Sep 22, 2010

ಭಾರತ ಬಲಿಪಶುವೇ ?

ಹತ್ತೊಂಬತ್ತು ನೂರು ಅರವತ್ತಾರನೆಯ ಇಸವಿಯಲ್ಲಿ ವಿನಾಯಕ ದಾಮೋದರ ಸಾವರಕರರು (ವೀರ ಸಾವರಕರ್) ನಿಧನರಾದಾಗ ಭಾರತದ ಸಂಸತ್ತಿನಲ್ಲಿ ಸಾವರಕರರಿಗೆ ಶ್ರಂದ್ಧಾಂಜಲಿ ಸಲ್ಲಿಸುವ ವಿಷಯವೊಂದು ಪ್ರಸ್ತಾಪವಾಯಿತು. ಅಂದಿನ ಸಭಾಧ್ಯಕ್ಷರು (ನೆಹರು ಕೃಪಾಪೋಷಿತ) ಆ ಪ್ರಸ್ತಾಪವನ್ನು ತಿರಸ್ಕರಿಸಿದರು, ಕಾರಣ ಸಾವರ್ಕರರು ಸಂಸತ್ತಿನ ಸದಸ್ಯರಲ್ಲ ಎನ್ನುವುದು. ಮುಂದಿನ ದಿನಗಳಲ್ಲಿ ಅದೇ ಸಂಸತ್ತು ನಮ್ಮ ದೇಶದವರೇ ಅಲ್ಲದ "ಸ್ಟಾಲಿನ್" ಗೆ ಗೌರವಾರ್ಪಣೆ ಸಲ್ಲಿಸುತ್ತದೆ. ಇದಕ್ಕೆ ಕಾರಣ ಅಂದು ನೆಹರು ಅಪ್ಪಿಕೊಂಡಿದ್ದ ಸೋವಿಯತ್ ಒಕ್ಕೂಟದ ಆಕರ್ಷಣೆಗಳು ಮತ್ತು ತಾನಲ್ಲದೆ ಮತ್ತಾರೂ ರಾಜಕೀಯವಾಗಿ ಬೆಳೆಯಬಾರದೆಂದು ನೆಡೆಸಿದ್ದ ಪಿತೂರಿ. ವಿದೇಶಿ ವ್ಯಾಮೋಹಗಳಲ್ಲೇ ತೇಲಾಡಿದ ವ್ಯಕ್ತಿಯೊಬ್ಬರನ್ನು ಭಾರತದ ಪ್ರಧಾನಿಯಾಗಿ ಪಡೆದದ್ದು ಭಾರತದ ಹಣೆಬರಹವೆ ? ಮುಂದೆ ನೆಹರೂ ಮಾಡಿದ ಎಡವಟ್ಟುಗಳ ಫಲವನ್ನು ನಾವಿಂದಿಗೂ ಉಣ್ಣುತ್ತಲೇ ಇದ್ದೇವೆ. ನಿಜ, ಏಕವ್ಯಕ್ತಿಯನ್ನು ದೂರುವುದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ, ಆದರೆ ಅಂದಿನ ವಿದೇಶಾಂಗ ನೀತಿಗಳು  ಸ್ವದೇಶಿ ಆಚರಣೆಗೆ ಎಂತಹ ದೊಡ್ಡ ಪೆಟ್ಟುಕೊಟ್ಟಿತು ಎನ್ನುವುದನ್ನು ಪ್ರಜ್ಞಾವಂತರಾರೂ ಮರೆಯಲು ಸಾಧ್ಯವಿಲ್ಲ. ಅಂತೂ ಯಾವುದೋ ಒಂದು ದಾರಿಯ ಮೂಲಕ ವಿದೇಶಿಯರು ಭಾರತೀಯರ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಿಯೇ ಇಲ್ಲಿಂದ ಹೊರಟರು. ಕಾಂಗ್ರೇಸು "ಕ್ವಿಟ್ ಇಂಡಿಯಾ" ಎಂದರೆ ಸಾವರ್ಕರರು "ಕ್ವಿಟ್ ಇಂಡಿಯಾ ವಿತ್ ಬ್ಯಾಗ್ ಅಂಡ್ ಬ್ಯಾಗೇಜ್" ಎಂದಿದ್ದರು !. ಆದರೆ ಆಂಗ್ಲರು ತಮ್ಮ ಕುರುಹುಗಳನ್ನು ಭಾರತದಲ್ಲಿ ಬಿಟ್ಟು ಹೋಗಲು ಸಹಾಯ ಮಾಡಿದ್ದು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾದವರೆ !. ಇಲ್ಲಿಂದ ಮುಂದೆ ಗ್ಲಾಮರ್ ಪಡೆದುಕೊಂಡ ವಿದೇಶಿ ವ್ಯಾಮೋಹಗಳು ಇಂದಿಗೆ comfortabale ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. " ನನಗೆ ಈ ಡ್ರೆಸ್ comfortable ಆಗಿದೆ, ಅದಕ್ಕೆ ನಾನು ಧರಿಸುತ್ತೇನೆ, ಯಾರು ತಯಾರಿಸಿದ್ದರೆ ನನಗೇನು ? " ಎಂದು ಸವಾಲು ಹಾಕುವ ಯುವಸಮುದಾಯಕ್ಕೆ ತಾವು ಪರೋಕ್ಷವಾಗಿ ವಿದೇಶಿ ಕಂಪನಿಗಳನ್ನು, ರಾಷ್ಟ್ರಗಳನ್ನು ಬೆಳೆಸುತ್ತಾ ಭಾರತವನ್ನು ಅಧೋಗತಿಗೆ ತಳ್ಳುತ್ತಿದ್ದೇವೆಂಬ ಕಲ್ಪನೆ ಇದ್ದೀತೆ?. ಮುಂದೊಂದು ದಿನ ಏನಕೇನ ಪ್ರಕಾರೇಣ ವಿದೇಶಿಯರ ಬೂಟು ನೆಕ್ಕುವ ಪರಿಸ್ಥಿತಿ ಬಂದಾಗಲೆ ಅಂತಹ ಸಮುದಾಯಕ್ಕೆ ಸ್ವತಂತ್ರದ ಮಹತ್ವ ಅರಿವಾಗಬಹುದು. ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಭಾರತವೂ ಅದಕ್ಕೆ ಸಮಾನಾಂತರವಾಗಿ ಬೆಳೆಯಬೇಕೆಂಬುದು ಸಮಂಜಸವೇ ಆದರೂ ಅಂತಹ ಪೂರಕ ಬೆಳವಣಿಗೆಯಲ್ಲಿ ಭಾರತೀಯತೆ ಇದ್ದಷ್ಟೂ ನಮ್ಮ ನೆಲ ಗಟ್ಟಿಯಾಗುತ್ತಾ ಹೋಗುತ್ತದೆ. ದೇಶಕ್ಕೆ contribute ಮಾಡುವ ಮನೋಭಾವ ವಿದೇಶಿಗಳಲ್ಲಿರುವುದೇ ಆಯಾ ದೇಶಗಳು ಹೆಚ್ಚಿನ ಪ್ರಗತಿ ಸಾಧಿಸಲು ಕಾರಣವಾಗಿದೆಯೆನ್ನಬಹುದು. ಹಾಗಾದರೆ ಭಾರತೀಯರು ದೇಶಕ್ಕೆ ಕೊಡುಗೆ ನೀಡುವುದಿಲ್ಲವೆ ? ,ಇಲ್ಲಿ ಕೊಡುಗೆ ನೀಡುವ ಪ್ರಶ್ನೆಗಿಂತಲೂ ಅಂತಹ ಕೊಡುಗೆ ಭಾರತದ ಪ್ರಭುತ್ವದಲ್ಲಿ ಸದ್ವಿನಿಯೋಗವಾಗುತ್ತದೆ ಎಂಬುದರ ಬಗ್ಗೆ ಯಾವ ಪ್ರಜ್ಞಾವಂತ ನಾಗರೀಕನಿಗೂ ನಂಬಿಕೆ ಉಳಿದಿಲ್ಲ. ಅಂತಹ ನಂಬಿಕೆಯನ್ನು ಭಾರತವನ್ನಾಳಿದ-ಆಳುತ್ತಿರುವ ಪ್ರಭುಗಳು ಉಳಿಸಿಕೊಂಡಿಲ್ಲವೆಂಬುದು ಸರ್ವವಿದಿತ. ಭಾರತೀಯರ ಇಂತಹ ದೌರ್ಬಲ್ಯಗಳು ವಿದೇಶಗಳಿಗೆ ಮಾರುಕಟ್ಟೆಯ ವಸ್ತುವಾಗಿ ಬಿಡುತ್ತದೆ. ನಮ್ಮಲ್ಲೇ ತಯಾರಾಗುತ್ತಿದ್ದ ಹತ್ತಿಯ ಬಟ್ಟೆಗಳು ತಿರಸ್ಕರಿಸಲ್ಪಡುತ್ತವೆ ಮತ್ತು ವಿದೇಶಿ ಕಂಪೆನಿಯ 100% cotton ಎನ್ನುವ ಹಣೆಪಟ್ಟಿ ಇರುವ ಬಟ್ಟೆಗಳೇ ನಮಗೆ ಹೆಚ್ಚು ಆಕರ್ಷಣಿಯವಾಗುತ್ತದೆ.

ನಾಟಿ ತರಕಾರಿಗಳು, ಬೇಳೆ-ಕಾಳುಗಳನ್ನು ಬೆಳೆದು ತಿನ್ನುತ್ತಿದ್ದ ಭಾರತೀಯರಿಗೆ ದಪ್ಪನೆಯ ಟೋಮ್ಯಾಟೋ ತೋರಿಸಿ ಹೈಬ್ರಿಡ್ ತಳಿಯ ರುಚಿ ಹತ್ತಿಸಲಾಗುತ್ತದೆ. ಅಂತಹ ತಳಿಯನ್ನು ಬೆಳೆಯಲು ಬೀಜಗಳನ್ನು, ಸಸಿಗಳನ್ನು ಪೂರೈಸಲಾಗುತ್ತದೆ. ಅವುಗಳ ಬೆಳವಣಿಗೆಗೆ ಗೊಬ್ಬರ-ರಾಸಾಯನಿಕಗಳು ಬೇಕಾಗುವುದರಿಂದ ಅವುಗಳನ್ನೂ ವ್ಯವಸ್ಥಿತವಾಗಿ ಪೂರೈಸಲಾಗುತ್ತದೆ. ಹೀಗೆ ಬೆಳೆಯಲ್ಪಟ್ಟ ತರಕಾರಿ, ಕಾಳುಗಳಲ್ಲಿ ನಾಟಿ ಆಹಾರದಲ್ಲಿರುತ್ತಿದ್ದ ಪೋಷಕಾಂಶಗಳು ಇಲ್ಲವಾಗಿ ಕೇವಲ ಆಕರ್ಷಣೆಯ ವಸ್ತುವಾಗಿ ಮಾತ್ರ ಉಳಿಯುತ್ತದೆ. ಇಂತಹ ಆಕರ್ಷಣೆಗೆ ಭಾರತೀಯರು ಬಲಿಪಶುಗಳಾಗುತ್ತಾರೆ. ಇವಿಷ್ಟನ್ನೂ ಒಂದು ವಿದೇಶಿ ಕಂಪೆನಿ ವ್ಯವಸ್ಥಿತವಾಗಿ ಮಾಡುತ್ತದೆ. ಏಕೆಂದರೆ ವಿದೇಶಿಯರಿಗೆ ಮೇಯಲು ಭಾರತದಂತಹ ಹುಲ್ಲುಗಾವಲು ಇನ್ನೆಲ್ಲಿ ಸಿಕ್ಕೀತು ?

ಇಂತಹ ಅಪೌಷ್ಟಿಕ ಮತ್ತು chemically treated ಆಹಾರವನ್ನು ತಿನ್ನುವ ಭಾರತೀಯರಿಗೆ ಸಹಜವಾಗಿಯೇ ರೋಗಗಳು ಅಟಕಾಯಿಸಿಕೊಳ್ಳುತ್ತವೆ. (ಥಿಂಕಿಸಿ : ’ಅಸಿಡಿಟಿ’ ಎನ್ನುವ ಮಾರಿ ಈಗ್ಗೆ ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಎಷ್ಟೋ ಮಂದಿಗೆ ಗೊತ್ತೇ ಇರಲಿಲ್ಲ, ಈಗ ಅಸಿಡಿಟಿ ಇಲ್ಲದವರೇ ಇಲ್ಲ !) ಇಂತಹ ರೋಗಗಳಿಗೆಂದೇ ಮಾತ್ರೆಗಳು ಔಷಧಿಗಳು ತಯಾರಾಗುತ್ತವೆ. ಇದರ ಹಿಂದೆ ವಿದೇಶಿ 'pharma company' ಗಳ ದೊಡ್ಡ ಮಾಫಿಯಾವೆ ಇರುತ್ತದೆ. ಇದೊಂದು ರೀತಿ ಸರಪಳಿಯಂತೆ, ಒಂದರ ನಂತರ ಇನ್ನೊಂದು ಅನಿವಾರ್ಯವಾಗಿ ಬಿಡುತ್ತದೆ. ಭಾರತೀಯ ಸಾಯುತ್ತಾನೆ, ವಿದೇಶಗಳು ಉದ್ಧಾರವಾಗುತ್ತವೆ.

ಹೀಗೆ ಸಣ್ಣ-ಪುಟ್ಟ ವಿಷಯಗಳಲ್ಲೆಲ್ಲಾ ತಲೆ ಹಾಕುತ್ತಿರುವ ವಿದೇಶಿಗಳು ಭಾರತವನ್ನು ಮತ್ತೆ ತಮ್ಮ ವಸಾಹತನ್ನಾಗಿ ಮಾಡಿಕೊಳ್ಳುತ್ತಿರುವರೆ ? ನಾವು ಮತ್ತೆ ಅವರಿಗೆ ಅಡಿಯಾಳಾಗುವೆವೆ ? ಯೋಚಿಸಲೇಬೇಕಾಗುತ್ತದೆ. ಇನ್ನೊಂದು ಗಹನವಾದ ವಿಚಾರವನ್ನು ಗಮನಿಸೋಣ...
HIV ಯಿಂದ AIDS ಎಂಬ ಕಾಯಿಲೆ ಬರುತ್ತದೆ ಅನ್ನುವುದನ್ನು ಎಲ್ಲಾ ಮುಂದುವರಿಯುತ್ತಿರುವ ರಾಷ್ಟ್ರಗಳು ಒಪ್ಪಿಕೊಂಡು ಅದರ ವಿರುದ್ದದ ಹೋರಾಟಕ್ಕೆ ಯಾವ ಶಸ್ತ್ರಗಳು ಬೇಕೋ ಅದನ್ನೆಲ್ಲಾ ಸಿದ್ದವಾಗಿಟ್ಟುಕೊಂಡಿವೆ. AIDS ಎನ್ನುವುದು ಹೆಚ್ಚಾಗಿ ಕಂಡುಬರುತ್ತಿರುವುದು ಆಫ್ರಿಕಾದ ಹಿಂದುಳಿದ ರಾಷ್ಟ್ರಗಳಲ್ಲಿ ಮತ್ತು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ . ಅಮೇರಿಕ ಮತ್ತು ಯುರೋಪುಗಳಲ್ಲಿ AIDS ನ ಕಾಟ ಅಷ್ಟಾಗಿ ಇಲ್ಲವೆನ್ನಬಹುದು. ಹಾಗಾದರೆ HIV ಎನ್ನುವ ವೈರಾಣು AIDS ಎನ್ನುವುದನ್ನು ಉಂಟುಮಾಡುತ್ತದೆಯೆ ?  ಇಲ್ಲವೆನ್ನುತ್ತಾರೆ ಪ್ರಖ್ಯಾತ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು. ( ಗೂಗ್ಲಿಸಿ : Is there any proof that  HIV leads to AIDS ? ). ಯಾವ ವಿಜ್ಞಾನಿಯೂ ವೈರಾಣುವಿನಿಂದ AIDS ಹರಡುತ್ತದೆ ಎಂಬುದಕ್ಕೆ ಸರಿಯಾದ refference ಕೊಡುವುದಿಲ್ಲ. AIDS ನ ಕಲ್ಪನೆಯ ಹಿಂದೆ pharma industry ಗಳ ದೊಡ್ಡ ಮಾಫಿಯಾವೆ ಇದೆ ಎಂದು ಪ್ರತಿಭಟಿಸಿದ ಅಮೇರಿಕದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಯೊಬ್ಬರನ್ನು ಸದ್ದಿಲ್ಲದೆ ಭೂಗತನನ್ನಾಗಿ ಮಾಡಲಾಗುತ್ತದೆ. AIDS ಎನ್ನುವುದು ಮಹಾಮಾರಿ ಎಂಬಂತೆ ಚಿತ್ರಿಸಿ ತನ್ನ ಅಂಕೆಯಲ್ಲಿರುವ ದೇಶಗಳ ಮೇಲೆ ಅಮೇರಿಕ ಎಂಬ ದೊಡ್ಡಣ್ಣ pharma ಅಧಿಪತ್ಯವನ್ನು ಸ್ಥಾಪಿಸುತ್ತದೆ. ದಿಗಿಲು ಹುಟ್ಟಿಸುವ ವಿಚಾರವೆಂದರೆ, ಅಮೇರಿಕದ ಒಟ್ಟು ಆದಾಯದಲ್ಲಿ ಅರ್ಧ ಪಾಲು pharma indusrry ಗಳದ್ದೇ ಆಗಿದೆ ಎನ್ನುವುದು !.  ವಿಜ್ಞಾನಿಗಳೇ ಹೇಳುವಂತೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ AIDS ( ’ಸಿಂಡ್ರೋಮ್’ ಅನ್ನುವುದನ್ನು ವಿಜ್ಞಾನಿಗಳು ಇದುವರೆವಿಗೂ ಒಪ್ಪಿಲ್ಲ !)  ಎಂಬ ಕಾಯಿಲೆ ಬರುವ ಸಾಧ್ಯತೆ ಕೇಲವ ಶೇ ೨ ರಷ್ಟು ಮಾತ್ರ !.
ಹಾಗಾದರೆ ಇದು AIDS ( Aquired immune deficiency syndrome) ಅಲ್ಲವಾದರೆ ಮತ್ತೇನು ? ವಿಜ್ಞಾನಿಗಳಿಗೂ ಇದು ಪ್ರಶ್ನೆಯಾಗಿಯೇ ಇದೆ. ಇದನ್ನು failure of science ಎಂತಲೂ ಕೆಲವು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.  ಇಂತಹ AIDS ಅನ್ನು ತಡೆಗಟ್ಟಲೆಂದೋ ಅಥವ ಅರಿವು ಮೂಡೀಸಲೆಂದೋ NACO ಮುಂತಾದ ಸಂಸ್ಥೆಗಳು ಕೋಟಿಗಟ್ಟಲೆ ಹಣ ಬಾಚುತ್ತವೆ. ಮೂರು ಜಿಲ್ಲೆಗಳ ಉಸ್ತುವಾರಿ ಹೊರುವ ಒಬ್ಬ ಮೇಲ್ವಿಚಾರಕನಿಗೆ NACO ೩೦ ರಿಂದ ೫೦ ಸಾವಿರದವರಗೆ ಸಂಬಳ ನೀಡುತ್ತದೆಯೆಂದರೆ ಅದಕ್ಕೆ ಬರುತ್ತಿರುವ funding ಎಷ್ಟಿರಬಹುದು ಮತ್ತು ಅದರ ವ್ಯಾಪ್ತಿ ಎಷ್ಟಿರಬಹುದೆಂದು ಅಂದಾಜಿಸಿಕೊಳ್ಳಬೇಕಾಗುತ್ತದೆ. ಒಬ್ಬ AIDS ತಗುಲಿದೆ ಎನ್ನಲಾಗುವ ರೋಗಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದರೆ , ಆತನಿಗೆ ವಿದೇಶಗಳಿಂದಲೇ (U.S) ಔಷಧಿಗಳು ಪೂರೈಕೆಯಾಗಬೇಕು, ಮತ್ತು ಅಂತಹ ಔಷಧಿಗಳ ಬೆಲೆ ಸಾಮಾನ್ಯರಿಗೆ ಎಟುಕುವಂತಹುದಲ್ಲ. ಹೀಗೆ ತಮ್ಮ ಕರೆನ್ಸಿಗಳನ್ನು ಉತ್ತಮಪಡಿಸಿಕೊಳ್ಳುವ ಸಲುವಾಗಿ ಇತರೆ ರಾಷ್ಟ್ರಗಳನ್ನು ಸದಾ ಮರುಳು ಮಾಡುತ್ತಿರುವ ವಿದೇಶೀ ಕುಯುಕ್ತಿಗೆ ಭಾರತವೂ ಬಲಿಯಾಗಬೇಕೆ ?

ತಮ್ಮಲ್ಲಿರುವ ಹಳೆಯ ಶಸ್ತ್ರಾಸ್ತ್ರಗಳ ಹೊರದಬ್ಭುವಿಕೆಗೆ ವಿದೇಶಗಳು (ಪ್ರಮುಖವಾಗಿ U.S.) ಕಣ್ಣುಹಾಕುವುದು ಪಾಕಿಸ್ಥಾನ ಮತ್ತು ಭಾರತದಂತಹ ರಾಷ್ಟ್ರಗಳ ಮೇಲೆಯೆ. ಭಾರತವನ್ನು ಅದುಮಿಟ್ಟುಕೊಳ್ಳಲು ಪಾಕಿಸ್ಥಾನವನ್ನು ಮೆರೆಸುವ ವಿದೇಶಿ ಕೈಗಳು ಚೀನಾವನ್ನು ಹತ್ತಿಕ್ಕಲು ಭಾರತಕ್ಕೆ ಸಹಾಯ ಮಾಡುವ ಸೋಗು ಹಾಕುತ್ತವೆ. ಹಾಗೂ-ಹೀಗೂ ಅಭದ್ರತೆಯ ಭಯ ಹುಟ್ಟಿಸಿ  ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಮಾರುವ ಮೂಲಕ ಮತ್ತಷ್ಟು ಕರೆನ್ಸಿಗಳನ್ನು ತಮ್ಮ ಬೊಕ್ಕಸಕ್ಕೆ ತುಂಬಿಕೊಳ್ಳುತ್ತವೆ. ಇಲ್ಲೂ ಬಲಿಪಶುವಾಗುವುದು ಭಾರತದಂತಹ ರಾಷ್ಟ್ರಗಳೆ.

ನಗರೀಕರಣದ ಭರದಲ್ಲಿ ಅತಿಯಾದ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅದನ್ನೇ ತತ್ವಾದರ್ಶವೆಂದು ನಂಬಿ ಬದುಕಲು ಹೊರಟಿರುವ  ಯುವಸಮುದಾಯಕ್ಕೆ  ಇತ್ತೀಚಿಗೆ ಎರಡು ತಿಂಗಳುಗಳಿಂದ ನಡೆಯುತ್ತಿರುವ ಕಾಶ್ಮೀರದ ಹಿಂಸೆ ಎಚ್ಚರಿಕೆಯ ಗಂಟೆಯಾಗಬೇಕಿದೆ. ಸಂಪೂರ್ಣ ಭಾರತೀಯರದ್ದೇ ನೆಲವಾಗಿದ್ದ ಕಾಶ್ಮೀರ ಇಂದು ವಿದೇಶೀ ಶಕ್ತಿಗಳ ಕೈವಾಡದಿಂದಾಗಿ ಭಾರತದ ಕೈತಪ್ಪಿ ಹೋಗುವ ಸ್ಥಿತಿ ಉದ್ಭವವಾಗುತ್ತಿದೆ. ಮುಂದೆ ಅದು ಜಮ್ಮು, ಡೆಹ್ರಾಡೂನ್, ದಿಲ್ಲಿಯವರೆಗೂ ವ್ಯಾಪಿಸಲಾರದು ಎನ್ನುವುದನ್ನು ಸುಖಾಸುಮ್ಮನೆ ತಳ್ಳಿಹಾಕಲಾಗುವುದಿಲ್ಲ.  ಇಷ್ಟಕ್ಕೂ ವಿದೇಶಿ ಆಚರಣೆಗಳಿಗೇ ಮಣೆಹಾಕಿ ಅವರಿಗೇ ಬಹುಪರಾಕ್ ಹೇಳಿ ಮುಂದೊಂದು ದಿನ ನಾವೆಲ್ಲಾ ಅಡಿಯಾಳುಗಳಾದರೆ, ವಿದೇಶಿಯರೇನೂ ನಮ್ಮನ್ನು ಸಿಂಹಾಸನದಲ್ಲಿ ಕುಳ್ಳಿರಿಸುತ್ತಾರೆಯೆ ? ಖಂಡಿತ ಇಲ್ಲ !. ಅವರ ಬೂಟು ಪಾಲೀಶಿಗೋ, ಮಲ ಹೊರುವುದಕ್ಕೋ, ಬಟ್ಟೆ ಒಗೆದುಕೊಡಲೋ ನಮ್ಮನ್ನು ಉಪಯೋಗಿಸಿಕೊಳ್ಳುವುದು ನಿಶ್ಚಿತ.  ಅಣುಬಾಂಬುಗಳನ್ನು ಹೊಂದಿರುವ ಭಾರತ ಎಂತಹ ವಿಪತ್ತನ್ನಾದರೂ ಎದುರಿಸತ್ತದೆ ಎಂದು ಧೈರ‍್ಯವಾಗಿ ಹೇಳಿಕೊಂಡರೂ , ನಮ್ಮ ಭೃಷ್ಟಚಾರದ ಪ್ರಭುತ್ವ ಅಂತಹ ವಿಪತ್ತನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆಯೇ ಎನ್ನುವುದನ್ನು ವಿಮರ್ಷಿಸಬೇಕಾಗಿದೆ. ಇತ್ತೀಚೆಗೆ ಅಂಡಮಾನಿನ ಸೆಲ್ಯುಲರ್ ಜೈಲಿನ ಹೊರಭಾಗದಲ್ಲಿ ಸಾವರ್ಕರ್ ನೆನಪಿಗೆ ಸ್ಥಾಪಿಸಲಾಗಿದ್ದ ಸ್ಮಾರಕವೊಂದನ್ನು ಕಿತ್ತೊಗೆಸಿದ ’ಮಣಿಶಂಕರ್ ಅಯ್ಯರ್’ ರಂತಹ ಎಡಬಿಡಂಗಿ ಜನನಾಯಕರಿರುವ ಭಾರತದಲ್ಲಿ ಭಾರತೀಯರು ಬಲಿಪಶುವಾಗದೇ ಮತ್ತೇನು ಆಗಲು ಸಾಧ್ಯ ?

ಭಾರತದಲ್ಲಿ ವಿದೇಶಿಗಳಿಗಿಂತಲೂ ಅತ್ಯಂತ ಬುದ್ಧಿವಂತ ವೈದ್ಯರುಗಳು, ಇಂಜಿನಿಯರುಗಳು, ಶಿಕ್ಷಕರು, ತತ್ವಜ್ಞಾನಿಗಳು, ಇದ್ದಾರೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇವರೆಲ್ಲರ ಶಕ್ತಿ ವ್ಯಯವಾಗುತ್ತಿರುವುದು ವಿದೇಶಿ ಕಂಪೆನಿಗಳಿಗಾಗಿ,  ವಿದೇಶಿಗಳಿಗಾಗಿ ಎಂಬ ಕಹಿಸತ್ಯವನ್ನು ನಾವು ಅರಗಿಸಿಕೊಳ್ಳಲೇಬೇಕಿದೆ. ಭೃಷ್ಟ ಭಾರತೀಯ ಪ್ರಭುತ್ವವು ಭಾರತೀಯ ವಿದ್ಯಾವಂತರನ್ನು ನಡೆಸಿಕೊಳ್ಳುವ ಪರಿಯೇ ಹಾಗಿದೆ. ಸರ್ಕಾರದ ಅಧೀನಕ್ಕೊಳಪಡುವ ಗ್ರಾಮಪಂಚಾಯ್ತಿಯ ಗ್ರಾಮಲೆಕ್ಕಿಗನಿಂದಲೇ ಲಂಚಾವತಾರದ ಪ್ರಹಸನ ಪ್ರಾರಂಭವಾಗುತ್ತದೆ ಮತ್ತು ಇದು ದಿಲ್ಲಿ ಗದ್ದುಗೆಯವರೆಗೂ ತಲುಪುತ್ತದೆ ಎಂದರೆ, ಭೃಷ್ಟಾಚಾರದ ಜಾಲ ಎಂತಹುದು ಎಂಬುದನ್ನು ಯೋಚಿಸಬೇಕಾಗುತ್ತದೆ. ೩೦೦ ವರ್ಷಗಳ ಹಿಂದೆ ’ಈಸ್ಟ್ ಇಂಡಿಯಾ ಕಂಪೆನಿ’ ಹೆಸರಿನಲ್ಲಿ ಭಾರತಕ್ಕೆ ಕಾಲಿಟ್ಟ ವಸಾಹತುಗಳು ಇಂದು ’ಬಹುರಾಷ್ಟ್ರೀಯ ಕಂಪೆನಿ’ ಎಂಬ ಹೆಸರಿನಲ್ಲಿ ಬಂದಿವೆ. ಇದರಿಂದ ಯಾರ‍್ಯಾರಿಗೆ ಎಷ್ಟು ಉಪಯೋಗವಾಗಿದೆಯೋ, ಅಂತೂ ಇದರ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳಿಗೆ ಅಂತಿಮವಾಗಿ ಭಾರತವೇ ಬಲಿಪಶುವಾಗಬೇಕಿದೆ. ಇದಕ್ಕೆಲ್ಲಾ ನಿಯಂತ್ರಣ ತರಲು ಸಾಧ್ಯವಿಲ್ಲವೆ ಎಂದು ಚಿಂತಿಸಿದರೆ, ಅದರ ಬೇರುಗಳು ನಮ್ಮ ದೇಶದ ವ್ಯವಸ್ಥೆಯನ್ನೇ ಅಣಕಿಸುತ್ತಾ ನಿಲ್ಲುತ್ತವೆ........ ತಪ್ಪು ಯಾರದು ?


..................................................................................................................................
ಮಾಹಿತಿ ಸಹಕಾರ: ಮೈಸೂರಿನ CFTRI ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಆತ್ಮೀಯ ಮಿತ್ರ.

................................................................................................................................


ಕೊನೆಕಿಡಿ:

ನಿತ್ಯವೂ ಮನೆಯಲ್ಲಿ ಶಂಭುಲಿಂಗನದೇ ನಳಪಾಕ.  ಹೀಗೊಮ್ಮೆ ರಾತ್ರಿಯ ಊಟದ ನಂತರ ಶಂಭು ತನ್ನ ಮಗನಿಗೆ ತತ್ವವೊಂದನ್ನು ಹೇಳಿದ
"ಮಗನೇ, ಕೆಟ್ಟದನ್ನು ನಾವು ದೂರವಿಡಬೇಕು " ಎಂದ. ಮರಿಲಿಂಗ ತಲೆಯಾಡಿಸಿದ.
ಶಂಭು ಮತ್ತೆ ಕೇಳಿದ
"ಅರ್ಥವಾಯಿತೇನೋ ನಾನು ಹೇಳೀದ್ದು"
"ಹೂಂ ಅಪ್ಪ " ಮರಿಲಿಂಗ ಹೇಳಿದ
"ಏನೋ ನಾನು ಹೇಳಿದುದರ ಅರ್ಥ ? "
"ನೀನು ಮಾಡುವ ಅಡುಗೆ ತಿನ್ನಬಾರದು ಅಂತ ಅಪ್ಪಾ ! " ....ಅಪ್ಪ ಬೆಪ್ಪನಾದ !.

Aug 17, 2010

ಪಂಚಾಗ್ನಿ

ಭಾರತೀಯ ಅಥವ ಹಿಂದೂಗಳ ತತ್ವಸೌಧಕ್ಕೆ  ವೇದೋಪನಿಷತ್ತುಗಳೆ  ಆಧಾರಸ್ತಂಭಗಳು.  ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳನ್ನು ಪ್ರಸ್ಥಾನತ್ರಯಗಳೆಂದು ಗೌರವಿಸಲಾಗಿದೆ.  ತತ್ವ, ತರ್ಕ ಮತ್ತು ಮೀಮಾಂಸೆಗಳ ವಿಷಯ ಹೇಳುವವರು ಈ ಪ್ರಸ್ಥಾನತ್ರಯದ ಮೂಲಕ ಹೇಳಿದರೆ ಪ್ರಮಾಣ ದೊರಕುತ್ತದೆ. ಇಲ್ಲವಾದರೆ ಅಂತಹ ವಿಚಾರಗಳು ಪುರಸ್ಕೃತವಾಗುವ ಸಂಭವನೀಯತೆ ಅತ್ಯಲ್ಪ. ಆದಕಾರಣವೇ, ಪ್ರಸ್ಥಾನತ್ರಯದ ಮೇಲೆ ಬಹಳಷ್ಟು ಭಾಷ್ಯಗಳು, ಟೀಕೆಗಳು, ತಾತ್ಪರ್ಯಗಳು ಹುಟ್ಟಿಕೊಂಡಿರುವುದು. ಉಪನಿಷತ್ತುಗಳು ಅತ್ಯಂತ ಪ್ರಾಚೀನವಾದವುಗಳು. ಇವುಗಳು ವೇದಗಳಲ್ಲಿ ಬರುವಂತಹವು (ಜ್ಞಾನಕಾಂಡ). ಇದನ್ನು ವೇದಾಂತ ಎನ್ನಲಾಗಿದೆ.   ಪ್ರಮುಖವಾಗಿ ಹತ್ತು ಉಪನಿಷತ್ತುಗಳನ್ನು ಹೆಸರಿಸಬಹುದು. ಅವುಗಳೆಂದರೆ.... ಮಾಂಡೂಕ್ಯೋಪನಿಷತ್ತು, ಕೇನೋಪನಿಷತ್ತು, ಕಠೋಪನಿಷತ್ತು, ತೈತ್ತರೀಯೋಪನಿಷತ್ತು, ಐತರೇಯ ಉಪನಿಷತ್ತು, ಮುಂಡಕೋಪನಿಷತ್ತು, ಈಶಾವಾಸ್ಯೋಪನಿಷತ್ತು, ಪ್ರಶ್ನೋಪನಿಷತ್ತು, ಛಾಂದೋಗ್ಯ ಉಪನಿಷತ್ತು ಮತ್ತು  ಬೃಹ ದಾರಣ್ಯಕ ಉಪನಿಷತ್ತು.  ಉಪನಿಷತ್ತುಗಳಲ್ಲಿ ಆತ್ಮಸಾಕ್ಷಾತ್ಕಾರ, ಅದ್ವೈತ ದರ್ಶನ, ಹುಟ್ಟು-ಸಾವಿನ ಪ್ರಶ್ನೆಗಳು,  ಅತ್ಮದ ಸ್ವರೂಪ ಮತ್ತು ಸೃಷ್ಟಿಯ ವಿಚಾರಗಳು ವಿಸ್ತೃತವಾಗಿ ಹೇಳಲ್ಪಟ್ಟಿದೆ.  ಆತ್ಮಕ್ಕೆ ಅಳಿವಿಲ್ಲ ದೇಹಕ್ಕಷ್ಟೆ ಅಳಿವು ಎಂಬುದನ್ನು ಹಲವು ತೆರನಾಗಿ ವಿವರಿಸಲಾಗಿದೆ.  ಇಲ್ಲಿ ಆತ್ಮದ ಚಿರಂತನವನ್ನು ಪ್ರಾಯೋಗಿಕವಾಗಿ ಸಿದ್ದೀಕರಿಸುವ ವಿಚಾರ ಬಂದಾಗ ಗೊಂದಲಗಳು ಏಳುವುದು ಸಹಜ. ಶತಮಾನಗಳಷ್ಟು ಹಿಂದೆ ಜ್ಞಾನಿಗಳು ಕಂಡುಕೊಂಡಿದ್ದ ಈ ವಿಚಾರಗಳು ಪ್ರಾಯೋಗಿಕವಾಗಿ ಮತ್ತು ಸ್ವಾನುಭವದಿಂದಲೇ ಬಂದದ್ದಿರಬಹುದಲ್ಲವೆ ? ಏಕೆಂದರೆ , ರಸಾಯನಶಾಸ್ತ್ರದ ’ಬ್ರೌನ್ ರಿಂಗ್’ ಟೆಸ್ಟ್ ಅನ್ನು ಪ್ರಾಯೋಗಿಕವಾಗಿ ಸಿದ್ದಿಸಿ ತೋರಿಸಲು ವಿಧ್ಯಾರ್ಥಿಯೋರ್ವನಿಗೆ ಹೇಳಿದರೆ ಆತ ಈ ಹಿಂದೆ ವಿಜ್ಞಾನಿಗಳು ಕಂಡುಕೊಂಡಿರುವ ವಿಧಾನವನ್ನೇ ಅನುಸರಿಸಿ ಪ್ರಯೋಗ ಮಾಡಬೇಕಾಗುತ್ತದೆ. ಹಾಗೆ ಮಾಡಿಯೂ ಆತನಿಗೆ ಪ್ರಥಮ ಪ್ರಯತ್ನದಲ್ಲಿ ಸರಿಯಾದ ಫಲಿತಾಂಶ ದೊರೆಯದೆ ’ಬ್ರೌನ್ ರಿಂಗ್’ ಬರದೇ ಹೋದರೆ ಅದು ಈ ಹಿಂದೆ ಪ್ರಯೋಗದ ಮೂಲಕ ಪ್ರತಿಪಾದಿಸಿರುವ ವಿಜ್ಞಾನಿಯ ತಪ್ಪೇ ? ಅಂತಹ ಪ್ರಯೋಗವನ್ನು ಕೇವಲ ಬೊಗಳೆ ಎಂದು ತಳ್ಳಿಹಾಕಬಹುದೆ ? ನಿಜವಾಗಿಯೂ ಅದು ಆ ವಿಧ್ಯಾರ್ಥಿಯ ಕಲಿಕೆಯ ಮತ್ತು ತಾಳ್ಮೆಯ ಪ್ರಶ್ನೆಯಾಗಿರುತ್ತದೆ. ಎಂಟು-ಹತ್ತು ಬಾರಿ ಏಕಾಗ್ರತೆಯ ಮೂಲಕ ಪ್ರಯೋಗ ಮಾಡಿದಾಗ ಆ ವಿದ್ಯಾರ್ಥಿಯು ಸಮರ್ಪಕ ಫಲಿತಾಂಶವನ್ನು ಪಡೆಯಬಹುದಾಗಿರುತ್ತದೆ. ಹಾಗೆಯೇ ವೇದ ಮತ್ತು ಉಪನಿಷತ್ತುಗಳ ವಿಚಾರಗಳನ್ನೂ  ಸಹ ಶತಮಾನಗಳ ಹಿಂದೆಯೇ ಪ್ರಾಜ್ಞರು ಪ್ರಾಯೋಗಿಕವಾಗಿ ಸಿದ್ದೀಕರಿಸಿಕೊಂಡು ಮುಂದಿನ ಪೀಳಿಗೆಗಾಗಿ ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿ ಬಿಟ್ಟು ಹೋಗಿದ್ದಾರೆನ್ನಬಹುದು. ಇವುಗಳಿಂದ ಸಮರ್ಪಕ ಫಲಿತಾಂಶ ಪಡೆಯುವಷ್ಟು ತಾಳ್ಮೆ , ಆಸಕ್ತಿ ಮತ್ತು ಶಕ್ತಿ ನಮ್ಮಲ್ಲಿರಬೇಕಷ್ಟೆ. ಅಂತಹ ಉತ್ತಮ ಪಲಿತಾಂಶವನ್ನು ಪಡೆಯಲು ಎರಡು ಪ್ರಮುಖ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಒಂದು ಧ್ಯಾನ ಮತ್ತು ಎರಡನೆಯದು ಯೋಗ.

ಪ್ರಸ್ತುತ ಇಲ್ಲಿ ಛಾಂದೋಗ್ಯ ಉಪನಿಷತ್ತಿನಲ್ಲಿ  ಬರುವ ಮೂವತ್ತೆರಡು ವಿದ್ಯೆಗಳ (ವಿದ್ಯೆ = ಜ್ಞಾನ=ಧ್ಯಾನ ) ಪೈಕಿ ಪಂಚಾಗ್ನಿ ವಿದ್ಯೆಯ ಬಗೆಗೆ ಸಂಕ್ಷಿಪ್ತವಾಗಿ ವಿಚಾರ ಮಾಡೋಣ.
ಛಾಂದೋಗ್ಯ ಉಪನಿಷತ್ತಿನಲ್ಲಿ ವೈಶ್ವಾನರ ವಿದ್ಯೆ, ಸತ್ಯಕಾಮ ವಿದ್ಯೆ, ಪುರುಷ ವಿದ್ಯೆ, ಗಾಯತ್ರಿ ವಿದ್ಯೆ, ಪಂಚಾಗ್ನಿ ವಿದ್ಯೆ..ಇತ್ಯಾದಿ ಧ್ಯಾನಸಂಬಂಧೀ ವಿದ್ಯೆಗಳು ವಿವರಿಸಲ್ಪಟ್ಟಿದೆ. ಪಂಚಾಗ್ನಿ ವಿದ್ಯೆಯೆಂಬುದು ಐದು ರೀತಿಯ ಅಗ್ನಿಗಳ  ಬಗೆಗೆ ತಿಳಿಯುವ ಜ್ಞಾನವಾಗಿದೆ.  ಜಗತ್ತಿನಲ್ಲಿ ಜೀವಿಗಳು ಬರುವುದು ಮತ್ತು ಹೋಗುವುದು ನಡದೇ ಇರುತ್ತದೆ. ಇದನ್ನು ಸಂಸಾರಚಕ್ರವೆನ್ನಬಹುದು. ಇಂತಹ ಚಕ್ರವು ಹೇಗೆ ನಡೆಯುತ್ತದೆ ? ಜೀವಿಗಳು ಬರುವುದು ಮತ್ತು ಹೋಗುವುದು ಎಂದರೇನು ?  ಪಂಚಾಗ್ನಿ ವಿದ್ಯೆಯು ಈ ಪ್ರಶ್ನೆಗಳ ಅಂತರಾಳವನ್ನು ಹೊಕ್ಕಿ ಉತ್ತರವನ್ನು ಹೇಳುತ್ತದೆ.  ಉಪನಿಷತ್ತಿನ ಈ ಧ್ಯಾನದ ವಿದ್ಯೆಯು ಹುಟ್ಟು ಮತ್ತು ಸಾವು ಎಂಬ ಸ್ವಾಭಾವಿಕ ನಡಾವಳಿಯ ಬಗೆಗೆ ವಿಚಾರಮಾಡುತ್ತದೆ ಮತ್ತು ಇದು ಒಂದು ಕತೆಯ ಮೂಲಕ ಪ್ರಾರಂಭವಾಗುತ್ತದೆ.

ಮಹಾ ಜ್ಞಾನಿಯಾದ ಉದ್ಧಾಲಕ ಆರುಣಿಯ ಮಗನಾದ ಶ್ವೇತಕೇತುವೆಂಬ ವಿದ್ಯಾರ್ಥಿಯು ಅತ್ಯಂತ ಸಮರ್ಪಕವಾಗಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುತ್ತಾನೆ. ಆತನಿಗೆ ತಾನಿನ್ನೇನೂ ಕಲಿಯಲು ಉಳಿದಿಲ್ಲವೆಂಬ ವಿಚಾರವೂ ತನ್ನಷ್ಟಕ್ಕೆ ಮನದಟ್ಟಾಗಿರುತ್ತದೆ. ಆತನ ತಂದೆಯೂ ಮಗನಿಗೆ ಸರ್ವವಿದ್ಯಾಪಾರಂಗತನೆಂದು ಹರಸಿರುತ್ತಾನೆ.  ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಕ್ಷತ್ರಿಯ ರಾಜನಾದ ಪ್ರವಾಹಣ ಜೈವಲಿಯ ಮುಂದೆ ಪ್ರದರ್ಶಿಸಬೇಕೆಂಬ ಆಕಾಂಕ್ಷೆಯಿಂದ ರಾಜನಲ್ಲಿಗೆ ತೆರಳುತ್ತಾನೆ. ಶ್ವೇತಕೇತುವನ್ನು ರಾಜನು ಆದರದಿಂದ ಬರಮಾಡಿಕೊಂಡು ಕುಶಲೋಪರಿಯನ್ನು ವಿಚಾರಿಸಿ,  ತನ್ನಲ್ಲಿಗೆ ಆಗಮಿಸಿದ ವಿಚಾರವನ್ನು ತಿಳಿಯಬಯಸುತ್ತಾನೆ. ಶ್ವೇತಕೇತುವು ತನ್ನ ವಿದ್ಯಾಪಾಂಡಿತ್ಯವನ್ನು ಪ್ರದರ್ಶಿಸಲು ಬಂದಿರುವುದಾಗಿ ಹೇಳಿದಾಗ, ರಾಜನು ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆ ಸಂಭಾಷಣೆ ಹೀಗಿದೆ..

ರಾಜ :  ತಾವು ಸಂಪೂರ್ಣ ಜ್ಞಾನಿಗಳಾಗಿರುವಿರೋ ? ನಿಮ್ಮ ವಿದ್ಯಾಭ್ಯಾಸ ಮುಗಿದಿರುವುದೇ ? ಗುರುಗಳು ನಿಮ್ಮ ವಿದ್ಯೆ ಪೂರ್ಣಗೊಂಡಿರುವುದಕ್ಕೆ ಅಂಕಿತನ್ನು ಹಾಕಿದ್ದಾರೆಯೇ ?

ಶ್ವೇತ  :  ಹೌದು. ನನ್ನ ವಿದ್ಯಾಭ್ಯಾಸ ಸಂಪೂರ್ಣವಾಗಿದೆ. ಗುರುಗಳು ನನ್ನನ್ನು ಹರಸಿದ್ದಾರೆ.

ಹೀಗೆಂದ ಶ್ವೇತಕೇತುವಿಗೆ ರಾಜನು ೫ ಮರುಪ್ರಶ್ನೆಗಳನ್ನು ಕೇಳುತ್ತಾನೆ. ಅವುಗಳೆಂದರೆ,

೧)  ಈ ಪ್ರಪಂಚವನ್ನು ತೊರೆದ ನಂತರ ಜೀವಿಗಳು ಎಲ್ಲಿಗೆ ಹೋಗುತ್ತವೆಂದು ನಿಮಗೆ  ತಿಳಿದಿದೆಯೆ ?
೨) ಈ ಜಗತ್ತಿಗೆ ಜೀವಿಗಳು ಬರುವ ಮುನ್ನ ಅವು ಎಲ್ಲಿರುತ್ತವೆ ಮತ್ತು ಹೇಗೆ ಹುಟ್ಟುತ್ತವೆಯೆಂದು ನಿಮಗೆ ತಿಳಿದಿದೆಯೆ ?
೩) ಜೀವಿಯು ಹುಟ್ಟುವ ಮುನ್ನ ಅವು ನಡೆದು ಬರುವ ದಾರಿಯು ನಿಮಗೆ ತಿಳಿದಿದಿಯೆ ?
೪) ಇಡೀ ಜಗತ್ತು  ಜೀವಿಗಳಿಂದ ಸಂಪೂರ್ಣ ತುಂಬಿಕೊಳ್ಳದೆ ಮರಣಗಳ ಮೂಲಕ ಸಮತೋಲವಾಗುತ್ತಿರುವುದು ಏಕೆಂದು ನಿಮಗೆ ತಿಳಿದಿದೆಯೆ ?
೫) ಜೀವಿಯು ಮಾನವರೂಪ ತಾಳಿ ಬರುವ ಕ್ರಿಯೆಯು ನಿಮಗೆ ತಿಳಿದಿದೆಯೆ ?

ರಾಜನು ಕೇಳಿದ ಮೇಲಿನ ಐದೂ ಪ್ರಶ್ನೆಗಳಿಗೂ ಶ್ವೇತಕೇತುವು ಉತ್ತರಿಸಲಾಗದೆ ಹೋಗುತ್ತಾನೆ. ನಂತರ ತನ್ನ ವಿದ್ಯೆಯು ಅಪೂರ್ಣವೆಂದು ರಾಜನಲ್ಲಿ ಒಪ್ಪಿಕೊಂಡು ಐದು ಪ್ರಶ್ನೆಗಳಿಗೂ ತನಗೆ ಉತ್ತರ ತಿಳಿಸಬೇಕೆಂದು ವಿನಂತಿಸುತ್ತಾನೆ.  ರಾಜನು ಆತನಿಗೆ ತನ್ನ ಶಿಷ್ಯನಾಗಿ ಬರಲು ತಿಳಿಸುತ್ತಾನೆ ಮತ್ತು ಕೆಲವು ಧ್ಯಾನ ಮತ್ತು ಯೋಗಗಳನ್ನು ತಿಳಿಸಿಕೊಡುತ್ತಾನೆ. ಒಂದು ದಿನ ರಾಜನು ಶ್ವೇತಕೇತುವಿನ ಸಂದೇಹಕ್ಕೆ ಪರಿಹಾರವನ್ನು ಹೇಳುತ್ತಾ ಪಂಚಾಗ್ನಿಯ ವಿಚಾರವನ್ನು ಹೀಗೆ ಹೇಳುತ್ತಾನೆ.

"ಶರೀರದಲ್ಲಿ ಜನಿಸಲು ಸುಖಸ್ಥಾನದಿಂದ ಹಿಂತಿರುಗಿ ಬರುವ ಆತ್ಮವು ಹೊಸಶರೀರವನ್ನು ಪಡೆಯಲು ಐದು ಅಗ್ನಿಗಳ ಮೂಲಕ ಹಾದುಹೋಗಬೇಕಾಗುತ್ತದೆ. ಸಹಜವಾಗಿ ಅಗ್ನಿಯು ಶರೀರ ಮತ್ತು ವಸ್ತುಗಳನ್ನು ದಹಿಸುತ್ತದೆ. ಹಾಗಿರುವಾಗ ಅದನ್ನು ರೂಪಗಳ ಜನಕವೆಂದು ಹೇಗೆ ಕರೆಯಬಹುದು ? ಆತ್ಮವು ಐದು ಅಗ್ನಿಗಳ ಮೂಲಕ ಹಾದು ಬರುವುದು ಹೇಗೆ ? .

 ಅಗ್ನಿಗೆ ಎರಡು ಪ್ರಮುಖ ಕ್ರಿಯೆಗಳಿವೆ.
೧) ಸೃಷ್ಟಿ ಮತ್ತು ನಾಶ
೨) ಆತ್ಮಗಳಿಗೆ ಸೂಕ್ಷ್ಮ ಶರೀರಗಳನ್ನು ರಕ್ಷಿಸಿಡುವುದು.

ಆತ್ಮವು ಐದು ಹಂತಗಳನ್ನು ದಾಟಿ ಬರುವಾಗ , ಒಂದೊಂದು ಹಂತದಲ್ಲೂ ಒಂದೊಂದು ಸೂಕ್ಷ್ಮ ಶರೀರವನ್ನು ಅಗ್ನಿಯು ಒದಗಿಸಬೇಕಾಗುತ್ತದೆ.
ಸುಖಸ್ಥಾನ(ಸ್ವರ್ಗವೇ?) ದಲ್ಲಿ ಆತ್ಮಕ್ಕೆ ಅಗ್ನಿಯು ಸೂಕ್ಷ್ಮವಾದ ಮಾನಸಿಕ ರೂಪನೆಲೆ ಕೊಟ್ಟಿರುತ್ತದೆ. ಮೊದಲನೆಯ ಅಗ್ನಿಹೋತ್ರ ಅಥವ ಹೋಮವು ಅಲ್ಲೇ ನಡೆಯುತ್ತದೆ.
ಎರಡನೆಯದು ಜ್ಯೋತಿರ್ಲೋಕದಲ್ಲಿ ಅಂದರೆ ಆತ್ಮವು ಸುಖಸ್ಥಾವನ್ನು ಬಿಟ್ಟು ನಂತರದ ಹಂತಕ್ಕೆ ಬಂದಾಗ  ನಡೆಯುತ್ತದೆ. ಜ್ಯೋತಿರ್ಲೋಕವೆಂದರೆ ಆತ್ಮಕ್ಕೆ  ಸಂಪೂರ್ಣ ಭೌತಿಕ ಶಕ್ತಿಯನ್ನು ಒದಗಿಸುವ ಹಂತ. ಅಲ್ಲಿ ಎರಡನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ಮೂರನೆಯದು ಜಗತ್ತಿನ ಭೌತಿಕ ನೆಲೆಯಲ್ಲಿ ಮನುಷ್ಯ ಶರೀರದಲ್ಲಿ ಸೂಕ್ಷ್ಮರೂಪದಲ್ಲಿ ನಡೆಯುತ್ತದೆ. ಮನುಷ್ಯರು ಸೇವಿಸುವ ಅನ್ನಾಹಾರಗಳಲ್ಲಿ ಬೆರೆತುಹೋಗುತ್ತದೆ. ಇಲ್ಲಿ ಮೂರನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ನಾಲ್ಕನೆಯದು, ಮನುಷ್ಯರು ತಿಂದ ಆಹಾರದಲ್ಲಿ ಪ್ರಾಣಾಗ್ನಿಹೋತ್ರವಾಗಿ ಸಂಭವಿಸುತ್ತದೆ. ಜೀರ್ಣವಾದ ಆಹಾರದಲ್ಲಿ ಬೆರೆತು ಪುರುಷನಲ್ಲಿ ವೀರ್ಯವನ್ನೂ, ಸ್ತ್ರೀಯಲ್ಲಿ ಅಂಡಾಣುಗಳನ್ನು ಉತ್ಪತ್ತಿಮಾಡುವುದರ ಮೂಲಕ ಸೂಕ್ಷ್ಮರೂಪದಲ್ಲಿ ಶರೀರವನ್ನು ಪಡೆದುಕೊಳ್ಳುತ್ತದೆ ಮತ್ತು ನಾಲ್ಕನೆಯ ಹೋಮವಾಗಿ ಪರಿಗಣಿತವಾಗುತ್ತದೆ.
ಪುರುಷನ ವೀರ್ಯವು ಸ್ತ್ರೀಯ ಗರ್ಭವನ್ನು ಪ್ರವೇಶಿಸಿದಾಗ ಐದನೆಯ ಹೋಮವು ನಡೆಯುತ್ತದೆ. ಐದನೆಯ ಅಗ್ನಿಹೋತ್ರವು ನಡೆಯುವುದರ ಮೂಲಕ ಆತ್ಮಕ್ಕೆ ಭೌತಿಕ ದೇಹವು ಲಭಿಸಿ ಶರೀರವು ರಚನೆಯಾಗುತ್ತದೆ " .

ರಾಜನ ಮಾತನ್ನು ಕೇಳಿದ ಶ್ವೇತಕೇತುವು ಸಂತೃಪಿಯಿಂದ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಉತ್ಸುಕನಾಗುತ್ತಾನೆ. .......ಮುಂದಿನ ವಿಷಯಗಳು ಇಲ್ಲಿ ಅಪ್ರಸ್ತುತ.

ಪಂಚಾಗ್ನಿಹೋಮ ಅಥವ ವಿದ್ಯೆ ಎಂಬುದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ಹೀಗೆ ವಿವರಣೆಯನ್ನು ಕೊಡಲಾಗಿದೆ. ಉಪನಿಷತ್ತುಗಳು ಧ್ಯಾನ ಮತ್ತು ಯೋಗಗಳ ಮೂಲಕ ಸೃಷ್ಟಿಯನ್ನು ಅರಿಯುವ ಪ್ರಾಯೋಗಿಕ ಸಿದ್ಧಾಂತವೇ ಆಗಿದೆ.  
............................................................................................

ಉಪ"ಸಂಹಾರ" :
...................
ನನಗೆ ಯಾರನ್ನೂ ವೈಯಕ್ತಿಕವಾಗಿ ತೆಗಳುವುದಕ್ಕೆ ಇಷ್ಟವಾಗುವುದಿಲ್ಲ. ಹಾಗಂತ ನಾನೇನೂ ಪುಣ್ಯಕೋಟಿಯಲ್ಲ. ಪಂಚಾಗ್ನಿಹೋಮ ಮಾಡುತ್ತೇನೆಂದು ನಿತ್ಯಾನಂದ ಮಹಾರಾಜರು ತಮ್ಮ ಸುತ್ತಲೂ ತಾವೇ ಒಂದು ವರ್ತುಲವನ್ನು ನಿರ್ಮಿಸಿ, ಅಲ್ಲೆಲ್ಲಾ ಸೀಮೆ ಎಣ್ಣೆ ಸುರಿದು ಒಂದಷ್ಟು ಕರಟ, ಸೌದೆಗಳನ್ನು ಹಾಕಿ ಬೆಂಕಿ ಹೊತ್ತಿಸಿ ಅದರ ನಡುವೆ ತಾವು ಕೂತು ಧ್ಯಾನ ಮಾಡಿ ಪಂಚಾಗ್ನಿ ಹವನ ಮಾಡಿದೆ ಎಂದು ...ಹೇಳಿದ್ದರಲ್ಲಿ ತಪ್ಪಿಲ್ಲದಿರಬಹುದು. ಕಾರಣ ಅವರಿಗೆ ಮೇಲಿನ ಪಂಚಾಗ್ನಿ ವಿದ್ಯೆಯ ಬಗ್ಗೆ ತಿಳಿದಿಲ್ಲದಿರಬಹುದು. ಎಲ್ಲರಿಗೂ ಎಲ್ಲವೂ ತಿಳಿದಿರಬೇಕೆಂದೇನಿಲ್ಲವಲ್ಲ !. ಅಥವ ಪಂಚಾಗ್ನಿ ಧ್ಯಾನವನ್ನು ಅರಿತಿರಲೂ ಬಹುದು. ಸಿನಿಮಾ ನಟಿ ರಂಜಿತಾರೊಡಗೂಡಿ ’ಐದನೆಯ’ ಅಗ್ನಿಹೋತ್ರವನ್ನು ಪ್ರಾಯೊಗಿಕ ಸಿದ್ದೀಕರಿಸಲು ಪಣತೊಟ್ಟಿದ್ದಿರಲೂಬಹುದು ! . ಯಾವುದೇ ಅಪವಾದವನ್ನು ವೈಯಕ್ತಿಕವಾಗಿ ಹೇಳುವುದಕ್ಕೆ ಮುನ್ನ ವೇದಾಂತಗಳಲ್ಲಿ ಅಂತಹ ಅಪವಾದಗಳಿಗೆ ಏನು ಹೇಳಿದೆ ಎಂಬುದನ್ನು ಅರಿಯುವುದು ಸೂಕ್ತ. ನಿತ್ಯಾನಂದ ಮಹರಾಜರನ್ನು ಹಳಿಯುವುದರ ಮೂಲಕ ಸಮಸ್ತ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ನಾನು ಸುತರಾಂ ಒಪ್ಪುವುದಿಲ್ಲ. ನಾನು ಹುಟ್ಟಿದ ನಂತರ ಹಿಂದುವಾದೆನೋ ಅಥವ ಅದಕ್ಕೆ ಮೊದಲೇ ಆಗಿದ್ದೆನೋ ಗೊತ್ತಿಲ್ಲ. ಈಗಂತೂ ನಾನು ಪಕ್ಕಾ ಹಿಂದೂ ಆಗಿರುವುದು ಸತ್ಯ. ಇದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಪೊಳ್ಳು ಜಾತ್ಯಾತೀತದ ಮುಖವಾಡ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ.  ನಿತ್ಯಾನಂದರು ಬಹಳ ಶ್ರಮಪಟ್ಟು ಛಾಂದೋಗ್ಯದ ಧ್ಯಾನವನ್ನು ಅರಿಯಲು ಬೆಂಕಿಯ ಜೊತೆ ಸರಸವಾಡಿದ್ದು ಅನೇಕರಿಗೆ ತಮಾಷೆಯೆನ್ನಿಸಿರಬಹುದು. ಆದರೆ ಅದೂ ಅರಿಯುವ ಪ್ರಕ್ರಿಯೆಯಲ್ಲಿ ಒಂದು ಹೆಜ್ಜೆಯಲ್ಲವೆ ?!.  ’ ಶ್ರೇಯಾಂಸಿ ಬಹು ವಿಘ್ನಾನಿ’ ಎನ್ನುವಂತೆ ಪರಮಹಂಸರಾಗುವವರಿಗೆ ಅಡೆತಡೆಗಳು ಸಹಜ. ಅದನ್ನೆಲ್ಲಾ ದಾಟಿ ಅವರು ಪಂಚಾಗ್ನಿಯನ್ನು ಅರಿಯುತ್ತಾರೆಂದು ಭರವಸೆಯಿಟ್ಟುಕೊಳ್ಳಬಾರದೇಕೆ ?. ಈಗಂತೂ ಅವರು ತಾವು ಸನ್ಯಾಸಿಯೇ ಅಲ್ಲ ತಾನೊಬ್ಬ ಧ್ಯಾನಿ ಎಂದು ಬಹು ಘಂಟಾಘೋಷವಾಗಿ ಹೇಳಿದ್ದಾರೆ. ಹಾಗಾಗಿ ಅವರೀಗ ಉಪನಿಷತ್ತುಗಳಲ್ಲಿಯ ಧ್ಯಾನದ ರಹಸ್ಯವನ್ನು ಅರಿಯಲು ಮೌನಧ್ಯಾನಿಯಾಗಿದ್ದಾರೆಂದು ತಿಳಿಯಬಹುದು . ನನಗೆ ಅವರ ಬಗೆಗೆ ಸಂಪೂರ್ಣ ವಿಶ್ವಾಸವಿದೆ. ಯಾವುದಾಗದಿದ್ದರೂ ಪಂಚಾಗ್ನಿಯ ಐದನೆಯ ಹೋಮವನ್ನಂತೂ ಅವರು ಸಾಧಿಸಿಯೇ ತೀರುತ್ತಾರೆ...

ಬೋಲೋ ಶ್ರೀ ನಿತ್ಯಾನಂದ ಭೂಪಾಲ್ ಮಹರಾಜ್ ಕೀ ........

( ಇಷ್ಟೆಲ್ಲಾ ಓದಿದ ಮೇಲೆ ನಾನೂ ನಿತ್ಯಾನಂದರ ಶಿಷ್ಯನೋ ಅಥವ ಸನ್ಯಾಸಿಯಾಗುವೆನೆಂದು ಮಾತ್ರ ಊಹಿಸಬೇಡಿ. ನನಗೆ ಪ್ರಾಪಂಚಿಕ ಸುಖಗಳು  ಬೇಕು. (Worldly pleasures !)  ಕಾರಣ ನಾನೊಬ್ಬ ಸಾಮಾನ್ಯ ಮನುಷ್ಯ !)      

===========================================================


ಕೊನೆಕಿಡಿ :

ಜನನಾಯಕರೊಬ್ಬರು ಭೀಕರ ಭಾಷಣವನ್ನು ಕೊರೆಯುತ್ತಿದ್ದರು. ಸಾಕಷ್ಟು ಮಂದಿಯೂ ಸೇರಿದ್ದರು. ಅಲ್ಲಿ ಶಂಭುಲಿಂಗನೂ ಇದ್ದ !. ಅದೂ ನಾಯಕರ ಪಕ್ಕದಲ್ಲೆ ಕುಳಿತಿದ್ದ.
ಹರಿಯಿತು ಓತಪ್ರೋತವಾಗಿ ನಾಯಕರ ಭಾಷಣ. ಸಮಯ ಸರಿದಂತೆ ಮಂದಿಯೂ ಕಾಣೆಯಾದರು. ಅಲ್ಲುಳಿದಿದ್ದು ಶಂಭುಲಿಂಗ ಮಾತ್ರ !.
ನಾಯಕರು ಶಂಭುವನ್ನು ಹೊಗಳಿದರು, ತನ್ನ ಮಾತನ್ನು ಕೇಳಲು ಇವನೊಬ್ಬನಾದರೂ ಇರುವನಲ್ಲ ಎಂದು. ಶಂಭು ದೇಶಾವರಿ ನಗೆಯೊಂದನ್ನು ಬಿಸಾಡಿ ಹೇಳಿದ...
" ನಿಮ್ದಾದ ಮ್ಯಾಕೆ ನಂದೇ ಭಾಸ್ನ್ ಸೋಮಿ..ಅದ್ಕೆ ಕುಂತಿವ್ನಿ !! " .

Aug 2, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... ೩

ನಾಗಪ್ಪನವರ ಮುಖ ವಿಷಣ್ಣವಾಯಿತು, ಅದು ಗೋಪಾಲಯ್ಯನಿಗೂ ಕಂಡಿತು. ಚಿರಂತನಿಗೆ ತಾನೇ ಮಾತನಾಡಬೇಕೆನ್ನಿಸಿದರೂ, ಸಂದರ್ಭ ಸರಿಯಾಗಲಿಕ್ಕಿಲ್ಲ ಎಂದು ಸುಮ್ಮನಾದ. ಕ್ಷಣಕಾಲ ಮೌನ ಆವರಿಸಿತು.  ಅಡುಗೆಮನೆಯಿಂದ ಸೀತಮ್ಮ ಹೊರಬಂದರು. ಗಂಡಸರು ಮಾತನಾಡುವಾಗ ಹೆಂಗಸರು ಮಧ್ಯೆ ಬಾಯಿ ಹಾಕಬಾರದೆನ್ನುವ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು ಸೀತಮ್ಮ. ಯಾರಿಂದಲೂ ಮಾತು ಹೊರಡದಾದಾಗ ತಾವೇ ಮಾತನಾಡುವುದು ಸೂಕ್ತವೆಂದು ಭಾವಿಸಿದರು. ಹಾಗೆ ಮಾತನಾಡಿದರು ಕೂಡ .

" ನಮಗೆ ಇಂಜಿನಿಯರ್ರೇ ಆಗಬೇಕು ಅಂತೇನು ಇರಲಿಲ್ಲ, ನಮ್ಮ ಕುಟುಂಬದವರೆಲ್ಲಾ ಕಂಪ್ಯೂಟರ್ ಇಂಜಿನಿಯರ್ರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅವೆಲ್ಲಾ ಈಗ ಫಾ಼ರಿನ್ನು, ಹಾಳು-ಮೂಳು ಅಂತ ತಿರುಗಾಡಿಕೊಂಡಿವೆ. ನಮಗೆ ಇರೋಳು ಒಬ್ಬಳೇ ಮಗಳು. ಮಗಳು ಒಳ್ಳೆ ಕಡೆ ಸೇರಲಿ, ಎಲ್ಲರಂತೆ ಕಾರು-ವಿಮಾನ ಅಂತ ಓಡಾಡ್ಕೊಂಡು ಇರಲಿ ಅನ್ನೋ ಆಸೆ ಅಷ್ಟೆ. ಒಟ್ಟಿನಲ್ಲಿ ಒಳ್ಳೆ ಕೆಲಸ ಆದರೆ ನಮ್ಮ ಅಭ್ಯಂತರವೇನು ಇಲ್ಲ "
ನಾಗಪ್ಪ ಹೆಂಡತಿಯ ಮುಖವನ್ನೊಮ್ಮೆ ನೋಡಿದರು. ಮತ್ತೆ ತಲೆ ಕೆಳಗೆ ಹಾಕಿ ನೆಲವನ್ನೇ ದಿಟ್ಟಿಸತೊಡಗಿದರು.  ಈ ವಿಷಯವನ್ನು ಬೇಗ ಇತ್ಯರ್ಥಗೊಳಿಸಬೇಕು ಎಂದುಕೊಂಡ ಚಿರಂತ. ಮತ್ತೆ-ಮತ್ತೆ  ವೃತ್ತಿ ಸಂಬಂಧ ವಿಚಾರಗಳನ್ನು ಯಾರೂ ಕೆದಕುವುದು ಅವನಿಗೆ ಸರಿಕಂಡುಬರಲಿಲ್ಲ. ತಲೆ ತಗ್ಗಿಸಿ ಕುಳಿತಿದ್ದ ನಾಗಪ್ಪನವರನ್ನೊಮ್ಮೆ ದಿಟ್ಟಿಸಿದ. ತುಸು ಹತಾಶರಾದಂತೆ ಕಂಡುಬಂದಿತು. ಸೀತಮ್ಮನವರೊಟ್ಟಿಗೆ ಮಾತನಾಡುವುದೇ ಸರಿಯೆಂದುಕೊಂಡ.

" ಅಮ್ಮಾ, ಇಂಜಿನಿಯರ್ರೇ ಆಗಲಿ, ನಾನೇ ಆಗಲಿ ಅಥವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡ್ತಾ ಇರೋ ನನ್ನಂತಹ ಸಾವಿರಾರು ಜನಗಳ ಬದುಕು , ಹೊರಗಡೆಯಿಂದ ನೋಡೋರಿಗಷ್ಟೆ ಚೆಂದ. ಎಲ್ಲದಕ್ಕೂ ನಾವು ಶನಿವಾರ-ಭಾನುವಾರಗಳನ್ನೇ  ಕಾಯ್ಬೇಕು. ನಾವು ದುಡಿದದ್ದನ್ನು ನೆಮ್ಮದಿಯಾಗಿ ಉಣ್ಣುತ್ತೇವೆಂಬ ನಂಬಿಕೆ ನಮ್ಮಲ್ಲಿ ತುಂಬ ಕಡಿಮೆ. ಒಂದು ರೀತಿಯ ಯಾಂತ್ರಿಕ ಜೀವನ ನಮ್ಮದು. ಅದರಲ್ಲೂ ಬೆಂಗಳೂರು ಅನ್ನೋದು ವಿಲಾಸೀ ಮಾಯಾ ಲೋಕ. ಅಲ್ಲಿ ಬದುಕೋದು ನಮ್ಮ ಸದ್ಯದ ಅನಿವಾರ್ಯತೆ ಮತ್ತು ಅಗತ್ಯ. ಅಂತಹ ಮಾಯಾಮೃಗದ ಬೆನ್ನುಹತ್ತಿ ಹೋಗೋ ಅವಶ್ಯಕತೆ ನಿಮಗಿಲ್ಲ ಅಂದುಕೊಳ್ಳುತ್ತೇನೆ. ಇಷ್ಟಕ್ಕೂ ಯಾರೂ ನಿಮ್ಮ ಮಗಳ ಅಭಿಪ್ರಾಯವನ್ನೇ ಕೇಳಲಿಲ್ಲವಲ್ಲ, ಆಕೆಯನ್ನೇನು ಬಂಧಿಸಿಟ್ಟಿದ್ದೀರೇನು ? ".

 ನಾಗಪ್ಪ ತುಸು ಸಾವರಿಸಿಕೊಂಡವರಂತೆ ಮೇಲೆದ್ದರು. ಮುಖದಲ್ಲಿ ಬಲವಂತದ ನಗುವೊಂದನ್ನು ತಂದುಕೊಂಡರು. ಅದನ್ನು ತೋರಿಕೊಂಡರು ಕೂಡ. ಏನೋ ಹೇಳಲು ಹೊರಟ ಗೋಪಾಲಯ್ಯನವರನ್ನು ಅರ್ಧಕ್ಖೇ ತಡೆದರು ನಾಗಪ್ಪ.

" ಗೋಪಾಲಯ್ಯ, ಹುಡುಗ ಹೇಳೋದು ಸರಿಯಿದೆ. ಹಾಳಾದ್ದು ಈ ಕಂಪ್ಯೂಟರ್ ವಿಷಯ ನಮಗೆ ಗೋತ್ತಾಗೋದಿಲ್ಲ ನೋಡಿ. ಅವರಿಬ್ಬರೇ ಮಾತನಾಡಿಕೊಂಡು ಬಿಡಲಿ ಅಲ್ಲವೆ. ಅವರ ಜೀವನವನ್ನು ಅವರೇ ತೀರ್ಮಾನ ಮಾಡಿಕೊಳ್ಳೋದು ಒಳ್ಳೇದು . ಏನಂತೀರಿ ? "

ಗೋಪಾಲಯ್ಯ ಮನಸಿನಲ್ಲೇ ಹೌದೆಂದುಕೊಂಡರು. ಹೊರಗೆ ತೋರ್ಪಡಿಸದೆ, ಗೋಣು ಹಾಕಿ ಸುಮ್ಮನಾದರು. ಹಜಾರಕ್ಕೆ ಅಂಟಿಕೊಂಡಿದ್ದ ಕೋಣೆಯ ಬಾಗಿಲು ತೆರೆದರು ನಾಗಪ್ಪ. ಮಗಳನ್ನು ಹೊರಬರುವಂತೆ ಕರೆದರು. ಅಲ್ಲಿಯವರೆಗೂ ಒಳಗೆ ಒಂಟಿಯಾಗಿ ಕುಳಿತಿದ್ದರಿಂದಲೋ ಏನೋ ಆಕೆಯ ಮುಖ ಬಾಡಿದಂತಾಗಿತ್ತು. ಸಂಪ್ರದಾಯದಂತೆ ಸೀರೆ ಉಟ್ಟು ತಲೆಗೆ ಹೂ ಮುಡಿದು ನಿಂತಿದ್ದ ಹುಡುಗಿಯನ್ನೊಮ್ಮೆ ಚಿರಂತ ದಿಟ್ಟಿಸಿದ. ಕಿರುನಗೆಯೊಂದು ಅವನ ತುಟಿಯಂಚಿನಲ್ಲಿ ಮಿನುಗಿ ಮಾಯವಾಯಿತು. ಅವನೇ ಮಾತಿಗೆ ಮುಂದಾದ.

" ನಿಮ್ಮ ಅಭ್ಯಂತರವೇನೂ ಇಲ್ಲವೆಂದಾದರೆ ನಾನು, ನಿಮ್ಮ ಮಗಳು ಸ್ವಲ್ಪ ಕಾಲ ನಿಮ್ಮ ತೋಟದಲ್ಲೆ ತಿರುಗಾಡಿಕೊಂಡು ಬರಬಹುದೆ ? ಹಾಗೇ ಒಂದಷ್ಟು ವಿಚಾರ ವಿನಿಮಯವೂ ಆಗಬಹುದೇನೋ ಅಂತ ".

 ನಾಗಪ್ಪ ಮರುಮಾತಿಲ್ಲದೆ ಸಮ್ಮತಿಯಿತ್ತು ಅಡುಗೆಮನೆಯೆಡೆಗೆ ನಡೆದರು. ಹುಡುಗ-ಹುಡುಗಿ ಮನೆಯಿಂದ ಹೊರಬಿದ್ದರು. ಗೋಪಾಲಯ್ಯ ಕೈಯಿಗೆ ಸಿಕ್ಕಿದ ಪುಸ್ತಕವೊಂದನ್ನು ತಿರುವುತ್ತ ಕುಳಿತರು. ಸೀತಮ್ಮ ತುಸು ಗಾಬರಿಯಾಗಿದ್ದರು. ಅವರ ಆತಂಕಕ್ಕೆ ಕಾರಣವೂ ಇತ್ತು. ನಾಗಪ್ಪ ಒಳಬಂದಿದ್ದು ನೋಡಿ ದುಗುಡದಿಂದ ಹೇಳಿಕೊಂಡರು.

"ಇಬ್ಬರನ್ನೇ ಹಾಗೆ ಹೊರಗೆ ಕಳಿಸೋದು ಅದೇನು ಚೆನ್ನಾಗಿರುತ್ತೆ ಹೇಳಿ ? , ಅದೂ ಮದುವೆಗೆ ಮುಂಚೆಯೆ, ಕನಿಷ್ಠ ಲಗ್ನಪತ್ರಿಕೆಯಾದರೂ ಆಗಬಾರದೆ. ನೀವಂತೂ ಇತ್ತೀಚೆಗೆ ಇಂಗು ತಿಂದ ಮಂಗನ ಹಾಗೆ ಆಡ್ತಾ ಇದ್ದೀರಿ. ಅವರೇನೋ ಕೇಳುದ್ರಂತೆ, ಇವರು ಕಳುಹಿಸಿಬಿಟ್ರಂತೆ. ಹೆಚ್ಚು-ಕಮ್ಮಿಯಾದರೆ ಯಾರು ಜವಾಬುದಾರರು? ಅಕ್ಕ-ಪಕ್ಕದವರು ಏನಂದಾರು ".

"ಸೀತೂ, ನೀನಿನ್ನೂ ನಿಮ್ಮಜ್ಜನ ಕಾಲದಲ್ಲೇ ಇದ್ದೀಯ. ಬೆಂಗಳೂರಿನಲ್ಲಿ ಇದೆಲ್ಲಾ ಸರ್ವೇಸಾಮಾನ್ಯ. ಇಷ್ಟಕ್ಕೂ ಬೆಂಗಳೂರನ್ನು ನೀನು ಕಂಡಿದ್ರೆ ತಾನೆ ನಿನಗೆ ಗೊತ್ತಾಗೋದು"

" ಕಾಣೋದಕ್ಕೆ ಕರೆದುಕೊಂಡು ಹೋಗಿದ್ರೆ ತಾನೇ ನೀವು ? ಪಕ್ಕದ ’ಬಾಳೆಹೊನ್ನೂರು’ ತೋರಿಸೋದಕ್ಕೆ ಮದುವೆಯಾಗಿ ೧೦ ವರ್ಷ ತಗೊಂಡ್ರಿ ನೀವು. ಎಂದಾದ್ರೂ ಸ್ವತಂತ್ರವಾಗಿ ನಿರ್ಧಾರತಗೊಳೋಕೆ ಬಿಟ್ರೇನು ನೀವು ? "

"ಆಯ್ತು ಮಹರಾಯ್ತಿ, ಇಲ್ಲಿವರೆಗೂ ನಿನಗೆ ಸ್ವತಂತ್ರ ಸಿಕ್ಕಿರಲಿಲ್ಲ. ಇನ್ನು ಮುಂದೆ ನೀನು ಸರ್ವತಂತ್ರ ಸ್ವತಂತ್ರೆ. ನಿನ್ನ ಮಗಳ ಮದುವೆ ವಿಷಯದಲ್ಲಿ ನೀನೇ ನಿರ್ಧಾರ ತಗೋ , ಆಯ್ತಾ "

ನಾಗಪ್ಪ ಹೊರಬಂದರು. ಅಡುಗೆ ಮನೆಯಲ್ಲಿ ಆಗಾಗ್ಗೆ  ಪಾತ್ರೆಗಳ  ಸದ್ದು ಜೋರಾಗಿ ಕೇಳಿಬರುತ್ತಿತ್ತು.

ಇತ್ತ , ಪರಸ್ಪರ ಮಾತನಾಡಲೆಂದು ಹೊರಬಂದವರಿಬ್ಬರೂ ಬಹಳ ದೂರ ಮೌನವಾಗೇ ಸಾಗಿ ಬಂದಿದ್ದರು. ಹುಡುಗಿಯೇ ಮಾತನಾಡಿದಳು.

" ನಿಮ್ಮ ಹೆಸರು ಚಿರಂತ್ ಅಂತ ಗೊತ್ತಾಯ್ತು. ನಾನು ಪಲ್ಲವಿ ".

ಹುಡುಗಿಯ ಮಾತಿನಿಂದ ಉತ್ತೇಜಿನಾದಂತೆ ಕಂಡುಬಂದ ಚಿರಂತ.

" ಒಹ್ !. Good name. ಏನು ಒದಿದ್ದೀರಿ ? I mean education ? "

" M.A. ಆಗಿದೆ. ಪೊಲಿಟಿಕಲ್ ಸೈನ್ಸ್ "

"ನಾನು MBA ಮುಗಿಸಿದ್ದೀನಿ. ನನ್ನ ಮಟ್ಟಿಗೆ ಒಳ್ಳೆ ಕೆಲಸನೂ ಇದೆ. ನಿಮಗೆ ಕೆಲ್ಸ ಮಾಡಬೇಕು ಅಂತೇನೂ ಇಲ್ವ ?"

" ಇದೆ. political science ವಿಭಾಗದಲ್ಲಿ  ಅಧ್ಯಾಪಕಿಯಾಗಬೇಕು ಅನ್ನೋ ಆಸೆ ಇದೆ "

"ಒಹ್ !. Thats wonderful !. ಮತ್ತೆ ಸಮಸ್ಯೆ ಏನು ? "

"ನನ್ನ ಮದುವೆಯದು "

 ಚಿರಂತ ಕ್ಷಣಕಲ ಮೌನವಹಿಸಿದ. ಮುಂದೇನು ಕೇಳಬೇಕೆಂದು ಅವನಿಗೆ ತೋಚಲಿಲ್ಲ . ತೀರಾ ವೈಯಕ್ತಿಕವಾಗಬಹುದೆಂದು ಸುಮ್ಮನಾದ. ಪಲ್ಲವಿಯೇ ಮುಂದುವರಿಸಿದಳು.

" ನನಗೆ ನಮ್ಮ ಊರಲ್ಲೇ ಇದ್ದು ಕೆಲಸ ಮಾಡಬೇಕು ಅಂತ ಆಸೆಯಿದೆ. ಅದರೊಟ್ಟಿಗೆ ನನ್ನ ತಂದೆ-ತಾಯಿಗಳಿಗೂ ಆಸರೆಯಾಗಿರಬೇಕು ಅನ್ನೋದು ಇನ್ನೊಂದು ಆಸೆ "

ಚಿರಂತನಿಗೆ ಕೊಂಚ ಅರ್ಥವಾಗಲಿಲ್ಲ. ಸ್ವಲ್ಪ ತಡೆದು ಪುನಃ ಕೇಳಿದ

"ಅಂದರೆ ? ನಿಮಗೆ ಮದುವೆ ಬೇಡ ಅಂತಲೆ ? "

"ಹಾಗಲ್ಲ. ನಾನು ಒಬ್ಬಳೇ ಮಗಳು. ಇವರನ್ನು ಬಿಟ್ಟು ೩೫೦ ಕಿ.ಮೀ ದೂರದ ಊರಿಗೆ ಹೋಗಿ ಕುಳಿತರೆ, ಇವರಿಗೆ ಕಷ್ಟಕಾಲ ಬಂದಾಗ ನೋಡೋರು ಯಾರು ? ಅಲ್ಲಿಂದ ಇಲ್ಲಿಗೆ ಬರೋಕೆ ಕನಿಷ್ಠ ೭ ಗಂಟೆ ಪ್ರಯಾಣ. ಅಂತಹ ಪ್ರಯಾಣ ಮಾಡೋದಕ್ಕೂ ಒಂದು ತಿಂಗಳ ಮುಂಚೆಯೇ ತಯಾರಾಗಬೇಕು. ಕಷ್ಟ ಅನ್ನೋದು ಹೇಳಿ-ಕೇಳಿ ಬರೋಲ್ಲವಲ್ಲ."

"ಅದು ನಿಜ. ಮತ್ತೆ, ಏನು ಮಾಡಬೇಕು ಅನ್ನೋದು ನಿಮ್ಮ ಉದ್ದೇಶ ?"

" ನನ್ನ ತಂದೆ-ತಾಯಿಯವರೇನೋ ಮದುವೆ ಮಾಡಿ ಕಳುಹಿಸಲು ಸಿದ್ದವಾಗಿದ್ದಾರೆ. ಅದು ಅವರ ಮಗಳ ಬಗೆಗಿರೋ ಕಾಳಜಿ. ಅಂತಹುದೇ ಕಾಳಜಿ-ಅಕ್ಕರೆ ನನಗೂ ಇರುತ್ತೇ ಅಲ್ವಾ ? . ನನ್ನ ಮದುವೆ ಮಾಡಿಕೊಟ್ಟಾದ ಮೇಲೆ ಈ ತೋಟವನ್ನೆಲ್ಲಾ  ಮಾರಿ ಬೆಂಗಳೂರಿಗೆ ಬಂದು ಸೇರ್ಕೋತಾರಂತೆ "

ಚಿರಂತ ಹಾವು ತುಳಿದವನಂತೆ ಬೆದರಿದ.

"ಅಯ್ಯೋ!. ಅಂತಹ ತಪ್ಪು ಕೆಲ್ಸ ಮಾಡೋದುಬೇಡ. ಇನ್ನು ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತೆ. ಬೆಳೆದು ತಿನ್ನೋನೆ ಹೆಚ್ಚು ಸುಖವಾಗಿರ್ತಾನೆ ನೋಡಿ. "

"ಹೌದು.  ಆದರೆ ನನ್ನಿಂದ ಇವರಿಗೆ ಅರ್ಥಮಾಡಿಸಲು ಆಗ್ತಾ ಇಲ್ಲ. "

ವಿಷಯ ಹಳಿತಪ್ಪುತ್ತಿರಬಹುದೆನಿಸಿತು ಚಿರಂತನಿಗೆ. ವಿಷಯವನ್ನು ಅರ್ಧಕ್ಕೆ ತುಂಡರಿಸಿದ.

"ಮದುವೆಯ ಬಗ್ಗೆ ಏನು ಹೇಳಲೇ ಇಲ್ಲ ನೀವು ? "

ಪಲ್ಲವಿಯ ಮುಖ ಮತ್ತಷ್ಟು ಕಳೆಗುಂದಿದಂತಾಗಿದ್ದನ್ನು ಚಿರಂತ ಗಮನಿಸಿದ. ಆಕೆಯೇ ಮಾತನಾಡಲೆಂದು ಸುಮ್ಮನಾದ. ಸಮಯ ಜಾರುತ್ತಿತ್ತು. ಆದರೂ ಸುಮ್ಮನಾದ.

" ಆಗಲೇ ಹೇಳಿದೆನಲ್ಲಾ, ಅಷ್ಟು ದೂರ ಬರೋದಕ್ಕೆ ನನಗಿಷ್ಟವಿಲ್ಲ. ಈ ವಿಷ್ಯಾನ ನಮ್ಮ ಮನೆಯಲ್ಲಿ ಹೇಳೋಕೆ ನನ್ನಿಂದ ಆಗ್ತಿಲ್ಲ. ಹೇಳುದ್ರೂ ಅವರು ಅರ್ಥಮಾಡ್ಕೋತಾರೆ ಅಂತ ನನಗನ್ನಿಸ್ತಿಲ್ಲ "

"I am sorry. ಬೆಂಗಳೂರು ಬಿಟ್ಟು ಬರೋದು ನನಗೂ ಸಾಧ್ಯವಿಲ್ಲ. So , ನಮ್ಮಿಬ್ಬರ ದಾರಿ ಬೇರೆ-ಬೇರೆಯದೇ ಅಂತಾಯ್ತು. ಅದೆಲ್ಲಾ ಸರಿ, ನನ್ನೊಂದಿಗೆ ಹೇಳಿದ ಹಾಗೆ ನಿಮ್ಮ ಪೇರೆಂಟ್ಸ್ ಗೂ ಕನ್ವಿನ್ಸ್ ಮಾಡಬಹುದಲ್ಲ ನೀವು ?"

"ನನ್ನ ಮಾತನ್ನು ಅವರು ಕೇಳೋದಿಲ್ಲ. ಅದೇ ಸಮಸ್ಯೆ "

ಚಿರಂತನ ಮುಖದಲ್ಲಿ ಸಣ್ಣನಗುವೊಂದು ತೇಲಿಬಂತು

"ಇಲ್ಲಿ ಯಾರನ್ನಾದ್ರು ನೋಡಿದೆರೇನು? ನಿಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳೋಕೆ ?"

ಚಿರಂತನ ನೇರ ಪ್ರಶ್ನೆಗೆ ಪಲ್ಲವಿಯ ಉತ್ತರವೂ ಅಷ್ಟೇ ಸಹಜವಾಗಿ ಬಂದಿತು.

"ಹೌದು. ಅವರು ನನ್ನ ಸಹಪಾಠಿ. ಚಿಕ್ಕಮಗಳೂರಿನಲ್ಲಿ ಕೆಲಸ ಮಾಡ್ತಾರೆ. ನನಗೂ ಅಲ್ಲೇ ಕೆಲಸ ಆಗಬಹುದು. ಊರಿಗೆ ಹತ್ತಿರ. ನನ್ನ ಹೆತ್ತವರಿಗೂ ಆಸರೆಯಾಗಿರಬಹುದು ನಾನು"

"ಏನ್ರೀ ನೀವು ? ಒಳಗಡೆ ಬೆಂಕಿಯಿಟ್ಟುಕೊಂಡು ಇಷ್ಟು ದಿನ ಹೇಗ್ರೀ ತಡೆದುಕೊಂಡಿದ್ರೀ ?  any way ನಮ್ಮ ಸ್ನೇಹಕ್ಕಂತೂ ಯಾವ ಕಳಂಕವೂ ಬರೋದಿಲ್ಲ. ನಿಮ್ಮ ಸ್ನೇಹಿತನಾಗಿ ನಾನೀಗ ಏನು ಮಾಡಬೇಕು ಹೇಳಿ ? "

ಪಲ್ಲವಿಯ ಮುಖದಲ್ಲಿ ಮಂದಹಾಸ ಹಾದುಹೋಯಿತು.

" ನಿಮ್ಮಂತಹ ಸ್ನೇಹಿತರು ಸಿಕ್ಕಿದ್ದು ನನಗೂ ಸಂತೋಷವೆ. ಸದ್ಯಕ್ಕೆ ನಿಮ್ಮ ಕೆಲಸ ನನ್ನ ಹೆತ್ತವರನ್ನು ಕನ್ವಿನ್ಸ್ ಮಾಡೋದು ಅಷ್ಟೆ. "

" ನಿಮ್ಮೂರಿನ express ಬಸ್ಸಿನಲ್ಲಿ ಬಂದುದಕ್ಕೆ ಇಷ್ಟೂ ಮಾಡದೇ ಹೋದ್ರೆ ಸರಿಯಾಗುತ್ಯೆ ?  ಆ ಬಸ್ಸಿಗೆ ಅವಮಾನ "

ಮನಃಪೂರ್ವಕವಾಗಿ ನಗುತ್ತಾ ಇಬ್ಬರೂ ಮನೆಯತ್ತ ಹೆಜ್ಜೆ ಹಾಕಿದರು. ಮಾತಿನ ಲಹರಿಯಲ್ಲಿ ಮನೆ ಬಂದುದೇ ತಿಳಿಯಲಿಲ್ಲ ಇಬ್ಬರಿಗೂ. ಒಳಗೆ ಬಂದ ಪಲ್ಲವಿ ಕೋಣೆಯ ಬಾಗಿಲಿಗೆ ಒರಗಿ ನಿಂತಳು. ಚಿರಂತ ಚಾಪೆಯ ಮೇಲೆ ಕೂರದೆ ಟಿ.ವಿ. ಸ್ಟಾಂಡ್ ಪಕ್ಕದಲ್ಲಿದ್ದ ಕುರ್ಚಿಯ ಮೇಲೇ ಕುಳಿತ. ಮಗಳ ಮುಖ ನೋಡಿದ ಸೀತಮ್ಮ ತುಸು ಗೆಲುವಾದರು. ಗೋಪಾಲಯ್ಯ ಅದೇ ಪುಟಗಳನ್ನು ತಿರುವಿಹಾಕುತ್ತಿದ್ದರು. ನಾಗಪ್ಪ ಶುರುಮಾಡಿದರು.

" ಏನ್ ತೀರ್ಮಾನ ತಗೋಂಡ್ರಿ "

ಚಿರಂತ ಗೋಪಾಲಯ್ಯನವರನ್ನೊಮ್ಮೆ ನೋಡಿದ. ನಾಗಪ್ಪನವರೆಡೆಗೆ ತಿರುಗಿದ.

" ನನಗೆ ನಿಮ್ಮ ಮಗಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ "

ನಾಗಪ್ಪ ಕೊಂಚ ವಿಚಲಿತರಾದವರಂತೆ ಕಂಡರು. ಸಾವರಿಸಿಕೊಂಡು ಮತ್ತೆ ಮುಂದುವರಿಸಿದರು.

" ನಾವು ನಿಮ್ಮ ವೃತ್ತಿ ವಿಚಾರವಾಗಿ ಕೇಳಿದ್ದು ತಮಗೆ ಬೇಸರವಾಯ್ತೇನೋ ? ಗೋಪಾಲಯ್ಯ ಎಲ್ಲವನ್ನೂ ವಿವರಿಸಿ ಹೇಳಿದ್ದಾರೆ. ಆ ವಿಷಯದಲ್ಲಿ ನಮಗೆ ಅಭ್ಯಂತರವಿಲ್ಲ . "

"ಹಾಗೇನಿಲ್ಲ.  ನೋಡಿ ನಾಗಪ್ನೋರೆ, ಮದುವೆ ಅಂತ ಆದಮೇಲೆ ಹೋಗೋದು-ಬರೋದು ಮಾಡಬೇಕಾಗುತ್ತೆ. ನನಗೆ ರಜೆಗಳು ಸಿಗೋದಿಲ್ಲ. ಅದೂ ಅಲ್ಲದೆ ಪ್ರಯಾಣವೇ ಬಹಳ ಹೊತ್ತು ಹಿಡಿಯುತ್ತೆ. ಇದು ನಿಮ್ಮ ಮಗಳಿಗೂ ಕಷ್ಟವಾಗಬಹುದು. ಮುಂದೆ ಅದೇ ಒಡಗಿಕೆ ಕಾರಣವಾಗಬಹುದು "

ಚಿರಂತ ಹೇಳಿಮುಗಿಸುವಷ್ಟರಲ್ಲಿ  ನಾಗಪ್ಪ  ಅವಸರದಲ್ಲಿ ಮಾತನಾಡಿದರು.

"ಇಲ್ಲ, ಇಲ್ಲ. ಹಾಗೇನು ಇಲ್ಲ. ನಿಮಗೆ ಅನುಕೂಲವಾದಾಗ ಬಂದು ಹೋದ್ರೆ ಸಾಕು "

" ಇಲ್ಲಿ ನಿಮ್ಮ ಕ್ಷೇಮ ಯಾರು ನೋಡ್ಕೋತಾರೆ ನಾಗಪ್ನೋರೆ ? "

"ಅಯ್ಯೋ ನಮ್ಮದೇನು ಬಿಡಿ ಹೇಗೋ ಆಗುತ್ತೆ. ಗಾಳಿಗೆ ಬಿದ್ಧ್ಹೋಗೋ ಮರ, ಸತ್ತಮೇಲೆ ಸಮಾಧಿ, ಅಷ್ಟೆ "

ಚಿರಂತ ತುಸು ಗಂಭೀರವಾದ. ಅದೇ ಧಾಟಿಯಲ್ಲೇ ಮಾತನಾಡಿದ.

" ಬದುಕು ಅನ್ನೋದು ಒಂದೇ ಸಲ ಸ್ವಾಮಿ. ಸತ್ತಮೇಲೆ ನಾನು ಚಿರಂತನೂ ಅಲ್ಲ, ನೀವು ನಾಗಪ್ಪನೂ ಅಲ್ಲ.  ಏನಾಗ್ತಿವೀ ಅನ್ನೋದು ಯಾರಿಗೂ ಗೊತ್ತಿಲ್ಲ. ಸತ್ತಮೇಲಲ್ಲ ಸ್ವಾಮಿ ಸಮಾಧಿಯಾಗೋದು, ಬದುಕಿದ್ದಾಗಲೇ ಆಗಬೇಕು. ಇದನ್ನೇ ಕರ್ಮಯೋಗದಲ್ಲಿ ಹೇಳಿರೋದು.  ಬದುಕನ್ನು ಪರಿಪೂರ್ಣವಾಗಿ ಅನುಭವಿಸೋ ಅವಕಾಶ ಇರೋವಾಗ ಅದನ್ನ ನೀವೆ ದೂರ ಮಾಡಿ ಯಾವುದೋ ಮರಿಚಿಕೆಯ ಬೆನ್ನು ಹತ್ತಿ ಹೋಗ್ತಾ ಇದ್ದೀರಿ. ನಿಮ್ಮ ನಿರ್ಧಾರ ನಿಮ್ಮ ಮಗಳಿಗೂ ಒಪ್ಪಿಗೆ ಇದೆಯೇ ಅಂತಾ ಕೇಳಿದ್ದೀರಾ ? "

ನಾಗಪ್ಪ ಅವಾಕ್ಕಾಗಿ ನಿಂತಿದ್ದರು. ಮಗಳ ಮುಖವನ್ನೊಮ್ಮೆ ನೋಡಿದರು. ಹೆಂಡತಿಯ ಮುಖವನ್ನೂ ನೋಡಿದರು. ಏನೂ ತೋಚಲಿಲ್ಲ.  ಚಿರಂತನನ್ನೇ ಕೇಳಿದರು.

" ಏನಂತಾಳೆ ನಮ್ಮ ಮಗಳು ? ಮತ್ತೆ ನಿಮ್ಮ ಮದುವೆ ವಿಷಯ ? "

ಚಿರಂತ ಪಲ್ಲವಿಯೆಡೆಗೆ ತಿರುಗಿದ. ಇಬ್ಬರ ಮಖದಲ್ಲೂ ನಗು ತೇಲುತ್ತಿತ್ತು

"ಪಲ್ಲವಿಯವರೆ, ನಮ್ಮಲ್ಲಿ ಮದುವೆಗೆ ಹೆಣ್ಣು ಸಿಗೋದು  ಕಷ್ಟವಾಗಿದೆ. ನನಗೆ ಹೆಣ್ಣು ಹುಡುಕಿಕೊಡೊ ಹೊಣೆ ನಿಮ್ಮದೆ . ಏನಂತೀರಿ ? "

ಪಲ್ಲವಿ ನಗುತ್ತಲೆ ಹೇಳಿದಳು.

" ಸ್ನೇಹಿತರಿಗೆ ಅಷ್ಟೂ ಮಾಡದಿದ್ರೆ ಹೇಗೆ ಹೇಳಿ ? ಆ ಹೊಣೆ ನನ್ನದೆ "

ಅಲ್ಲಿದ್ದ ಉಳಿದ ಮೂವರಿಗೂ ಏನೊಂದೂ ಅರ್ಥವಾಗಲಿಲ್ಲ. ಚಿರಂತನೇ ಮುಂದುವರಿಸಿದ

" ಪಲ್ಲವಿಯಂತಹ ಮಗಳನ್ನು ಪಡೆಯೋಕೆ ಪುಣ್ಯ ಮಾಡಿದ್ದೀರಿ ನೀವು. ನಿಮ್ಮ  ಬಾಳಿನ ಮುಸ್ಸಂಜೆಯಲ್ಲಿ ಆಕೆ ನಿಮ್ಮ ಸೇವೆಗೆ ನಿಲ್ಲಬೇಕಂತೆ. ನಿಮಗಿರೋಳು ಆಕೆಯೊಬ್ಬಳೆ.  ಗಂಡು...ಹೆಣ್ಣು. ಎಲ್ಲಾ ಅವಳೆ ನಿಮಗೆ. ಆಕೆಯನ್ನು ಇಲ್ಲಿಯವರಗೆ ಬೆಳೆಸಿ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಕಲಿಸಿಕೊಟ್ಟ ನಿಮ್ಮನ್ನು ಒಂಟಿಯಾಗಿ ಬಿಟ್ಟು , ಆಕೆ ಬೇರೆಲ್ಲೋ ಸಂತೋಷವಾಗಿ ಇರೋದು ಹೇಗೆ ಸಾಧ್ಯ ಹೇಳಿ ?  ಅದಕ್ಕೇ ಅಂತಲೇ ಆಕೆ ಈ ಊರು ಬಿಟ್ಟು ಬರೋಕೆ ತಯಾರಿಲ್ಲ. ಆಕೆ ತನ್ನ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಯಂತೆ. ಚಿಕ್ಕಮಗಳೂರು ಕಾಲೇಜಿನಲ್ಲಿ ಉಪನ್ಯಾಸಕರು. ನಿಮ್ಮ ಮಗಳಿಗೂ ಅದೇ ಕೆಲಸ ಮಾಡಬೇಕು ಅನ್ನೋ ಆಸೆ ಇದೆ. ನೀವು ಸ್ವಲ್ಪ ಉದಾರ ಮನಸು ಮಾಡಿದರೆ, ಎಲ್ಲವೂ ಒಳ್ಳೆಯದೇ ಆಗುತ್ತೆ . ಏನಂತೀರಿ ನಾಗಪ್ನೋರೆ ? "

ನಾಗಪ್ಪ ಸೀತಮ್ಮನ ಮುಖವನ್ನೊಮ್ಮೆ ನೋಡಿದರು. ಆ ಕ್ಷಣಕ್ಕೆ ಸೀತಮ್ಮನ ಮುಖ ಏನೋ ಹೊಸತನ್ನು ಕಂಡಂತೆ ಅರಳಿತ್ತು.  ನಾಗಪ್ಪ ಪಲ್ಲವಿಯ ಬಳಿಗೆ ತೆರಳಿದರು. ಮಗಳ ಮುಖವನ್ನೊಮ್ಮೆ ಸಾದ್ಯಂತ ದಿಟ್ಟಿಸಿದರು. ಅಮೂರ್ತಭಾವವೊಂದು ಅವರನ್ನು ಆವರಿಸಿತು. ಗಟ್ಟಿಯಾಗಿ ಮಗಳನ್ನೊಮ್ಮೆ ಬಾಚಿ ತಬ್ಬಿಕೊಂಡರು. ಅವರ ಕಣ್ಣಿಂದ ಉದುರುತ್ತಿದ್ದ ಹನಿಗಳು , ಪಲ್ಲವಿಯ ಸೀರೆಯ ಸೆರಗಿನ ಮೇಲೆ ಹನಿ-ಹನಿಯಾಗಿ ಬೀಳುತ್ತಿತ್ತು.

......................................................................................................

( ಮುಗಿಯಿತು ..ಅಂದುಕೊಳ್ಳುತ್ತೇನೆ :-) )

ವಂದನೆಗಳೊಂದಿಗೆ...

Jul 26, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... 2

ಹಾಗೆ ಹುಡುಕುತ್ತಿದ್ದ ಕಣ್ಣಿಗೆ ಮೊದಲು ಕಂಡವರು.... ಬಿಳಿ ಪಂಚೆ, ಮೈಮೇಲೊಂದು ಶಲ್ಯ ಹೊದೆದಿದ್ದ ಮಧ್ಯವಯಸ್ಸಿನ ವ್ಯಕ್ತಿ. ಗೋಪಾಲಯ್ಯ ವ್ಯಕ್ತಿಯ ಮುಖ ನೋಡಿ ನಕ್ಕರು.
"ಚಿರಂತ, ಇವರ ಹೆಸರು ನಾಗಪ್ಪ ಅಂತ. ಹುಡುಗಿಯ ತಂದೆ. ಹುಟ್ಟಿದಾರಭ್ಯ ಇದೇ ಊರಲ್ಲಿದ್ದುಕೊಂಡು ತೋಟದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದಾರೆ ". ಗೋಪಾಲಯ್ಯ ಪರಿಚಯ ಮಾಡಿಕೊಟ್ಟರು. ಚಿರಂತ ಕುಳಿತಲ್ಲಿಂದಲೇ ನಗೆ ಬೀರಿದ. ನಾಗಪ್ಪನವರೂ ನಕ್ಕರು.
" ಬಹಳ ದಣಿದು ಬಂದಿದೀರಿ ಅಲ್ಲವೇ ಗೋಪಾಲಯ್ಯ ? ನಮ್ಮೂರಿನ ಬಸ್ಸಿನ ಕತೆ ಈಗಾಗಲೇ ನಿಮಗೆ ಗೊತ್ತಾಗಿರಬೇಕು. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿಧಾನವಾಗಿ ಎಲ್ಲಾ ಮಾತನಾಡೋಣವಂತೆ. ಕುಡಿಯೋದಕ್ಕೆ ಏನಾದ್ರೂ ತರಲೇನು ? "
"ನೀರು ಕೊಡಿ ನಾಗಪ್ಪ ಸಾಕು. ಈಗ ವಿಶೇಷವಾಗಿ ಏನೂ ಮಾಡೊದಕ್ಕೆ ಹೊಗಬೇಡಿ. ತೊಂದರೆ ತೊಗೋಬೇಡಿ. ಈ ಹುಡುಗನ ಕಚೇರಿಗೂ ರಜೆ ಇಲ್ಲ. ಸ್ವಲ್ಪ ಬೇಗನೆ ಹೊರಡ್ತೀವಿ.."
"ಅಯ್ಯೋ !, ಹಾಗಂದ್ರೆ ಹೇಗೆ ? ಬಂದಿರೋದೆ ಅಪರೂಪ. ಇರಿ, ಒಂದು ನಿಮಿಷ ಬಂದು ಬಿಡ್ತೀನಿ " ನಾಗಪ್ಪ ಅಡುಗೆಮನೆಯೊಳಗೆ ಹೋದವರು ನಿಮಿಷಗಳ ತರುವಾಯ ಎರಡು ಲೋಟ ಮತ್ತು ಒಂದು ತಟ್ಟೆಯಲ್ಲಿ ಅವಲಕ್ಕಿ ಬೆಲ್ಲದೊಡನೆ ಪ್ರತ್ಯಕ್ಷರಾದರು. ಅತಿಥಿಗಳ ಮುಂದೆ ಅವಲಕ್ಕಿಯ ತಟ್ಟೆಯನ್ನಿರಿಸಿ, ಲೋಟಗಳಿಗೆ ತಂಬಿಗೆಯಲ್ಲಿದ್ದ ಪಾನಕವನ್ನು ಬಗ್ಗಿಸಿದರು. ಅದು ಬೆಲ್ಲದ ಪಾನಕವೆಂದು ಚಿರಂತನಿಗೆ ತಿಳಿಯಿತು.  ಸ್ವಲ್ಪ ದಾಹವಾದರೂ ತೀರುತ್ತದೆಯಲ್ಲಾ ಎಂದೆನಿಸಿ ಲೋಟವನ್ನೆತ್ತಿ ಪಾನಕವನ್ನು ಕುಡಿಯಲನುವಾದ ಚಿರಂತ. ಇನ್ನೇನು ಬಾಯಿಗೆ ಸುರುಹಬೇಕೆನ್ನುವಷ್ಟರಲ್ಲಿ ಹೆಂಗಸಿನ ಧ್ವನಿಯೊಂದು ತೇಲಿಬಂತು.
"ಅಯ್ಯೊ ! ನಿಲ್ಲಿ " ಅಡುಗೆಮನೆಯಿಂದ ನಾಗಪ್ಪನವರ ಹೆಂಡತಿ ಓಡಿಬಂದರು. " ಬೇಸರ ಪಟ್ಕೋಬೇಡಿ. ಆ ಪಾನಕ ಮತ್ತು ಅವಲಕ್ಕಿಯನ್ನು ನಮ್ಮನೆ ತೋಟದ ಆಳಿಗೆ ಮಾಡಿಟ್ಟದ್ದು. ’ಇವರಿಗೆ’ ಗೊತ್ತಾಗದೆ ನಿಮಗೆ ತಂದು ಕೊಟ್ಟಿದ್ದಾರೆ. ಇಲ್ಲಿ ಕೊಡಿ, ನಿಮಗೆ ಬೇರೆಯದೇ ತಿಂಡಿ ಮಾಡಿಟ್ಟಿದ್ದೇನೆ. ಉಪ್ಪಿಟ್ಟು-ಕೇಸರಿಬಾತು, ಜೊತೆಗೆ ಒಳ್ಳೆಯ ಚಿಕ್ಕಮಗಳೂರು ಕಾಫಿ಼. " ಎಂದು ಒಂದೇ ಸಮನೆ ಉಸುರಿದರು.
ಗೋಪಾಲಯ್ಯ ಚಿರಂತನಿಗೆ ’ಸೀತಮ್ಮ’ ನ ಪರಿಚಯ ಮಾಡಿಕೊಟ್ಟರು. ಚಿರಂತನಿಗೆ ಪಾನಕ ಕುಡಿಯುವ ಆಸೆಯಿತ್ತು. " ಅಮ್ಮಾ, ಈ ಅವಲಕ್ಕಿಯನ್ನು ತೆಗೆದುಕೊಳ್ಳಿ, ಆದರೆ ಪಾನಕ ಇರಲಿ ಬಿಡಿ. ಬೆಲ್ಲದ ಪಾನಕ ಕುಡಿದು ಅದೆಷ್ಟೋ ವರ್ಷಗಳೇ ಆಗಿದೆ. ಎಂದೋ ನನ್ನಜ್ಜಿ ಮಾಡಿಕೊಟ್ಟದ್ದು".
ಚಿರಂತನ ಮಾತನ್ನು ಅರ್ಧಕ್ಕೇ ತುಂಡರಿಸಿದರು ಸೀತಮ್ಮ " ಅಯ್ಯೋ, ಬೇಡ. ಆಳಿಗೆ ಮಾಡಿಟ್ಟದ್ದು. ನೀವು ಕುಡಿಯೋದು ಸರಿಹೋಗಲ್ಲ" ಎಂದು ತಳಮಳಿಸಿದರು.
ಚಿರಂತನಿಗೆ ಪಾನಕ ಬಿಡುವ ಮನಸಾಗಲಿಲ್ಲ. " ಆ ಉಪ್ಪಿಟ್ಟು-ಬಾತು ಬೇಸರವಾಗಿದೆ. ದಿನಾ ಅದೆಲ್ಲಾ ಇದ್ದೇ ಇರುತ್ತೆ. ಈ ಬೆಲ್ಲದ ಪಾನಕ ಯಾರು ಕೊಡ್ತಾರೆ ಹೇಳಿ ? ಕೊಡಿ ಪರವಾಗಿಲ್ಲ ".  ಚಿರಂತನ ಒತ್ತಾಯಕ್ಕೆ ಮಣಿದ ಸೀತಮ್ಮ ಪಾನಕ ತುಂಬಿದ ಲೋಟವನ್ನು ಚಿರಂತನ ಮುಂದಿಟ್ಟು ಅಡುಗೆಮನೆಯತ್ತ ನಡೆದರು. ಅಲ್ಲೇ ನಿಂತಿದ್ದರು ನಾಗಪ್ಪ !. ಮೆತ್ತಗೆ ಗದರಿಕೊಂಡರು ಪತ್ನಿಯೊಂದಿಗೆ " ಅಲ್ವೇ ಸೀತೂ, ನನಗೆ ಹೇಳ್ಬಾರ‍್ದಾ ನೀನು, ಉಪ್ಪಿಟ್ಟು-ಕೇಸರಿಬಾತು ಮಾಡಿರೋದನ್ನ ? ". ಸೀತಮ್ಮನೂ ಗದರಿದರು " ನಿಮಗೆ ಮೊದಲೆ ಹೇಳಿದ್ರೆ ಬಂದೋರಿಗೆ  ಕೊಡೋದಕ್ಕೆ ಏನು ಉಳಿಸ್ತಿದ್ರಿ ನೀವು ? ತಳ ಕೆರೆದು ಹಾಕಬೇಕಾಕ್ತಿತ್ತು ಅಷ್ಟೆ ! ". ನಾಗಪ್ಪ ಮರುಮಾತನಾಡದೆ ಗೋಪಾಲಯ್ಯನ ಬಳಿಗೆ ತೆರಳಿದರು. ಪಾನಕ ಕುಡಿದ ಚಿರಂತನಿಗೆ ದಾಹ ತಣಿದಂತಾಯಿತು.
ನಾಗಪ್ಪ, ಗೋಪಾಲಯ್ಯನ ಮುಂದಿದ್ದ ಚಿಕ್ಕ ಚಾಪೆಯ ಮೇಲೆ ಕುಳಿತರು. " ಗೋಪಾಲಯ್ಯ, ನೀವು ಬಹಳ ಸಮಯ ಇಲ್ಲ ಅಂದ್ರಿ, ಹಾಗಾಗಿ ನೇರವಾಗಿ ವಿಷಯಕ್ಕೆ ಬರ್ತೇನೆ. ನಿಮ್ಮ ಹುಡುಗ ಸಾಫ಼್ಟವೇರ್ ಇಂಜಿನಿಯರ್ರು ಅಂತಾ ಕೇಳ್ಪಟ್ಟೆ. ನಮಗೂ ಸಂತೋಷವಾಯ್ತು. ನಾವು ಇಂತಹ ಹುಡುಗನನ್ನೇ ಹುಡುಕ್ತಾ ಇದ್ವಿ, ಇಲ್ಲೇನೋ ತುಂಬ ಸಂಬಂಧಗಳು ಬಂದಿದ್ವು, ಆದರೆ ನಮಗೆ ಒಪ್ಪಿಗೆ ಆಗಬೇಕಲ್ವೇ..." ನಾಗಪ್ಪ ಹೇಳುತ್ತಲೇ ಇದ್ದರು. ಚಿರಂತ ಅವರ ಮಾತನ್ನು ತುಂಡರಿಸಿದ
" ಕ್ಷಮಿಸಿ, ನಾಗಪ್ನೋರೆ. ನಾನು software ಇಂಜಿನಿಯರ್ ಅಲ್ಲ. "
ಚಿರಂತನ ಮಾತಿನಿಂದ ಚಕಿತರಾದ ನಾಗಪ್ಪ ಅವನತ್ತಲೇ ತಿರುಗಿದರು. " ಮತ್ತೆ , ತಾವು ದೊಡ್ಡ MNC ಯಲ್ಲಿ ಕೆಲ್ಸ ಮಾಡ್ತೀರಿ, ದಿನದಲ್ಲಿ ೧೮ ಗಂಟೆ ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೀರಿ ,  ಅಂತೆಲ್ಲಾ ಹೇಳಿದ್ರಲ್ಲಾ ನಿಮ್ಮ ತಂದೆಯವರು " .

"ಅದು ನಿಜ. ನಾನು ದೊಡ್ಡ ಕಂಪೆನಿಯೊಂದರಲ್ಲೇ ಕೆಲ್ಸ ಮಾಡ್ತಿರೋದು, ದಿನದಲ್ಲಿ ಹೆಚ್ಚು-ಕಡಿಮೆ ೧೮ ಗಂಟೆಗಳು ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೇನೆ. ಆದ್ರೆ, ನಾನು software  ಇಂಜಿನಿಯರ್ ಅಲ್ಲ. ಒಬ್ಬ ಅಕೌಂಟ್ ಮ್ಯಾನೇಜರ್ ಅಷ್ಟೆ ". ಚಿರಂತನ ಮಾತನ್ನು ಕೇಳಿದ ನಾಗಪ್ಪ ಗೋಪಾಲಯ್ಯನ ಮುಖ ನೊಡಿದರು. ಮತ್ತೆ ಚಿರಂತನನ್ನೇ ಕೇಳುವ ಮನಸಾಯಿತು ಅವರಿಗೆ

 " ಅದು ಎಂತಹ ಕೆಲಸ ? ".

ಚಿರಂತನಿಗೆ ನಾಗಪ್ಪನವರ ಪ್ರಶ್ನೆ ಸಹಜವಾಗಿ ತೋರಿತು. " ನಮ್ಮ ಕಂಪೆನಿಗೆ, ಒಂದೆರೆಡು ದೊಡ್ಡ ಬ್ಯಾಂಕುಗಳ ಅಕೌಂಟುಗಳು ಬರುತ್ವೆ. ಅದನ್ನೆಲ್ಲಾ ನಾವು ಮ್ಯಾನೇಜ್ ಮಾಡ್ತೀವಿ. Online ಬ್ಯಾಂಕಿಂಗ್ ಅನ್ತಾರೆ ನೋಡಿ, ಅದು. ಬ್ಯಾಂಕುಗಳು ನಮ್ಮ ಕಂಪೆನಿಗೆ contract ಪ್ರೋಜೆಕ್ಟ್ ಗಳನ್ನು ಕೊಟ್ಟಿರ್ತಾರೆ. ಅದನ್ನೆಲ್ಲಾ ನೋಡ್ಕೋತಿವಿ ನಾವು "
ನಾಗಪ್ಪರಿಗೆ ಚಿರಂತ ಹೇಳಿದ್ದರಲ್ಲಿ ಕೆಲವು ಅರ್ಥವಾಗಲಿಲ್ಲ.
" ಅಂದ್ರೆ , ತಮ್ಮದು contract  ಕೆಲಸವೋ ? ಪರ್ಮನೆಂಟ್ ಅಲ್ಲ ಅನ್ನಿ ! "
 ಚಿರಂತನಿಗೆ ನಾಗಪ್ಪನವರಿಗೆ ಅರ್ಥಮಾಡಿಸುವುದು ಕಷ್ಟವೆಂದು ತೋರಿತು. ಅಷ್ಟರಲ್ಲಿ ಸೀತಮ್ಮ ಉಪ್ಪಿಟ್ಟು-ಕೇಸರಿಬಾತಿನೊಡನೆ ಬಂದರು. ಅತಿಥಿಗಳಿಬ್ಬರಿಗೂ ತಿಂಡಿಗಳು ಸರಬರಾಜಾಯಿತು.  ನಾಗಪ್ಪ ಮೇಲೆದ್ದರು.
" ಗೋಪಾಲಯ್ಯ ನೀವು ನಿಧಾನವಾಗಿ ತಿಂಡಿ ತಿನ್ನಿ, ಆಮೇಲೆ ಮಾತನಾಡೋಣವಂತೆ. ಒಂದು ನಿಮಿಷ ನಾನು ಆಳು ಬಂದಿದಾನೋ ಇಲ್ಲವೋ ನೋಡಿ ಬರ್ತೀನಿ ". ನಗುವಿನಲ್ಲೇ ಸಮ್ಮತಿಯಿತ್ತರು ಗೋಪಾಲಯ್ಯ.
ಚಿರಂತನಿಗೆ ತಿಂಡಿಯ ರುಚಿ ಹತ್ತದಾಯಿತು. ಅದೇಕೋ ಅವನ ಕಿವಿ ಅಡುಗೆ ಮನೆಯೊಳಗೆ ನೆಟ್ಟಿತು. ಅಲ್ಲಿಂದ ತೂರಿಬರುತ್ತಿದ್ದ ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳತೊಡಗಿತು.
" ಗೋಪಾಲಯ್ಯ ಮುಂಚೆ ಹೇಳಿದ್ದು, ಕಂಪ್ಯೂಟರ್ ಇಂಜಿನಿಯರ್ರು ಅಂತ, ಈಗ ಇವರೇನೊ ಬೇರೆ ಹೇಳ್ತಾ ಇದಾರಲ್ಲೇ "
"ಈ ಹಾಳು ಕಂಪ್ಯೂಟರ್ ವಿಷಯ ನಮಗೆ ಹೇಗ್ರೀ ಗೊತ್ತಾಗಬೇಕು. ಅದೇನೊ ಒಂದೂ ಅರ್ಥವಾಗೋಲ್ಲಪ್ಪ ನನಗೆ "
"ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರುಗಳಿಗೆ ಹೆಣ್ಣು ಕೊಟ್ಟಿರೋದು, ಇನ್ನು ನಾವು ಅಕೌಂಟ್ ಮ್ಯಾನೇಜರ್ರಿಗೆ ಕೊಟ್ರೆ ಆಡಿಕೊಳ್ಳೋಲ್ವೆ ಜನ "
"ಅಷ್ಟು ಸಂಬಳವೂ ಬರೋಲ್ಲ ಅನ್ನೋಹಾಗೆ ಕಾಣುತ್ತೆ. ಈ ವರನಿಗಾಗಿ ಇಷ್ಟು ವರ್ಷ ಕಾಯ್ಬೇಕಿತ್ತೇ ? ಸ್ವಲ್ಪ ಸರಿಯಾಗಿ ವಿಚಾರಿಸಿ ಎಲ್ಲಾದನ್ನೂ "
"ಅದೇನೋ ಕಂಟ್ರಾಕ್ಟು ಕೆಲಸ ಅಂತೆ, ಎಷ್ಟು ದಿವಸ ನಡೆದೀತು ಮಹಾ?  ನಮ್ಮ ಮಗಳಿಗೂ ಒಂದು ಭದ್ರನೆಲೆಯಾಗೋದು ಬೇಡ್ವೆ ? "
"ಅದಕ್ಕೆ ಹೇಳಿದ್ದು ಸರಿಯಾಗಿ ವಿಚಾರಿಸಿ ಅಂತ, ಆಮೇಲೆ ಪರಿತಾಪ ಪಡೋದು ಬೇಡ "
" ಸರಿ, ನನಗೂ ಒಂಚೂರು ಉಪ್ಪಿಟ್ಟು ಕೊಡು, ಮಾತಾಡ್ತೀನಿ"
"ಇದಕ್ಕೆನೂ ಕಮ್ಮಿ ಇಲ್ಲ. ಅಲ್ಲೇ ಹೋಗಿ ತಂದುಕೊಡ್ತೀನಿ "
ನಾಗಪ್ಪ ನಗುತ್ತಲೇ ಅಡುಗೆಮನೆ ಕಡೆಯಿಂದ ಬಂದರು. ಗೋಪಾಲಯ್ಯ ಆಗಲೇ ತಿಂಡಿ ಖಾಲಿ ಮಾಡಿದ್ದರು. ಸೀತಮ್ಮನಿಗೆ ಮತ್ತೊಮ್ಮೆ ತಿಂಡಿ ಕೇಳುವ ವಿಷಯ ಮರೆತುಹೋಯಿತು. ಚಿರಂತನ ತಟ್ಟೆಯಲ್ಲಿ ತಿಂಡಿ ಹಾಗೇ ಉಳಿದಿತ್ತು. ಅದೇಕೋ ತಿನ್ನುವ ಮನಸಾಗಲಿಲ್ಲ ಅವನಿಗೆ. ಹೊಟ್ಟೆ ಹಸಿಯುತ್ತಿದ್ದರೂ , ತಿಂಡಿ ಒಳಗೆ ಇಳಿಯದಾಯಿತು. ತಟ್ಟೆ ಕೆಳಗಿಟ್ಟು ಸಾಕೆಂಬಂತೆ ಸನ್ನೆ ಮಾಡಿದ ನಾಗಪ್ಪನವರಿಗೆ. ನಾಗಪ್ಪ ಮತ್ತೆ ಚಾಪೆಯ ಮೇಲೆ ಕುಳಿತರು.
" ನೋಡಿ ಗೋಪಾಲಯ್ಯ. ನಮಗೆ ಹುಡುಗನ ಆಚಾರ-ವಿಚಾರಗಳ ಬಗ್ಗೆ ಗೊತ್ತಿಲ್ಲ. ಆ ವಿಷಯದಲ್ಲಿ ನಾವು ಹೆಚ್ಚು ಒತ್ತಾಯ ಮಾಡೋದು ಇಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಜೀವನ ನೆಡಸಬೇಕಾದ್ರೆ ಕೆಲವು ಸಂಪ್ರದಾಯಬದ್ದ ಆಚರಣೆಗಳನ್ನ ಗಂಟುಕಟ್ಟಿ ಇಡಬೇಕಾಗುತ್ತೆ ಅನ್ನೋದು ನಮಗೂ ಗೊತ್ತಿದೆ. ಆದರೆ,  ಹುಡುಗನ ಕೆಲಸದ ವಿಷಯದಲ್ಲಿ ನಾವು ರಾಜಿಯಾಗೋಕೆ ತಯಾರಿಲ್ಲ. ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರಿಗೆ ಹೆಣ್ಣು ಕೊಟ್ಟಿರೋದು. ನಾವು ಹಾಗೇ ಮಾಡೋಣ ಅನ್ಕೊಂಡೇ ಇಷ್ಟು ವರ್ಷ ತಡೆದದ್ದು. ಈಗ ನೀವೇನು ಹೇಳ್ತೀರೋ ಯೋಚನೆ ಮಾಡಿ "
 ಗೋಪಾಲಯ್ಯ ಚಿರಂತನ ಮುಖ ನೋಡಿದರು. ಚಿರಂತನ ಮುಖದಲ್ಲಿ ನಸುನಗೆಯಿತ್ತು. ನಗುತ್ತಲೇ ಹೇಳಿದ
" ಅಗತ್ಯವಾಗಿ ನೀವು ಇಂಜಿನಿಯರ್ರಿಗೆ ನಿಮ್ಮ ಹುಡುಗಿಯನ್ನ ಕೊಡಿ, ಅದ್ರಲ್ಲಿ ತಪ್ಪೇನೂ ಇಲ್ಲ. ನಾನು ಕಂಪ್ಯೂಟರ್ ಮುಂದೆ ಕಲಸ ಮಾಡೋದ್ರಿಂದ ನಿಮಗೆಲ್ಲಾ ತಪ್ಪು ಮಾಹಿತಿ ಸಿಕ್ಕಿರಬಹುದು. ನೇರವಾಗಿ ಮಾತನಾಡಿದ್ದು ಒಳ್ಳೆಯದೇ ಆಯ್ತಲ್ಲ. ಏನ್ರೀ ಗೋಪಾಲಯ್ಯ, ನಾವಿನ್ನು ಹೊರೊಡೋಣ್ವಾ, ಮತ್ತೆ ಅದೇ ರಸ್ತೇಲಿ ನಡೆದು, ಅದೇ ತರಹದ ಬಸ್ಸು ಹತ್ತಿ ಹೋಗಬೇಕಲ್ವೇನ್ರಿ, ಹೊರಡಿ ಬೇಗ ಮತ್ತೆ " .
ಗೋಪಾಲಯ್ಯ, ಚಿರಂತನಿಗೆ ಕುಳಿತೇ ಇರುವಂತೆ ಸನ್ನೆ ಮಾಡಿದರು. ನಾಗಪ್ಪನ ಕಡೆ ತಿರುಗಿ ಒಮ್ಮೆ ಅವರ ಮುಖವನ್ನೇ ದಿಟ್ಟಿಸಿದರು.  ಮುಖದಲ್ಲಿ ಅವರ ಮನಸಿನೊಳಗಿದ್ದ ಗೊಂದಲಗಳು ಸ್ಪಷ್ಟವಾಗಿ ತೋರುತ್ತಿತ್ತು.
" ನಾಗಪ್ನೋರೆ, ನಿಮಗೆ ಯಾರನ್ನು ಬೇಕಾದ್ರೂ ಆಯ್ಕೆ ಮಾಡಿಕೊಳ್ಳೋ ಸ್ವಾತಂತ್ರ್ಯ ಇದೆ. ಈ ಹುಡುಗನಿಗೂ ತಿಂಗಳಿಗೆ ಒಂದೈವತ್ತು ಸಾವಿರ ಸಂಬಳ ಬರುತ್ತೆ. ಆದರೆ ಇವನೋ , ಯಾವತ್ತೂ ಅದಕ್ಕೆ ಗಮನ ಕೊಟ್ಟೋನಲ್ಲ. ಸಮಯ ಸಿಕ್ರೆ ಸಾಕು, ಆ ಊರು-ಈ ಊರು ಅಂತ ತಿರುಗ್ತಾನೇ ಇರ್ತಾನೆ.  ಇವನ ಕಚೇರಿಯಲ್ಲಿ ಸೀನಿಯರ್ ಹುದ್ದೆ ಇವನದೆ.  ಅದು software ಇಂಜಿನಿಯರ್ರಿಗಿಂತಲೂ ಒಳ್ಳೆಯ ಹುದ್ದೇನೆ. ಇದೆಲ್ಲಾ ನಮಗೆ-ನಿಮಗೆ ಬೇಗ ಅರ್ಥವಾಗೋ ಅಂತಹುದ್ದಲ್ಲ. ಆದ್ರೆ , ನನಗೆ ಆಶ್ಚರ್ಯ ಆಗ್ತಾ ಇರೋ ವಿಷಯ ಅಂದ್ರೆ, ಅಷ್ಟೊಂದು ವಿಶಾಲ ಮನೋಭಾವ, ಉದಾರದಾಯಿತ್ವ ಹೊಂದಿದ್ದ ನಿಮ್ಮ ಮನಸ್ಸು-ವ್ಯಕ್ತಿತ್ವ ಹೀಗೇಕಾಯ್ತು ಅಂತ ? ! ".

(ಮುಂದುವರಿಸುತ್ತೇನೆ..)

Jul 21, 2010

ಆಹಾ ! ನೋಡದೊ ಹೊನ್ನಿನ ಜಿಂಕೆ ...

ಅದೊಂದು ಬಸ್ಸು. ಆ ಬಸ್ಸಿಗೆ ಬಾಗಿಲುಗಳಿರಲಿಲ್ಲ. ಬಸ್ಸೇ ಬಿರಿದು ಸಿಡಿದು ಹೋಗುವಂತೆ ಜನ ಅದರೊಳಗೆ ತುರುಕಿಕೊಂಡಿದ್ದರು. ಹಳ್ಳ-ಗುಂಡಿಗಳಿಂದ ಕೂಡಿದ್ದ ’ರಸ್ತೆ’ ಎನ್ನುವುದರ ಮೇಲೆ ಆ ’ಬಸ್ಸು’ ನಿಧಾನವಾಗಿ ಚಲಿಸುತ್ತಿತ್ತು. ಅದು express ಬಸ್ಸು. ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ನಾನಾ ಸ್ಟಾಪುಗಳು. ಒಂದೊಂದು ಸ್ಟಾಪಿನಲ್ಲೂ ಹತ್ತರಿಂದ ಹದಿನೈದು ನಿಮಿಷಗಳ ಕಮರ್ಷಿಯಲ್ ಬ್ರೇಕ್ !. ಡಯಾಬಿಟಿಸ್ ಇದ್ದು, ಹದಿನೈದು ನಿಮಿಷಕ್ಕೊಮ್ಮೆ ಮೂತ್ರವಿಸರ್ಜನೆ ಮಾಡಲೇಬೇಕಾದವರಿಗೆ ’ಈ’ ಬಸ್ಸು ಹೇಳಿ ಮಾಡಿಸಿದಂತಿತ್ತು. ತಾವು ಇಳಿಯಬೇಕಾಗಿರುವ ಸ್ಥಳ ಬಂದರೂ, ಸೀಟು ಬಿಟ್ಟು ಏಳಲೊಲ್ಲೆ ಎಂಬ ಮನೋಭಾವದಲ್ಲಿ ಅಂಟಿಕೊಂಡು ಕುಳಿತಿರುತ್ತಿದ್ದ ಜನರನ್ನು ಕಂಡಕ್ಟರನೇ ಕರೆದು ’ಎಬ್ಬಿಸಿ’ ಕೆಳಗೆ ಇಳಿಸಬೇಕಿತ್ತು. ಇಂತಹ ಅಪೂರ್ವವಾದ ಬಸ್ಸಿನಲ್ಲೇ ’ಗೋಪಾಲಯ್ಯ’ ಮತ್ತು ’ಚಿರಂತ’ ಪ್ರಯಾಣಿಸಲೇಬೇಕಾದ ಸಂದರ್ಭ ಒದಗಿ ಬಂದಿತ್ತು. ಬೆಂಗಳೂರಿನಿಂದ ಸಂಗಮೇಶ್ವರ ಪೇಟೆಯ ತನಕ ಸುಮಾರು ೩೦೦ ಕಿ.ಮೀ ದೂರವನ್ನು ನಿರಾಳವಾಗಿ ಕ್ರಮಿಸಿದ್ದ ಚಿರಂತನಿಗೆ , ಮುಂದಿನ ೨೦ ಕಿ.ಮೀ. ದೂರದ ’ಮಾರ್ಕಂಡೇಯ ಪುರವನ್ನು ತಲುಪುವುದು ಪ್ರಯಾಸದ ಪ್ರಯಾಣವಾಗಿತ್ತು. ಸಂಗಮೇಶ್ವರ ಪೇಟೆಯಲ್ಲಿಳಿದು ಇನ್ನೊಂದು ಸರ್ಕಾರಿ ಬಸ್ಸು ಹಿಡಿದು ಮಾರ್ಕಂಡೇಯ ಪುರವನ್ನು ತಲುಪಬೇಕಿತ್ತು. ಹಾಗೆಯೇ, ಆಶ್ಚರ್ಯವೆಂಬಂತೆ ನಿಗದಿತ ಸಮಯಕ್ಕೆ ಸರಿಯಾಗಿ ಬಂದ ಬಸ್ಸೊಂದನ್ನು ಹತ್ತಿದ ಗೋಪಾಲಯ್ಯ ಮತ್ತು ಚಿರಂತ, ಮಾರ್ಕಂಡೇಯ ಪುರಕ್ಕೆ ಎರಡು ಟಿಕೀಟುಗಳನ್ನು ಪಡೆದುಕೊಂಡರು. ಟಿಕೀಟಿನ ಮುಖದ ಮೇಲೆ express ಎಂದಿದುದನ್ನು ನೋಡಿ ಚಿರಂತನಿಗೆ ರವಷ್ಟು ಸಂತೋಷವಾಗಿತ್ತು. ಬಸ್ಸು ಐದು ಕಿ.ಮೀ. ಕ್ರಮಿಸುವಷ್ಟರಲ್ಲಿ ಅವನ ಮುಖ ಹರಳೆಣ್ಣೆ ಕುಡಿದವರ ಮುಖದಂತಾಗಿತ್ತು. ಬೆಂಗಳೂರಿನಲ್ಲಿ ತನ್ನ ಐಶಾರಾಮಿ ಬೈಕಿನಲ್ಲಿ ಬುರ್ರೆಂದು ತಿರುಗಾಡಿಕೊಂಡಿದ್ದವನನ್ನು ದಿಢೀರೆಂದು ಎತ್ತಿನ ಬಂಡಿಯ ಮೇಲೆ ಕುಳ್ಳಿರಿಸಿ ’ನಡೆ ಮುಂದೆ’ ಎಂದರೆ ಹೇಗಾಗಬೇಕು !?.  ಗೋಪಾಲಯ್ಯನವರದು ಷಷ್ಟಬ್ದಿ ಪೂರೈಸಿದ್ದ ವಯಸ್ಸು. ಚಿರಂತನಿಗೆ ಈಗಷ್ಟೇ ವಿವಾಹದ ವಯಸ್ಸು. ಬೆಂಗಳೂರಿನ ಬಹು ರಾಷ್ಟ್ರೀಯ ಕಂಪೆನಿಯೊಂದರಲ್ಲಿ ಯೊಗ್ಯ ಕೆಲಸ ಮಾಡಿಕೊಂಡಿರುವವನು. ತಮ್ಮ ವಯಸ್ಸು ಹಾಗೂ ಅನುಭವಕ್ಕೆ ತಕ್ಕಂತೆ ಗೋಪಾಲಯ್ಯ ಎಲ್ಲಿ ಬೇಕಾದರೂ ತಿರುಗಬಲ್ಲವರಾಗಿದ್ದರು. ಚಿರಂತನಿಗೆ ಅಂತಹ ಅನುಭವಗಳು ಕಡಿಮೆಯಿತ್ತು. ತಂದೆಯ ಮಾತಿಗೆ ಕಟ್ಟುಬಿದ್ದು ’ಹೆಣ್ಣು’ ನೋಡುವುದಕ್ಕೆ ಗೋಪಾಲಯ್ಯನವರೊಟ್ಟಿಗೆ ಚಿರಂತ ಮಾರ್ಕಂಡೇಯ ಪುರಕ್ಕೆ ಹೊರಟಿದ್ದು ಅವನ ಮಟ್ಟಿಗೆ ಒಂದು ಸಾಧನೆಯೆ !.  ’ಈಗಲೇ ಮದುವೆ ಬೇಡ’ ಎಂದು ಹಟ ಹಿಡಿದಿದ್ದ ಮಗನನ್ನು ಹಾಗೂ-ಹೀಗೂ ಓಲೈಸಿ , ತಮ್ಮ ಸ್ನೇಹಿತ ಗೋಪಾಲಯ್ಯನೊಟ್ಟಿಗೆ ಹೆಣ್ಣು ನೋಡಿಕೊಂಡು ಬರಲು ಕಳುಹಿಸಿದ್ದರು ಶ್ರೀನಿವಾಸರಾಯರು. ಗೋಪಾಲಯ್ಯನವರಿಗೂ ರಾಯರ ಬಗೆಗೆ ಅನನ್ಯ ಪ್ರೀತಿಯಿತ್ತು. ಅವರಿಬ್ಬರೂ ಬಾಲ್ಯದ ಗೆಳೆಯರು. ಅದೂ, ಚಡ್ಡಿ ಹಾಕಿಕೊಳ್ಳುವುದಕ್ಕೂ ಮುಂಚಿನಿಂದಲೆ !. ಅಂದಮೇಲೆ ರಾಯರ ಮಾತಿಗೆ ಗೋಪಾಲಯ್ಯ ಇಲ್ಲವೆಂದಾರೆ ?. ಹೊರಟಿತು ’ಸವಾರಿ’ ಮಾರ್ಕಂಡೇಯ ಪುರಕ್ಕೆ. ಬಹಳ ತ್ರಾಸದಾಯಕ ಪ್ರಯಾಣದ ನಂತರ ಇಬ್ಬರೂ ಮಾರ್ಕಂಡೇಯ ಪುರದಲ್ಲಿ ಬಂದಿಳಿದಾಗ ಮಧ್ಯಾಹ್ನ ೧೨ ಗಂಟೆಯಾಗಿತ್ತು. ಮುಂಗಾರಿನ ಮೋಡಗಳು ಬಿಸಿಲ ಝಳವನ್ನು ಕಡಿಮೆಗೊಳಿಸಿದ್ದರಿಂದ ಚಿರಂತನಿಗೆ ಒಂದಷ್ಟು ಸಮಾಧಾನವಾಯಿತು.

" ರೀ ಗೋಪಾಲಯ್ಯ, ಎಲ್ರೀ ಅವರ ಮನೆ ? "
ತಮ್ಮಷ್ಟಕ್ಕೆ ಅದೇನನ್ನೋ ಯೋಚಿಸುತ್ತಿದ್ದ ಗೋಪಾಲಯ್ಯ, ಚಿರಂತನ ಮಾತಿನಿಂದ ವಾಸ್ತವಕ್ಕೆ ಬಂದರು.
" ಇಲ್ಲೇ, ಇನ್ನು ಎರಡು ಕಿ.ಮೀ. ಇದೇ ದಾರಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿಬಿಟ್ಟರೆ ರಸ್ತೆ ಬದಿಯಲ್ಲಿ ಕಾಫಿ಼ ತೋಟವೊಂದು ಸಿಗುತ್ತೆ, ಅಲ್ಲೇ ಇರೋದು ಅವರ ಮನೆ "  ಇಷ್ಟು ಹೇಳಿ ಗೋಪಾಲಯ್ಯ ಸರಸರನೆ ಹೆಜ್ಜೆ ಹಾಕಲು ಶುರುವಾದರು.
" ಇಷ್ಟಾಗಿದ್ದಲ್ಲದೆ ಇನ್ನು ನೆಡೆದು ಬೇರೆ ಹೋಗಬೇಕೆನ್ರಿ, ಮೊದಲೆ ಹೇಳಿದ್ದರೆ ನಾನು ಖಂಡಿತ ಬರ್ತಿರಲಿಲ್ಲ " ಚಿರಂತ ತನ್ನ ಹೆಗಲಲ್ಲಿದ್ದ ಬ್ಯಾಗನ್ನು  ಕೆಳಗೆ ಬಿಸುಟು ನಿಂತ.
ಚಿರಂತನ ಬಳಲಿಕೆಯನ್ನು ಅರಿತ ಗೋಪಾಲಯ್ಯ ಸಾವಧಾನವಾಗಿ ಬ್ಯಾಗನ್ನು ಮತ್ತೆ ಅವನ ಹೆಗಲಿಗೇರಿಸಿದರು.
"ಹುಡುಗಿ ತುಂಬ ಒಳ್ಳೆಯವಳು ಚಿರಂತ. ಆಚಾರ-ವಿಚಾರ ತಿಳಿದುಕೊಂಡಿರುವವಳು. ಸಂಪ್ರದಾಯಸ್ತರ ಮನೆಯ ಹುಡುಗಿ. ಆಕೆಯ ತಂದೆ-ತಾಯಿ ನನಗೂ ಆತ್ಮೀಯರಾಗಬೇಕು. ನೀನೊಮ್ಮೆ ವಧುವನ್ನು ನೋಡಿದೆಯೆಂದರೆ, ’ಇಲ್ಲ’ ಅನ್ನೋ ಮಾತೆ ನಿನ್ನಿಂದ ಬರೋದಿಲ್ಲ. ನೀನು ಒಪ್ಪಿಕೊಂಡ ನಂತರ ಸಂಪ್ರದಾಯದಂತೆ ಹೆಣ್ಣು ನೋಡೋ ಶಾಸ್ತ್ರ ಮಾಡೊಣ. ಏನಂತಿಯಾ ? "
" ನಾನು ಒಪ್ಪಿದರೆ ಸಾಕೆನ್ರೀ, ಆ ಹುಡುಗಿನೂ ಒಪ್ಪಬೇಕಲ್ವಾ, ನನ್ನಂತಹ ಎಡಬಿಡಂಗಿಯನ್ನು ಆಕೆ ಒಪ್ಪಿಕೊಂಡರೆ ಅದು ಆಕೆಯ ದುರಾದೃಷ್ಟವಷ್ಟೆ. ಹೋಗಲಿ ಬಿಡಿ.., ಇದೇನ್ರೀ ಗೋಪಾಲಯ್ಯ , ಬರೀ ಕಾಡಿನ ತರಹ ಕಾಣ್ತಾ ಇದೆ. ಮನೆಗಳೇ ಇಲ್ವೇನ್ರೀ ಇಲ್ಲಿ !? " ತಾನು ನಡೆದುಕೊಂಡು ಬಂದ ಅರ್ಧ ಕಿ.ಮೀ. ದಾರಿಯಲ್ಲಿ ಮನೆಗಳನ್ನು ಕಾಣದೆ ಕೇವಲ ಮರ-ಗಿಡಗಳನ್ನು ಕಂಡ ಚಿರಂತನ ಪ್ರಶ್ನೆ ಸಹಜವೆನಿಸಿತು ಗೋಪಾಲಯ್ಯನವರಿಗೆ.
ಆತ್ಮೀಯತೆಯಿಂದ ಅವನ ಬೆನ್ನುತಟ್ಟಿದರು ಗೋಪಾಲಯ್ಯ.  " ಇದು ಕಾಡಿನ ದಾರಿಯೇ ರಾಜ !. ಕಾಡಿನ ಒಳಗೆ ತಮ್ಮದೇ ಒಂದು ಕಾಫಿ಼ತೋಟ ಮಾಡಿಕೊಂಡು, ಸ್ವಂತ ಮನೆಯನ್ನೂ ಕಟ್ಟಿಕೊಂಡು ನೆಮ್ಮದಿಯ ಜೀವನ ಮಾಡ್ತಾ ಇದ್ದಾರೆ ನಿನ್ನ ಭಾವೀ ಮಾವನವರು ! "
ಗೋಪಾಲಯ್ಯನವರ ಮಾತನ್ನು ಕೇಳಿ ಚಿರಂತನಿಗೆ ನಗೆಯುಕ್ಕಿತು. " ಅಲ್ರೀ, ನಾನಿನ್ನು ಯಾರನ್ನೂ ನೋಡಿಯೇ ಇಲ್ಲ. ಭೇಟಿಯೂ ಆಗಿಲ್ಲ. ಆಗಲೇ ಸಂಬಂಧ ಕಲ್ಪಿಸ್ತಾ ಇದೀರಲ್ರೀ.., ಏನೋ , ನಿಮ್ಮ ಜೊತೆ ಬರದೇ ಇದ್ರೆ ನಮ್ಮಪ್ಪ ನನಗೆ ’ಕ್ಲಾಸ್’ ತಗೋತಿದ್ರು..ಬೇಸರ ಪಟ್ಟುಕೊಳ್ತಾ ಇದ್ರು ಅನ್ನೋ ಒಂದೇ ಕಾರಣಕ್ಕೆ ನಿಮ್ಮ ಜೊತೆ ಬಂದಿದೀನಿ ಅಷ್ಟೆ. ನೀವು ಈಗಲೇ ಸಂಬಂಧ ಕಲ್ಪಿಸಬೇಡ್ರಿ.."
ಹೀಗೇ ಸಾಗಿತ್ತು ಮಾತಿನ ಲಹರಿ.  ಕ್ರಮಿಸುತ್ತಿದ್ದ ದೂರವೂ ಸಾಗಿತ್ತು.  ಹಾಗೆ ಸಾಗುತ್ತಲೆ ಇದ್ದ ಚಿರಂತನಿಗೆ ನಾಮ ಫಲಕವೊಂದು ಕಾಣಿಸಿತು.  "ಭದ್ರಾ ವನ್ಯಧಾಮ" ಎಂದು ಬರೆದಿದ್ದುದರ ಕೆಳಗೆ ದಪ್ಪಕ್ಷರಗಳಲ್ಲಿ "ಆನೆಗಳಿವೆ ಎಚ್ಚರಿಕೆ" ಎಂದು ಬರೆಯಲಾಗಿತ್ತು. ಚಿರಂತ ಬೋರ್ಡಿನತ್ತ ಗೋಪಾಲಯ್ಯನವರ ಗಮನವನ್ನು ಸೆಳೆದ,...
" ಗೋಪಾಲಯ್ಯ, "ಆನೆಗಳಿವೆ ಎಚ್ಚರಿಕೆ" ಅನ್ನೋದು symbollic ಇರಬಹುದೇನ್ರೀ ? " ಚಿರಂತ ನಗುತ್ತಾ ಕೇಳಿದ. ಗೋಪಾಲಯ್ಯನವರೂ ನಕ್ಕರು..
"ಹಾಗೇನಿಲ್ಲಪ್ಪಾ , ನಿನ್ನ ಭಾವೀ ಪತ್ನಿ ಶಾಖವಾಗಿದ್ದಾಳೆ. ಶರೀರ-ಶಾರೀರಗಳನ್ನು ಹಿತ-ಮಿತವಾಗಿ ಕಾಪಾಡಿಕೊಂಡು ಬಂದಿದ್ದಾಳೆ. ನಿನಗೆ ಆಕೆಯ ಶರೀರದ ಬಗೆಗೆ ಯಾವ ಆತಂಕವೂ ಬೇಡ ".
ಇನ್ನೂ ಹೆಚ್ಚು ಮಾತನಾಡಿದರೆ ಈಗಲೇ ಎಲ್ಲರೊಡನೆಯೂ ಸಂಬಂಧ ಕಲ್ಪಿಸಿಬಿಡುತ್ತಾರೆನ್ನುವ ಯೋಚನೆಯಲ್ಲಿ ಚಿರಂತ ಮಾತಿಗೆ ತಾತ್ಕಾಲಿಕ ವಿರಾಮವನ್ನಿಟ್ಟ. ಮುಂದಿನ ದಾರಿ ಮೌನವಾಗಿಯೇ ಸಾಗಿತು. ಕಾಡಿನದಾರಿ, ಹಸಿರಿನ ಪರಿಸರ , ನಿತ್ಯವೂ ಮಾಲಿನ್ಯದೊಳಗೇ ಸಂಚರಿಸುತ್ತಿದ್ದ ಚಿರಂತನ ಮನಸಿಗೆ ಹಿತವೆನಿಸತೊಡಗಿತು. ಅದೇ ಮಧುರಲಹರಿಯಲ್ಲಿರುವಾಗಲೇ ಗೋಪಾಲಯ್ಯ ’ಮನೆ’ ಬಂತೆಂದು ಎಚ್ಚರಿಸಿದರು. ಸುತ್ತಲೂ ’ಕಾಫಿ಼’ ಗಿಡಗಳು. ಗಿಡಗಳ ಮಧ್ಯೆ  ಹತ್ತಾಳೆತ್ತರದ ಮರಗಳು, ಮರಗಳನ್ನು  ತಬ್ಬಿಕೊಂಡು ಹಬ್ಬಿದ್ದ ಏಲಕ್ಕಿ, ಮೆಣಸು, ವೀಳ್ಯದೆಲೆಯ ಬಳ್ಳಿಗಳು , ಇಡೀ ಪರಿಸರ ಚಿರಂತನ ಮನಸನ್ನು ಹಿಡಿದಿಟ್ಟಿತು. ಇವುಗಳ ನಡುವೆ ದೊಡ್ಡದೇ ಎನ್ನಬಹುದಾದ ಮಂಗಳೂರು ಹೆಂಚಿನ ಮನೆ. ಹಾಗೇ ಮೈಮರೆತಿದ್ದ ಚಿರಂತನನ್ನು ಗೋಪಾಲಯ್ಯ ಮನೆಯೊಳಗೆ ಬರುವಂತೆ ಕರೆದರು. ’ಶೂ’ ಕಳಚಿಟ್ಟ ಚಿರಂತನ ಕೈಯಿಗೆ ಹೆಂಗಸೊಬ್ಬರು ನೀರಿತ್ತರು. ಕೈ-ಕಾಲು ತೊಳೆದುಕೊಂಡು ಮನೆಯ ಹಜಾರಕ್ಕೆ ಕಾಲಿಟ್ಟವನಿಗೆ ಯಾವುದೋ ಸಿನಿಮಾದಲ್ಲಿಯ ತೊಟ್ಟಿ ಮನೆಯನ್ನು ನೋಡಿದ ಅನುಭವವಾಯ್ತು. ಗೋಪಾಲಯ್ಯ ಅದಾಗಲೇ ಚಾಪೆಯ ಮೇಲೆ ತಳವೂರಿದ್ದರು. ಚಿರಂತ ಅವರ ಪಕ್ಕದಲ್ಲೇ ಕುಳಿತುಕೊಂಡ. ಕುಳಿತುಕೊಂಡಿದ್ದು ನೆಪವಷ್ಟೆ..ಅವನ ಕಣ್ಣು ಬೇರೇನನ್ನೋ ಹುಡುಕುತ್ತಿತ್ತು !.

(ಮುಂದುವರಿಸುತ್ತೇನೆ..)  
............................................................................

{ ನಮ್ಮ ಮನೆಯಲೊಂದು ಪುಟ್ಟ ಪಾಪವಿರುವುದು,
ಎತ್ತಿಕೊಳಲು ಹೋದರದಕೆ ಕೋಪ ಬರುವುದು,
ಕೋಪ ಬಂದು ತನ್ನ ಮೈಯ ಪರಚಿಕೊಳುವುದು,
ಪರಚಿಕೊಂಡು ತನಗೆ ತಾನೇ ಅತ್ತುಬಿಡುವುದು . ಜಿ.ಪಿ.ಆರ್. }

(ಮೂರುವರೆ ತಿಂಗಳಿನ ನನ್ನ ಮಗನ ತುಂಟಾಟಗಳಿಂದಾಗಿ ಒಂದು ತಿಂಗಳಿನಿಂದ ನನ್ನ ಬ್ಲಾಗಿನಲ್ಲಿ ಏನೂ ಬರೆಯಲಾಗಿರಲಿಲ್ಲ. ಸದ್ಯಕ್ಕೆ ಕತೆಯೊಂದರ ಭಾಗವನ್ನು ಬರೆದಿದ್ದೇನೆ. ಮುಂದಿನ ಭಾಗವನ್ನು ಬೇಗ ಬರೆಯುತ್ತೇನೆ. ಎಂದಿನಂತೆ ಸ್ವೀಕರಿಸುವೆರೆಂದು ನಂಬಿದ್ದೇನೆ. )

****************************************************

ಕೊನೆಕಿಡಿ.

ಶಂಭುಲಿಂಗನಿಗೆ ಅಚಾನಕ್ಕಾಗಿ ಮಾತು ನಿಂತುಹೋಯಿತು. ವೈದ್ಯರನ್ನು ಕಾಣಲು ಒಡೋಡಿ ಹೋದ.
ಡಾಕ್ಟರೆದುರಿಗೆ ಇಟ್ಟಿದ್ದ ಹಾಳೆಯೊಂದರ ಮೇಲೆ ತನ್ನ ಸಮಸ್ಯೆಯನ್ನು ಬರೆದ. " ನನಗೆ ಮಾತು ನಿಂತು ಹೋಗಿದೆ " ಎಂದು.
ವೈದ್ಯ ಮಹಾಶಯರಿಗೆ ಅರ್ಥವಾಯಿತು. ಶಂಭುಲಿಂಗನನ್ನು ಪ್ರಶ್ನಿಸಿದರು..

" ನಿಮ್ಮ ಸಮಸ್ಯೆ ನನಗೆ ಅರ್ಥವಾಗಿದೆ. ನಿಮ್ಮ ಮಾತು ನಿಂತುಹೋಗಿರುವುದು ದೊಡ್ಡ ಸಮಸ್ಯೆಯೇನಲ್ಲ. ಇದನ್ನು ಖಂಡಿತ ಗುಣಪಡಿಸಬಹುದು. ಈಗ ಹೇಳಿ..ಅಂದಹಾಗೆ
 ಯಾವಾಗ ಹೀಗಾಯಿತು ನಿಮಗೆ...ಒಂದಷ್ಟು ನಿಮ್ಮ ಮಾತಿನಲ್ಲೇ ಹೇಳಿ..! "

 ಶಂಭುಲಿಂಗ ತನ್ನ  ಮುಂದಿದ್ದ ಮೇಜಿಗೆ ಹಣೆ ಚಚ್ಚಿಕೊಂಡ !!.

 ---------------------------------------------------------------------------------

                                                 ವಂದನೆಗಳೊಂದಿಗೆ...