Jun 10, 2010

ಹೇಳು ಹೇಳು ಶರೀಫಾ....



ಬಹಳ ವರ್ಷಗಳ ಹಿಂದೆ ಈ ಹಾಡು ಕೇಳಿದ್ದೆ. ನನ್ನ ಸಂಗೀತದ store ನಲ್ಲಿ ಈ ಹಾಡಿರುವುದು ಮರೆತುಹೋಗಿತ್ತು. ಮೊನ್ನೆ ಆಕಸ್ಮಿಕವಾಗಿ ಮತ್ತೆ ಇದೇ ಹಾಡು ದೊರಕಿತು. ನನ್ನ ಮನಸಿಗೆ ತಟ್ಟಿದ, ತುಂಬ ಇಷ್ಟವಾದ ಹಾಡು ನಿಮಗೂ ಇಷ್ಟವಾಗಬಹುದೆಂಬ ಭಂಡಧೈರ್ಯದಿಂದ ಇಲ್ಲಿ ಅಚ್ಚಿಸಿದ್ದೇನೆ.  ಸುಮಧುರ ಗಾಯಕರಾದ ’ರಾಜು ಅನಂತಸ್ವಾಮಿ’ (ದಿವಂಗತ ಎನ್ನಲು ಬೇಸರವಾಗುತ್ತಿದೆ) ಯವರು ಈ ಹಾಡು ಹಾಡಿದ್ದಾರೆ. ಹಾಡು ಶರಿಫಜ್ಜನ ಬಗೆಗೆ ಬರೆದುದಾಗಿದೆ. ಗೀತ ರಚನಕಾರರು ಯಾರು ಎನ್ನುವುದು ಮರೆತುಹೋಗಿದೆ. (ಹೀಗೆ ಹೇಳಲೂ ಬೇಸರವಾಗುತ್ತಿದೆ !) ಮಿತ್ರರಲ್ಲಿ ಯಾರಿಗಾದರೂ ತಿಳಿದಿದ್ದರೆ-ತಿಳಿದರೆ ದಯವಿಟ್ಟು ಹೇಳಿ, ರಚನಕಾರರ ಹೆಸರನ್ನೂ ಇಲ್ಲಿ ನಮೂದಿಸುತ್ತೇನೆ.  ಶಿಶುನಾಳದ ಶರೀಫಜ್ಜನ ಬದುಕನ್ನು ಈ ಕವಿತೆಯಲ್ಲಿ ಅರ್ಥಪೂರ್ಣವಾಗಿ, ಮನಮುಟ್ಟುವಂತೆ ಹೇಳಿದ್ದಾರೆಂದು ನನಗನ್ನಿಸಿತು, ತುಂಬಾ ಇಷ್ಟವೂ ಆಯಿತು. ನಿಮ್ಮ ಮುಂದೆ ಹಾಡಿನ Audio Link ಕೂಡಾ ಕೊಟ್ಟಿದ್ದೇನೆ . ಎಲ್ಲಾ OS ಗಳಲ್ಲೂ ಈ ಹಾಡು ಬರುತ್ತದೋ ಇಲ್ಲವೋ ಗೊತ್ತಿಲ್ಲ....ಕೇಳಿ...ಮಜಾಮಾಡಿ...ಶುಭವಾಗಲಿ.  





(ನಾರಾಯಣ ಭಟ್ಟರ ಸಲಹೆ :  ಅಂತರ್ಜಾಲದಿಂದ QuickTimeInstaller.exe [http://www.apple.com/quicktime/download/] ಎಂಬ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಂಡರೆ ಈ ಹಾಡನ್ನು ಕೇಳಬಹುದು.)

.................................
ಒಂದು ಧರ್ಮಕೆ ಮೊಳೆತು
ಇನ್ನೊಂದರಲಿ ಕಲಿತು,
ಸಾರವೊಂದೇss ಎಂದು ಹಾಡಿದಾತ


ಹನಿಸೇರಿ ಹೊಳೆಯಾಗಿ
ಗುರಿಸೇರಿ ಕಡಲಾಗಿ
ನಭವೇರಿ ಮುಗಿಲಾಗಿ ಆಡಿದಾತ


ಹತ್ತು ವನಗಳ ಸುತ್ತಿ
ಹೂ ಹೂವನೂ ಮುತ್ತಿ
ಒಂದು ಜೇನಿನ ಹುಟ್ಟು ಕಟ್ಟಿದಾತ


ಎಲ್ಲಿ ಹೇಳೋ ತಾತ
ಹಿಂದೆ ಆ ಅವದೂತ
ಸಾಧಿಸಿದ ನಿನ್ನಂತೆ ಧರ್ಮವನ್ನು
ಕಾವ್ಯದಲಿ ಕಡೆದಾ ಮರ್ಮವನ್ನು


ಸೃಷ್ಟಿ ಮರೆಸಿಟ್ಟಿರುವ ಗುಟ್ಟುಗಳನು
ಸಪ್ತಸ್ವರ ಮೀರಿದಾ ಮಟ್ಟುಗಳನು
ನಿನ್ನ ನುಡಿಯಲ್ಲಿಟ್ಟೆ
ಮಾತಿಗರ್ಥವ ಕೊಟ್ಟೆ
ಹಾಡು ಮಾಡಿದೆ ನಿನ್ನ ವ್ಯಥೆಗಳನ್ನು ೨
ಹೇಳು ಹೇಳು ಶರೀಫ..
ಹಿಂದೆ ಯಾವ ಖಲೀಫಾ
ಏರಿದ್ದ ಈ ಹೊನ್ನಿನಟ್ಟವನ್ನು
ಮಣಿಸಿದ್ದ ಮಾತುಗಳ ಬೆಟ್ಟವನ್ನು


ಏನು ಜೀವನ ಧರ್ಮ
ಏನು ಸೃಷ್ಟಿಯ ಮರ್ಮ
ಏನು ಎಲ್ಲಿ ಯಾಕೆ ತಾಕಿದವನು
ಬೆಟ್ಟ ಬೆಟ್ಟವ ಕುಲುಕಿ
ಸಪ್ತ ಸಾಗರ ಕಲಕಿ
ಸೃಷ್ಟಿ ಮೂಲವ ಹುಡುಕಿ ಜೀಕಿದವನು


ಹೇಳು ಹೇಳು ಶರೀಫಾ
ಬೇರೊಬ್ಬ ಯಾರವನು
ನಿನ್ನಂತೆ ನಡೆ-ನುಡಿಯ ಕಾಡಿದವನು
ತೀರದಾಚೆಯ ತಾರೆ ಕೂಡಿದವನು


ಅನ್ನ ನೆಲ ಮಾತು ಮತ ಎಲ್ಲ ಬೇರಾದರೂ
ಪ್ರೀತಿಯಲಿ ಅವನೆಲ್ಲ ಕಲಸಿಬಿಟ್ಟೆ
ಬಣ್ಣ ಏಳಾದರು ಒಂದೆ ಕಾಮನಬಿಲ್ಲು
ಚಂದವಾದಂತೆ ನೀ ಬಾಳಿಬಿಟ್ಟೆ


ಗಡಿ ಮೀರಿ ಮಡಿ ಮೀರಿ
ಬಾನಿನಲಿ ಕುಡಿಯೂರಿ
ಗಾಳಿಯಲಿ ಬಾಳಪಟ ತೇಲಿಬಿಟ್ಟೆ,
ಹೇಳು ಹೇಳು ಶರೀಫಾ
ಯಾವ ಭಾವ ಕಲಾಪ
ಇಂಥ ಬಿಡುಗಡೆ ಕೊಟ್ಟ ಸೂತ್ರವಾಯ್ತು
ಹೇಗೆ ಬರಿನೀರು ಪರಿಶುಧ್ಹ ತೀರ್ಥವಾಯ್ತು ೨


-------------------------------------------------


ಖೊನೆಖಿಡಿ:


ಮಹಾನ್ ಜಿಪುಣ ಶಂಭುಲಿಂಗನಿಗೆ ಕಡೆಗೂ ಸಾವು ಬಂದೇಬಿಟ್ಟಿತು !. ಮರಣೋನ್ಮುಖನಾಗಿದ್ದ ಅವನ ಸುತ್ತ ಬಂಧು-ಮಿತ್ರರೆಲ್ಲರೂ ನೆರೆದರು.
ಶಂಭುಲಿಂಗನಿಗೆ ತನ್ನ ಹೆಂಡತಿಯನ್ನು ನೋಡುವ ಆಸೆಯಾಯಿತು..


" ಏ ..ಎಲ್ಲಿದಿಯೇ ? ಬಾರೆ ಇಲ್ಲಿ.."


" ಇಲ್ಲೇ ಇದ್ದಿನ್ರೀ, ನಿಮ್ಮ ಪಕ್ಕದಲ್ಲೇ " ಸೀರೆ ಸೆರಗಿನಿಂದ ಕಣ್ಣೊರೆಸಿಕೊಂಡಳು ಅವನ ಪತ್ನಿ.


" ಮಗನೇ ಎಲ್ಲಿದಿಯಪ್ಪಾ ? " 


" ಇಲ್ಲೇ ಇದ್ದೀನಪ್ಪಾ..ನಿನ್ನ ಪಕ್ಕದಲ್ಲೇ " ಮಗರಾಯ ಗೋಳೋ ಎಂದು ಗೋಳಿಟ್ಟ


"ಮಗಳೇ ಬಾರಮ್ಮಾ ಇಲ್ಲಿ..ಎಲ್ಲಿದ್ದಿಯಮ್ಮಾ ನೀನು "


" ನಾನೂ ಇಲ್ಲೇ ನಿನ್ನ ಪಕ್ಕದಲ್ಲೇ ಇದ್ದೀನಪ್ಪಾ "  ದುಃಖ ತಡೆಯಲಾರದೆ ಮಗಳು ಅತ್ತಳು.


 " ಸರಿ.." ಶಂಭುಲಿಂಗ ಅವಲತ್ತುಕೊಂಡ  "ಎಲ್ಲಾ ಇಲ್ಲೇ ಇದ್ದೀರಾ ಅಂದಮೇಲೆ ಅಡುಗೆಮನೆ ಲೈಟ್ ಯಾಕೆ ಉರಿಬೇಕು !!!! "  


--------------------------


 ವಂದನೆಗಳೊಂದಿಗೆ.