Feb 15, 2010

ಸುರಭಿ V/S ದೊಡ್ಡಗೌಡ್ರು...

                       News courtesy : Kannadaprabha
ಬದುಕುವ ಹಕ್ಕು ಸಕಲ ಜೀವಿಗಳಿಗೂ ಇದೆ. ’ಆನೆ’ಯಿಂದ ’ಅಮೀಬಾ’ವರೆಗೂ ಜೀವಿಗಳಿಗೆ ತನ್ನದೇ ಆದ ಬದುಕುವ ಪರಿಸರವಿದೆ. ಹಾಗೆಯೇ, ’ಅಮೃತ’ ಸಮಾನವಾದ ಹಾಲನ್ನು ನೀಡುವ ’ಸುರಭಿ’ ಗೂ ತನ್ನಂತ್ಯದವರೆಗೆ ಬದುಕುವ ಎಲ್ಲಾ ಹಕ್ಕನ್ನೂ ಸೃಷ್ಟಿಯೇ ನೀಡಿದೆ. ನಮ್ಮ ಮಾಜಿ ಪ್ರಧಾನಿಗಳಾದ ಮಾನ್ಯ ದೇವೇಗೌಡರು ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ನೀಡಿ ನನ್ನ ವಿಚಾರಕ್ಕೆ ಮತ್ತಷ್ಟು ಇಂಬು ಕೊಟ್ಟಿದ್ದಾರೆ. ಇಲ್ಲಿ ಅವರುದುರಿಸಿರುವ ಅಣಿಮುತ್ತುಗಳನ್ನು ಮಾತ್ರ ವಿಚಾರ ಮಾಡುತ್ತಿದ್ದೇನೆ...
  ಮಾಧ್ಯಮಗಳಿಗೆ ಹೇಳಿಕೆ ನೀಡೀರುವ ದೊಡ್ಡಗೌಡರು, ಗೋಹತ್ಯೆ ನಿಷೇಧವನ್ನು ವೈಜ್ಞಾನಿಕವಾಗಿ ವಿಮರ್ಷಿಸಿ ಜಾರಿಗೆ ತರಬೇಕೆಂದು ಹೇಳುತ್ತಾ ಗೋಹತ್ಯೆ ನಿಷೇಧದ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಷೇಧ ಮಾಡುವುದೇ ಆದರೆ ವೈಜ್ಞಾನಿಕ ವಿಧಾನದಲ್ಲೇ ನಿಷೇಧಿಸೋಣ ಬಿಡಿ !. ಸಮಾಜದ ಒಂದು ಸಮುದಾಯವನ್ನು ಓಲೈಸಲು ’ಆಳುವ ಕೂಟ’ ನೆಡೆಸುತ್ತಿರುವ ಹುನ್ನಾರವೇ ಇದಾದರೆ, ದೊಡ್ಡಗೌಡರ ಮಾತುಗಳೂ ಸಹ ಸಮಾಜದ ಒಂದು ಸಮುದಾಯದ ಪರವಾಗಿಯೇ ಇದೆ. ಗೋಮಾಂಸ ಮಾರಾಟವನ್ನೇ ನೆಚ್ಚಿಕೊಂಡಿರುವ ಸಂಸಾರಗಳು ಬೀದಿಗೆ ಬರುವುದಾದರೆ, ಆಲೂಗೆಡ್ಡೆಗೆ ರೋಗ ಬಂದು , ಅಕಾಲಿಕ ಮಳೆಯಿಂದ ಕಾಫಿಗೆ ಕೊಳೆರೋಗ ಬಂದು ರೈತರೂ ಬೀದಿಗೆ ಬಿದ್ದಿದ್ದಾರೆ. ಅದೂ ಗೌಡರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ..!. ಆದರೆ ಗೌಡರ ಹೋರಾಟವೇಕೋ ’ನೈಸ್’ ರಸ್ತೆಯಲ್ಲೇ ಉರುಳಾಡುತ್ತಿದೆ. ಗೋಹತ್ಯೆ ನಿಷೇಧವನ್ನು ವಿರೋಧಿಸುವುದರಿಂದ ಒಂದು ವರ್ಗದ ಜನರ ವಿಶ್ವಾಸವನ್ನು (ಓಟನ್ನು !) ಗಳಿಸಬಹುದೆಂದು ಗೌಡರು ಭಾವಿಸಿದ್ದರೆ..ಅದು ಅವರ ಹಳೆಯ ರಾಜಕೀಯ ಲೆಕ್ಕಾಚಾರವೇ ಸರಿ. ಸಮಾಜದ ಎಲ್ಲಾ ವರ್ಗದಲ್ಲೂ ವಿಚಾರವಂತರಿದ್ದಾರೆ , ಅರಿವು ಮೂಡಿಸುವ ಪ್ರಯತ್ನವೂ ಸಾಗಿದೆ. ತಿರುವಣ್ಣಾಮಲೈಗೋ, ಮಧುರೈಗೋ ತೆರಳಿ ’ಗೋಮಾತೆ’ಯ ಬಾಲಕ್ಕೇss ಶ್ರದ್ಧಾ-ಭಕ್ತಿಯಿಂದ ಪೂಜೆಗೈಯುವ ಗೌಡರು ಕರ್ನಾಟಕದಲ್ಲಿ ಗೋಹತ್ಯೆ ನಿರಂತರವಾಗಿ ಸಾಗಲಿ ಎಂಬಂಥ ಮಾತುಗಳನ್ನಾಡುತ್ತಾರೆ.
ಆಳುವ ಕೂಟವೂ ಗೋಹತ್ಯೆ ನಿಷೇಧ ವನ್ನು ರಾಜಕೀಯವಾಗಿಯೇ ಬಳಸಿಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ವಿರೋಧಿಗಳ ವಿರೋಧವನ್ನು ನಿರೀಕ್ಷಿಸಿಯೇ ಇದ್ದ ರಾಜ-ಮಂತ್ರಿಗಳು ಸರಿಯಾದ ಸಮಯ ನೋಡಿ ’ದಾಳ’ ಹಾಕಿದ್ದಾರಷ್ಟೆ. ಇಂತಹ ’ದಾಳ’ಗಳು ಮಾಧ್ಯಮಗಳಿಗೆ ಆಹಾರವಾಗಬಲ್ಲವೇ ವಿನಹ ಜನಸಾಮಾನ್ಯರ ಮನಗೆಲ್ಲಲು ಸಾಧ್ಯವಾಗುವುದಿಲ್ಲ. ವಿರೋಧದ ನಡುವೆಯೂ ಈ ಕಾಯಿದೆಯೇನಾದರೂ ಅನುಮೋದನೆಗೊಂಡು ಜಾರಿಗೆ ಬಂದರೆ, ಪ್ರಾಮಾಣಿಕವಾಗಿ ಅನುಷ್ಟಾನಗೊಂಡರೆ ಅದೊಂದು ರಾಜಕೀಯ ಪವಾಡವೇ ಸರಿ !. ಗೋಮಾಂಸವನ್ನು ಮನೆಯಲ್ಲೂ ಸಂಗ್ರಹಿಸಿಡುವಂತಿಲ್ಲ ಎಂಬ ಅಂಶವೂ ಕಾಯಿದೆಯಲ್ಲಿದೆಯಂತೆ. ಗೌಡರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ’ಕೆಲವರು ಹೊರ ದೇಶಗಳಿಂದ ಆಮದು ಮಾಡಿಕೊಂಡು ’ಬೀಫ್’ ಅನ್ನು ಇಟ್ಟುಕೊಳ್ಳುತ್ತಾರೆ, ಅದನ್ನೂ ಬೇಡವೆಂದರೆ ಹೇಗೆ?’ ಎಂದು ಕೇಳುತ್ತಾರೆ. ಏಕೆ ? ನಮ್ಮ ದೇಶದ ನಾಟಿ ಹಸುಗಳ ಮಾಂಸ ರುಚಿಕರವಲ್ಲವೇ ? ಭರತಖಂಡದ ಪ್ರಧಾನಿಯಾಗಿದ್ದವರು, ಸಮಾಜದ ಎಲ್ಲಾ ಸ್ತರದವರ ಮುಖವಾಣಿಯಾಗಬೇಕಾದವರು ’ಕೆಲವೇ ಕೆಲವರು’ ಸಂಗ್ರಹಿಸಿಟ್ಟುಕೊಳ್ಳುವ ಗೋಮಾಂಸದ ಪರವಾಗಿ ವಕಾಲತ್ತು ವಹಿಸಬೇಕೆ ? ದೊಡ್ಡಗೌಡರು ಇನ್ನೊಂದು ಮೂಲ’ಭೂತ’ವಾದ ಪ್ರಶ್ನೆಯನ್ನೇ ಕೇಳಿದ್ದಾರೆ...
ಹಳ್ಳಿಗಳಲ್ಲಿ ವಯಸ್ಸಾದ-ರೊಗಬಂದಿರುವ ಗೋವುಗಳನ್ನು ಮಾರಾಟಮಾಡುವ ಪದ್ದತಿಯಿದೆ, ಇಂತಹ ಗೋವುಗಳಿಂದ ಪ್ರಯೋಜನವೇನೂ ಇಲ್ಲ, ಇವನ್ನು ಏನು ಮಾಡಬೇಕು ? ಸಾಧ್ಯವಾದರೆ ಗೋಶಾಲೆಗಳನ್ನು ತೆರೆದು ಆಶ್ರಯ ನೀಡಬಹುದಲ್ಲವೇ " ಎನ್ನುತ್ತಾರೆ. ಸರ್ಕಾರೀ ಗೋಮಾಳಗಳ ಕಥೆ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ !.
ವಯಸ್ಸಾದವರನ್ನೆಲ್ಲಾ ವೃದ್ದಾಶ್ರಮಕ್ಕೆ ಸೇರಿಸಿಬಿಡಿ ಎನ್ನುವಂತಿದೆ ಗೌಡರ ಮಾತು. ಹಾಲು ಕುಡಿದು ಹಣ ಗಳಿಸಿ ಬದುಕುವ ಕಾವಾಡಿಗ ಗೋವಿನ ಅಂತ್ಯಕಾಲದಲ್ಲಿ ಅದರ ಉಪಚಾರ ಮಾಡಲಾರದ ಸ್ಥಿತಿ ತಲುಪಿದ್ದಾನೆಯೇ ? ಜನನಾಯಕರುಗಳ ಇಂತಹ ರಾಜಕೀಯ ಹೇಳಿಕೆಗಳೇ ಜನರ ಮನಸ್ಸು ಕದಡಲು ಕಾರಣವಾಗುತ್ತದೆ. ಇನ್ನು ವಯಸ್ಸಾದ-ರೋಗದ ಗೋವುಗಳನ್ನು ಏನು ಮಾಡಬೇಕು ಎನ್ನುತ್ತಾರೆ....ಗೌಡರಿಗೂ ವಯಸ್ಸಾಗಿದೆ...ರೋಗಗಳು ಬಂದಿರುವುದೂ ಸಹಜ ! , ಏನು ಮಾಡೋಣ ? ಮಾರಾಟ ಮಾಡಿ ಬಿಡೋಣವೇ? ಕಟುಕರಿಗೆ ಒಪ್ಪಿಸಿ ಬಿಡೋಣವೇ? ಇಲ್ಲಾ...ವಯಸ್ಸಾಯಿತೆಂದು ಮನೆಯಿಂದ ಹೊರಹಾಕಿ ಚಾಪೆ-ದಿಂಬು ಕೊಡೋಣವೇ..!? ವಿರೋಧಕ್ಕಾಗಿಯೇ ವಿರೋಧಿಸುವುದು ಪ್ರಸ್ತುತ ದಿನಗಳ ರಾಜಕೀಯ ಜಾಣ್ಮೆಯೇ ಅಲ್ಲ. ಇಂತಹ ವಿರೋಧವನ್ನು   ಗೌಡರಿಂದ  ನಿರೀಕ್ಷಿಸಿಯೇ ಇದ್ದ ’ಆಳುವ ಕೂಟದವರು’ ತಮ್ಮ ರಾಜಕೀಯ ನೈಪುಣ್ಯತೆಯನ್ನು ಮೆರೆದಿದ್ದೇವೆ ಎಂದುಕೊಂಡರೆ ಅದೊಂದು ಮೂರ್ಖತನದ ಪರಮಾವಧಿ. ಪುಣ್ಯಕೋಟಿಯ ನಾಡಲ್ಲಿ ಪ್ರಾಮಾಣಿಕತೆಯನ್ನು ನಾಯಕರಿಂದ ನಿರೀಕ್ಷಿಸಬಹುದೆ ??
 ಅಂದಹಾಗೆ ’ಖೇಣಿ’ ಸಾಹೇಬರು ’ಕುಮಾರಣ್ಣ’ನವರನ್ನು ’ಜಂಟಲ್ ಮ್ಯಾನ್’ ಎಂದು ಕರೆದಿದ್ದಾರಂತೆ. ಕುಮಾರಣ್ಣ ತೋಳೇರಿಸಿ "ಪಗೆವರ ನಿಟ್ಟೆಲ್ವಂ ಮುರಿವೊಡೆನೆಗೆ ಪಟ್ಟಂಗಟ್ಟಾ " ಎಂದು ನಿಂತರೆ "ಸೂಳ್ಪೆಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂದ ಭೀಷ್ಮರ ಛಾತಿ-ಮುತ್ಸದ್ದಿತನವನ್ನು ದೊಡ್ಡಗೌಡರು ತೋರಿಸಬಲ್ಲರೇ..!!?? 


ಟಿಪ್ಪಣಿ: "ಪಗೆವರ...ಗಟ್ಟಾ"...ಎಂಬ ವಾಕ್ಯ ಪಂಪಭಾರತದ್ದು..ಕರ್ಣ, ಭೀಷ್ಮರ ವಯಸ್ಸನ್ನು-ಶಕ್ತಿಯನ್ನು ಹಾಸ್ಯಮಾಡಿ ಯುದ್ಧದಲ್ಲಿ ಅವರ ಬದಲು ನನಗೆ ಪಟ್ಟಕಟ್ಟು..ವೈರಿಗಳನ್ನು ಹೊಡೆದೋಡಿಸುತ್ತೇನೆ ಎಂದಾಗ , ಭೀಷ್ಮರು ಮಾರ್ಮಿಕವಾಗಿ "ಸೂಳ್ಪೆಡೆಯ....ದೊಳ್" ..ಅಯ್ಯಾ ಈ ಮಹಾರಂಗದಲ್ಲಿ ನಿನಗೂ ಒಂದು ಸಮಯ ಬರುತ್ತದೆ ಅಣ್ಣಾ ಎನ್ನುತ್ತಾರೆ ! 




ಖೊನೆ ಖಿಡಿ :


ಶಂಭುಲಿಂಗ ಮಹಾನ್ ದೈವಭಕ್ತ !. ಅಂದು ಗುಡಿಗೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿದ...


ಪೂಜ್ಯರು ( ಪೂಜಾರ್ರೇ ...??) : ಏನಯ್ಯಾ ಶಂಭು ಇವತ್ತು ಇಲ್ಲಿವರೆಗೂ ಬಂದೆ ?


ಶಂಭುಲಿಂಗ                   : ಇವತ್ತು ಸಿವರಾತ್ರಿ ಅಲ್ಲ್ವರಾ...ಅದ್ಕೆ ಬಂದೆ ಬುದ್ದಿ...


ಪೂಜ್ಯರು                      : ದಿನಾ ಬಂದು ನಮಸ್ಕಾರ ಮಾಡಯ್ಯಾ...
                                     ನಿನಗೆ ಪುಣ್ಯ ಬರುತ್ತೆ...ಸ್ವರ್ಗ ಸಿಗುತ್ತೆ...


ಶಂಭುಲಿಂಗ                   : ನೀವೂ ದಿನಾ ಬತ್ತೀರ...ಅಡ್ ಬುಳ್ತೀರಾ...ಅಂಗಾರೆ ದಿಸಾ 
                                     ಸ್ವರ್ಗ  ನೋಡ್ಕಂಬತ್ತೀರಾ ಬುದ್ದಿ !!!!!??               

Feb 4, 2010

'ಒಡೆಯ’ ನ ಕಥೆ...

ಚಹಾ ಅಂಗಡಿ ’ಚಂದ್ರ’ನ ರೇಡಿಯೋ ಅರಚುತ್ತಲೇ ಇತ್ತು. ರೇಡಿಯೋದ ಎಲ್ಲಾ ಭಾಗಗಳನ್ನೂ ಒಗ್ಗೂಡಿಸಿ ಅದರ ಮೇಲೊಂದು ರಬ್ಬರ್ ಬ್ಯಾಂಡ್ ಹಾಕಿಟ್ಟಿದ್ದ ಚಂದ್ರ. ಅವನ ಪ್ರತಿಯ ಅನುಕಂಪದಿಂದಲೋ ಏನೋ , ಅದು ಅರಚುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.
  " ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..."


ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಾ ತಾವು ಹೊದ್ದಿದ್ದ ಶಲ್ಯದಿಂದ ಗಾಳಿಹಾಕಿಕೊಳ್ಳುತ್ತಾ ’ಕೃಷ್ಣರಾಯರು’ ಅಂಗಡಿಯ ಮುಂದೆ ಕುಳಿತಾಗಲೇ ಚಂದ್ರನಿಗೆ ಅರಿವಾದದ್ದು..ಗಿರಾಕಿಯೊಬ್ಬರು ಬಂದಿದ್ದಾರೆ ಎಂದು.  " ಓಹ್ ರಾಯರೇ...ಬಹಳ ದಣಿದಿದ್ದೀರಿ ಅನ್ಸುತ್ತೆ..ಶರಬತ್ತು ಕೊಡಲೇ..?" ರಾಯರು ಚಂದ್ರನನ್ನೊಮ್ಮೆ ಸುಡುವಂತೆ ನೋಡಿದರು.." ಪುಗಸಟ್ಟೆ ಕೊಡೋದಾದ್ರೆ ಕೊಡು..ಇಲ್ಲಾಂದ್ರೆ ಇಲ್ಲಿ ಕೂರೋದಿಲ್ಲ  ನಾನು..." ರಾಯರು ಏಳಲು ಮುಂದಾದರು. ಚಂದ್ರ ಮೊದಲೇ ಮಾಡಿಟ್ಟಿದ್ದ  ಶರಬತ್ತನ್ನು ರಾಯರಿಗೆ ತಂದುಕೊಟ್ಟ.  " ಏನ್ ರಾಯ್ರೆ ನೀವು ..ಈ ಇಳಿ ವಯಸ್ಸಿನಲ್ಲೂ ಆ ತುಂಡು ಭೂಮಿಗಾಗಿ ಅಲೆದಾಡ್ತಾ ಇದ್ದೀರಲ್ಲ..ನಿಮ್ಮ ಮಗನಿಗಾದ್ರು ಹೇಳಬಾರ‍್ದೆ..ಸ್ವಲ್ಪ ಓಡಾಡಿ ಜಮೀನನ್ನ ಬಿಡಿಸಿಕೊಡು ಅಂತ "  ತಗ್ಗಿಸಿದ್ದ ತಲೆಯನ್ನು ರಾಯರು ಎತ್ತಲಿಲ್ಲ. ವಿದೇಶದಲ್ಲಿರುವ ಮಗನಿಗೆ ಜಮೀನಿನ ಚಿಂತೆಯೂ ಇರಲಿಲ್ಲ. ಕಷ್ಟಪಟ್ಟು ಬೆಳೆಸಿದ್ದ ಹತ್ತಾರು ಎಕರೆ ಅಡಿಕೆ ತೋಟ ವಿನಾಕಾರಣ ಅನ್ಯರ ಪಾಲಾಗುವುದು ರಾಯರಿಗೆ ಇಷ್ಟವಿರಲಿಲ್ಲ. ಇಷ್ಟಕ್ಕೂ ರಾಯರದ್ದು ಹುಟ್ಟಿನಿಂದಲೂ ಸಂಕೋಚದ ಸ್ವಭಾವವೇ ! .  ಅಕ್ಕ-ಪಕ್ಕ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಕೋಣೆಯ ಮೂಲೆಯಲ್ಲಿ  ನಿಂತು ’ಹೂಸು’ ಬಿಡುವಷ್ಟು ಸಂಕೋಚ ಅವರಿಗೆ !. ತಮ್ಮ ಜಮೀನಿನ ಮೇಲೆ ’ಉಳುವವನೇ ಒಡೆಯ’ ಎಂಬ ಹಕ್ಕನ್ನು ಸಾಧಿಸಹೊರಟಿದ್ದ ’ಚನ್ನಪ್ಪ ’ ನ ವಿರುದ್ದ ನಿಂತಾಗಲೇ ರಾಯರು ತಮ್ಮ ಸಂಕೋಚ, ತಾಳ್ಮೆ, ನಮ್ರತೆ, ಎಲ್ಲವನ್ನೂ ಕಳೆದುಕೊಂಡದ್ದು.  ಚನ್ನಪ್ಪನೂ ಸಾಕಷ್ಟು ಉದಾರತೆಯಿಂದಲೇ ನೆಡೆದುಕೊಂಡಿದ್ದ, ಫಸಲು ಬಂದಾಗಲೆಲ್ಲಾ ಅವರಿಗೆ ತಲುಪಬೇಕಾದ್ದನ್ನು ತಲುಪಿಸುತ್ತಿದ್ದ. ’ಒಡೆಯ’ ನ ಕಾನೂನು ಬಂದಾಗಲೂ ರಾಯರ ಪಾಲನ್ನೇನೂ ಅವನು ಕಡಿಮೆ ಮಾಡಿರಲಿಲ್ಲ. ಆದರೆ ಅದೆಕೋ ಏನೋ ಒಂದು ದಿನ ರಾಯರಿಗೇ ಅನ್ನಿಸಿಬಿಟ್ಟಿತ್ತು..’ ಜಮೀನನ್ನು ಚನ್ನಪ್ಪನಿಂದ ಬಿಡಿಸಿಕೊಂಡು ಸ್ವಂತ ನೆಡೆಸಬೇಕೆಂದು ’ . ಈ ವಿಷಯ ಪ್ರಸ್ತಾಪವಾದಾಗಲೇ ಚನ್ನಪ್ಪನಿಗೆ ಪಿತ್ತ ನೆತ್ತಿಗೇರಿದ್ದು.  ’ಬಿಲ್ ಕುಲ್’ ಆಗುವುದಿಲ್ಲ ,ಎಂದ ಚನ್ನಪ್ಪನ ಹಠಮಾರೀ ಧೋರಣೆಗೆ ಬೇಸತ್ತ ರಾಯರು "ನಿನ್ನನ್ನು ಮಾಟ ಮಾಡಿಸಿಯಾದರೂ ತೆಗೆಯುತ್ತೇನೆ ಕಣೋ " ಎಂದು ಶಪಿಸಿ ಹೊರಬಂದಿದ್ದರು. ಪಾಪ ರಾಯರಿಗೇನು ಗೊತ್ತು, ಚನ್ನಪ್ಪ ಒಳಗಿಂದೊಳಗೇ ಹಣ ಖರ್ಚು ಮಾಡಿ ಜಮೀನಿನ ಖಾತೆ -ಪಹಣಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡದ್ದು. ಈ ವಿಚಾರ ರಾಯರಿಗೆ ತಡವಾಗಿಯೇ ತಿಳಿದರೂ ಅತ್ಯಂತ ಜಾಗ್ರತೆಯಾಗಿ ಪರಿಚಯದ ವಕೀಲರನ್ನು ಭೇಟಿಮಾಡಿ , ತಮ್ಮಲ್ಲಿದ್ದ ಧಾಖಲಾತಿಗಳನ್ನು ಒದಗಿಸಿ "ಏನಾದರೂ" ಮಾಡುವಂತೆ ವಿನಂತಿಸಿದರು. ರಾಯರ ವಯಸ್ಸಿನ ಸೋಲನ್ನು ಅರಿತ ವಕೀಲರು ಸಾಕ್ಷಿಗಳನ್ನಿಟ್ಟುಕೊಂಡು ವಾದ ಮಂಡಿಸಿದರು. ಆಶ್ಚರ್ಯವೆಂಬಂತೆ ತೀರ್ಪು ರಾಯರ ಪರವಾಗಿಯೇ ಬರುವುದರಲ್ಲಿತ್ತು.. ಆದರೂ ರಾಯರಿಗೇನೋ ಅನುಮಾನ-ಚಿಂತೆ ಕಾಡುತ್ತಿತ್ತು, ಕೋರ್ಟಿನ ಮುಂಭಾಗದಲ್ಲಿ ನಿಂತು ಚನ್ನಪ್ಪನಾಡಿದ್ದ ಕಠೋರ ನುಡಿಗಳು ಅವರನ್ನು ಇರಿಯುತ್ತಿತ್ತು.   " ಲೇ ಆರುವಾ..ನಿನ್ನ ಬಿಡಾಕಿಲ್ಲ ಕಣಲೇ ...ಬಿಡಾಕಿಲ್ಲ " ಎಂಬ ಮಾತು ಅವರಲ್ಲಿ ಭಯವನ್ನೂ ಹುಟ್ಟಿಸಿತ್ತು. ಚಂದ್ರ ಕೊಟ್ಟ ಶರಬತ್ತನ್ನು ಕುಡಿದ ರಾಯರು "ಚಂದ್ರ ...ತುಂಬಾ ದಾಹವಾಗಿತ್ತು ಕಣೋ..ಶರಬತ್ತು ಕೊಟ್ಟು ಉಪಕಾರ ಮಾಡಿದೆ..ನಿನ್ನ ಹೊಟ್ಟೆ ತಣ್ಣಗಿರಲಪ್ಪಾ..ಸರಿ ಇನ್ನು ನಾನು ಬರಲೇ" ಎದ್ದು ಹೊರಟ ರಾಯರನ್ನು ಚಂದ್ರ ತಡೆದ " ರಾಯರೇ ..ಚನ್ನಪ್ಪ ಕೊಟ್ಟಷ್ಟು ಹಣ ತೆಗೆದುಕೊಂಡು ಸುಮ್ಮನಾಗಿ ಬಿಡಿ, ಅವನ ಸಹವಾಸ ಕಷ್ಟ, ಇಷ್ಟಕ್ಕೂ ನೀವು ಇನ್ನೇನು ಸಾಧನೆ ಮಾಡಬೇಕಿದೆ ?!...ಬರೋ ಹಣಾನ ಬಡ್ಡಿಗಿಟ್ಟುಕೊಂಡು ನಿಶ್ಚಿಂತರಾಗಿದ್ದುಬಿಡಿ" ರಾಯರಿಗೆ ಚಂದ್ರನ ಮಾತು ರುಚಿಸಲಿಲ್ಲ " ಹಣ ನನ್ನ ಮಗನ ಬಳಿಯೂ ಇದೆ ಕಣೋ, ಏನೋ ಪ್ರಯೋಜನ..ಒಬ್ಬ ತಂದೆಯನ್ನು ಸಾಕೋ ಯೊಗ್ಯತೆಯಿಲ್ವಲ್ಲೋ ಅವನಿಗೆ, ಅಯೋಗ್ಯ ! ಅಡಿಕೆ ಸಸಿಗಳನ್ನ ನನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದೀನಿ ಕಣೋ, ನನಗೆ ಅನ್ನ ಕೊಟ್ಟಿದೆ ಕಣೊ ಅದು, ಚನ್ನಪ್ಪ ಅಲ್ಲ ಅವರಪ್ಪ ಬಂದರೂ ಜಮೀನು ಬಿಟ್ಟುಕೊಡಲ್ಲ , ನಾನು ಸಾಯೋವರ‍್ಗೂ ನೋಡ್ತೀನೋ, ಆಮೇಲೆ ಮಗನಾದ್ರೂ ತಿನ್ಲಿ..ಯಾವೋನಾದ್ರೂ ತಿನ್ಲಿ..ನಂಗೇನು......." ರಾಯರು ಮಾತನಾಡುತ್ತಲೇ ಇದ್ದರು,  ಚನ್ನಪ್ಪ ಕಳುಹಿಸಿದ್ದ ’ಮಾರಿಗುಡಿ’ ಯ ಕೈಯಲ್ಲಿನ ಹರಿತವಾದ ಮಚ್ಚು ರಾಯರ ಮುಂಡವನ್ನು ಅರೆಕ್ಷಣದಲ್ಲಿ ಕತ್ತರಿಸಿ ಹಾಕಿತ್ತು ..!. ಚೆಲ್ಲಾಡಿದ ರಕ್ತವನ್ನು ಚಂದ್ರ ದಿಗ್ಭ್ರಮೆಯಿಂದ ನೋಡುತ್ತಲೇ ಇದ್ದ. ರೇಡಿಯೋ ಅರಚುತ್ತಲೇ ಇತ್ತು....


" ದೇದಿ ಹಮೆ ಆಜಾದಿ ಬಿನಾ ಖಡ್ಗ್ ಬಿನಾ ಢಾಳ್..
  ಸಾಬರ್ ಮತೀಕೆ ಸಂತ್ ತೂನೆ ಕರ್ ದಿಯಾ ಕಮಾಲ್ "!!




( ಪುಟ್ಟ ವಿನಂತಿ....ನಾನು ಬರೆಯಲು ಪ್ರಾರಂಭಿಸಿದ್ದು ನನ್ನ ಕಾಲೇಜು ದಿನಗಳಲ್ಲಿ. ನಾನು ಓದುತ್ತಿದ್ದ ದ.ಕ.ಜಿಲ್ಲೆಯ ಉಜಿರೆ ಯ SDM {Sri Dharmasthala Manjunaatheshwara College) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಗುರುಗಳಾದ ಶ್ರೀಯುತ ’ನಿರಂಜನ ವಾನಳ್ಳಿ’ ಯವರ ( ಈಗ ಮಾನಸಗಂಗೋತ್ರಿ..ಮೈಸೂರು) ಮಾರ್ಗದರ್ಶನದಲ್ಲಿ ಕೇವಲ ವಿಚಾರ- ವಿಮರ್ಶೆಗಳನ್ನಷ್ಟೇ ಬರೆದುಕೊಂಡು ಬಂದಿದ್ದೆ. ಕಥೆ-ಕವನ ನಾನೆಂದೂ ಬರೆಯಲಿಲ್ಲ. ಈಗ ಬರೆದದ್ದೇ ನನ್ನ ಮೊದಲ ಕಥೆ..(ಹಾಗಂದುಕೊಂಡಿದ್ದೇನೆ !) . ಬ್ಲಾಗಿನ ಗುರುಗಳು, ಸಹೃದಯ ಮಿತ್ರರ ಪ್ರೋತ್ಸಾಹದಿಂದ ೧ ತಿಂಗಳ ಕೂಸು ನನ್ನ  ’ ಶಂಭುಲಿಂಗ ಪುರಾಣ ’ ದಲ್ಲಿ ಹುಮ್ಮಸ್ಸಿನಿಂದ ಕಥೆಯೊಂದನ್ನು ಬರೆದುಬಿಟ್ಟಿದ್ದೇನೆ...ನನಗೆ ಭಾವಗಳ ಆಳ-ಅಗಲಗಳ ಅರಿವಿಲ್ಲ...ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ತಿದ್ದಿ...ತೀಡಿ...ಹರಸಿ...ಹಣ್ಣನ್ನು ಹಂಚಿ ತಿಂದರೇ ರುಚಿ ಎಂದು ನನ್ನ ನಂಬಿಕೆ . ನಿಮ್ಮ ಪ್ರತಿಕ್ರಿಯೆಗಳೇ ನನಗೆ ಪ್ರೋತ್ಸಾಹ...ಇಲ್ಲಿಗೂ ಬರೆಯಿರಿ..subrahmanyahs@gmail.com)  

Feb 3, 2010

ಮಹಿಳೆ ಮತ್ತು ಮದ್ಯಪಾನ..





ಈ ಚಿತ್ರದಲ್ಲಿರುವ ಪತ್ರಿಕಾ ವರದಿಯಂತೆ ಈ ಮಹಿಳೆಯು ಮದ್ಯಪಾನ ಮಾಡಿ ತನ್ನ ’ಹೋಂಡಾ c.v.r. ಕಾರು ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣಳಾಗಿದ್ದಾಳೆ. ಈ ಘಟನೆ ನೆಡೆದಿರುವುದು ’ಮುಂಬೈ’ ನಲ್ಲಿ. ಮಹಾರಾಷ್ಟ್ರದ ಜನನಾಯಕರೊಬ್ಬರು ಹೇಳಿದಂತೆ ಇಂತಹ ಘಟನೆಗಳು ’ಮಾಯಾನಗರಿ’ ಯಲ್ಲಿ ಸರ್ವೇ ಸಾಮಾನ್ಯ ಸಂಗತಿ !. ಈ ಮಹಿಳೆ ಸರಿರಾತ್ರಿ ೧ ಘಂಟೆಯ ತನಕ ಪಾರ್ಟಿಯಲ್ಲಿದ್ದು ಚೆನ್ನಾಗಿ ’ಬಾರಿ’ಸಿ ಅದೇ ಅಮಲಿನಲ್ಲಿ ಕಾರು ಚಲಾಯಿಸಿದ್ದಾಳೆ. ಅಷ್ಟೇ ಸಾಲದು ಎಂದು ಕಾರಿನಲ್ಲೂ ಮದ್ಯ ಸೇವಿಸುತ್ತಾ ಜೊತೆಗೆ ’ಸೈಡ್ಸ್’ ಗಳನ್ನೂ ಮೆಲ್ಲುತ್ತಾ ’ ಜೋಷ್’ ನಲ್ಲಿ ಕಾರ್ ಚಲಾಯಿಸುವಾಗ ಕರ್ತವ್ಯನಿರತರಾಗಿದ್ದ ಪೋಲೀಸ್ ಅಧಿಕಾರಿಯ ಮೇಲೇ  ಚಲಾಯಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಷ್ಟಕ್ಕೇ ಮುಗಿಸದೇ ಇನ್ನೂ ಮುಂದೆ ಹೋಗಿ ಬೈಕ್ ಸವಾರರೊಬ್ಬರಿಗೆ ಗುದ್ದಿ ಅವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸದ್ಯಕ್ಕೆ ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಹಿಳೆ ಮದ್ಯಪಾನಿಸುವುದರ ಪ್ರತಿ ನನ್ನ ತಕರಾರೇನಿಲ್ಲ. ಅದು ಆಕೆಯ ವೈಯಕ್ತಿಕ ವಿಚಾರ. ’ಪರಮಾತ್ಮ’ ಆಡಿಸದಂತೆ ಆಡಲಿ !. ಕುಡಿಯಲಿ...ಕುಡಿದು ಹಾಳಾಗಲಿ..! ಅಮಾಯಕರ ಜೀವವನ್ನೇಕೆ ಬಲಿ ಪಡೆಯಬೇಕು ?.  ಈ ಘಟನೆ  ಹಣದ ಮದದಲ್ಲಿ ತೇಲಾಡುವ ಇಂತಹ ’ದೊಡ್ಡ’ ಮನುಷ್ಯರ  ’Corporate' ದೊರೆಗಳ ಆಂತರಿಕ - ಮಾನಸಿಕ ವ್ಯಸನಗಳನ್ನು ಬಯಲುಮಾಡುತ್ತದೆ.  ಸರಿರಾತ್ರಿಯ ತನಕವೂ ’ಬಾರ್’ ಲೈವ್ ಬ್ಯಾಂಡ್’ ’ಡಿಸ್ಕೋಥೆಕ್’ ಗಳನ್ನು ತೆರೆದಿಡುವಂತೆ ಪೋಷಿಸುವವರಿಗೂ ಅಂಕುಶದ ಅಗತ್ಯವಿದೆ. ಇನ್ನು ಸಾವಿಗೀಡಾದ ವ್ಯಕ್ತಿಗಳ ಮಕ್ಕಳು-ಸಂಸಾರದ ಪಾಡೇನು ? ಸರ್ಕಾರ ಆ ಕುಟುಂಬದವರಿಗೆ ಒಂದಷ್ಟು ’ಪರಿಹಾರ’ ನೀಡಿ ಕೈತೊಳೆದುಕೊಳ್ಳಬಹುದು. ಜೀವವನ್ನು ಕೊಡಲಾದೀತೆ..?? ವ್ಯವಸ್ಥೆಯ ದುರಂತವೆಂದರೆ ಸದ್ಯದಲ್ಲೇ ತನ್ನ ’ಪ್ರಭಾವ’ ದಿಂದ ಈಕೆಯೂ ಜಾಮೀನು ಪಡೆದುಕೊಂಡು ಬಂಧನದಿಂದ ಹೊರಬಂದು ನಿರ್ದೋಶಿಯೂ ಆಗಿಬಿಡಬಹುದು. ಮಹಿಳೆಯರ ಹಕ್ಕುಗಳ, ಸ್ವಾತಂತ್ರ್ಯದ ಪರ ಹೋರಾಡುವ ಮಹಿಳಾ ಸಂಘಟನೆಗಳು ಸಮಾಜದ ಸ್ವಾಸ್ತ್ಯವನ್ನು ಕೆಡಿಸುವ ಇಂತಹವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬಹುದಲ್ಲವೆ....??? ಇದನ್ನೂ ಸಹ ಮಹಿಳೆಯರ ಸಂಸ್ಕೃತಿ-ಸಂಸ್ಕಾರದ ಮೇಲಾಗುತ್ತಿರುವ ದೌರ್ಜನ್ಯ ( ಪುರುಷರು ಮಾತ್ರ ದೌರ್ಜನ್ಯದ ಪ್ರವರ್ತಕರೇ ?? ) ಎಂದು ಪರಿಗಣಿಸಿ ಹೋರಾಟ ನೆಡೆಸಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬಹುದಲ್ಲವೇ..! ಕೆಲವೇ ಕೆಲವು ಮಹಿಳೆಯರು ಮಾಡುವ ಇಂತಹ ಕೃತ್ಯಗಳು ಮುಂದಿನ (ತನ್ನದೇ !!) ಪೀಳಿಗೆಯ ಮೇಲೆ ಪ್ರಭಾವ ಬೀರಲಾರದೇ.?  ಇದಕ್ಕೆಲ್ಲಾ ಸರ್ಕಾರ-ಕಾನೂನನ್ನು ದೂಷಿಸುವುದು ಕಾಟಾಚಾರವಾಗುತ್ತದೆಯಷ್ಟೆ. ಮನುಷ್ಯ ತನ್ನ  ಆಂತರಿಕ ಸ್ವಾಸ್ತ್ಯವನ್ನು ಕಳೆದುಕೊಂಡಾಗಲೇ ಇಂತಹ ಘಟನೆಗಳು ನೆಡೆಯುವುದು. ...........ವರ್ಷದ ಹಿಂದೆ ಬೆಂಗಳೂರಿನಲ್ಲಿ ಆಪ್ತರೊಬ್ಬರ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ ೧೨.೩೦ ರ ಸಮಯದಲ್ಲಿ ವಾಪಸಾಗುತ್ತಿದ್ದ ನಮಗೆ (ನನ್ನ ಸ್ನೇಹಿತ) ಅಡ್ಡಬಂದ ನಾಲ್ಚರು ಹುಡುಗಿಯರನ್ನು ಪಕ್ಕಕ್ಕೆ ಸರಿಸಿ ಹೊರಡುವಷ್ಟರಲ್ಲಿ ಸಾಕುಸಾಕಾಗಿತ್ತು ! ನಾಲ್ವರೂ ಕಂಠಪೂರ್ತಿ ಕುಡಿದು ಓಲಾಡುತ್ತಿದ್ದರು. ಇವರೂ ’Corporate' ಸಮಾಜದ ಕುಡಿಗಳೇ.......
  " ನಾವೇ ಹಾಳಾಗಿ ಹೋಗಿರುವೆವು..ಪ್ರಪಂಚ ಹಾಳಾಗಿದೆ ಎಂದು ಭಾವಿಸುವೆವು"  ಎನ್ನುವ ವಿವೇಕಾನಂದರ ನುಡಿ ಎಷ್ಟು ಪ್ರಸ್ತುತ ಅಲ್ಲವೇ...          
















ಖೊನೆ ಖಿಡಿ :


ಶಂಭು : ಸಾರಾಯಿ ನಿಲ್ಸುದ್ಮೇಲೆ ಈ  ರಮ್ಮು, ಇಸ್ಕಿ, ಬ್ರಾಂಡಿ ಇವೆಲ್ಲಾ ಕಿಕ್ಕೇ ಕೊಡಲ್ಲಾ ಕಣ್ಳಾ....
ಲಿಂಗ : ಅದ್ಕೇನ್ ಮಾಡವಾ ಅಂತ್ಯಾ...?
ಶಂಭು : ಕಳ್ಳಭಟ್ಟಿ ತಯಾರ್ ಮಾಡವಾ  ...ಏನಂತ್ಯಾ...!!!

                                                                           ವಂದನೆಗಳೊಂದಿಗೆ.....                        
           

Jan 26, 2010

" ಗುಂಡ್ಯ ಗಮ್ಮತ್ತು...... "

  " ಗುಂಡಿನ ಮತ್ತೇ ಗಮ್ಮತ್ತು " ಅಂತ  ಕೇಳೀದೀವಿ...ಇದ್ಯಾವುದು "ಗುಂಡ್ಯ ಗಮ್ಮತ್ತು " ಅಂತೀರಾ
 ...ಹಾಗಾದ್ರೆ ಮುಂದೆ ಓದಿ....




ಪಶ್ಚಿಮ ಘಟ್ಟದ ಬಿಸಿಲೆ ಅರಣ್ಯದಲ್ಲಿ ಹರಿಯುವ ಆ ಸುಂದರ ನದಿಯನ್ನು ನೋಡುತ್ತಿದ್ದ  ನನಗೆ ( i mean ಶಂಭುಲಿಂಗ !) ಅಚಾನಕ್ ಆಗಿ ಘನ ಸರ್ಕಾರದ ’ ಶಾಕ್ ’ ಮಂತ್ರಿಗಳ ದರ್ಶನವಾಯಿತು. 

ಇಂತಹ ಅವಕಾಶವನ್ನು ನಾನು ಬಿಡಲಿಲ್ಲ...ಮಾತಿಗೆಳೆದೇ ಬಿಟ್ಟೆ ’ಶಾಖಾ’ನುಭಾವರನ್ನು....


" ..ಈ ಗುಂಡ್ಯ ಜಲವಿದ್ಯುತ್ ಯೋಜನೆಯೇ ಬೇಕಾ ಸಾರ್ ನಿಮಗೆ ..? ಬೇರೆಲ್ಲೂ ಉತ್ಪಾದನೆ ಮಾಡೋಕಾಗಲ್ವೆ...ನೋಡಿ ಸರ್ ಇಲ್ಲಿ ಸ್ವಚ್ಚವಾಗಿ ಹರಿಯುತ್ತಿರೋ ನದಿಯನ್ನ..ಇದು ’ಕುಮಾರಧಾರ’ ಅಂತ..ಈ ನದಿ ಹರಿದು ಬರೋದು ಅಮೂಲ್ಯ ಖನಿಜ ಸಂಪತ್ತು ಹಾಗೂ ಅತ್ಯಮೂಲ್ಯ ಆಯುರ್ವೇದ ಔಷಧೀಯ ಸಸ್ಯಗಳಿರುವ ಸುಂದರ ಅರಣ್ಯದಿಂದ..ನಿಮಗೆ ಗೊತ್ತಾ ಸಾರ್ ..ಈ ನದಿಯಲ್ಲಿ ಮಿಂದರೆ ಚರ್ಮರೋಗಗಳೂ ಕಮ್ಮಿಯಾಗುತ್ತೆ..ಇಲ್ಲಿ ವಿದ್ಯುತ್ ಯೋಜನೆಗೆ ನೀವು ಅಣೆಕಟ್ಟು ನಿರ್ಮಿಸಿದರೆ ಈ ನದಿ ಬತ್ತಿ ಹೋಗುತ್ತೆ ..ಮತ್ತೆ ಹಿನ್ನೀರು ಅರಣ್ಯದೊಳಗೆ ನುಗ್ಗಿದರೆ ಪ್ರಾಣಿ..ಪಕ್ಷಿಗಳು ಸತ್ತು ಹೋಗುತ್ವೆ..ನೂರಾರು ಹೆಕ್ಟೇರ್ ಕಾಡು ನಾಶ ಆಗುತ್ತೆ..ಅಪಾರ ಸಸ್ಯಸಂಪತ್ತೂ ಮುಳುಗಿಹೋಗುತ್ತೆ....ಬೇಕಾ ಸಾರ್ ಇದು ? "


"ಹಿನ್ನೀರು.. ಡಾಲರ್ಸ್ ಕಾಲೋನಿತನಕ ಏನು ಬರೋದಿಲ್ವಲ್ಲ...ಬಿಡಯ್ಯಾ ಮತ್ತೆ..!!"



" ಹೀಗೆ ಹೇಳ್ದ್ರೆ ಹೇಗೆ ಸರ್... ಈಗಾಗ್ಲೆ ಆಹಾರ ಸಿಗ್ದೆ ಆನೆಗಳೆಲ್ಲಾ ಊರೊಳಗೆ ನುಗ್ಗಿ ದಾಂಧಲೆ ಮಾಡ್ತಿವೆ. ನೂರಾರು ಜೀವಗಳೂ ಹೋಗಿವೆ. ಇನ್ನು ಕಾಡೂ ಕಮ್ಮಿಯಾದ್ರೆ ಹುಲಿ-ಚಿರತೆಗಳೂ ಊರಿಗೆ ಬರುತ್ವೆ ..ಬದ್ಕೊಧ್ಹೇಗೆ ಹೇಳಿ..ಅದೂ ಅಲ್ದೆ ಯೋಜನೆ ಹೆಸ್ರಲ್ಲಿ ಅಮೂಲ್ಯ ಮರಗಳ ಲೂಟಿಯೂ ನೆಡೆಯುತ್ತೆ..ಕಳ್ಳರಿಗೆ ದಾರಿ ಮಾಡಿಕೊಟ್ಟ ಹಾಗೆ ಇದು...ಯೋಜನೆ ಅನುಷ್ಟಾನಕ್ಕೂ ಕಾಡು ನಾಶವಾಗುತ್ತೆ ಯೋಜನೆಯ ನಂತರವೂ ನಾಶವಾಗುತ್ತೆ... ನೀವು ಯೋಜನೆ ಕೈ ಬಿಡದಿದ್ರೆ ನಾನು ಇಲ್ಲಿಯ M.L.A.  ಸಾಹೇಬ್ರ ಜೊತೆ ಧರಣಿ ಮಾಡ್ತಿನಿ.."


" ಮಾಡಯ್ಯ....ನನಗೂ ಸ್ವಲ್ಪ ಪ್ರಚಾರ ಸಿಗುತ್ತೆ.. ಇಷ್ಟಕ್ಕೂ ಆ M.L.A ನೂ ನಮ್ ಪಾರ್ಟೀನೇ ತಿಳ್ಕೊ..!!"


"ಆದ್ರೂ ಸರ್...ನೀವು ಯೋಚನೆ ಮಾಡ್ಬೇಕು..ಈಗಾಗ್ಲೆ ಜನರ ಪರವಾಗಿ  "ಜೈರಾಮ್ ರಮೇಶ್" "ಬಹುಗುಣ" " ಶ್ರೀ ವಿದ್ಯಾಪ್ರಸನ್ನ ತೀರ್ಥರು " ಮಲೆನಾಡು ಹೋರಾಟ ಸಮಿತಿಯವರು ಎಲ್ರೂ ವಿರೋಧ ಮಾಡ್ತಿದ್ದಾರೆ...ಮೇಧಾಪಾಟ್ಕರ್ ಕೂಡ ಬರೋರಿದ್ದಾರೆ... ಬೇರೇ ಎಲ್ಲಾದ್ರು ವಿದ್ಯುತ್ ಉತ್ಪಾದಿಸಿ...ಇಲ್ಲಿಯ ಪ್ರಕೃತಿ ಅತ್ಯಮೂಲ್ಯ ...ನಾವು-ನೀವು ಇದ್ನೆಲ್ಲಾ ಸೃಷ್ಟಿಸೋಕೆ ಆಗೋಲ್ಲ ಸರ್...  "


" ಸೃಷ್ಟಿ ಮಾಡೋದು ಬ್ರಹ್ಮ ಅಲ್ವೇನಯ್ಯಾ.....ಇನ್ನೊಂದ್ಸಲ ಎಲ್ಲಾ ಸೃಷ್ಟಿಸ್ತಾನೆ ಬಿಡು !! "


"ನಮ್ಮದು ಪ್ರಜಾಪ್ರಭುತ್ವ ಸಾರ್...ಅಲ್ಲಿನ ಸ್ಥಳೀಯರ ನಿರ್ಧಾರಕ್ಕೆ ಬೆಲೆ ಕೊಡ್ಬೇಕು ...ಅವರಿಗೇ ಬೇಡವಾದ್ದು ನಿಮಗ್ಯಾಕೆ ?  ಕುಕ್ಕೆ ಸುಬ್ರಹ್ಮಣ್ಯ, ಮಾರನಹಳ್ಳಿ, ಬಿಸಲೆ ಅರಣ್ಯದೊಳಗಿನ ಊರುಗಳು, ಇನ್ನೂ ಸಾಕಷ್ಟು ಪ್ರದೇಶಗಳು ಈ ಯೋಜನೆಯಿಂದ ಭಾದಿತವಾಗುತ್ತೆ ...ಇನ್ನಷ್ಟು ಪರಿಸರ ಮಾಲಿನ್ಯ ಉಂಟಾಗುತ್ತೆ...ತಾಪ ಇನ್ನಷ್ಟು ಹೆಚ್ಚಾಗುತ್ತೆ...ಚುನಾವಣೆ ಸಮಯದಲ್ಲಿ ಯಾರಿಂದಲೋ ದುಡ್ಡು ತಗೊಂಡು ಅವರ ಆಸೆ ಪೂರೈಸೋದಕ್ಕೆ ಪರಿಸರ ಬಲಿ ಕೊಡೋದು ನ್ಯಾಯಾನಾ ಸರ್ ? "


" ಚುನಾವಣೆ ಬಂದಾಗ ನೀನು ಬಾರಯ್ಯಾ....ನಿನಗೂ ಕೊಡ್ತೀನಿ...ಓಟು ಹಾಕೋದಷ್ಟೇ ನಿನ್ನ ಕೆಲಸ..ಉಳಿದದ್ದು ಸರ್ಕಾರದ ಕೆಲಸ...ಸುಮ್ನೇ ಹೋಗಯ್ಯಾ...!!"


ನನ್ನ ಕೊನೆ ಪ್ರಯತ್ನ ....


" ಸಾರ್ ಹೇಗೂ 2012 ಕ್ಕೆ ಜಗತ್ಪ್ರಳಯ ಆಗುತ್ತೆ...ನನಗೆ ಪಕ್ಕಾ ಮಾಹಿತಿ ಬಂದಿದೆ !  ಯಾರೂ ಇರೋಲ್ಲ ಅಂದಮೇಲೆ ಈ ಯೋಜನೆ ಯಾಕೆ ಸರ್....ನಿಮಗೆ ಬೇಕಾಗಿರೋದು ಈ ಯೋಜನೆಯಿಂದ ಬರೋ ಹಣ ತಾನೆ...ಒಂದು ಕೆಲಸ ಮಾಡಿ..ಈ ಯೋಜನೆಯ ಪೂರ್ತಿ ಹಣವನ್ನು ನೀವು ಮತ್ತೆ ನಿಮ್ಮ "ಕಡೆಯವರು" ಹಂಚಿಕೊಂಡುಬಿಡಿ...ನಾವೇನೂ ಕೇಳೋಕೆ ಬರೋದಿಲ್ಲ.. ಬೇಕಾದ್ರೆ ನೆರೆ ಪರಿಹಾರಕ್ಕೆ ದೇಣಿಗೆ ಎತ್ತಿ ಕೊಟ್ವಲ್ಲಾ..ಹಾಗೂ ಕೊಟ್ಟು ಬಿಡ್ತೀವಿ...ಆದ್ರೆ  ದಯವಿಟ್ಟು ಈ ಮೂಕ ಪ್ರಾಣಿಗಳನ್ನ, ಸ್ವಚ್ಚಂದವಾಗಿ ಹಾರಾಡ್ತಿರೋ ಹಕ್ಕಿಗಳನ್ನ, ಸದಾ ನಗುತ್ತಿರೋ ಸಸ್ಯಗಳನ್ನ, ಹಸಿರು ತುಂಬಿದಕಾಡನ್ನು. ಈ ನದಿ, ಬೆಟ್ಟ, ಈ ಸಮೃದ್ದ ಪರಿಸರವನ್ನ ಅವುಗಳಿಗೋಸ್ಕರ... ಬಿಟ್ಟುಬಿಡಿ ಸಾರ್...ಬೇಕಾದ್ರೆ ನನ್ನ ಬಲಿ ತಗೊಳ್ಳಿ ಸಾರ್ .."


          ನನ್ನ ಮಾತು ಅವರ ಕಿವಿಗೆ ಬೀಳಲೇ ಇಲ್ಲ....ತಮ್ಮ ಮೋಟಾರು ಹತ್ತಿ ಬುರ್ ಎಂದರು ....!!
....................................................................................................................................................................


ಖೊನೆ ಖಿಡಿ :


ಅಲ್ಲಿ ಬೀಜರಹಿತ ಹಣ್ಣುಗಳ ಸೇವನೆಯ ಪರಿಣಾಮಗಳ ಬಗ್ಗೆ ವಿಚಾರ ಸಂಕಿರಣ ನೆಡೆಯುತ್ತಿತ್ತು....ಅಲ್ಲಿ ಶಂಭುಲಿಂಗನೂ ಇದ್ದ !
ಅಲ್ಲೇ ಪ್ರದರ್ಶನಕ್ಕಿಟ್ಟಿದ್ದ ಹಲಸಿನ ಹಣ್ಣೊಂದನ್ನು ತೆಗೆದು ಸುಲಿದೇಬಿಟ್ಟ...ಅತ್ಯಾಶ್ಚರ್ಯದಿಂದ ಅಧಿಕಾರಿಯನ್ನು ಕೇಳಿದ...


ಶಂಭುಲಿಂಗ : ಇದೇನ್ ಬುದ್ದಿ...ಈ ಅಣ್ಣಾಗೇ ಬೀಜ್ವೇ ಇಲ್ಲಾ.... 
ಅಧಿಕಾರಿ :     ಅದು ಸೀಡ್ಲೆಸ್ ಹಣ್ಣು ಕಣಪ್ಪಾ...ಈವಾಗೆಲ್ಲಾ ಹೀಗೇ ಹಣ್ಣುಗಳು ಬರೋದು...
ಶಂಭುಲಿಂಗ : ಅಂಗಾದ್ರೆ... ಇನ್ಮುಂದೆ ಮನುಸ್ರು ಇಂಗೇ ಉಟ್ತಾರಾ ಬುದ್ದಿ ...!!!!!!??
                                            
                                      ಸಿವನೇ ಸಂಭುಲಿಂಗ  :)




ವಂದನೆಗಳೊಂದಿಗೆ ....................



Jan 21, 2010

"ಬೇಂದ್ರೆ ಮುಖ್ಯಮಂತ್ರಿಯಾದರೆ..."

’ ಬೀchi ’ ( ಶ್ರೀಯುತ ರಾಯಸಂ ಭೀಮಸೇನರಾವ್ ರವರು ) ಎಂದಾಕ್ಷಣ ಮೊದಲು ನೆನೆಪಿಗೆ ಬರುವುದು ಅವರ ಮಾನಸ ಸೃಷ್ಟಿಯಾದ "ಬೆಳ್ಳಿತಿಂಮ ".  ಅವರ ಬರಹಗಳು ಮೇಲ್ನೋಟಕ್ಕೆ ಹಾಸ್ಯ ಬರಹಗಳಂತೆ ಕಂಡರೂ ಅದರಲ್ಲಿ ಸಮಾಜಮುಖಿಯಾದ ಅನೇಕ ವಿಚಾರಗಳಿವೆ. ಆದರೂ ಬೀchi ಎಂದರೆ ನಗೆ...ನಗು ಎಂದರೆ ಬೀchi ಎನ್ನುವಷ್ಟರ ಮಟ್ಟಿಗೆ ಅವರ ಬರಹಗಳು ಸಾಹಿತ್ಯಕ್ಷೇತ್ರವನ್ನಾವರಿಸಿಕೊಂಡಿವೆ. ಕನ್ನಡದ ಸಾಹಿತಿಗಳು ’ಮುಖ್ಯಮಂತ್ರಿ’ ಯಾದರೆ ಹೇಗಿರುತ್ತದೆ ..ಎಂಬ ಕಲ್ಪನೆಯೊಂದಿಗೆ ಕೆಲವರನ್ನು ( ಅ.ನ.ಕೃ, ಬೇಂದ್ರೆ, ಸ್ವತಃ ಬೀchi ...ಹೀಗೆ)  ಮುಖ್ಯಮಂತ್ರಿ ಮಾಡಿ ಹಾಸ್ಯದ ಹೊನಲನ್ನೇ ಹರಿಸಿದ್ದಾರೆ ಬೀchi ಯವರು....ಅಂದಿನ ದಿನಗಳಲ್ಲಿ ಈ ಮಹಾನುಭಾವರುಗಳ ಸ್ನೇಹ-ವಿಶ್ವಾಸಗಳು ಹೇಗಿತ್ತು ಎಂಬುದನ್ನೂ ಸಹ ನಾವು ಈ ಬರಹಗಳಲ್ಲಿ ಕಾಣಬಹುದು.   ಪ್ರಸ್ತುತ ಇಲ್ಲಿ ನಾನೋದಿದ ಶ್ರೀಯುತರ "ಚಿನ್ನದ ಕಸ " ಸಂಕಲನದಿದ ಆಯ್ದ ಒಂದು ಪ್ರಸಂಗವನ್ನು ನಿಮ್ಮ ಮುಂದಿಡುತ್ತಿದ್ದೇನೆ..ಓದಿ..ನಕ್ಕು’ಬಿಡಿ’.......


" ಬೇಂದ್ರೆ ಮುಖ್ಯಮಂತ್ರಿಯಾದರೆ........  "
{ಕನ್ನಡದ ಸುಪ್ರಸಿದ್ಧ ಕವಿವರ್ಯ ’ಬೇಂದ್ರೆ’ಯವರು  ಮುಖ್ಯಮಂತ್ರಿಯಾಗಿದ್ದಾರೆ.  ತಿಂಮ ಅವರೊಂದಿಗೆ ಸಂದರ್ಶನ ಬೇಡಿ ಬಂದಿದ್ದಾನೆ. ಹೊರಬಾಗಿಲಲ್ಲಿಯೇ ಮು.ಮಂ. ಗಳ ಕಾರ್ಯದರ್ಶಿ ’ತಿಂಮ’ನನ್ನು ತಡೆಯುತ್ತಾನೆ.}


ಕಾರ್ಯದರ್ಶಿ :  ಆರು , ನೀನಾರು ? ಕನ್ನಡಪುತ್ರಾ ನೀನಾರು ? 
(ಬೇಂದ್ರೆಯವರ ಸಹವಾಸದಿಂದ ಇಲ್ಲಿ ಕಾರ್ಯದರ್ಶಿಯೂ ಕವಿಯಾಗಿಬಿಟ್ಟಿದ್ದಾನೆ !)


ತಿಂಮ : ನಾನು ತಿಂಮ ಕಾರ್ಯದರ್ಶಿಗಳೇ, ಮು.ಮಂ. ಗಳೊಡನೆ ಮಹತ್ತರ ಕೆಲಸವಿದೆ. ಅವರನ್ನು ಕೂಡಲೇ ಕಾಣಬೇಕು.


ಕಾ : ಈಗವರು ಯಾರಂ ನೋಡುವಂತಿಲ್ಲ.
      ಭಾವಕರು ಧ್ಯಾನವಂ ಬಿಡುವಂತಿಲ್ಲ !!


ತಿಂ : ಇಂದು ಬೆಳಿಗ್ಗೆ ೯ ಕ್ಕೆ ಬರಲು ನನಗೆ ಪತ್ರ ಬಂದಿದೆ,,ಇಲ್ಲಿದೆ ನೋಡಿ


ಕಾ : ಅಹುದಹುದು ಇರಬಹುದು ! ಬಹುಜನರು ಬರಲಿಹರು ಅವರ ದರುಶನಕಾಗಿ
      ತಾರೀಕು, ಗಂಟೆ ನಿಮಿಷಗಳು ಯಾರಿಗೆ ? ಕವಿವರರು ಕಾಲಾತೀತರು ||


ತಿಂ : (ನಸುಕೋಪದಿಂದ ) ಹಾಗಾದರೆ ನನಗೇಕೆ ಬರಲು ತಿಳಿಸಿದಿರಿ ? 
ನಾನು ಮುಖ್ಯಮಂತ್ರಿಗಳನ್ನು ನೋಡಲೇಬೇಕು..ಅವರೇನು ಮಾಡುತ್ತಿದ್ದಾರೆ ಈಗ ?


ಕಾ : ಮಧರ್ !  ಮಧರ್ ರಂ ನೆನೆಯುತ್ತಾ ಅರ್ಧರ್ಧ ಕಣ್ಮುಚ್ಚಿ ಅತ್ತಿತ್ತ  ಸಾಗುತ್ತಾ !
ಧ್ಯಾನಮಗ್ನರು ಆಗಿ ಮನದೊಳ್  ಮಾತೆಯ ಕಂಡಿಹರು ನೀವು ಪೋಗಿ ||


ತಿಂ : (ಕೋಪಾಶ್ಚರ್ಯದಿಂದ !)  ಹೋಗಿ ? ಹೋಗಿ ಎನ್ನಲು ನೀನ್ಯಾರು ?  ಯಾವೂರಯ್ಯಾ ನಿಂದು ?


ಕಾ : ನನ್ನ ನೀಂ ಅರಿಯೆಯಾ ? ನೀನೆಂಥ ಕನ್ನಡಿಗ ? ಮೇರು ಪರ್ವತದಷ್ಟು 
       ನಾ ಬರೆದ ಕವನಗಳ  ಸಪ್ತಸಾಗರ ತುಂಬಿದವು  ಎನ್ನ ಭಾವಗಳು. 
       ತಪಶ್ಚರ್ಯೆಯಿಂದ ಬರೆಯುವ ಶುದ್ಧ ಕಿರಿ ಕವಿ ನಾನು !
      ಬೇರಾವ ಊರಿನಲ್ಲಿ ದೊರೆಯುವರು  ಕವಿ ಮರಿಗಳು ? 
      ಧಾರವಾಡವು ಎಂದು ಪ್ರತ್ಯೇಕವಾಗಿ ನಾ ಪೇಳಬೇಕೆ !? 


ತಿಂ : ಇದೇನು ಕಾರ್ಯದರ್ಶಿಯಯ್ಯಾ ನೀನು ? ಆಗಿನಿಂದಲೂ ಬರೀ ಕವನಗಳನ್ನೇ ಹೇಳುತ್ತಿರುವೆಯಲ್ಲಾ ? ಇದನ್ನು ತಿಳಿದು ನಾನು ಮಾಡುವುದಾದರೂ ಏನು ? ಸರಿಯಯ್ಯಾ  ನೀನು ...ನನಗೆ ಬೇಕು ಮುಖ್ಯಮಂತ್ರಿಗಳು ...
        [ ಕಾರ್ಯದರ್ಶಿಗಳನ್ನು ಅತ್ತ ದೂಡಿ ತಿಂಮ ಒಳನುಗ್ಗುತ್ತಾನೆ] ....


[ಲೋಡಿಗೆ  ಆತು ಕುಳಿತು ಮುಖ್ಯಮಂತ್ರಿ ಬೇಂದ್ರೆಯವರು ಏನನ್ನೋ ಬರೆಯುತ್ತಲಿದ್ದಾರೆ...ತಿಂಮ ಅವರನ್ನು ದುರುದುರು ನೋಡುತ್ತಾನೆ ]


ತಿಂ : [ಬಹು ಹೊತ್ತು ನಿಂತು ಬೇಸತ್ತು ] ಮಹಾಸ್ವಾಮಿ !


ಮುಂ (ಬೇಂದ್ರೆ ) : (ತಲೆ ಎತ್ತದೆ) ಬಂದೆ ಬಂದೆ ಒಂದು ನಿಮಿಷ
                                            ಒಂದೆ ವಿಷಯ, ಜಗದ ವಿಷ
                                            ಹಿಂದೆ ಕುಡಿದ ಅವ ಅನಿಮಿಷ
                                            ಭೋ ಬಂದೆ, ಹೋ ಬಂದೆ, 
                                            ತಂಭೋ ಎಂದೆ, ಬಾ ತಂದೆ
                                            ಶಿರದಲಿ, ಕರದಲಿ, ಬರದಲಿ, 
                                            ಮರದಲಿ, ವರದಲಿ, ವದರಲಿ !


ತಿಂ : ಸ್ವಾಮೀ...ಒದರುತ್ತಲೇ ಇದ್ದೇನೆ ಆಗಿನಿಂದ ,


ಮುಂ : [ತಲೆಯೆತ್ತಿ. ಶೂನ್ಯದೃಷ್ಟಿಯಿಂದ !] ಹಾಂ, ಹಾಂ ! ಈಗ ಹೇಳು ತಿಂಮಾ ಏನು ಸಮಾಚಾರ ?


ತಿಂ : ಹೇಳುವುದೇನು ಮಹಾಸ್ವಾಮಿಗಳಾದ ಮುಖ್ಯಮಂತ್ರಿಗಳೇ....


ಮುಂ : ( ತಿಂಮನನ್ನು ತಡೆದು....) 
          ಅಹುದಹುದು, ಮರೆತಿದ್ದೆ, ನಾಂ ಮುಖ್ಯಮಂತ್ರಿ.
         ಮುಖ್ಯಾಮುಖ್ಯವೆಂಬ ಭೇದವಳಿಯಲು ಬೇಕು |
         ದೇವನಾ ದೃಷ್ಟಿಯಲಿ ಎಲ್ಲರೂ ಮುಖ್ಯ
         ಭಾವನಾ ಚೇತನದಿ ಎಲ್ಲರೂ ಸೌಖ್ಯ ||


ತಿಂ :  ಸ್ವಾಮೀ ! ದಯಮಾಡಿ ನಿಮ್ಮ ಕಾವ್ಯ ಪ್ರವಾಹವನ್ನು ನಿಲ್ಲಿಸಿದರೆ ನಾನು ಮಾತನಾಡುತ್ತೇನೆ.  ಮುಂ.ಮಂ. ಯ ಕೆಲಸವೆಂದರೆ ಏನೆಂದು ತಿಳಿದಿರಿ ? ನವ್ಯ ಕಾವ್ಯದ ಗೋಷ್ಟಿಯ ಅಧ್ಯಕ್ಷತೆಯಲ್ಲ ಇದು ..


ಮುಂ: ಆಯಿತಾಯಿತು ಗೆಳೆಯಾ, ಕೋಪ ಬೇಡ ಎಳೆಯಾ !!


ತಿಂ : [ನಡುವೆ ಬಾಯಿ ಹಾಕಿ ] ಛೇ..ನಿಂಮ ..ಮತ್ತೆ ಸುರುಮಾಡಿದಿರಲ್ಲ ? ಜನತೆ ಬೊಬ್ಬೆ ಹೊಡೆಯುತ್ತಿದ್ದಾರೆ...ಮತದಾನ  ಮಾಡಿ ನನ್ನನ್ನು ನಿಮ್ಮನ್ನು ಚುನಾಯಿಸಿದವರೆಲ್ಲಾ  ಬೈಯುತ್ತಿದ್ದಾರೆ..ಬಡಕೂಲಿಯವರಿಗೆಲ್ಲಾ ತಿನ್ನಲು ಅನ್ನವಿಲ್ಲ.


ಮುಂ : [ಆಶ್ಚರ್ಯದಿಂದ]     ಅನ್ನವಿಲ್ಲ ! ಅಯ್ಯ ! ಅನ್ನ , ಅನ್ನ !
                                     ಎಲ್ಲ ದೇವರು ಬಂದರು
                                     ಅನ್ನ ದೇವರು ಬರಲಿಲ್ಲ ! 
                                     ಅವನ ಕಾಣಿರೋ, ನೀವವನ ಕಾಣಿರೋ ||


ಹಾಗಾದರೆ ಇನ್ನೊಂದು ಕೆಲಸ ಮಾಡು. ನನ್ನ ಕಾರ್ಯದರ್ಶಿಯ ಬಳಿ ಹೋಗಿ ಹೇಳಿ...ಮಾರಾಟವಾಗದೇ ಉಳಿದಿರುವ ನನ್ನ ಕವನ ಸಂಗ್ರಹ "ಅನ್ನಪೂರ್ಣ" ದ ಐದುನೂರು ಪ್ರತಿಗಳನ್ನು ತೆಗೆದುಕೊಂಡು ಹೋಗಿ ಹಸಿದ ಜನರಲ್ಲಿ ಹಂಚಿಬಿಡು.


ತಿಂ : ಪುಸ್ತಕಗಳನ್ನು ಕತ್ತೆಗಳಷ್ಟೇ ತಿನ್ನಬಲ್ಲವು ಮಹಾಸ್ವಾಮಿ. ಅವರು ಮನುಷ್ಯರು ! ಬಾವಿಗಳೆಲ್ಲಾ ಬತ್ತಿಹೋಗಿವೆ. ಮೊದಲು ಅವರಿಗೆ ಕುಡಿಯಲು ನೀರು ಬೇಕು...


ಮುಂ : [ಗೋಣನ್ನು ಎಡಕ್ಕೆ ಎಸೆದು ತತ್ವಜ್ಞಾನಿಯ ನಗೆಯಿಂದ ಹಾಡುವರು]
                   ಬಾರಮ್ಮ ಗಂಗೆ, ಬಾ ಬಾರೆ ತುಂಗೆ
                   ಬೆಟ್ಟದಿಂ ನೀ ಇಳಿದು, ಘಟ್ಟದಿಂ ನೀ ಜಿಗಿದು
                   ದಿಟ್ಟಳಾಗಿಹ ನೀನು ಥಟ್ಟನೆ ಬಾರೆ
                   ಛಟ್ಟನೆ ಬಾರೆ..
                   ಭರ್ರನೆ ಬಾರೆ..  
                   ಢರ್ರನೆ ಬಾರೆ...!
                   ಬಾ ಬಾರೆ ತಾಯೆ, ತಾಯಿಯೇ ಬಾರೆ ...
                  ನೀರಡಿಕೆ ಕಳೆಯಲು ದೂರದಿಂ ಬಾರೆ..




ತಿಂ : [ಕೈಮುಗಿದು] ನಾನು ಬಂದ ಕೆಲಸವಾಯಿತು..ಮುಖ್ಯ ಕವಿ ಮಂತ್ರಿ ಪುಂಗವರೇ..


ಮುಂ : ಇಲ್ಲ..ಇಲ್ಲ..ಇನ್ನೂ ಇದೆ..ಗಂಗಾವತರಣ ಪೂರ್ತಿಯಾಗಿಲ್ಲ..!
                 ಧಬಧಬಯೆಂದು, ಢಬಢಬಯೆಂದು... 
                 ದಿಡಿಲು ದಿಡಿಲೆಂದು ! ಬಾರೆ ಇಂದು..


ತಿಂ : [ಸಿಟ್ಟಿನಿಂದ ] ಬರುತ್ತಾರೆ..ಬರುತ್ತಾರೆ..ನಿಮಗೆ ಓಟುಕೊಟ್ಟುವರು ಬಡಿಗೆ ಹಿಡಿದು ಬರುತ್ತಾರೆ, ನಿಲ್ಲಿಸಿರಿ..ಮುಖ್ಯಮಂತ್ರಿ ಕೆಲಸವೆಂದರೆ ಏನೆಂದು ತಿಳಿದಿರಿ...? ಜನತೆಗೆ ಅನ್ನವಿಲ್ಲ ..ನೀರಿಲ್ಲ...ವಸ್ತ್ರವಿಲ್ಲ...


ಮುಂ : [ನಡುವೆ ಬಾಯಿ ಹಾಕಿ] ...ಬಾ ಕೃಷ್ಣ, ಬೇಗ ದೇವ
                   ದ್ರೌಪದಿಯ ಮಾನವ ಕಾಯ್ದ ದೇವ 
                  ವಸ್ತ್ರಗಳಾ ಹೊತ್ತು ತಾ, ಭಕ್ತರ ಗೋಳಿದು...


        ಹೋಗಿ ಬರುತ್ತಿಯಾ ತಿಂಮಾ...?

ತಿಂ : ಮತ್ತೇಕೆ ಬರಲಿ ಸಾಯಲಿಕ್ಕೆ .....?  [ಹೊರಡುವನು ]


ಮುಂ : [ಪುನಃ ಲೋಡಿಗೆ ಆತು ಕುಳಿತು ]
             ಸಾವು ! ಸಾವೆಂದೇಕೆ ಅಂಜುವಿರಿ
             ಸಾವೊಂದು ಶಿವನಾಟ !
             ಜಾತಸ್ಯ ಮರಣಂ ಧ್ರುವಂ ಎಂಬ 
             ಮಾತಿಗೆ ಇಲ್ಲ ಸಾವು !
             ಸರಸ ಜನನ ! ವಿರಸ ಮರಣ..
             ಸಮರಸವೇ ಜೀವನ..


[ ಮುಖ್ಯಮಂತ್ರಿ ಬೇಂದ್ರೆ ಯವರು ಊಟಕ್ಕೆ ಹೊರಡುವರು !]




  ಹೀಗೇ ಬೀchi ಯವರ ಹಾಸ್ಯ-ವಿಡಂಬನೆಗಳು ಇಡೀ ಪುಸ್ತಕದ ತುಂಬೆಲ್ಲಾ ಹರಡಿಕೊಂಡಿವೆ.... ’ಹುಚ್ಚು ಹುರುಳು ’ ’ಚಿನ್ನದ ಕಸ ’ ಬೆಳ್ಳಿತಿಂಮ ನೂರೆಂಟು ಹೇಳಿದ’ ಇತ್ಯಾದಿ ಪುಸ್ತಕಗಳು ಧಾರವಾಡದ ’ಸಮಾಜ ಪುಸ್ತಕಾಲಯ’ ವತಿಯಿಂದ ಪ್ರಕಾಶಿಸಲ್ಪಟ್ಟಿವೆ. ಎಲ್ಲರೂ ’ಕೊಂಡು’ ಓದಿ..ಕನ್ನಡ ಇನ್ನಷ್ಟು ಬೆಳೆಯಲಿ. ಬೀchi ಯವರ ಬಗ್ಗೆ ಒಂದಷ್ಟು ಮಾತುಗಳನ್ನು ಬರೆಯಬೇಕೆಂದುಕೊಂಡಿದ್ದೆ...ಆದರೆ ಅವರ ಬಗ್ಗೆ ಗುರುಗಳಾದ ’ಸುನಾಥ್’ ರವರೇ ಹೇಳಿದರೆ ಇನ್ನಷ್ಟು ಮೆರಗು ಬರುತ್ತದೆ ಎಂದು ನನ್ನ ಅನಿಸಿಕೆ.....ಹೇಳುತ್ತಾರೆ ಎಂದು ನಿರೀಕ್ಷಿಸುತ್ತಾ...... :)
....................................................................................................................................................................


ಖೊನೆ ಖಿಡಿ :


ಗಣರಾಜ್ಯೋತ್ಸವದ ಭೀಕರ ’ಗೀಷಣ’ ವನ್ನು ಮುಗಿಸಿದ ಜನನಾಯಕರು ತಾವು ಕರೆತಂದಿದ್ದ ಮಹಾಜನಗಳಿಗೆ ವರ್ಣಮಯ ಪಂಚೆ (ಲುಂಗಿ !) ಗಳನ್ನು ತಲಾವಾರು ಹಂಚಿದರು..
ಇಂಥ ಕಡೆ ನಮ್ಮ ಶಂಭುಲಿಂಗನೂ ಇರಲೇಬೇಕಲ್ಲವೇ ...? ಸಿಕ್ಕಿತು.. ಅವನಿಗೂ ಒಂದು ರಂಗಿನ ಲುಂಗಿ...ಇಷ್ಟಾದಮೇಲೆ ನಮ್ಮ  ಶಂಭುಲಿಂಗ  ನಾಯಕರನ್ನು ಮಾತನಾಡಿಸದೆ ಬಿಡಲಿಲ್ಲ..


ಶಂಭುಲಿಂಗ :   ಬುದ್ದಿ...ಈ ಅಬ್ಬ ಮತ್ಯಾವಾಗ್ ಬತ್ತದೆ....? ( ಪಾಪ ಮುಗ್ಧ !)
’ನಾಯ’ಕರು :  ಯಾಕಪ್ಪಾ...?
ಶಂಭುಲಿಂಗ :  ಈ ಸಲ ಬರೀ ಲುಂಗಿ ಕೊಟ್ಟೀರಿ...ಮುಂದ್ಲು ಸಲ ಚಡ್ಡಿ , ಸಲ್ಟು, ಎಲ್ಲಾ ಕೊಡಿ ಅತ್ಲಾಗೆ ಅಂತ ...  


                    ವಂದನೆಗಳೊಂದಿಗೆ...