತ್ತದೆಯೆ ?  ಇಲ್ಲವೆನ್ನುತ್ತಾರೆ ಪ್ರಖ್ಯಾತ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು. ( ಗೂಗ್ಲಿಸಿ : Is there any proof that  HIV leads to AIDS ? ). ಯಾವ ವಿಜ್ಞಾನಿಯೂ ವೈರಾಣುವಿನಿಂದ AIDS ಹರಡುತ್ತದೆ ಎಂಬುದಕ್ಕೆ ಸರಿಯಾದ refference ಕೊಡುವುದಿಲ್ಲ. AIDS ನ ಕಲ್ಪನೆಯ ಹಿಂದೆ pharma industry ಗಳ ದೊಡ್ಡ ಮಾಫಿಯಾವೆ ಇದೆ ಎಂದು ಪ್ರತಿಭಟಿಸಿದ ಅಮೇರಿಕದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಯೊಬ್ಬರನ್ನು ಸದ್ದಿಲ್ಲದೆ ಭೂಗತನನ್ನಾಗಿ ಮಾಡಲಾಗುತ್ತದೆ. AIDS ಎನ್ನುವುದು ಮಹಾಮಾರಿ ಎಂಬಂತೆ ಚಿತ್ರಿಸಿ ತನ್ನ ಅಂಕೆಯಲ್ಲಿರುವ ದೇಶಗಳ ಮೇಲೆ ಅಮೇರಿಕ ಎಂಬ ದೊಡ್ಡಣ್ಣ pharma ಅಧಿಪತ್ಯವನ್ನು ಸ್ಥಾಪಿಸುತ್ತದೆ. ದಿಗಿಲು ಹುಟ್ಟಿಸುವ ವಿಚಾರವೆಂದರೆ, ಅಮೇರಿಕದ ಒಟ್ಟು ಆದಾಯದಲ್ಲಿ ಅರ್ಧ ಪಾಲು pharma indusrry ಗಳದ್ದೇ ಆಗಿದೆ ಎನ್ನುವುದು !.  ವಿಜ್ಞಾನಿಗಳೇ ಹೇಳುವಂತೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ AIDS ( ’ಸಿಂಡ್ರೋಮ್’ ಅನ್ನುವುದನ್ನು ವಿಜ್ಞಾನಿಗಳು ಇದುವರೆವಿಗೂ ಒಪ್ಪಿಲ್ಲ !)  ಎಂಬ ಕಾಯಿಲೆ ಬರುವ ಸಾಧ್ಯತೆ ಕೇಲವ ಶೇ ೨ ರಷ್ಟು ಮಾತ್ರ !.
ಹಾಗಾದರೆ ಇದು AIDS ( Aquired immune deficiency syndrome) ಅಲ್ಲವಾದರೆ ಮತ್ತೇನು ? ವಿಜ್ಞಾನಿಗಳಿಗೂ ಇದು ಪ್ರಶ್ನೆಯಾಗಿಯೇ ಇದೆ. ಇದನ್ನು failure of science ಎಂತಲೂ ಕೆಲವು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.  ಇಂತಹ AIDS ಅನ್ನು ತಡೆಗಟ್ಟಲೆಂದೋ ಅಥವ ಅರಿವು ಮೂಡೀಸಲೆಂದೋ NACO ಮುಂತಾದ ಸಂಸ್ಥೆಗಳು ಕೋಟಿಗಟ್ಟಲೆ ಹಣ ಬಾಚುತ್ತವೆ. ಮೂರು ಜಿಲ್ಲೆಗಳ ಉಸ್ತುವಾರಿ ಹೊರುವ ಒಬ್ಬ ಮೇಲ್ವಿಚಾರಕನಿಗೆ NACO ೩೦ ರಿಂದ ೫೦ ಸಾವಿರದವರಗೆ ಸಂಬಳ ನೀಡುತ್ತದೆಯೆಂದರೆ ಅದಕ್ಕೆ ಬರುತ್ತಿರುವ funding ಎಷ್ಟಿರಬಹುದು ಮತ್ತು ಅದರ ವ್ಯಾಪ್ತಿ ಎಷ್ಟಿರಬಹುದೆಂದು ಅಂದಾಜಿಸಿಕೊಳ್ಳಬೇಕಾಗುತ್ತದೆ. ಒಬ್ಬ AIDS ತಗುಲಿದೆ ಎನ್ನಲಾಗುವ ರೋಗಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದರೆ , ಆತನಿಗೆ ವಿದೇಶಗಳಿಂದಲೇ (U.S) ಔಷಧಿಗಳು ಪೂರೈಕೆಯಾಗಬೇಕು, ಮತ್ತು ಅಂತಹ ಔಷಧಿಗಳ ಬೆಲೆ ಸಾಮಾನ್ಯರಿಗೆ ಎಟುಕುವಂತಹುದಲ್ಲ. ಹೀಗೆ ತಮ್ಮ ಕರೆನ್ಸಿಗಳನ್ನು ಉತ್ತಮಪಡಿಸಿಕೊಳ್ಳುವ ಸಲುವಾಗಿ ಇತರೆ ರಾಷ್ಟ್ರಗಳನ್ನು ಸದಾ ಮರುಳು ಮಾಡುತ್ತಿರುವ ವಿದೇಶೀ ಕುಯುಕ್ತಿಗೆ ಭಾರತವೂ ಬಲಿಯಾಗಬೇಕೆ ?

ತಮ್ಮಲ್ಲಿರುವ ಹಳೆಯ ಶಸ್ತ್ರಾಸ್ತ್ರಗಳ ಹೊರದಬ್ಭುವಿಕೆಗೆ ವಿದೇಶಗಳು (ಪ್ರಮುಖವಾಗಿ U.S.) ಕಣ್ಣುಹಾಕುವುದು ಪಾಕಿಸ್ಥಾನ ಮತ್ತು ಭಾರತದಂತಹ ರಾಷ್ಟ್ರಗಳ ಮೇಲೆಯೆ. ಭಾರತವನ್ನು ಅದುಮಿಟ್ಟುಕೊಳ್ಳಲು ಪಾಕಿಸ್ಥಾನವನ್ನು ಮೆರೆಸುವ ವಿದೇಶಿ ಕೈಗಳು ಚೀನಾವನ್ನು ಹತ್ತಿಕ್ಕಲು ಭಾರತಕ್ಕೆ ಸಹಾಯ ಮಾಡುವ ಸೋಗು ಹಾಕುತ್ತವೆ. ಹಾಗೂ-ಹೀಗೂ ಅಭದ್ರತೆಯ ಭಯ ಹುಟ್ಟಿಸಿ  ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಮಾರುವ ಮೂಲಕ ಮತ್ತಷ್ಟು ಕರೆನ್ಸಿಗಳನ್ನು ತಮ್ಮ ಬೊಕ್ಕಸಕ್ಕೆ ತುಂಬಿಕೊಳ್ಳುತ್ತವೆ. ಇಲ್ಲೂ ಬಲಿಪಶುವಾಗುವುದು ಭಾರತದಂತಹ ರಾಷ್ಟ್ರಗಳೆ.

ನಗರೀಕರಣದ ಭರದಲ್ಲಿ ಅತಿಯಾದ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅದನ್ನೇ ತತ್ವಾದರ್ಶವೆಂದು ನಂಬಿ ಬದುಕಲು ಹೊರಟಿರುವ  ಯುವಸಮುದಾಯಕ್ಕೆ  ಇತ್ತೀಚಿಗೆ ಎರಡು ತಿಂಗಳುಗಳಿಂದ ನಡೆಯುತ್ತಿರುವ ಕಾಶ್ಮೀರದ ಹಿಂಸೆ ಎಚ್ಚರಿಕೆಯ ಗಂಟೆಯಾಗಬೇಕಿದೆ. ಸಂಪೂರ್ಣ ಭಾರತೀಯರದ್ದೇ ನೆಲವಾಗಿದ್ದ ಕಾಶ್ಮೀರ ಇಂದು ವಿದೇಶೀ ಶಕ್ತಿಗಳ ಕೈವಾಡದಿಂದಾಗಿ ಭಾರತದ ಕೈತಪ್ಪಿ ಹೋಗುವ ಸ್ಥಿತಿ ಉದ್ಭವವಾಗುತ್ತಿದೆ. ಮುಂದೆ ಅದು ಜಮ್ಮು, ಡೆಹ್ರಾಡೂನ್, ದಿಲ್ಲಿಯವರೆಗೂ ವ್ಯಾಪಿಸಲಾರದು ಎನ್ನುವುದನ್ನು ಸುಖಾಸುಮ್ಮನೆ ತಳ್ಳಿಹಾಕಲಾಗುವುದಿಲ್ಲ.  ಇಷ್ಟಕ್ಕೂ ವಿದೇಶಿ ಆಚರಣೆಗಳಿಗೇ ಮಣೆಹಾಕಿ ಅವರಿಗೇ ಬಹುಪರಾಕ್ ಹೇಳಿ ಮುಂದೊಂದು ದಿನ ನಾವೆಲ್ಲಾ ಅಡಿಯಾಳುಗಳಾದರೆ, ವಿದೇಶಿಯರೇನೂ ನಮ್ಮನ್ನು ಸಿಂಹಾಸನದಲ್ಲಿ ಕುಳ್ಳಿರಿಸುತ್ತಾರೆಯೆ ? ಖಂಡಿತ ಇಲ್ಲ !. ಅವರ ಬೂಟು ಪಾಲೀಶಿಗೋ, ಮಲ ಹೊರುವುದಕ್ಕೋ, ಬಟ್ಟೆ ಒಗೆದುಕೊಡಲೋ ನಮ್ಮನ್ನು ಉಪಯೋಗಿಸಿಕೊಳ್ಳುವುದು ನಿಶ್ಚಿತ.  ಅಣುಬಾಂಬುಗಳನ್ನು ಹೊಂದಿರುವ ಭಾರತ ಎಂತಹ ವಿಪತ್ತನ್ನಾದರೂ ಎದುರಿಸತ್ತದೆ ಎಂದು ಧೈರ‍್ಯವಾಗಿ ಹೇಳಿಕೊಂಡರೂ , ನಮ್ಮ ಭೃಷ್ಟಚಾರದ ಪ್ರಭುತ್ವ ಅಂತಹ ವಿಪತ್ತನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆಯೇ ಎನ್ನುವುದನ್ನು ವಿಮರ್ಷಿಸಬೇಕಾಗಿದೆ. ಇತ್ತೀಚೆಗೆ ಅಂಡಮಾನಿನ ಸೆಲ್ಯುಲರ್ ಜೈಲಿನ ಹೊರಭಾಗದಲ್ಲಿ ಸಾವರ್ಕರ್ ನೆನಪಿಗೆ ಸ್ಥಾಪಿಸಲಾಗಿದ್ದ ಸ್ಮಾರಕವೊಂದನ್ನು ಕಿತ್ತೊಗೆಸಿದ ’ಮಣಿಶಂಕರ್ ಅಯ್ಯರ್’ ರಂತಹ ಎಡಬಿಡಂಗಿ ಜನನಾಯಕರಿರುವ ಭಾರತದಲ್ಲಿ ಭಾರತೀಯರು ಬಲಿಪಶುವಾಗದೇ ಮತ್ತೇನು ಆಗಲು ಸಾಧ್ಯ ?

ಭಾರತದಲ್ಲಿ ವಿದೇಶಿಗಳಿಗಿಂತಲೂ ಅತ್ಯಂತ ಬುದ್ಧಿವಂತ ವೈದ್ಯರುಗಳು, ಇಂಜಿನಿಯರುಗಳು, ಶಿಕ್ಷಕರು, ತತ್ವಜ್ಞಾನಿಗಳು, ಇದ್ದಾರೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇವರೆಲ್ಲರ ಶಕ್ತಿ ವ್ಯಯವಾಗುತ್ತಿರುವುದು ವಿದೇಶಿ ಕಂಪೆನಿಗಳಿಗಾಗಿ,  ವಿದೇಶಿಗಳಿಗಾಗಿ ಎಂಬ ಕಹಿಸತ್ಯವನ್ನು ನಾವು ಅರಗಿಸಿಕೊಳ್ಳಲೇಬೇಕಿದೆ. ಭೃಷ್ಟ ಭಾರತೀಯ ಪ್ರಭುತ್ವವು ಭಾರತೀಯ ವಿದ್ಯಾವಂತರನ್ನು ನಡೆಸಿಕೊಳ್ಳುವ ಪರಿಯೇ ಹಾಗಿದೆ. ಸರ್ಕಾರದ ಅಧೀನಕ್ಕೊಳಪಡುವ ಗ್ರಾಮಪಂಚಾಯ್ತಿಯ ಗ್ರಾಮಲೆಕ್ಕಿಗನಿಂದಲೇ ಲಂಚಾವತಾರದ ಪ್ರಹಸನ ಪ್ರಾರಂಭವಾಗುತ್ತದೆ ಮತ್ತು ಇದು ದಿಲ್ಲಿ ಗದ್ದುಗೆಯವರೆಗೂ ತಲುಪುತ್ತದೆ ಎಂದರೆ, ಭೃಷ್ಟಾಚಾರದ ಜಾಲ ಎಂತಹುದು ಎಂಬುದನ್ನು ಯೋಚಿಸಬೇಕಾಗುತ್ತದೆ. ೩೦೦ ವರ್ಷಗಳ ಹಿಂದೆ ’ಈಸ್ಟ್ ಇಂಡಿಯಾ ಕಂಪೆನಿ’ ಹೆಸರಿನಲ್ಲಿ ಭಾರತಕ್ಕೆ ಕಾಲಿಟ್ಟ ವಸಾಹತುಗಳು ಇಂದು ’ಬಹುರಾಷ್ಟ್ರೀಯ ಕಂಪೆನಿ’ ಎಂಬ ಹೆಸರಿನಲ್ಲಿ ಬಂದಿವೆ. ಇದರಿಂದ ಯಾರ‍್ಯಾರಿಗೆ ಎಷ್ಟು ಉಪಯೋಗವಾಗಿದೆಯೋ, ಅಂತೂ ಇದರ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳಿಗೆ ಅಂತಿಮವಾಗಿ ಭಾರತವೇ ಬಲಿಪಶುವಾಗಬೇಕಿದೆ. ಇದಕ್ಕೆಲ್ಲಾ ನಿಯಂತ್ರಣ ತರಲು ಸಾಧ್ಯವಿಲ್ಲವೆ ಎಂದು ಚಿಂತಿಸಿದರೆ, ಅದರ ಬೇರುಗಳು ನಮ್ಮ ದೇಶದ ವ್ಯವಸ್ಥೆಯನ್ನೇ ಅಣಕಿಸುತ್ತಾ ನಿಲ್ಲುತ್ತವೆ........ ತಪ್ಪು ಯಾರದು ?


..................................................................................................................................
ಮಾಹಿತಿ ಸಹಕಾರ: ಮೈಸೂರಿನ CFTRI ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಆತ್ಮೀಯ ಮಿತ್ರ.

................................................................................................................................


ಕೊನೆಕಿಡಿ:

ನಿತ್ಯವೂ ಮನೆಯಲ್ಲಿ ಶಂಭುಲಿಂಗನದೇ ನಳಪಾಕ.  ಹೀಗೊಮ್ಮೆ ರಾತ್ರಿಯ ಊಟದ ನಂತರ ಶಂಭು ತನ್ನ ಮಗನಿಗೆ ತತ್ವವೊಂದನ್ನು ಹೇಳಿದ
"ಮಗನೇ, ಕೆಟ್ಟದನ್ನು ನಾವು ದೂರವಿಡಬೇಕು " ಎಂದ. ಮರಿಲಿಂಗ ತಲೆಯಾಡಿಸಿದ.
ಶಂಭು ಮತ್ತೆ ಕೇಳಿದ
"ಅರ್ಥವಾಯಿತೇನೋ ನಾನು ಹೇಳೀದ್ದು"
"ಹೂಂ ಅಪ್ಪ " ಮರಿಲಿಂಗ ಹೇಳಿದ
"ಏನೋ ನಾನು ಹೇಳಿದುದರ ಅರ್ಥ ? "
"ನೀನು ಮಾಡುವ ಅಡುಗೆ ತಿನ್ನಬಾರದು ಅಂತ ಅಪ್ಪಾ ! " ....ಅಪ್ಪ ಬೆಪ್ಪನಾದ !.