May 4, 2010

ಶಾಪ.. ೩ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
*******************************


ನಟ್ಟಿರುಳಿನಲ್ಲಿ ಅಶ್ವಗಳು ಬಹಳದೂರ ಪ್ರಯಾಣಿಸಲಾರದಾದವು.  ಕೈಯಲ್ಲಿ ಹಿಡಿದಿದ್ದ ದೀವಟಿಗೆಗಳು ನಂದಿಹೋದವು. ಯುವಕರಿಬ್ಬರೂ, ಸನಿಹದಲ್ಲಿ ಗೋಚರಿಸಿದ ಪುಟ್ಟ ಆಲಯದೊಳಗೆ ಹೊಕ್ಕರು. ರಾತ್ರಿಯನ್ನು ಅಲ್ಲೇ ಕಳೆಯುವುದೆಂದು ನಿರ್ಧರಿಸಿ,  ನಿದ್ರೆಗೆ ಶರಣಾದರು.
ನಸುಕಿನಲ್ಲಿ ಹಕ್ಕಿಗಳ ಕಲರವವು ಕಿವಿಗೆ ಬಿದ್ದಾಗಲೇ ಯುವಕರಿಬ್ಬರಿಗೂ ಎಚ್ಚರವಾದುದು. ಆಲಯದ ಮುಂದೆಯೇ ಹರಿಯುತ್ತಿದ್ದ ನದಿಯಲ್ಲಿ ತಮ್ಮ ಪ್ರಾತರ್ವಿಧಿಗಳನ್ನು ಪೂರೈಸಿಕೊಂಡು, ಪುನಃ ಅಶ್ವಗಳನ್ನೇರಿ ದ್ವಾರಾವತಿಯತ್ತ ಪ್ರಯಾಣ ಬೆಳಸಿದರು. ಹಾದಿಯುದ್ದಕ್ಕೂ ಕಂಡ ಊರುಗಳು, ನಗರಗಳನ್ನು ದರ್ಶಿಸುತ್ತಾ ಅಲ್ಲಲ್ಲಿ ವಿರಮಿಸಿಕೊಳ್ಳುತ್ತಾ , ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ದ್ವಾರವತಿಯನ್ನು ತಲುಪಿದರು. ದ್ವಾರವತಿಯ ಭವ್ಯ ಕೋಟೆಯನ್ನು ಕಂಡು ಯುವಕರು ಮೂಕವಿಸ್ಮಿತರಾದರು. ಎರಡು ಸುತ್ತಿನ ಕೋಟೆಯನ್ನು ದಾಟಿ , ನಗರದೊಳಗೆ ಪ್ರವೇಶಿಸಿದರು. ದ್ವಾರವತಿಯ ವೈಭವವನ್ನು ಕಣ್ಣಾರೆ ಕಾಣುವ ಅವರ ಕನಸು ನನಸಾಗಿತ್ತು. ಸಮುದ್ರದಂತೆ ಗೋಚರಿಸುತ್ತಿದ್ದ ಬೃಹತ್ ಕೆರೆಯನ್ನು , ಪ್ರವೇಶದ್ವಾರದಲ್ಲೇ ಕಂಡ ಯುವಕರು ಬಹು ಸಂತಸಗೊಂಡರು. ಅರಮನೆಯನ್ನು ದರ್ಶಿಸುವ ಮೊದಲು , ಕೆಲ ಹೊತ್ತು ವಿರಮಿಸಿಕೊಳ್ಳುವ ನಿರ್ಧಾರಕ್ಕೆ ಬಂದ ಯುವಕರು , ಸನಿಹದಲ್ಲೇ ಕಂಡ ಸುಂದರ ’ಕಲ್ಯಾಣಿ’ಯಲ್ಲಿ ಮುಖ ಮಾರ್ಜನೆ ಮಾಡಿಕೊಂಡು ಪಕ್ಕದಲ್ಲೇ ಇದ್ದ ಉದ್ಯಾನವನದಲ್ಲಿ ವಿರಮಿಸತೊಡಗಿದರು. ತಂಪಾದ ಗಾಳಿಗೆ ಮೈಯೊಡ್ಡಿ ಮಲಗಿದ ಯುವಕರಿಗೆ ನಿದ್ದೆಯ ಜೋಂಪು ಹತ್ತಿದ್ದು ತಿಳಿಯಲಿಲ್ಲ. ಸಾಯಂಕಾಲವಾದರೂ, ಅವರ ನಿದ್ರೆಗೆ ಯಾವ ಭಂಗವೂ ಆಗಲಿಲ್ಲ.

-------*-------

ಪ್ರತಿನಿತ್ಯದಂತೆ , ಮಹಾರಾಣಿ ತಿರುಮಲಾಂಬೆಯು ಸಂಜೆಯ ವಾಯುವಿಹಾರಕ್ಕೆ ’ಕಲ್ಯಾಣಿ’ಯಿದ್ದ ಉದ್ಯಾನವನಕ್ಕೆ ಬರುವುದು ವಾಡಿಕೆಯಾಗಿತ್ತು. ಅಂದೂ ಸಹ ವಿಹಾರಕ್ಕೆ ರಾಣಿಯು ಆಗಮಿಸಿದಳು. ಉದ್ಯಾನವನದಲ್ಲಿ ಸಂಚರಿಸುತ್ತಿದ್ದ ರಾಣಿಗೆ, ನಿದ್ರೆಯಲ್ಲಿದ್ದ ಇಬ್ಬರು ಸ್ಪುರದ್ರೂಪಿ ಯುವಕರು ಕಂಡರು. ಅಡಿಯಿಂದ ಮುಡಿಯವರೆಗೂ ತರುಣರನ್ನು ದೃಷ್ಟಿಸಿದ ರಾಣಿಯು, ತನ್ನ ಸೇವಕರಿಗೆ ಯುವಕರನ್ನು ಎಚ್ಚರಗೊಳಿಸಲು ಆಜ್ಞಾಪಿಸಿದಳು. ನವ ತರುಣರ ದೇಹದಾರ್ಢ್ಯ, ಸ್ಪುರದ್ರೂಪ ರಾಣಿಯನ್ನು ಬಹುವಾಗಿ ಆಕರ್ಷಿಸಿತು. ಯುವಕರ ತಾರುಣ್ಯ, ರಾಣಿಯನ್ನು ಮೋಹಗೊಳಿಸಿತು !.  ಸೇವಕರ ಕರೆಗೆ ಎಚ್ಚರಗೊಂಡ ಲಕ್ಷ್ಮಣ-ವೀರೇಶರು , ತಮ್ಮೆದುರಿಗೆ ನಿಂತಿದ್ದವರನ್ನು ಕಂಡು ಬೆರಗಾದರು. ಸೇವಕರು , ಯುವಕರಿಗೆ ರಾಣಿ ತಿರುಮಲಾಂಬೆಯ ಪರಿಚಯವನ್ನು ಹೇಳಿದರು. ಯುವಕರು ಬಹಳ ವಿನಯದಿಂದ ಎದ್ದುನಿಂತು ಗೌರವವನ್ನು ಸೂಚಿಸಿದರು. ಯುವಕರ ರೂಪ-ವಿನಯವರ್ತನೆಗೆ ತಿರುಮಲಾಂಬೆಯು ಮಾರುಹೋದಳು.

" ಯುವಕರೆ, ನೀವು ನೋಡುವುದಕ್ಕೆ ರಾಜಕುಮಾರರಂತೆ  ಕಾಣುವಿರಿ. ದ್ವಾರಾವತಿಯಲ್ಲಿ ನಿಮ್ಮನ್ನೆಂದೂ ನಾನು ಕಂಡಿಲ್ಲ. ಎಲ್ಲಿಂದ ಬಂದಿರುವಿರಿ ನೀವು ? "

ರಾಣಿಯ ಮಾತುಗಳಿಗೆ ಉತ್ತರಿಸಲು ತರುಣರಿಗೆ ಹಿಂಜರಿಕೆಯಾಯಿತು. ಈಗಲೇ ಸತ್ಯ ನುಡಿಯುವುದು ಬೇಡವೆಂದು ಮನದಲ್ಲೇ ನಿರ್ಧರಿಸಿದರು. ಲಕ್ಷ್ಮಣನೇ ಉತ್ತರವನ್ನು ಕೊಡಲನುವಾದ

" ಮಹಾರಾಣಿ, ನಾವು ವಿಜಯಪುರದವರು, ದ್ವಾರಾವತಿಯ ಸೊಬಗನ್ನು ಸವಿಯಲು, ಯಾತ್ರಾರ್ಥಿಗಳಾಗಿ ಬಂದಿರುವೆವು. ಇಂದು ಇಲ್ಲೇ   ಉಳಿದು ನಾಳೆ ಹೊರಟು ಬಿಡುವೆವು..ತಮ್ಮ  ಆದರ-ವಿಶ್ವಾಸಗಳು ನಮ್ಮನ್ನು ಸಂತಸಗೊಳಿಸಿತು.."

ಮಹಾರಾಣಿಗೆ , ಯುವಕರು ದ್ವಾರವತಿಯವರಲ್ಲವೆಂದು ತಿಳಿದಾಗ , ಆಕೆಯ ಬಯಕೆ ಹೆಚ್ಚಾಯಿತು..ಮನಸು ವಿಚಲಿತವಾಯಿತು. ಮೋಹದ ಮಾತುಗಳನ್ನಾಡುತ್ತಾ ಯುವಕರೆಡೆಗೆ , ಸನಿಹಕ್ಕೆ ತೆರಳಿದಳು.

"ಯುವಕರೆ, ತಾವು ವಿಜಯಪುರದವರೆನ್ನುತ್ತೀರಿ. ಅಷ್ಟು ದೂರದಿಂದ ಇಲ್ಲಿಯವರೆಗೂ ಬಂದು ಬರಿ ಕೈಯಲ್ಲಿ ತೆರಳುವಿರೇನು ? ..ನಿಮ್ಮ ಆಸೆಗಳೇನಿದ್ದರೂ  ಹೇಳಿ..ನಾನು ಪೂರೈಸುತ್ತೇನೆ..!..ಹಾಗೆಯೇ ಈ ರಾಣಿಯ ಆಸೆಯನ್ನೂ ನೀವು ಪೂರೈಸಬೇಕಿದೆ ..!! "    

ಯುವಕರಿಗೆ ರಾಣಿಯ ಮಾತುಗಳು ವಿಚಿತ್ರವೆನಿಸತೊಡಗಿತು. ದ್ವಾರಾವತಿಯ ಮಹಾರಾಣಿಯಿಂದ ಇಂತಹ ಅನುಚಿತ ವರ್ತನೆ ಸಾಧ್ಯವೇ ? ....ರಾಣಿಯ ಆಸೆಯನ್ನು ನಾವು ತಣಿಸುವುದೆಂದರೇನು ..?? ...ಯುವಕರು ಗೊಂದಲಕ್ಕೀಡಾದರು..

" ಮಹಾರಾಣಿ, ತಮ್ಮ ಮಾತುಗಳು ನಮಗೆ ಅರ್ಥವಾಗಲಿಲ್ಲ !. ಆದರೂ , ನಾವಿಲ್ಲಿ ಬಂದಿರುವುದು ಯಾತ್ರಿಕರಾಗಿಯೇ ವಿನಃ , ಯಾವುದೇ ಭೋಗದ ಆಸೆಯಿಂದಲ್ಲ..., ನಮಗಾವ ಆಕಾಂಕ್ಷೆಗಳು ಇಲ್ಲ..ಸಾಧ್ಯವಾದರೆ, ಆಲಯಗಳನ್ನೂ, ಅರಮನೆಯನ್ನೂ ಈಗಲೇ ದರ್ಶಿಸಿ..ಇಂದೇ ಹೊರಟುಬಿಡುವೆವು .."

ಯುವಕರ ಮಾತಿಗೆ ತಿರುಮಲಾಂಬೆಯು ಹೆಚ್ಚು ಅವಕಾಶ ನೀಡದೆ, ಅವರನ್ನು ಇನ್ನಷ್ಟು ಸಮೀಪಿಸಿದಳು. ಯುವಕರು ಹಿಂದೆ-ಹಿಂದೆ ಸರಿಯುತ್ತಿದ್ದರು. ರಾಣಿಯು ಮೋಹಿಸುತ್ತಾ ಮತ್ತಷ್ಟು ಹತ್ತಿರವಾದಳು.

" ನವತರುಣರೆ, ನಿಮ್ಮ ತಾರುಣ್ಯವನ್ನೇಕೆ ಸುಮ್ಮನೆ ಹಾಳುಗೆಡಹುವಿರಿ ..? ಮಹಾರಾಣಿಯ ದೇಹಾಕಾಂಕ್ಷೆಯನ್ನೊಮ್ಮೆ ತಣಿಸಿಬಿಡಿ..ನಿಮ್ಮ ತಾರುಣ್ಯದ ಸೌಂದರ್ಯ ನನ್ನ ಮನಸನ್ನು ಮೋಹಗೊಳಿಸಿದೆ. ರಾಣಿಯನ್ನು ಏಕಾಂತದಲ್ಲಿ ಕಾಣುವ ಭಾಗ್ಯ ಅನ್ಯರಾರಿಗೂ ದೊರೆಯುವುದಿಲ್ಲ . ನಿಮಗೆ ಆ ಭಾಗ್ಯ ಸಿಗುತ್ತಿದೆ. ಮೂಢರಂತೆ ಸಮಯ ಹಾಳುಮಾಡದೆ ನನ್ನೊಂದಿಗೆ ಹೊರಟುಬನ್ನಿ.."....

ರಾಣಿಯ ಮಾತುಗಳು ಲಕ್ಷ್ಮಣ-ವೀರೇಶರನ್ನು ದಿಗ್ಭ್ರಾಂತರನ್ನಾಗಿಸಿತು. ಅವರ ಬಾಯಿಂದ ಮಾತುಗಳು ಹೊರಡದಾದವು. ಇನ್ನು, ಸತ್ಯವನ್ನು ಮುಚ್ಚಿಟ್ಟರೆ, ಮಹಾಪರಾಧವಾಗುತ್ತದೆಂದು ಆಲೋಚಿಸಿ..ಮಹಾರಾಣಿಯೆದುರು ಸತ್ಯವನ್ನು ನಿವೇದಿಸಿಕೊಂಡರು..

" ಮಹಾರಾಣಿಯವರೆ, ..ನೀವು ತಿಳಿದಂತೆ ನಾವು ವಿಜಯಪುರದವರಲ್ಲ..ಚಂದ್ರಗಿರಿಯ ರಾಣಿ ’ಹರಿಯಾಳ ದೇವಿಯ’ ಅವಳಿಮಕ್ಕಳು.  ಮಹಾರಾಜ ಬಲ್ಲಾಳರಾಯರು ನಮ್ಮ ಸೋದರಮಾವನವರು, ತಾವು ನಮಗೆ ಮಾತೃಶ್ರೀ ಸಮಾನರಾದ ಅತ್ತೆಯವರಾಗಬೇಕು....ದ್ವಾರಾವತಿಯ ಸೊಬಗನ್ನು ನೋಡಲು , ತಾಯಿಗೂ ತಿಳಿಸದೆ ಬಂದಿರುವೆವು. ತಾವು ನಮ್ಮನ್ನು ಈ ರೀತಿ ಸಮೀಪಿಸುತ್ತಿರುವುದು ಸರಿಯಲ್ಲ..! "

ತಿರುಮಲಾಂಬೆಗೆ ಆಕಾಶವೇ ಕಳಚಿಬಿದ್ದಂತಾಯಿತು. ಆಕೆಯಲ್ಲಿದ್ದ ಮೋಹಾಕಾಂಕ್ಷೆಗಳೆಲ್ಲವೂ ಇಳಿದುಹೋಯಿತು. ಹರಿಯಾಳ ದೇವಿಯ ಹೆಸರನ್ನು ಕೇಳಿದ ನಂತರವಂತೂ, ರಾಣಿಯ ಕೋಪ ಇಮ್ಮಡಿಯಾಯಿತು. ಯುವಕರನ್ನು ಸುಮ್ಮನೆ ಹೀಗೆಯೇ ಬಿಟ್ಟುಬಿಟ್ಟರೆ, ತನ್ನ  ಮಹಾರಾಣಿಯೆಂಬ ಗೌರವಕ್ಕೆ ಚ್ಯುತಿ ಬರುವುದೆಂದು ಎಣಿಸಿದಳು.  ಹರಿಯಾಳ ದೇವಿಯ ಮಕ್ಕಳ ಮುಂದೆ ತಾನು ನಗೆಪಾಟಲಿಗೀಡಾಗುವೆನೆಲ್ಲಾ ಎಂದು ಹಲುಬಿದಳು. ಹೆಚ್ಚು ಚಿಂತಿಸುತ್ತಾ ಕೂರುವ ಸಮಯವಿದಲ್ಲವೆಂದು ಅರಿತ ರಾಣಿಯು, ಸೇವಕರಿಗೆ ಅವರೀರ್ವರನ್ನೂ ಬಂಧಿಸಲು ಆಜ್ಞೆಯಿತ್ತಳು . ಸೇವಕರು ಯುವಕರಿಬ್ಬರನ್ನೂ ಹಗ್ಗಗಳಿಂದ ಕಟ್ಟಿ ಬಂಧನಕ್ಕೊಳಪಡಿಸಿದರು. ರಾಣಿಯು ಪುನಃ ಯುವಕರ ಸಮೀಪಕ್ಕೆ  ತೆರಳಿದಳು..

" ಹೇಗೂ ನನ್ನ ಮಾತುಗಳು ನಿಮಗೆ ಅರ್ಥವಾಗಿಬಿಟ್ಟಿದೆ. ಮುಂದೆ, ನೀವು ನನ್ನ ತೇಜೋವಧೆ ಮಾಡುವುದಿಲ್ಲವೆಂಬ ನಂಬಿಕೆ ನನಗಿಲ್ಲ.  ನನ್ನ ಆಸೆಯನ್ನು ಈಡೇರಿಸಿ..ಇಲ್ಲವಾದರೆ ನಿಮ್ಮನ್ನು ಜೀವಸಹಿತ ಉಳಿಸುವುದು ಅಸಾಧ್ಯವಾದ ವಿಚಾರ, ಇದು ನಿಮಗೆ ನನ್ನ ಅಂತಿಮ ಯಾಚನೆ..,  ಹೇಳಿ.. ಏನು ಮಾಡುವಿರಿ ?.."

 ಯುವಕರು ತಮ್ಮ ಪಟ್ಟು ಸಡಿಲಿಸಲಿಲ್ಲ. ಧೈರ್ಯದಿಂದಲೇ ರಾಣಿಯೊಡನೆ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

" ತಾಯಿ, ನಾವು ಪಾಪ ಮಾಡುವ ಚಾಂಡಾಲ ವೃತ್ತಿಯವರಲ್ಲ,  ಗುರು-ಹಿರಿಯರಿಂದ ಸುಸಂಸ್ಕೃತ ವಿದ್ಯೆಕಲಿತು ಬದುಕನ್ನು ಹಸನಾಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯುಳ್ಳವರು. ನಿಮ್ಮ ಯಾವ ಆಮಿಷಗಳಿಗೂ ನಾವು ಬಗ್ಗಲಾರೆವು. ಬಲ್ಲಾಳರಾಯನಿಗೆ ನಿಜಾಂಶವನ್ನು ಹೇಳಲು ನಮಗಾವ ಅಳುಕೂ ಇಲ್ಲ. ತಾವು ನಮ್ಮನ್ನು ಸಮೀಪಿಸಿದರೆ  ಶಿವನಾಣೆ ..!! " ...

ರಾಣಿ ತಿರುಮಲಾಂಬೆಗೆ ದಿಕ್ಕುತೋಚದಂತಾಯಿತು. ಯುವಕರನ್ನು ಸುಮ್ಮನೆ ಬಿಡುವುದಕ್ಕೂ ಸಾಧ್ಯವಿರಲಿಲ್ಲ. ಸೇವಕರಿಗೆ ಉದ್ಯಾನದಲ್ಲಿ ನಡೆದ ವಿಷಯವನ್ನು ಎಲ್ಲೂ ಬಾಯಿಬಿಡದಂತೆ ತಾಕೀತು ಮಾಡಿದಳು.  ಬಂಧಿಸಿದ್ದ ಯುವಕರನ್ನು ಕಾರಾಗೃಹದಲ್ಲಿಡಲು ಸೂಚಿಸಿ, ತನ್ನ ಅಂತಃಪುರದೆಡೆಗೆ ತೆರಳಿದಳು.  ಆಗಷ್ಟೆ... ಭಾಸ್ಕರ ಅಸ್ತಮಿಸಿದ.

--------------+----------------

ಅಂತಃಪುರದಲ್ಲಿ ಚಿಂತಾಕ್ರಾಂತಳಾಗಿ ಕುಳಿತಿದ್ದ ರಾಣಿಯನ್ನು ಕಂಡ ಬಲ್ಲಾಳರಾಯನಿಗೆ ಆಶ್ಚರ್ಯವಾಯಿತು. ಏಕಾಂತದಲ್ಲಿ ಎಂದೂ ರಾಣಿಯು ಹೀಗೆ ವಿಚಲಿತಲಾದವಳಂತೆ ಬಲ್ಲಾಳರಾಯನಿಗೆ ಕಂಡುಬಂದಿರಲಿಲ್ಲ. ಕಾರಣವನ್ನು ತಿಳಿಯುವ ಕೂತೂಹಲವಾಯಿತು ರಾಯನಿಗೆ..

"ತಿರುಮಲಾಂಬಾ, ಏನಾಗಿದೆ ನಿನ್ನ ಸಂತೋಷಕ್ಕೆ ? ಇಂದೇಕೋ ಬಹಳ ವ್ಯಾಕುಲಳಾದಂತೆ ಕಾಣುತ್ತಿರುವೆ.."


 ಇಂತಹ ಆಪ್ತ ಮಾತುಗಳ ನಿರೀಕ್ಷೇಯಲ್ಲೇ ಇದ್ದ ರಾಣಿಗೆ , ಇಂತಹ ಸುಸಂದರ್ಭವನ್ನು ಉಪಯೋಗಿಸಿಕೊಳ್ಳದೇ ಬಿಡಬಾರದೆಂದೆನಿಸಿತು...

" ರಾಯ, ಇಂದು ಉದ್ಯಾನದಲ್ಲಿ ಮನಸಿಗೆ ಬೇಸರವಾಗುವ ಘಟನೆಯೊಂದು ನಡೆಯಿತು. ನಾನೆಂದೂ ಅಂತಹ ಅಚಾತುರ್ಯವನ್ನು ಕಂಡಿರಲಿಲ್ಲ.."

" ಅಂತಹುದ್ದೇನಾಯಿತು ? ದ್ವಾರಾವತಿಯ ಮಹಾರಾಣಿಗೆ ಯಾರಾದರೂ ಅಪಮಾನ ಮಾಡಿದರೆ.. ? ನಿನ್ನ ಬಾಡಿರುವ ವದನವನ್ನು ನೋಡಿದರೆ ನನಗೇಕೋ ಅದೇ ಅನುಮಾನ ಕಾಡುತ್ತಿದೆ.."

" ಅಪಮಾನವಿರಲಿ, ನನ್ನ ಮಾನವೇ ಹರಣವಾಗುವುದರಲ್ಲಿತ್ತು,....ಅಷ್ಟರಲ್ಲಿ ಸೇವಕರು ನನ್ನನ್ನು ಕಾಪಾಡಿದರು..! "

" ಏನು ..!!?? ನಿನ್ನ ಮಾನಾಪಹರಣವೇ..?  ಅದು ಹೇಗೆ ಸಾಧ್ಯ ? ಈ ವಿರೂಪಾಕ್ಷಬಲ್ಲಾಳನ ರಾಜ್ಯದಲ್ಲಿ ಅಂತಹ ಹೀನರಾರಿಹರು ...ಅವರ ಶಿರವನ್ನು ತುಂಡರಿಸಿಬಿಡುತ್ತೇನೆ..ಹೇಳು..ಯಾರದು..? "   

" ಇಂದು ಸಾಯಂಕಾಲ, ಉದ್ಯಾನವನದಲ್ಲಿ ವಿಹಾರಕ್ಕೆ ತೆರಳಿದ್ದಾಗ, ಇಬ್ಬರು ಯುವಕರು ನನ್ನ ಮಾನಾಪಹರಣ ಮಾಡಲೆತ್ನಿಸಿದರು. ನಾನೆಷ್ಟೇ ಪರಿಯಾಗಿ ಬೇಡಿಕೊಂಡರೂ ಅವರು ಕನಿಕರಿಸಲಿಲ್ಲ..ಅಷ್ಟರಲ್ಲಿ , ಭಟರು ಬಂದು ನನ್ನ ಜೀವವನ್ನು ಉಳಿಸಿದರು. ಬಲ್ಲಾಳರಾಯನ ರಾಜ್ಯದಲ್ಲಿ ಪತಿವ್ರತೆಯರಿಗೆ ಬೆಲೆಯೇ ಇಲ್ಲವಾಯಿತೇ !! ? .....ಹೇಳಿ.. ಏನು ಮಾಡುವಿರಿ ಈಗ  ? "

 ರಾಣಿಯ ಮಾತಿನಲ್ಲಿನ ನಾಜೂಕುತನವನ್ನು ಬಲ್ಲಾಳರಾಯ ಗಮನಿಸಲಾರದೆ ಹೋದ. ತನ್ನ ಪತ್ನಿಗಾದ ಅಪಮಾನವೊಂದೇ  ಆತನ ಮನಸನ್ನು ತುಂಬಿಕೊಂಡಿತ್ತು.

" ಯಾವ ದೇಶದವರಂತೆ ಆ ಧೂರ್ತರು ..."    ಬಲ್ಲಾಳರಾಯ ಗುಡುಗಿದ.

 ರಾಣಿ ಹೆದರಿವಳಂತೆ , ನಿಧಾನವಾಗಿ ಹೇಳಿದಳು

" ಚಂದ್ರಗಿರಿಯ ಪ್ರಜೆಗಳಂತೆ, ನನ್ನ ಮಾನಾಪಹರಣಕ್ಕಾಗಿಯೇ, ಹರಿಯಾಳ ದೇವಿಯೇ ಇವರನ್ನು ಕಳುಹಿಸಿದ್ದಾಳಂತೆ..!! " 

ತಿರುಮಲಾಂಬೆಯ ಆಂತರ್ಯದಲ್ಲಿ ಸಂತಸ ಮನೆಮಾಡುತ್ತಿತ್ತು. ತನ್ನ ಕಾರ್ಯ ಯಶಸ್ವಿಯಾಗುವ ಸೂಚನೆಗಳು ಬಲ್ಲಾಳರಾಯನ ಮಾತುಗಳಲ್ಲೆ ಅವಳಿಗೆ ದೊರೆಯುತ್ತಿತ್ತು . ಚಂದ್ರಗಿರಿಯ ಹೆಸರನ್ನು ಕೇಳಿದ ಬಲ್ಲಾಳರಾಯ ಮತ್ತಷ್ಟು ಕ್ರೋಧಗೊಂಡ.

" ಆ ಚಂದ್ರಗಿರಿಯ ರಕ್ತವೇ ಅಂತಹುದು, ಅಲ್ಲಿಯವರ‍್ಯಾರಿಗೂ ನೈತಿಕತೆಯ ಅರ್ಥವೇ ತಿಳಿದಿಲ್ಲ.  ನನ್ನ ರಾಣಿಯ ಮಾನಾಪಹರಣ ಮಾಡುವುದೆಂದರೇನು ? ಹರಿಯಾಳ ದೇವಿಗೆ ಅಷ್ಟೊಂದು ಮದವೇರಿತೆ ? ..ಆಕೆಗೆ ಸರಿಯಾದ ಪಾಠ ಕಲಿಸುತ್ತೇನೆ..ಇಗೋ ರಾಣಿ..ಈಗಲೇ ಬರುತ್ತೇನೆ...ಅದೂ ನಿನಗೊಂದು ಸಂತಸದ ಸುದ್ದಿಯೊಡನೆ..." 

.....ಬಲ್ಲಾಳರಾಯ ಮಿಂಚಿನಂತೆ ಅಂತಃಪುರದಿಂದ ತೆರಳಿದ. ರಾಣಿ ತಿರುಮಲಾಂಬೆಯ ಮನಸ್ಸು ಮುಂದಾಗಲಿರುವುದನ್ನು ಕಂಡು ಹಿರಿಹಿಗ್ಗುತ್ತಲಿತ್ತು.  ಭಟರನ್ನು ಕರೆದ ಬಲ್ಲಾಳರಾಯ, ಚಂದ್ರಗಿರಿಯ ಇಬ್ಬರು ಯುವಕರನ್ನು ತಕ್ಷಣವೇ ನ್ಯಾಯಸ್ಥಾನಕ್ಕೆ ಕರೆತರಲು ಆದೇಶಿಸಿದ.  ಕಾರಾಗೃಹಕ್ಕೆ ತೆರಳಿದ ಸೇವಕರು, ಲಕ್ಷ್ಮಣ ಮತ್ತು ವೀರೇಶ್ವರರಿಬ್ಬರನ್ನೂ ಹಗ್ಗಗಳಿಂದ ಕಟ್ಟಿ ಎಳೆದು ತಂದು ಬಲ್ಲಾಳರಾಯನ ಮುಂದೆ ನಿಲ್ಲಿಸಿದರು. ಮಹಾರಾಜ ಯುವಕರನ್ನೊಮ್ಮೆ ನಖಶಿಖಾಂತ ದೃಷ್ಟಿಸಿದ.....

" ನಿಮ್ಮದು ಚಂದ್ರಗಿರಿಯೇ ? ಅಲ್ಲಿಯ ರಾಣಿಯ ಮನಸ್ಥಿತಿಗೆ ತಕ್ಕಂತಹ ಘನಕಾರ್ಯವನ್ನೇ ಮಾಡಿರುವಿರಿ ನೀವು ....ಎಂತಹ ಅಪರಾಧ, ನನ್ನ ರಾಜ್ಯದಲ್ಲಿ ಸ್ತ್ರೀಯರ ಮಾನಾಪಹರಣವೇ ? ಅದೂ ಚಂದ್ರಗಿರಿಯ ಪ್ರಜೆಗಳಿಂದ..ನಿಮ್ಮನ್ನು ಇಲ್ಲಿಗೆ ಕಳುಹಿಸಿರುವವರಾರೆಂದು ನಮಗೆ ತಿಳಿದಿದೆ..ನಿಮ್ಮನ್ನು ಯಾವ ವಿಚಾರಣೆಗೂ ಒಳಪಡಿಸುವ ಅವಶ್ಯಕತೆಯೇ ಇಲ್ಲವೆಂದು ತೋರುತ್ತಿದೆ...ನಿಮಗಾವ ಕಠಿಣ ಶಿಕ್ಷೆಯನ್ನು ವಿಧಿಸಲಿ..ನೀವೇ ಹೇಳಿಬಿಡಿ.."

ಬಲ್ಲಾಳರಾಯ , ಯುವಕರಿಕೆ ಮಾತನಾಡಲು ಅವಕಾಶವನ್ನೇ ಕೊಡದೆ..ಅಪ್ಪಣೆ ಹೊರಡಿಸಿದ. ದಿಗ್ಭ್ರಮೆಗೊಂಡ ಯುವಕರು, ರಾಜನೆದುರಿಗೆ ಏನು ಮಾತನಾಡಬೇಕೆಂದು ತೋರದೆ, ತಮಗಾದ ಅಪಮಾನಕ್ಕೆ ರೋಧಿಸಿದರು..

" ನ್ಯಾಯಾನ್ಯಾಯಗಳ ವಿವೇಚನೆ ನೆಡಸದ ನೀನೂ ಒಬ್ಬ ರಾಜನೇ ? ಬಲ್ಲಾಳರಾಯನೆಂದರೆ ..ನ್ಯಾಯಪರ, ಧರ್ಮಸಹಿಷ್ಣು, ಕಲಾರಾಧಕ, ಗಂಡೆದೆಯ ಕರಿಭಂಟ..ಎಂದೆಲ್ಲಾ ಕೇಳಿದ್ದೆವು..! , ನಿನ್ನದೂ ಒಂದು ರಾಜ್ಯವೇ ? ಕ್ಷಣ ಹೊತ್ತಾದರು ನಾವು ಹೇಳುವುದನ್ನು ಕೇಳು, ನಿನಗೆ ಸತ್ಯ ತಿಳಿದರೆ..ನೀನು ಸನ್ಯಾಸಿಯಾಗಿಬಿಡುವೆ..!!! "

ಯುವಕರ ಹರಿತವಾದ ಮಾತುಗಳು ಬಲ್ಲಾಳರಾಯನನ್ನು ಬಡಿದೆಬ್ಬಿಸಿತು. ಅವನ ಕೋಪ ನೂರ್ಮಡಿಯಾಯಿತು.

" ಸೇವಕರೆ, ಎಳೆದುಕೊಂಡು ಹೋಗಿ ಈ ಮೂಢರನ್ನು...ಇವರು ತಂಗಿದ್ದ ಕಲ್ಯಾಣಿಯ ಉದ್ಯಾನವನದಲ್ಲೇ ಇವರನ್ನು ಶೂಲಕ್ಕೇರಿಸಿಬಿಡಿ...ಬಲ್ಲಾಳರಾಯನ ಮಾತಿಗೆ ಎದುರಾಡುವಷ್ಟು ಅಹಂಕಾರವಿರುವ ಇವರಿಗೆ ಮರಣವೇ ತಕ್ಕ ಶಾಸ್ತಿ. ಇದು, ಇವರಂತಹ ಕಾಮುಕ ಹೀನರಿಗೆಲ್ಲಾ ಒಂದು ಎಚ್ಚರಿಕೆಯಾಗಲಿ..ಎಳೆದೊಯ್ಯಿರಿ ಇವರನ್ನು...ಈ ಕ್ಷಣವೇ.. ಶೂಲಕ್ಕೇರಿಸಿ ಬಂದು , ನನಗೆ ಆ ಸಂತಸದ ಸುದ್ದಿಯನ್ನು ಹೇಳಿ, ನಾನು ನನ್ನ ರಾಣಿಗೆ ಆ ವಿಷಯವನ್ನು ಅತಿ ಶೀಘ್ರದಲ್ಲಿ ತಿಳಿಸಬೇಕಿದೆ.." 

ಬಲ್ಲಾಳರಾಯ ಆವೇಶಭರಿತನಾಗಿ ಆಜ್ಞಾಪಿಸಿದ. ರಾಜನ ಕೋಪವನ್ನು ಕಂಡರಿದಿದ್ದ ಸೇವಕರು, ತಡಮಾಡದೆ ಯುವಕರೀರ್ವರನ್ನೂ ಉದ್ಯಾನವನಕ್ಕೆ ಎಳೆದೊಯ್ದರು. ಲಕ್ಷ್ಮಣ-ವೀರೇಶರು ಮಾಡಿದ ವಿನಂತಿಗಳೆಲ್ಲವೂ ವ್ಯರ್ಥವಾಯಿತು. ಅವರ ಮಾತುಗಳನ್ನು ಆಲೈಸುವ ಸಹನೆ ಅಲ್ಲ್ಯಾರಿಗೂ ಇರಲಿಲ್ಲ. ಕಲ್ಯಾಣಿಯ ಉದ್ಯಾನವನಕ್ಕೆ ಯುವಕರನ್ನು ಎಳೆದು ತಂದ ಭಟರು..ಶೂಲಕ್ಕೇರಿಸಲು ಸನ್ನದ್ಧರಾದರು. ಅದಾಗಲೇ ಮಧ್ಯರಾತ್ರಿಯ ಕತ್ತಲು ಆವರಿಸಿಕೊಂಡಿತ್ತು.  ಯುವಕರಿಬ್ಬರೂ. ತಾಯಿಗೆ ತಿಳಿಸದೆ ಬಂದ ತಮ್ಮ ತಪ್ಪಿಗೆ ಪಶ್ಚಾತ್ತಾಪಪಡುತ್ತಿದ್ದರು. ಅವರ ಯಾವ ಕೋರಿಕೆಗಳೂ ಕಟುಕರ ಮನಸನ್ನು ಬದಲಾಯಿಸಲಿಲ್ಲ...ಮಧ್ಯರಾತ್ರಿಯ ಕತ್ತಲಿನಲ್ಲಿ , ಯುವಕರ ದೇಹಗಳು ಶೂಲದಲ್ಲಿ ನೇತಾಡಿದವು !.  ಲಕ್ಷ್ಮಣ-ವೀರೇಶರ ಪ್ರಾಣಪಕ್ಷಿ ಹಾರಿಹೋಗಿತ್ತು.  ಉದ್ಯಾನವನ ಶೂಲವನವಾಯಿತು.

_______________________+_______________________

ಬೆಳಗಿನ ಸಮಯದಿಂದ ಕಾಣೆಯಾಗಿದ್ದ ತನ್ನ ಮಕ್ಕಳನ್ನು  ಹುಡುಕಿಸಲು ಹರಿಯಾಳ ದೇವಿಯು ಕಳುಹಿಸಿದ್ದ ಭಟರೆಲ್ಲಾ ಬರಿಗೈಯಲ್ಲಿ ಹಿಂತಿರುಗಿದ್ದರು.  ಆ ರಾತ್ರಿಯು ಅವಳಿಗೆ ನಿದ್ರೆ ಹತ್ತಿರಲಿಲ್ಲ. ನಸುಕಿನವರೆಗೂ, ಆಕೆ ತನ್ನ ಮಕ್ಕಳಳೀರ್ವರ ಯೋಚನೆಯಲ್ಲೇ ಕಾಲಕಳೆದಿದ್ದಳು. ಆಯಾಸದಿಂದ ನಸುಕಿನಲ್ಲಿ ನಿದ್ರೆಯ ಜೊಂಪು ಹತ್ತಿದ್ದ ಹರಿಯಾಳ ರಾಣಿಯು ದುಃಸ್ವಪ್ನವೊಂದನ್ನು ಕಂಡಂತೆ ಚಿಟ್ಟನೆ ಚೀರಿಕೊಂಡು ಎದ್ದಳು...
______________+_________________________________


(ಮುಂದುವರಿಯುತ್ತದೆ..)


(ಮುಂದಿನ ಭಾಗ ಕೊನೆಯ ಕಂತಾಗಿ ಬರಲಿದೆ..! ಅಲ್ಲಿಯವರೆಗೆ ಬೀಳ್ಕೊಡಿ..)


ವಂದನೆಗಳೊಂದಿಗೆ...




Apr 27, 2010

ಶಾಪ.. ೨ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)   

---------------------------------*------------------

................ಇಡೀ ವಿವಾಹ ಮಂಟಪವೇ ಬಿರಿದು ಹೋಗುವಂತೆ ಅಬ್ಬರಿಸಿದ ಬಲ್ಲಾಳರಾಯ. ಅವನ ಮಾತುಗಳಲ್ಲಿ ನೋವಿನ ಛಾಯೆಯಿತ್ತು.


" ತಿರುಮಲಾಂಬಾ, ನಡೆ ಹೊರಡೋಣ. ಇಂತಹ ಕಪಟಿಗಳೊಂದಿಗೆ ನಮ್ಮ ಸಂಬಂಧವೇನಾದರೂ ಏರ್ಪಟ್ಟರೆ, ಅದು ಈ ದ್ವಾರಾವತಿಗೆ ಬಹು ದೊಡ್ಡ ಕಳಂಕ !. ತುತ್ತನ್ನ ತಿಂದು ಬೆಳೆದ ಸಹೋದರಿಗೇ ಬೇಡವಾದ ಪ್ರೀತ್ಯಾದರಗಳು ನಮಗೇಕೆ ? . ಇನ್ನೊಂದು ಕ್ಷಣವೂ ನಾವಿಲ್ಲಿರಕೂಡದು...ವಿವಾಹವಾದರೂ ಜರುಗಲಿ..ಅಂತ್ಯೇಷ್ಟಿ ಕರ್ಮಾಂತರವಾದರೂ ನಡೆಯಲಿ .., ನಮಗಾವ ಗೊಡವೆಯೂ ಬೇಡ..ಎಲ್ಲವೂ ಪರಮೇಶ್ವರನ ಇಚ್ಚಯಂತೇ ನೆರವೇರಲಿ...ನಾನಿನ್ನೆಂದೂ ಇವರ ಮುಖ ನೋಡಲು ಬಯಸುವುದಿಲ್ಲ ...! "

ಖಚಿತ ನಿರ್ಧಾರದೊಂದಿಗೆ ಹೊರಡಲನುವಾದ ರಾಯ, ತಿರುಮಲಾಂಬೆಯ ಕೈ ಹಿಡಿದು ದರ-ದರನೆ ಎಳೆದುಕೊಂಡು ವಿವಾಹಮಂಟಪದಿಂದ ಹೊರನೆಡೆದ. ಮಹಾರಾಜನ ಅನಿರೀಕ್ಷಿತ ವರ್ತನೆ , ನೆರೆದಿದ್ದವರಲ್ಲಿ ದುಗುಡ ಹುಟ್ಟಿಸಿತು. ಮುಂದೆ ಒದಗಿ ಬರಬಹುದಾದ ಅಪಾಯದ ಸೂಚನೆಯೂ ಅಲ್ಲಿ ನೆರೆದಿದ್ದ ಕೆಲವರಿಗೆ ಅರಿವಾಗಿತ್ತು !.

ಇತ್ತ , ರಾಣಿ ’ಹರಿಯಾಳ’ ದೇವಿಯ ಅಣತಿಯಂತೆ ವಿವಾಹ ಕಾರ್ಯ ಮುಂದುವರಿಯಿತು. ಹೊಯ್ಸಳ ಸಾಮ್ರಾಜ್ಯದ ಅಧಿಪತಿಯ ಅನುಪಸ್ಥಿತಿಯಲ್ಲಿ  ಶಾಸ್ರ್ತೋಕ್ತ ವಿಧಿಗಳೆಲ್ಲಾ ಸಾಂಗವಾಗಿ ನೆರವೇರಿತು ! .  ಸರ್ವರೂ ದ್ವಾರಾವತಿಯನ್ನು ತೊರೆದು ಚಂದ್ರಗಿರಿಯತ್ತ ಪ್ರಯಾಣ ಬೆಳೆಸಿದರು.  ಪ್ರಯಾಣದುದ್ದಕ್ಕೂ ಹರಿಯಾಳ ದೇವಿಯ ಮನದಲ್ಲಿ ಸಹೋದರ ’ವಿರೂಪಾಕ್ಷ ಬಲ್ಲಾಳ’ರಾಯನ ಮಾತುಗಳೇ ಮಾರ್ದನಿಸುತ್ತಿತ್ತು. ಆಕೆ ಮತ್ತಷ್ಟು ಕಠಿಣ ಹೃದಯಿಯಾದಳು...!.

...................................*..........................

ವಿವಾಹದ ತರುವಾಯ, ಚಂದ್ರಗಿರಿಯಲ್ಲಿ ರಾಣಿ ಹರಿಯಾಳ ದೇವಿಯ ಸುಖ-ಸಂಭ್ರಮಕ್ಕೇನೂ ಕೊರತೆಯಿರಲಿಲ್ಲ.  ತಿಂಗಳುಗಳು ಕಳೆದಂತೆ ರಾಣಿಯು ಗರ್ಭವತಿಯಾದಳು. ಮೊಗ್ಗು ಮುಡಿಸುವ ಶಾಸ್ತ್ರವೂ ಸಾಂಗವಾಗಿ ನೆರವೇರಿತು. ಚಂದ್ರಗಿರಿಯ ಸಮಸ್ತ ಪ್ರಜೆಗಳು ವಿಜಯೋತ್ಸವವನ್ನೂ ಆಚರಿಸಿದರು. ವಿಪರ‍್ಯಾಸವೆಂದರೆ, ದ್ವಾರಾವತಿಯ ಯಾರೊಬ್ಬರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಚಂದ್ರಗಿರಿಯ ಸಂಭ್ರಮ , ಬಲ್ಲಾಳರಾಯನ ಕೋಪಾಗ್ನಿಗೆ ತುಪ್ಪ ಸುರಿದಂತಾಗಿತ್ತು.

ನವಮಾಸಗಳು ಪೂರೈಸಿ, ಹತ್ತನೆಯ ತಿಂಗಳಿನಲ್ಲಿ ರಾಣಿಯು ಅವಳಿ ಗಂಡುಮಕ್ಕಳಿಗೆ ಜನ್ಮವಿತ್ತಳು. ಚಂದ್ರಗಿರಿಯ  ಉತ್ತರಾಧಿಕಾರಿಗಳು ಜನಿಸಿದ ಸಂಭ್ರಮಕ್ಕೆ, ಅರಸನಾದಿಯಾಗಿ ಸಮಸ್ತರೂ ಗ್ರಾಮದೈವದ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದರು. ಜನನವಾದ ಹನ್ನೊಂದನೆಯ ದಿವಸ  ದಂಪತಿಗಳು, ಕ್ಷೇತ್ರ ದೈವವಾದ ’ಚಂದ್ರಶೇಖರ’ ನ ಸನ್ನಿಧಿಯಲ್ಲಿ ..ಶುಭ ಮುಹೂರ್ತದಲ್ಲಿ ಮಕ್ಕಳಿಗೆ ನಾಮಕರಣವನ್ನು ನೆರವೇರಿಸಿದರು.  "ಲಕ್ಷ್ಮಣ" ಮತ್ತು "ವೀರೇಶ್ವರ" ನೆಂದು ನಾಮಾಂಕಿತರಾದ ಮಕ್ಕಳು , ಚಂದ್ರಗಿರಿಯ ಅನರ್ಘ್ಯ ರತ್ನಗಳಂತೆ ಹರಿಯಾಳ ದೇವಿಯ ಆರೈಕೆಯಲ್ಲಿ ಬೆಳೆಯತೊಡಗಿದರು .

ಮಕ್ಕಳಿಗೆ ಎರಡು ವರ್ಷವಾಗುವಾಗ , ಪತಿಯ ಆರೋಗ್ಯ ಕ್ಷೀಣಿಸುತ್ತಿರುವುದು ರಾಣಿಯ ಗಮನಕ್ಕೆ ಬಂದಿತು. ಸತತ ಎರಡು ವರ್ಷಗಳ ಕಾಲ ವೈದ್ಯೋಪಚಾರ ನಡೆಸಿದರೂ, ದಿನೇ-ದಿನೇ ರಾಜನ ಆರೋಗ್ಯ ಹದಗೆಟ್ಟಿತೇ ವಿನಃ ಚೇತರಿಕೆಯೇನೂ ಕಂಡುಬರಲಿಲ್ಲ.  ಜಾತಕದ ದೊಷವೋ-ದುರ್ದೈವವೋ...ಹರಿಯಾಳ ರಾಣಿಯ ಪತಿ, ಚಂದ್ರಗಿರಿಯ ಅರಸು..ಅದೊಂದು ದಿವಸ ಸೂರ್ಯೋದಯದ ಕಾಲದಲ್ಲಿ ವಿಧಿವಶನಾದನು. ನಾಲ್ಕು ವರ್ಷದ ಮಕ್ಕಳನ್ನೂ -ರಾಣಿಯನ್ನೂ ಬಿಟ್ಟು ಇಹಲೋಕವನ್ನು ತ್ಯಜಿಸಿದನು. ಕಷ್ಟಕಾಲವು ಇನ್ನಿಲ್ಲದಂತೆ ರಾಣಿಯನ್ನು ಆವರಿಸಿತು. ಪತಿಯ ಮರಣದ ದುಃಖದಲ್ಲಿ ಮುಳುಗಿದ ರಾಣಿಗೆ ರಾಜ್ಯ-ಕೋಶಗಳಾವುದೂ ಬೇಡವೆನಿಸಿತು. ....ಆದರೂ , ತನ್ನೆರೆಡು ಮಕ್ಕಳನ್ನು ಚಂದ್ರಗಿರಿಯ ಅಧಿಪತಿಗಳನ್ನಾಗಿ ಮೆರೆಸುವವರೆಗೂ ತಾನು ವಿರಮಿಸಬಾರದೆಂಬ ಧೃಡನಿಶ್ಚಯ ಮಾಡಿದಳು.  ಸಹೋದರ ಬಲ್ಲಾಳರಾಯನ ನೆರಳೂ ಸಹ ಚಂದ್ರಗಿರಿಯ ಮೇಲೆ ಬೀಳದಾದಾಗ , ರಾಣಿಯೇ ಸರ್ವ ಅಧಿಕಾರಗಳನ್ನೂ ವಹಿಸಿಕೊಂಡು ದಕ್ಷ ಮಂತ್ರಿ ಹಾಗೂ ಸೇನಾಧಿಕಾರಿಗಳ ನೆರವಿನೊಂದಿಗೆ ರಾಜ್ಯಭಾರ ನೆಡೆಸಲನುವಾದಳು.  ತನ್ನಿಬ್ಬರು ಮಕ್ಕಳು ಪ್ರವರ್ಧಮಾನಕ್ಕೆ ಬರಲು, ಅವರಿಗೆ ಸೂಕ್ತ ವಿಧ್ಯಾಭ್ಯಾಸ, ಶಸ್ತ್ರಾಭ್ಯಾಸ, ವೇದಾಭ್ಯಾಸ ಹಾಗು ರಾಜನೀತಿಗಳ ಸಮಗ್ರ ಅಧ್ಯಯನವನ್ನು ರಾಜ ಗುರುಗಳಿಂದ ಕಲಿಸಿದಳು.

ಅದೊಂದು ದಿವಸ, ವಿದ್ಯೆ ಕಲಿಸಕೊಟ್ಟ ರಾಜ ಗುರುಗಳು ದ್ವಾರಾವತಿಯ ವೈಭವವನ್ನು ಹರಿಯಾಳ ರಾಣಿಯ ಮಕ್ಕಳೆದುರಿಗೆ ವರ್ಣಿಸಿದರು..

" ಮಕ್ಕಳೇ, ನಿಮ್ಮ ಸೋದರಮಾವ ಮಹಾರಾಜ ವಿರೂಪಾಕ್ಷ ಬಲ್ಲಾಳ’ನು ದ್ವಾರಾವತಿಯಲ್ಲಿ ಅತ್ಯಂತ ವೈಭವದಿಂದ ರಾಜ್ಯಭಾರವನ್ನು ಮಾಡುತ್ತಲಿದ್ದಾನೆ. ತನ್ನ ರಾಜಧಾನಿಯ ಸುತ್ತ ಕೋಟೆಯನ್ನು ನಿರ್ಮಿಸಿ ಮನೋಹರವಾದ ಅರಮನೆಯನ್ನು ಕಟ್ಟಿಸಿದ್ದಾನೆ.  ಜಗತ್ಪ್ರಸಿದ್ದವಾಗಬಲ್ಲಂತಹ ಅಪೂರ್ವ ಶಿಲ್ಪಕಲಾ ವೈಭವವನ್ನು ಹೊಂದಿರುವ ಆಲಯಗಳನ್ನು ನಿರ್ಮಿಸಿದ್ದಾರೆ. ನವರತ್ನಗಳ ರಾಶಿಯನ್ನೇ ಆಲಯಗಳಿಗೆ ದಾನ ಕೊಟ್ಟಿದ್ದಾರೆ.  ರಾಜ ಪರಿವಾರದ ’ನಖರೇಶ್ವರ’ ನ ಆಲಯದ ಸೊಬಗನ್ನು ಕಣ್ಣಾರೆ ನೋಡಿಯೇ ಸವಿಯಬೇಕು. ಸನಿಹದಲ್ಲೇ ಅರಮನೆಯೂ ಇದೆ.  ಮಹಾಮಂತ್ರಿ ಕಟ್ಟಿಸಿಕೊಟ್ಟಿರುವ ಅತ್ಯಪೂರ್ವ ’ಹೊಯ್ಸಳೇಶ್ವರ’ನ ಆಲಯದ ವೈಭವವನ್ನು ನೀವೊಮ್ಮೆ ಅಲ್ಲಿಗೆ ಹೋಗಿ ಸವಿದುಬರಬೇಕು, ದ್ವಾರಾವತಿಯು ನಿಜವಾಗಿ ಇನ್ನೊಂದು ಅಮರಾವತಿಯೇ ಸರಿ..."  

ಪ್ರಬುದ್ಧ ಯುವಕರಿಗೆ , ಇಂತಹ ಸಿರಿಯನ್ನು ಕಣ್ಣಾರೆ ನೋಡಲೇಬೇಕೆಂಬ ಆಕಾಂಕ್ಷೆ ಒಡಮೂಡಿತು. ತಮ್ಮ ಸೋದರಮಾವನ ಅರಮನೆಯ ವೈಭವವನ್ನು ಕಣ್ಣಾರೆ ನೋಡುವುದು ಸೌಭಾಗ್ಯವೇ ಸರಿಯೆಂಬ ನಿರ್ಧಾರ ಯುವಕರಲ್ಲಿ ಮೂಡಿತು. ರಾಜಗುರುಗಳ ಪಾದಾರವಿಂದಗಳಿಗೆರಗೆ, ದ್ವಾರಾವತಿಯ ಯಾತ್ರೆಗೆ ಅನುಮತಿ ಪಡೆಯಲು ತಾಯಿಯ ಬಳಿಗೆ ತೆರಳಿದರು.

ರಾಣಿ ಹರಿಯಾಳ ದೇವಿಯು ವಿಶ್ರಾಂತಿಯಲ್ಲಿದ್ದಳು. ಯುವಕರು ಮುಚ್ಚುಮರೆಯಿಲ್ಲದೆ , ತಮ್ಮ ಆಕಾಂಕ್ಷೆಯನ್ನು  ತಿಳಿಸಲನುವಾದರು.

" ಅಮ್ಮಾ, ಗುರುಗಳಿಂದ ನಮಗಿಂದು ದ್ವಾರಾವತಿಯ ವೈಭವವು ತಿಳಿಯಲ್ಪಟ್ಟಿತು. ಬಲ್ಲಾಳರಾಯರು ನಮ್ಮ ಮಾವನೇ ಅಲ್ಲವೇ ? ನಾವೇಕೆ ಅವರಿಂದ ದೂರವಿರಬೇಕು ? ನೀನೆಂದೂ ದ್ವಾರವತಿಯ ಸಂಬಂಧದ ವಿಷಯವನ್ನು ನಮಗೆ ತಿಳಿಸಿ ಹೇಳಲೇ ಇಲ್ಲ..ಏಕೆಂದು ತಿಳಿಸುವೆಯಾ ? " 
 ..ಪ್ರಥಮ ಬಾರಿಗೆ ತನ್ನ ಮಕ್ಕಳ ಬಾಯಿಂದ ದ್ವಾರಾವತಿಯ ವಿಚಾರವು ಬಂದುದು, ರಾಣಿಗೆ ಆಶ್ಚರ್ಯವನ್ನುಂಟುಮಾಡಿತು. ತನ್ನ ಕಠಿಣ ನಿರ್ಧಾರಕ್ಕೆ ಅವಳು ಬದ್ದಳಾಗಿದ್ದಳು..

" ಮಕ್ಕಳೇ, ದ್ವಾರಾವತಿಯ ಅರಸು ನಮಗೆ ಸಂಬಂಧಿಕನೇ ಇರಬಹುದು, ರಾಜತಾಂತ್ರಿಕವಾಗಿ ನಾವವರ ಅಧೀನದಲ್ಲೇ ಇದ್ದೇವೆ. ಕಾಲಕಾಲಕ್ಕೆ ಕಪ್ಪವನ್ನೂ ಸಲ್ಲಿಸುತ್ತಿದ್ದೇವೆ, ಅಂದ ಮಾತ್ರಕ್ಕೆ ನಾವು ಅವರ ಅಡಿಯಾಳುಗಳಲ್ಲ ..! . ಹಿಂದೆಂದೋ ಕಡಿದು ಹೋದ ಸಂಬಂಧವನ್ನು ಹೇಳಿಕೊಂಡು ಮತ್ತೆ ಅವರ ಮನೆ ಬಾಗಿಲಿಗೆ ಹೋಗುವುದು ಉಚಿತವಲ್ಲ...ಅಂತಹ ಆಸೆಯನ್ನು ಬಿಟ್ಟುಬಿಡಿ.."

...ಯುವಕರಿಗೆ ತಾಯಿಯ ಮಾತುಗಳು ರುಚಿಸಲಿಲ್ಲ.  ಮಾತೆಯನ್ನು ಓಲೈಸಲು ಅನುವಾದರು.

" ಮಾತೆ, ಬಾಹ್ಯಸಂಬಂಧ ಕಡಿದುಹೋದ ಮಾತ್ರಕ್ಕೆ ರಕ್ತಸಂಬಂಧ ಕಡಿದುಹೋಗುವುದೇ ? ಬಲ್ಲಾಳರಾಯರ ಆಶಿರ್ವಾದ ನಮಗೆ ದೊರತಲ್ಲಿ ನಮ್ಮ ಸೇನಾಬಲವು ಮತ್ತಷ್ಟು ಹೆಚ್ಚುತ್ತದೆ. ನಮ್ಮ ರಾಜತಾಂತ್ರಿಕ ಶಕ್ತಿಯೂ ಬಲಗೊಳ್ಳುತ್ತದೆ. ದ್ವಾರಾವತಿಯನ್ನೊಮ್ಮೆ ದರ್ಶಿಸಿ, ಅವರೊಂದಿಗೆ ಸಂತೋಷದಿಂದಿರುವ ಬಯಕೆ ನಮ್ಮದು, ನಿಮ್ಮ ಅನುಮತಿಗಾಗಿ ಇಲ್ಲಿಗೆ ಬಂದಿದ್ದೇವೆ, ಹರಸಿ ತಾಯಿ.."  

ಮಕ್ಕಳ ಮಾತುಗಳು ರಣಹೇಡಿಗಳ ಮಾತಿನಂತೆ ಕೇಳಿಸಿದವು ಹರಿಯಾಳ ದೇವಿಗೆ. ಆಕೆ ಮತ್ತಷ್ಟು ಕ್ರೋಧಗೊಂಡಳು..

" ಪುತ್ರರೇ, ನೀವು ದ್ವಾರಾವತಿಯನ್ನು ಸಂದರ್ಶಿಸುವ ಆಸೆಯನ್ನು ಬಿಟ್ಟುಬಿಡಿ, ನಿಮ್ಮ ಮಾತುಗಳು ಕ್ಷಾತ್ರ ಧರ್ಮಕ್ಕೆ ಉಚಿತವಾದುದಲ್ಲ. ದೈನ್ಯತೆಯಿಂದ ಪಾದಕ್ಕೆರಗಿ ಶರಣಾಗುವುದು ಕ್ಷತ್ರಿಯರ ಲಕ್ಷಣವಲ್ಲ. ಇಷ್ಟು ವರ್ಷಗಳ ಕಾಲ ನಿಮಗೆ ಕ್ಷಾತ್ರ ಧರ್ಮವನ್ನು ಭೋದಿಸಿದ್ದು ವ್ಯರ್ಥವಾಯಿತೆನ್ನಿಸುತ್ತಿದೆ. ದ್ವಾರಾವತಿಗೂ ನಮಗೂ ಯಾವುದೇ ರೀತಿಯ ಬಾಂಧವ್ಯವಿಲ್ಲ....ನೀವೆಂದಿಗೂ ಅಲ್ಲಿಗೆ ಹೋಗಕೂಡದು...ಇದು ರಾಣಿ ಹರಿಯಾಳ ದೇವಿಯ ಕಟ್ಟಾಜ್ಞೆ..!!. "

ಸ್ಪಷ್ಟಮಾತುಗಳಲ್ಲಿ ಹರಿಯಾಳ ದೇವಿಯು ಮಕ್ಕಳ ದ್ವಾರಾವತೀ ಯಾತ್ರೆಯ ಅಕಾಂಕ್ಷೆಯನ್ನು ಖಂಡಿಸಿದಳು.  ಯುವಕರಿಗೆ ತಾಯಿಯ ಮಾತುಗಳು ನುಂಗಲಾರದ ತುತ್ತಾಯಿತು. ಮನಸಿನ ಮೂಲೆಯಲ್ಲಿ ದ್ವಾರಾವತಿಯನ್ನು ದರ್ಶಿಸುವ ಆಸೆ ಹಾಗೇ ಉಳಿದಿತ್ತು. ತಮ್ಮ ಆಸೆಯನ್ನು ನೆರೆವೇರಿಸಿಕೊಳ್ಳುವ ರೀತಿಯನ್ನು ಚಿಂತಿಸತೊಡಗಿದರು. ........ಕೊನೆಗೆ, ಇಬ್ಬರು ಯುವಕರು ನಿರ್ಧಾರವೊಂದನ್ನು ಗುಟ್ಟಾಗಿ ಹಂಚಿಕೊಂಡರು..!.

ಅದೊಂದು ದಿನ, ಲಕ್ಷ್ಮಣ-ವೀರೇಶ್ವರರಿಬ್ಬರೂ ಅಮಾವಾಸ್ಯೆಯ ಕಗ್ಗತ್ತಿಲಿನಲ್ಲಿ ಚಂದ್ರಗಿರಿಯ ಅರಮನೆಯ ಸುರಂಗ ಮಾರ್ಗದ ದ್ವಾರದಿಂದ ನುಸುಳಿ, ತಮಗಾಗಿ ಮೊದಲೇ ಕಾದಿರಿಸಿದ್ದ ಅಶ್ವಗಳನ್ನೇರಿ ದ್ವಾರಾವತಿಯೆಡೆಗೆ ಹೊರಟೇಬಿಟ್ಟರು....ರಾಣಿ ಹರಿಯಾಳ ದೇವಿಯು ಮಧ್ಯರಾತ್ರಿಯ ಗಾಢ ನಿದ್ರೆಯಲ್ಲಿದ್ದಳು....!.

  (ಮುಂದುವರಿಯುತ್ತದೆ..)

  ವಂದನೆಗಳೊಂದಿಗೆ....

Apr 19, 2010

ಶಾಪ.. ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
...............................................................*.................................................


.....ಸುಮುಹೂರ್ತ ಸಾವಧಾನ |
     ಸುಲಗ್ನ ಸಾವಧಾನ ||......

ವೇದಘೋಷಗಳ ನಡುವೆ ಮಂಗಳಕರವಾದ  ’ನಿರೀಕ್ಷಣ’ ಮುಹೂರ್ತವು ಯಾವುದೇ ಆತಂಕಗಳಿಲ್ಲದೆ ನೆರವೇರಿತ್ತು. ಚಂದ್ರಗಿರಿಯ ಸಮಸ್ತ ಪ್ರಜೆಗಳೂ ಅಲ್ಲಿ ನೆರೆದಿದ್ದರು. ತಮ್ಮ ಪ್ರಭುವಿನ ವಿವಾಹ ಮುಹೂರ್ತದ ಸುಸಂದರ್ಭವನ್ನು ಕಣ್ಣಾರೆ ಕಂಡು ಆನಂದಿಸಲು ಪುಟ್ಟ ಮಕ್ಕಳಾದಿಯಾಗಿ , ಸೈನಿಕರು, ದಳಪತಿಗಳು, ಮಂತ್ರಿ-ಮಹೋದಯರು, ರಾಜ ಪರಿವಾರದ ದೇವಾಲಯವಾದ ’ನಖರೇಶ್ವರನ’ ಸನ್ನಿಧಿಯಲ್ಲಿನ ಸಾಲಂಕೃತ ವಿವಾಹ ಮಂಟಪದಲ್ಲಿ ತುಂಬಿಕೊಂಡಿದ್ದರು. ಚಂದ್ರಗಿರಿಯ ಸಕಲ ಮಹೋದಯರ ಸಂತಸಕ್ಕೆ , ಮಹತ್ತರವಾದ ಕಾರಣವೊಂದಿತ್ತು...!. ’ಹೊಯ್ಸಳ’ ಸಾಮ್ರಾಜ್ಯದ ಗಂಡೆದೆಯ ವೀರನೆಂದೇ ಪ್ರಖ್ಯಾತನಾಗಿದ್ದ , ಮಹರಾಜ ’ವಿರೂಪಾಕ್ಷ ಬಲ್ಲಾಳ’ ನ ಸಹೋದರಿಯನ್ನು , ಚಂದ್ರಗಿರಿಯ ರಾಜನಿಗೆ ವಿವಾಹ ಸಂಪನ್ನಗೊಳಿಸುವ ವೈಭವದ ಮುಹೂರ್ತವಾಗಿತ್ತದು.  ಬಲ್ಲಾಳರಾಯನ ಇಚ್ಚೆಯಂತೆ, ಅವನ ಸಹೋದರಿ ರಾಣಿ ’ಹರಿಯಾಳ ದೇವಿ’ಯ ವಿವಾಹವು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾದ ’ದ್ವಾರಾವತಿ’ಯಲ್ಲಿ ಸಾಂಗವಾಗಿ ಸಾಗುತ್ತಲಿತ್ತು. ಕನ್ಯಾವರಣ, ಕನ್ಯಾದಾನ, ಅಕ್ಷತಾರೋಪಣ ವಿಧಿಗಳು ಅತ್ಯಂತ ವಿಜೃಂಭಣೆಯಿಂದ , ಕಂಡು-ಕೇಳರಿಯದ ರೀತಿಯಲ್ಲಿ ನೆರವೇರಿತು. ವೈದಿಕರ ವೇದಘೋಷಗಳು, ಸಂಗೀತಗಾರರ ಹಾಡುಗಳೂ, ವಾದ್ಯಗಳೂ, ನೃತ್ಯಗಾರ್ತಿಯರ ಮನಮೋಹಕ ನೃತ್ಯಗಳೂ, ವಿವಿಧ ಕಲಾವಿದರುಗಳ ಕಲಾ ಪ್ರದರ್ಶನವು ನೆರೆದಿದ್ದವರ ಮನಸೂರೆಗೊಂಡಿತು. ಹೊಯ್ಸಳ ಸಾಮ್ರಾಜ್ಯದಲ್ಲಿ  ಕಲೆಗೆ-ಕಲಾವಿದರಿಗೆ ದೊರೆಯುತ್ತಿದ್ದ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿತ್ತು ಈ ಎಲ್ಲಾ ಸಂಭ್ರಮಗಳು.
............ಮಹಾರಾಜ ವಿರೂಪಾಕ್ಷ ಬಲ್ಲಾಳ ಪತ್ನಿ ತಿರುಮಾಲಾಂಬೆಯೊಡನೆ ಸುಖಾಸೀನನಾಗಿ ತನ್ನ ಸಹೋದರಿಯ ವಿವಾಹದ ಅಪೂರ್ವ ಕ್ಷಣಗಳ ಆನಂದವನ್ನು ಸವಿಯುತ್ತಲಿದ್ದ.
ತನ್ನೆದುರಿಗೆ ಅನಿರೀಕ್ಷಿತವಾಗಿ ಆಗಮಿಸಿದ ಮಹಾಮಂತ್ರಿಗಳನ್ನು ನೋಡಿ , ಅವರನ್ನು ಕರೆದು ಪಕ್ಕದಲ್ಲೇ ಕುಳ್ಳಿರಿಸಿಕೊಂಡ. ಮಂತ್ರಿಗಳು ರಾಜನ ಕಿವಿಯಲ್ಲಿ ಅದೇನೋ ವಿಷಯವನ್ನು ಹೇಳಿದರು...ವಿಷಯವನ್ನು ಕೇಳಿದ ರಾಜ , ಅರೆಕ್ಷಣ ದಿಗ್ಭ್ರಾಂತನಾದ..!. ತಿರುಮಲಾಂಬೆಗೂ ಮಂತ್ರಿಗಳು ಹೇಳಿದ ವಿಷಯವನ್ನು ತಿಳಿಸಿದ. ಈರ್ವರ ಮುಖಗಳೂ ಬಾಡಿ ಹೋದವು. ಎಚ್ಚೆತ್ತುಕೊಂಡ ಬಲ್ಲಾಳರಾಯ , ಸಮಯವನ್ನು ಅಪವ್ಯಯ ಮಾಡುವುದು ಸರಿಯಲ್ಲವೆಂದು ಚಿಂತಿಸಿ, ನೇರವಾಗಿ ಚಂದ್ರಗಿರಿಯ ರಾಜನ ಮಾತಾ-ಪಿತೃಗಳನ್ನೇ ವಿಚಾರಣೆಗೆ ಆಹ್ವಾನಿಸಿದ. ಬಲ್ಲಾಳರಾಯನ ಮಾತುಗಳಲ್ಲಿ ಕ್ರೋಧವಿತ್ತು ...


" ಅಷ್ಟೈಶ್ವರ್ಯ ಸಂಪತ್ತುಗಳುಳ್ಳ ಹೊಯ್ಸಳ ಸಾಮ್ರಾಜ್ಯದ ಅರಸನಿಗೆ ಮೋಸವೇ ?? ನಿಮ್ಮ ಪುತ್ರನಿಗೆ ಒದಗಿಬಂದಿರುವ ಕ್ಷಯರೋಗದ ವಿಷಯವನ್ನೇಕೆ ನಮಗೆ ತಿಳಿಸಲಿಲ್ಲ ನೀವು ? ಸಾಮಂತರಾಗಿರುವ ನಿಮಗೇ ಇಷ್ಟು ದಾಷ್ಟ್ಯವಿರಬೇಕಾದರೆ..ಅಖಂಡ ಹೊಯ್ಸಳ ಸಾಮ್ರಾಜ್ಯದ ಅಧಿಪತಿ ನಾನು..ನನ್ನಿಂದ ನೀವು ಸತ್ಯವನ್ನು ಮುಚ್ಚಿಟ್ಟುಬಿಟ್ಟಿರಲ್ಲ. ಆಗಲಿ, ...ಇನ್ನೂ ವೇಳೆಯಾಗಿಲ್ಲ..ಮಾಂಗಲ್ಯಧಾರಣ ಮುಹೂರ್ತವೂ ನೆಡೆದಿಲ್ಲ...ಈ ವಿವಾಹವನ್ನು ಇಲ್ಲಿಗೇ ನಿಲ್ಲಿಸಿಬಿಡಿ. ನನ್ನ ಸಹೋದರಿಯ ಜೀವನವನ್ನು ನಾನೇ ಹಾಳುಗೆಡವಲೇ ?  ಒಬ್ಬ ರೋಗಿಗೆ ನನ್ನ ತಂಗಿಯನ್ನು ವಿವಾಹ ಮಾಡಿಕೊಡಲು ನಾನೇನು ರಣಹೇಡಿಯಲ್ಲ..!. ಸಾಕು ಮಾಡಿ ಈ ನಾಟಕ......" 

ಬಲ್ಲಾಳರಾಯನ ಮಾತುಗಳು ಗುಡುಗಿನಂತೆ ವಿವಾಹ ಮಂಟಪದಲ್ಲೆಲ್ಲಾ ಮಾರ್ದನಿಸಿತು. ಚಂದ್ರಗಿರಿಯ ಪ್ರಜೆಗಳು ಶಿಲೆಗಳಂತೆ ಸ್ತಬ್ಧರಾದರು. ಚಂದ್ರಗಿರಿಯ ರಾಜನ ಮಾತಾ-ಪಿತೃಗಳು  ದುಃಖದಿಂದ ಬಲ್ಲಾಳರಾಯನ ಪಾದಕ್ಕೆರಗಿದರು...


"ಮಹಾರಾಜ...ನಮ್ಮಿಂದ ಮಹಾಪರಾಧವಾಗಿದೆ. ನಮ್ಮನ್ನು ಕ್ಷಮಿಸಿ. ನಮ್ಮ ಪುತ್ರನ ರೋಗಕ್ಕೆ ಔಷಧೋಪಚಾರಗಳನ್ನು ನೆಡೆಸುತ್ತಿದ್ದೇವೆ. ಈಗ ಸಾಕಷ್ಟು ಗುಣಮುಖನಾಗಿದ್ದಾನೆ. ಮುಂದಿನ ದಿವಸಗಳಲ್ಲಿ , ಸೌಭಾಗ್ಯವತಿ ರಾಣಿ ’ಹರಿಯಾಳ ದೇವಿ’ಯ ಪಾತಿವ್ರತ್ಯದಿಂದ ನಮ್ಮ ಪುತ್ರನ ರೋಗವು ಸಂಪೂರ್ಣ ಗುಣಮುಖವಾಗುವುದರಲ್ಲಿ , ನಿಮಗೆ ಸಂಶಯವೇ ಬೇಡ. ದಯವಿಟ್ಟು ಅನುಗ್ರಹಿಸಿ...."

ಮಾತಾ-ಪಿತೃಗಳ ಅಶ್ರುಧಾರೆ, ಕಳಕಳಿ, ಆಕ್ರಂದನ ..ಇದ್ಯಾವುದೂ ಬಲ್ಲಾಳರಾಯನ ಮನಸನ್ನು ಗೆಲ್ಲಲಿಲ್ಲ. ಮಹಾರಾಜನ ದೃಷ್ಟಿ..  ಕ್ಷೇತ್ರ ಪುರೋಹಿತರ, ಋತ್ವಿಜರ ಕಡೆಗೆ ತಿರುಗಿತು.


 " ನಾರಯಣ ದೀಕ್ಷಿತರೆ, ತಮಗೆ ಸತ್ಯ ತಿಳಿದಿರಲಿಲ್ಲವೇ? ರಾಜ ಪರಿವಾರದ ದೈವವಾದ ’ ನಖರೇಶ್ವರ’ನನ್ನು ನಿತ್ಯ ಪೂಜಿಸುವವರು ನೀವು,  ವರನ ಜಾತಕಾದಿಗಳನ್ನು ವಿಮರ್ಶಿಸಿದವರು ನೀವು...ನಿಮ್ಮಿಂದ ಅಸತ್ಯ ಹೊರಟಿತೆ..? ನನ್ನಿಂದ ನಂಬಲಾಗುತ್ತಿಲ್ಲ, ಹೇಳಿ...ಸತ್ಯವೇನೆಂದು ಹೇಳಿ..."

ಬಲ್ಲಾಳರಾಯನ ಗುಡುಗಿಗೆ ದೀಕ್ಷಿತರು ಸ್ತಂಭೀಭೂತರಾದರು. ಅವರಿಂದ ಮಾತು ಹೊರಡದಾಯಿತು. ತುಸು ಹೊತ್ತು ಸಾವರಿಸಿಕೊಂಡು, ರಾಯನಿಗೆ ಮನವರಿಕೆ ಮಾಡಿಕೊಡಲನುವಾದರು..

" ಪ್ರಭು, ವರನ ಬಂಧುಗಳು ತಂದು ತೋರಿಸಿದ ಜಾತಕದಲ್ಲಿ ನನಗಾವ ದೊಷಗಳೂ ಕಂಡು ಬಂದಿರಲಿಲ್ಲ..ಆ ಜಾತಕ ಉತ್ತಮವಾದುದೇ ಆಗಿತ್ತು. ರೋಗದ ವಿಚಾರವಾಗಲೀ, ಅಪಮೃತ್ಯುವಿನ ವಿಷಯವಾಗಲಿ ಜಾತಕದಲ್ಲಿ ಇಲ್ಲವೇ ಇಲ್ಲ..!. ಜಾತಕವನ್ನೇ ತಿದ್ದಿರಬಹುದೇ ? ಇದರಲ್ಲಿ ಏನೋ ಮೋಸವಿದೆ ಎನಿಸುತ್ತಿದೆ ರಾಜ .."

ದೀಕ್ಷಿತರ ಮಾತಿನಿಂದ ರಾಯನ ಕೋಪ ತಾರಕಕ್ಕೇರಿತು.   ವಿವಾಹ ಕಾರ್ಯ ನೆರವೇರಿಸಲು ಕುಳಿತಿದ್ದ  ’ಶೇಷಭಟ್ಟ’ರೆಡೆಗೆ ಬಲ್ಲಾಳರಾಯ ಹರಿಹಾಯ್ದ..


" ಋತ್ವಿಜರೇ...ಹೊಯ್ಸಳರ ಪರಮ ದೈವ ’ಹೊಯ್ಸಳೇಶ್ವರನ’ ಉಪಾಸಕರು ನೀವು...ನಿಮ್ಮಿಂದಲಾದರೂ ಸತ್ಯ ಹೊರಬರಲಿ..ಅಥವ ತಾವೂ ಲೋಭಿಗಳಾಗಿಬಿಟ್ಟಿರೋ ಹೇಗೆ ?!. ಸತ್ಯವನ್ನು ಮರೆಮಾಚುವುದು ನಿಮ್ಮಂತಹವರಿಗೆ ತಕ್ಕುದಲ್ಲ..."

ಶೇಷಭಟ್ಟರಿಗೆ ಬಲ್ಲಾಳರಾಯನ ಮಾತುಗಳು ಅನುಚಿತವೆನಿಸಿದರೂ , ರಾಯನಿಗೆ ತಕ್ಕ ಸಮಾಧಾನವನ್ನು ಹೇಳಲನುವಾದರು..


" ಮಹಾರಾಜ, ನನ್ನ ತಿಳುವಳಿಕೆಯಂತೆ..ವರನ ಜಾತಕದಲ್ಲೇ ದೋಷವಿದೆ. ಆತನ ಜನ್ಮದಿನ ಮತ್ತು ಜನ್ಮಸಮಯಕ್ಕನುಸಾರವಾಗಿ ವಿವೇಚಿಸಿದರೆ ...ನಮ್ಮಲ್ಲಿರುವ ವರನ ಜಾತಕವು ತಿದ್ದಿರಬಹುದಾದ ಅಥವ ಬದಲಾಯಿಸಿರಬಹುದಾದ ಜಾತಕವೆನಿಸುತ್ತದೆ...ತಾವೇ ಪರಾಂಬರಿಸಬೇಕು..."

ಭಟ್ಟರ ಮಾತುಗಳನ್ನು  ಕೇಳಿದ ರಾಜನ ಮುಖ ಕೆಂಪಡರಿತು. ತನ್ನ ಸೊಂಟದಲ್ಲಿದ್ದ ವೀರಕತ್ತಿಯನ್ನು ಹಿರಿದು ನಿಂತು ಘರ್ಜಿಸಿದ..


" ಸಹೋದರಿ, ಇಂತಹ ಮೋಸಗಾರರ ಸಂಬಂಧವೇ ನಮಗೆ ಬೇಡ. ಈ ಕ್ಷಣವೇ ಚಂದ್ರಗಿರಿಯನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳತ್ತೇನೆ....ಈ ವಂಚಕರನ್ನು ಗಡಿಪಾರು ಮಾಡುತ್ತೇನೆ....ಸಹೋದರಿ, ಹಸೆಮಣೆ ಬಿಟ್ಟು ಎದ್ದು ಬಂದುಬಿಡು...ಇವರ ಸಹವಾಸವೇ ನಮಗೆ ಬೇಡ..ಮುಂದೊಂದು ದಿನ ಉತ್ತಮರೊಂದಿಗೆ ನಿನ್ನ ವಿವಾಹವನ್ನು ಇದಕ್ಕಿಂತಲೂ ವಿಜೃಂಭಣೆಯಿಂದ ನೆರವೇರಿಸುತ್ತೇನೆ....ಬಾ ತಂಗಿ..." 

..ಬಲ್ಲಾಳರಾಯನ ನುಡಿಗಳು ಹರಿಯಾಳದೇವಿಯ ಮನಸಿನಲ್ಲಿ ಹೊಯ್ದಾಟವೆಬ್ಬಿಸಿತು. ಅದಾಗಲೇ, ಚಂದ್ರಗಿರಿಯ ರಾಜನೇ ತನ್ನ ಪತಿಯೆಂದು ಆಕೆ ಮಾನಸಿಕವಾಗಿ ಒಪ್ಪಿಯಾಗಿತ್ತು. ಹೃದಯಗಳು ಒಂದಾಗಿಬಿಟ್ಟಿದ್ದವು. ಹರಿಯಾಳದೇವಿಗೆ ಉಭಯಸಂಕಟವಾಯಿತು. ತಾನು ಮೆಚ್ಚಿರುವ, ಪ್ರೀತಿಸುವ ’ಪತಿ’ಯನ್ನು , ಯಕಶ್ಚಿತ್ ರೋಗದ ಕಾರಣಕ್ಕಾಗಿ ಬಿಟ್ಟುಬಿಡಲೆ ? ...ಅಥವ ತನ್ನ ಪಿತೃ ಸಮಾನನಾದ ಅಣ್ಣನ ಮಾತಿಗೆ ಬೆಲೆ ಕೊಡಲೆ ?? ...ಆಕೆ ಅನಿಶ್ಚಿತತೆಯಿಂದ ತೊಳಲಾಡಿದಳು. ಕೊನೆಗೆ , ತನ್ನ ಮನಸಿಗೊಪ್ಪಿರುವ ಪತಿಯನ್ನು ತಿರಸ್ಕರಿಸುವುದು ಅಸಂಬದ್ದವೆನಿತು. ಸಾವರಿಸಿಕೊಂಡು, ಬಲ್ಲಾಳರಾಯನ ಮುಂದೆ ತನ್ನ ಮನೋನಿವೇದನೆ ಮಾಡಿಕೊಂಡಳು ..


" ಅಣ್ಣಾ...ನಾನಿವರನ್ನು ಮನಸಾರೆ ಒಪ್ಪಿಯಾಗಿದೆ. ರೋಗದ ನೆಪವೊಡ್ಡಿ, ಶಿವನ ಸನ್ನಿಧಿಯಲ್ಲಿ ನಾನಿವರನ್ನು ತಿರಸ್ಕರಿಸಲಾರೆ. ಪರಮೇಶ್ವರನ ಅನುಗ್ರಹವಿದ್ದಲ್ಲಿ, ನನ್ನ ಪತಿ ಶೀಘ್ರ ಗುಣಮುಖರಾಗುತ್ತಾರೆ.  ಇನ್ನೊಂದು ಸತ್ಯ ಹೇಳುತ್ತೇನೆ...ಈಗಾಗಲೇ ನಮ್ಮ ನಿರೀಕ್ಷಣ ಮುಹೂರ್ತವು ಮುಗಿದಿದೆ. ಶಾಸ್ತ್ರಗಳು ನಿನಗೆ ತಿಳಿಯದೇ? ನಿರೀಕ್ಷಣೆಯಾದರೆ..ವಿವಾಹವಾದಂತಯೇ ಸರಿ..!. ನೀನಾವ ಕಾರಣಗಳನ್ನು ಮುಂದಿಟ್ಟರೂ ..ನಾನು ಈ ವಿವಾಹವನ್ನು ತಿರಸ್ಕರಿಸಲಾರೆ. ದಯವಿಟ್ಟು ಸಹಕರಿಸು....ಭಟ್ಟರೇ...ತಾವು ಮುಂದುವರಿಸಿ...." 

 ಸಹೋದರಿಯ ಬಾಯಿಂದ ಹೊರಬಂದ ಮಾತುಗಳು ಬಲ್ಲಾಳರಾಯನನ್ನು ದಿಗ್ಬ್ರಮೆಗೊಳಿಸಿತು. ಅವನ ಅಸ್ತಿತ್ವವನ್ನೇ ಕೆಣಕುವ ಮಾತುಗಳು ಸಹೋದರಿಯ ಬಾಯಿಂದ ಬಂದಿದ್ದವು. ..ತನ್ನ ಪ್ರೀತಿಯ ಸಹೋದರಿಯೇ ..ತನ್ನ ವಿರುದ್ಧ ಮಾತನಾಡಿದ್ದು ? ತಾನು ತುತ್ತಿಟ್ಟು ಬೆಳೆಸಿದ ಪುಟ್ಟ ಬಾಲೆಯೇ..ಹೀಗೆ ಹೇಳಿದ್ದು.....?? ಬಲ್ಲಾಳರಾಯನಿಗೆ ದಿಕ್ಕು ತೋಚದಂತಾಯಿತು.......

 (ಮುಂದುವರಿಯುತ್ತದೆ...)


ವಂದನೆಗಳೊಂದಿಗೆ....

Mar 31, 2010

ಋಗ್ವೇದದ ಜ್ಞಾನ ಮತ್ತು ವಿಜ್ಞಾನ.

ಕಾಲ:

ಚತುರ್ವೇದಗಳಲ್ಲಿ ಅತ್ಯಂತ ಪುರಾತನವಾದ ಮತ್ತು ಮೊದಲನೆಯ ವೇದವೇ ಋಗ್ವೇದ. ದೇವನಾಗರಿ ಲಿಪಿಯಲ್ಲಿ ಮತ್ತು ಸಂಸ್ಕೃತ ಭಾಷೆಯಲ್ಲಿ ತಾಳೆಗರಿ (ತಾಡಪತ್ರ) ಗಳ ಮೇಲೆ ವೈದಿಕರು ಮತ್ತು ಋಷಿಗಳಿಂದ ಸಲಕ್ಷಣವಾಗಿ ಬರೆದಿಡಲ್ಪಟ್ಟ ಋಗ್ವೇದದ ಮೂಲಪ್ರತಿಗಳು ಲಭ್ಯವಿದ್ದರೂ, ಇವುಗಳು ಋಗ್ವೇದದ ಕಾಲದಲ್ಲೇ ಬರೆಯಲ್ಪಟ್ಟಿವೆಯೆಂದು ಹೇಳಲು ಸೂಕ್ತ ಆಧಾರಗಳು ದೊರೆಯುವುದಿಲ್ಲ. ಗುರುಕುಲ ಪದ್ದತಿಯನ್ನು ಅನುಸರಿಸಿ ಕಾಲಾನುಕ್ರಮದಲ್ಲಿ ಬಾಯಿಂದ ಬಾಯಿಗೆ ಹರಿದುಬಂದ ವೇದವಾಕ್ಯಗಳು ಯಾವುದೋ ಒಂದು ಸಮಯದಲ್ಲಿ ಋತ್ವಿಜರಿಂದ ಬರೆದಿಡಲ್ಪಟ್ಟಿದೆಯೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಋಗ್ವೇದದ ಕಾಲವನ್ನು ಹೇಳಲು ಇತಿಹಾಸತಜ್ಞ ಮತ್ತು ಸಂಶೊಧಕನಾದ "ಮ್ಯಾಕ್ಸ್ ಮುಲ್ಲರ್ " ಕೆಲವೊಂದು ಆಕರಗ್ರಂಥಗಳನ್ನು ಪರಿಶೀಲಿಸುತ್ತಾನೆ. ಅವನ ಪ್ರಕಾರ ಕ್ರಿ.ಪೂ. ೧೫೦೦ ರಿಂದ ಕ್ರಿ.ಪೂ. ೫೦೦ ಎಂದು ನಿರ್ಧರಿಸಲಾಗುತ್ತದೆ. ಆದರೆ ತನ್ನ ಅಂತ್ಯಕಾಲದಲ್ಲಿ ಮುಲ್ಲರನೇ ಈ ಕಾಲವನ್ನು ತಪ್ಪೆಂದು ತಿಳಿಸಿಬಿಡುತ್ತಾನೆ. ನಂತರ ಸಿಂಧೂ ಕಣಿವೆ, ಹರಪ್ಪ- ಮೊಹೆಂಜೊದಾರೋ  ಮುಂತಾದ ನಾಗರೀಕತೆಗಳ ಆಧಾರದಲ್ಲಿ ಕ್ರಿ.ಪೂ. ೩೦೦೦ ನೆ ಇಸವಿ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ನಂತರ ಇದೇ ನಾಗರೀಕತೆಗಳ ’ಸೆಟೆಲೈಟ್’ ಭಾವಚಿತ್ರಗಳ ಅಧ್ಯಯನದ ಮೂಲಕ ಋಗ್ವೇದದ ಕಾಲವನ್ನು ೩೧೦೦ ಅಥವ ಇನ್ನೂ ಪುರಾತನವಾದುದೆಂದು ನಿರ್ಧರಿಸಲಾಗುತ್ತದೆ.  ಆಧ್ಯಾತ್ಮ ಹಾಗೂ ಪೌರಾಣಿಕ ಹಿನ್ನಲೆಯಲ್ಲಿ ಗಮನಿಸಿದರೆ ಋಗ್ವೇದದ ಕಾಲವನ್ನು ಕೃತಯುಗದಿಂದಾಚೆಯೂ ಊಹಿಸಬಹುದು !. ಋಗ್ವೇದದ  ಕಾಲದ ಬಗೆಗಿನ ಜಿಜ್ಞಾಸೆ ಏನೇ ಇರಲಿ...ಅದರೊಳಗಿನ ವಿಚಾರಗಳಂತೂ ಸಾರ್ವಕಾಲಿಕ ಉಪಯುಕ್ತತೆಯನ್ನು ಹೊಂದಿದೆ.

ವಿಶಿಷ್ಟತೆ :

ಋಕ್ಕುಗಳಿಂದ ( ಸೂಕ್ತ ಅಥವ ವಾಕ್ಯಗಳು ) ಕೂಡಿರುವ , ಸಂಸ್ಕೃತ ಭಾಷೆಯಲ್ಲಿ ಹೇಳಲ್ಪಟ್ಟಿರುವ ಪ್ರಕೃತಿದತ್ತ ವಿಚಾರಗಳೇ ಋಗ್ವೇದ. ಹಲವಾರು ಜಾಗತಿಕ ಕ್ರಾಂತಿಗಳ ನಂತರ ಹುಟ್ಟಿದ ಸಹೋದರತೆ, ಸ್ತ್ರೀಸ್ವಾತಂತ್ರ್ಯ, ವೈಜ್ಞಾನಿಕ ಸಂಶೊಧನೆ, ಶಾಂತಿ, ಸಹಬಾಳ್ವೆ ಮುಂತಾದ ವಿಚಾರಗಳು ಅತ್ಯಂತ ಪುರಾತನವಾದ ಋಗ್ವೇದ ಕಾಲದಲ್ಲೇ ಹೇಳಲ್ಪಟ್ಟಿದೆ. ಮೂಲ ಸಂಹಿತೆ (ಗ್ರಂಥ) ಯಲ್ಲಿ ಸ್ವರಪ್ರಸ್ತಾರಗಳ ಸಹಿತ ’ಮಂತ್ರ’ ಗಳಂತೆ ವಿಷಯಗಳನ್ನು ಹೇಳಿರುವುದರಿಂದ ಈ ಸೂಕ್ತಗಳನ್ನು ಮಂತ್ರಗಳಾಗಿಯೂ ಪರಿಗಣಿಸಬಹುದು. ಆಧ್ಯಾತ್ಮಿಕವಾಗಿ ಋಗ್ವೇದದ ವಿಚಾರ ಸಾಗರಕಿಂತ ಅಗಾಧ.
"ಅಗ್ನಿಮೀಳೆ ಪುರೋಹಿತಂ ...." ಎಂದು ಪ್ರಾರಂಭವಾಗುವ ಋಗ್ವೇದದ ಮೊದಲನೆಯ ವಾಕ್ಯದಲ್ಲಿ ಯಾವ ಪುರೋಹಿತನ ಪ್ರಸ್ತಾಪವೂ ಇಲ್ಲ. ಸರಳವಾಗಿ ಹೇಳುವುದಾದರೆ, ಅಗ್ನಿಯು ತನಗರ್ಪಿತವಾದುದನ್ನು ತಲುಪಿಸುವಲ್ಲಿಗೆ ತಲುಪಿಸುತ್ತಾನೆ, ಅಥವ ತಲುಪಿಸು ಎಂದು ಪ್ರಾರ್ಥಿಸುವ ವಿವರಣೆಯಿದೆ. ಹೀಗೆ ಸುಮಾರು ೧೦೫೫೨ ಋಕ್ಕುಗಳು ( ಮಂತ್ರ), ೧೦೨೮ ಸೂಕ್ತಗಳನ್ನು ಒಳಗೊಂಡಿರುವ ಋಗ್ವೇದ ಸಂಹಿತೆಯನ್ನು (ಗ್ರಂಥ) ೧೦ ಮಂಡಲಗಳಾಗಿ (ವಿಭಾಗ) ವರ್ಗೀಕರಿಸಲಾಗಿದೆ. ಒಂದೊಂದು ಸೂಕ್ತದಲ್ಲಿಯೂ ಪ್ರಕೃತಿಯ ವರ್ಣನೆ, ಉಪಯೋಗ ಮತ್ತು ಅನುಷ್ಠಾನಗಳನ್ನು ದೃಷ್ಟಾರರು ( ಬರೆದವರು) ವಿವರಿಸಿದ್ದಾರೆ    .

ರಚನಕಾರರು :

ಋಗ್ವೇದದ ರಚನಕಾರರನ್ನು ದೃಷ್ಟಾರರು ಎಂದು ಕರೆಯಲಾಗುತ್ತದೆ. ಮೊದಲನೆಯ ಸೂಕ್ತದ ರಚನಕಾರರಾದ ಮಾಧುಚ್ಛಂದಾ-ವೈಶ್ವಾಮಿತ್ರರಿಂದ ಪ್ರಾರಂಭವಾಗಿ ಆಂಗೀರಸ, ಭಾರಧ್ವಾಜ, ಬಾರ್ಹಸ್ಪತ್ಯ, ವಸಿಷ್ಠ,  ಅಗಸ್ತ್ಯ, ಮೈತ್ರಾವರುಣಿ ಇತ್ಯಾದಿ ಅನೇಕ ’ಋಷಿ’ ಗಳು ಸಂಹಿತೆಯ ರಚನೆಯಲ್ಲಿ  ಕಂಡುಬರುತ್ತಾರೆ.

ದೇವತೆಗಳು :

ಋಗ್ವೇದದಲ್ಲಿ ಹೆಚ್ಚಿನಪಾಲು ’ಅಗ್ನಿ’ ಗೆ ಸಲ್ಲುತ್ತದೆ. ಪ್ರಕೃತಿಯ ಶಕ್ತಿಗಳಾದ ಅಗ್ನಿ, ವಾಯು, ಜಲ, ಬೆಳಕು (ಸೂರ್ಯ-ಸವಿತೃ ), ಸಂಪತ್ತು, ಮಳೆ, ಭೂಮಿ ಹೀಗೆ ಎಲ್ಲಾ ಪ್ರಾಕೃತಿಕ ಶಕ್ತಿಗಳನ್ನೂ , ಆಯಾ ಶಕ್ತಿಗಳ ಮಹತ್ವವನ್ನೂ ವಿವರಿಸುತ್ತಾ ಈ ಶಕ್ತಿಗಳಿಗೆ ದೈವತ್ವವನ್ನು ಕೊಟ್ಟು ಮೌಲ್ಯವರ್ಧಿತವಾಗುವಂತೆ ವಿವರಿಸಿದ್ದಾರೆ. ಪ್ರಕೃತಿಯನ್ನು ಅದರ ಶಕ್ತಿಯನ್ನು ಗೌರವಿಸಿ , ಉಳಿಸಿ-ಬೆಳಸಿಕೊಳ್ಳುವ ಮನೋಭಾವ ಉಂಟುಮಾಡುವ ಉದಾತ್ತ ಧ್ಯೇಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಹಾಗೆಯೇ ಈ ಶಕ್ತಿಗಳನ್ನು  ಇಂದ್ರ , ಅಗ್ನಿ, ಪ್ರಾಣ,  ವಾಯು, ಸೋಮ , ವರುಣ, ಪೃಥಿವೀ ಮುಂತಾದ ಹೆಸರುಗಳಿಂದ ದೇವತೆಗಳನ್ನಾಗಿ ವರ್ಣಿಸಲಾಗಿದೆ.
ಪರಿಪೂರ‍್ಣ ಜ್ಞಾನವನ್ನು ಇಂದ್ರನೆಂದು ಹೇಳಿದರೆ , ಪ್ರಾಣೋತ್ಪಾದಕನ್ನು ವಾಯು ಎನ್ನುತ್ತಾರೆ. ಅಗ್ನಿಗೆ ಸಂವಹನ ಶಕ್ತಿಯನ್ನು ನೀಡಿ ಸೋಮನಿಗೆ ಅತೀಂದ್ರಿಯ ಶಕ್ತಿಗಳ ಒಡೆಯನ ಸ್ಥಾನವನ್ನು ನೀಡಲಾಗಿದೆ. ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಇದೊಂದು ರೀತಿಯಲ್ಲಿ  Parliment Cabinet ಇದ್ದಂತೆ !.

ಮಹಿಳೆಯರ ಪ್ರಾಧಾನ್ಯತೆ

ವೇದಗಳ ಕಾಲದಲ್ಲಿ ಮಹಿಳೆಯರನ್ನು ಕಡೆಗಣಿಲಾಗಿತ್ತು ಎನ್ನುವ ವಾದವನ್ನು ಋಗ್ವೇದ ಸುಳ್ಳುಮಾಡುತ್ತದೆ. ಇಲ್ಲಿ ಮಹಿಳೆಯರಿಗೆ ಋಷಿಕೆಯರ (ಋಷಿ ಪತ್ನಿಯರು) ಸ್ಥಾನವನ್ನು ನೀಡಲಾಗಿದೆ. ಇವರು ಹವನಗಳನ್ನೂ ನೇರವೇರಿಸುತ್ತಿದ್ದರು ಎಂಬುದಕ್ಕೆ ವೇದಗಳಲ್ಲೇ ಆಧಾರಗಳಿವೆ.  ಋಷಿಕೆಯರಿಂದ ರಚಿತವಾಗಿರುವ ಸೂಕ್ತಗಳಲ್ಲಿ ಅತ್ಯಂತ ಅರ್ಥಪೂರ್ಣ ವಿವರಣೆಗಳಿವೆ. ’ವಾಗಾಂಭೃಣಿ’ ಎನ್ನುವ ಋಷಿಕೆಯಿಂದ ರಚಿತವಾಗಿರುವ "ದೇವಿ ಸೂಕ್ತ"  ಒಂದು ಚಿಕ್ಕ ಉದಾಹರಣೆಯಷ್ಟೆ.  ಮನೆಗೆ ಆಗತಾನೆ ಮದುವೆಯಾಗಿ ಬಂದ ಸೊಸೆಯನ್ನು ಮಹಾರಾಣಿ ( ಸಾಮ್ರಾಜ್ಞಿ) ಯಂತೆ ಕಾಣು ಎನ್ನುವ ಸೂಕ್ತವೂ ಇಲ್ಲಿ ದೊರೆಯುತ್ತದೆ. ಮಹಿಳೆಯರಿಗೆ ಸಿಗಲೇಬೇಕಾದ ಎಲ್ಲಾ ಗೌರವಾದರಗಳೂ ಋಗ್ವೇದಕಾಲದಲ್ಲೇ ಅನುಷ್ಠಾನದಲ್ಲಿತ್ತೆಂದು ಅಧ್ಯಯನದಿಂದ ತಿಳಿಯಬಹುದು.

ತಾಂತ್ರಿಕತೆ.

ತಾಂತ್ರಿಕತೆ ಕುರಿತಂತೆ ಹಲವಾರು ವಿಷಯಗಳು ಋಗ್ವೇದದಲ್ಲಿ ಪ್ರಸ್ತಾಪವಾಗಿದೆ. ಒಂದೆರಡು ವಿಷಯಗಳನ್ನಷ್ಟೇ ಇಲ್ಲಿ ಹೇಳುತ್ತೇನೆ.

೧) ಪ್ರತಿಯೊಂದು ಋತುವಿಗೂ (ಕಾಲಕ್ಕೂ)  ಸಂಬಂಧಿಸಿದಂತೆ ಯೋಗ್ಯ ಹವಾಮಾನದ ಸ್ಥಿತಿಯ ವಿವರವನ್ನು ಕೊಡುವುದು, ಅಯಾ ಋತುವಿನಲ್ಲಿ (ಕಾಲದಲ್ಲಿ) ಗಾಳಿ ಬೀಸುವ ದಿಕ್ಕು, ವೇಗ, ಮಳೆಯ ಲಕ್ಷಣ, ಇವುಗಳಿಂದ ಮುಂದೆ ಉಂಟಾಗಬಹುದಾದ ಪರಿಣಾಮ ..ಇವುಗಳನ್ನು ಹೇಗೆ ಅಧ್ಯಯನ ಮಾಡಬಹುದೆಂಬುದನ್ನು ಸೂಕ್ತಗಳ ಮೂಲಕ ವಿವರಿಸಲಾಗಿದೆ.

೨) ಅಗ್ನಿಯನ್ನು ಬಳಸಿ ವಸ್ತುಗಳನ್ನು ನಭಕ್ಕೆ ಚಿಮ್ಮಿಸುವ ( Rocket launching ??) ತಾಂತ್ರಿಕತೆಯ ಕೆಲವು ವಿವರಣೆಯನ್ನೂ ಪಡೆಯಬಹುದು.

೩) ಅಗ್ನಿಯನ್ನು ಸ್ತುತಿಸಿ ಮತ್ತು ಶಕ್ತಿಯನ್ನು ಬಳಸಿ ಮಾಡುವ ಹವನದಿಂದ ಹೇಗೆ ಮಳೆಯನ್ನು ತರಿಸಬಹುದು ಎಂಬುದನ್ನೂ ಸಹ ವರ್ಣಿಸಲಾಗಿದೆ. ವೈಜ್ಞಾನಿಕ ವಿಧಾನಗಳನ್ನೇ ಇಲ್ಲಿ ಸೂಕ್ತಗಳ ರೂಪದಲ್ಲಿ ದೃಷ್ಟಾರರು ಕಂಡುಕೊಂಡು ವಿವರಿಸಿದ್ದಾರೆ.
ಇಂದಿನ ಆಧುನಿಕ ಮೋಡಬಿತ್ತನೆ ( Cloud seeding) ಕಾರ್ಯಕ್ಕೆ ಬಳಸುವ ರಾಸಾಯನಿಕಗಳು , ಋಗ್ವೇದಕಾಲದಲ್ಲಿ ಗಿಡಮೂಲಿಕೆಗಳಿಂದ, ಸಮಿತ್ತುಗಳಿಂದ ( ಕೆಲವು ವಿಶೇಷ ಮರಗಳ ಕಡ್ಡಿಗಳು) ಪಡೆಯಲಾಗುತ್ತಿತ್ತು ಎನ್ನುವುದನ್ನೂ ಗಮನಿಸಬಹುದು.  ಇಲ್ಲಿ ಗಮನಿಸಬೇಕಾಗಿರುವ ಮತ್ತೊಂದು ಅಂಶವೆಂದರೆ , ಇಂತಹ ಸೂಕ್ತಗಳಲ್ಲಿರುವ ವಿಷಯಗಳ "ಸಮರ್ಪಕ ಮತ್ತು ಸಕರ್ಮಕ ಅನುಷ್ಠಾನ " .

೪) ಮಂತ್ರದಿಂದ ಮಳೆ ಬರಿಸಲು ಸಾಧ್ಯವೇ ? ಇದು ಎಲ್ಲಾ ವಿಜ್ಞಾನಿಗಳ ಮೂಲಭೂತ ಪ್ರಶ್ನೆ .  ಇದಕ್ಕೆ ಋಗ್ವೇದದಲ್ಲಿಯೇ ಉತ್ತರವಿದೆ. ವೇದದಲ್ಲಿಯ ಸೂಕ್ತಗಳನ್ನು ಕೇವಲ ಔಪಚಾರಿಕ ಮಂತ್ರಗಳೆಂದು ಸ್ವೀಕರಿಸದೆ ವಿಚಾರಗಳೆಂದು ಗಣಿಸಿ , ಆಳವಾದ ಸಂಶೋಧನೆಗಳಿಂದ ಧೃಡಪಡಿಸಿಕೊಂಡರೆ "ಪ್ರಯೋಗ" ಎನ್ನುವ ತಾಂತ್ರಿಕತೆಯು ದೊರಕುತ್ತದೆ. ಇಂತಹ "ಪ್ರಯೋಗ"ಗಳ ಜ್ಞಾನವು ಇಂದು ಲುಪ್ತವಾಗಿ ಹೋಗಿದೆ. ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳಿಂದಷ್ಟೇ ಮರಳಿ ಪಡೆಯಬಹುದಾಗಿದೆ.

೫) ವಿಶ್ವ ಸೃಷ್ಟಿಯ ವಾದ (ಬಿಗ್ ಬ್ಯಾಂಗ್) ಮತ್ತು ವಿಷಯಗಳಿಗೆ ವೇದದಲ್ಲಿ ವಿವರಣೆಯಿದೆ. Nuclear fusion ಮತ್ತು Fission ನಿಂದ ಹೇಗೆ ಹಂತ-ಹಂತ ವಾಗಿ ಜಗತ್ತು ಸೃಷ್ಟಿಯಾಯಿತು ಎಂದು ಹೇಳಲಾಗಿದೆಯೋ, ಅದನ್ನೇ ಇಲ್ಲಿ..ಮೊದಲು ಜ್ಯೋತಿಯ ಉಗಮ, ನಂತರ ರಾತ್ರಿ, ಆಕಾಶ, ಸಮಯ, ಸೂರ್ಯ , ಚಂದ್ರ, ಆಕಾಶಕಾಯಗಳು ಮತ್ತು ಭೂಮಿಯ ಸೃಷ್ಟಿಯಾಯಿತೆಂದು ಹೇಳಲಾಗಿದೆ. ಸಮಯದ ಸೃಷ್ಟಿ ಮತ್ತು ಚಲನೆಯ ಸೂಕ್ಷ್ಮ ವಿಚಾರಗಳನ್ನೂ ಪ್ರಸ್ತಾಪಿಸಲಾಗಿದೆ.
 (  ಬಹು ಪ್ರಖ್ಯಾತ , ಸ್ಟೀಫನ್ ಹಾಕಿಂಗ್ ಬರೆದಿರುವ ಪುಸ್ತಕ A Breif History Of Time ನಲ್ಲಿರುವ ಅನೇಕ ವಿಷಯಗಳು ಋಗ್ವೇದದಲ್ಲಿಯೇ ಪ್ರಸ್ತಾಪವಾಗಿದೆ ಎಂದರೇ..ನೀವು ನಂಬಲೇ ಬೇಕು..!)

ಮನಃಶಾಸ್ತ್ರ:

ಋಗ್ವೇದದ ದೃಷ್ಟಾರರು ಮನುಷ್ಯಜೀವಿಯನ್ನು ದೈವತ್ವದ ಪ್ರತೀಕವೆಂದು ಪರಿಗಣಿಸುತ್ತಾರೆ. ಮನುಷ್ಯನ ಅಂಗಗಳಿಗೂ, ಭಾವನೆಗಳಿಗೂ ಅತ್ಯಂತ ನಿಕಟ ಸಂಪರ್ಕವನ್ನು ಕಲ್ಪಿಸುತ್ತಾರೆ. ಇಚ್ಚೆಗಳು, ಭಾವೋದ್ರೇಕಗಳು, ಅಧಿಕಾರ ದಾಹ, ಕೋಪ, ಮುನ್ನುಗ್ಗುವ ಪ್ರವೃತ್ತಿ, ಶಾಂತಿ, ಮನಃಕೇಂದ್ರೀಕರಣ ಇತ್ಯಾದಿಗಳು ದೇಹದ ಆವರಣಗಳಿಂದ ಹೇಗೆ ಬಿಡುಗಡೆಗೊಳ್ಳುತ್ತವೆ ಮತ್ತು ಅದಕ್ಕೆ ಸಂಬಂಧಪಡುವ ಅಂಗಗಳ ( Organs and Harmones) ಕಾರ್ಯವಿಧಾನವನ್ನು ವಿವರಿಸುತ್ತಾರೆ.
ವ್ಯಕ್ತಿಯು ವಿವೇಚನೆ ಮಾಡುವಾಗ ಮನಸ್ಸಿನ ಲೋಕದಲ್ಲಿ ಸಂವಹಿಸುತ್ತಾನೆ, ಪ್ರೀತಿಯಂತಹ ಭಾವನೆಗಳಿರುವಾಗ ಅಂತರಿಕ್ಷದೊಡನೆ ಸಂಸರ್ಗಿಸುತ್ತಾನೆ, ಬುದ್ದಿಜೀವಿಗಳೆಂದು ಕರೆಯಲ್ಪಡುವವರು ಜೀವಶಕ್ತಿ ಮತ್ತು ಮನಸ್ಸಿನ ಲೋಕದೊಂದಿಗೆ ಮಂಥಿಸುತ್ತಾರೆ...ಹೀಗೆ ಮನಸ್ಸಿನ ಹಲವು ತಾಕಲಾಟಗಳಿಗೆ ಋಗ್ವೇದದಲ್ಲಿ ಉತ್ತರ ದೊರೆಯುತ್ತದೆ.

ಖಗೋಳಶಾಸ್ತ್ರ

ಋಗ್ವೇದದಲ್ಲಿ ಖಗೋಳಶಾಸ್ತ್ರಾಧಾರಿತ ವಿಚಾರಗಳು ವಿಸ್ತೃತವಾಗಿದೆ. ಭಾರತೀಯ ಖಗೋಳಶಾಸ್ತ್ರವು ನಕ್ಷತ್ರಮಾನವನ್ನು ಅವಲಂಬಿಸಿದೆ. ಸೂರ್ಯನ ಉತ್ತರ-ದಕ್ಷಿಣ ಚಲನೆಯ ( ಭೂಮಿ ತಿರುಗುವಿಕೆಯಿಂದ ಉಂಟಾಗುವ) ಕಾಲಘಟ್ಟಗಳನ್ನು ವೇದದಲ್ಲಿ ಸಂಕ್ರಮಣಗಳೆಂದು ಹೇಳುತ್ತಾ , ನಿರ್ಧಿಷ್ಟ "ಡಿಗ್ರಿ" ಗಳನ್ನು ಹೇಗೆ ಗುರುತಿಸಬಹುದು ಎಂದು ವಿವರಿಸುತ್ತಾರೆ. ರಾಶಿ ಚಕ್ರವನ್ನು ೨೭ ಸಮಭಾಗಗಳನ್ನಾಗಿಸಿ  ಈ ಡಿಗ್ರಿ ಗಳನ್ನು ಗುರುತಿಸಬಹುದಾದ ಅಂಶಗಳನ್ನು ವಿವರಿಸುತ್ತಾರೆ. ಇನ್ನು ಅಗ್ನಿ, ವಾಯು, ಮೇಘ, ಆಕಾಶಕಾಯಗಳು, ನಕ್ಷತ್ರಗಳು, ಮುಂತಾದವುಗಳ ಉಗಮ ಮತ್ತು ಶಕ್ತಿಯನ್ನು ಸಾಂಕೇತಿಕವಾಗಿ  ವಿವರಿಸಲಾಗಿದೆ. ಗಣಿತ ಶಾಸ್ತ್ರದ ವೃತ್ತಗಳು, ಪರಿಧಿ, ವ್ಯಾಸ, ಚೌಕಗಳು ಮುಂತಾದವುಗಳನ್ನು ಯಾವ ಪ್ರಮಾನದಲ್ಲಿ ರಚಿಸಬೇಕು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

    ಹೀಗೆ , ಇಂದಿನ ವೈಜ್ಞಾನಿಕ ಸಂಶೋಧನೆಯಿಂದ ದೊರಕುತ್ತಿರುವ  ವಿಚಾರಗಳು ಪ್ರಾಚೀನ ಋಗ್ವೇದದಲ್ಲಿಯೇ ಹೇಳಲ್ಪಟ್ಟಿರುವುದು, ಅಂದಿನೆ ಸಾಧಕರಲ್ಲಿದ್ದ ಪರಿಪೂರ್ಣ ಜ್ಞಾನವನ್ನು ತೋರಿಸಿಕೊಡುತ್ತದೆ. ಅಂದು ಸಂಸ್ಕೃತ ಭಾಷೆಯಲ್ಲಿ ಹೇಳಿದುದು ಇಂದು ನಂಬಿಕೆಯ ಕೊರತೆಯಿಂದಾಗಿಯೋ ಅಥವ ಅಜ್ಞಾನದಿಂದಾಗಿಯೋ ವೇದಗಳು ಕೇವಲ ಪುರೋಹಿತರಿಗೆ , ಬ್ರಾಹ್ಮಣರಿಗೆ ಮತ್ತು ಆ ಕಸುಬು ನೆಡೆಸುವವರಿಗೆ ಮಾತ್ರ ಎಂಬ ಪರಿಸ್ಥಿತಿಯು ಉಂಟಾಗುತ್ತಿದೆ. ವೇದಾರ್ಥವನ್ನೇ       ತಿಳಿಯದ ಸ್ವಯಂಘೋಷಿತ ಬುದ್ಧಿಜೀವಿಗಳು ಮತ್ತು ಕೆಲವು ಪುರೋಹಿತಶಾಹಿಗಳು, ವೇದಗಳನ್ನು ಅಸ್ಪೃಶ್ಯತೆಯೆಡೆಗೆ ತಳ್ಳುತ್ತಿದ್ದಾರೆ. ವೇದಾರ್ಥಗಳು ಸಂಕೀರ್ಣವಾಗಿದ್ದರೂ, ಯಾವುದೇ ತಾಂತ್ರಿಕ ಕೋರ್ಸ್ ಮಾಡುವಾಗಿನ ಅಧ್ಯಯನವನ್ನು ಇದಕ್ಕೆ ಮೀಸಲಿಟ್ಟರೆ, ವೇದದ ನಿಜವಾದ ಅರ್ಥ ಗೋಚರಿಸುತ್ತದೆ. ವಿದೇಶಿ ಸಂಶೋಧನೆಗಳಿಗೇ ಮಣೆ ಹಾಕುವ ಮಂದಿ, ಅಂತಹ ಎಲ್ಲಾ ವೈಜ್ಞಾನಿಕ ವಿಷಯಗಳೂ ನಮ್ಮ ವೇದಗಳಲ್ಲೇ ಪ್ರಸ್ತಾಪವಾಗಿದೆ ಎನ್ನುವುದನ್ನು ಮನಗಾಣಬೇಕಿದೆ. ವೇದಗಳನ್ನು ಕೇವಲ ಆಧ್ಯಾತ್ಮಕ್ಕೆ ಮಾತ್ರ ಮೀಸಲಿಡದೆ , ಹೊರ ಜಗತ್ತಿಗೆ ವಿಶಿಷ್ಟ ರೀತಿಯಲ್ಲಿ ತೆರೆದಿಡುವ  ಪ್ರಯತ್ನ ಮಾಡಿದರೆ ವೇದ ರಚನೆಯಾದುದಕ್ಕೆ ಸಾರ್ಥಕಭಾವ ಬರುತ್ತದೆ. ವೇದಾಧ್ಯಯನ ಕೇವಲ ಮಠ-ಮಂದಿರಗಳಿಗೆ ಸೀಮಿತವಾಗಿ ಅಲ್ಲಿಯೇ ಹುಟ್ಟಿ,  ಅಲ್ಲೇ ಮಣ್ಣಾಗುವ ಬದಲು ಪ್ರಂಪಚಕ್ಕೆ ತೆರೆದುಕೊಂಡರೆ ಭಾರತೀಯ ಸನಾತನ ಸಂಸ್ಕೃತಿಯ ಅರಿವು ಉಜ್ವಲವಾಗುತ್ತದೆ. ವೇದಗಳು ಯಾರ ಸ್ವತ್ತೂ ಅಲ್ಲ ಎನ್ನುವುದರ ಅರಿವು ಮೊದಲು  ಮೂಡಬೇಕಾಗಿದೆ , ಮತ್ತು ನಾಲ್ಕಾರು ವೇದಸೂಕ್ತಗಳನ್ನು ಬಾಯಲ್ಲಿ ಹರಟಿಕೊಂಡು Psueodo Scientific theory  ಗಳನ್ನು ಹೇಳಿಕೊಂಡು ಸಾಮಾನ್ಯರಿಂದ ವೇದಗಳನ್ನು ದೂರವಿಡುವ ಪದ್ಧತಿ ಹಿಂದಿಗಿಂತಲೂ ಇಂದೇ ಹೆಚ್ಚಾಗಿ ತೋರುತ್ತಿದೆ. ಇದಕ್ಕೆ  ದೂರದರ್ಶನ ಮಾಧ್ಯಮಗಳು ಸಂಪೂರ್ಣ ಕೊಡುಗೆ ನೀಡುತ್ತಿದೆ ಎನ್ನುವುದು ಅನುಮಾನಕ್ಕಾಸ್ಪದವಿಲ್ಲದ ವಿಚಾರ......... "  ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ? "...

ಋಗ್ವೇದದ ವಿಚಾರಗಳನ್ನು ಆಧ್ಯಾತ್ಮದಿಂದ ಹೊರಗಿಟ್ಟು ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ವೇದಗಳನ್ನು ಅರ್ಥಮಾಡಿಕೊಳ್ಳುವ ಬಗೆ ಮತ್ತು ಅದರ ಮಹತ್ವಗಳನ್ನು ತಿಳಿಸಲೋಸುಗ ಬ್ಲಾಗ್ ಲೋಕದ ಕೆಲವು ಮಿತ್ರರು ವೇದಸುಧೆ  ಎಂಬ ತಾಣವನ್ನು ಹುಟ್ಟುಹಾಕಿದ್ದಾರೆ. ಅಲ್ಲಿಗೂ ಭೇಟಿ ಕೊಡಿ ಎಂದು ವಿನಂತಿಸುತ್ತೇನೆ. ವೇದಗಳ ಆಧ್ಯಾತ್ಮಿಕ ವಿವರಣೆಗಳು ಅಲ್ಲಿ ಲಭ್ಯವಾಗುತ್ತಿದೆ.
ಇಲ್ಲಿ ಋಗ್ವೇದದ ಯಾವ ಸೂಕ್ತಗಳನ್ನೂ ಉದಾಹರಣೆಯಾಗಿ ನಾನು ಕೊಡಮಾಡಿಲ್ಲ, ಕಾರಣ ಮೇಲ್ಕಂಡ ವಿಚಾರಗಳು ಸಂಹಿತೆಯ ಎಲ್ಲಾ ಮಂಡಲಗಳಲ್ಲೂ ಹಂಚಿಹೋಗಿವೆ. ಒಮ್ಮೆ ಋಗ್ವೇದ ಸಂಹಿತೆಯನ್ನು ಮನನ ಮಾಡಿದರೆ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಮಸ್ಯೆಗಳಿಗೆ ತಕ್ಕಮಟ್ಟಿಗಿನ ಉತ್ತರ ದೊರೆಯುದರಲ್ಲಿ ಸಂದೇಹವಿಲ್ಲ.   ಋಗ್ವೇದದಲ್ಲಿನ ಅನೇಕ ವಿಷಯಗಳು ಇಲ್ಲಿ ಬಿಟ್ಟುಹೋಗಿವೆ. ಸಮಯದ ಹಾಗು ಬ್ಲಾಗ್ ನ ಮಿತಿಗಳಿಂದಾಗಿ ಎಲ್ಲವನ್ನೂ ಇಲ್ಲಿ ವಿವರಿಸುವುದು ಕಷ್ಟಸಾಧ್ಯ.
ಮೂಲ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಮೇಲ್ಕಂಡ ಎಲ್ಲಾ ವಿಚಾರಗಳಿಗೂ ಸಮರ್ಪಕ ವಿವರಣೆಗಳು ದೊರೆಯುತ್ತದೆ.    

ಕೊನೆ ಮರ್ಮ :  ವೇದಸೂಕ್ತಗಳ ಅರ್ಥವನ್ನೇ ಅರಿಯದೆ, ವಿಚಾರ ಮಂಥನವನ್ನೇ ಮಾಡದೆ , ಕೇವಲ ಎತ್ತರದ ಸ್ವರದಲ್ಲಿ , ರಾಗವಾಗಿ ಸೂಕ್ತಗಳನ್ನು ಹೇಳಿಕೊಂಡು ಪಂಡಿತರೆನಿಸಿಕೊಳ್ಳುವುದರಿಂದ ಯಾವ ಸ್ವರ್ಗವೂ ಸಿಗಲಾರದೆಂದು ಭಾವಿಸುತ್ತೇನೆ. ಇಷ್ಟಕ್ಕೂ ಋಗ್ವೇದದಲ್ಲಿ ಸ್ವರ್ಗ-ನರಕಗಳ ಪ್ರಸ್ತಾಪವೇ ಬರುವುದಿಲ್ಲ !. ಕೇವಲ ಪುರೋಹಿತಶಾಹಿಗಳ, ಒಂದು ವರ್ಗದ ಅಥವ ಸ್ವಯಂಘೋಷಿತ ಬುದ್ಧಿಜೀವಿಗಳ ಅಧ್ಯಯನಕ್ಕಷ್ಟೇ ವೇದಗಳು ಮೀಸಲಲ್ಲ ಎನ್ನುವುದು ಜಗತ್ತಿಗೆ ತಿಳಿಯಬೇಕಿದೆ. ವೇದಗಳು ಪ್ರಪಂಚಕ್ಕೆ ತೆರೆದುಕೊಂಡಾಗ ಸನಾತನ ಭಾರತೀಯ ಸಂಸ್ಕೃತಿಗೆ ಮತ್ತೊಂದು ಗರಿ ಮೂಡುತ್ತದೆ. ಜೀವಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ದಾರಿದೀವಿಗೆಯಾಗಬಲ್ಲಂತಹ ಉತ್ತಮ ವಿಚಾರಗಳೇ ಋಗ್ವೇದದ ಮೆರುಗೆಂದರೆ ತಪ್ಪಾಗಲಾರದು. ವೇದಗಳು ಬಂಧನದಿಂದ ಹೊರಬರಬೇಕಿದೆ, ಜಗತ್ತಿಗೆ ಪಸರಿಸಬೇಕಿದೆ.

ಲೇಖನದ ಆಧಾರ : ಋಗ್ವೇದ ಸಂಹಿತಾ ಮತ್ತು
                      " Why We Read Rig Veda " by Sri. L.R. Kashyap. U.S.        


----------------*--------------------





ವಂದನೆಗಳೊಂದಿಗೆ...

Mar 24, 2010

ಹೀಗೊಂದು ನವಮಿ..


ಇಂದು ಶ್ರೀರಾಮನವಮಿ
ಪುಟ್ಟ ಬಾಲ-ಬಾಲೆಯರ
ಸಡಗರದ ನವಮಿ
ಪಾನಕ-ಕೋಸಂಬರಿಗಳ
ಮಿಲನದ ಮಹಾನವಮಿ !

ಗುಡಿಯೊಳಗಿರುವ ರಾಮನಿಗೆ
ತಿನಿಸುಗಳು ಬಗೆಬಗೆ
ಮಜ್ಜಿಗೆ, ರಸಾಯನ
ಹುಳಿಯವಲಕ್ಕಿಗಳ ಲಗು-ಬಗೆ ,

ಗುಡಿಯ ಹೊರಗೆ.....
ಭಿಕಾರಿಗಳ ಅದಮ್ಯ ಯಾಚನೆ,
ಗುಡಿಯೊಳಗೆ....
ಭಕ್ಷ-ಭೋಜ್ಯಗಳ ಬಣ್ಣನೆ !
ನಿಮಿಷಕ್ಕೊಂದು ರುಚಿಯ
ಖಾದ್ಯಗಳ ಸಮಾರಾಧನೆ ..,

ರಾಮನನು ಹೊತ್ತು ಸಾಗುವ ಪರಿ
ನೋಡಲದು ಕಣ್ಣಿಗಚ್ಚರಿ !
ಉತ್ಸವದ ಭರದಲಿ
ಭಕ್ತರ ಸಡಗರದಲಿ,
ಹಸಿದ ಜೀವವ ತಳ್ಳಿ...
ಅವನ ಹೊಟ್ಟೆಗಿಟ್ಟು ಕೊಳ್ಳಿ..
ಮುಂದೆ ಸಾಗಿದ್ದು ತಿಳಿಯಲಿಲ್ಲ,
ರಾಮಚಂದ್ರ ಕಣ್ತೆರೆಯಲಿಲ್ಲ !,

ಇಂತಿಪ್ಪ ರಾಮರಾಜ್ಯದಲಿ
ಬೇಡುವ, ಕಾಡುವ ಜೀವಗಳಿಗಿಲ್ಲ..
ಮಜ್ಜಿಗೆ ಪಾನಕ..
ಕುಡಿದವರೇ ಕುಡಿಯುವರು ಮತ್ತೆ..
ಹಳ್ಳದೆಡೆಗೇ ಸದಾ ನೀರು ಹರಿವಂತೆ ..!


 ----------------------------------------------------------------------------------

ಖೊನೆಖಿಡಿ

ಶಂಭುಲಿಂಗ ತನ್ನ ಮಡದಿ  ಮತ್ತು ನಾಲ್ಕು ಮಕ್ಕಳೊಂದಿಗೆ ಮೋಟಾರಿಗೆ ಕಾಯುತ್ತಾ ನಿಂತಿದ್ದ. ಅಲ್ಲಿಗೆ ಗೌಡರ ಆಗಮನವಾಯಿತು...

ಗೌಡ್ರು : ಏನಯ್ಯಾ ಶಂಭು, ..ಚೆನ್ನಾಗಿದ್ದಾವೆ ಮಕ್ಕಳು...ಯಾವಾಗ್ ಆಯ್ತಯ್ಯಾ ನಾಲ್ಕು ಮಕ್ಕಳು ನಿಂಗೆ ?

ಶಂಭುಲಿಂಗ : ಬುದ್ದಿ..ಇವಳು ಚಿಕ್ಕೋಳು, ನಮ್ಮ ಮಗಳು...ಇವ್ನು ನನ್ನ ಎರಡನೇ ಹೆಂಡ್ತಿ ಮಗ, ಇವ್ಳು ನನ್ನ ಮೊದಲನೆ ಹೆಂಡತಿ ಮಗಳು...ಇವನು ದೊಡ್ಡೋನು......
ಇವನು....ಬುದ್ದಿ ನೆನ್ಪೇ ಆಗ್ತಿಲ್ಲಾ..ಯಾವಾಗ್ ಉಟ್ಟಿದ್ ಇವ್ನು ಅಂತ ...!!!!!

                                             ವಿಶ್ಚಾಸದೊಂದಿಗೆ,