Feb 22, 2011

ಶಂಭುವಾಣಿ - ೨


ದಯೆ ಮತ್ತು ಮರಣ

"ದಯವೇ (ದಯೆಯೇ) ಧರ್ಮದ ಮೂಲವಯ್ಯಾ" ಎಂದು ಬಸವಣ್ಣ ಮಹಾಶಯರು ಹೇಳಿದಾಗ ಜಗತ್ತಿನಲ್ಲಿ ದಯೆಯ ಔಚಿತ್ಯವನ್ನು ಯಾರೂ ಪ್ರಶ್ನಿಸಲಿಲ್ಲ. ಸಾಂಸ್ಕೃತಿಕ ಕಲಸು ಮೇಲೋಗರಗಳ ಇಂದಿನ ಜಗತ್ತಿನಲ್ಲಿ ದಯೆ, ಕರುಣೆ,ಮಾನವೀಯತೆಗಳೇ ’ಮೂಲವ್ಯಾಧಿ’ಯಯ್ಯಾ ಎಂದು ಮಾನ್ಯ ಶಂಭುಲಿಂಗರು ಹೇಳಿದರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಭಿಕ್ಷುಕನೊಬ್ಬನಿಗೆ ಒಂದು ರೂಪಾಯಿ ಹಾಕಿದರೆ , ಪಾರ್ಟಿಯನ್ನೊಮ್ಮೆ ತಲೆಯಿಂದ ಕಾಲಿನವರೆವಿಗೂ ನೋಡಿ ’ಒಳ್ಳೆ ಸೂಟು-ಬೂಟು ಆಕ್ಕಂಡವ್ನೆ, ಇಷ್ಟೆಯಾ ಇವ್ನ ಯೇಗ್ಯತೆ’ ಎಂದು ಬೈದುಕೊಂಡು ಹೋಗುವುದನ್ನು ಅನುಭವಿಸಿರುವವರು ಹೇರಳ.  ಕರುಣೆಗೆ ಬೆಲೆ ಎಲ್ಲಿದೆ ಸ್ವಾಮಿ !?.

ಇತ್ತೀಚೆಗೆ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ಯ ನಿರ್ದೇಶನದ ’ಗುಜಾರಿಶ್’ ಎಂಬ ಹಿಂದಿ ಚಲನಚಿತ್ರದ ಕಥಾವಸ್ತು ’ದಯಾಮರಣ’. ಚಿತ್ರದ ನಾಯಕ ಖ್ಯಾತ ಜಾದುಗಾರ. obviously ಆತನಿಗೊಬ್ಬ ವಿಲನ್ ಜಾದುಗಾರ ಇರುತ್ತಾನೆ. ನಾಯಕನ ಜಾದೂ ಕಾರ್ಯಕ್ರಮ ನೆಡೆಯುವಾಗ ವಿಲನ್ ಜಾದುಗಾರ ಆತನನ್ನು ’ಮುಗಿಸುವ’ ಸಂಚು ಮಾಡುತ್ತಾನೆ. ಅದೃಷ್ಟವಶಾತ್ ನಾಯಕ ಸಾಯುವುದಿಲ್ಲ. ದುರಾದೃಷ್ಟಕ್ಕೆ ಆತ ಬದುಕಿಯೂ ಸತ್ತಂತಾಗುತ್ತಾನೆ. ಆತನ ಕೈ-ಕಾಲು-ಬೆನ್ನೆಲುಬುಗಳೆಲ್ಲವೂ ನಿಷ್ಕ್ರಿಯವಾಗಿ ಆತನೊಬ್ಬ ವರ್ತಮಾನದ ’ಭೂತ’ವಾಗುತ್ತಾನೆ. ಇಷ್ಟಾದರೂ, ನಾಯಕನ ಕುತ್ತಿಗೆಯ ಮೇಲ್ಭಾಗದ ಎಲ್ಲಾ ಅಂಗಗಳೂ ಅತ್ಯಂತ ಕ್ರಿಯಾಶೀಲವಾಗಿರುತ್ತವೆ. ಆತನಿಗೊಬ್ಬ care taker (cum ಸಂಗಾತಿ !) ಇರುತ್ತಾಳೆ. ಆಕೆಯೇ ಆತನ ’ಸಂಪೂರ್ಣ’ ಹೊಣೆಯನ್ನು ಹೊರುವವಳು !. ಮಲಗಿದಲ್ಲೇ ಎಲ್ಲಾ ಕಾರ್ಯಗಳನ್ನೂ ನಿರ್ವಹಿಸಬೇಕಾದ ಆತನಿಗೆ ಆಕೆಯೇ ಕೈ-ಕಾಲು-ಬೆನ್ನೆಲುಬಾಗಿ ನಿಲ್ಲತ್ತಾಳೆ.  ಅವರ ವೈಯಕ್ತಿಕ ಪ್ರಪಂಚದಲ್ಲಿ ಬೇರಾರಿಗೂ ಪ್ರವೇಶವಿರುವುದಿಲ್ಲ. ಇಷ್ಟಾದರೂ ನಾಯಕ ಮಾತ್ರ ಯಾವತ್ತೂ ಉತ್ಸಾಹದ ಚಿಲುಮೆಯಂತಿರುತ್ತಾನೆ. ತನ್ನಿಂದ ಇತರರಿಗೇಕೆ ತೊಂದರೆ (ತನಗೂ ಸಹ!) ಎಂಬ ಗೊಂದಲಕ್ಕೆ ಬೀಳುವ ನಾಯಕ ತನಗೆ ದಯಾಮರಣ ಕಲ್ಪಿಸುವಂತೆ ನ್ಯಾಯಾಲಯವನ್ನು ಕೇಳಿಕೊಳ್ಳುತ್ತಾನೆ. ಆತನ ಮತ್ತೊಬ್ಬ ವಕೀಲ ಸ್ನೇಹಿತೆ ಆತನ ಪರವಾಗಿ ವಕಾಲತ್ತು ವಹಿಸುತ್ತಾಳೆ          ( ಇದೆಲ್ಲಾ ತೀರಾ ಭಾವನಾತ್ಮಕ ಸನ್ನಿವೇಶಗಳು, ಭಾವುಕರು ಕರವಸ್ತ್ರ ಇಟ್ಟುಕೊಳ್ಳಬಹುದು). ನ್ಯಾಯಾಲಯ ಆತನಿಗೆ ದಯಾಮರಣವನ್ನು ಕಲ್ಪಿಸುವುದಿಲ್ಲ (according to ಸಾಂವಿಧಾನಿಕ ನಿಯಮಗಳು). ನಾಯಕನ ಅರ್ಜಿ ಅನೂರ್ಜಿತವಾಗುತ್ತದೆ. ಕಟ್ಟಕಡೆಗೆ ನಾಯಕನೇ ತನ್ನ ಪ್ರೀತಿ ಪಾತ್ರರೆಲ್ಲರನ್ನೂ ಕರೆದು ’ಪಾರ್ಟಿ’ ಕೊಟ್ಟು self ದಯಾಮರಣದ ನಿರ್ಧಾರವನ್ನು ಪ್ರಕಟಿಸುತ್ತಾನೆ.  ಮುಂದಿನದೆಲ್ಲಾ ಅವನಿಚ್ಚೆಯಂತೆಯೇ ನೆರವೇರುತ್ತದೆ.

ಬದುಕುವ ಹಕ್ಕು ಎಲ್ಲರಿಗೂ ಇರುವಂತೆ ಸಾಯುವ ಹಕ್ಕೂ ಇರಬಾರದೇಕೆ ಎಂದು ಮಾನ್ಯ ಶಂಭುಲಿಂಗರು ಕೊಶ್ನಿಸಿದ್ದಾರೆ. ಸಾಯುವ ಹಕ್ಕು ಬಂದರೆ ಆತ್ಮಹತ್ಯೆ ಎನ್ನುವ ಪದವೇ ನೆಗೆದು ಬಿದ್ದು ಹೋಗಬಹುದು.  ವಾಸ್ತವದಲ್ಲಿ ಚಿತ್ರದ ನಾಯಕನ ಉತ್ಸಾಹ ಎಲ್ಲರಿಗೂ ಮಾದರಿಯಾಗುವಂತಹುದೆ, ಪುಸ್ತಕವನ್ನೋದಲು ಆತನು ಬಳಸುವ ತಂತ್ರವೂ ಆಕರ್ಷಕವಾಗಿದೆ. ಇಷ್ಟಾದರೂ ’ಚಿತ್ರ’ ತುಸು ಬೋರ್ ಹೊಡೆಸಿದರೆ ಅದಕ್ಕೆ ಶ್ರೀ ಶಂಭುಲಿಂಗರು ಹೊಣೆಯಲ್ಲ !.  ಚಿತ್ರವನ್ನೊಮ್ಮೆ ನೋಡಿದರೆ ನಾಯಕನಿಗೆ ದಯಾಮರಣದ ಯೋಚನೆ ಏಕೆ ಬಂತೆಂಬುದು ಅರಿವಾಗುತ್ತದೆ. ಸಾಯುವುದಕ್ಕೂ ಸ್ವತಂತ್ರ ಬೇಕಲ್ಲವೆ ? . ಟಿಪಿಕಲ್ ಕೈಲಾಸಂ ೧೯೪೬ ರಲ್ಲಿ ಸತ್ತರು. ಇನ್ನೊಂದು ವರುಷ ಬದುಕ್ಕಿದ್ದಿದ್ದರೆ ಅವರೂ ಸ್ವತಂತ್ರವಾಗಿ ಸಾಯಬಹುದಿತ್ತು.   ಸಿನಿಮಾ ದಯಾಮರಣದ ಅಗತ್ಯ ಯಾರಿಗೂ ಬರದಿರಲೆಂದು ಆಶಿಸೋಣ. ಬದುಕು ಎಲ್ಲರಿಗಾಗಿ ಮತ್ತು ಎಲ್ಲರೂ ಬದುಕುವುದಕ್ಕಾಗಿ ಬದುಕೋಣ.

......................................................................................

ಗಣ -ಗಣತಿ

ಈಗ ಮತ್ತೆ ಗಣತಿ ಮೊದಲಾಗಿದೆ. ಹಲವು ಸರ್ಕಾರೀ ಸಾಂಪ್ರದಾಯಿಕ ವ್ಯವಸ್ಥೆಗಳೆಲ್ಲಾ ಈಗಾಗಲೇ ಗಣಕೀಕೃತಗೊಂಡಿರುವುದರಿಂದ ಈ ಬಾರಿಯ ಗಣತಿಯನ್ನು ನಿಜಕ್ಕೂ ’ಗಣ-ತಿ’ ಎನ್ನಬಹುದು. ಗಣತಿಯಿಂದ ಏನೇನು ಉಪಯೋಗವಿದೆ ಎಂದು ಕೆಲವರನ್ನು ಕೇಳಿದರೆ ಹಲವು ತೆರನಾದ ಉತ್ತರಗಳು ಬರುವುದು ನಿಶ್ಚಿತ.  ಗಣತಿಗೆ ನಿಗದಿ ಪಡಿಸಿರುವ ದಿನಗಳಿಗಿಂತ ಮುಂಚಿತವಾಗಿ ಗಣತಿಯನ್ನು ಮುಗಿಸಿ ಮಿಕ್ಕ ದಿನಗಳನ್ನು ಸಂಸಾರದ ಜೊತೆ ’ಕಳೆಯ’ಬಹುದಾದ ಉಪಯೋಗ ಶಿಕ್ಷಕರಿಗಿದೆ ಎಂದು ಮಾನ್ಯ ಶಂಭುರವರು ಪಿಸುದನಿಯಲ್ಲಿ ಹೇಳಿದ್ದಾರೆ. ಗಣತಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನೇ ಬಳಸಿಕೊಳ್ಳುತ್ತಿರುವುದರಿಂದ ಅವರೀಗ ನಿಜಕ್ಕೂ ’ಶಿಕ್ಷಿತರೇ ’ ಎನ್ನಬಹುದು.  ಸುಶಿಕ್ಷಿತರು ಎಂಬ ಪದವನ್ನು ಶಿಕ್ಷಕರೆಲ್ಲಾ ಸೇರಿಕೊಂಡು ಒಳ್ಳೆಯ ಶಿಕ್ಷೆ ಅನುಭವಿಸುತ್ತಿರುವವರು ಎಂದು ಬದಲಾಯಿಸಿಕೊಳ್ಳಬಹುದು. ಯಾರಿಗೆ ಏನಾಗಲೀ , ಬಿಡಲಿ ’ಮಂಗಳಮುಖಿ’ಯರಿಗಂತೂ ಈ ಬಾರಿಯ ಗಣತಿಯಲ್ಲಿ ಅವರನ್ನೂ (ಮಕ್ಕಳನ್ನೂ, ತಂದೆಯ(ರ)ನ್ನೂ means ಪೋಷಕರನ್ನು) ’ಗಣ’ನೆಗೆ ತೆಗೆದುಕೊಳ್ಳುವ ಭರವಸೆ ದೊರೆತಿದೆ ಮತ್ತು ಈಡೇರುತ್ತಿದೆ. ಮಂಗಳಮುಖಿಯರ ವಿಚಾರ ಇಲ್ಲಿ ಬರೆಯಲು ಕಾರಣ, ಇದೀಗ ನಾನು ಓದುತ್ತಿರುವ ಭಾಷಾಪರಿಣತ, ಭಾಷಾಶಾಸ್ತ್ರ ಅನುವಾದಕ ಶ್ರೀಯುತ A.K. ರಾಮಾನುಜನ್ ಅವರ ಪುಸ್ತಕ. ತೆಲುಗಿನ ಕ್ಷೇತ್ರಯ್ಯ, ಅನ್ನಮಯ್ಯ, ಸಾರಂಗಪಾಣಿ ಮುಂತಾದವರ ಪದಗಳನ್ನು ಆಂಗ್ಲಭಾಷೆಯಲ್ಲಿ ಅನುವಾದಿಸಿ ಅವರು ಬರೆದಿರುವ ಪುಸ್ತಕ "When God is a customer"( ದೇವರು ಗಿರಾಕಿಯಾಗಿ !) .  
{ಪುಸ್ತಕ ಎಲ್ಲೆಲ್ಲೂ ಅಲಭ್ಯ. ಗೂಗಲ್-ಇ-ಬುಕ್ಸ್ ನಲ್ಲಿ ಹುಡುಕಿದಾಗ ಕೇವಲ ಟಿಪ್ಪಣಿ ಮತ್ತು ಪರಿಚಯವಷ್ಟೇ ದೊರೆತದ್ದು. ಕಡೆಗೆ Landmark ಪುಸ್ತಕ ಮಳಿಗೆಯಲ್ಲಿ ಇದೆ ಎಂದು ತಿಳಿದು ಕಾಸು ಕೊಟ್ಟು ತಂದಿರಿಸಿಕೊಂಡಿದ್ದೇನೆ.}
ಭಾಷಾನುವಾದದಲ್ಲಿ A.K. (A=ಆಂಗ್ಲ, K=ಕನ್ನಡ ಎನ್ನೋಣವೇ ? ) ರಾಮಾನುಜನ್ ಅವರಿಗೆ ಸರಿಸಾಟಿಯಾಗಬಲ್ಲವರು ಇಲ್ಲವೆಂದು ಹೇಳುವುದು ಅತಿಶಯೋಕ್ತಿಯಾದರೂ, ಒಂದರ್ಥದಲ್ಲಿ ಅದೂ ನಿಜವೇ ಆಗುತ್ತದೆ. (ರಾಮಾನುಜನ್ನೇ ’ಏಕೆ’ ? ಇನ್ನೊಬ್ಬ ಭಟ್ಟರೋ, ಶೆಟ್ಟರೋ ಆಗಬಾರದೇ ?  ಎಂದು ಯಾರಾದರೂ ಪ್ರಶ್ನಿಸಿದರೆ  ಅದಕ್ಕೆ ಮಾನ್ಯ ’ಶಂ’ ರವರ ಬಳಿ ಉತ್ತರವಿಲ್ಲ !). ಪುಸ್ತಕದ ಅನುವಾದವನ್ನು ಓದುತ್ತಿದ್ದರೆ, ಮುಗಿಸುವಷ್ಟರಲ್ಲಿ ನಾನೇನಾದರೂ ಇಂದ್ರಿಯಾತೀತನಾಗಿ (’ಕುಂಡಲಿನಿ’ ಸಿಡಿದು !) ಬಿಡುತ್ತೇನೇನೋ ಎಂದು ಅನಿಸುತ್ತಿದೆ.
When God is a customer ನಲ್ಲಿ ದೇವರೇ ಮಂಗಳಮುಖಿಯರ ಬಳಿ ಬರುತ್ತಾನೆ. (ಇಂದಿನ ಸಾಮಜಿಕ ಸ್ಥಿತಿಗೆ ತದ್ವಿರುದ್ದ) . ಆತನೇ ಗಿರಾಕಿಯಾಗುತ್ತಾನೆ, ಹಣ ನೀಡುತ್ತಾನೆ !.
ಇದು ಮೀರಾ-ಮಾಧವ, ಗೋಪಿ-ಕೃಷ್ಣರ ಕತೆಗಳಿಗೆ ವಿರುದ್ದವಾಗಿಯೇ ನೆಡೆಯುತ್ತದೆ. ಅದಕ್ಕೇ ಪುಸ್ತಕದ ಹೆಸರು "When God is a customer" .
ದೇವರಿಗೆ ಭಕ್ತರು ಇರಲೇಬೇಕೆಂದೇನೂ ಇಲ್ಲ. ಆದರೆ ಭಕ್ತರಿಗೆ ದೇವರಂತೂ ಬೇಕು ಕನಿಷ್ಟ ಭಕ್ತ/ಭಕ್ತೆ ಎನಿಸಿಕೊಳ್ಳಲು.   ಪುಸ್ತಕ ಓದಿ ಮುಗಿಸಿದ ನಂತರ ’ಸಾಧ್ಯವಾದಲ್ಲಿ’ ಇನ್ನಷ್ಟು ಬರೆಯುತ್ತೇನೆ.
....................................................

ಕಿಡಿ :

ಇತ್ತೀಚೆಗೆ ಮಂತ್ರಿವರ್ಯರೊಬ್ಬರು ತಮಿಳುನಾಡಿನ ಕಾಮಾಕ್ಷಿ ದೇವಾಲಯಕ್ಕೆ ಮುಗಿಬಿದ್ದಿದ್ದರು. ’ಕೋವಿಲ್ (ಕೋಯಿಲ್)’ ನ ಒಳಗಡೆ ನಿಂತಿದ್ದಾಗ ಅವರ ಜೇಬಿನಿಂದ ಅಚಾನಕ್ಕಾಗಿ  ಅಮೂಲ್ಯ ವಸ್ತುವೊಂದು ಕೆಳಗೆ ಬಿದ್ದಿತಂತೆ. ಬಿದ್ದುದನ್ನು ತೆಗೆದುಕೊಳ್ಳಲು ಬಗ್ಗಿದಾಗ ’ಟೈಟ್’ ಆಗಿದ್ದ ಮಾನ್ಯರ ಪ್ಯಾಂಟಿನ ಹಿಂಭಾಗ ಸಿಡಿದು-ಭಾಗವಾಗಿ ಹಿಂಬದಿಯಲ್ಲಿದ್ದವರೆಲ್ಲರಿಗೂ ಅವರ ಅಂಡಿನ ದರ್ಶನವಾಯಿತಂತೆ. (ಅವರೇನು ಒಳವಸ್ತ್ರ ಹಾಕಿರಲಿಲ್ಲವೇ ? ಎಂಬ ಕಿಡಿಗೇಡಿ ಪ್ರಶ್ನೆಯನ್ನು ಮಾನ್ಯ ಶಂಭುಲಿಂಗರು ಕೇಳಿದ್ದಾರೆ).

ಕಣ್ಣಾರೆ ಕಂಡೆ ನಾ
ಕಾಮಾಕ್ಷಿಯ ...

ಎಂಬ ಹಾಡಿರುವಂತೆ

ಕಣ್ಣಾರೆ ಕಂಡೆ ನಾ
ಖಂಡೇರಾಯನ ಕುಂಡೀನಾsss....

ಎಂಬ ಎ’ಲೈಟ್’ ಪದ್ಯದೊಂದಿಗೆ ಮುಗಿಸೋಣ.

..............................*.......................................