Jun 21, 2010

ನನ್ನೂರಿನ ಜನತೆ

ಸತೀಶ ವಟಗುಟ್ಟುತ್ತಲೇ ಇದ್ದ. ನನ್ನ ಆತ್ಮೀಯ ಸ್ನೇಹಿತನೆನ್ನುವ ಕಾರಣಕ್ಕೆ ಅವನ ವಾಚಾಳಿತನವನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದೇನೆ. ಕಪ್ಪೆಯನ್ನು ತೆಗೆದು ಎಲ್ಲೇ ಎಸೆದರೂ, ಅದು ವಟಗುಟ್ಟುವುದನ್ನು ಬಿಡುವುದೇ ? , ಈ ಸತೀಶನೂ ಹಾಗೆಯೆ. ಮಿತಿಮೀರಿ ಮಾತನಾಡಿದರೂ ಅವನ ಮಾತುಗಳಲ್ಲಿ ವಿಷಯವಿರುತ್ತದೆ. ಅದೊಂದೆ ಕಾರಣಕ್ಕೆ ಅವನ ಎಲ್ಲಾ ವಟಗುಟ್ಟುವಿಕೆಯನ್ನೂ ಸಹನೆಯಿಂದ ಕೇಳುತ್ತೇನೆ. ಇಂದೂ ಸಹ ವಟಗುಟ್ಟಿಕೊಂಡೇ ಬಂದ ಸತೀಶ.
" ಆ ಸ್ವಾಮೀಜಿಗೆ ಬಿಳಿ ತೊನ್ನುರೋಗ ಇತ್ತೂಂತ ಅನ್ಸುತ್ತೆ. ನಾನು ಒಮ್ಮೆ ಅವರ ಮೈಮೇಲೆ ಬಿಳಿ ಕಲೆಗಳನ್ನು ನೋಡಿದ್ದೆ.  ನಾವ್ಯಾಕೆ ಒಮ್ಮೆ ಪರೀಕ್ಷೆ ಮಾಡಬಾರದು ? "
ಅವನ ಮಾತು ಕೇಳಿ ನನಗೆ ಗಾಬರಿಯಾಯ್ತು. ಯಾವುದೋ ದುಃಸಾಹಸದ ಕಾರ್ಯಕ್ಕೆ ಕೈಹಾಕುತ್ತಿದ್ದಾನೆ ಅನಿಸಿತು.
" ಎಂತಹ ಪರೀಕ್ಷೆ ಮಾಡ್ತೀಯಪ್ಪಾ ನೀನು ? ಏನಾದ್ರೂ ಗಲಾಟೆ ಹೂಡಿ ತಗಾದೆ ತಂದು ಹಾಕಿ ತಮಾಷೆ ನೋಡೋಲ್ಲ ತಾನೆ  ?".  ನನ್ನ ಆತಂಕ ಸತೀಶನ ಆಲೋಚನೆಯ ಧಾಟಿಯನ್ನೇನೂ ಬದಲಾಯಿಸಲಿಲ್ಲ. ಪುನಃ ವಟಗುಟ್ಟಲು ಪ್ರಾರಂಭಿಸಿದ.
"ಬಿಳಿ ತೊನ್ನು ರೋಗ ಇದ್ದ ಸ್ವಾಮಿಯನ್ನ ಮಣ್ಣು ಮಾಡಿದರಲ್ಲ , ಈಗ ನೋಡು, ಈ ವರ್ಷ ಮಳೆಗಾಲ ಮುಗಿಯಕ್ಕೆ ಬಂದ್ರೂ ಇನ್ನೂ ಒಂದು ಹನಿಯೂ ಸಹ ಭೂಮಿಗೆ ಉದ್ರಿಲ್ಲ, ತೊನ್ನು ಬಂದೋರ‍್ನ ಹೂಳ್ಬಾರ್ದಂತೆ ಕಣೋ..ಸುಟ್ಟು ಹಾಕಬೇಕಂತೆ,ಹಾಗೆ ಹೂತಾಕಿದ್ದರಿಂದಲೇ ಈಗ ಮಳೆ ಬರ್ತಾ ಇಲ್ಲ. ಈಗಾಗಲೇ ಮಳೆಗಾಲ ಮುಗೀತಾ ಇದೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ವರ್ಷ ತೊಳೆದುಕೊಳ್ಳೋಕು ನೀರಿರಲ್ಲ ಮತ್ತೆ  "  ಹೊಸದೊಂದು ಸಂಶೊಧನೆ ಮಾಡಿದವನಂತೆ ವದರಿದ ಸತೀಶ.
ಅವನು ಇಷ್ಟೆಲ್ಲಾ ಯೋಚಿಸುವುದಕ್ಕೆ ಪ್ರಭಲವಾದ ಕಾರಣವೂ ಇತ್ತು. ನಮ್ಮೂರಲ್ಲಿ ಮಳೆಗಾಲ ಇಲ್ಲದ ತಿಂಗಳೆಂದರೆ ಜನವರಿ ಮತ್ತು ಫೆಬ್ರವರಿ ಮಾತ್ರ !. ಮಾರ್ಚಿ ತಿಂಗಳಿನಲ್ಲಿ ಗುಡುಗಿಕೊಂಡು ಬರುವ  ಬಿರುಸುಮಳೆ, ಮುಂದಿನ ಮುಂಗಾರು ಬರುವವರೆಗೂ ಆರ್ಭಟಿಸುತ್ತಲೇ ಇರುತ್ತದೆ. ಜೂನ್ ತಿಂಗಳಲ್ಲಿ ಪ್ರಾರಂಭವಾಗುವ ಜಿಟಿ-ಜಿಟಿ ಮುಂಗಾರುಮಳೆ ಗಣಪತಿ ಹಬ್ಬ ಮುಗಿಯುವವರೆಗೂ ನನ್ನೂರನ್ನು ತೋಯಿಸುತ್ತದೆ. ನಂತರ ಯಥಾಪ್ರಕಾರ ಮಿಂಚು-ಗುಡುಗಿನ ಆರ್ಭಟದೊಂದಿಗೆ ಡಿಸಂಬರ್ ಮೊದಲವಾರದವರೆವಿಗೂ ಆಗಾಗ್ಗೆ ಬಂದು ಹೋಗುತ್ತಿರುತ್ತದೆ. ಇಂತಹ ನನ್ನೂರಿಗೆ ಈ ವರ್ಷ ಮಳೆಯ ಒಂದು ಹನಿಯೂ ಬಿದ್ದಿಲ್ಲವೆಂದಮೇಲೆ...., ಸತೀಶ ಮಾತನಾಡದೇ ಇರಲು ಸಾಧ್ಯವೆ ?. ಆದರೆ ಸತೀಶನ ಆಲೋಚನೆಯ ಹಿಂದಿರುವ ಪ್ರಸಂಗ ಮಾತ್ರ ಕೂತುಹಲಕರವಾದುದು. ಅದೇನು ಗ್ರಹಚಾರವೋ, ಈ ವರ್ಷ ಮಳೆರಾಯ ಮಾತ್ರ ಭೂತ ನೋಡಿ ಬೆದರಿವರಂತೆ ಮೋಡದಿಂದ ಕೆಳಗಿಳಿದಿರಲಿಲ್ಲ. ನನ್ನೂರು, ನದಿ ಮೂಲದ ನೀರಾವರಿ ಇಲ್ಲದ ಪ್ರದೇಶವಾದ್ದರಿಂದ ರೈತರೆಲ್ಲಾ ಕಂಗಾಲಾಗಿ ಬೆಳೆ ಮಾಡುವ ಯೋಚನೆಯನ್ನೇ ಕೈಬಿಟ್ಟಿದ್ದರು. ಕೆರೆ-ಬಾವಿಗಳೆಲ್ಲಾ ಖಾಲಿಯಾಗಿದ್ದವು. ಕುಡಿಯುವ ನೀರಿನ ಕೊಳವೆ ಬಾವಿಗಳು ಸೋತು ಸೊರಗಿದ್ದವು.  ನನ್ನೂರಿನ ಸುತ್ತೆಲ್ಲಾ ಉತ್ತಮ ಮಳೆಯಾಗುತ್ತಿದ್ದರೂ , ನನ್ನೂರಿಗೆ ಮಾತ್ರ ಹನಿಯೂ ಉದುರಿರಲಿಲ್ಲ !. ಸತೀಶ ಬಹಳ "ಮಂಡೆಬಿಸಿ" ಮಾಡಿಕೊಂಡಿದ್ದ. ಅವನೊಬ್ಬನೇ ಅಲ್ಲ, ನನ್ನೂರಿನ ಸಮಸ್ತರಿಗೂ ಈ ಮಳೆ ಎನ್ನುವುದು ಬಿಡಿಸಲಾಗದ ಒಗಟಾಯಿತು.  ಬಾರದಮಳೆ ನನ್ನೂರಿನ ಮಹಾಜನಗಳಲ್ಲಿ ಅನೇಕ ಯೋಚನೆಗಳನ್ನು ಹುಟ್ಟುಹಾಕಿತು. ಅದರಲ್ಲಿ ಪ್ರಮುಖವಾಗಿ ಎರಡು ವಿಷಯಗಳು ತೀವ್ರ ಚರ್ಚೆಗೆ ಈಡುಮಾಡಿತು, ಮೊದಲನೆಯ ವಿಷಯ ನನ್ನೂರಿನ ಗ್ರಾಮದೇವತೆಯದು, ಎರಡನೆಯದು ಮಠದ ಸ್ವಾಮಿಗಳು.
ಮೊದಲನೆಯ ವಿಷಯಕ್ಕೆ ಬಂದರೆ, ಗ್ರಾಮದೇವತೆಯ ವಿಚಾರ ಮಾತನಾಡುವಾಗ ಸ್ವಲ್ಪ ಅಂಜಿಕೆಯಾಗುತ್ತದೆ !. ಆದರೂ ಹೇಳುತ್ತೇನೆ...ಈಗಿರುವ ನನ್ನೂರಿನ ಗ್ರಾಮದೇವತೆಯ ದೇವಾಲಯ ಬಹಳ ಪುರಾತನ ಕಾಲದ್ದು. ಬಿದ್ದು ಹೋಗುವ ಗೋಳಿನಲ್ಲಿದ್ದ ದೇವಾಲಯವನ್ನು ಸುಂದರ ದೇವಾಲಯವನ್ನಾಗಿ ಮರು ನಿರ್ಮಿಸಿದ ಕೀರ್ತಿ ನನ್ನೂರಿನ ಯುವಕರ ಬಳಗಕ್ಕೆ ಸಲ್ಲುತ್ತದೆ. ಯುವಕರ ಬಳಗದಲ್ಲಿ ಕುರುಬರು ಹಾಗು ಒಕ್ಕಲಿಗರೇ ಬಹುಸಂಖ್ಯಾತರು. ನಿರ್ಮಾಣದ ಕಾರ್ಯವೇನೋ ಸುಗಮವಾಗಿ ನೆರವೇರಿತು, ಆದರೆ ಹೊಸದಾಗಿ ದೇವಾಲಯವನ್ನು ನಿರ್ಮಿಸುವಾಗ ಗುಡಿಯೊಳಗಿದ್ದ  ಮೊಲವಿಗ್ರಹದ ಮೂಗು ಅದು ’ಹೇಗೋ’ ಮುರಿದುಹೋಗಿಬಿಟ್ಟಿತ್ತು !. ಇನ್ನು ಭಗ್ನಗೊಂಡ ಮೂರ್ತಿಪೂಜೆ ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಬಂದ ಯುವಕರು , ನವೀನ ವಿಗ್ರಹವೊಂದನ್ನು ತಯಾರುಮಾಡಿಸಿ ಸ್ಥಾಪಿಸಲು ಮುಂದಾದರು. ಇಷ್ಟಾಗುವಷ್ಟರಲ್ಲಿ ’ಬಳಗದ’ ಜೇಬು ಖಾಲಿಯಾಗಿತ್ತು. ವಿಗ್ರಹ ಸ್ಥಾಪನೆಗೆ, ದೇವಾಲಯದ ಪ್ರವೇಶ ಉತ್ಸವಕ್ಕೆ ಹಣ ಹೊಂದಿಸುವುದು ಯುವಕರಿಗೆ ಕಬ್ಬಿಣದ ಕಡಲೆಯಾಯಿತು. ಇಂತಹ ಸಂದರ್ಭದಲ್ಲೆ ದಾನಿ ಚಂದ್ರಣ್ಣನವರು , ದೇವಾಲಯದ ಧಾರ್ಮಿಕಕಾರ್ಯಗಳ ಸಂಪೂರ್ಣ ಖರ್ಚನ್ನು ಹೊರಲು ಸಿದ್ದರಾದರು. ಅವರದ್ದೊಂದು ಷರತ್ತು. ಧಾರ್ಮಿಕ ಪೂಜಾವಿಧಿಗಳನ್ನು ವೀರಶೈವರೇ , ಅದರಲ್ಲೂ ಜಂಗಮರೇ ನಿರ್ವಹಿಸಬೇಕೆಂಬುದು.  ಕಾರಣ, ಚಂದ್ರಣ್ಣನವರು ಲಿಂಗಾಯತ ಕೋಮಿಗೆ ಸೇರಿದವರು. ಸ್ವಜಾತಿ ಪ್ರೇಮ !.  ಇದು ಒಕ್ಕಲಿಗರು, ಕುರುಬರಿಂದ ಕೂಡಿದ್ದ  ಯುವಕರ ಬಳಗಕ್ಕೆ ನುಂಗಲಾರದ ತುತ್ತಾಯಿತು. ಸತಿಶನಂತಹ ಕೆಲವು ಹುಡುಗರು ಆಕ್ಷೇಪಣೇಯನ್ನೂ ಎತ್ತಿದರು.
"ಅದೆಂಗ್ಲಾ ಆಯ್ತದೆ ? ಆರುವಯ್ನೋರೇ ಇದ್ನೆಲ್ಲಾ ಮಾಡ್ಬೇಕು ಕಣಲಾ, ಇಲ್ಲಾಂದ್ರೆ ಮುಂದೆ ಗರಬಡಿತದೆ ನಮ್ಮೂರ್ಗೆ ನೋಡ್ಕಳಿ " . ಹೀಗೆ ಆಕ್ಷೇಪಿಸಿದ ಹುಡುಗರ ಮಾತಿಗೆ ಕಿಮ್ಮತ್ತು ದೊರೆಯಲಿಲ್ಲ. ಚಂದ್ರಣ್ಣನ ಹಣದ ಥೈಲಿಯ ಮುಂದೆ ಬಳಗದ ಹುಡುಗರು ಮೊಕರಾದರು. ಬ್ರಾಹ್ಮಣರಿಗೆ, ಒಕ್ಕಲಿಗರಿಗೆ ಒಳಗೊಳಗೆ ಅಸಹನೆಯಿದ್ದರೂ, ಕೆಲಸವಾಗಲಿ ಎಂದು ತೆಪ್ಪಗಾದರು. ಜಂಗಮರು ಹೋಮ ಸುಟ್ಟರು !. ಮೊರ್ತಿ ಸ್ಥಾಪನೆಯೂ ಆಯಿತು.  ಅಲ್ಲಿಂದ ಕೈಕೊಟ್ಟ ಮಳೆ ,  ಮುಂಗಾರು ಮುಗಿಯುತ್ತಾ ಬಂದರೂ ಹನಿಯುದುರಿಸಲಿಲ್ಲ. ಇಷ್ಟು ಸಾಕಿತ್ತು ಬಳಗದ ಯುವಕರಿಗೆ, ಗ್ರಾಮದೇವತೆಯ ಪ್ರತಿಷ್ಠಾಪನೆಯ ವಿಧಿಯಲ್ಲಿ ಅಪಚಾರವಾಗಿದೆಯೆಂದು ಊರೆಲ್ಲಾ ಸುದ್ದಿಯನ್ನು ಹರಡಿದರು. ಇದಕ್ಕೆ ಲಿಂಗಾಯತರೇ ಕಾರಣವೆಂಬ ಗುಲ್ಲೆದ್ದಿತು. ಲಿಂಗಾಯತರು ಹಾಗೂ ಮಿಕ್ಕುಳಿದ ಪಂಗಡಗಳ ನಡುವೆ ದ್ವೇಷದ ಹೊಗೆ ಕಪ್ಪು ಕಾರ್ಮೋಡದಂತೆ ದಟ್ಟೈಸತೊಡಗಿತು.
ಇನ್ನು ಎರಡನೆಯ ವಿಷಯಕ್ಕೆ ಬಂದರೆ, ನನ್ನೂರಿನ ಸನಿಹದಲ್ಲೇ ಲಿಂಗಾಯತರ ಮಠವೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಸ್ಥಾಪನೆಯಾಯಿತು. ಘನ ಸರ್ಕಾರದ ’ಆಸಕ್ತಿ’ಯಿಂದಾಗಿ ಮಠ ಸಮೃದ್ಧಿಯಾಗಿ ಬೆಳೆಯಿತು. ಒಕ್ಕಲಿಗರು ಹಾಗೂ ಇತರೆ ಜಾತಿಯ ಜನಗಳಿಗೆ ಮಠದ ಏಳಿಗೆಯನ್ನು ಸಹಿಸಲಾಗುತ್ತಿರಲಿಲ್ಲ. ಮಠಕ್ಕೊಬ್ಬರು ಸ್ವಾಮಿಗಳೂ ಇದ್ದರು. ಅವರಿಗ್ಯಾವುದೋ ಕಾಯಿಲೆ ಬಂದು ನರಳಾಡಿ , ಕೊನೆಗೊಂದು ದಿವಸ ಕೊನೆಯುಸಿರೆಳೆದರು. ವೀರಶೈವ ಪದ್ಧತಿಯಂತೆ ಅವರ ಸಮಾಧಿಯನ್ನು ಮಠದ ಆವರಣದಲ್ಲೇ ನಿರ್ಮಿಸಲಾಯಿತು. ಸ್ವಾಮಿಗಳನ್ನು ಮಣ್ಣುಮಾಡುವ ಸಮಯದಲ್ಲಿ ಹಾಜರಿದ್ದ ಕೆಲವರಿಗೆ , ಅವರ ಮೈಮೇಲಿದ್ದ ಬಿಳಿಕಲೆಗಳು ಕಾಣಿಸಿಕೊಂಡವು. ಗುಸುಗುಸು ಮಾತನಾಡಿಕೊಂಡರು. " ತೊನ್ನಿದ್ದವರನ್ನ ಸುಡಬೇಕು ಕಣ್ರಲಾ..ಊತಾಕುದ್ರೆ ಬರಗಾಲ ಬತ್ತದೆ !". ಇಂತಹ ಮಾತುಗಳು ಮಠದ ಆಡಳಿತಗಾರರನ್ನು ತಲುಪಿದರೂ ಸಹ , ಸಮಾಧಿ ನಿರ್ಮಾಣವಾಯಿತು. ಅಲ್ಲಿಂದ ಶುರುವಾಯಿತು ನನ್ನೂರಿನ ಬರಗಾಲ. ಮಳೆ ಬರಲೇ ಇಲ್ಲ !.  ಸತೀಶ ಕ್ರಾಂತಿಕಾರನಂತೆ ಬುಸುಗುಡುತ್ತಿದ್ದ. ಏನಾದರೂ ಸರಿಯೇ , ನನ್ನೂರಿಗೆ ಮಳೆ ತರಿಸಲೇಬೇಕೆಂಬ ಹಟತೊಟ್ಟವನಂತೆ ವ್ಯಗ್ರನಾಗಿ ಕುಳಿತಿದ್ದ.  ನಾನು ಸ್ವಲ್ಪ ಸಮಾಧಾನ ಪಡಿಸಲು ಯತ್ನಿಸಿದೆ. " ಸತೀಶ ಬಿಳಿ ಚರ್ಮದ ಸ್ವಾಮಿಗೂ, ಮಳೆಗೂ ಏನು ಸಂಬಂಧನಯ್ಯಾ ? ಏನೇನೋ ಮಾತನಾಡಿ ಜನಗಳನ್ನ ತಪ್ಪುದಾರಿಗೆ ಎಳೀಬೇಡ ನೀನು ". ನನ್ನ ಉಪದೇಶಗಳಾವುದೂ ಅವನಿಗೆ ಬೇಕೆನಿಸಲಿಲ್ಲ. ಮತ್ತೆ ಬುಸುಗುಟ್ಟಿದ. "ಹಾಗಾದ್ರೆ  ತಿಂಗಳ ಹಿಂದೆ ಪಕ್ಕದೂರಿವವರು ಗ್ರಾಮದೇವತೆಗೆ ಪೂಜೆ ಮಾಡ್ಕಂಡು ಹೋದ್ರಲಾ..ಅಲ್ಲಿ ಎಂಥಾ ಮಳೆ ಆಯ್ತು ಗೊತ್ತಾ..? ಕೆರೆ ಕಟ್ಟೆ ಎಲ್ಲಾ ತುಂಬಿ ಹೋದವಂತೆ..ನಂಬಿಕೆ ಮುಖ್ಯ . ಆ ತೊನ್ನು ಸ್ವಾಮಿಯನ್ನ ಹೂಳದೆ ಸುಟ್ಟಿದ್ದರೆ , ಇಷ್ಟು ಹೊತ್ತಿಗಾಗಲೇ ಮಳೆ ಸುರಿದುಹೋಗಿರೋದು ಗೊತ್ತಾ ?! ಈಗಲೂ ಹೂತಿರೋ ಆ  ಹೆಣ ತೆಗೆದು ಸುಟ್ಟರೆ ಮಳೆ ಬರುತ್ತೆ ನೊಡು ! " ಸತೀಶನ ಮಾತಿಗೆ ನಗಬೇಕೋ , ಅಳಬೇಕೋ ನನಗೆ ತಿಳಿಯಲಿಲ್ಲ. " ಸತೀಶ, ಪೂಜೆ- ಆಚರಣೆಗಳಿಂದ ಧಾರ್ಮಿಕ ಶ್ರದ್ಧೆ, ನಂಬಿಕೆ ಸಂಸ್ಕೃತಿ ಬೇಳೆಯುತ್ತೆ ಅನ್ನೋದು ನಿಜ, ಆದರೆ ಹೂತಿರುವ ಹೆಣ ತೆಗೆದು ಸುಡೋದು ಯಾವ ಸಂಸ್ಕೃತಿನಯ್ಯಾ ? ". ಸತೀಶನಿಗೆ ನನ್ನೋಡನೆ ಚರ್ಚೆಮಾಡುವ ಆಸಕ್ತಿಯಿರಲಿಲ್ಲ. ಯುವಕರ ಬಳಗದ ಗುಂಪು ನಾವಿದ್ದೆಡೆಗೆ ಬರಲು , ಸತೀಶ ಅವರನ್ನು ಸೇರಿಕೊಂಡ.  ನಾನು ಅಲ್ಲಿಂದ ಕಳಚಿಕೊಂಡೆ. ಸತೀಶ ಒಕ್ಕಲಿಗ ಕುಟುಂಬದಿಂದ ಬಂದಿದ್ದ ಹುಡುಗ . ಒರಟು ಸ್ವಭಾವದವನಾದರೂ ನನ್ನೂರಿನ ಬಗೆಗೆ ಅತೀವ ಅಭಿಮಾನವಿರಿಸಿಕೊಂಡಿದ್ದ. ಒಮ್ಮೊಮ್ಮೆ ಅಭಿಮಾನ ಅತಿರೇಕಕ್ಕೆ ತಿರುಗಿ ಸಂಘರ್ಷಗಳಾಗುತ್ತಿದ್ದವು. ಯುವಕರ ಬಳಗದವರು ಮಳೆ ತರಿಸಲು ಶೃಂಗೇರಿಯಿಂದ ದೀಕ್ಷಿತರನ್ನು ಕರೆತರಲು ತೀರ್ಮಾನಿಸಿದರು. ಅದರಂತೆ ಸಕಾಲಕ್ಕೆ ಬಂದ ಆಚಾರ್ಯರು ಮೂರು ದಿವಸಗಳ ಕಾಲ ಯಾಗಗಳನ್ನು ನಡೆಸಿ ಮಳೆಯಾಗಲೆಂದು ಹರಸಿದರು. ಕೊನೆಯ ದಿವಸ ತಿರ್ಥ-ಪ್ರಸಾದ ವಿನಿಯೋಗ. ಅಂದು ಲಿಂಗಾಯತ ಮುಖಂಡ ಚಂದ್ರಣ್ಣನೂ ಅಲ್ಲಿಗೆ ಬಂದಿದ್ದು ವಿಶೇಷವಾಗಿತ್ತು. ತೀರ್ಥ ಪಡೆದುಕೊಳ್ಳಲು ಮುಗಿಬಿದ್ದ ಜನರನ್ನು ನೋಡಿ ಚಂದ್ರಣ್ಣ ಛೇಡಿಸಿದ್ದ " ದೇಸಕ್ಕೆ ಓರಾಟ ಮಾಡ್ರುಲಾ ಅಂದ್ರೆ, ಅಯ್ನೋರ್ ಕೊಡೊ ತೀರ್ಥಕ್ ಓರಾಟ ಮಾಡ್ತಿರಲ್ರುಲಾ " . ಚಂದ್ರಣ್ಣನ ಮಾತಿನಿಂದ ಸಿಟ್ಟಿಗೆದ್ದಿದ್ದ ಮಿಕ್ಕುಳಿದವರು  ಅಂದಿನ ದಿನ ರಾತ್ರಿಯೇ ಸಭೆ ಸೇರಿದರು. ಲಿಂಗಾಯತರನ್ನು ಹೊರತುಪಡಿಸಿ ಮಿಕ್ಕುಳಿದ ಎಲ್ಲಾ ಪಂಗಡದವರೂ ಮಠದೊಳಕ್ಕೆ ನುಗ್ಗಿ ಸಮಾಧಿಯಿಂದ ಸ್ವಾಮಿಗಳ ಹೆಣ ತೆಗೆದು ಸುಡಬೇಕೆಂಬ ನಿರ್ಧಾರಕ್ಕೆ ಬಂದರು. ಅದು ಹೇಗೋ ಲಿಂಗಾಯತ ಮುಖಂಡರಿಗೆ ಈ ವಿಷಯ ತಿಳಿದುಹೋಯಿತು.  ಬೆಳಗಾಗುವಷ್ಟರಲ್ಲಿ ದೊಣ್ಣೆ, ಮಚ್ಚು ಹಿಡಿದ ಹತ್ತಾರು ಲಿಂಗಾಯತ ಯೋಧರು ಸಮಾಧಿಯ ಕಾವಲಿಗೆ ನಿಂತರು. ಇನ್ನೊಂದು ದಿಕ್ಕಿನಿಂದ ಚೈನು, ಮಚ್ಚು, ದೊಣ್ಣೆಗಳನ್ನು ಹಿಡಿದ ಯುವಕರ ಗುಂಪು ಸಮಾಧಿಯ ಮೇಲೆ ದಾಳಿಯಿಟ್ಟಿತು. ದೊಡ್ಡ ಸಂಗ್ರಾಮವೇ ನಡೆದುಹೋಯಿತು. ಒಂದಷ್ಟು ಹೆಣಗಳೂ ಬಿದ್ದವು. ಕೈ-ಕಾಲುಗಳು ತುಂಡಾಗಿ ಬಿದ್ದಿತು. ಹೊಡೆತ ತಾಳಲಾರದೆ ಕೆಲವರು ಪಲಾಯನಗೈದರು. ಇನ್ನೂ ಕೆಲವರು ಕೊನೆಯವರೆಗೂ ಹೋರಾಡಿ ವೀರಮರಣವನ್ನಪ್ಪಿದರು !. ಇದರ ನಡುವೆಯೇ , ಅದ್ಯರೋ ಒಬ್ಬರು ಸಮಾಧಿಯನ್ನು ಬಗೆದುಬಿಟ್ಟರು. ಸ್ವಾಮಿಗಳ ದೇಹ ಅರ್ಧದಷ್ಟು ಹೊರಗೆ ಬಂದಿತು. ಅಷ್ಟರಲ್ಲಿ ಪೋಲಿಸಿನವರ ಆಗಮನವಾಗಲು ಅಳಿದುಳಿದ ಮಂದಿಯೂ ದಿಕ್ಕುಪಾಲಾದರು. ಇಷ್ಟಾದ ನಂತರ ಮಠದೆಡೆಗೆ ಹೋಗಲು ಜನಗಳು ಹಿಂಜರಿಯತೊಡಗಿದರು. ಸ್ವಾಮಿಗಳ ಜೊತೆಗೆ ಇನ್ನಷ್ಟು ಹೆಣಗಳು ಅವರ ಸಖ್ಯ ಬೆಳಸಿದವು !.  ನನಗೆ ಸತೀಶನ ನೆನಪಾಯಿತು. ಹುಡುಕಿಕೊಂಡು ಹೊರಟೆ. ಹೊಂಗೆ ಮರದ  ಬುಡದಲ್ಲಿ ಕುಳಿತು ಯೋಚನಾಮಗ್ನನಾಗಿದ್ದವನನ್ನು ಮಾತಿಗೆಳೆದೆ. " ಏನೋ ಸತೀಶ, ಅವತ್ತು ಹೊಡೆದಾಟವಾದಾಗ ನೀನಲ್ಲಿರಲಿಲ್ಲವಂತೆ ?". ಕೂತೂಹಲದಿಂದ ಕೇಳಿದೆ. ಸತೀಶನ ಬಳಿ ಉತ್ತರ ಸಿದ್ಧವಾಗಿತ್ತು. " ಹೌದಪ್ಪಾ, ಅಂದು ನಾನು ಊರಿನಲ್ಲಿರಲಿಲ್ಲ..ನಾನೇನಾದರೂ ಇದ್ದಿದ್ದರೆ..ಆ ಸ್ವಾಮಿಯ ಹೆಣ ತೆಗೆದು ಸುಟ್ಟುಬರುತ್ತಿದ್ದೆ !". ಕಟಕಟನೆ ಹಲ್ಲುಕಡಿದ ಸತೀಶ. ಇಷ್ಟಾದರೂ ಇವನಿಗೆ ಬುದ್ಧಿ ಬರಲಿಲ್ಲವಲ್ಲಾ ಎಂದು ಮರುಗಲು ಅಲ್ಲಿದ್ದುದು ನಾನೊಬ್ಬನೆ !. ಸತೀಶ ಮತ್ತೆ ವಟಗುಟ್ಟಲು ಶುರುಮಾಡಿದ. " ಉತ್ತರ, ಹಸ್ತ, ಚಿತ್ತ, ಸ್ವಾತಿ, ವಿಶಾಖ..ಎಲ್ಲಾ ಮಳೇನೂ ಮುಗೀತು. ಇನ್ನೇನು ಚಳಿಗಾಲನೂ ಶುರುವಾಗುತ್ತೆ. ಇನ್ನೆಲ್ಲಿಂದ ಮಳೆ ಬರುತ್ತಯ್ಯಾ ? ಮುಂದೆ ಗತಿಯೇನು ? ನಮ್ಮನ್ನ ಆ ದೇವರೇ ಕಾಪಾಡಬೇಕು " . ನಾನು ರೇಗಿಸಲೆಂದೇ ಸತೀಶನನ್ನು ಕೆಣಕಿದೆ. " ಅಲ್ಲಯ್ಯಾ, ಸ್ವಾಮಿಗಳ ಸಮಾಧಿನೂ ಬಗೆದಾಯ್ತು, ಶೃಂಗೇರಿಯಿಂದ ಬ್ರಾಂಬ್ರನ್ನೇ ಕರೆಸಿ ಪೂಜೆ ಮಾಡಿಸಿದ್ದಾಯ್ತು..ಇನ್ನೂ ಯಾಕೆ ಮಳೆ ಬರಲಿಲ್ಲ ಈ ಊರಿಗೆ ?". ಸತೀಶನ ಮುಖ ಚಿಕ್ಕದಾಯಿತು. ಡಿಸಂಬರ್ ಆರಂಭದ ಸಣ್ಣ ಚಳಿಯಲ್ಲೂ ಆತ ತುಸು ಬೆವರಿದ್ದು ನನಗೆ ತಿಳಿಯಿತು. ಆದರೂ ಅವನು ಹಠ ಬಿಡಲಿಲ್ಲ. " ಮಳೆಗಾಲ ಮುಗಿದು ಚಳಿ ಶುರುವಾಯ್ತು. ಈಗಿನ್ನೆಂಥಾ ಮಳೆ ಬರುತ್ತೆ. ಇನ್ನು ಮುಂದೆ ಬಹಿರ್ದೆಸೆಗೆ ಹೋಗೋವಾಗ ಕಾಗದ ತೆಗೆದುಕೊಂಡು ಹೋಗಬೇಕಾಗುತ್ತೆ. ಆದರು ನಾನು ಬಿಡಲ್ಲ..ನಾಳೆ ನೀನೂ ನನ್ನ ಜೊತೆ ಬಾ..ಆ ಸ್ವಾಮಿಯನ್ನ ಸಮಾಧಿಯಿಂದ ತಗೆದು ಸುಟ್ಟಾಕಿ ಬರೋಣ , ಆಮೇಲೆ ನೋಡು ಮಳೆ ಹೇಗೆ ಬರುತ್ತೆ ಅಂತ ..". ಅವನ ವಿತಂಡವಾದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ಗ್ರಾಮದೇವತೆಯ ದೇವಾಲಯದ ನೂತನ ಶಿಖರದ ನೆರಳು ಅಷ್ಟುದ್ದಕ್ಕೂ ಬಿದ್ದಿತ್ತು. ಸೂರ್ಯ ತನ್ನ ನಿತ್ಯಕಾರ್ಯ ಮುಗಿಸಿ ಮರೆಯಾಗುತ್ತಲಿದ್ದ. ಕತ್ತಲಾಗುತ್ತಲಿದ್ದರಿಂದ ಅವನಿಂದ ಬಿಡುಗಡೆಗೊಂಡು ನಾನು ಮನೆ ಸೇರಿದೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಯ ಹೆಂಚಿನ ಮೇಲೆ  ಸಣ್ಣ ಮಳೆ ಹನಿಗಳು ಬಿದ್ದ ಸದ್ದಾಯಿತು. ಒಂಬತ್ತು ಗಂಟೆಯಾಗುವಷ್ಟರಲ್ಲಿ ದೊಡ್ಡ ಹನಿಗಳು ಶುರುವಾಗಿದ್ದವು. ಅಕಾಲದಲ್ಲಿ ಇದೆಂತಹ ಮಳೆಯೆಂದು ಆಶ್ಚರ್ಯಗೊಂಡು ನೋಡುವಷ್ಟರಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿತು. ನನ್ನೂರಿನ ಜನತೆ ಇತಿಹಾಸದಲ್ಲಿ ಕಂಡು ಕೇಳರಿಯದಿದ್ದ ಬಿರುಸಾದ ಮಳೆ ಅದು. ಬಿರುಗಾಳಿಯ ಸಹಿತ ಸುರಿದ ಕುಂಭದ್ರೋಣ ಮಳೆ ನಿಂತಾಗ ಬೆಳಗಿನ ಜಾವ ಸುಮಾರು ಐದು ಗಂಟೆ !.  ಎಂದಿನಂತೆ ಬೆಳಗಾಗೆದ್ದು ಮನೆಯಿಂದ ಹೊರಬಂದು ಬೀದಿಯನ್ನೊಮ್ಮೆ ದಿಟ್ಟಿಸಿದೆ. ಎಲ್ಲೆಲ್ಲು ನೀರು. ಮಳೆ ನೀರು. ತಕ್ಷಣ ಸತೀಶನ ನೆನಪಾಯಿತು.  ಅವನನ್ನು ಮಾತನಾಡಿಸಲೆಂದು  ಬನಿಯನ್ ಮೇಲೆ ಅಂಗಿ ಧರಿಸಿ ಹೊರಟೆ. ಅರೆ !  ನನ್ನೂರಿನ ಗ್ರಾಮದೇವತೆಯ ದೇವಾಲಯದ ಮುಂದೆ ಜನವೋ ಜನ !. ಹತ್ತಿರ ಹೋಗಿ ನೋಡಿದೆ...ರಾತ್ರಿ ಸುರಿದ ಬಿರುಗಾಳಿ ಮಳೆಗೆ ದೇವಾಲಯ ಶಿಖರದ ಸಮೇತ ಕುಸಿದು ಬಿದ್ದಿದೆ. ಗ್ರಾಮದೇವತೆ ಕಲ್ಲುಗಳಡಿಯಲ್ಲಿ ಅಪ್ಪಚ್ಚಿ !. ಸತೀಶ ಏದುಸಿರು ಬಿಡುತ್ತಾ ಓಡೋಡಿ ಬಂದ..ವಟಗುಟ್ಟಿದ.."ಹೆಣ ತೆಗೆಯೋಣ ಅಂತ ಮಠದ ಹತ್ತಿರ ಹೋಗಿದ್ದೆ ಕಣೊ, ಅಲ್ಲಿ ಸಮಾಧಿಯೇ ಇಲ್ಲ !. ಮಳೆ ನೀರಲ್ಲಿ ಎಲ್ಲಾ ಕೊಚ್ಕೊಂಡು ಹೋಗಿದೆ..ಅಲ್ಲಿ ಏನಿತ್ತು ಅಂತಲೂ ಗೊತ್ತಾಗುತ್ತಿಲ್ಲ ..!" .
ಪ್ರಕೃತಿಯ ಮುಂದೆ, ಜಾತಿ-ಪಂಗಡಗಳನ್ನು ಮೇಳೈಸಿಕೊಂಡಿರುವ ಮನುಷ್ಯ ತೀರಾ ಕುಬ್ಜನೆನಿಸಿತು ನನಗೆ. ಸೀದಾ ಮನಗೆ ಹೋಗಿ ಬೆಚ್ಚಗೆ ರಗ್ ಹೊದೆದು ಮಲಗಿದೆ.  


 (ಈ ಕತೆಯಲ್ಲಿರುವುದೆಲ್ಲವೂ ಕೇವಲ ಕಾಲ್ಪನಿಕ. ಯಾರಿಗೂ ಸಂಬಧಿಸಿದ್ದಲ್ಲ !)  
...............................................................................................

 ಖೊನೆಖಿಡಿ:

ಶಂಭುಲಿಂಗನಿಗೆ ಪರೋಪಕಾರವೆಂದರೆ ಬಲು ಪ್ರೀತಿ !. ಹೀಗೆ ಒಮ್ಮೆ ವಾಯುವಿಹಾರಕ್ಕೆ ಹೊರಟ ಶಂಭುವಿಗೆ ವಿಚಿತ್ರವೊಂದು ಕಾಣಿಸಿತು. ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಹುಲ್ಲನ್ನು ವ್ಯಕ್ತಿಯೊಬ್ಬ ಗಬಗಬನೆ ತಿನ್ನುತ್ತಿದ್ದ. ಚಕಿತನಾದ ಶಂಭು ವ್ಯಕ್ತಿಯನ್ನು ಮಾತಿಗೆಳೆದ

" ಏನಾಯ್ತಯ್ಯಾ ನಿನಗೆ ? ದನಗಳ ತರಹ ಹುಲ್ಲು ತಿನ್ನುತ್ತಿದ್ದೀ ! "
"ಬುದ್ದಿ, ನಂಗೆ ತಿನ್ನಕ್ಕೆ ಏನು ಇಲ್ರಾ...ಹೊಟ್ಟೆಗಿಲ್ದೆ ವಾರಾತು ಸೋಮಿ.." ಗೋಳಾಡಿತು ಆ ವ್ಯಕ್ತಿ.
" ಹಾಗಾದರೆ ನೀನು ನನ್ನ ಜೊತೆ ಬರಲೇಬೇಕು " ಶಂಭು ಉಪಕರಿಸಲು ಮುಂದಾದ.  ವ್ಯಕ್ತಿ ಹರುಷಗೊಂಡಿತು.
" ಆಗಲಿ ಬುದ್ದಿ, ಮತ್ತೇ ನಂಜೊತೆ ನನ್ ಹೆಂಡ್ರು, ೩ ಮಕ್ಳು ಎಲ್ಲಾ ಇದಾರಲ್ಲಾ ಸೋಮಿ "
"ಹೆದರಬೇಡ !. ಎಲ್ಲರನ್ನೂ ಕರೆದುಕೊಂಡು ಬಾ " 
"ಆಗಲಿ ಬುದ್ದಿ " ಓಡಿ ಹೋದ ಆ ವ್ಯಕ್ತಿ ತನ್ನ ಕುಟುಂಬವನ್ನು ಕರೆದುಕೊಂಡು ಬಂದ. ವ್ಯಕ್ತಿಯ ಹೆಂಡತಿ ಶಂಭುವಿನ ಉಪಕಾರವನ್ನು ಹೊಗಳಿತು.
"  ಭೋ ಉಪ್ಕಾರ ಆತು ಸೋಮಿ , ನೀವು ತುಂಬಾ ದೊಡ್ಡೋರು ...ನಮ್ ಕೆಲ್ಸ ಏನು ಬುದ್ದಿ ? " 
ಶಂಭು ನಸುನಕ್ಕಿದ  "ಒಳ್ಳೆಯದು , ವಿಷಯ ಏನಪ್ಪಾ ಅಂದ್ರೆ, ಒಂದು ವರ್ಷದಿಂದ ನನ್ನ ಮನೆಯ ತೋಟದ ಹುಲ್ಲು ಕತ್ತರಿಸಿಲ್ಲ ನಾನು !!!!. ನಿಮ್ಮಿಂದ ನನಗೇ ಉಪಕಾರವಾಗುತ್ತದೆ .ಬನ್ನಿ !! "  

.......................................................

ವಂದನೆಗಳೊಂದಿಗೆ...




Jun 10, 2010

ಹೇಳು ಹೇಳು ಶರೀಫಾ....



ಬಹಳ ವರ್ಷಗಳ ಹಿಂದೆ ಈ ಹಾಡು ಕೇಳಿದ್ದೆ. ನನ್ನ ಸಂಗೀತದ store ನಲ್ಲಿ ಈ ಹಾಡಿರುವುದು ಮರೆತುಹೋಗಿತ್ತು. ಮೊನ್ನೆ ಆಕಸ್ಮಿಕವಾಗಿ ಮತ್ತೆ ಇದೇ ಹಾಡು ದೊರಕಿತು. ನನ್ನ ಮನಸಿಗೆ ತಟ್ಟಿದ, ತುಂಬ ಇಷ್ಟವಾದ ಹಾಡು ನಿಮಗೂ ಇಷ್ಟವಾಗಬಹುದೆಂಬ ಭಂಡಧೈರ್ಯದಿಂದ ಇಲ್ಲಿ ಅಚ್ಚಿಸಿದ್ದೇನೆ.  ಸುಮಧುರ ಗಾಯಕರಾದ ’ರಾಜು ಅನಂತಸ್ವಾಮಿ’ (ದಿವಂಗತ ಎನ್ನಲು ಬೇಸರವಾಗುತ್ತಿದೆ) ಯವರು ಈ ಹಾಡು ಹಾಡಿದ್ದಾರೆ. ಹಾಡು ಶರಿಫಜ್ಜನ ಬಗೆಗೆ ಬರೆದುದಾಗಿದೆ. ಗೀತ ರಚನಕಾರರು ಯಾರು ಎನ್ನುವುದು ಮರೆತುಹೋಗಿದೆ. (ಹೀಗೆ ಹೇಳಲೂ ಬೇಸರವಾಗುತ್ತಿದೆ !) ಮಿತ್ರರಲ್ಲಿ ಯಾರಿಗಾದರೂ ತಿಳಿದಿದ್ದರೆ-ತಿಳಿದರೆ ದಯವಿಟ್ಟು ಹೇಳಿ, ರಚನಕಾರರ ಹೆಸರನ್ನೂ ಇಲ್ಲಿ ನಮೂದಿಸುತ್ತೇನೆ.  ಶಿಶುನಾಳದ ಶರೀಫಜ್ಜನ ಬದುಕನ್ನು ಈ ಕವಿತೆಯಲ್ಲಿ ಅರ್ಥಪೂರ್ಣವಾಗಿ, ಮನಮುಟ್ಟುವಂತೆ ಹೇಳಿದ್ದಾರೆಂದು ನನಗನ್ನಿಸಿತು, ತುಂಬಾ ಇಷ್ಟವೂ ಆಯಿತು. ನಿಮ್ಮ ಮುಂದೆ ಹಾಡಿನ Audio Link ಕೂಡಾ ಕೊಟ್ಟಿದ್ದೇನೆ . ಎಲ್ಲಾ OS ಗಳಲ್ಲೂ ಈ ಹಾಡು ಬರುತ್ತದೋ ಇಲ್ಲವೋ ಗೊತ್ತಿಲ್ಲ....ಕೇಳಿ...ಮಜಾಮಾಡಿ...ಶುಭವಾಗಲಿ.  





(ನಾರಾಯಣ ಭಟ್ಟರ ಸಲಹೆ :  ಅಂತರ್ಜಾಲದಿಂದ QuickTimeInstaller.exe [http://www.apple.com/quicktime/download/] ಎಂಬ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಂಡರೆ ಈ ಹಾಡನ್ನು ಕೇಳಬಹುದು.)

.................................
ಒಂದು ಧರ್ಮಕೆ ಮೊಳೆತು
ಇನ್ನೊಂದರಲಿ ಕಲಿತು,
ಸಾರವೊಂದೇss ಎಂದು ಹಾಡಿದಾತ


ಹನಿಸೇರಿ ಹೊಳೆಯಾಗಿ
ಗುರಿಸೇರಿ ಕಡಲಾಗಿ
ನಭವೇರಿ ಮುಗಿಲಾಗಿ ಆಡಿದಾತ


ಹತ್ತು ವನಗಳ ಸುತ್ತಿ
ಹೂ ಹೂವನೂ ಮುತ್ತಿ
ಒಂದು ಜೇನಿನ ಹುಟ್ಟು ಕಟ್ಟಿದಾತ


ಎಲ್ಲಿ ಹೇಳೋ ತಾತ
ಹಿಂದೆ ಆ ಅವದೂತ
ಸಾಧಿಸಿದ ನಿನ್ನಂತೆ ಧರ್ಮವನ್ನು
ಕಾವ್ಯದಲಿ ಕಡೆದಾ ಮರ್ಮವನ್ನು


ಸೃಷ್ಟಿ ಮರೆಸಿಟ್ಟಿರುವ ಗುಟ್ಟುಗಳನು
ಸಪ್ತಸ್ವರ ಮೀರಿದಾ ಮಟ್ಟುಗಳನು
ನಿನ್ನ ನುಡಿಯಲ್ಲಿಟ್ಟೆ
ಮಾತಿಗರ್ಥವ ಕೊಟ್ಟೆ
ಹಾಡು ಮಾಡಿದೆ ನಿನ್ನ ವ್ಯಥೆಗಳನ್ನು ೨
ಹೇಳು ಹೇಳು ಶರೀಫ..
ಹಿಂದೆ ಯಾವ ಖಲೀಫಾ
ಏರಿದ್ದ ಈ ಹೊನ್ನಿನಟ್ಟವನ್ನು
ಮಣಿಸಿದ್ದ ಮಾತುಗಳ ಬೆಟ್ಟವನ್ನು


ಏನು ಜೀವನ ಧರ್ಮ
ಏನು ಸೃಷ್ಟಿಯ ಮರ್ಮ
ಏನು ಎಲ್ಲಿ ಯಾಕೆ ತಾಕಿದವನು
ಬೆಟ್ಟ ಬೆಟ್ಟವ ಕುಲುಕಿ
ಸಪ್ತ ಸಾಗರ ಕಲಕಿ
ಸೃಷ್ಟಿ ಮೂಲವ ಹುಡುಕಿ ಜೀಕಿದವನು


ಹೇಳು ಹೇಳು ಶರೀಫಾ
ಬೇರೊಬ್ಬ ಯಾರವನು
ನಿನ್ನಂತೆ ನಡೆ-ನುಡಿಯ ಕಾಡಿದವನು
ತೀರದಾಚೆಯ ತಾರೆ ಕೂಡಿದವನು


ಅನ್ನ ನೆಲ ಮಾತು ಮತ ಎಲ್ಲ ಬೇರಾದರೂ
ಪ್ರೀತಿಯಲಿ ಅವನೆಲ್ಲ ಕಲಸಿಬಿಟ್ಟೆ
ಬಣ್ಣ ಏಳಾದರು ಒಂದೆ ಕಾಮನಬಿಲ್ಲು
ಚಂದವಾದಂತೆ ನೀ ಬಾಳಿಬಿಟ್ಟೆ


ಗಡಿ ಮೀರಿ ಮಡಿ ಮೀರಿ
ಬಾನಿನಲಿ ಕುಡಿಯೂರಿ
ಗಾಳಿಯಲಿ ಬಾಳಪಟ ತೇಲಿಬಿಟ್ಟೆ,
ಹೇಳು ಹೇಳು ಶರೀಫಾ
ಯಾವ ಭಾವ ಕಲಾಪ
ಇಂಥ ಬಿಡುಗಡೆ ಕೊಟ್ಟ ಸೂತ್ರವಾಯ್ತು
ಹೇಗೆ ಬರಿನೀರು ಪರಿಶುಧ್ಹ ತೀರ್ಥವಾಯ್ತು ೨


-------------------------------------------------


ಖೊನೆಖಿಡಿ:


ಮಹಾನ್ ಜಿಪುಣ ಶಂಭುಲಿಂಗನಿಗೆ ಕಡೆಗೂ ಸಾವು ಬಂದೇಬಿಟ್ಟಿತು !. ಮರಣೋನ್ಮುಖನಾಗಿದ್ದ ಅವನ ಸುತ್ತ ಬಂಧು-ಮಿತ್ರರೆಲ್ಲರೂ ನೆರೆದರು.
ಶಂಭುಲಿಂಗನಿಗೆ ತನ್ನ ಹೆಂಡತಿಯನ್ನು ನೋಡುವ ಆಸೆಯಾಯಿತು..


" ಏ ..ಎಲ್ಲಿದಿಯೇ ? ಬಾರೆ ಇಲ್ಲಿ.."


" ಇಲ್ಲೇ ಇದ್ದಿನ್ರೀ, ನಿಮ್ಮ ಪಕ್ಕದಲ್ಲೇ " ಸೀರೆ ಸೆರಗಿನಿಂದ ಕಣ್ಣೊರೆಸಿಕೊಂಡಳು ಅವನ ಪತ್ನಿ.


" ಮಗನೇ ಎಲ್ಲಿದಿಯಪ್ಪಾ ? " 


" ಇಲ್ಲೇ ಇದ್ದೀನಪ್ಪಾ..ನಿನ್ನ ಪಕ್ಕದಲ್ಲೇ " ಮಗರಾಯ ಗೋಳೋ ಎಂದು ಗೋಳಿಟ್ಟ


"ಮಗಳೇ ಬಾರಮ್ಮಾ ಇಲ್ಲಿ..ಎಲ್ಲಿದ್ದಿಯಮ್ಮಾ ನೀನು "


" ನಾನೂ ಇಲ್ಲೇ ನಿನ್ನ ಪಕ್ಕದಲ್ಲೇ ಇದ್ದೀನಪ್ಪಾ "  ದುಃಖ ತಡೆಯಲಾರದೆ ಮಗಳು ಅತ್ತಳು.


 " ಸರಿ.." ಶಂಭುಲಿಂಗ ಅವಲತ್ತುಕೊಂಡ  "ಎಲ್ಲಾ ಇಲ್ಲೇ ಇದ್ದೀರಾ ಅಂದಮೇಲೆ ಅಡುಗೆಮನೆ ಲೈಟ್ ಯಾಕೆ ಉರಿಬೇಕು !!!! "  


--------------------------


 ವಂದನೆಗಳೊಂದಿಗೆ.